Wednesday 7 August 2019

ಓದಲೇಬೇಕಾದ ಸಣ್ಣಕಥೆಗಳು

ಕನ್ನಡದ ಟಾಪ್ 100 ಕಥೆಗಳ ಅಥವಾ ಕಥೆಗಾರರ ಪಟ್ಟಿ ಮಾಡಬಹುದೇ ಅಂತೊಮ್ಮೆ ಯೋಚಿಸಿದ್ದೆ. ಇಂಥದ್ದನ್ನು ಮಾಡಹೊರಟಾಗ, "ನಿಮ್ಮ ಮಾನದಂಡಗಳೇನು", "ಓ ಇಂಥವರ ಕಥೆಗಳು ಯಾಕಿಲ್ಲ?", "ಓ ಇವರ ಕಥೆಗಳು ಯಾಕಿವೆ?!!", "ಶ್ರೀಯುತರು ಕ್ರಿಸ್ತಪೂರ್ವ ಮುನ್ನೂರ ಅರುವತ್ತೆಂಟನೇ ಇಸವಿಯಲ್ಲಿ ಪ್ರಕಟಿಸಿದ ಕಥೆಯೊಂದನ್ನು ಮರೆತೇ ಬಿಟ್ಟಿದ್ದೀರಿ!!" ಎಂದು ಮುಂತಾಗಿ ಹೇಳುವವರು ಯಾರಾದರೂ ಇದ್ದೇ ಇರುತ್ತಾರಲ್ಲ ! ಆದರೇನಂತೆ ! ಸಾಫ್ಟ್ವೇರ್ ಎಂಜಿನಿಯರುಗಳಿಗೆ ಇಂಥದನ್ನೆಲ್ಲ ನಿಭಾಯಿಸುವ ಚಾಲಾಕಿ ಇರುವುದಿಲ್ಲವೇ?! ಇಂಥದ್ದರಿಂದ ಪಾರಾಗಲಿಕ್ಕೂ ಒಂದು ಉಪಾಯ ಹುಡುಕಿದೆ. ಈಗಾಗಲೇ ದೊಡ್ಡವರು,ಅಧ್ಯಯನಶೀಲರು ಮಾಡಿಕೊಟ್ಟಿರುವ ಒಂದಷ್ಟು ಕಥಾಸಂಕಲನಗಳಿಂದ ಕಥೆಗಳನ್ನು ಆಯ್ದರಾಯಿತಲ್ಲ.  

ಹೀಗಾಗಿ, ಶೇಕಡಾ ತೊಂಬತ್ತರಷ್ಟು ಕಥೆಗಳನ್ನು ಈ ಕೆಳಗಿನ ಕಥಾಸಂಕಲನಗಳಿಂದ ಹೆಕ್ಕಿಕೊಂಡಿದ್ದೇನೆ. ಒಂದಷ್ಟನ್ನು ನಾನು ಸೇರಿಸಿದ್ದೇನೆ. ಆಸಕ್ತರು ಓದಲೇಬೇಕಾದ ಸಣ್ಣಕಥೆಗಳು ಯಾವುವು, ಓದಬೇಕಾದ ಕಥೆಗಾರರು ಯಾರು ಎಂದು ತಿಳಿಸುವ ಪ್ರಯತ್ನವಿದು. ಹಲವು ಹೊಸಬರ,ಹಳಬರ ಹೆಸರುಗಳು ಈ ಪಟ್ಟಿಗೆ ಸೇರಬೇಕು, ಸೇರಲಿವೆ, ನೀವೂ ಸೇರಿಸಬಹುದು(ಎಲ್ಲ ನಾನೇ ಮಾಡಿದರೆ ನಿಮಗೇನು ಕೆಲಸ?).ಪಟ್ಟಿಯಲ್ಲಿರುವ ಕಥೆಗಾರರ ಎಷ್ಟೋ ಒಳ್ಳೆಯ ಕಥೆಗಳೂ ಪಟ್ಟಿಯಲ್ಲಿಲ್ಲ. ಆದರೂ ಟಾಪ್ 100 ಕಥೆಗಳ ಪಟ್ಟಿ ಹೋಗಿ ಸುಮಾರು 225 ಮುಖ್ಯ ಕಥೆಗಾರರ ಹಂತಿಯಾಗಿದೆ.    
   
ನಾನು ನೋಡಿರುವ ಕೆಲವು ಪ್ರಮುಖ ಸಂಕಲನಗಳು:
ಓಬೀರಾಯನ ಕಾಲದ ಕತೆಗಳು - ಸಂಪಾದಕ: ಬಿ. ಜನಾರ್ದನ ಭಟ್ (ಕೃಪೆ - ಕೆಂಡಸಂಪಿಗೆ ವೆಬ್ ಸೈಟ್)
ಮರೆಯಬಾರದ ಹಳೆಯ ಕಥೆಗಳು - ಸಂಪಾದಕ: ಗಿರಡ್ಡಿ ಗೋವಿಂದರಾಜು 
ನವಿಲುಗರಿ - ಸಂಪಾದಕರು: ಬೆಟಗೇರಿ ಕೃಷ್ಣ ಶರ್ಮ ಮತ್ತು ಜಿ.ಬಿ. ಜೋಶಿ   
ಅತ್ಯುತ್ತಮ ಸಣ್ಣ ಕಥೆಗಳು (ಮೂರನೆಯ ಸಂಪುಟ) - ಸಂಪಾದಕ: ಕೆ. ನರಸಿಂಹಮೂರ್ತಿ
ಕನ್ನಡ ಸಣ್ಣ ಕಥೆಗಳು - ಸಂಪಾದಕ: ಎಲ್.ಎಸ್. ಶೇಷಗಿರಿ ರಾವ್
ಕನ್ನಡ ಸಣ್ಣ ಕತೆಗಳು - ಸಂಪಾದಕ: ಜಿ ಎಚ್ ನಾಯಕ  
ಹೊನ್ನಕಣಜ - ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಸಣ್ಣಕಥೆಗಳ ಸಂಕಲನ
ಸಮಕಾಲೀನ ಕನ್ನಡ ಸಣ್ಣ ಕಥೆಗಳು - ಸಂಪಾದಕ: ರಾಮಚಂದ್ರ ಶರ್ಮ 
ಬಂಡಾಯದ ಕತೆಗಳು - ಸಂಪಾದಕರು : ಚಂದ್ರಶೇಖರ ಆಲೂರು ಮತ್ತು ರಂಜಾನ್ ದರ್ಗಾ 
ಶತಮಾನದ ಸಣ್ಣ ಕತೆಗಳು - ಸಂಪಾದಕರು: ಎಸ್. ದಿವಾಕರ್    
ಪ್ರಿಸಂ ಬುಕ್ ಹೌಸ್ ಪ್ರಕಟಿಸಿದ ವೈಜ್ಞಾನಿಕ ಕತೆಗಳು - ಸಂಪಾದಕಿ: ಸುಭಾಷಿಣಿ 
ಕಥೆಗಾರರು ಮತ್ತು ಕಥೆಗಳ ಪಟ್ಟಿ ನೋಡಿ, ಇಷ್ಟೊಂದು ಕಥೆಗಳಿವೆಯೇ ಅಂತ ತಲೆಬಿಸಿಯಾಗಬೇಕಾದರೆ ನೀವು ಈ ಪಟ್ಟಿಯನ್ನೇ ನೋಡಬೇಕು:  

ಕಥೆಗಾರರು ಮತ್ತು ಕಥೆಗಳು :

