Saturday 19 December 2020

ಪಾ. ವೆಂ. ಆಚಾರ್ಯ

 40-50 ವರ್ಷಗಳ ಹಿಂದೆ ನಮ್ಮಲ್ಲಿ ಟೀವಿಗಳಿರಲಿಲ್ಲ, ನ್ಯಾಷನಲ್ ಜಿಯೋಗ್ರಾಫಿಕ್ಕಿನಂಥಾ ಚಾನೆಲ್ ಕೂಡಾ ಇರಲಿಲ್ಲ. ಆದರೇನಂತೆ? ಸರ್ವಜ್ಞಾಚಾರ್ಯ, ಸರ್ವಕುತೂಹಲಿ ಎಂಬ ಬಿರುದುಗಳಿದ್ದ ಸರ್ವಂಕಷ ಪ್ರತಿಭೆಯ ಪಾ. ವೆಂ. ಆಚಾರ್ಯರಿದ್ದರು, ಅವರೇ ಕಟ್ಟಿದ ಕಸ್ತೂರಿ ಪತ್ರಿಕೆಯಿತ್ತು. SSLCಯಲ್ಲಿ rank ಬಂದರೂ ಕಿತ್ತು ತಿನ್ನುವ ಬಡತನ ಅವರನ್ನು ಡಿಗ್ರಿಗೆ ಓದಲು ಬಿಡಲಿಲ್ಲ, ಜ್ಞಾನಕ್ಕೆ ಡಿಗ್ರಿಯ ಹಂಗು ಎಲ್ಲಿರುತ್ತದೆ(ಇವರು ಡಾಕ್ಟರೇಟು ಪಡೆದವರು ಅಂತ ಭಾವಿಸಿ ಕೆಲವರು ಅವರನ್ನು ಡಾ. ಪಾ. ವೆಂ. ಆಚಾರ್ಯರೇ ಅಂತಲೇ ಸಂಭೋದಿಸುತ್ತಿದ್ದರಂತೆ !) ಮುಂದೆ ವಿಧಿಯ ಮೇಲೆ ಸೇಡು ತೀರಿಸಲೋ ಎಂಬಂತೆ ಪಾವೆಂ ನೂರೆಂಟು ವಿಷಯಗಳನ್ನು ಓದಿಕೊಂಡರು, ಅವುಗಳ ಬಗ್ಗೆ ಕಸ್ತೂರಿಯಲ್ಲಿ ಸೊಗಸಾಗಿ ಬರೆದರು. ಕಾಲೇಜಿನ ಪ್ರಾಯಕ್ಕೆ ಬರುವಾಗಲೇ ನಾಗವರ್ಮನ ಛಂದೋಂಬುಧಿ, ಕೇಶಿರಾಜನ ಶಬ್ದಮಣಿದರ್ಪಣಗಳಂತಹ ಶಾಸ್ತ್ರ ಗ್ರಂಥಗಳನ್ನು ಪಾವೆಂ ಇಡಿ ಇಡಿಯಾಗಿ ನುಂಗಿ ಹಾಕಿದ್ದರಂತೆ. ಪಾಠ ಮಾಡಿದರೂ ತಲೆಗೆ ಹೋಗುವುದಿಲ್ಲ ಅನಿಸಬಹುದಾದ ಈ ತರದ ಶಾಸ್ತ್ರಗ್ರಂಥಗಳನ್ನು, ಪಾವೆಂ ಕಥೆ ಕಾದಂಬರಿ ಓದುವಂತೆ ತಮ್ಮಷ್ಟಕ್ಕೆ ತಾವೇ ಓದಿ ಮುಗಿಸಿದರೆಂದು ಕಾಣುತ್ತದೆ.

