Saturday 19 December 2020

ಕಿಮ್ ಕಿ-ಡುಕ್

ಕನ್ನಡಪ್ರಭದಲ್ಲಿ ಕಿಮ್ ಕಿ-ಡುಕ್ ಎಂಬ ಕೊರಿಯನ್ ನಿರ್ದೇಶಕನ ಬಗ್ಗೆ ನನ್ನದೊಂದು ಪುಟ್ಟ ಲೇಖನ. ಬರೆಸಿ,ಪ್ರಕಟಿಸಿದ ಜೋಗಿಯವರಿಗೆ ಧನ್ಯವಾದಗಳು:

ಎಲ್ಲೋ ಓದಿದ ಈ ಸಾಲುಗಳನ್ನ ಇನ್ನೊಮ್ಮೆ ಓದಿಕೊಳ್ಳಿ :
ಬಿರುಗಾಳಿ ನಡುವೆ ಕಾಫಿಶಾಪ್
ಕೈಯ್ಯಲ್ಲೊಂದು ಕಪ್ ಕಾಫಿ
ಕಾಫಿಯೊಳಗೊಂದು ಬಿರುಗಾಳಿ
ಇದನ್ನೇ ನೀವು ಅಡ್ಡಡ್ಡ ಬರೆದು ಚು ಆಂಗ್ ತ್ಸು ಅಂತಲೋ ಅಥವಾ ಇನ್ನು ಯಾವುದಾದರೂ ಚೀನಿ,ಜಪಾನೀ ಹೆಸರು ತಗೊಂಡು ಆ ಝೆನ್ ಗುರು ಕಾಫಿಶಾಪ್ ನಲ್ಲಿ ಇದ್ದ ಅಂದು ಬಿಟ್ಟರೆ ಇದನ್ನೊಂದು ಝೆನ್ ಕಥೆ ಅಂತಲೂ ಅಂದುಕೊಳ್ಳಬಹುದು. ಇಂಥದ್ದನ್ನೆಲ್ಲ ಇಷ್ಟಪಡುವವರಿಗೆ ಅಂತ ಒಂದು ಸಿನಿಮಾ ಮಾಡಿದರೆ? ಇದನ್ನು ಕಲ್ಪಿಸಿಕೊಳ್ಳಿ: ಅಲ್ಲೊಂದು ನಿಶ್ಚಲ ಸರೋವರ, ಅದರ ಮೇಲೊಂದು ಬೌದ್ಧ ಸಂನ್ಯಾಸಿಯ ಕುಟೀರ. ಸರೋವರದಲ್ಲಿ ತೇಲುವ ಕುಟೀರದ ಸುತ್ತಲೂ ಎದ್ದುನಿಂತ ಗುಡ್ಡಗಳು, ಹಬ್ಬಿದ ಕಾಡು. ಇಂಥಲ್ಲಿ ನಿರಾಳವಾಗಿ ಬದುಕುವ ಗುರು ಶಿಷ್ಯರು; ಅಲ್ಲಿ ಅವರು ಬಿಟ್ಟರೆ ಇನ್ನೊಬ್ಬರಿಲ್ಲ. ಅಲ್ಲಿ ಬದಲಾಗುವ ಋತುಗಳು ಬದುಕಿನ ಬೇರೆ ಬೇರೆ ಹಂತಗಳಿಗೆ ಸಾಕ್ಷಿಯಾಗಿ, ರೂಪಕಗಳಾಗಿ ಇರುತ್ತವೆ.
ಇದು ಯಾವುದಾದರೂ ವಿಮರ್ಶಕರು ಮಾತ್ರ ಮೆಚ್ಚುವ ಕಾದಂಬರಿಗೋ ಕವನಕ್ಕೋ ಆದೀತು, ಇಂಥ ಚಲನಚಿತ್ರವೂ ಇರಲು ಸಾಧ್ಯವೇ ಅಂತ ತಲೆ ಕೆರೆದುಕೊಳ್ಳಬಹುದು. ಹೀಗೂ ಉಂಟು ಅನ್ನುವ ತರ ಇದ್ದದ್ದು Spring, Summer, Fall, Winter... and Spring ಎಂಬ ಚಿತ್ರ, ಅದನ್ನು ನೋಡಿ, ಈ ನಿರ್ದೇಶಕ ಬೇರೇನು ಮಾಡಿದ್ದಾನೆ ಅಂತ ಆಸಕ್ತರಾದವರೇ ಹೆಚ್ಚು. ಕಿಮ್ ಕಿ-ಡುಕ್ ಎಂಬ ಕೊರಿಯನ್ ನಿರ್ದೇಶಕನ ಪರಿಚಯ ಹಲವರಿಗೆ ಆದದ್ದು ಹಾಗೆಯೇ. ಅದು ಆಗಬೇಕಾದ್ದೂ ಹಾಗೆಯೇ ಎನ್ನಬೇಕು! ಜುಗುಪ್ಸೆ ಹುಟ್ಟಿಸುವ, ಕೆರಳಿಸುವ, ರೋಸಿಕೊಳ್ಳುವಂತೆ ಮಾಡುವ ಸಾಕಷ್ಟು ಚಿತ್ರಗಳನ್ನೂ ಈ ಮನುಷ್ಯ ಮಾಡಿದ್ದರಿಂದ ಈ ಮಾತನ್ನು ಹೇಳಬೇಕಾಯಿತು.
ಕ್ರೈಮ್ ಥ್ರಿಲ್ಲರುಗಳನ್ನು ಕೊರಿಯನ್ನರಂತೆ ಮಾಡುವವರಿಲ್ಲ, ಹಿಂಸೆಯನ್ನು ಅವರಷ್ಟು ತೋರಿಸುವವರಿಲ್ಲ, ಅವರಂತೆ ತೋರಿಸುವವರೂ ಇಲ್ಲ ಎಂಬ ಭಾವನೆ ಸಿನಿಪ್ರಿಯರ ವಲಯದಲ್ಲಿದೆ. ಅಷ್ಟಲ್ಲದೆ,ಒಂದು ಒಳ್ಳೆಯ ಕನ್ನಡ ಥ್ರಿಲ್ಲರ್ ಬಂದರೆ, ಅದನ್ನು ಹೊಗಳುವ ಮೊದಲು, ಇದರ ಮೂಲ ಯಾವುದಾದರೂ ಕೊರಿಯನ್ ಸಿನೆಮಾದಲ್ಲಿ ಇರಬಹುದೇ ಅಂತ ಹುಡುಕಿ ನೋಡುವವರೂ ಇದ್ದಾರೆ! ಇಂಥ ಚಿತ್ರರಂಗದಲ್ಲಿ ತನ್ನದು ಮತ್ತು ತನ್ನದು ಮಾತ್ರವೇ ಆದ ಸ್ವರದ ಮೂಲಕ ಸದ್ದು ಮಾಡಿದ್ದು ಕಿಮ್ ಕಿ-ಡುಕ್. ಇಟಾಲಿಯನ್ ನಿಯೋರಿಯಲಿಸಂ, ಇರಾನಿಯನ್ ನ್ಯೂ ವೇವ್ ಇರುವಂತೆ ಕೊರಿಯನ್ ಹೊಸ ಅಲೆಯೂ ಬಂದಾಗ ಅದರಲ್ಲಿ ಕಾಣಿಸಿಕೊಂಡ ಹೆಸರುಗಳಲ್ಲಿ ಇವನದ್ದೂ ಗಮನಾರ್ಹವಾದ ಹೆಸರು. ಒಂದು ಸಿನಿಮೀಯ ದುರಂತ ಎಂದರೆ, ಕೊರಿಯಾದಲ್ಲಿಯೇ ಅವನಿಗೆ ಅಂಥ ದೊಡ್ಡ ಹೆಸರಿರಲಿಲ್ಲ, ಅವನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿಯೂ ಸೋತವು, ವಿಮರ್ಶಕರನ್ನೂ ಅಷ್ಟಾಗಿ ಸೆಳೆಯಲಿಲ್ಲ. ಅವನ ಅಭಿಮಾನಿಗಳು ಯೂರೋಪಿನಲ್ಲಿ, ಅಮೆರಿಕಾದಲ್ಲಿ, ಭಾರತದಲ್ಲಿಯೇ ಹೆಚ್ಚು ಇರುವುದು. ಚಿತ್ರೋತ್ಸವಗಳಲ್ಲಿ ಅವನಿಗೆ ಸ್ಟಾರ್ ನಿರ್ದೇಶಕನಿಗೆ ಸಿಗುವ ರಾಜಮರ್ಯಾದೆಯೇ ಸಿಗುತ್ತಿತ್ತು. ಮಿಟೂ ಚಳುವಳಿಯ ಕಾಲದಲ್ಲಿ ಹಲವರು ಇವನೊಬ್ಬ ಅತ್ಯಾಚಾರಿ ಅಂದಾಗ ಎಲ್ಲರಿಗೆ ಬೇಸರವಾಗಿತ್ತು, ಒಬ್ಬ ಒಳ್ಳೆಯ ಕಲಾವಿದನು ಒಬ್ಬ ಒಳ್ಳೆಯ ಮನುಷ್ಯನೂ ಆಗಿರುತ್ತಾನೆಯೇ ಎಂಬ ಪ್ರಶ್ನೆಗಳು ಎದ್ದದ್ದೂ ಉಂಟು.
Orson Wellesನು ಮೊದಲ ಬಾರಿ Citizen Kane ಅನ್ನು ಜನರಿಗೆ ತೋರಿಸಿದಾಗ, ಈ ಪುಣ್ಯಾತ್ಮ ಹಾಲಿವುಡ್ಡಿನ ಎಲ್ಲ ನಿಯಮಗಳನ್ನ ಮುರಿದಿದ್ದಾನೆ ಅಂದರಂತೆ ಯಾರೋ. ಮುರಿಯುವುದಕ್ಕೆ ಈ ರೂಲ್ಸು ಯಾವ್ದು ಅಂತ ನನಗೆ ಗೊತ್ತೇ ಇರ್ಲಿಲ್ಲ ಅಂದಿದ್ದನಂತೆ ಆತ. ಅಜ್ಞಾನವೇ ಪರಮಸುಖ ಅಂದಂತೆ. ಕಿಮ್ ಕಿ-ಡುಕ್ ಕೂಡಾ ಹಾಗೆ ಗೊತ್ತಿಲ್ಲದೇ ನಿಯಮಗಳನ್ನು ಗಾಳಿಗೆ ತೂರಿದವನೋ, ಬೇಕೆಂತಲೇ ಎಲ್ಲರನ್ನೂ ಬೆಚ್ಚಿ ಬೀಳಿಸ ಹೊರಟವನೋ ಅಂತ ಹೇಳುವುದು ಕಷ್ಟ.
ಚಿತ್ರಕಥೆ ಬರೆಯುವುದನ್ನು ಹೇಳಿಕೊಡುವ ಮಾಷ್ಟ್ರುಗಳು ಹೇಳಿ ಕೊಡುವ ಮೊದಲನೇ ಪಾಠ ಅಂದರೆ “Don’t tell,Show” ಅಂತ. ಅಂದರೆ ಪಾತ್ರಗಳು ಆಡದೇ, ಮಾಡಿ ರೂಢಿಯೊಳಗುತ್ತಮರಾಗಬೇಕು ಅಂತ. ಇಂಥಹ ಮೇಷ್ಟ್ರುಗಳ ಮಾತು ಕೇಳಿಸದಷ್ಟು ಮಾತಾಡಿದ್ದು ಯೋಗರಾಜ ಭಟ್ಟರ ಪಾತ್ರಗಳು. ಯೋಗರಾಜ ಭಟ್ಟರ ಪ್ರೀತಂ ಸ್ವಲ್ಪ ಸೈಲೆಂಟ್ ಹುಡುಗ ಅನ್ನಿಸುವಷ್ಟು ಮಾತಾಡಿದ್ದು ಗುರುಪ್ರಸಾದರ ಪಾತ್ರಗಳು ಮತ್ತು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಯ ಪಾತ್ರಗಳು. “Don’t tell,Show” ಸಿದ್ದಾಂತವನ್ನು ಇನ್ನೊಂದು ಅತಿಗೆ ಕೊಂಡು ಹೋದವನಂತೆ, ಮಾತೇ ಆಡದ ಪಾತ್ರಗಳನ್ನು ಕಟ್ಟಿದ್ದು ಕಿಮ್ ಕಿ-ಡುಕ್. ನಮ್ಮಲ್ಲಿ ಹಾಕುವಂತೆ, ಕಥೆ-ಚಿತ್ರಕಥೆ- ಸಂಭಾಷಣೆ ಎಂಬ ಕ್ರೆಡಿಟ್ ಕೊಡುವ ಅಗತ್ಯವೇ ಅವನ ಹಲವು ಚಿತ್ರಗಳಲ್ಲಿಲ್ಲ, ಅಷ್ಟೆಲ್ಲ ಸಂಭಾಷಣೆಗಳನ್ನು ಬರೆಯುವುದರಲ್ಲಿ ಅವನಿಗೆ ನಂಬಿಕೆಯಿದ್ದಂತಿಲ್ಲ. ಕಥೆ-ಚಿತ್ರಕಥೆ- ಛಾಯಾಗ್ರಹಣ ಅಂತ ಹಾಕಿ, ದೃಶ್ಯ, ಪರಿಸರ, ಹಿನ್ನೆಲೆ ಸಂಗೀತಗಳೇ ಸಂಭಾಷಣೆಯ ಕೆಲಸ ಮಾಡುತ್ತವೆ ಅಂದು ಸುಮ್ಮನಾಗಬಹುದು.
ಅವನ ಮೋಬಿಯಸ್ ಎಂಬ ವಿಕೃತ ಚಿತ್ರವನ್ನು ನೋಡದಿರುವುದೇ ಒಳ್ಳೆಯದೇನೋ, Pieta ಎಂಬ ಚಿತ್ರದಲ್ಲಿ ತೋರಿಸುವ ಕ್ರೌರ್ಯ ಅಸಹ್ಯ ತರಿಸಿ, ಎದ್ದು ಹೋಗುವ ಅನ್ನಿಸುವಂತೆ ಮಾಡಿದರೂ, ಅದನ್ನು ಸಹಿಸಿಕೊಂಡರೆ, ಅಬ್ಬಬ್ಬಾ ಎನ್ನಿಸುವ, ವಿಕ್ಷಿಪ್ತವಾದರೂ ಅದ್ಭುತವಾದ ಚಿತ್ರವಾಗಿ ಕಾಡುತ್ತದೆ. 3-Iron ಅವನ ನೋಡಲೇಬೇಕಾದ ಚಿತ್ರಗಳಲ್ಲೊಂದು. ಜತನದಿಂದ ಕಲಾತ್ಮಕವಾಗಿ ರೂಪಿಸಿದ ದೃಶ್ಯಗಳಲ್ಲಿ, ಆರದ ಗಾಯಕ್ಕೆ ಮುಲಾಮು ಹುಡುಕುತ್ತಿರುವ ಪಾತ್ರಗಳ ತೊಳಲಾಟದಲ್ಲಿ, ತಣ್ಣನೆಯ ಕ್ರೌರ್ಯದಲ್ಲಿ, ಸಂಕಟದಲ್ಲಿ, ಅಲ್ಲೊಮ್ಮೆ ಇಲ್ಲೊಮ್ಮೆ ಬರುವ ಮಾತುಗಳಲ್ಲಿ, ನಿಧಾನಕ್ಕೆ ಇಷ್ಟಿಷ್ಟೇ ಬಿಚ್ಚಿಕೊಳ್ಳುವ ಬಾವುಟದ ಥರ ಕಥೆ ಬಿಚ್ಚಿ ಪಟಪಟಿಸುವುದು ಅವನ ಚಿತ್ರಗಳ ಕ್ರಮ.
ನಮ್ಮ ಸೂರಿಯಂತೆ ಇವನೂ ಒಬ್ಬ ವರ್ಣಚಿತ್ರಕಾರ. ಅಕ್ಕರೆಯಿಂದ ಬಿಡಿಸಿಟ್ಟ ಚಿತ್ರದಂತೆ ಇರುವ, ರವಿಚಂದ್ರನ್ ಇದನ್ನು ಇಷ್ಟಪಟ್ಟಾರು ಅನ್ನಿಸುವಂಥ ಫ್ರೇಮುಗಳು ಅವನ ಚಿತ್ರಗಳಲ್ಲಿ ಎಲ್ಲೆಂದರಲ್ಲಿ ಸಿಗುತ್ತವೆ. ಅಷ್ಟು ಮಾತ್ರ ಅಲ್ಲ. ಇವಕ್ಕೆ ಹೋಲಿಸಿದರೆ ಸೂರಿ ಸಿನೆಮಾಗಳಲ್ಲಿ ತೋರಿಸುವ ಹಿಂಸೆಯು ರಾಜಕುಮಾರರ ಚಿತ್ರಗಳಷ್ಟು ಸಭ್ಯ ಎನ್ನಬಹುದಾದಷ್ಟು ಭಯಂಕರ, ವಿಕೃತ, ಭೀಭತ್ಸ ಚಿತ್ರಗಳನ್ನೂ ಈ ಪುಣ್ಯಾತ್ಮ ಮಾಡಿಟ್ಟಿದ್ದಾನೆ.
The Silence of the Lambs ಅವನ ಮೇಲೆ ತುಂಬಾ ಪ್ರಭಾವ ಬೀರಿದ ಚಿತ್ರವಂತೆ. ಅದು ಸೀರಿಯಲ್ ಕಿಲ್ಲರನ್ನು ತೋರಿಸುವ ಚಿತ್ರ, ಅದರ ಮುಖ್ಯ ಪಾತ್ರ ಒಬ್ಬ ನರಭಕ್ಷಕನದು ಆದರೂ ಅದೇನು ಹಸಿಬಿಸಿಯಾದ, ಅಸಹ್ಯ ಎನ್ನಿಸುವ ಚಿತ್ರವಾಗಿರಲಿಲ್ಲ. ಅದರಲ್ಲಿ ಬರುವ ನರಭಕ್ಷಕನೂ ಚಾರ್ಮಿಂಗ್ ಆದ ವ್ಯಕ್ತಿ. ಆದರೆ ಕಿಮ್ ಕಿ-ಡುಕ್ಕನಿಗೆ ಯಾಕೋ ಕ್ರೌರ್ಯದ, ಲೈಂಗಿಕತೆಯ ಹಸಿ ಹಸಿ ಚಿತ್ರಣದಲ್ಲಿ ಆಸಕ್ತಿ ಜಾಸ್ತಿ.
ಇವೆಲ್ಲ ಏನಿದ್ದರೂ, ಶಾಂತ ರಸ, ಕರುಣ ರಸಗಳನ್ನೂ ಧ್ಯಾನಸ್ಥನಂತೆ ಮುಟ್ಟಿ, ರೌದ್ರ,ಭೀಭತ್ಸಗಳನ್ನೂ ಅಷ್ಟೇ ಆಸಕ್ತಿಯಿಂದ ಚಿತ್ರಿಸಿ, ಅಲ್ಲೂ ಚಿಂತನೆಗೆ ಗ್ರಾಸ ಒದಗಿಸಿದ ಮತ್ತೊಬ್ಬ ನಿರ್ದೇಶಕನ ಹೆಸರು ನೆನಪಾಗುವುದಿಲ್ಲ. ಬಹುಶಃ ಎಲ್ಲ ಅತಿಗಳಿಗೆ ಹೋಗಿಯೂ ತುಂಬ ಗೌರವ ಕಾಪಾಡಿಕೊಂಡು, ಜೀನಿಯಸ್ ಎನ್ನಿಸಿಕೊಂಡ ಸ್ಟಾನ್ಲಿ ಕೂಬ್ರಿಕ್ ಕೂಡಾ ಸ್ವಲ್ಪ(ಸ್ವಲ್ಪ ಮಾತ್ರ) ಇದೇ ಜಾತಿಯ ಪ್ರಾಣಿ ಎನ್ನಬಹುದು. ಇಂಥವರ ಚಿತ್ರಗಳು ಖುಷಿ ಕೊಟ್ಟು, ಪ್ರಚೋದಿಸಿ, ರೇಗಿಸಿ,ಚಿಂತನೆಗೆ ಸರಕನ್ನು ಸರಬರಾಜು ಮಾಡಿ, ಚರ್ಚೆಗೆ ವಿಚಾರವನ್ನು ಒದಗಿಸಿ art should comfort the disturbed and disturb the comfortable ಎಂಬಂತೆ ನಮ್ಮನ್ನು ಕಲಕುತ್ತವೆ ಎಂಬ ಕಾರಣಕ್ಕಾದರೂ ಸಿನೆಮಾವ್ಯಾಮೋಹಿಗಳ ಬಾಯಲ್ಲಿ ಇವನ ಹೆಸರು ಉಳಿಯುತ್ತದೆ.