  1. ಪಂಜೆ ಮಂಗೇಶರಾಯ - ಕಮಲಪುರದ ಹೊಟ್ಲಿನಲ್ಲಿ, ನನ್ನ ಚಿಕ್ಕ ತಂದೆ, ಭಾರತ ಶ್ರವಣ, ನನ್ನ ಚಿಕ್ಕ ತಂದೆಯವರ ಉಯಿಲ್, ವೈದ್ಯರ ಒಗ್ಗರಣೆ, ನನ್ನ ಚಿಕ್ಕತಾಯಿ, ನನ್ನ ಹೆಂಡತಿ    
  2. ಬೇಕಲ ರಾಮನಾಯಕ - ದೊಡ್ಡಮನೆ ಈಶ್ವರಯ್ಯ, ಬಾಳಿದ ಹೆಸರು, ಉಳ್ಳಾಲದ ರಾಣಿ, ಕೂಡಲು ಸುಬ್ಬಯ್ಯ ಶಾನಭಾಗ,ತಿಮ್ಮನಾಯಕನ ಫಿತೂರಿ,ಕರಣಿಕ ದೇವಪ್ಪಯ್ಯ
  3. ಎ ಆರ್ ಕೃಷ್ಣಶಾಸ್ತ್ರಿ - ಗುರುಗಳ ಮಹಿಮೆ, ಬಂಗಲಿಯ ವಾಸ   
  4. ಕೆರೂರ ವಾಸುದೇವಾಚಾರ್ಯ - ಮಲ್ಲೇಶಿಯ ನಲ್ಲೆಯರು, ತೊಳೆದ ಮುತ್ತು 
  5. ಎಂ.ಎನ್.ಕಾಮತ್ - ಕದ್ದವರು ಯಾರು,ಬೊಗ್ಗು ಮಹಾಶಯ 
  6. ಎಸ್. ಜಿ. ಶಾಸ್ತ್ರಿ - ಹಬ್ಬದ ಉಡುಗೊರೆ, ಪರಪುರುಷ, ತುಂಟಮರಿ 
  7. ಕುಲಕರ್ಣಿ ಶ್ರೀನಿವಾಸ - ಹೊಸಬಾಯಿ 
  8. ಮಾಸ್ತಿ ವೆಂಕಟೇಶ ಐಯ್ಯಂಗಾರ್ -  ಮೊಸರಿನ ಮಂಗಮ್ಮ, ರಂಗಪ್ಪನ ದೀಪಾವಳಿ, ಜೋಗ್ಯೋರ ಅಂಜಪ್ಪನ ಕೋಳಿ ಕತೆ, ಪಂಡಿತನ ಮರಣಶಾಸನ, ಇಲ್ಲಿಯ ತೀರ್ಪು, ಇಂದಿರೆಯೋ ಅಲ್ಲವೋ?, ಬೀದಿಯಲ್ಲಿ ಹೋಗುವ ನಾರಿ, ನಮ್ಮ ಮೇಷ್ಟ್ರು,ವೆಂಕಟಿಗನ ಹೆಂಡತಿ, ರಂಗಸ್ವಾಮಿಯ ಅವಿವೇಕ
  9. ಆನಂದ - ನಾನು ಕೊಂದ ಹುಡುಗಿ
  10. ಕೊರಡ್ಕಲ್ ಶ್ರೀನಿವಾಸ ರಾವ್ - ಧನಿಯರ ಸತ್ಯನಾರಾಯಣ   
  11. ಸೇಡಿಯಾಪು ಕೃಷ್ಣ ಭಟ್ಟ - ನಾಗರಬೆತ್ತ
  12. ತುದಿಯಡ್ಕ ವಿಷ್ಣ್ವಯ್ಯ - ಶ್ಯಾನುಭಾಗ ಶ್ಯಾಮಣ್ಣನವರು, ದೊರೆಯ ಪರಾಜಯ
  13. ಬನ್ನಂಜೆ ರಾಮಾಚಾರ್ಯ - ರೋಬರ್ಟ್ಸ್ ದೊರೆಯ ದಿನಚರಿಯಿಂದ
  14. ಸಿರಿಬಾಗಿಲು ವೆಂಕಪ್ಪಯ್ಯ - ಗುಲ್ಲು ಬಂತೋ ಗುಲ್ಲು
  15. ಸಾಂತ್ಯಾರು ವೆಂಕಟರಾಜ - ಬರ್ಸಲೋರ್ ಬಾಬ್ರಾಯ 
  16. ಎಂ.ವಿ ಹೆಗಡೆ - ದೊರ್ಸಾನಿ
  17. ಗಣಪತಿ ಮೊಳೆಯಾರ - ಸಿಡಿಲು ಮರಿ
  18. ಹುರುಳಿ ಭೀಮರಾವ್ - ಮಾರಯ್ಯನ ಕವಾತು, ಮುರುಕು ದಂಬೂಕು
  19. ಎ. ಆರ್. ಶಗ್ರಿತ್ತಾಯ - ಕಲ್ಯಾಣಪ್ಪನ ಕಾಟುಕಾಯಿ
  20. ಪೇಜಾವರ ಸದಾಶಿವರಾವ್ - ಬಿರುಸು
  21. ಯಂ. ಆರ್. ಶಾಸ್ತ್ರಿ - ರಂಗಪ್ಪನ ಪಠೇಲಿಕೆ
  22. ಕಡಂಗೋಡ್ಲು ಶಂಕರಭಟ್ಟ - ಅದ್ದಿಟ್ಟು , ಚೂರಿ, ಹೊಡೆಯುವ ಗಡಿಯಾರ 
  23. ಕೃಷ್ಣಕುಮಾರ ಕಲ್ಲೂರ - ಗುಬ್ಬಿಗಳ ಸಂಸಾರ, ಜೀವನ 
  24. ಪಡುಕೋಣೆ ರಮಾನಂದರಾಯ - ಬಾಳ್ವೆಯ ಮಸಾಲೆ 
  25. ಯರ್ಮುಂಜ ರಾಮಚಂದ್ರ - ಎಂಕಪ್ಪುವಿನ ದ್ವೇಷಾಗ್ನಿ,ಚೆನ್ನಪ್ಪ ಒಡೆದ ಮೂರ್ತಿ 
  26. ಬಾಗಲೋಡಿ ದೇವರಾಯ - ಪವಾಡಪುರುಷ, ಹುಚ್ಚ ಮುನಸೀಫ, ಅವರವರ ಸುಖ ದುಃಖ,ಶುಕ್ರಾಚಾರ್ಯ  
  27. ಕುವೆಂಪು - ಯಾರೂ ಅರಿಯದ ವೀರ, ಮೀನಾಕ್ಷಿಯ ಮನೆ ಮೇಷ್ಟ್ರುಧನ್ವಂತರಿಯ ಚಿಕಿತ್ಸೆ  
  28. ದ.ರಾ. ಬೇಂದ್ರೆ - ಪಾಲಾ ಫೂ,ನಿರಾಭರಣ ಸುಂದರಿ, ಮಗುವಿನ ಕರೆ 
  29. ವಿಜಿ ಶ್ಯಾನಭಾಗ - ದೇವದಾಸಿ 
  30. ಶ್ರೀ ಸ್ವಾಮಿ - ಬೇಬಿ ನಾಚ್ಚಿಯಾರ್,  ಪುಷ್ಪಮಾಲೆ, ನಂಜಮ್ಮ, ಗೋಧೂಳೀ ಲಗ್ನ 
  31. ಕ್ಷೀರಸಾಗರ - ನಮ್ಮೂರಿನ ಪಶ್ಚಿಮಕ್ಕೆ 
  32. ಹ. ಪೀ. ಜೋಶಿ - ಕಿಚ್ಚಿನ ಕಾವಲು , ಅಪೂರ್ಣಾ  
  33. ನವರತ್ನ ರಾಮರಾಯ - ತಾವರೆಕೋಟೆ, ಲಕ್ಷ್ಮಣರಾಯರ ಭಾಗ್ಯ, ಹೆಣ್ಣು ಹೃದಯ  
  34. ಟೇಂಗ್ಸೆ ಗೋವಿಂದರಾಯ - ಗಂಗೆಯ ಗುತ್ತಿಗೆ, ಛಪ್ಪರಬಂದ್  
  35. ಹೊಯಿಸಳ - ಭಯ ನಿವಾರಣೆ 
  36. ಮೇವುಂಡಿ ಮಲ್ಲಾರಿ - ಸುರಸುಂದರಿ 
  37. ಟಿ. ಎಸ್. ಸಂಜೀವರಾವ್ - ಸೀದ ಒಗ್ಗರಣೆ   
  38. ರಂ.ಶ್ರೀ.ಮುಗಳಿ -  ವಿತಂತು ವೇಶ್ಯೆ
  39. ಗೊರೂರು ರಾಮಸ್ವಾಮಿ ಅಯ್ಯಂಗಾರ್ -  ಹಾರುವಯ್ಯ ಹಜಾಮನಾದದ್ದು, ಆಚಾರ ಕೆಟ್ಟರೂ ಆಕಾರ ಕೆಡಬಾರದು, ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು, ಬೂತಯ್ಯನ ಮಗ ಅಯ್ಯು, ಡೊಂಕು ಬಾಲ    
  40. ಭಾರತೀಪ್ರಿಯ - ಒಂದು ಹಳೆಯ ಕತೆ, ಮೋಚಿ,ವೀಣೆ
  41. ಕೆ ಗೋಪಾಲಕೃಷ್ಣ ರಾವ್ - ಡಾಕ್ಟರ್ ಸುಶೀಲಾ ಸಂಕೇತ್ 
  42. ಎಂ. ವಿ. ಸೀತಾರಾಮಯ್ಯ - ಕರುಣೆ, ಹುಟ್ಟಿನ ಹಂಬಲು
  43. ಜಡಭರತ - ಡೂಗಜ್ಜನ ಬಹಿಷ್ಕಾರ
  44. ಕೊಡಗಿನ ಗೌರಮ್ಮ - ವಾಣಿಯ ಸಮಸ್ಯೆ, ಆಹುತಿ, ಅಪರಾಧಿ ಯಾರು  
  45. ಬಸವರಾಜ ಕಟ್ಟೀಮನಿ - ಅಜ್ಞಾತವಾಸಿ, ಗಿರಿಜಾ ಕಂಡ ಸಿನಿಮಾ, ಬೂಟ್ ಪಾಲಿಷ್, ರಕ್ತಧ್ವಜ, ನೀಲಗಂಗಾ ನಾಗರಪಂಚಮಿಗೆ ಬಂದದ್ದು , ಜೀವನ ಕಲೆ  
  46. ಪೂರ್ಣಚಂದ್ರ ತೇಜಸ್ವಿ- ಅಬಚೂರಿನ ಪೋಸ್ಟಾಫೀಸು, ಲಿಂಗ ಬಂದ, ಕಿರಗೂರಿನ ಗಯ್ಯಾಳಿಗಳು, ಅವನತಿ, ಮಾಯಾಮೃಗ 
  47. ಯಶವಂತ ಚಿತ್ತಾಲ - ಅಬೋಲಿನ, ಕತೆಯಾದಳು ಹುಡುಗಿ, ಸೆರೆ, ಕತೆಯಲ್ಲಿ ಬಂದಾತ ಮನೆಗೂ ಬಂದು ಕದತಟ್ಟಿದ,ಮುಖಾಮುಖಿ
  48. ಯು.ಆರ್. ಅನಂತಮೂರ್ತಿ - ಕ್ಲಿಪ್ ಜಾಯಿಂಟ್,ಸೂರ್ಯನ ಕುದುರೆ,ನವಿಲುಗಳು
  49. ಪಿ. ಲಂಕೇಶ್ - ಉಮಾಪತಿಯ ಸ್ಕಾಲರ್’ಶಿಪ್ ಯಾತ್ರೆ, ಮುಟ್ಟಿಸಿಕೊಂಡವನು,ಸಹಪಾಠಿ, ಕಲ್ಲು ಕರಗುವ ಸಮಯ,ರೊಟ್ಟಿ, ನಿವೃತ್ತರು, ನಾನಲ್ಲ  
  50. ದೇವನೂರು ಮಹಾದೇವ - ಡಾಂಬರು ಬಂದುದು,ಮಾರಿಕೊಂಡವರು, ಅಮಾಸ
  51. ರಾಘವೇಂದ್ರ ಖಾಸನೀಸ - ತಬ್ಬಲಿಗಳು, ಅಶ್ವಾರೋಹಿ
  52. ಶಾಂತಿನಾಥ ದೇಸಾಯಿ - ಕ್ಷಿತಿಜ, ರಾಕ್ಷಸ,ದಿಗ್ಭ್ರಮೆ 
  53. ಜಿ ಎಸ್ ಸದಾಶಿವ - ಹ್ಯಾಂಗೋವರ್, ಮೀಸೆಯವರು  
  54. ಕೆ.ಸದಾಶಿವ - ನಲ್ಲಿಯಲ್ಲಿ ನೀರು ಬಂತು, ರಾಮನ ಸವಾರಿ ಸಂತೆಗೆ ಹೋದದ್ದು
  55. ಅ. ನ. ಕೃಷ್ಣರಾವ್ - ಮಣ್ಣಿನ ಮಗ 
  56. ತರಾಸು - 0-0 = 0, ಇನ್ನೊಂದು ಮುಖ, ಎಕ್ಸ್
  57. ಬೆಟಗೇರಿ ಕೃಷ್ಣಶರ್ಮ(ಆನಂದಕಂದ) - ಮಾತನಾಡುವ ಕಲ್ಲು,  ಮಾಲ್ಕೀ ಹಕ್ಕು, ನೀನು ಪುಟ್ಟನ ತಾಯಿ 
  58. ಜಯಂತ ಕಾಯ್ಕಿಣಿ- ಹಾಲಿನ ಮೀಸೆ, ಸುಗ್ಗಿ , ಅಮೃತಬಳ್ಳಿ ಕಷಾಯ,ಸೇವಂತಿ ಹೂವಿನ ಟ್ರಕ್ಕು,ಕನ್ನಡಿ ಇಲ್ಲದ ಊರಲ್ಲಿ, ಮಧ್ಯಂತರ, ಕಣ್ಣಿಗೊಂದು ಕ್ಷಿತಿಜ, ದಗಡೂ ಪರಬನ ಅಶ್ವಮೇಧ 
