Saturday 19 December 2020

ಲೋಕೋ ಭಿನ್ನ ರುಚಿ:

 ಕೆಲವು ವಿಚಾರಗಳಿರುತ್ತವೆ, ಅವು ಅರ್ಥಪೂರ್ಣವೂ, ಸತ್ತ್ವಭರಿತವೂ ಆಗಿರುತ್ತವೆ, ಆದರೆ ಅವುಗಳನ್ನೂ ಯಾರೂ ಪಾಲಿಸುವುದಿಲ್ಲ! 'ಎಲ್ಲರಿಗೂ ಗೊತ್ತಿರುವ ಆದರೆ ಯಾರೂ ಓದದ ಕೃತಿಯೇ ಕ್ಲಾಸಿಕ್' ಎಂಬಂತೆ ಈ ಆದರ್ಶಗಳ ಪಾಡು. ವಿವೇಕಿಗಳ ಬಾಯಿಂದ ಬಂದ, 'ಲೋಕೋ ಭಿನ್ನ ರುಚಿ:' ಎಂಬ ಉಕ್ತಿಗೂ ಈ ದುರ್ಗತಿ ಒದಗಿದೆಯೇನೋ. 'ಈ ಹೇಳಿಕೆಯೊಂದು ಕ್ಲೀಷೆ' ಅನ್ನಿಸುವ ಮಟ್ಟಿಗೆ ಅದು ಎಲ್ಲರಿಗೂ ಗೊತ್ತಿದೆ, ಆದರೆ ಅದನ್ನು ಮನಸಾರೆ ಒಪ್ಪಿ, ಅನುಷ್ಠಾನಕ್ಕೆ ತರುವವರು ಎಷ್ಟು ಜನರಿದ್ದಾರೆ ಅಂತ ಲೆಕ್ಕ ಹಾಕಿದರೆ, ಹತ್ತು ನಿಮಿಷದಲ್ಲಿ ಲೆಕ್ಕ ಮುಗಿದೀತು! ಕಳೆದ ಸೋಮವಾರ ಫೇಸ್ಬುಕ್ಕಿನಲ್ಲಿ ಒಂದು ಸಿನೆಮಾದ ಬಗ್ಗೆ ಬರೆದವನನ್ನು ನೋಡಿ, 'ನನ್ನ ಅಭಿಪ್ರಾಯವೊಂದು ರಾಜಾಜ್ಞೆ, ಲೋಕದ ಸಕಲ ಚರಾಚರ ವಸ್ತುಗಳೂ ಇದನ್ನು ಮತ್ತು ಇದನ್ನು ಮಾತ್ರ ಒಪ್ಪಬೇಕು' ಎಂಬ ಧಾಟಿ ಅವನಲ್ಲಿರುತ್ತದೆ. ಮೋದಿಯ ವಿರುದ್ಧವೋ ಪರವೋ ದಿನಗಟ್ಟಲೆ ಮಾತಾಡುವರನ್ನು ನೋಡಿ, 'ಇಡೀ ಲೋಕದ ಒಳಿತು ಕೆಡುಕುಗಳು ನನಗೊಬ್ಬನಿಗೇ ಮಾತ್ರ ಗೊತ್ತಿರುವುದು, ಎಲ್ಲ ಸರಿತಪ್ಪುಗಳ ನಿಶ್ಚಯವನ್ನು ನಾನೊಬ್ಬನೇ ಗುತ್ತಿಗೆ ತೆಗೆದುಕೊಂಡಿದ್ದೇನೆ' ಎಂಬ ಭಾವ ಅಲ್ಲಿ ಇಣುಕುತ್ತಿರುತ್ತದೆ. ನನಗೆ ಇಷ್ಟವಾಗದಿದ್ದರೆ ಆ ಸಿನೆಮಾ ಡಬ್ಬಾ ಅದನ್ನು ಬೇರೆ ಯಾರೂ ಇಷ್ಟಪಡುವಂತಿಲ್ಲ, ನನಗೆ ಹಿಡಿಸದ ಪುಸ್ತಕ ಕಳಪೆ, ಅದನ್ನು ಮೆಚ್ಚುವವರು ಅಭಿರುಚಿಹೀನರು, ನನ್ನ ಫೇವರಿಟ್ ನಟನಿಗೆ ಮಾತ್ರ ನಟನೆ ಗೊತ್ತಿರುವುದು ಅಂತೆಲ್ಲ ಹಲವರು ಒಳಗೊಳಗೇ ನಂಬಿರುತ್ತಾರೋ ಏನೋ ಅಂತ ಒಮ್ಮೊಮ್ಮೆಯಾದರೂ ಅನಿಸುತ್ತದೆ. ವಿ. ಸೀತಾರಾಮಯ್ಯನವರ ಈ ಕೆಳಗಿನ, ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾದ, ಸಾಲುಗಳನ್ನು ಉದ್ಧರಿಸಲಿಕ್ಕೆ ಇಷ್ಟು ಪೀಠಿಕೆ ಹಾಕಿದೆ ಸ್ವಾಮೀ:

"ವಿಮರ್ಶೆಯಲ್ಲಿ ಕೊನೆಯ ಮಾತೆಂಬುದಿಲ್ಲ. ಕಾವ್ಯದ ಅರ್ಥವೆಂಬುದು ರುಚಿ, ಅನುಭವ, ತಾರತಮ್ಯಜ್ಞಾನ ಇರುವವರೆಲ್ಲರೂ ತಾವು ತಾವು ಮಾಡಿಕೊಳ್ಳುವ ಅರ್ಥ. ಅವರ ಬೆಲೆ, ವಿನೋದ, ತರ್ಕ, ತೀರ್ಮಾನ , ಸುಹೃತ್, ಬಗೆಬಗೆಯ ಸಾಹಿತ್ಯ ಪರಿಚಯ, ಮೇಧಾಶಕ್ತಿ ಇದ್ದಂತೆಲ್ಲ ಅವರು ತಮ್ಮ ತಮ್ಮ ಕೈಲಾಸಗಳಲ್ಲಿ ಆಳಬಹುದು. ಉಳಿದೆಲ್ಲಕ್ಕಿಂತ ತಮ್ಮ ಕೈವಲ್ಯವೇ ಮೇಲಿನದೆನ್ನಬಹುದು. ಒಂದು ತೀರ್ಮಾನ ಹೊಳೆದ ಕೂಡಲೇ ಅದರ ಪರವಾಗಿ ವಾದ, ತರ್ಕ, ಹಟ ಸಹಜ; ಬೇರೆಯವುಗಳ ಖಂಡನೆಗೆ ಮನಸ್ಸು ತುಯ್ಯುತ್ತದೆ. ಇದು ಸಾಮಾನ್ಯ ಮಾನವ ಮನೋವೃತ್ತಿ. ಆದರೆ ನನ್ನ ಅಭಿಪ್ರಾಯವೇ ಸರ್ವಶ್ರೇಷ್ಠವೆಂದು ಯಾರು ಹೇಳುವುದೂ ದಾರ್ಷ್ಟ್ಯವಾದೀತು."
ಏನಂತೀರಿ ?

No comments:

Post a Comment