ಮರಡೋನಾ ಎಂಬ ಮೋಹಕ ವ್ಯಸನ

 ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 

ತೊಂಬತ್ತರ ದಶಕದ ಹುಡುಗರಿಗೆ ತೆಂಡೂಲ್ಕರ್ ಇದ್ದಂತೆ ಎಂಬತ್ತರ ದಶಕದ ಫುಟ್ಬಾಲ್ ಪ್ರಿಯರನ್ನು ವಶೀಕರಿಸಿದ ಹೆಸರು ಡಿಯಾಗೋ ಮರಡೋನಾನದ್ದು.  ನಮ್ಮನ್ನು ಈ ಪರಿ ಸಮ್ಮೋಹಗೊಳಿಸಿದ ಮಹರಾಯ ಅದೇನು ಆಡ್ತಾನೆ ಅಂತ ನೋಡುವ ಕುತೂಹಲದಿಂದ 1986ರ ವಿಶ್ವಕಪ್ಪಿನ ವೀಡಿಯೊ ಟೇಪ್ ಒಂದನ್ನು ಆ ಕಾಲದಲ್ಲಿ ಸಂಪಾದಿಸಿ ನಾವೆಲ್ಲ ನೋಡಿದ್ದೇ ನೋಡಿದ್ದು. ನೋಡಿ ನೋಡಿ ನೋಡಿ ಆ ಟೇಪು ಸವೆದಿತ್ತು, ಆಗ ಹಾಗೆ ಪರವಶರಾಗುತ್ತಿದ್ದದ್ದರ ನೆನಪು ಮಾತ್ರ ಇನ್ನೂ ಸವೆದಿಲ್ಲ. ಪುರುಸೊತ್ತು ಇಲ್ಲದೆ ಇದ್ದಾಗಂತೂ ಫಾರ್ವರ್ಡ್ ಮಾಡುವುದು,ಸೀದಾ ಆ ಗೋಲಿನ ನಿಮಿಷಕ್ಕೆ ಬರುವುದು ! ಹ್ಯಾಂಡ್ ಆಫ್ ಗಾಡ್ ಅಂತ ಕುಪ್ರಸಿದ್ಧವಾದ ಗೋಲು ಆಗಿ ಸ್ವಲ್ಪವೇ ಹೊತ್ತಿನಲ್ಲಿ ಅದು ಬಂದದ್ದು.