  59. ಜೋಗಿ - ಕುಮಾರ ದಿವಂಗತ, ಸುಬ್ಬಣ್ಣ, ಕನ್ನಡಿಯಲ್ಲಿ ಗಳಗನಾಥರಿರಲಿಲ್ಲ, ಗೋವಿಂದ ವಿಠ್ಠಲ .. ಹರಿಹರಿ ವಿಠ್ಠಲ .. ,ರಾಂಗ್ ನಂಬರ್ 
  60. ಬೆಸಗರಹಳ್ಳಿ ರಾಮಣ್ಣ - ಸುಗ್ಗಿ , ಕಕ್ಕರನ ಯುಗಾದಿ,ಗಾಂಧಿ, ನೆಲದ ಒಡಲು, ಗರ್ಜನೆ, ಹರಕೆಯ ಹಣ 
  61. ವ್ಯಾಸರಾಯ ಬಲ್ಲಾಳ - ಮುಸ್ಸಂಜೆ, ಭಾವಬಂಧನ,ಬಂಧ 
  62. ಆಲನಹಳ್ಳಿ ಶ್ರೀಕೃಷ್ಣ - ಗೀಜಗನ ಗೂಡು, ಫೀನಿಕ್ಸ್, ಗೋಡೆ, ಸಂಬಂಧ, ತೊರೆ ಬತ್ತಿರಲಿಲ್ಲ,ಆಗಂತುಕ  
  63. ಅಮರೇಶ ನುಗಡೋಣಿ - ತಮಂಧದ ಕೇಡು, ಹೊತ್ತು ಮೂಡುವ ಸಮಯ 
  64. ಭಾರತೀಸುತ - ಜೇನು ಕಹಿ 
  65. ವೈದೇಹಿ - ಅಕ್ಕು, ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು, ಒಂದು ಅಪರಾಧದ ತನಿಖೆ 
  66. ಟಿಜಿ ರಾಘವ - ಶ್ರಾದ್ಧ, ಜ್ವಾಲೆ ಆರಿತು,ಸಂಕರ 
  67. ಎಸ್ ಎನ್ ಸೇತುರಾಮ್ - ನಾವಲ್ಲ
  68. ವಸುಧೇಂದ್ರ - ಹುಲಿಗೆ ಕಾಡೇ ರಕ್ಷೆ, ಕಾಡಿಗೆ ಹುಲಿಯೇ ರಕ್ಷೆ, ನಮ್ಮ ವಾಜೀನೂ ಆಟಕ್ಕೆ ಸೇರಿಸ್ಕೊಳ್ರೋ, ಅಪಸ್ವರದಲ್ಲೊಂದು ಆರ್ತನಾದ, ಕೆಂಪುಗಿಣಿ
  69. ಅಶ್ವತ್ಥ - ಧರ್ಮಕೊಂಡದ ಕತೆ, ವ್ಯಭಿಚಾರ 
  70. ಚದುರಂಗ - ನಾಲ್ಕು ಮೊಳ ಭೂಮಿ, "ತುಚೀಪ್, ತುದಾಂಡ್, ತುಬದ್ - ರೆಡಿ", ಶವದ ಮನೆ , ನಾಲ್ಕು ಮನೆಯ ನಂದಾದೀಪ   
  71. ನಿರಂಜನ - ಕೊನೆಯ ಗಿರಾಕಿ
  72. ಎಸ್ ದಿವಾಕರ್ - ಇತಿಹಾಸ, ಕ್ರೌರ್ಯ
  73. ದೊಡ್ಡೇರಿ ವೆಂಕಟಗಿರಿ ರಾವ್ - ತುಂಬಿದ ಕೊಡ 
  74. ವಿವೇಕ ಶಾನಭಾಗ - ಹುಲಿಸವಾರಿ, ಗುರುತು,ಲಂಗರು, ನಮ್ಮ ಪಾಡಿಗೆ ನಾವು   
  75. ಕಾಳೇಗೌಡ ನಾಗವಾರ - ಅಲೆಗಳು, ಮಾಯೆ  
  76. ರಾಜಶೇಖರ ನೀರಮಾನ್ವಿ - ಹಂಗಿನರಮನೆಯ ಹೊರಗೆ 
  77. ಕೋ. ಚೆನ್ನಬಸಪ್ಪ - ಮುಕ್ಕಣ್ಣನ ಮುಕ್ತಿ, ನಮ್ಮೂರಿನ ದೀಪ,  ಆ ಕಥೆಯ ಹಿಂದೆ, ಉಂಗುರದ ಉರುಲು 
  78. ಕುಂ.ವೀ - ಕುಪ್ಪಸ, ಕಿವುಡ ನಾಯಿಯಾದ ಕತೆ, ರುದ್ರಪ್ಪನ ಖಡ್ಗ, ಎಲುಗನೆಂಬ ಕೊರಚನೂ ಚೌಡನೆಂಬ ಹಂದಿಯೂ, ದೇವರ ಹೆಣ
  79. ಬೊಳುವಾರು ಮಹಮ್ಮದ್ ಕುಂಞಿ - ಅಂಕ, ಒಂದು ತುಂಡು ಗೋಡೆ, ಕಪ್ಪು ಕಲ್ಲಿನ ಸೈತಾನ, ದೇವರುಗಳ ರಾಜ್ಯದಲ್ಲಿ   
  80. ಕೆಟಿ ಗಟ್ಟಿ - ಮೌಲ್ಯ, ಬಂಡೆ  
  81. ರವಿ ಬೆಳಗೆರೆ -  ಪಾ.ವೆಂ. ಹೇಳಿದ ಕಥೆ, ನೆರಳು, ಮೈಕು, ವಂಧ್ಯ 
  82. ತ್ಯಾಮಗೊಂಡ್ಲು ಅಂಬರೀಶ್ - ಲೆಕ್ಕಾಚಾರ
  83. ದೇಶಪಾಂಡೆ ಸುಬ್ಬರಾಯ - ಕ್ರಿಯಾಕಾಂಡ 
  84. ಅಬ್ದುಲ್ ರಶೀದ್ - ಹಾಲು ಕುಡಿದ ಹುಡುಗಾ, ಕಪ್ಪು ಹುಡುಗನ ಹಾಡು  
  85. ಬಿಸಿ ರಾಮಚಂದ್ರ ಶರ್ಮ - ಯಾರು ಹಿತವರು ನಿನಗೆ, ಸೆರಗಿನ ಕೆಂಡ, ಬೆಳಗಾಯಿತು,ಮಾಗಿ 
  86. ನಾ.ಮೊಗಸಾಲೆ - ಕಿಡ್ನಿ 
  87. ಬಿ.ಎಲ್.ವೇಣು - ಸುಡುಗಾಡು ಸಿದ್ದನ ಪ್ರಸಂಗ
  88. ಪ್ರಹ್ಲಾದ ಅಗಸನಕಟ್ಟೆ- ತಾಜಮಹಲ್
  89. ಕಲಿಗಣನಾಥ ಗುಡದೂರು - ಉಡಿಯಲ್ಲಿಯ ಉರಿ
  90. ಎಂ ಎಸ್ ಕೆ ಪ್ರಭು - ಮುಖಾಬಿಲೆ, ಎರಡು ತೆಂಗಿನ ಮರದುದ್ದದ ಮನುಷ್ಯ 
  91. ಎಂ ಎನ್ ವ್ಯಾಸರಾವ್ - ಅಕ್ವೇರಿಯಂ 
  92. ಅಶೋಕ್ ಹೆಗಡೆ - ಒಳ್ಳೆಯವನು, ಯಾವ ಸೀಮೆಯ ಹುಡುಗ ನೀನು 
  93. ಎಂ ಎಸ್ ಶ್ರೀರಾಮ್ - ಕಪಾಟಿನೊಳಗಿನ ನೆನಪುಗಳು  
  94. ಡಾ. ವಿನಯಾ - ಕಡಿತನಕಾ ಕಾಯೋ ಅಭಿಮಾನ
  95. ಭಾಸ್ಕರ್ ಹೆಗಡೆ - ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ
  96. ರಘು ಅಪಾರ - ಸಾರಿ ಪದ್ಮಿನಿ, ಮಾಸ್ಟರ್ ಸೈಕಲ್ಲಿನ ಬೇಬಿ ಸೀಟ್
  97. ಮೊಗಳ್ಳಿ ಗಣೇಶ - ಒಂದು ಹಳೇ ಚಡ್ಡಿ 
  98. ರಾಜೇಂದ್ರ ಚೆನ್ನಿ - ಏಡಿಹುಣ್ಣು, ದೊಡ್ಡಮರ  
  99. ಸಿ ಬಸವಲಿಂಗಯ್ಯ - ಗಾಳಿಪಟ 
  100. ರಾಮಚಂದ್ರದೇವ - ದೂರ ನಿಂತವರು , ದಂಗೆಯ ಪ್ರಕರಣ
  101. ಟಿ ಎನ್ ಸೀತಾರಾಮ್ - ನಾನು ಪೊಲೀಸರಿಗೆ ಬೇಕಾದೆ 
  102. ಬೈರಪ್ಪ - ಗತಜನ್ಮ
  103. ನಾಗವೇಣಿ ಎಚ್ - ಒಡಲು 
  104. ಬಿ.ಸಿ.ದೇಸಾಯಿ - ಸಾವು
  105. ಶಿವೇಶ್ವರ ದೊಡ್ಡಮನಿ - ರಾಜಮಾ 
  106. ಹವೆಂ ನಾಗರಾಜರಾವ್ - ರಂಗಶಾಮಿ
  107. ಸಮೀತನಹಳ್ಳಿ ರಾಮರಾಯ - ತಾಯಿ 
  108. ಅನುಪಮಾ - ದೇವರೇ ಬರಲಿಲ್ಲ 
  109. ಅಶೋಕ ಹೆಗಡೆ-ಯಾವ ಸೀಮೆಯ ಹುಡುಗ ನೀನು, ತದಡಿಗೆ ಬಂದ ಹಡಗು
  110. ವೀಣಾ ಶಾಂತೇಶ್ವರ - ಕೊನೆಯ ದಾರಿ,ತಿರುಗಿ ಹೋದಳು 
  111. ಗೋಪಾಲಕೃಷ್ಣ ಮಧ್ಯಸ್ತ - ಮೌಲ್ಯಗಳು 
  112. ಶ್ರೀಕಾಂತ - ಪ್ರತಿಮೆಗಳು 
  113. ತ್ರಿವೇಣಿ - ಬೆಡ್ ನಂಬರ್ ಏಳು, ಚಂಪಿ,ನರಬಲಿ 
  114. ಹಿರೇಮಲ್ಲೂರ ಈಶ್ವರನ್ - ಪೂವಮ್ಮ 
  115. ವರಗಿರಿ - ದ್ಯಾವಮ್ಮ - ಕೆಂಚಿ 
  116. ಅಲಕಾ ಕೆ. - ಎರವಿನೊಡವೆ 
  117. ಸಾರಾ ಅಬೂಬಕರ್ - ಬಿಸಿಲ್ಗುದುರೆಯ ಬೆನ್ನುಹತ್ತಿ, ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು, ಚಪ್ಪಲಿಗಳು, ನಿಯಮ ನಿಯಮಗಳ ನಡುವೆ  
  118. ನಾ. ಡಿಸೋಜಾ - ತಂತ್ರ, ಬಣ್ಣ
  119. ಬಿ. ಜನಾರ್ದನ ಭಟ್ - ಕಾಟಕಾಯಿ
  120. ಸ್ವಾಮಿ ಪೊನ್ನಾಚಿ - ಭೂಮಿಗೀತ 
  121. ಚಿದಾನಂದ ಸಾಲಿ - ಕಾಗೆಯೊಂದಗುಳ ಕಂಡರೆ
  122. ಎನ್.ಎಸ್. ಶಂಕರ್ - ರೂಢಿ
  123. ಮಂಜುನಾಥ್ ಲತಾ - ಒಳಗಲ ಜ್ಯೋತಿಯು  
  124. ಪೆಪ್ಪರ್ಮೆಂಟು - ಟಿ.‌ ಎಸ್. ಗೊರವರ 
  125. ಜಯಶ್ರೀ ದೇಶಪಾಂಡೆ - ಘಟಿತ
  126. ಕಸ್ತೂರಿ ಬಾಯಿರಿ - ದಿಂಡೀ
  127. ನೇಮಿಚಂದ್ರ - ಮತ್ತೆ ಬರೆದ ಕವನಗಳು, ನನ್ನದಲ್ಲದ ಬದುಕಿಗಾಗಿ, ಹೊಸ ಹುಟ್ಟು
  128. ಫಕೀರ್ ಮಹಮ್ಮದ್ ಕಟ್ಪಾಡಿ - ಹತ್ಯೆ 
  129. ಕರೀಗೌಡ ಬೀಚನಹಳ್ಳಿ - ಅವಶೇಷ, ಒಂದು ಅಪೂರ್ವ ಸಂಸಾರ 
  130. ರಾಘವೇಂದ್ರ ಪಾಟೀಲ - ಬೆಳ್ಳಕ್ಕಿಗಳ ಲೋಕದಲ್ಲಿ,ದೇಸಗತಿ 
  131. ಮಹಾಬಲಮೂರ್ತಿ ಕೊಡ್ಲೆಕೆರೆ - ತೆರೆದುಕೊಳ್ಳುವ ಲೋಕ 
  132. ಕಮಲಾ ಸುಬ್ರಹ್ಮಣ್ಯಂ - ಕೃಷ್ಣಾ ಮೂರ್ತಿ ಕಣ್ಣಾಮುಂದೆ
  133. ಕವಿತಾ ರೈ - ನಾಟಿ ಓಟ
