Saturday 19 December 2020

ಮಂಜೇಶ್ವರ ಗೋವಿಂದ ಪೈ ಎಂಬ ಅದ್ಭುತ

 ಕನ್ನಡದಲ್ಲಿ ಅಸಾಧಾರಣ ಕೆಲಸ ಮಾಡಿದ ವಿದ್ವನ್ಮಣಿಗಳಿಗೆ ಮೆಚ್ಚಿಕೆ ಸಲ್ಲಿಸಿ ಅವರ ಪರಿಚಯವನ್ನು ಫೇಸ್ಬುಕ್ಕಿಗರಿಗೆ ಮಾಡಿಸುವ ಪ್ರಯತ್ನ.

ಪಂಡಿತರನ್ನು ಅಂಕಿಅಂಶಗಳಲ್ಲಿ ಅಳೆಯುವುದು ಆಫೀಸಿನ ಕೆಲಸವನ್ನು ಗಂಟೆಗಳಲ್ಲಿ ಅಳೆದಂತೆ ಬರೀ ತೋರಿಕೆಯ ಮಾತಾದೀತು. ಆದರೆ ಮಂಜೇಶ್ವರ ಗೋವಿಂದ ಪೈಗಳ ವಿಷಯ ಹಾಗಲ್ಲ. ಬ್ರಾಡ್ಮನ್ನನ ಸರಾಸರಿಯನ್ನು ನೋಡಿ ಬೆರಗಾಗುವಂತೆ ಆಗಬೇಕಾದರೆ ಇದನ್ನು ನೋಡಿ: ಗೋವಿಂದ ಪೈಗಳ ಗ್ರಂಥಸಂಗ್ರಹದಲ್ಲಿ ಸುಮಾರು 4750 ಪುಸ್ತಕಗಳು ಸಿಕ್ಕಿವೆ. ಅದರಲ್ಲೇನಿದೆ ಎನ್ನುವವರಿದ್ದರೆ, ಇನ್ನೊಂದು ವಿವರವನ್ನೂ ಹೇಳಿ ಬಿಡುತ್ತೇನೆ, ಸಿಕ್ಕಿದ ಸಂಗ್ರಹದಲ್ಲಿ 35 ಭಾಷೆಗಳ ಪುಸ್ತಕಗಳಿವೆ! ಇವುಗಳಲ್ಲಿ 22 ಭಾಷೆಗಳು ಪೈಗಳಿಗೆ ಗೊತ್ತಿದ್ದವು ! ಸಂಸ್ಕೃತ,ತುಳು, ಪ್ರಾಕೃತ, ಪಾಲಿ, ಬಂಗಾಲಿ, ಉರ್ದು,ಮರಾಠಿ, ಜರ್ಮನ್, ಜಪಾನಿಯಿಂದ ಮುಂತಾದ ಭಾಷೆಗಳಿಂದ ಅವರು ಭಾಷಾಂತರ ಮಾಡಿಯೂ ಇದ್ದಾರೆ.
ಈಜಿಪ್ಟಿನಲ್ಲಿ ಸಿಕ್ಕಿದ Oxyrhynchus Papyri ಎಂಬ ಪುರಾತನ ಕಾಗದಗಳ ಕಟ್ಟೊಂದರಲ್ಲಿರುವ, ಎರಡೂ ಕಾಲು ಸಾವಿರ ವರ್ಷ ಹಳೆಯ ಗ್ರೀಕ್ ನಾಟಕವೊಂದರಲ್ಲಿ ಕೆಲವು ಕನ್ನಡದ ಪದಗಳಿವೆ ಅಂತ, ಮೂಲ papyrusನಲ್ಲಿದ್ದ ನಾಟಕವನ್ನು ಗ್ರೀಕ್ ಭಾಷೆಯಲ್ಲಿಯೇ ಓದಿ ಪೈಗಳು ಹೇಳಿಯೂ ಇದ್ದಾರೆ ! ಹಿರಿಯಡಕ ಮುರಳೀಧರ ಉಪಾಧ್ಯರು ಭಾಷಣವೊಂದರಲ್ಲಿ ಹೇಳಿದಂತೆ, "ಬ್ರಿಟಿಷರ ಭಾರತದಲ್ಲಿ ತಮ್ಮ ಜೀವನದ 64 