ಅದೆಂಥಾ ಗೋಲು ಅಂತೀರಿ ! ಒಂದಿಡೀ ಜೀವಮಾನದ ಪ್ರತಿಭೆಯನ್ನು ಹನ್ನೊಂದು ಸೆಕೆಂಡುಗಳ ಸ್ತೋತ್ರಗೀತೆಯಾಗಿ ಹೇಳಿದಂತೆ, ಗೋಲು ಮಾಡಲು ಓಡಿದ ಅರುವತ್ತು ಮೀಟರುಗಳ ಸರಕ್ಕನೆಯ ಓಟ; ಅಮರಕೀರ್ತಿ ಎಂಬ  ಗಮ್ಯದ ಕಡೆಗಿನ ದೂರ ಬರೀ ಅರುವತ್ತು ಮೀಟರು ಅಂತ ತೋರಿಸಿದ ಓಟ ಅದು! ಮೈದಡವಿದ್ದು, ಕುಟ್ಟಿದ್ದು, ನೂಕಿದ್ದು, ಗಿರ್ರನೆ ಸುತ್ತಿದ್ದು ಎಲ್ಲದರ ಕಥೆಯನ್ನು ಆ ಬಾಲೇ ನಮಗೆ ಹೇಳಿದ್ದರೆ ಚೆನ್ನಿತ್ತು !

1986ರ ಜೂನ್ 22ಕ್ಕೆ ಮೆಕ್ಸಿಕೋ ಸಿಟಿಯಲ್ಲಿ ಹೊಡೆದ ಆ ಗೋಲಿಗೆ ಸಾಕ್ಷಿಯಾಗಿ ಮೈದಾನದಲ್ಲೇ ಲಕ್ಷ ಜನ ನೆರೆದಿದ್ದರು. ಅಲ್ಲಿ ಬೀಟಲ್ಸ್ ತಂಡದ ಒಬ್ಬನ ಹಾಡು ಕೇಳುವುದಕ್ಕೆ ಲಕ್ಷ ಜನರ ಸಂತೆ ನೆರೆದದ್ದಿತ್ತು, ಧರ್ಮಗುರುಗಳ ಬೋಧನೆಗೆ ಜನಸಂತೆ ಒಟ್ಟಾದದ್ದಿತ್ತು, ಅಂಥಲ್ಲಿ ಆ ದಿನ ಮರಡೋನಾ ಭಕ್ತರ ಜಾತ್ರೆ ನೆರೆದಿತ್ತು. ರಭಸವೇ, ಜೋರೇ, ಚುರುಕೇ, ಬಿರುಸೇ, ಭಂಡ ಧೈರ್ಯವೇ -  ಆ ಗೋಲಿನಲ್ಲಿ ಏನಿತ್ತು, ಏನಿರಲಿಲ್ಲ ! ಹೀಗೂ ಆಡಿ ದಕ್ಕಿಸಕೊಳ್ಳಬಹುದು ಅಂತ ನಮಗೆಲ್ಲ ಗೊತ್ತಾದದ್ದೇ ಅವತ್ತು. ಮರಡೋನಾ ಮೈದಾನದ ಮೂಲೆಯಲ್ಲಿ ಹಾಗೆ ಓಡಿದ್ದು, ಕೊಳೆಗೇರಿಯಲ್ಲಿ ಕಳೆದ ತನ್ನ ಬಾಲ್ಯದ ಅದೆಷ್ಟೋ ಕ್ಷಣಗಳೆಂಬ ಇಕ್ಕಟ್ಟಾದ  ಸಂದಿಗಳಲ್ಲಿ,ಓಣಿಗಳಲ್ಲಿ ಓಡಿದ್ದರ ನೆನಪು ತರುವಂತಿತ್ತು.

ತೆಂಡೂಲ್ಕರನ ಮನಮೋಹಕ ಹುಕ್ಕು , ಲೆಕ್ಕಾಚಾರದ ಕವರ್ ಡ್ರೈವು, ಜಾನ್ ಮೆಕೆನ್ರೋವಿನ ಅದ್ಭುತ ವಾಲಿ, ಅದ್ಯಾರೋ ಜಿಮ್ನಾಸ್ಟಳು ತಾನು ಮನುಷ್ಯಳೇ ಅಲ್ಲ ಎಂಬಂತೆ ಬಳುಕಿದ್ದು ಇವನ್ನೆಲ್ಲ ಎಷ್ಟೆಷ್ಟು ಸಲ ಯುಟ್ಯೂಬಿನಲ್ಲಿ ನೋಡಿ ತಣಿಯುತ್ತೇವೋ ಅಷ್ಟೇ ಸಲ ಈ ಗೋಲನ್ನೂ ನೋಡಿರುತ್ತೇವೆ, ಅದು ಮಾಡಿದ ಮೋಡಿಯೇ ಹಾಗಿದೆ. ಮೆಸ್ಸಿ Getafeಯ ಜೊತೆ ಹೊಡೆದ ಗೋಲು ಗ್ರೇಟಾ ಇದು ಅದಕ್ಕಿಂತ ಮೇಲೆಯಾ ಅಂತ ನಾವು ಆಗಾಗ ಜಗಳ ಆಡುವುದುಂಟು. ಅದು ಉತ್ತರ ಗೊತ್ತಿದ್ದೇ ಕೇಳಿದ ಪ್ರಶ್ನೆಯ ಹಾಗೆ, ಜಗಳದಲ್ಲಿ ಗೆಲ್ಲುವುದು ಯಾರು ಅಂತ ಮೊದಲೇ ತೀರ್ಮಾನ ಆಗಿರುವ ಜಗಳ ! ಎಲ್ಲಿಯ ವರ್ಲ್ಡ್ ಕಪ್ಪು ಎಲ್ಲಿಯ, ಕ್ಲಬ್ಬು ಮ್ಯಾಚುಗಳು ಸ್ವಾಮೀ.

ಮರಡೋನಾ ಅರುವತ್ತಕ್ಕೇ ಆಟ ಮುಗಿಸಿದ್ದು, ಆಶ್ಚರ್ಯವಲ್ಲದಿದ್ದರೂ ಮನಕರಗಿಸುವ ಸಂಗತಿ ಎನ್ನಬೇಕು. ಅವನು ಎಡವದೇ ಇರುತ್ತಿದ್ದದ್ದು ಮೈದಾನದಲ್ಲಿ ಮಾತ್ರ. ಆತ ತಪ್ಪೇ ಮಾಡುವುದಿಲ್ಲ ಅಂತಾಗುತ್ತಿದ್ದದ್ದು ಅವನ ಕಾಲು ಫುಟ್ಬಾಲನ್ನು ಸ್ಪರ್ಶಿಸಿದಾಗಲೇ. ಒಮ್ಮೆ ಮೈದಾನಕ್ಕೆ ಇಳಿದನೋ, ಮತ್ತೆ ತೊಂಬತ್ತು ನಿಮಿಷ ಅವನು ನಮ್ಮನ್ನೆಲ್ಲ ಯಾವುದೋ ಮಾಯಾಲೋಕಕ್ಕೆ ಕರೆದುಕೊಂಡು ಹೋಗುವ ಮಾಯಗಾರ. ಅವನದ್ದು ಮಲ್ಲಕಂಬಕ್ಕೆ ಹತ್ತಿದವನ ಸಮತೋಲನ, gymnastನಂಥ ಬಳುಕು, ಹಸಿದ ಚಿರತೆಯ ನೆಲಮುಟ್ಟದ ಓಟ. ಜೀವನದ ಓಟದಲ್ಲಿ ಮಾತ್ರ ಆ ಚಿರತೆ ಬಲೆಗೆ ಬೀಳುತ್ತಿತ್ತು, ಕಾಲುತಪ್ಪಿ ಎಡವುತ್ತಿತ್ತು.

ಮರಡೋನಾ ಎಂದಾಗ ನೆನಪಾಗುವುದು ಆರು ಜನ ಬೆಲ್ಜಿಯಂನ ಆಟಗಾರರು ಅವನೆದುರು ಹೊಡೆದೇ ಬಿಡುತ್ತಾರೇನೋ ಎಂಬಂತೆ ಅಡ್ಡಗಟ್ಟಿ ನಿಂತದ್ದರ ಛಾಯಾಚಿತ್ರ. ಒಂದು ರಾಶಿ ಬ್ರೆಝಿಲಿಯನ್ನರ ನಡುವೆ ಜಾಗ ಮಾಡಿಕೊಂಡು ಬಾಲನ್ನು ತೂರಿ ನೂಕಿ ಓಡೋಡುವ ದೃಶ್ಯ.  ದಿನಬೆಳಗಾದರೆ ಮರಡೋನಾ ಸಾಕ್ಸು ಏರಿಸುವ, ಲೇಸು ಕಟ್ಟುವ, ಕುಣಿಯುವ, ಬಾಲನ್ನು ಕುಣಿಸುವ, ಹರ್ಷದಿಂದ ಮಗುವಿನಂತೆ ಜಿಗಿಯುವ ವೀಡಿಯೊ ಕ್ಲಿಪ್ಪುಗಳು ಮೊಬೈಲಿಗೆ ಬಂದು ಬೀಳುತ್ತವೆ. ಹಾಗೆ ಓಡುವ, ಹಾರುವ, ಹರ್ಷದಿಂದ ಕುಪ್ಪಳಿಸುವ, ಮಗುವಿನಂಥ ಚಿತ್ರವೇ ನಮಗೆ ಇಷ್ಟವಾಗುವ, ಮನಸ್ಸಿನಲ್ಲಿ ಉಳಿಯಬೇಕಾದ ಚಿತ್ರ.          