  134. ಜಯಶ್ರೀ ದಿವಾಕರ್ - ನೆಲೆ ಕಾಣದ ನೆರಳು 
  135. ಪ್ರತಿಭಾ ನಂದಕುಮಾರ್ - ಬೆಳಕು 
  136. ಇಂದ್ರಕುಮಾರ ಎಚ್.‌ಬಿ - ಚಾಕರಿಯಮ್ಮ 
  137. ಕೆ.ಎಂ.ರಶ್ಮಿ - ಅದು 
  138. ಅಲಕ ತೀರ್ಥಹಳ್ಳಿ - ಈ ಕಥೆಗಳ ಸಹವಾಸವೇ ಸಾಕು 
  139. ಶಾಂತಿ ಕೆ ಅಪ್ಪಣ್ಣ - ಬಾಹುಗಳು
  140. ವರದರಾಜ ಹುಯಿಲಗೋಳ - ಬಾಗಿಲು ತೆರೆದಿತ್ತು 
  141. ಎ.ಕೆ.ರಾಮಾನುಜನ್  - ಅಣ್ಣಯ್ಯನ ಮಾನವಶಾಸ್ತ್ರ
  142. ಎಸ್ ಅನಂತನಾರಾಯಣ - ಮಾನವಪ್ರೇಮ 
  143. ಕುಲಕರ್ಣಿ ಬಿಂದುಮಾಧವ - ಗುಡಿ
  144. ನಾಗಮಂಗಲ ಕೃಷ್ಣಮೂರ್ತಿ - ಡವ್ ಕೋಟ್ 
  145. ಟಿಕೆ ದಯಾನಂದ - ನಾಯಿಬೇಟೆ  
  146. ಉಷಾದೇವಿ - ಫರ್ಲಾಂಗಮ್ಮ 
  147. ಪ್ರಜ್ಞಾ ಮತ್ತಿಹಳ್ಳಿ - ತುದಿಬೆಟ್ಟದ ನೀರಹಾಡು 
  148. ರಾಜು ಹೆಗಡೆ - ಕತ್ತಲೆ ಮೌನ ಮತ್ತು 
  149. ಕ.ವೆಂ. ರಾಜಗೋಪಾಲ್ - ಆಶೆಯ ಶಿಶು 
  150. ನಾರಂಗಿಭಟ್ಟ - ಕುಥಭರ್ಟರ ಅಕಾಲಮರಣ 
  151. ನರೇಂದ್ರಬಾಬು - ರೇವು 
  152. ಗೀತಾ ಕುಲಕರ್ಣಿ - ತೇಲಿ ಹೋದ ಮೋಡ 
  153. ಎಚ್. ವಿ. ಸಾವಿತ್ರಮ್ಮ - ಮರುಮದುವೆ  
  154. ಎಸ್ ಆರ್ ಶಂಕರನಾರಾಯಣ ರಾವ್ - ತ್ಯಾಗ 
  155. ಶ್ರೀನಿವಾಸ ಹಾವನೂರ - ಶೂರ್ಪನಖಿ 
  156. ಬಿ.ಟಿ ಜಾಹ್ನವಿ - ವ್ಯಭಿಚಾರ 
  157. ಶ್ರೀಕಂಠ ಪುತ್ತೂರು - ಕ್ರಿಮಿಗಳು 
  158. ಎಲ್ ಎಸ್ ಶೇಷಗಿರಿ ರಾವ್ - ಮುಯ್ಯಿ 
  159. ನಟರಾಜ್ ಹುಳಿಯಾರ್ - ಮಾಯಾಕಿನ್ನರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು,ನೆತ್ತರು ಮತ್ತು ಗುಲಾಬಿ
  160. ಹನುಮಂತ ಹಾಲಿಗೇರಿ - ಮಠದ ಹೋರಿ, ಊರು ಸುಟ್ಟರೂ ಹನುಮಪ್ಪ ಹೊರಗೆ
  161. ಎಲ್ ಡಿ ಸಭಾಹಿತ - ಯಕ್ಷಪ್ರಶ್ನೆ 
  162. ರಾಮಚಂದ್ರ ಕೊಟ್ಟಲಗಿ - ಒಂದೇ ದೇಟಿನ ಕಾಯಿಗಳು
  163. ಬಿ.ಪ್ರಭಾಕರ ಶಿಶಿಲ - ಕೊಡಗರ ಕಾಟಕಾಯಿ, ಬೇಟೆ (ಕನ್ನಡ ಅರೆಭಾಷೆಯ ಸಣ್ಣಕಥೆ) 
  164. ದ. ಬಾ. ಕುಲಕರ್ಣಿ - ಜಾಗೀರಿಯ ದಿಂಬು 
  165. ಬರಗೂರು ರಾಮಚಂದ್ರಪ್ಪ - ಕ್ಷಾಮ,ಬಯಲಾಟದ ಭೀಮಣ್ಣ 
  166. ಕೇಶವ ಮಳಗಿ - ಪತ್ರೋಳಿ
  167. ಕೇಶವರೆಡ್ಡಿ ಹಂದ್ರಾಳ - ಪಂಚರಂಗಿ
  168. ಚೆನ್ನಣ್ಣ ವಾಲೀಕಾರ - ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು 
  169. ಚಂದ್ರಕಾಂತ ವಡ್ಡು - ನೇಪಥ್ಯದ ನೋವು 
  170. ಕಾ.ತ. ಚಿಕ್ಕಣ್ಣ - ಒಡಲುರಿ, ಓಡುವ ಗಿಡಮರಗಳೊಂದಿಗೆ
  171. ಜಾಣಗೆರೆ ವೆಂಕಟರಾಮಯ್ಯ - ಬಿಳೀ ಹಾಳೆಯ ಕಪ್ಪು ನ್ಯಾಯ 
  172. ಆರ್.ಜಿ. ಹಳ್ಳಿ ನಾಗರಾಜ್ - ಹೊಗೆ 
  173. ಬಾನು ಮುಸ್ಥಾಕ್ - ಸರಿದ ಕಾರ್ಮೋಡ 
  174. ಸ್ವರ್ಣಲತಾ ಆಲೂರು - ಆಧಾರ 
  175. ರಾಮಚಂದ್ರ ಮಾಗಡಿ - ಪ್ರಾಣಿಗಳು 
  176. ಬಿ.ಟಿ. ಲಲಿತಾನಾಯಕ - ತಾಯಿ ಸಾಕೀಬಾಯಿ  
  177. ಮಿರ್ಜಿ ಅಣ್ಣಾರಾಯ - ನಮ್ಮೂರ ನಾಯಕರು 
  178. ವಿಜಿ ಭಟ್ಟ - ರಾಮರಾಜ್ಯ, ಅನುಭವಾಮೃತ, ಗುಪ್ತಚಾರ 
  179. ರಾ. ವೆಂ. ಶ್ರೀನಿವಾಸ - ದುಃಖಸೇತು 
  180. ರಾಜಲಕ್ಷ್ಮಿ ಎನ್. ರಾವ್  - ಆವೇ ಮರೀಯಾ, ಫೀಡ್ರಾ
  181. ಸುಮತೀಂದ್ರ ನಾಡಿಗ - ಸುಟ್ಟ ಬೆರಳು,ಹಂಚಿಕೆ 
  182. ಪಿ.ವಿ. ನಂಜರಾಜ ಅರಸು - ಅದೃಶ್ಯ ಪಾಠ 
  183. ಟಿ. ಎನ್. ಕೃಷ್ಣರಾಜು - ಶನಿ ಹಿಡಿದದ್ದು, ಮಾಡು ಸಿಕ್ಕದಲ್ಲಾ 
  184. ವೀರಭದ್ರ - ಕೈ ಬೀಸಿತು ಹೆಣ, ಓ ಹೆಣ್ಣೇ ನಿನ್ನದಿದೇ ಕಥೆಯೇನೇ ?
  185. ಜಿ.ಕೆ. ಗೋವಿಂದರಾವ್ - ಪೊರೆ ಬಿಟ್ಟ ಹಾವು 
  186. ಮಿತ್ರಾ ವೆಂಕಟ್ರಾಜ್ - ಒಂದು ಒಸಗೆ ಒಯ್ಯುವುದಿತ್ತು 
  187. ಜಯಪ್ರಕಾಶ ಮಾವಿನಕುಳಿ - ಅನುಗಾಲವು ಚಿಂತೆ ಜೀವಕೆ, ...ಅಧಿನಾಯಕ ಜಯ ಹೇ  
  188. ಕೆ ಸತ್ಯನಾರಾಯಣ - ಸೀತೆ ಹೇಳಿದ ರಾಮನ ಗುರುತು,ಮುದುಕಿ ಹೇಳಿದ ಸರ್ ಎಂ.ವಿ ಕತೆ ಸರ್ ಎಂ.ವಿ ಕೇಳಿದ ಮುದುಕಿ ಕತೆ 
  189. ಸುಧಾಕರ - ಕಣ್ಣಿ ಕಿತ್ತ ಹಸು   
  190. ಶ್ರೀಕಾಂತ - ಭೂಮಿ ಕಂಪಿಸಲಿಲ್ಲ 
  191. ಮಹಾಂತೇಶ ನವಲಕಲ್ - ಬುದ್ಧ ಗಂಟೆಯ ಸದ್ದು  
  192. ವೈ.ಎಸ್ . ಲೂಯಿಸ್ - ರಾಗ ತರಂಗ 
  193. ನಳಿನಿ ಮೂರ್ತಿ - ರತ್ನಗರ್ಭ ವಸುಂಧರಾ 
  194. ರಾಜಶೇಖರ ಭೂಸನೂರಮಠ - ಪಾಡನ್ ಕಾಡಿನ ಪ್ರಸಂಗ 
  195. ಎಚ್ ರಾಮಚಂದ್ರ ಸ್ವಾಮಿ - ಅಮಾನವರು
  196. ಶೈಲಜಾ ರಾಜಶೇಖರ ಭೂಸನೂರಮಠ - ತಾಯಿ ಯಾರು  
  197. ಮನು - ಸುದರ್ಶನ ಯಾನ 
  198. ನಾಗೇಶ್ ಹೆಗಡೆ - ಡಿಲೇ ವಿಷನ್ 
  199. ಹ.ಶಿ.ಭೈರನಟ್ಟಿ - ಸಮೂಹ ಸಂಮೋಹಿನಿ 
  200. ವಜ್ರಗಳು,ವಣಖೊಬ್ರಿ ಮತ್ತು E = mc2
  201. ವಿರೂಪಾಕ್ಷ ಬಣಕಾರ - ಕೊನೆಯ ಸಂದೇಶ 
  202. ಕನಕಮಾಲಿನಿ ಜೋಶಿ - ಅನೂಹ್ಯ 
  203. ಸುಭಾಷಿಣಿ - ಮಿನುಗೆಲೇ ಮಿಂಚುಳ್ಳಿ 
  204. ದೇವುಡು - ಮೂರು ಕನಸು 
  205. ಕೆವಿ ಅಯ್ಯರ್ - ಅನಾಥ ಅನಸೂಯೆ 
  206. ಕ ವೆಂ ರಾಜಗೋಪಾಲ - ಅನಾಥ ಮೇಷ್ಟರ ಸ್ವಗತ ಸಂಪ್ರದಾಯ       
  207. ಶಾಂತರಸ - ನೀಲಗಂಗಾ ಗುರುಪಾದ ಮತ್ತು ಒಂದು ರೂಪಾಯಿ 
  208. ಶಂಕರ ಮೊಕಾಶಿ ಪುಣೇಕರ - ಬಿಲಾಸಖಾನ 
  209. ವೆಂಕಟರಾಜ ಪಾನಸೆ - ಸಮಾನತೆಯ ಸುಳಿಯಲ್ಲಿ 
  210. ಪರಂಜ್ಯೋತಿ -  ಶೂನ್ಯ
  211. ಗಿರಡ್ಡಿ ಗೋವಿಂದರಾಜು - ನಮ್ಮೂರಿನಲ್ಲೊಬ್ಬ ತಲಾಠಿ 
  212. ಕೆವಿ ತಿರುಮಲೇಶ್ - ನೆಳಲೆಮಠದ ಶ್ರೀಗಳು 
  213. ಎ ಎನ್ ಪ್ರಸನ್ನ - ಹೊಳೆಗೆ ಹೋದದ್ದು 
  214. ಮಾವಿನಕೆರೆ ರಂಗನಾಥನ್ - ಉಳಿದದ್ದು ಆಕಾಶ        
  215. ಮಲ್ಲಿಕಾರ್ಜುನ ಹಿರೇಮಠ - ಅಮೀನಪುರದ ಸಂತೆ 
  216. ಈಶ್ವರಚಂದ್ರ - ಕೊಂಪೆಯಲ್ಲಿ ಕಟ್ಟುತ್ತಿರುವ ಬಂಗಲೆ 
  217. ಶಾಂತಾರಾಮ ಸೋಮಯಾಜಿ - ನೀರಮೇಲೆ ನಡೆಯುವವನು    
  218. ಎಸ್ ಎಫ್ ಯೋಗಪ್ಪನವರ್ - ಆರಾಮಕುರ್ಚಿ