ವರ್ಷಗಳನ್ನು ಕಳೆದ ಪೈಗಳು ಜಗತ್ತಿನ ಜ್ಞಾನನಿಧಿ ಇಂಗ್ಲಿಷಿನಲ್ಲಿ ಮಾತ್ರ ಇದೆ ಎಂಬುದನ್ನು ಒಪ್ಪಲಿಲ್ಲ ಎಂಬುದು ಮಹತ್ವದ ಸಂಗತಿ. ಸಂಸ್ಕೃತ, ಪಾಲಿ, ಪ್ರಾಕೃತ, ಪರ್ಷಿಯನ್,ಜಪಾನಿ, ಚೀನೀ ಇಂಥ ಭಾಷೆಗಳಲ್ಲಿ ಜ್ಞಾನದ ಕೊಪ್ಪರಿಗೆಗಳಿವೆ ಎಂಬುದು ಅವರಿಗೆ ಗೊತ್ತಿತ್ತು"
ಇನ್ನೊಬ್ಬ ಮಹಾಪಂಡಿತರಾದ ಸೇಡಿಯಾಪು ಕೃಷ್ಣ ಭಟ್ಟರು ಪೈಗಳ ಕೆಲಸದ ಬಗ್ಗೆ ಹೇಳಿರುವ ಮಾತುಗಳು most appropriate ಎಂಬಂತಿವೆ: "ಅವರು ನೂರಾರು ಗ್ರಂಥಗಳನ್ನು ಓದಿ ಸಾರಗ್ರಹಣ ಮಾಡಿ ಬರೆದ ಲೇಖನಗಳು ಇತರ ಎಷ್ಟೋ ಮಂದಿ ಸಂಶೋಧಕರೆಂಬವರ ಜ್ಞಾನಸಂಪತ್ತಿನ ಪೇಟಿಕೆಗಳಾಗಿವೆ. ಹೀಗೆ ಅವರು ಸಂಗ್ರಹಿಸಿದ ಜ್ಞಾನಸಂಪತ್ತು ಒಂದುದೃಷ್ಟಿಯಿಂದ ನೋಡಿದರೆ ಅವರ ಲೇಖನಗಳಿಂದ ಕನ್ನಡಕ್ಕೆ ಎಷ್ಟು ಪ್ರಯೋಜನವಾಗಿದೆಯೋ ಅದಕ್ಕಿಂತ ಎಷ್ಟೋ ಮಿಗಿಲೆಂಬುದರಲ್ಲಿ ಸಂದೇಹವಿರಲಾರದು. ಹೀಗೆ ಸಂಶೋಧನಕ್ಕೆ ಬೇಕಾದ ಮೂಲದ್ರವ್ಯಗಳನ್ನು ಏಕಾಂಗವೀರತೆಯಿಂದ ಸಂಗ್ರಹಿಸಿ ಅವರು ಮಾಡಿದ ಅದ್ಭುತಕಾರ್ಯವನ್ನು ಕಾಡಿನಲ್ಲಿ ಒಂಟಿಯಾಗಿ ಕುಳಿತು ತಪಸ್ಸು ಮಾಡಿ ಸಿದ್ಧಿಯನ್ನು ಪಡೆಯುತ್ತಿದ್ದ ಪುರಾಣಮುನಿಗಳ ಪ್ರಯತ್ನಕ್ಕೆ ಹೋಲಿಸಬಹುದು. ಅವರ ನಿಗಮನಗಳಲ್ಲಿ ಹಲವು ನನಗೆ ಒಪ್ಪಿಗೆಯಾಗದಿದ್ದರೂ ಅವರ ಇಂತಹ ಸಂಗ್ರಹಗಳಿಂದ ಅಷ್ಟಿಷ್ಟು ಪ್ರಯೋಜನವನ್ನು ಪ್ರಸಾದರೂಪವಾಗಿ ಪಡೆದ ಕಿರಿಯರೊಳಗೆ ನಾನೂ ಒಬ್ಬನು ಎಂದು ಕೃತಜ್ಞತಾಪೂರ್ವಕವಾಗಿ ನಿವೇದಿಸುತ್ತಿದ್ದೇನೆ", ಸೇಡಿಯಾಪು ಅವರು ಅಳೆದು ತೂಗಿ, ಒಂದಕ್ಷರವೂ ಬದಲಿಸಲಾಗದಂತೆ ಕೊಟ್ಟಿರುವ ಈ ಪ್ರಶಂಸೆಯ ಸರ್ಟಿಫಿಕೇಟು ಎಲ್ಲವನ್ನೂ ಹೇಳುತ್ತದೆ. ಪೈಗಳ ಸಮಗ್ರ ಸಂಶೋಧನ ಸಂಪುಟವನ್ನು (ಓದಿ?)