ಮರಡೋನಾ ನಮಗೆ ಯಾಕಿಷ್ಟ? ಆ ಪ್ರತಿಭೆಗೆ, ಆ ಕೌಶಲಕ್ಕೆ ಮರುಳಾದೆವು ಅನ್ನುವುದೇನೋ ನಿಜವೇ, "ನಮ್ಮ ದೊಡ್ಡಪ್ಪನ ಮಗ ಇದ್ದ ನೋಡಿ, ಪಾಪ ! ಹಳ್ಳಿಯಲ್ಲಿ ಹೇಗಿದ್ದ, ಏನು ಕ್ಲೇಶ, ಏನು ಬಡತನ, ಕಷ್ಟಪಟ್ಟು ಹೇಗೆ ಮೇಲೆ ಬಂದ ನೋಡಿ" ಅನ್ನುವಂತೆ ಮರಡೋನಾನ ಜೀವನವಿತ್ತು. ಅವನು ಅಲ್ಲೆಲ್ಲೋ ಅರಮನೆಯಲ್ಲಿ ನಳನಳಿಸುತ್ತ ಕೂತ ಕೀರ್ತಿವಂತನಂತಿರಲಿಲ್ಲ, ಅವನು ನಮ್ಮಂತಿದ್ದ ನಿಮ್ಮಂತಿದ್ದ, ಗೆಲ್ಲುತ್ತಿದ್ದ, ಕುಸಿಯುತ್ತಿದ್ದ, ಹಾರುತ್ತಿದ್ದ, ಬೀಳುತ್ತಿದ್ದ. 


"ಇವನು ನಮಗೆ ರೋಲ್ ಮಾಡೆಲ್ ಕಣ್ರೀ" ಅಂತ ಯಾರೂ ಹೇಳಿರಲಾರರು, ಫುಟ್ಬಾಲನ್ನು ತುಳಿದ ಹಾಗೆ ದಾರಿದ್ರ್ಯ, ದುರ್ವ್ಯಸನಗಳು, ವಿವಾದಗಳು, ಊದಿಕೊಂಡ ದೇಹ, ಒತ್ತಡಗಳು ಇಂಥದನ್ನೆಲ್ಲ ಮೆಟ್ಟಿ, ಮೀಟಿ ಮೇಲೆ ಬಂದಿದ್ದ, ರಾರಾಜಿಸಿದ್ದ. ಮೈದಾನದಲ್ಲಿ ಓಡುವಾಗ, ಹೀಗೆ ಮುಗ್ಗರಿಸಿ, ಹಾಗೆ ಎದ್ದು, ಇಲ್ಲಿ ಕುಣಿದು, ಅಲ್ಲಿ ಬಿದ್ದು ಅತ್ತಿತ್ತ ಓಡುವವನಂತೆ ಮರಡೋನಾ ಬದುಕಿದ್ದ. 

ಅವನ ಕಥೆಯ ಪುಸ್ತಕದಲ್ಲಿ, "ಇದೆಲ್ಲ ಯಾಕೆ ಬೇಕಿತ್ತು" ಅನಿಸುವಂಥ ಅಧ್ಯಾಯಗಳಿವೆ. "ಪಕ್ಕದ್ಮನೆ ಅಂಕಲ್ಲು, ಮೊದಲು ಚೆನ್ನಾಗಿದ್ರಲ್ಲ, ಹೀಗ್ಯಾಕಾದ್ರು" ಅಂತ ಮೋರೆ ಕಿವುಚುವಂತೆ ಮಾಡುವ ಸನ್ನಿವೇಶಗಳೂ ಉಂಟು. ಅವೆಲ್ಲವನ್ನು ಮೀರಿ ಆ ಅಮರ ಗೋಲಿದೆ, ಶೇಖರಿಸಿಡುವುದಕ್ಕೆ ಅಂಥ ಉನ್ಮಾದದ ಅಮರ ಕ್ಷಣಗಳಿವೆ, ಇವತ್ತೂ ನಾಳೆಯೂ ನಾಡಿದ್ದೂ ನೆನಪಿಸಿಕೊಂಡು ರೋಮಾಂಚನ ಪಡಬಹುದಾದ ಮಾಯಕದ ಗಳಿಗೆಗಳಿವೆ. ಒಬ್ಬ ಆಟಗಾರ ಬಿಟ್ಟುಹೋಗಬೇಕಾದ್ದು ಅಂಥ ಕ್ಷಣಗಳ ಉಡುಗೊರೆಯನ್ನೇ.   
(ರೋಹಿತ್ ಬ್ರಿಜನಾಥ್ ಬರೆದ ಲೇಖನವೊಂದರ ಭಾವಾನುವಾದ)


ರವಿ ಬೆಳಗೆರೆ

 ನನ್ನ ಎಂಜಿನಿಯರಿಂಗಿನ ರೂಮ್ ಮೇಟ್, ಹತ್ತಿರದ ಗೆಳೆಯ ಪ್ರವೀಣ ಈಗ ಸಿಕ್ಕಿದರೂ ಮಾತು ಶುರು ಮಾಡುವುದು, "ನಿನ್ನ ರವಿ ಬೆಳಗೆರೆ ಈಗ ಎಂತ ಮಾಡ್ತಾ ಇದ್ದಾನೆ" ಎಂಬ ಧಾಟಿಯಲ್ಲೇ. ಆಗಿನ ಕಾಲದಲ್ಲಿ ಮಂಗಳವಾರವಾದರೆ 'ಹಾಯ್' ತರಲಿಕ್ಕೆ ಪೇಟೆಗೆ ಓಡಲು ಕಾಲು ಎಳೆಯುತ್ತಿತ್ತು, ಮನ ಎಳಸುತ್ತಿತ್ತು. ಜೋಗಿಯ ಜಾನಕಿ ಕಾಲಂ ಮತ್ತು ಬೆಳಗೆರೆಯ ಅಂಕಣಗಳ ಬಗ್ಗೆ ನನ್ನ ಪಾಠ್ಯ ಪುಸ್ತಕಗಳಿಗೆ ಅಸೂಯೆ ಹುಟ್ಟುತ್ತಿತ್ತೋ ಏನೋ ಅನ್ನಿಸುವಷ್ಟು ಓದುತ್ತಿದ್ದೆ ಅಂತ ಕಾಣುತ್ತದೆ. ನಾನು ಇಂಥವರ ಫ್ಯಾನು ಅನ್ನಬಹುದಾದಂತೆ ಓದಿದ್ದು ಬೀಚಿಯವರ ಪುಸ್ತಕಗಳನ್ನು. ಬೀಚಿಯವರ ಮಾತ್ರೆಗಳು, ಬೆಳ್ಳಿ ತಿಂಮ ನೂರೆಂಟು ಹೇಳಿದ, ಹುಚ್ಚು ಹುರುಳು, ಆರು ಏಳು ಸ್ತ್ರೀ ಸೌಖ್ಯ, ತಿಮ್ಮಿಕ್ಷನರಿ, ಮಾತನಾಡುವ ದೇವರುಗಳು ಇಂಥವೆಲ್ಲ ನನಗೆ ಓದುವ ಹುಚ್ಚು ಹಿಡಿಸಿದ ಪುಸ್ತಕಗಳು. ಆಮೇಲೆ ಅಂಥದ್ದೇ ಕಿಕ್ ಸಿಕ್ಕಿದ್ದು ಬಳಸಿ ಬರೆಯಲು ಕಂಠಪತ್ರದ ಉಲುಹುಗೆಡದಂತೆ ಬರೆದು ಬಿಸಾಕುತ್ತಿದ್ದಾರೇನೋ ಅನಿಸುತ್ತಿದ್ದ 'ಬೆಳಗೆರೆ ಉವಾಚ'ಗಳಲ್ಲಿ. ಕನ್ನಡದಲ್ಲಿ ಅತ್ಯಂತ ಪ್ರಖರವಾದ ವಿಡಂಬನೆ, ವ್ಯಂಗ್ಯ ಬಂದದ್ದು ಬೀಚಿ, ಚಂಪಾ ಮತ್ತು ಬೆಳೆಗೆರೆಯವರ ಪೆನ್ನುಗಳಿಂದ.

