Saturday 19 December 2020

ಅಣಕವಾಡುಗಳು

 ಸುಮ್ಮನೆ ಏನನ್ನೋ ನೋಡುತ್ತಿದ್ದಾಗ ಸಿಕ್ಕಿದ ನಾಲ್ಕೈದು ಅಣಕವಾಡು(parody)ಗಳು ಕಚಗುಳಿಯಿಟ್ಟವು, ನಿಮ್ಮ ಖುಷಿಗೆ ಅವನ್ನಿಲ್ಲಿ ಕೊಡುತ್ತಿದ್ದೇನೆ(ಶತಾವಧಾನಿ ಗಣೇಶ್ ಮತ್ತವರ ಬಳಗದವರು ನಡೆಸುತ್ತಿರುವ ಪದ್ಯಪಾನ ಸೈಟಿನಿಂದ ಹೆಕ್ಕಿದ್ದು). ಅಣಕಗಳು ಮೂಲಪದ್ಯದ ಪದಪ್ರಯೋಗ,ಛಂದಸ್ಸು, ಗತಿಗಳನ್ನು ಅನುಕರಣೆ ಮಾಡುವುದರಿಂದ ಅವನ್ನು ಹಾಡಿದರೆ ರಸಾಸ್ವಾದ ಹೆಚ್ಚು. ಹೇಗೂ ಅಣಕಿಸುವುದಾದರೆ ಮಹಾಕವಿ ಕುಮಾರವ್ಯಾಸನನ್ನೇ ಅಣಕಿಸಿದರೆ ಮಜಾ ಅಲ್ಲವೇ ? ಆ ಕವಿ ತನ್ನ ಕಾವ್ಯದ ಬಗ್ಗೆ ಬರೆದುಕೊಂಡ ಸಾಲುಗಳಿವು:

ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋಗೀ-
ಶ್ವರರ ತತ್ತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ-
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ
ಈ ಸಾಲುಗಳು ನಮ್ಮ ಗಾಂಧಿನಗರದ ಮಾಸ್ ಚಿತ್ರಗಳ ನಿರ್ಮಾಪಕರು ಆಗಾಗ ಹೇಳುವುದನ್ನು ಹೇಗೆ ಹೋಲುತ್ತವೆ ಅಂತ ಒಂದು ತಲೆಹರಟೆಯ ಕಲ್ಪನೆಯನ್ನು ನಾನು ಹಿಂದೊಮ್ಮೆ ಮಾಡಿದ್ದೆ:
ಅರಸುಗಳಿಗಿದು ವೀರ - ಇಲ್ಲಿ ನಂ ಹೀರೋದು ಒಂದು ಸಕ್ಕತ್ ಫೈಟ್ ಬರುತ್ತೆ.
ದ್ವಿಜರಿಗೆ ಪರಮ ವೇದದ ಸಾರ - ನಮ್ಮ ಯೋಗರಾಜ ಭಟ್ರು ಬರೆದಿರೋ ಓತ್ಲಾ ವೇದಾಂತ ಸಾಂಗು ಬರುತ್ತೆ , ಹರಿಕೃಷ್ಣ ಮತ್ತೆ ಟಿಪ್ಪು ಹಾಡ್ತಾರೆ
ಯೋಗೀಶ್ವರರ ತತ್ತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ - ಫ್ಯಾಮಿಲಿಗೆ ಒಂದೊಳ್ಳೆ ಮೆಸೇಜ್ ಕೊಟ್ಟಿದೀವಿ !
ವಿರಹಿಗಳ ಶೃಂಗಾರ - ಇಲ್ಲಿ ಕಾಯ್ಕಿಣಿ ಸರ್ ದು ಪ್ಯಾಥೋ ಸಾಂಗ್ ಬರುತ್ತೆ ಸೋನು ನಿಗಂ ವಾಯ್ಸಲ್ಲಿ !
ಅದು ಹಾಗಿರಲಿ, ಈಗ ಈ ಪದ್ಯದ ವಿಡಂಬನ ಮಾಡಿ ಬರೆದಿರುವ ಪದ್ಯಗಳನ್ನು ನೋಡೋಣ.
ಮೊದಲಿಗೆ ನೀಲಕಂಠ ಅವರ ರಚನೆ :
ಅರಸುಗಳಿಗಿದು ನೀರ, ದ್ವಿಜರಿಗೆ
ಪರಮಭೋಜನಸಾರ, ಭೋಗೀ-
ಶ್ವರರ ವಿತ್ತವಿಚಾರ (ಪಿತ್ಥವಿಕಾರ), ಮಂತ್ರಿಜನಕ್ಕೆ ನರಿಯ ಗುಣ
ವಿರಹಿಗಳು ಬೇರೊಬ್ಬರನರಸೆ
ಪರಿಣತಿಯ ಬೋಧವಿದು, ಕಾವ್ಯಕೆ
ಗುರುತದುಂಟೇ ನೀಲಕಂಠನೆ ರಚಿಸೆ ಭಾರತವ
ಅವರದ್ದೇ ಇನ್ನೊಂದು ಪದ್ಯ:
ನೆರೆಯ ಮನೆಗಿವ ದೂರ, ನಿತ್ಯದ
ತರಲೆ ತಂಟೆಗೆ ಶೂರ, ಮಾತಿನೊ-
ಳರೆದ ಮೆಣಸಿನ ಖಾರ, ಕಂತ್ರಿಜನಕ್ಕೆ ಮಂತ್ರಿಯಿವ
ಸಿರಿಯು ಕಾಲ್ಕೆಳಗಾಡುತಿದ್ದರು
ಕರೆದು ಕೊಟ್ಟವನಲ್ಲ ಕೇಳ್ವರ,
ಹೊರುವ ಜನರಿಗೆ ಭಾರ ಕೊನೆಗೀತನ ಕಳೇಬರವು
ಸೋಮ ಅವರ ಪದ್ಯವನ್ನೂ ಓದಿಬಿಡಿ:
ಅರಸರನೆ ಬಿಡ ಪೋರ, ದ್ವಿಜರೆನೆ
ಕೊರಮಗಾಗದಪಾರ ಕೂಗೇ-
ನರರೆ, ತತ್ವವಿಚಾರ ಕಂತ್ರಿಜನಕ್ಕೆ ಬುದ್ಧಿಗುಣ
ಗುರುಹಿರಿಯರಿಂ ದೂರವಿದ್ಯಾ-
ಪರಿಣತರಲಂಕಾರ ಕೀಳ್ಮೆಗೆ-
ಗುರುವೆ ಕನಯಕುಮಾರ ಜೇಎನ್ಯು ಪೀಡೆ ಭಾರತಕೆ
ಕಾಂಚನಾ ಅವರಿಗೆ ಹೊಳೆದ ಸಾಲುಗಳು:
ಅರಸುಗಳಿಗಿದು ಸೇರ,ದ್ವಿಜರಿಗೆ
ಪರಮ ಮೋದದ”ಸಾರ”ಯೋಗೀ
ಶ್ವರರ ಪಥ್ಯಕೆ ಬಾರ,ಮಂತ್ರಿಜಗ ಕ್ಕೆ ವರ್ಜ್ಯ ಕಣಾ!
ಸುರಿಯಲಿದು ಬಂಗಾರ,ಪಾಕದ
ಪರಿಣತಿಗಲಂಕಾರ,ಭೋಜ್ಯಕೆ
ಗುರುವೆನುತೆ ಕುದಿಸಿದ ಕುಮಾರ ಭಟ್ಟ ,ಬೇಳೆಯನು!!
ಸೋಮ ಅವರ ಮತ್ತೊಂದು ರಚನೆಯನ್ನೋದಿ ಮುಗಿಸೋಣ :
ಚರಿತೆಯೊಳಗಿವ ಜಾರ, ವನಿತೆಯ-
ನರಸೆ ಜೀವನಸಾರ, ಭೋಗೀ-
ಶ್ವರರ ತತ್ತ್ವಕೆ ಧೀರ, ಮಂತ್ರಿಗಣಕ್ಕುಮೇರ್ದ ಕಣ
ಸುರರವೊಲೆ ಶೃಂಗಾರ, ಮದ್ಯದ-
ಪರಿಣತರಲಂಕಾರ, ಬ್ಯಾಂಕಿಗೆ
ಗರಗಸಮೆನಲು ಮಲ್ಯ ಮೆರೆಯುತೆ ತೊರೆದ ಭಾರತವ

No comments:

Post a Comment