ಛಂದ ಪುಸ್ತಕವು ಗುರುತಿಸಿರುವ ಕಥೆಗಾರರು ಮತ್ತು ಕಥಾಸಂಕಲನಗಳು:

  1. ಸುಮಂಗಲಾ - ಜುಮುರು ಮಳೆ,ಕಾಲಿಟ್ಟಲ್ಲಿ ಕಾಲುದಾರಿ
  2. ಗುರುಪ್ರಸಾದ್ ಕಾಗಿನೆಲೆ - ಶಕುಂತಳಾ
  3. ಡಾ. ಕೆ. ಎನ್. ಗಣೇಶಯ್ಯ - ಶಾಲಭಂಜಿಕೆ
  4. ಸಚ್ಚಿದಾನಂದ ಹೆಗಡೆ - ಕಾರಂತಜ್ಜನಿಗೊಂದು ಪತ್ರ
  5. ನಾಗರಾಜ ವಸ್ತಾರೆ - ಹಕೂನ ಮಟಾಟ
  6. ಸುರೇಂದ್ರನಾಥ್ ಎಸ್. -  ಕಟ್ಟು ಕತೆಗಳು
  7. ಕರ್ಕಿ ಕೃಷ್ಣಮೂರ್ತಿ - ಗಾಳಿಗೆ ಮೆತ್ತಿದ ಬಣ್ಣ
  8. ಪದ್ಮನಾಭ ಭಟ್ ಶೇವ್ಕಾರ - ಕೇಪಿನ ಡಬ್ಬಿ
  9. ವಿಕ್ರಮ ಹತ್ವಾರ- ಝೀರೋ ಮತ್ತು ಒಂದು
  10. ಲೋಕೇಶ ಅಗಸನಕಟ್ಟೆ - ಹಟ್ಟಿಯೆಂಬ ಭೂಮಿಯ ತುಣುಕು
  11. ಡಾ. ವಿನಯಾ - ಊರ ಒಳಗಣ ಬಯಲು
  12. ಸುನಂದಾ ಪ್ರಕಾಶ ಕಡಮೆ - ಪುಟ್ಟ ಪಾದದ ಗುರುತು
  13. ಅಲಕ ತೀರ್ಥಹಳ್ಳಿ - ಈ ಕತೆಗಳ ಸಹವಾಸವೇ ಸಾಕು
  14. ಸಂದೀಪ ನಾಯಕ - ಗೋಡೆಗೆ ಬರೆದ ನವಿಲು
  15. ಕಣಾದ ರಾಘವ - ಮೊದಲ ಮಳೆಯ ಮಣ್ಣು
  16. ಬಸವಣ್ಣೆಪ್ಪಾ ಕಂಬಾರ - ಆಟಿಕೆ
  17. ದಯಾನಂದ - ದೇವರು ಕಚ್ಚಿದ ಸೇಬು
  18. ಮೌನೇಶ್ ಎಲ್. ಬಡಿಗೇರ್ - ಮಾಯಾ ಕೋಲಾಹಲ
  19. ಸ್ವಾಮಿ ಪೊನ್ನಾಚಿ - ಧೂಪದ ಮಕ್ಕಳು


ಅಂಕಿತ ಪುಸ್ತಕದ "ಅಂಕಿತ ಪ್ರತಿಭೆ" ಸರಣಿಯಲ್ಲಿ ಬಂದ ಕಥಾ ಸಂಕಲನಗಳು :

  1. ವಿಕಾಸ್ ನೇಗಿಲೋಣಿ - ಮಳೆಗಾಲ ಬಂದು ಬಾಗಿಲು ತಟ್ಟಿತು
  2. ಸಿಂಧು ರಾವ್ - ಸರ್ವಋತು ಬಂದರು
  3. ಸಚಿನ್ ತೀರ್ಥಹಳ್ಳಿ - ನವಿಲು ಕೊಂದ ಹುಡುಗ