ಆದರೆ ಚಂಪಾರದ್ದು ಭಾವುಕತೆಯಿಲ್ಲದ ಜಗಳಗಂಟಿ ವ್ಯಂಗ್ಯ, ಬೀಚಿ ಮತ್ತು ಬೆಳಗೆರೆಯವರದ್ದು ಇನ್ನೊಂದು ತರದ, ಭಾವದ ಸ್ಪರ್ಶವಿರುವ, ತುಂಟತನ, ವಿಷಾದ ಎಲ್ಲ ಸೇರಿದ ವಿಡಂಬನೆ. ಮಾರ್ಕ್ ಟ್ವೈನ್, ಆಸ್ಕರ್ ವೈಲ್ಡ್ , ಬರ್ನಾರ್ಡ್ ಷಾ , ಎಚ್ ಎಲ್ ಮೆಂಕನ್, Steve Martin,Woody Allen, Groucho Marx ಮುಂತಾದವರ witty ಸಾಲುಗಳನ್ನು ಸವಿದವರಿಗೆ ಕನ್ನಡದಲ್ಲಿ ಅಂಥದ್ದನ್ನು ಧಾರಾಳವಾಗಿ ಕೊಟ್ಟವರೆಂದರೆ ಬೀಚಿ, ಬೆಳಗೆರೆ ಮತ್ತು ಜೋಗಿ ಎನ್ನಬಹುದು. ಸುಮ್ಮನೆ ಕೇಳಿದವರು ಓಡಿಹೋಗುವಂತೆ ಬಯ್ಯುವುದಕ್ಕೂ ತುಂಟತನದಲ್ಲಿ ಕೆಣಕಿ,ಮಾತು ಸ್ಫಟಿಕದ ಶಲಾಕೆಯಾಗುವಂತೆ ಝಾಡಿಸುವುದಕ್ಕೂ ಇರುವ ವ್ಯತ್ಯಾಸ ಕಾಣಬೇಕಾದರೂ ಬೀಚಿ, ಬೆಳಗೆರೆ ಇವರುಗಳ ವಿಡಂಬನೆಗಳನ್ನೂ ಬೇರೆ ಟ್ಯಾಬ್ಲಾಯ್ಡ್ ಗಳು ಬಳಸಿದ ಬೈಗುಳಗಳನ್ನೂ ಹೋಲಿಸಿ ನೋಡಬೇಕು.
ರಾಜೀವ್ ಹತ್ಯೆ, ಗಾಂಧೀ ಹತ್ಯೆ, ಸಂಜಯ್ ಗಾಂಧಿ,ಮುಸ್ಲಿಂ ಇಂಥ ವಿಷಯಗಳ ಬಗ್ಗೆ ಇಷ್ಟು ಇಂಟೆರೆಸ್ಟಿಂಗ್ ಆಗಿ, balanced ಆಗಿ ಕನ್ನಡದಲ್ಲಂತೂ ಬೇರೆ ಯಾರೂ ಬರೆದಿಲ್ಲ ಅನ್ನಬೇಕು. ಭೂಗತ ಲೋಕವೆಂಬ ಹುತ್ತದೊಳಕ್ಕೆ ಕೈ ಹಾಕಿ ಬರೆದ 'ಪಾಪಿಗಳ ಲೋಕದಲ್ಲಿ' ಕೂಡಾ ಒಂದು ಅಸಾಧಾರಣ ಕೃತಿ. ಸಮಾಜದಲ್ಲಿ ಕ್ರಿಮಿನಲ್ಲುಗಳು ಹೇಗೆ ಮತ್ತು ಯಾಕೆ ಸೃಷ್ಟಿಯಾಗುತ್ತಾರೆ ಎಂಬುದರ ಅಧ್ಯಯನ ಮಾಡಿದರೆ, "ಇಂಥಾ ಕೃತಿಗಳು ಸಮಾಜಕ್ಕೆ ಒಳ್ಳೆಯದಲ್ಲ" ಎಂಬ ಆರೋಪಗಳಲ್ಲಿ ವೈಜ್ಞಾನಿಕ ಸತ್ಯ ಇಲ್ಲ ಅಂತ ಗೊತ್ತಾದೀತು. ಅದನ್ನು ಓದಿ ಇಷ್ಟ ಪಟ್ಟ ನಾನೇನೂ ಮಚ್ಚು ಹಿಡಿದು ರೌಡಿಯಾಗಿಲ್ಲ!
ಈಗಲೂ ಮೆಚ್ಚಬಹುದಾದ 'ಪಾವೆಂ ಹೇಳಿದ ಕಥೆ', ಕಣ್ಣೀರು ತೊಟ್ಟಿಕ್ಕುವಂತೆ, ರಕ್ತ ಕುದಿಯುವಂತೆ ಮಾಡುವ ‘ಹಿಮಾಲಯನ್ ಬ್ಲಂಡರ್’ ಇವೆರಡನ್ನೇ ಬೆಳಗೆರೆ ಬರೆದಿದ್ದರೂ ದೊಡ್ಡ ಹೆಸರೇ ಮಾಡಿರುತ್ತಿದ್ದರು. ಬಸ್ ಸ್ಟಾಂಡಿನಲ್ಲಿ ಮೈಕ ಸಿಕ್ಕಿತೆಂದು, ಅನೌನ್ಸರ್ ಒಬ್ಬನು ಸಿಕ್ಕಾಪಟ್ಟೆ ಮಾತಾಡುವ ಕಥೆ, 'ಪಾವೆಂ ಹೇಳಿದ ಕಥೆ', ಕದಿಯುವ ಚಟ ಇರುವ ಅಮ್ಮನ ಕಥೆ ಇವೆಲ್ಲ ವಿಶಿಷ್ಟ ಸೃಷ್ಟಿಗಳು.
'ಅಸಲಿಗೆ', 'ನಂಗೊತ್ತು' Fine. ಬರ್ಬಾದ್, ಗಾಯಬ್, ಏಕ್‌ದಮ್, ನಿಕೃಷ್ಟ, ಮಟಾಷ್, 'ಹಟಕ್ಕೆ ಬಿದ್ದವನಂತೆ' ,'ಅಜಮಾಸು', ಪಟ್ಟಾಗಿ ಕೂತು 'ಬರೋಬ್ಬರಿ', 'ಮಟ್ಟಸ', ’ದರ್ದು’, "ಹೆಗ್ಗಳಿಕೆ ನನ್ನದಾ? ಅದು ನಿಮ್ಮದಾ? ಊಹುಂ, ಗೊತ್ತಿಲ್ಲ" 'ಅಫಿಡವಿಟ್ಟು', 'ಅರೆ ಇಸ್ಕಿ', “ಒಂದ್ಕಡೆಯಿಂದ ತಿಂದು ಹಾಕೋಣ ಅನ್ನೋಷ್ಟು ಚೆಂದ ಕಾಣ್ತಿದೀಯ ಇವತ್ತು!'' ಮುಂತಾದ ಟ್ರೇಡ್ಮಾರ್ಕ್ ಪದಪ್ರಯೋಗಗಳು,ಕುಟುಕುವ, ಕುತೂಹಲವನ್ನು ಕದಡಿ ಮಿಸುಕಾಡಿಸುವ, ಮಿಡಿಯುವ, ಬುದ್ಧಿ ಹೇಳುವ, ತುಂಟತನದ, ಭಾವದ ಮೂಲಕವೇ ಸ್ಪರ್ಶಿಸುವ ಬೆಳಗೆರೆ ಶೈಲಿ ಅನನ್ಯ.
ನಾನು ಒಂದು ಹತ್ತು ವರ್ಷ ಡ್ರಗ್ ಅಡಿಕ್ಟ್ ಆದವನಂತೆ ಹಾಯ್ ಓದಿದ್ದೆ. ಅದರ ಕ್ರೈಂ ವರದಿಗಳನ್ನು ಓದಿದ್ದು ಕಡಮೆ, ಅಂಕಣಗಳು, ಸಿನೆಮಾ ಸುದ್ದಿ ಇಂಥವೇ ಜಾಸ್ತಿ ಓದಿದ್ದು. ಆಮೇಲಾಮೇಲೆ ಅದದೇ ರಿಪೀಟ್ ಆಗುತ್ತದೆ, ಸರಕು ಮುಗಿದಿದೆ, ಬೋರು ಹೊಡೆಯುತ್ತಿದೆ, ಲೇಖಕ ತನ್ನ ಸರಕು ಖಾಲಿಯಾಗಿ, ಅಭ್ಯಾಸ ಬಲದಿಂದ ಬರೆಯತೊಡಗಬಾರದು ಅನಿಸಿತ್ತು. ಹಾಗನ್ನಿಸಿ 2012ರ ಸುಮಾರಿಗೆ ನಿಧಾನಕ್ಕೆ ಹಾಯ್ ಓದುವುದನ್ನು ಬಿಟ್ಟೆ. ಹೀಗೆ ಹತ್ತು ವರ್ಷ ಒಬ್ಬ ಓದುಗನನ್ನು ಹಿಡಿದಿಡುವುದು ಕಡಮೆ ಮಾತಲ್ಲ. ಬೆಳಗೆರೆಯೂ ತಮ್ಮ ಬಗ್ಗೆ ಸುಳ್ಳು, ಉತ್ಪ್ರೇಕ್ಷೆ ಮತ್ತೊಂದೆಲ್ಲ ಬರೆದುಕೊಳ್ಳುತ್ತಾರೆ ಅನಿಸಿತ್ತು, ಹಾಗಾಗಿ ಅವರ ಬರೆಹಗಳನ್ನು, ಖಾಸ್ ಬಾತ್ ಗಳನ್ನೂ ಕೂಡಾ ಕಥೆ ಅಂದುಕೊಂಡು ಓದುತ್ತಿದ್ದದ್ದೂ ಇತ್ತು. ಮುಟ್ಟಿದ್ದನ್ನೆಲ್ಲ ಒರೆಸುವ ಸ್ವಭಾವ ಇರುವ ತಮಿಳು ಹುಡುಗಿಯೊಬ್ಬಳ ಕಥೆ, ಒಂದು rogue ಸೈನಿಕರ ಗುಂಪನ್ನು ಒಂದು elite ಬಟಾಲಿಯನ್ನಾಗಿ ಪರಿವರ್ತನೆ ಮಾಡಿದವನ ಕಥೆ ಇಂಥವೆಲ್ಲ ಖಾಸ್ ಬಾತಿನ ರೂಪದಲ್ಲಿ ಬಂದ ಒಳ್ಳೆಯ ಸಣ್ಣ ಕಥೆಗಳೇ ಆಗಿದ್ದವು ಕೂಡಾ.
ಅರಾ ಮಿತ್ರ, ಕೃಷ್ಣೇ ಗೌಡ, ಪ್ರಾಣೇಶ್, ಹಿರಣ್ಣಯ್ಯ ಮುಂತಾದವರ ಜೊತೆಗೆ ನಿಲ್ಲಿಸಿದರೂ ಮಾತಾಡಿ ಚಪ್ಪಾಳೆ ಗಿಟ್ಟಿಸಿಕೊಂಡಾರು ಎನ್ನಿಸುವಂಥ ಭರ್ಜರಿ ಭಾಷಣಕಾರನೂ ರವಿಯವರ ಒಳಗಿದ್ದ. ಕಾಮರಾಜ ಮಾರ್ಗ ಪುಸ್ತಕ ಪ್ರಕಟವಾದಾಗಿನ ಸಭೆ ನನಗಿನ್ನೂ ನೆನಪಿದೆ. ಒಂದಿಡೀ ರವೀಂದ್ರ ಕಲಾಕ್ಷೇತ್ರ(ಅಥವಾ ಟೌನ್ ಹಾಲು) ತುಂಬಿ, ಹೊರಗೆ ಸ್ಕ್ರೀನು ಹಾಕಿ, ಅದನ್ನು ನೋಡಲಿಕ್ಕೂ ಜನತುಂಬಿ, 'ಪುಸ್ತಕದ ಕಾರ್ಯಕ್ರಮಕ್ಕೆ ಇಷ್ಟು ಜನ ಎಲ್ಲ ಬರ್ತಾರಾ' ಅನ್ನಿಸಿದ ಕಾರ್ಯಕ್ರಮ. ಅವತ್ತು ರಾಜಕಾರಣಿ ರಮೇಶ್ ಕುಮಾರ್ ಅವರದ್ದು ಎಲ್ಲರನ್ನೂ ಗೆದ್ದ ವಾಗ್ಜರಿ. "ಈ ಭಾಷಣ ಆದ್ಮೇಲೆ ಯಾರು ಮಾತಾಡಿದ್ರೂ ಡಲ್ ಹೊಡೆಯುತ್ತೆ" ಅಂತ ಶುರು ಮಾಡಿದ ಬೆಳಗೆರೆ ಅಷ್ಟೇ ಆಕರ್ಷಕವಾಗಿ ಮಾತಾಡಿ ಸಭಾಸದರನ್ನು ಮೋಡಿ ಮಾಡಿ ಬಿಟ್ಟಿದ್ದರು.
ಅವರ ಕುಣಿ ಕುಣಿಯುವ ಶಕ್ತಿಶಾಲಿ ಗದ್ಯ, ಹಿಂಡಿ ಬಿಡುವ ಭಾವುಕತೆ, ಕುಕ್ಕಿ ಬಿಡುವ ಹರಿತವಾದ ವ್ಯಂಗ್ಯ, ಕಣ್ಣಿಗೆ ಕಟ್ಟುವಂತೆ ವರ್ಣಿಸುವ ಚಿತ್ರಕ ಶಕ್ತಿ, ಅಳುಕಿಲ್ಲದೆ ಬದುಕಿನ ವಿಚಿತ್ರ ಮುಖಗಳಿಗೆ ಕನ್ನಡಿ ಹಿಡಿಯುವ ಗುಣ, ಸವಕಲಾಗದ ಗರಿಗರಿ ಭಾಷೆ, ತೀವ್ರತೆ, ಪುಸ್ತಕ ಬರೆಯಲು ಮಾಡುತ್ತಿದ್ದ ರಿಸರ್ಚು ಇವೆಲ್ಲ ಪ್ರಶಂಸನೀಯ. ಇಪ್ಪತ್ತು ವರ್ಷಗಳ ಖಾಸ್ ಬಾತನ್ನು ನೋಡಿ, ಹೇಳಿದ್ದನ್ನೇ ಹೇಳುವ ಸಾಧಾರಣ ಮಟ್ಟದವನ್ನು ಬಿಟ್ಟು, ಅದ್ಭುತವಾದವುಗಳನ್ನು ಹೆಕ್ಕಿ "ಬೆಸ್ಟ್ ಆಫ್ ಖಾಸ್ ಬಾತ್" ಅಂತ ಮಾಡಿದರೆ ಒಂದು ಮೂರು ಸಂಪುಟಗಳಿಗೆ ಆಗುವಷ್ಟು ವಸ್ತು ಅಲ್ಲೇ ಸಿಕ್ಕೀತು. ಹಾಗೆ ನಾನೇ ಒಂದು ದಿನ ಮಾಡಿಯೇನು ಅಂತ ಮನಸ್ಸಲ್ಲೇ ಅಂದುಕೊಂಡಿದ್ದೆ ಕೂಡಾ !
Alexander Mackendrick ಎಂಬ ನಿರ್ದೇಶಕ , ಮಾಸ್ಟ್ರು ಒಂದು ಸಲ ಹೇಳಿದ್ದ- ಹೊಸತಾಗಿ ಸಿನೆಮಾಕ್ಕೆ ಬರೆಯುವವರು ಈ ಕ್ಲಾಸಿಕ್ಕುಗಳು , ಅವಾರ್ಡ್ ವಿನ್ನಿಂಗೂ , ಕ್ರಿಟಿಕಲಿ acclaimed ತರದ್ದನ್ನೆಲ್ಲ ಓದ ಹೋಗಬಾರದು. ಅವರು ಓದಬೇಕಾದ್ದು pulp ಫಿಕ್ಷನ್ ಅನ್ನಿಸಿಕೊಂಡ ರೋಚಕ ಪತ್ತೆದಾರಿ, ಥ್ರಿಲ್ಲರ್ ರೈಟರುಗಳನ್ನು. ಕಸುಬು ಕಲಿಯಲು ಅದೇ ಸೂಕ್ತ ಅಂತ.
ನಾವೂ ಅದನ್ನು ಒಪ್ಪಬಹುದು. ಹೊಸತಾಗಿ ಬರೆಯ ಹೊರಟವರು, ಈಗಷ್ಟೇ ಓದಲು ತೊಡಗಿದವರು ಎಲ್ಲ ನಮ್ಮ ವಿಮರ್ಶಕರು ಮೆಚ್ಚುವ ಘನ ಗಂಭೀರ ಸಾಹಿತ್ಯ ಓದುವುದು ಸೂಕ್ತವಲ್ಲ(ಮಾಸ್ತಿ, ತೇಜಸ್ವಿ ತರದ ಜನಪ್ರಿಯರೂ, ವಿಮರ್ಶಕರ ಮೆಚ್ಚುಗೆ ಗಳಿಸಿದವರೂ ಆದ exceptionಗಳಿದ್ದಾರೆ ಆ ಮಾತು ಬೇರೆ). ಹೊಸಬರು ಓದಬೇಕಾದ್ದು ಅನಕೃ, ತರಾಸು, ಬೀಚಿ, ಬೆಳಗೆರೆ ತರದ craftsmanಗಳ ಆಕರ್ಷಕ, ರುಚಿಕಟ್ಟಾದ ಗದ್ಯವನ್ನೇ.
ಹೋಗಿಬನ್ನಿ ಬೆಳಗೆರೆ.