ಭೌತ ಶಾಸ್ತ್ರ,ರಸಾಯನ ಶಾಸ್ತ್ರ,ಮನೋವಿಜ್ಞಾನ, ಭಾಷೆ, ಶಬ್ದ ವ್ಯುತ್ಪತ್ತಿ, ರಾಜಕೀಯ,ಕ್ರೈಂ, ಇತಿಹಾಸ, ಭೂಗೋಳ,ಗಣಿತ, ವೈದ್ಯಕೀಯ ವಿಚಾರಗಳು, ಹೂವು, ಹಣ್ಣು ಹೀಗೆ ನೀವು ಯಾವ ವಿಷಯ ಬೇಕಾದರೂ ಹೇಳಿ, ಅಲ್ಲಿಗೆ ಆಚಾರ್ಯರ ಪೆನ್ನು ಆ ಕಾಲದಲ್ಲೇ ಹೋಗಿ ಬಂದಿರುತ್ತದೆ! ಮೊನಚಾದ ಹರಟೆ,ವಿಡಂಬನೆಗಳು, ಅನುವಾದಗಳು, ಕವಿತೆಗಳು ಎಲ್ಲವನ್ನೂ ಅವರು ಬರೆದಿದ್ದಾರೆ. ಸರ್ವಕುತೂಹಲದ ಕಾರಣಕ್ಕೆಯೋ ಏನೋ, ನನ್ನ ಪುಸ್ತಕದ ಬೆನ್ನುಡಿ,ಮುನ್ನುಡಿ, ಲೇಖಕನ ಮಾತು ಎಲ್ಲ ಕಡೆಗಳಲ್ಲೂ ಆಚಾರ್ಯರ ಹೆಸರು ಬಂದಿದೆ. ಒಬ್ಬ ಚೆಸ್ ಆಟಗಾರನ ಬಗ್ಗೆ ನಾನು ಬರೆಯಹೊರಟಾಗ, ಇಂತದ್ದು ಕನ್ನಡದಲ್ಲಿ ಬಂದಿರಲಿಕ್ಕಿಲ್ಲ ಅಂದುಕೊಂಡು ಹೊರಟಿದ್ದೆ, ಆಮೇಲೆ ನೋಡಿದರೆ ಎಪ್ಪತ್ತರ ದಶಕದಲ್ಲಿಯೇ ಆಚಾರ್ಯರು ಬಾಬಿ ಫಿಷರ್ ನ ಬಗ್ಗೆ ಬರೆದುಬಿಟ್ಟಿದ್ದಾರೆ !
ಅವರ ಆರೋಗ್ಯ ಕೈಕೊಟ್ಟಾಗ, ನೂರಕ್ಕೆ ನೂರು ಕೆಲಸ ಮಾಡಲಾಗುತ್ತಿಲ್ಲ, ಹಾಗಾಗಿ ನನ್ನನ್ನು ಕೆಲಸದಿಂದ ಬಿಡುಗಡೆ ಮಾಡಿ ಅಂತ ಕೇಳಿಕೊಂಡು ರಾಜೀನಾಮೆ ಪತ್ರ ಬರೆದಿದ್ದರಂತೆ. ಇಷ್ಟು ಪ್ರಾಮಾಣಿಕರ ರಾಜೀನಾಮೆ ಪಾತ್ರವನ್ನು ಮೊಹರೆ ಹನುಮಂತ ರಾಯರು ಒಪ್ಪಿಯಾರೇ ? "ನೀವು ಮನೆಯಲ್ಲೇ ಕುಳಿತು ಕೆಲಸ ಮಾಡಿ" ಅಂತಂದು ಅವರದನ್ನು ಕಸದ ಬುಟ್ಟಿಗೆ ಎಸೆದರಂತೆ. ಪಾವೆಂ ಬರೆದದ್ದರಲ್ಲಿ ಕಸದ ಬುಟ್ಟಿ ಸೇರಲು ಯೋಗ್ಯವಾದದ್ದು ಈ ರಾಜೀನಾಮೆಯ ಪತ್ರವೊಂದೇ ಇರಬಹುದೇನೋ ! ಹೀಗೆ ಆ ಕಾಲದಲ್ಲೇ ವರ್ಕ್ ಫ್ರಮ್ ಹೋಮ್ ಅನ್ನೂ ಪಾವೆಂ ಮಾಡಿದರು !
ಆಚಾರ್ಯರು ಎಷ್ಟೋ ಸಲ ಕಸ್ತೂರಿಯ ಪುಟಗಳನ್ನು ತಾವೇ ಹಲವು ಹೆಸರುಗಳಲ್ಲಿ ಬರೆದು ತುಂಬಿಸುತ್ತಿದ್ದದ್ದಿತ್ತು. ಅವರು ಒಟ್ಟು ಎಷ್ಟು ಬರೆದಿದ್ದಾರೆ, ಎಷ್ಟು ಗುಪ್ತನಾಮಗಳಲ್ಲಿ ಬರೆದಿದ್ದಾರೆ, ಯಾವೆಲ್ಲ ಪತ್ರಿಕೆಗಳಿಗೆ ಬರೆದಿದ್ದಾರೆ ಅಂತ ಲೆಕ್ಕವಿಟ್ಟವರಿಲ್ಲ. ಹೀಗಿದ್ದ ಆಚಾರ್ಯರ ಎಲ್ಲ ಬರೆಹಗಳನ್ನೂ ಹುಡುಕಿ ತೆಗೆಯುವುದು ಕಷ್ಟಸಾಧ್ಯ. ಅದಕ್ಕೆ ಬೇಕಾಗುವ ಓಡಾಟ, ಹುಡುಕಾಟ, ತಾಳ್ಮೆ ಅಪಾರ. ಆಚಾರ್ಯರ ಮೊಮ್ಮಗಳಾದ ಛಾಯಾ ಉಪಾಧ್ಯ, ಈ ನಿಟ್ಟಿನಲ್ಲಿ ಶ್ರಮ ವಹಿಸಿ ಅಜ್ಜನ ಬಹಳಷ್ಟು ಬರೆಹಗಳನ್ನು ಸಂಗ್ರಹಿಸಿ ಆನ್ಲೈನಿನಲ್ಲಿ ಹಾಕಿದ್ದಾರೆ. ಸಿಕ್ಕಿದ ಎಲ್ಲ ವಿವರಗಳನ್ನೂ ಕೃತಿಗಳನ್ನೂ ಸೇರಿಸಿ ಸೈಟ್ ಒಂದನ್ನು ಅವರ ಬಳಗದವರು ಮಾಡಿದ್ದಾರೆ. ಆಚಾರ್ಯರ ಬಹಳಷ್ಟು ಕೃತಿಗಳು ಇಲ್ಲಿ ಸಿಗುತ್ತವೆ , ಓದಿ ಆನಂದಿಸಿ,

ಪಾವೆಂ ಬಗ್ಗೆ ರವಿ ಬೆಳಗೆರೆ 1996ರಲ್ಲಿ ಬರೆದಿದ್ದ ಸಾಲುಗಳನ್ನು ಕೆಳಗೆ ಹಾಕಿದ್ದೇನೆ:




No comments:

Post a Comment