A compilation of Best Kannada short stories by Sharath Bhat Seraje

Tuesday 9 July 2019

ಪುನರ್ವಸು ಕಾದಂಬರಿಯ ಬಗ್ಗೆ

ಡಾ.ಗಜಾನನ ಶರ್ಮರ ಪುನರ್ವಸು ಹಲವು ಕಾರಣಗಳಿಗೆ ಗಮನಾರ್ಹವಾದ ಕಾದಂಬರಿ. ಸುಮಾರು 540 ಪುಟಗಳಲ್ಲಿ ಬಿಚ್ಚಿಕೊಳ್ಳುವ ಕಥಾನಕವಾದರೂ, ಕರಗಿಸಬಹುದಾದ ಬೊಜ್ಜು ಇದರಲ್ಲಿಲ್ಲ. ಇರುವುದೆಲ್ಲವೂ ಮನನೀಯ, ಬೋಧಪ್ರದ.
ಡೇವಿಡ್ ಅಟೆನ್ಬರೋ ಬಿಬಿಸಿಗೆ ಮಾಡಿಕೊಟ್ಟ Planet Earthನಂಥಾ ಕೆಲವು ಸಾಕ್ಷ್ಯಚಿತ್ರಗಳನ್ನು ಮುಗಿಸಲಿಕ್ಕೆ ಐದು ವರ್ಷಗಳೇ ಬೇಕಾಗಿದ್ದವಂತೆ ಅಂತೆಲ್ಲ ಶ್ಲಾಘಿಸಿ, "ನಮ್ಮಲ್ಲಿ ಇಷ್ಟೆಲ್ಲ ಕಷ್ಟ ಪಡುವವರು ಯಾರಿದ್ದಾರೆ" ಅಂತ ನಾವೆಲ್ಲ ಪೇಚಾಡುವುದುಂಟು. ಹಾಗಂತ ವರ್ಷಗಟ್ಟಲೆ ರಿಸರ್ಚು, ಮಾಹಿತಿಯ ಸಂಗ್ರಹ ಇವೆಲ್ಲ ನಮ್ಮಲ್ಲಿ ಇಲ್ಲವೆಂದಲ್ಲ. ಹಳಗನ್ನಡದ ಮೇಲೆ ಕೆಲಸ ಮಾಡುವವರು, ವ್ಯಾಕರಣ ಶಾಸ್ತ್ರದ ಆಳಕ್ಕೆ ಇಳಿದವರು, ಶಬ್ದಾರ್ಥ ಶೋಧನೆಗೆ/ನಿಘಂಟುಗಳ ರಚನೆಗೆ ತೆತ್ತುಕೊಂಡವರು, ನೂರಾರು ಶಾಸನಗಳ ಬೆನ್ನಟ್ಟುವವರು, ತಾಳೆಗರಿಗಳನ್ನು ಕಲೆಹಾಕಿ ಗ್ರಂಥಸಂಪಾದನೆ ಮಾಡಲು ಹೊರಡುವವರು - ಹೀಗೆ ಪಾಂಡಿತ್ಯ, ಸಂಶೋಧನೆಯ ಕ್ಷೇತ್ರಗಳಲ್ಲಿ ಇರುವವರು - ಇವರೆಲ್ಲರೂ ಎಲ್ಲೆಲ್ಲಿಂದಲೋ ವಿಷಯಗಳನ್ನು ಸಂಚಯಿಸುವ ಶ್ರಮಸಾಧ್ಯವಾದ ಕೆಲಸ ಮಾಡುತ್ತಲೇ ಬಂದಿದ್ದಾರೆ. ಆದರೆ ಕಥೆ ಕಾದಂಬರಿ ಬರೆಯುವವರು, ಚಲನಚಿತ್ರ ರಂಗದವರು ಎಲ್ಲ ರಿಸರ್ಚು ಮಾಡುವುದು ಕಡಮೆ.
ಚಿತ್ರದುರ್ಗದ ಕಥೆ ಹೇಳಲು ತರಾಸು ಅವರು ಇತಿಹಾಸವನ್ನು ಕೆದಕಿದ್ದು, ಕೊರಟಿ ಶ್ರೀನಿವಾಸ ರಾವ್ ಅವರು ವಿಜಯನಗರದ ಇತಿಹಾಸವನ್ನು ಹೆಕ್ಕಿ ಗುಡ್ಡೆ ಹಾಕಿ ಕಥೆಗಳನ್ನು ಹೆಣೆದದ್ದು, ಭೈರಪ್ಪನವರು ಒಂದೊಂದು ಕೃತಿಗೆ ಮೊದಲೂ ಎಂಟೋ ಹತ್ತೋ ತಿಂಗಳು ಸಂಶೋಧನೆಗೆ ತೊಡಗುವುದು, ಕೆ.ಎನ್. ಗಣೇಶಯ್ಯನವರು ವಿಜ್ಞಾನ, ಇತಿಹಾಸಗಳ ಅಚ್ಚರಿಗಳ ಹುಡುಕಾಟವನ್ನು ಮತ್ತು ತನ್ನ ಕ್ಷೇತ್ರಕಾರ್ಯಗಳನ್ನೇ ಕಥೆಗಳನ್ನಾಗಿಸುವುದು ಹೀಗೆ ಕೆಲವು ಉದಾಹರಣೆಗಳನ್ನು ಕೊಡಬಹುದು. ಇದೀಗ ಈ ಕೂಟದ ಇತ್ತೀಚಿನ ಸದಸ್ಯರಾಗಿ ಪುನರ್ವಸು ಕಾದಂಬರಿಯ ಗಜಾನನ ಶರ್ಮರು ಸೇರಿಕೊಂಡಿದ್ದಾರೆ. ಅವರು ಹೇಳುತ್ತಿರುವುದು ಜೋಗದ ಸಿರಿಬೆಳಕಿನ, ಆ ಬೆಳಕಿನಿಂದ ಕತ್ತಲೆಗೆ ದೂಡಲ್ಪಟ್ಟ ಶರಾವತಿಯ ಆಚೀಚೆ ದಂಡೆಯ ಹಳ್ಳಿಗಳ ಕಥೆ. ನಮ್ಮಲ್ಲಿ ಕೈಗಾರಿಕೆಗಳು, ಉದ್ದಿಮೆಗಳು ಬರದಿದ್ದರೆ ಬಡತನ, ನಿರುದ್ಯೋಗಗಳು ತೊಲಗುವುದಿಲ್ಲ ಎಂಬ ಸರ್ ಎಂ. ವಿಶ್ವೇಶ್ವರಯ್ಯನವರ ನಿಲುವಿನಿಂದ ಶುರುವಾಗುವ ಜೋಗದ ಪ್ರಾಜೆಕ್ಟ್‌ ಮತ್ತು ಅದರಿಂದಾಗಿ ಮುಳುಗಿದ ಊರುಗಳ ಕಥೆಯಿದು.
ಉಪೇಂದ್ರ ಒಂದೊಮ್ಮೆ ಶೂಟಿಂಗ್‌ಗೆ ಒಂದುಕಡೆಗೆ ಹೋಗಿದ್ದಾಗ ಅವರ ಸ್ನೇಹಿತರು, 'ನೋಡು, ಈ ಏರಿಯಾ ಇನ್ನೂ ಡೆವಲಪ್‌ ಆಗಿಲ್ಲ. ಬರೀ ಕಾಡು, ಗುಡಿಸಲಿನಲ್ಲೇ ಜನ ವಾಸ ಮಾಡುತ್ತಿದ್ದಾರೆ' ಎಂದರಂತೆ. ಆಗ ಉಪ್ಪಿ, 'ನಿಮ್ಮ ಪ್ರಕಾರ, ಡೆವಲಪ್‌ಮೆಂಟ್ ಅಂದ್ರೆ ಏನು? ಈ ಏರಿಯಾದಲ್ಲಿನ ಕಾಡು ಕಡಿದು, ನಾಲ್ಕು ದೊಡ್ಡ ಬಿಲ್ಡಿಂಗ್‌ ಬಂದು ಜನ ಅಲ್ಲಿ ಐಷಾರಾಮಿಯಾಗಿ ವಾಸಿಸುತ್ತಿದ್ದರೆ ಅದು ಡೆವಲಪ್‌ಮೆಂಟಾ? ಕಡೆಗೆ ಏನ್ಮಾಡ್ತಾರೆ, ಆ ಬಿಲ್ಡಿಂಗ್‌ ಸಹವಾಸ ಬೋರಾಗಿ ಮತ್ತೆ ಎಲ್ಲೋ ತೋಟದ ಮನೆ ತೆಗೆದುಕೊಂಡು ಅಲ್ಲಿ ಹಾಯಾಗಿ ವಾಸಿಸುತ್ತಾರೆ. ಆದರೆ ಇಲ್ಲಿ ಹುಟ್ಟುವಾಗಲೇ ಪ್ರಕೃತಿಯ ಮಡಿಲಿನಲ್ಲಿ ಹುಟ್ಟಿ ಅದನ್ನೇ ಅನುಭವಿಸಿ ಖುಷಿಯ ಜೀವನ ನಡೆಸುತ್ತಿದ್ದಾರೆ. ಮನುಷ್ಯನಿಗೆ ಅಂತಿಮವಾಗಿ ಬೇಕಾಗೋದು ನೆಮ್ಮದಿಯ ವಾತಾವರಣವೇ ಹೊರತು ಡೆವಲಪ್‌ಮೆಂಟ್‌, ಐಷಾರಾಮಿ ಮನೆಯಲ್ಲ. ಅದೇ ಕಾರಣಕ್ಕೆ ದೊಡ್ಡ ಶ್ರೀಮಂತರು ತಮ್ಮ ಕೊನೆಗಾಲದಲ್ಲಿ ಎಲ್ಲೋ ಒಂದು ಚಿಕ್ಕ ಫಾರ್ಮ್ ಹೌಸಿನಲ್ಲಿ ವಾಸಿಸುತ್ತಾರೆ' ಎಂದಿದ್ದರಂತೆ. ಪುನರ್ವಸುವಿನಲ್ಲಿ ವಿಶ್ವೇಶ್ವರಯ್ಯ,ಕೃಷ್ಣರಾವ್, ಎಸ್ ಜಿ ಫೋರ್ಬ್ಸ್, ಎಸ್ ಕಡಾಂಬಿ, ಮೊಹಮದ್ ಹಯಾತ್, ಸರ್ ಮಿರ್ಜಾ ಇಸ್ಮಾಯಿಲ್ ಮುಂತಾದ ದೀವಾನರು, ದಕ್ಷ ಎಂಜಿನಿಯರುಗಳು ಎಲ್ಲ ಪ್ರಗತಿಯ ಬಗ್ಗೆ ಎಷ್ಟೆಲ್ಲ ವಾದಗಳನ್ನು ಹೂಡಿದರೂ, ಕೃತಿಕಾರನ ಒಲವಿರುವುದು ಉಪ್ಪಿ ಹೇಳಿದ ಸಿದ್ಧಾಂತದ ಕಡೆಗೇ.
ಲಿಂಗನಮಕ್ಕಿ ಜಲಾಶಯದ ಹಿಂದಿನ ಕಥೆ,ವ್ಯಥೆ, ಅಲ್ಲಿನ ಹಳ್ಳಿಗಾಡಿನ ಶ್ರೀಮಂತ ಸಂಸ್ಕೃತಿ, ಜೋಗದ ಬಗ್ಗೆ ಗೊತ್ತಿಲ್ಲದ ಸಂಗತಿಗಳು ಇವೆಲ್ಲವನ್ನು ಡೇವಿಡ್ ಅಟೆನ್ಬರೋ ಬಿಬಿಸಿಗೆ ಮಾಡಿಕೊಟ್ಟ ಸಾಕ್ಷ್ಯಚಿತ್ರವೊಂದರಂತೆ ಹೃದಯಹಾರಿಯಾಗಿ ತೋರಿಸಿದ್ದಕ್ಕೆ ಗಜಾನನ ಶರ್ಮರಿಗೆ ಅಭಿನಂದನೆಗಳು.