ಲೋಕೋ ಭಿನ್ನ ರುಚಿ:

 ಕೆಲವು ವಿಚಾರಗಳಿರುತ್ತವೆ, ಅವು ಅರ್ಥಪೂರ್ಣವೂ, ಸತ್ತ್ವಭರಿತವೂ ಆಗಿರುತ್ತವೆ, ಆದರೆ ಅವುಗಳನ್ನೂ ಯಾರೂ ಪಾಲಿಸುವುದಿಲ್ಲ! 'ಎಲ್ಲರಿಗೂ ಗೊತ್ತಿರುವ ಆದರೆ ಯಾರೂ ಓದದ ಕೃತಿಯೇ ಕ್ಲಾಸಿಕ್' ಎಂಬಂತೆ ಈ ಆದರ್ಶಗಳ ಪಾಡು. ವಿವೇಕಿಗಳ ಬಾಯಿಂದ ಬಂದ, 'ಲೋಕೋ ಭಿನ್ನ ರುಚಿ:' ಎಂಬ ಉಕ್ತಿಗೂ ಈ ದುರ್ಗತಿ ಒದಗಿದೆಯೇನೋ. 'ಈ ಹೇಳಿಕೆಯೊಂದು ಕ್ಲೀಷೆ' ಅನ್ನಿಸುವ ಮಟ್ಟಿಗೆ ಅದು ಎಲ್ಲರಿಗೂ ಗೊತ್ತಿದೆ, ಆದರೆ ಅದನ್ನು ಮನಸಾರೆ ಒಪ್ಪಿ, ಅನುಷ್ಠಾನಕ್ಕೆ ತರುವವರು ಎಷ್ಟು ಜನರಿದ್ದಾರೆ ಅಂತ ಲೆಕ್ಕ ಹಾಕಿದರೆ, ಹತ್ತು ನಿಮಿಷದಲ್ಲಿ ಲೆಕ್ಕ ಮುಗಿದೀತು! ಕಳೆದ ಸೋಮವಾರ ಫೇಸ್ಬುಕ್ಕಿನಲ್ಲಿ ಒಂದು ಸಿನೆಮಾದ ಬಗ್ಗೆ ಬರೆದವನನ್ನು ನೋಡಿ, 'ನನ್ನ ಅಭಿಪ್ರಾಯವೊಂದು ರಾಜಾಜ್ಞೆ, ಲೋಕದ ಸಕಲ ಚರಾಚರ ವಸ್ತುಗಳೂ ಇದನ್ನು ಮತ್ತು ಇದನ್ನು ಮಾತ್ರ ಒಪ್ಪಬೇಕು' ಎಂಬ ಧಾಟಿ ಅವನಲ್ಲಿರುತ್ತದೆ. ಮೋದಿಯ ವಿರುದ್ಧವೋ ಪರವೋ ದಿನಗಟ್ಟಲೆ ಮಾತಾಡುವರನ್ನು ನೋಡಿ, 'ಇಡೀ ಲೋಕದ ಒಳಿತು ಕೆಡುಕುಗಳು ನನಗೊಬ್ಬನಿಗೇ ಮಾತ್ರ ಗೊತ್ತಿರುವುದು, ಎಲ್ಲ ಸರಿತಪ್ಪುಗಳ ನಿಶ್ಚಯವನ್ನು ನಾನೊಬ್ಬನೇ ಗುತ್ತಿಗೆ ತೆಗೆದುಕೊಂಡಿದ್ದೇನೆ' ಎಂಬ ಭಾವ ಅಲ್ಲಿ ಇಣುಕುತ್ತಿರುತ್ತದೆ. ನನಗೆ ಇಷ್ಟವಾಗದಿದ್ದರೆ ಆ ಸಿನೆಮಾ ಡಬ್ಬಾ ಅದನ್ನು ಬೇರೆ ಯಾರೂ ಇಷ್ಟಪಡುವಂತಿಲ್ಲ, ನನಗೆ ಹಿಡಿಸದ ಪುಸ್ತಕ ಕಳಪೆ, ಅದನ್ನು ಮೆಚ್ಚುವವರು ಅಭಿರುಚಿಹೀನರು, ನನ್ನ ಫೇವರಿಟ್ ನಟನಿಗೆ ಮಾತ್ರ ನಟನೆ ಗೊತ್ತಿರುವುದು ಅಂತೆಲ್ಲ ಹಲವರು ಒಳಗೊಳಗೇ ನಂಬಿರುತ್ತಾರೋ ಏನೋ ಅಂತ ಒಮ್ಮೊಮ್ಮೆಯಾದರೂ ಅನಿಸುತ್ತದೆ. ವಿ. ಸೀತಾರಾಮಯ್ಯನವರ ಈ ಕೆಳಗಿನ, ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾದ, ಸಾಲುಗಳನ್ನು ಉದ್ಧರಿಸಲಿಕ್ಕೆ ಇಷ್ಟು ಪೀಠಿಕೆ ಹಾಕಿದೆ ಸ್ವಾಮೀ:

"ವಿಮರ್ಶೆಯಲ್ಲಿ ಕೊನೆಯ ಮಾತೆಂಬುದಿಲ್ಲ. ಕಾವ್ಯದ ಅರ್ಥವೆಂಬುದು ರುಚಿ, ಅನುಭವ, ತಾರತಮ್ಯಜ್ಞಾನ ಇರುವವರೆಲ್ಲರೂ ತಾವು ತಾವು ಮಾಡಿಕೊಳ್ಳುವ ಅರ್ಥ. ಅವರ ಬೆಲೆ, ವಿನೋದ, ತರ್ಕ, ತೀರ್ಮಾನ , ಸುಹೃತ್, ಬಗೆಬಗೆಯ ಸಾಹಿತ್ಯ ಪರಿಚಯ, ಮೇಧಾಶಕ್ತಿ ಇದ್ದಂತೆಲ್ಲ ಅವರು ತಮ್ಮ ತಮ್ಮ ಕೈಲಾಸಗಳಲ್ಲಿ ಆಳಬಹುದು. ಉಳಿದೆಲ್ಲಕ್ಕಿಂತ ತಮ್ಮ ಕೈವಲ್ಯವೇ ಮೇಲಿನದೆನ್ನಬಹುದು. ಒಂದು ತೀರ್ಮಾನ ಹೊಳೆದ ಕೂಡಲೇ ಅದರ ಪರವಾಗಿ ವಾದ, ತರ್ಕ, ಹಟ ಸಹಜ; ಬೇರೆಯವುಗಳ ಖಂಡನೆಗೆ ಮನಸ್ಸು ತುಯ್ಯುತ್ತದೆ. ಇದು ಸಾಮಾನ್ಯ ಮಾನವ ಮನೋವೃತ್ತಿ. ಆದರೆ ನನ್ನ ಅಭಿಪ್ರಾಯವೇ ಸರ್ವಶ್ರೇಷ್ಠವೆಂದು ಯಾರು ಹೇಳುವುದೂ ದಾರ್ಷ್ಟ್ಯವಾದೀತು."
ಏನಂತೀರಿ ?