ನೋಡಿ, ಲಂಕೇಶರು, "ಇದನ್ನೋದಿ ಅರ್ಥ ಮಾಡಿಕೊಳ್ಳಲು ನನ್ನ ಒಂದು ಜೀವಮಾನ ಸಾಲದು" ಅಂತ ಬರೆದಿದ್ದರಂತೆ!
ಸನಾತನಧರ್ಮದಲ್ಲಿ ಅಚಲವಾದ ಶ್ರದ್ಧೆಯಿದ್ದ ಪೈಗಳು ಹೀಬ್ರೂ ಭಾಷೆಯಲ್ಲಿ ಬೈಬಲ್ಲನ್ನು ಓದಿ ಏಸುಕ್ರಿಸ್ತನ ಕೊನೆಯ ದಿನಗಳ ಬಗ್ಗೆ "ಗೋಲ್ಗೋಥಾ" ಎಂದೂ, ಪಾಳಿ ಭಾಷೆಯಲ್ಲಿ ಬುದ್ಧನ ಬಗ್ಗೆ ಓದಿ,ಅವನ ಬಗ್ಗೆ "ವೈಶಾಖಿ" ಎಂದೂ ಖಂಡಕಾವ್ಯಗಳನ್ನು ಕಟ್ಟಿದ್ದಾರೆ. ಪೈಗಳ ಬಗ್ಗೆ ಬೇಂದ್ರೆಯವರು ಬರೆದಿರುವ ಚಂದದ ಕವಿತೆಯಿಂದ ಕೆಲವು ಸಾಲುಗಳು :
ಕಲ್ಲು-ಕಾಗದ-ಕಡತಗಳಲಿ ಕಾಲನ ಕಾಲು/ಸಿಕ್ಕು ತೊಳಲಾಡುವಲ್ಲಿ ಕುಣಿಕೆ ಬಿಡಿಸಿದಿರಣ್ಣ ! ...... ನಿಮಗೆ ನೀವೇ ಪೂರ್ವಪಕ್ಷ,ಅಕ್ಷರ-ರಮ್ಯ. (ಕನ್ನಡ ಎಷ್ಟು ಹಳತು,ಕುಮಾರವ್ಯಾಸ, ರಾಘವಾಂಕನ ಕಾಲನಿರ್ಣಯ ಹೇಗೆ, ರನ್ನನು ಗದಾಯುದ್ಧವನ್ನು ಬರೆದುದೆಂದು? ಹೀಗೆ ಎಷ್ಟೋ ವಿಷಯಗಳ ಕಾಲನಿರ್ಣಯ ಮಾಡಿದ್ದರ ಸೂಚನೆ ಮೊದಲ ಸಾಲಿನಲ್ಲಿದೆ. ಒಂದು ವಿಷಯದ ಬಗ್ಗೆ ಚರ್ಚೆಯಾಗುವಾಗ, ಮೊದಲು ಹೂಡಿದ ವಾದವನ್ನು ಪೂರ್ವಪಕ್ಷ ಎನ್ನುತ್ತಾರೆ, ಡಿಬೇಟಿನಲ್ಲಿ ಒಂದು motion ಇರುತ್ತದೆ, ಅನಂತರ against ದಿ motion ವಾದವೂ ಇರುತ್ತದೆ. ಪೈಗಳದ್ದು ಅವರಿಗೆ ಅವರೇ ಪೂರ್ವಪಕ್ಷ, ಅವರಿಗೆ ಅವರೇ for the motion ಮತ್ತು against the motion ಹೇಳಬೇಕು ಎಂಬ ಚಮತ್ಕಾರದ ಕಲ್ಪನೆ ಬೇಂದ್ರೆಯವರದ್ದು)

No comments:

Post a Comment