---> Sharath Bhat Seraje

ಜೋಗಿಯವರ 'L', ನನ್ನ ಬೊಗಸೆಗೆ ಸಿಕ್ಕಿದಷ್ಟು

Analysis of  the novel "L" by Jogi by Sharath Bhat Seraje

ಜೋಗಿಯವರ ಹೊಸ ಕಾದಂಬರಿ 'L', ನನ್ನ ಬೊಗಸೆಗೆ ಸಿಕ್ಕಿದಷ್ಟು, ಬೊಗಸೆಯಿಂದ ಸೋರದೆ ಉಳಿದಷ್ಟು: ಅನ್ಯರೊರೆದುದನೆ ಬರೆದುದನೆ ಬರೆಬರೆದು ಓದುಗರನ್ನು ದಣಿಸುವ ಜಾಯಮಾನ ಜೋಗಿಯವರದ್ದಲ್ಲ ಎನ್ನುವುದು ಅವರ ಕಥೆಗಳನ್ನೋದುವರಿಗೆಲ್ಲ ಗೊತ್ತಿರುವ ವಿಚಾರವೇ. ಅವರದ್ದು ಕಥೆಗಳಿಗೆ ತೆರೆದಷ್ಟೇ ಬಾಗಿಲು; ಪ್ರಯೋಗಕ್ಕೆ ತೆರೆದೇ ಇರುವ ಬಾಗಿಲು. ಸ್ವರೂಪದಲ್ಲೂ,ಜೋಡಣೆಯಲ್ಲೂ, ಕೊನೆಗೆ ಹುರುಳಿನಲ್ಲೂ As clever as they come ಅಂತನ್ನಿಸುವ ಜಾಣತನ,ವಿನೋದಸ್ವಭಾವ, ಚಮತ್ಕಾರಪ್ರಿಯತೆ ಇವೆಲ್ಲ ಜೋಗಿಯವರ ಟ್ರೇಡ್ ಮಾರ್ಕುಗಳು. ಅಂಥದ್ದೊಂದು ಚತುರಸೃಷ್ಟಿಯ "ದೊಡ್ಡ ಸಣ್ಣಕಥೆ"ಯಾಗಿ ಜಕ್ಕುಳಿಸಿ, ರಂಜಿಸಿ, ತಲೆದೂಗಿಸಿದ್ದು ಜೋಗಿಯವರ "ಸಲಾಂ ಬೆಂಗಳೂರು". ತಂತ್ರಗಾರಿಕೆಯ ದೃಷ್ಟಿಯಿಂದ ಈ ಕಾದಂಬರಿಯೂ ಸಲಾಂ ಬೆಂಗಳೂರಿನ ಚಿಕ್ಕಪ್ಪನ ಮಗನಂತಹದ್ದು, ಮನೋಭಾವ ಮತ್ತು toneನಲ್ಲಿ ಕಿಶೋರ್ ಕುಮಾರನ ಚೆಲ್ಲಾಟಕ್ಕೂ ಮುಕೇಶನ ವಿಷಾದಗೀತೆಗಳಿಗೂ ಇರುವಂತಹ ಅಂತರ. ಹಾಗಾಗಿ ಇವೆರಡೂ ಕೃತಿಗಳು ಹತ್ತಿರವಿದ್ದೂ ದೂರ.
ಕಾವ್ಯ ಅಂದರೆ ಏನು ? ಕಾವ್ಯದ ಲಕ್ಷಣಗಳು ಯಾವುವು? ಕಾವ್ಯಕ್ಕೆ ಸೌಂದರ್ಯ ಹೇಗೆ ಬರುತ್ತದೆ? ಕವಿಯು ಹೇಗಿರುತ್ತಾನೆ, ಅವನ ಯೋಚನೆಯ ಪರಿಯೇನು ? ಅವನು ಯಾವ ಪರಿಕರಗಳನ್ನು ಬಳಸಿ ಕಾವ್ಯವನ್ನು ರಚಿಸುತ್ತಾನೆ? ಕಾವ್ಯದ ಪ್ರಯೋಜನ ಏನು? ಇಂತಹಾ ಮೂಲಭೂತವಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಶಾಸ್ತ್ರಕ್ಕೆ ಕಾವ್ಯಮೀಮಾಂಸೆ ಅಂತ ಹೆಸರು. ಈ ಅರ್ಥದಲ್ಲಿ 'L' ಕಾದಂಬರಿಯ ನಾಯಕ ಲಕ್ಷ್ಮಣನೂ ಕಾವ್ಯಮೀಮಾಂಸೆಗೆ ಕೈ ಹಾಕಿದವನು. ತನ್ನ ಬವಣೆ, ಬೇಗುದಿಗಳಿಗೂ ತನ್ನ ಕಾವ್ಯಕ್ಕೂ ಎಷ್ಟು ಹತ್ತಿರದ ಸಂಬಂಧ ಅಂತ ಹುಡುಕುವವನು. ಅವನು ವಿದ್ವಾಂಸನಲ್ಲ, ಸಿದ್ಧಾಂತಿಯಲ್ಲ. ಅವನು ನಮ್ಮ ಭಾಮಹ, ದಂಡಿ, ವಾಮನ,ಕುಂತಕ, ಆನಂದವರ್ಧನ, ಅಭಿನವಗುಪ್ತರಂತೆ ಉದ್ದುದ್ದ ಸಿದ್ಧಾಂತಗಳನ್ನು ಮಂಡಿಸುವವನಲ್ಲ. ಅವನೊಬ್ಬ badass. ಸಿನಿಕನೂ.
Raymond Chandlerನ ಕಾದಂಬರಿಗಳಲ್ಲಿ ಬರುವ ಪತ್ತೆದಾರ Philip Marloweನ ಬಗ್ಗೆ ಒಬ್ಬರು ಹೀಗೆ ಹೇಳಿದ್ದಾರೆ : wisecracking, whiskey-drinking, tough-as-an-old-boot , Marlowe never minces his words or beats around the bush. He is blunt, terse, direct, sometimes dismissive and frequently rude. He talks tough and he talks smart. ನಮ್ಮ ಲಕ್ಷ್ಮಣನೂ ಇದೇ ಎರಕದವನು. ಹಳೇ ಚಿತ್ರಗಳಲ್ಲಿ ಬರುವ Humphrey Bogart, Robert Mitchum, Clint Eastwood, ನಾನಾ ಪಾಟೇಕರ್ ಮುಂತಾದವರಂತೆ. ಅವನ ಅನುಭವಗಳು ಕಹಿ, ಮಾತು ಕಟು - He is blunt, terse, direct, sometimes dismissive and frequently rude. He talks tough and he talks smart !!
ನಮ್ಮಲ್ಲಿ ಕಾವ್ಯ ಕಟ್ಟುವ ಕ್ರಿಯೆಯ ಬಗ್ಗೆಯೇ ಕಾವ್ಯ ಕಟ್ಟಿದವರಿದ್ದಾರೆ (ಬೇಂದ್ರೆಯವರ “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ”), ಕಾವ್ಯ ಬರೆಯಲಾಗುತ್ತಿಲ್ಲ ಅನ್ನುವುದರ ಬಗ್ಗೆಯೇ ಕಾವ್ಯ ಬರೆದವರಿದ್ದಾರೆ(ಅಡಿಗರ ಕೂಪಮಂಡೂಕ) ! "English398: Fiction Workshop" ಅಂತೊಂದು ಕಥೆಯಿದೆ, ಕಥೆ ಬರೆಯುವ Workshopನಲ್ಲಿ ಹೇಳಿಕೊಡುವ ತಂತ್ರಗಳು ಆ ಕಥೆಯಲ್ಲಿಯೇ ಬರುತ್ತವೆ. ಇಂಥದ್ದನ್ನು metafiction ಅನ್ನುತ್ತಾರೆ, ಸಲಾಂ ಬೆಂಗಳೂರಿನಲ್ಲೂ metafiction ಇತ್ತು, L ಕೂಡಾ ಮೆಟಾ ಫಿಕ್ಷನ್ನೇ ಆದರೂ ಲಕ್ಷ್ಮಣನದು ಇನ್ನೊಂದೇ ಬಗೆಯ ಅನ್ವೇಷಣೆ. “ಆಳದನುಭವವನ್ನು ಮಾತು ಕೈ ಹಿಡಿದಾಗ, ಕಾವು ಬೆಳಕಾದಾಗ ಒಂದು ಕವನ” ಎನ್ನುವುದು ಕೆ. ಎಸ್‌. ನರಸಿಂಹಸ್ವಾಮಿಗಳ ಸಾಲು. ಬಡತನದಲ್ಲಿ ಬಳಲಿ, ಅಪ್ಪನಂತಿರದ ಅಪ್ಪನೊಂದಿಗೆ ಹೆಣಗಿ, ಪ್ರೇಮದಂತಿರದ ಪ್ರೇಮಜ್ವರದಲ್ಲಿ ತೊಳಲಿ, ಕಾವ್ಯವಾಗದ ಕಾವ್ಯದೊಂದಿಗೆ ಸೆಣಸಿ, ಉತ್ಸಾಹಗುಂದಿದ, ಕಠೋರ ಮನಸ್ಸಿನ, ಬಿರುಸು ಮಾತಿನ wisecracking ದೋಷದರ್ಶಿ ಇವನು. "ನೀನು ಸಿನಿಕ ಕಣಯ್ಯಾ" ಅಂತ ಯಾರಾದರೂ ಹೇಳಿದರೆ, 'A cynic is a man who, when he smells flowers, looks around for a coffin.' ಅಂತ ಹೇಳಿ, "ನನ್ನ ಜೀವನದಲ್ಲಿ ಮಾತ್ರ ಹೆಣದ ಪೆಟ್ಟಿಗೆ ಹತ್ತಿರವಿರದೆ, 'ಹೂವು ಮಾತ್ರ' ಅಂತ ಇರಲೇ ಇರಲಿಲ್ಲವಲ್ಲ" ಅಂತ ವಿಲವಿಲನೆ ಒದ್ದಾಡುತ್ತ ಇರಬಲ್ಲವನು. ಚುಚ್ಚುನುಡಿ ಮತ್ತು ಕಡುಮುಳಿಸು ಅವನ ಸ್ವಭಾವ, ಗಾಢವಾದ ವಿಷಾದ ಅವನಿಗೆ ನಿತ್ಯಸತ್ಯ, ನಾಟುನುಡಿ ಅವನಿಗೆ ಬಿಡುಗಡೆಗೆ/ಮುಕ್ತಿಗೆ ದಾರಿ.
ಇಂಥವನೊಬ್ಬ, "ಆಳದನುಭವವನ್ನು ಮಾತು ಕೈ ಹಿಡಿದಾಗ, ಕಾವು ಬೆಳಕಾದಾಗ" ಒಂದು ಕವನ ಆಗುತ್ತದೆಯೇ ಅಂತ ಅನ್ವೇಷಣೆ ಮಾಡಿದರೆ ಹೇಗಿರಬಹುದು ?! ಇಷ್ಟಕ್ಕೂ ಅನುಭವವು ಆಳ ಅಂತಾಗುವುದು ಯಾವಾಗ? ಅದು ಆಳದ ಅನುಭವ ಅಂತ ಗೊತ್ತಾಗುವುದು ಹೇಗೆ? ಅನುಭವವನ್ನು ಮಾತು ಕೈ ಹಿಡಿಯದಿದ್ದರೆ ಯಾವ ಗೋಡೆಗೆ ತಲೆ ಚಚ್ಚುವುದು? ಕಾವು ಬೆಳಕಾಗದಿದ್ದರೆ ಎಲ್ಲಿಗೆ ಹೋಗುವುದು ? ಲಕ್ಷ್ಮಣನಂಥವರಿಗೆ ಇವು ಅವನನ್ನು ಅಲ್ಲಾಡಿಸಿಬಿಡಬಹುದಾದ ಪ್ರಶ್ನೆಗಳು. ಹೀಗಾಗಿಯೇ ಆತ ತನ್ನ ನೆನಪುಗಳ ಸುರುಳಿ ಬಿಚ್ಚುತ್ತ ಹೋಗುತ್ತಾನೆ, ಅಲ್ಲಿ ಉತ್ತರಗಳನ್ನು ಕಾಣ ಹೊರಡುತ್ತಾನೆ. ಬಾಳಿಗೂ ಬರೆಹಕ್ಕೂ ನಂಟಿನ ಅಂಟು ಉಂಟೇ ಅಂತ ’ತನ್ನ ಕಾವ್ಯಕೆ ತಾಂ ಮಹಾಕವಿ ಮಣಿವಂತೆ!’ ಪ್ರಶ್ನೆಗಳ ಬಲೆ ಹೆಣೆಯುತ್ತ, ಹೋಗುತ್ತಾನೆ. ಪ್ರತೀ ಅಧ್ಯಾಯದಲ್ಲೂ ಕಾವ್ಯದ ಬಗ್ಗೆ ಸೂತ್ರರೂಪದ ಹೇಳಿಕೆಯೊಂದನ್ನು ಲಕ್ಷ್ಮಣ ಅಧ್ಯಾಯದ ಮೊದಲಲ್ಲೋ ಕೊನೆಯಲ್ಲೋ ಹೇಳುತ್ತಾನೆ. ಆ ಅಧ್ಯಾಯದಲ್ಲಿ ಬರುವ ಲಕ್ಷ್ಮಣನ ಜೀವನದ ಘಟನೆಗಳು ಈ ಸೂತ್ರರೂಪದ ಹೇಳಿಕೆಗೆ ಕಾರಣವಾಗುವಂತೆ ಇರುತ್ತವೆ. ಈ ಜಾಣ್ಣುಡಿಯಂಥ ಹೇಳಿಕೆಯನ್ನು ಸಚಿತ್ರವಾಗಿ ವಿವರಿಸುವಂತೆ, ಬೆಳೆಸುವಂತೆ,ವಿಶದಗೊಳಿಸುವಂತೆ, ಚತುರೋಕ್ತಿಯನ್ನು ಪರೀಕ್ಷೆಗೆ ಒಡ್ಡಿ ಅದರ ಸತ್ಯಾಸತ್ಯತೆಯನ್ನು ತೋರಿಸಿ ಕೊಡುವಂತೆ ಆ ಅಧ್ಯಾಯದಲ್ಲಿ ಪಾತ್ರಗಳು ವರ್ತಿಸುತ್ತವೆ. ಇದು ಒಂದು ತಂತ್ರವಾಗಿ ಕುತೂಹಲಕಾರಿಯಾಗಿದೆ. ಹೀಗಿರುವುದರಿಂದ, ಈ ವಾಕ್ಯದ ಎರಡು ಪಾಲು ಉದ್ದ ಮಾತ್ರವಿರುವ ಅಧ್ಯಾಯಗಳೂ ಇಲ್ಲಿವೆ !!
ಸಲಾಂ ಬೆಂಗಳೂರಿನಲ್ಲಿ ಒಂದು ಚೇಸ್ ಥ್ರಿಲ್ಲರಿಗೆ ಆಗುವಂತಹಾ ಕಥೆಯಿತ್ತು, ಇಲ್ಲಿ ಅಂತಹಾ ಕಥೆಯೇನೂ ಇಲ್ಲ. ಹೇಳಬೇಕಾದ್ದನ್ನು ಕಥೆಯಲ್ಲಿ ಬುದ್ಧಿವಂತಿಕೆಯಿಂದ ಅಡಗಿಸುವ ಸಲಾಂ ಬೆಂಗಳೂರಿನ ಕಲೆಗಾರಿಕೆ ಇಲ್ಲಿಲ್ಲವಾದ್ದರಿಂದ ನನಗೆ ಇದಕ್ಕಿಂತ ಅದೇ ಹೆಚ್ಚು ಇಷ್ಟವಾಯಿತು. ಷೇಕ್ಸಪಿಯರನ ಬ್ರೂಟಸ್ ಹೇಳುವ, "If there be any in this assembly, any dear friend of Caesar's, to him I say that Brutus' love to Caesar was no less than his. If then that friend demand why Brutus rose against Caesar, this is my answer: not that I loved Caesar less, but that I loved Rome more" ಎಂಬ ಮಾತಿನಂತೆ, ನನಗೆ L ಇಷ್ಟವಾಗಲಿಲ್ಲ ಅಂತಲ್ಲ, ಸಲಾಂ ಹೆಚ್ಚು ಹಿಡಿಸಿತು ಅಷ್ಟೇ ಅಂತ ಹೇಳಿಬಿಡುತ್ತೇನೆ
ತಮ್ಮ ಬಾಲ್ಯದ ನೆನಪುಗಳು, ತಮ್ಮ ಊರಿನ/ಹಳ್ಳಿಯ ವಿವರಗಳು, ತಾವು ಕಂಡ ವ್ಯಕ್ತಿಗಳು ಇವರನ್ನೆಲ್ಲ ತಮ್ಮ ಕಥೆಗಳಲ್ಲಿ ಬಲವಂತವಾಗಿ ಎಳೆದು ತರುವ ಚಪಲ ಎಲ್ಲರಿಗೂ ಇದ್ದದ್ದೇ. ಅವುಗಳಿಗೆ ಸಾಹಿತ್ಯಿಕ ಮೌಲ್ಯ ಇದೆಯೇ, ಕಥೆಗೆ ಇದೆಲ್ಲ ಬೇಕೇ ಅಂತ ಯೋಚಿಸದೆ, ನನ್ನ ಬಾಲ್ಯದ, ನಮ್ಮೂರಿನ ಸಂಗತಿಗಳನ್ನು ಹೇಗಾದರೂ ತಂದುಬಿಡಬೇಕು ಅಂತಿರುವವರು ನಮ್ಮಲ್ಲಿ ಹಲವರಿದ್ದಾರೆ. ನಾಸ್ಟಾಲ್ಜಿಯಾವೇ ಕಥೆಗೆ ಭಾರವಾಗುವಂತೆ ಬರೆಯುವವರೂ ಇಲ್ಲದಿಲ್ಲ.
"ನೀವು rationalist ಆದರೂ ನಿಮ್ಮ ಪಾತ್ರಗಳು ಸಂಪ್ರದಾಯ ಶರಣರು. ಹೀಗೇಕೆ?", ಅಂತ ಶಿವರಾಮ ಕಾರಂತರನ್ನು ಕೇಳಿದಾಗ, "ನಾನು ಬರೆದದ್ದು ಕಾದಂಬರಿ, ಆತ್ಮಕಥೆಯಲ್ಲ" ಅಂತ ಅವರು ಗುಡುಗಿದ್ದರು! ಜಯಂತ ಕಾಯ್ಕಿಣಿಯವರು ಒಂದು ಹೋಟೆಲಿಗೆ ಹೋಗಿದ್ದಾಗ, ಅವರ ಚಿತ್ರಗೀತೆಗಳ ಅಭಿಮಾನಿಯೊಬ್ಬ, "ನಿಮ್ದು ಲವ್ ಫೇಲ್ಯೂರ್ ಕೇಸಾ ಸರ್?" ಅಂತ ಕೇಳಿದ್ದನಂತೆ! "ನಾಸ್ತಿಕರಾದ ನೀವು ಕೃಷ್ಣನ ಬಗ್ಗೆ ಇಷ್ಟು ಪ್ರೀತಿಯಿಂದ ಹೇಗೆ ಬರೆದಿರಿ, ಅಷ್ಟೊಳ್ಳೆ ಭಜನ್ ಗಳನ್ನು ಹೇಗೆ ಬರೆದಿರಿ, ಆಸ್ತಿಕರಲ್ಲದವರು, ಹಿಂದೂಧರ್ಮದ ಅನುಯಾಯಿಗಳಲ್ಲದವರು ಹೀಗೆ ಬರೆಯಲು ಸಾಧ್ಯವೇ?" ಅಂತೊಬ್ಬರು ಜಾವೇದ್ ಅಕ್ತರರನ್ನು ಕೇಳಿದ್ದರಂತೆ. ಅದಕ್ಕವರು, "ನನ್ನ ಪುಣ್ಯಕ್ಕೆ ನೀವು ಗಬ್ಬರ್ ಸಿಂಗನ ಡೈಲಾಗ್ ಬರೆದವರು ಡಕಾಯಿತರೇ ಆಗಿರಬೇಕು ಅನ್ನಲಿಲ್ಲವಲ್ಲ" ಅಂದಿದ್ದರಂತೆ! ಎಲ್ ಕಾದಂಬರಿಯ ನಾಯಕ ಈ ವಿಚಾರಗಳಿಗೆ ಹೇಗೆ ಪ್ರತಿಕ್ರಿಯಿಸಬಹುದು? ಕಥೆಯಲ್ಲಿ ಕಥೆಗಾರ ಎಷ್ಟು ಕಾಣಿಸಿಕೊಳ್ಳಬೇಕು, ಅವನ ಜೀವನ ಎಷ್ಟು ಬರಬೇಕು ಎಂಬ ಪ್ರಶ್ನೆ L ಕಾದಂಬರಿಯದ್ದೂ ಆಗಿದೆ ಅಂದುಕೊಂಡು ಇಷ್ಟು ಕೊರೆದೆ.
ಸು.ರಂ. ಎಕ್ಕುಂಡಿಯವರ "ಇಬ್ಬರು ರೈತರು" ಎಂಬ ಕವಿತೆಯಲ್ಲಿ ಕಾವ್ಯಕ್ಕೂ ಬದುಕಿಗೂ ಇರುವ ನಂಟನ್ನು ಇನ್ನೊಂದು ತರದಲ್ಲಿ ನೋಡಲಾಗಿದೆ. ಅದರಲ್ಲಿ ಇಬ್ಬರು ರೈತರು ಉಜ್ಜಯಿನಿಗೆ ಬರುತ್ತಾರೆ. ಅದು ಕಾಳಿದಾಸನ ಊರು. ಅವನ ಮನೆಗೇ ಬರುತ್ತಾರೆ. ಹೇಳಿ ಕೇಳಿ ಒಬ್ಬ ಕವಿಯ ಮನೆಗೆ ಯಾಕೆ ಬರುತ್ತಾರೆ ಅನ್ನುವುದು ಇಂಟೆರೆಸ್ಟಿಂಗ್ ಆಗಿದೆ. ಕವಿಯು ಕಾವ್ಯಗಳಲ್ಲಿ, ಪಾತ್ರಗಳನ್ನು ಸಂಕಷ್ಟಗಳಿಂದ ಪಾರು ಮಾಡಿದವನು( "ಕಣ್ವಪುತ್ರಿಯ ದೊರೆಗೆ ಒಪ್ಪಿಸಿದಿರಿ/ಅಂದು ಶಾಪಗ್ರಸ್ತಬಲೆಗಿದಿರಾಗಿದ್ದ ಅನಾಹುತವ, ಉಂಗುರದಿ ತಪ್ಪಿಸಿದಿರಿ"). ಇಂಥದ್ದು ನಿಜಜೀವನದಲ್ಲೂ ಯಾಕಾಗಬಾರದು ಅನ್ನುವುದು ಮುಗ್ಧ ರೈತರ ನಿಲುವು. ಕಾಳಿದಾಸನ ಮೇಘದೂತ ಕಾವ್ಯದಲ್ಲಿ ಯಕ್ಷನೊಬ್ಬನು ಒಂದು ಮೋಡದ ಹತ್ತಿರ ಮಾತಾಡಿ, ದೂರದಲ್ಲಿ ಅಲಕಾನಗರಿಯಲ್ಲಿದ್ದ ಯಕ್ಷಿಯ ಕಡೆಗೆ ಆ ಮೋಡವನ್ನು ಸಂದೇಶವಾಹಕನಾಗಿ ಕಳಿಸಿಕೊಟ್ಟವನು. ಹಾಗಾಗಿ ಕವಿಯ ಮಾತನ್ನು ಮೋಡವೂ ಕೇಳೀತು ಅಂತ ಆ ರೈತರ ನಂಬುಗೆ !! ಮೋಡಕ್ಕೆ ಸ್ವಲ್ಪ influence ಮಾಡಿಸಿ, ದಾರಿಯಲ್ಲಿ ನಮ್ಮ ಹೊಲಗಳಲ್ಲಿ ಬಾಯಾರಿ ಒಣಗಿನಿಂತ ಪೈರಿಗೆ ನೀರು ಸುರಿಸಲು ಹೇಳ್ತೀರಾ" ಅಂತ ರೈತರು ಕೋರಿಕೊಳ್ಳುವಲ್ಲಿಗೆ ಎಕ್ಕುಂಡಿಯವರ ಕವನ ನಿಲ್ಲುತ್ತದೆ. ಎಲ್ ಕಾದಂಬರಿಯ ನಾಯಕನಿಗೆ ಈ ಕವಿತೆ ಇಷ್ಟವಾಗುತ್ತಿತ್ತೆಂದು ಕಾಣುತ್ತದೆ. ನೇಮಿಚಂದ್ರನು ಬರೆದ, ಕಪಿ ಸಂತತಿಯು ಕಡಲಿನಲ್ಲಿ ಸೇತುವೆ ಕಟ್ಟಿತೋ ಬಿಟ್ಟಿತೋ ಗೊತ್ತಿಲ್ಲ, ಕವಿಯಂತೂ ತನ್ನ ಕಾವ್ಯಬಂಧದಲ್ಲಿ ಅದನ್ನು ಕಟ್ಟಿಬಿಟ್ಟಿದ್ದಾನೆ(ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ..... ಕವಿಗಳ್‌ ಕೃತಿಬಂಧದೊಳಲ್ತೆ ಕಟ್ಟಿದರ್‌) ಎಂಬ ಸಾಲನ್ನು ಎಲ್ ಕಾದಂಬರಿಯ ಲಕ್ಷ್ಮಣ ಒಪ್ಪುತ್ತಾನೋ ಬಿಡುತ್ತಾನೋ ಗೊತ್ತಿಲ್ಲ. ಜೀವನ ಕಲೆಯನ್ನು ಅನುಸರಿಸುತ್ತದೆಯೇ, ಕಲೆ ಜೀವನವನ್ನೋ ಎನ್ನುವ ಪ್ರಶ್ನೆಗೆ ವುಡಿ ಅಲನ್ ಒಂದು ತಮಾಷೆಯ ಉತ್ತರ ಕೊಟ್ಟಿದ್ದಾನೆ : 'Life doesn't imitate art, it imitates bad television.'
ಹರೀಶ್ ಕೇರ ಅವರು ಗುರುತಿಸಿದಂತೆ "ಕವಿ ನಿಜಕ್ಕೂ ತನ್ನನ್ನೇ ಮಥಿಸಿಕೊಳ್ಳಲು ಹೊರಟರೆ ಏನಾಗುತ್ತದೆ?" ಎಂಬುದನ್ನು ಹೇಳುವ ಕಾದಂಬರಿಯಿದು. ಜೋಗಿಯವರು ಬರೆಯುವವರ ಸಂಕಟಗಳನ್ನು ತಮಗೇ ವಿಶಿಷ್ಟವಾದ witty ಶೈಲಿಗೆ ವಿಷಾದ, ಉತ್ಕಟತೆ, ವ್ಯಥೆಗಳಲ್ಲಿ ಅದ್ದಿ ಹೇಳಿರುವ ಕಥೆಯಿದು. ಇಂಗ್ಲೀಷಿನಲ್ಲಿ ಹೇಳುವಂತೆ ಜೋಗಿ ಮೀಟ್ಸ್ ಎಂ ವ್ಯಾಸ, ಚಿತ್ತಾಲ and ಖಾಸನೀಸ ಅಂತಲೂ ಹೇಳಬಹುದು. ಕಾಡುವುದು ಖಚಿತ.