ಒಂದು ಕಾರ್ಪೊರೇಟು ನೀತಿಕಥೆ

 ಬೀಚಿಯವರ ಒಂದು ಹಳೇ ಜೋಕನ್ನು ನೇಟಿವಿಟಿಗೆ ತಕ್ಕಂತೆ ಸ್ವಲ್ಪ ಬದಲಾಯಿಸಿ ರಚಿಸಿರುವ ಒಂದು ಕಾರ್ಪೊರೇಟು ನೀತಿಕಥೆ:

ತಿಂಮನಿಗೆ ಏನೇನು ಮಾಡಿದರೂ ವಿದ್ಯೆ ತಲೆಗೆ ಹತ್ತದು, ಹಾಗಾಗಿ ಕ್ಲಾಸ್ ರೂಮೂ ಬದಲಾಗದು. ಹೆಡ್ ಮಾಸ್ತರರಿಗೂ ಸುಸ್ತಾಗಿ, ತಿಂಮನನ್ನು ಹೇಗಾದರೂ ಪಾಸು ಮಾಡಿ ಪುಣ್ಯ ಕಟ್ಟಿಕೊಳ್ಳುವಂತೆ ಮಾಷ್ಟ್ರುಗಳಲ್ಲಿ ಹೇಳಿದ್ದಾಯಿತು. ಶಾಲೆಯಲ್ಲಿ ಒಂದು appraisal ಸಮಿತಿ ಮಾಡಿ, ಮೀಟಿಂಗು ನಡೆಸಿ, ಕಡೆಗೆ ತಿಂಮನಿಗೆಂದೇ ಪ್ರತ್ಯೇಕ ಪರೀಕ್ಷೆ ಮಾಡುವುದೆಂದಾಯಿತು, ಹೆಚ್ಚು ಪ್ರಶ್ನೆಗಳನ್ನು ಕೆಳತಕ್ಕದ್ದಲ್ಲ, ಹೇಗಾದರೂ ಯಾವುದಾದರೂ ಒಂದು ಉತ್ತರ ಬಂದರೂ ಪಾಸು ಮಾಡಿ ಅಂದರು ಹೆಡ್ ಮಾಸ್ತರರು.
ಮೊದಲಿಗೆ ಇಂಗ್ಲೀಷು ಮಾಸ್ಟರು ಒಂದೇ ಒಂದು ಶಬ್ದದ ಸ್ಪೆಲ್ಲಿಂಗು ಬರೆಯಲು ಹೇಳಿದರಂತೆ, ಯಾವುದಾದರೂ ಒಂದು ಅಕ್ಷರ ಸರಿಯಾದರೂ ಪಾಸು ಮಾಡುವುದೆಂದು ನಿರ್ಣಯ ಮಾಡಿ, "ಎಂಚ" ಅಂತ ಕಣ್ಣು ಮಿಟುಕಿಸಿದರಂತೆ. ಏನು ಮಾಡುವುದು, ಮಾಷ್ಟ್ರ ಗ್ರಹಚಾರ! ಅವರು ಕೊಟ್ಟ ಶಬ್ದ- "ಕಾಫಿ", ಅದನ್ನು ತಿಂಮ ಬರೆದದ್ದು ಹೀಗೆ :
KAAPI.
ಮುಂದೆ ಕನ್ನಡ ಮಾಷ್ಟ್ರ ಸರದಿ, ಅವರೋ ಏಳು ಕೆರೆಯ ನೀರು ಕುಡಿದವರು, ಪ್ರಶ್ನೆ ಪತ್ರಿಕೆಯನ್ನು ಹೀಗೆ ರಚಿಸಿ ಕೊಟ್ಟರು :
೧. ಕನ್ನಡದಲ್ಲಿ ಒಟ್ಟು ಎಷ್ಟು ಸಂಧಿಗಳಿವೆ ?
೨. ಕನ್ನಡದ ಮೂರು ಸಂಧಿಗಳು ಯಾವುವು ?
೩. ಕನ್ನಡ ಸಂಧಿಯಾದ ಆಗಮ ಸಂಧಿಗೆ ಒಂದು ಉದಾಹರಣೆ ಕೊಡಿ
೪. ಕನ್ನಡ ಸಂಧಿಯಾದ ಆದೇಶ ಸಂಧಿಗೆ ಒಂದು ಉದಾಹರಣೆ ಕೊಡಿ
೫. ಕನ್ನಡ ಸಂಧಿಯಾದ ಲೋಪ ಸಂಧಿಗೆ ಒಂದು ಉದಾಹರಣೆ ಕೊಡಿ
ತಿಂಮನೇನು ಇಷ್ಟಕ್ಕೆಲ್ಲ ಸೋಲುವವನೇ? ಎಲ್ಲ ಪ್ರಶ್ನೆಗಳಿಗೂ, "ಗೊತ್ತಿಲ್ಲ" ಅಂತಲೇ ಬರೆದ!
ಮಾಷ್ಟ್ರು ಬಿಡುತ್ತಾರೆಯೇ? ಗೊತ್ತು + ಇಲ್ಲ = ಗೊತ್ತಿಲ್ಲ, ಲೋಪ ಸಂಧಿಗೆ ಸರಿಯಾದ ಉದಾಹರಣೆಯೇ ಕೊಟ್ಟಿದ್ದಾನೆ, ಐದನೇ ಉತ್ತರ ಸರಿ ಅಂತ ಹೇಳಿ ಪಾಸು ಮಾಡಿದರಂತೆ.
ಕಾರ್ಪೊರೇಟ್ ನೀತಿ: "ಈ ಸಲ ಪ್ರಮೋಷನ್ ಸಿಗುತ್ತದೋ ಇಲ್ಲವೋ" ಎನ್ನುವುದು ಸರಿಯಾದ ಪ್ರಶ್ನೆಯಲ್ಲ. "ಈ ಸರ್ತಿ ಮ್ಯಾನೇಜರು/ಬಾಸು ಮನಸ್ಸು ಮಾಡುತ್ತಾರೋ ಇಲ್ಲವೋ" ಎಂಬುದೇ ಉಚಿತವಾದ ಪ್ರಶ್ನೆ.

ಎರಡು ಅನುವಾದಗಳು

 ಅನುವಾದವೆನ್ನುವುದು ಎಷ್ಟೋ ಸರ್ತಿ, ಅಂಗಡಿಯಲ್ಲಿದ್ದ ಐಸ್ ಕ್ರೀಮನ್ನು ಆಸೆಪಟ್ಟು, ಬಟ್ಟಲೊಂದರಲ್ಲಿ ಹಾಕಿ, ಮನೆಗೆ ತರಹೊರಟಂತೆ ಆಗುವುದುಂಟು. ಮನೆಗೆ ಮುಟ್ಟುವಾಗ ಐಸು ಕ್ರೀಮು ಕರಗಿ ಸೊರಗಿ ನೀರಾಗಿ, ಮತ್ತೇನೋ ಆಗಿ, 'ಏಗಿದ್ದೆಲ್ಲ ಸುಮ್ಮನೆ' ಅನಿಸಿಬಿಡುತ್ತದೆ. ಎಷ್ಟೋ ಸಲ ದೊಡ್ಡವರು ಮಾಡಿದ ಅನುವಾದಗಳಲ್ಲಿಯೇ, "He is so cool" ಅನ್ನುವುದನ್ನು, 'ಅವನು ತಣ್ಣನೆಯ ಮನುಷ್ಯ' ಅಂತ ಮಾಡಿಬಿಟ್ಟಿದ್ದಾರೋ ಏನ್ಕತೆ ಅಂತ ತೋರುವುದಿದೆ. ಮೂಲ ಬಿಜೆಪಿ, ಅನುವಾದ ಕಾಂಗ್ರೆಸ್ಸು ಎಂಬಂತಾದರಂತೂ ಕಡುಕಷ್ಟ. ಎಲ್ಲೋ ಕೆಲವೊಮ್ಮೆ, ಬಿಎಂಶ್ರೀಯವರ ಅನುವಾದಗಳಲ್ಲೋ, ಜೋಗಿ, ರವಿ ಬೆಳಗೆರೆ ಅವರುಗಳು ಮಾಡಿದ ರೂಪಾಂತರಗಳಲ್ಲೋ ಚೀನಾದ ಗೋಬಿ ಮಂಚೂರಿ ನಮ್ಮದೇ ತಿಂಡಿ ಆಗಿಬಿಟ್ಟಂತೆ, ಅಲ್ಲಿಯದು ಇಲ್ಲಿಯದೇ ಆಗುವುದುಂಟು. ಹಾಗಾದರೆ, ಓದುಗರಿಗೆ ಗೋಬಿ ಮಂಚೂರಿಯನ್ನನ್ನು ಕಚ್ಚಿದ ಸುಖಪ್ರಾಪ್ತಿ.

ಸುಖವೋ ಕಷ್ಟವೋ, ಯಾವುದಕ್ಕೂ ಒಮ್ಮೆ ಷೆಲ್ಲಿಯ 'To a Skylark' ಕವನವನ್ನೊಮ್ಮೆ ನೋಡೋಣ. ಕನ್ನಡಿಗರ ಸುದೈವ ಎಂಬಂತೆ ಇಬ್ಬರು ಘನ ವಿದ್ವಾಂಸರು skylark ಎಂಬ ಹಕ್ಕಿಗೆ ಇಲ್ಲಿ ಗೂಡುಕಟ್ಟಿದ್ದಾರೆ. ಪಂಡಿತರ ಲೋಕದಲ್ಲಿ, "ಹುಲಿ ಅಂದ್ರೆ ಹುಲೀನೇ" ಎನ್ನಬಹುದಾದ ಮಂಜೇಶ್ವರದ ಗೋವಿಂದ ಪೈಯವರು `ಬಾನಕ್ಕಿಗೆ' ಎಂಬ ಹೆಸರಿನಲ್ಲೂ, ನನಗೆ ಇವತ್ತಿಗೂ ಅನುವಾದಕ್ಕೆ ಮಾದರಿಯಾಗಿರುವ ಬಿಎಂಶ್ರೀಯವರು `ಬಾನಾಡಿ' ಎಂದೂ ಈ ಪದ್ಯವನ್ನು ಕನ್ನಡಕ್ಕೆ ತಂದಿದ್ದಾರೆ. ಸುಮ್ಮನೆ ತಮಾಷೆಗೆ ಕೆಲವು ಸಾಲುಗಳನ್ನು ಅಕ್ಕಪಕ್ಕ ಇಟ್ಟು ಮೂಲದ ಒನಪನ್ನೂ, ಅನುವಾದದ ಒಯ್ಯಾರವನ್ನೂ, ಇಂಗ್ಲೀಷಿನ ಬಿಂಕವನ್ನೂ ಕನ್ನಡದ/ಹಳಗನ್ನಡದ ಬಿಗುಮಾನವನ್ನೂ ನೋಡೋಣ. ಇದೊಂತರ ತೆಂಡೂಲ್ಕರನನ್ನೂ ಲಾರಾನನ್ನೂ ಆಚೀಚೆ ಇಟ್ಟು ನೋಡಿದಂತೆ. ಬಿಎಂಶ್ರೀಯವರದ್ದು ಹೆಚ್ಚಿನ ಕಡೆ ಪಾಂಡಿತ್ಯದ ಭಾರ ಓದುವವರ ಮೇಲೆ ಬೀಳದಂತ ಸರಳ,ಲಲಿತ, ಭಾವಗೀತದ ಓಟ. ಗೋವಿಂದ ಪೈಗಳದ್ದು ಹಳೆಕಾಲದ ಪಂಡಿತರ ಬಿಗಿಯಾದ ಗತ್ತಿನ ನಡಿಗೆಯ ಕ್ರಮ.
ಮೊದಲ ಸಾಲುಗಳು ಹೀಗಿವೆ:
'Hail to thee blithe spirt!
Bird thou never wert,
That from heaven, or near it
pourest thyfull heart
In profuse strains of unpremeditated art''
ಇದನ್ನು ಶ್ರೀಯವರು ಹೀಗೆ ಅನುವಾದಿಸಿದ್ದಾರೆ:
'ಆರು ನೀನೆಲೆ ಹರುಷ ಮೂರುತಿ?
ಹಕ್ಕಿಯೆಂಬರೆ ನಿನ್ನನು!
ತೋರಿ ದಿವಿಜರು ಸುಳಿವ ಬಳಿ,ಸುಖ
ವುಕ್ಕಿ ಬಹನಿನ್ನೆದೆಯನು
ಹಾರಿ ನೆನೆಯದ ಕಲೆಯ ಕುಶಲದ ಭೂರಿಗಾನದೊಳೆರೆಯುವೆ'
ಇದು ಪೈಗಳಲ್ಲಿ ಹೀಗೆ ಬಂದಿದೆ:
ಸೊಗಯಿಸೈ ಸುಖಜೀವಿ!
ನೆಗೆವಕ್ಕಿ ನೀನಲ್ಲ;
ಗಗನದಿಂದಲೊ ಗಗನದರುಗಿಂದಲೊ
ಮೊಗೆವೆ ತುಂಬೆದೆಯ
ಮುಂಬಗೆದಿಲ್ಲದಿಹ
ಬಿನ್ನಣಿಗೆಯುಗುವುದಾರ ಗಾಯನದ ಝರಿಯಿಂ
ಇದರಲ್ಲಿ ಪೈಗಳದ್ದು ಮೂಲವನ್ನು ಇರುವ ಹಾಗೇ ತರುವ ಕ್ರಮ, ಶ್ರೀಯವರದ್ದು ಮೂಲದ ದಿಕ್ಕಿನಲ್ಲಿ ಸ್ವಲ್ಪ ಆಚೀಚೆ ಹೋಗುವ ದಾರಿ. pourest thy full heart In profuse strains of unpremeditated art ಅನ್ನುವುದರ ಕೊರಳಿಗೆ ಹಗ್ಗ ಬಿಗಿದು ಎಳೆತರುವುದು ಸಾಹಸದ ಕೆಲಸ. unpremeditated art ಅನ್ನುವುದರ ಭಾವ "ನೆನೆಯದ ಕಲೆಯ ಕುಶಲದ" ಅಂದಾಗ ಬರಲಿಲ್ಲ, "ಮುಂಬಗೆದಿಲ್ಲದಿಹ ಬಿನ್ನಣಿಗೆ ಉಗುವುದು" ಎಂದಾಗ ಮೂಲದ ಅಬ್ಬರವೇನೋ ಬಂತು, ಆದರೆ 'ಬಿನ್ನಣಿಗೆ' ಎಂಬ ಶಬ್ದಕ್ಕೆ ಡಿಕ್ಷನರಿ ಬೇಕಾದೀತು!
ಬಿ ಎಂ ಶ್ರೀಯವರ "ನೆಲವನೊಲ್ಲದೆ ಚಿಗಿದು ಚಿಮ್ಮುತ ಮೇಲು ಮೇಲಕ್ಕೋಡುವೆ; ಒಲೆದು ದಳ್ಳುರಿ ನೆಗೆದು ಎಂಬ ಸಾಲುಗಳಲ್ಲಿHigher still and higher/From the earth thou springest/Like a cloud of fire ಎಂಬ ಸಾಲುಗಳ ಸೊಗಸು ಮಾಯವಾಗಿದೆ. "ಉನ್ನತಂ ಮೇಣದರಿನುನ್ನತಂ ಭುವಿಯಿಂದ ನೀನ್ನೆಗೆವೆ ಕೆಂಡದುರಿ ಮೋಡದಂತೆ" ಎಂಬ ಪೈಗಳ ಸಾಲುಗಳು ಮೂಲಕ್ಕೆ ಹತ್ತಿರ. ಮುಂದೆ ಬರುವ And singing still dost soar, and soaring ever singest ಪೈಗಳಲ್ಲಿ - "ಗನ್ನದೊಳೇರುತಿನ್ನು ಹಾಡುವೆ, ಹಾಡುತಿನ್ನೇರುವೆ" ಅಂತ ಸಾಧಾರಣವಾಗಿದೆ. ಶ್ರೀಯವರ, "ನಲಿದು ಹಾಡುತ ಹಾಡುತೇರುವೆ, ಏರುತೇರುತ ಹಾಡುವೆ" ಎಂಬಲ್ಲಿ ಪದಗಳನ್ನು ಕುಣಿಸಿರುವ ರೀತಿಯಿಂದ ಮಜಾ ಬಂದಿದೆ.
ಕೈಗೆ ಸಿಗದೇ ಜಾರಬಹುದಾದ ಒಂದು ಸಾಲು ಇದು: Thou dost float and run; Like an unbodied joy whose race is just begun. ಶ್ರೀಯವರ "ಮುಳುಗಿ ಏಳುವೆ, ಹರಿಯುವೆ, ಕಳಚಿ ದೇಹವ ದಿವಕೆ ಹರಿಯುವ ಭೋಗಿಯೋಲಾಟದವೊಲು" ಎಂಬಲ್ಲಿ ಮೂಲಕ್ಕೆ ಬೇರೆಯೇ ಟ್ವಿಸ್ಟ್ ಕೊಟ್ಟಿದ್ದಾರೆ. ಪೈಗಳ "ಮುಂಗತಿಗಣಂ ತೊಡಗಿದಂಗವಡೆಯದ ಸೊಗದ ಪಾಂಗಿನಿಂ ತೇಲಾಡಿ ಹರಿದಾಡುವೆ" ಎಂಬುದು, ಸ್ವಲ್ಪ ಹಳಗನ್ನಡದಂತಿದ್ದರೂ ಮೂಲದ ಚೆನ್ನಾದ ಮರುಸೃಷ್ಟಿ. unbodied joy = ಅಂಗವಡೆಯದ ಸೊಗ ಎಂಬುದುಕಣ್ಣು ಸೆಳೆಯುವ ಅನುವಾದ.
ಕಡೆಗೊಮ್ಮೆ ಬರುವ We look before and after, And pine for what is not ಎಂಬ ಸರಳವಾದ ಸಾಲು, ಗೋವಿಂದ ಪೈಗಳಲ್ಲಿ "ಹಿಂದುಮುಂದಕೆ ನೋಡಿ ಹೊಂದದನು ಹಲುಬಲಾವೊಂದು" ಅಂತಾಗಿ ಭಾವ ಅಷ್ಟಾಗಿ ಮೂಡುವುದಿಲ್ಲ, ಇಂತಲ್ಲಿ ಸರಳತೆಯೇ ಒಳ್ಳೆಯದು ಎಂಬಂತೆ, ಶ್ರೀಯವರ ಈ ಸಾಲುಗಳು ತಟ್ಟನೆ ಮನಮುಟ್ಟುತ್ತವೆ: "ಹಿಂದುಮುಂದನು ನೋಡಿ ನಮೆವೆವು ನೆನೆಯುತಿಲ್ಲದ ಸುಖವನು". ಹಾಗೆ ನೋಡಿದರೆ ಈ ಸಾಲು ಅತ್ಯಂತ ಮನೋಹಾರಿಯಾಗಿ ಮೂಡಿರುವುದು ಅಡಿಗರಲ್ಲಿ ಮತ್ತು ಪುತಿನ ಅವರಲ್ಲಿ, ಅವರು ಈ ಕವನದ ಅನುವಾದ ಮಾಡಿರದಿದ್ದರೂ ! ಅಡಿಗರ, "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ" ಎಂಬ ಸಾಲು ಷೆಲ್ಲಿಗಿಂತ ಒಂದು ಕೈ ಮೇಲೆಯೇ ಇದೆ. ಗೋಕುಲ ನಿರ್ಗಮನದಲ್ಲಿ ಪುತಿನ ಬರೆದಿರುವ ಈ ಸಾಲನ್ನು ಇವುಗಳ ಜೊತೆಯಿಟ್ಟು ನೋಡಿ, ಇದು ಉಳಿದೆಲ್ಲವನ್ನೂ ಮೀರಿಸುವಂತಿಲ್ಲವೇ: "ಬಯಕೆಯೊಳೇ ಬಾಳ್ ಕಳೆವುದು ಬಯಕೆಯು ದೊರೆತ ಚಣ/ ಬಯಸಿಕೆಯನೆ ಬಯಸುವ ತೆರವೇಕಹುದೆನ್ನ ಮನ"
ಇನ್ನು ಷೆಲ್ಲಿಯ Our sweetest songs are those that tell of saddest thought ಎಂಬುದರ ಪಂಚ್ ಗೋವಿಂದ ಪೈಗಳ "ಸಂದ ಬೇವಸವ ಬಗೆ ತಂದೊರೆವುವೆಮ್ಮ ಸ್ವಾದಿಷ್ಠ ಗೀತಂ" ಎಂಬ ಸಾಲಿನಲ್ಲಿ ಸಿಗುವುದಿಲ್ಲ. ಶ್ರೀಯವರ, "ನೊಂದ ಗೋಳನು ಹೇಳಿ ಕೊರೆವುವೆ ಇನಿಯ ಕವನಗಳೆಮ್ಮೊಳು" ಎನ್ನುವುದರಲ್ಲಿಯೂ ಅಷ್ಟು ಪಂಚ್ ಇಲ್ಲ, ಭಾವಸ್ಫುರಣೆಯಿಲ್ಲ. ಈ ಸಾಲು ನಿಜವಾಗಿಯೂ ಸತ್ತ್ವಪೂರ್ಣವಾಗಿ ಇನ್ನೊಂದು ತರದಲ್ಲಿ ಬಂದಿರುವುದು ಬೇಂದ್ರೆಯವರ ಈ ಕೆಳಗಿನ ಸಾಲುಗಳಲ್ಲಿ !
ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ
ವಿಶೇಷವೆಂದರೆ,ಇಬ್ಬರು ವಿಶಾರದರು ಒಂದೇ ಪದ್ಯವನ್ನು ಅನುವಾದಿಸಿದರೂ, ಒಂದೇ ಪದವನ್ನು ಬಳಸುವುದು ಇಲ್ಲ ಎಂಬಷ್ಟು ಕಡಮೆ ಎಂಬುದನ್ನು ಗಮನಿಸಿ.
ಹೀಗಿದೆ ಅನುವಾದಗಳ ಕಥೆ. ಅಂತೂ ಒಲಿಯದ ನಲ್ಲೆಯನ್ನು ಒಲಿಸಿಕೊಳ್ಳಲು ಹೆಣಗುವ ಹುಡುಗರಂತೆ ಬರೆಯುವವರು ಅನುವಾದಗಳನ್ನು ಮಾಡುತ್ತಲೇ ಇರುತ್ತಾರೆ.