Kavaludaari movie

Watched Kavaludaari last Saturday. It wasn't as good as GBSM and it wasn't what I expected it to be. It Still was intriguing and pretty darn good. Good as in slowly sinking into the world of a novel or sitting back and digging into a Slow burning TV series.
Regarding the genre: The interesting thing is that it is not structured like a typical suspense thriller. A suspense thriller would make every attempt to milk the suspense about what next and who the killer is going to be.
Every scene would try to build and increase the tension, it would also have 4-5 possible suspects and would place red herrings and all.
Peak point of the suspense thriller is when the killer's name and method are revealed. This movie isn't structured like that. That is probably why Hemanth called it as police drama instead of suspense thriller.
Tamil movie Ratsasan is an example of a traditionally structured suspense movie. I don't mean to suggest that one is superior to the other, just that one sticks to the rules of game and the other not so much.
Since the culprits are revealed half an hour before the end, it just goes on and on while we wait for the predictable finish (or shall we call it the commercial ending, an ending where the bad guy loses and the good prevails). Hence not sticking to the rules of the suspense genre. That's deliberately done I think.
I was a little disappointed with the way Ananth Nag's character was written. Clichéd, formulaic. He delivers a classy performance alright, but wasn't his potential wasted? Couldn't his character have been more complex, nuanced and therefore more fascinating? Writing didn't take him to the level he is capable of going. It was like hiring Elon musk to run TCS. He will do good there but he is meant to do something greater.
Some things that were wow for me: That scene where Achyuth scolds that MLA candidate at night, only in climax do we get to know what actually was going on. And that scene when the goons approach Ananth's house and he keeps that cop aagidda photo - superb build up without even uttering a word of build up. Khaki dialogue and the climactic Holi scene worked well by the way.
A film worth watching.

Fun at Amazon

Amazon can be a funny place. Here is a compilation of some hilarious stuff from their review and Q&A section.
SanDisk Ultra Dual Pen Drive:
Q: Can it be used for storage purpose?
Ans: No. It's only used for hunting rabbits.
Wakefit Memory Foam Mattress:
Q: Does this come with bed-frame too or is it just the mattress? The picture shows both?
Ans: Does it come with house too? It shows walls in the background
Shure Sound Isolating Earphones (Prices from Rs 119,999.00)
Question: What are the cables and connectors provided as Standard?
Answer: R u gonna buy this??
Reviews:
- Totally recommended....these are simply magical, just put these on...no need to connect the headphones to any source device, and you just think of a song and it start playing . What a sound quality, although had to sell of my car, but totally worth it, guys if there are any more products coming up in a similar or a higher price range, do let me know. I just realized I had two kidneys, don't need the second one.
- Just added it to CART, can't tell you, how much my self-esteem got boosted!
- I robbed a bank to buy this one.....now listening to songs in jail, a must have headphones
- I sold my laptop, iPod, TV, phone and my cochlea to buy this. The problem now is I don't have any device and the organ to try it out now.
Uranium Ore(bottle) by Images SI
Q: If I opt for air mail does it get delivered by Amazon Prime Air or CIA drones?
Ans: No sir, just give us your coordinates and we will deliver it via intercontinental missile in less than an hour, guaranteed speed.
Reviews:
- I got a free cat in the box with this purchase but I'm not sure if I should open it to see if the cat is ok.
- I purchased this product 4.47 Billion Years ago and when I opened it today, it was half empty.
- This is NOT, repeat, NOT a woman from the Ukraine. Very disappointed but can only blame myself. Please read description when sober.
How to Avoid Huge Ships(Book)
Review: Read this book before going on vacation and I couldn't find my cruise liner in the port. Vacation ruined.
---------------------------------------------------------------------------
Lastly, reviews of a book that had the leftists excited:
At first, I was skeptical. It seemed difficult to believe a cogent argument could be made in such a short tome. As I read, however, I become more and more engrossed in the text. The prose is elegant and to-the-point. There is very little fluff in the language, and every word is chosen very carefully. By the end, I was fully convinced. This author can definitely convey his ideas fully and articulately.
Best book I ever read. Once I started I couldn’t put it down until I finished. Straight to the point no nonsense literature.
Thinking as to what exactly is so funny about these 2 reviews? Here is the thing. Title of the book is: “Why Socialism Works”. And the entire book has just 2 words: “It doesn’t”
Share your favorite ones too

ಕುಮಾರವ್ಯಾಸನ ಉದ್ಯೋಗ ಪರ್ವ

ಇದನ್ನೊಂದು ಲೇಖನವೆಂದು ಬರೆದದ್ದಲ್ಲ, ಋತುಮಾನ ಸೈಟಿಗೆ, ಕಂಚಿನ ಕಂಠದ ಚಂದ್ರಶೇಖರ ಕೆದಿಲಾಯರು ಮಾಡಿಕೊಟ್ಟ ಗಮಕವಾಚನಕ್ಕೆ ಪೀಠಿಕೆಯಾಗಿ, ಸ್ವಲ್ಪ ಅರ್ಜೆಂಟಿನಲ್ಲೇ ಬರೆದಿದ್ದ ಪುಟ್ಟ ಟಿಪ್ಪಣಿ :
ಕರ್ಣಭೇದನವು ಹಲವು ಕಾರಣಗಳಿಗೆ ಪ್ರಸಿದ್ದವಾದ ಪ್ರಸಂಗ. ಯಕ್ಷಗಾನದಲ್ಲಿಯೂ, ಯಕ್ಷಗಾನ ತಾಳಮದ್ದಳೆಯಾಗಿಯೂ ಹೆಸರು ಮಾಡಿರುವ ಪ್ರಸಂಗವಿದು . ಕುಮಾರವ್ಯಾಸನ ಉದ್ಯೋಗಪರ್ವದಲ್ಲಿ, ಹತ್ತನೇ ಸಂಧಿಯಲ್ಲಿ ಇದು ಬರುತ್ತದೆ. ಕೃಷ್ಣನ ರಾಜಕೀಯದ ಪಟ್ಟುಗಳು, ಲಾಭ ಕುದುರಿಸಲಿಕ್ಕೆ ಹೊರಟ Corporate management ಅನ್ನು ಹೋಲಬಹುದಾದ ಸಮಾಲೋಚನೆಯ ಶೈಲಿ, ಕರ್ಣನನ್ನು ಭಾವನೆಯ ಬಲೆಯಲ್ಲಿ ಬಂಧಿಸಿ ಅವನ ಸ್ವಾಮಿನಿಷ್ಠೆಯನ್ನು ಪರೀಕ್ಷಿಸುವುದು ಎಲ್ಲ ಅತ್ಯಂತ ನಾಟಕೀಯವಾಗಿದೆ. ಸಂಧಾನಕ್ಕೆಂದು ಹೋಗಿದ್ದ ಕೃಷ್ಣ, ಕೌರವನಿಂದ ರಣದ ವೀಳ್ಯ ಪಡೆದು, ಹಸ್ತಿನಾವತಿಯ ರಾಜಸಭೆಯಿಂದ ಹೊರನಡೆದ ಮೇಲೆ ಘಟಿಸುವ ಘಟನೆಯಿದು. ಕರ್ಣನನ್ನು ಏಕಾಂತಕ್ಕೆ ಕರೆದುಕೊಂಡುಹೋಗಿ, ಅವನ ಹುಟ್ಟಿನ ವಿವರಗಳನ್ನು ಅವನಿಗೆ ತಿಳಿಸಿ, ಅವನನ್ನು ಒಲಿಸಿಕೊಳ್ಳುವ, ಯುದ್ಧವನ್ನೇ ಮಾಡದೆ ಸೋಲಿಸುವ ಪ್ರಯತ್ನವೇ ಈ ಪ್ರಸಂಗದ ತಿರುಳು.

ಕುಮಾರವ್ಯಾಸನ ಕೃಷ್ಣನಂತೂ ನುರಿತ ಮನೋವಿಜ್ಞಾನಿಯಂತೆ, ಪಳಗಿದ ಸೇಲ್ಸ್ ಮ್ಯಾನ್ ಒಬ್ಬನಂತೆ ಆಕರ್ಷಕವಾದ ಮಾತು, ನಡೆಗಳ ಮೂಲಕ ಕರ್ಣನನ್ನು ಒಳಗೊಳಗೇ ಕುಸಿಯುವಂತೆ ಮಾಡುತ್ತಾನೆ. ಕುಮಾರವ್ಯಾಸನ ಕೃಷ್ಣನು, ಇನತನೂಜನ ಕೂಡೆ ಮೈದುನತನದ ಸರಸವನೆಸಗಿ ವಿಷಯ ಶುರುಮಾಡುತ್ತಾನೆ. (ಶತ್ರುಪಾಳಯದವನಾದ ಕರ್ಣ ಕುಂತಿಯ ಮಗನಾಗಿದ್ದದ್ದು ಇಷ್ಟು ದಿನ ನೆನಪಿಗೆ ಬರದೇ ಈಗ ಬರುತ್ತದೆ !) ಯಾದವ ಕುಲ ತಿಲಕನಾದ ಕೃಷ್ಣನು ಸೂತಪುತ್ರನಾದ ಕರ್ಣನನ್ನು ಬರಸೆಳೆದು, ತೊಡೆ ಸೋಂಕಿನಲಿ ಕುಳ್ಳಿರಿಸಿ ತಬ್ಬಿಬ್ಬಾಗಿಸುತ್ತಾನೆ. ಕೀರ್ತಿನಾಥ ಕುರ್ತಕೋಟಿಯವರ ಮಾತಿನಲ್ಲಿ ಹೇಳುವುದಾದರೆ : "ಕರ್ಣನ ಮನಃಸ್ಥಿತಿ ಹೇಗಿತ್ತೆಂದರೆ, ಯಾರಾದರೂ ಅವನಿಗೆ ಸೂತಪುತ್ರ ಎನ್ನಬೇಕು , ಆಗ ಸಿಟ್ಟಿನಿಂದ ಅವನ ಪರಾಕ್ರಮ ಹೆಚ್ಚಾಗಬೇಕು, ತಾನು ಸೂತಪುತ್ರ ಅಲ್ಲ ಅಂತ ತೋರಿಸಬೇಕು. ಅವನಿಗೆ ಯಾವಾಗಲೂ ತನ್ನ ಅಸ್ಮಿತೆಯ ಬಗ್ಗೆ ಎಚ್ಚರ. ಕೃಷ್ಟ ಅಂಥದ್ದೇನೂ ಮಾಡಲಿಲ್ಲ". ಬೈಯ್ಯದೆ, ಬಡಿಯದೆ, ಒಳ್ಳೆಯ ಮಾತುಗಳಲ್ಲಿ ಹೊಗಳಿ ಕೆಡವುವುದು ಅಂದರೆ ಇದೇ ತಾನೇ ! ಅಷ್ಟೇ ಅಲ್ಲ , ಅವನ ಕರದೊಳು ಕರತಳವನಿಕ್ಕಿ, ನಿನ್ನಯ ಕುಲವನರಿ, ವೃಥಾ ಸೇವಕತನದಲಿ ಇಹುದು ಉಚಿತವಲ್ಲ ಅಂತ ಅವನ ಹಿತೈಷಿಯಂತೆ ಮಾತಾಡುತ್ತಾನೆ, "ಇಷ್ಟು ಟ್ಯಾಲೆಂಟ್ ಇದ್ರೂ ನಿನಗೆ ಸರಿಯಾಗಿ salary hike ಯಾಕೆ ಆಗಿಲ್ಲ" ಎಂದು ಹಿತಚಿಂತನೆಗೆ ತೊಡಗುವ ಕಾರ್ಪೊರೇಟು recruiterನಂತೆ.

ಕರ್ಣ ಮನಸ್ಸು ಮಾಡಿದರೆ, ಕುರುಕ್ಷೇತ್ರದ ಯುದ್ಧವೇ ನಡೆಯುವುದಿಲ್ಲ. ಆಗ ಹಿರಿಯನಾದ ಕರ್ಣನಿಗೆ ಪಟ್ಟಕಟ್ಟಿ ಕೌರವ ಪಾಂಡವ ಮತ್ತಿತರರು ಒಟ್ಟಿಗೇ ಕೂತರೆ ಆ ಚಿತ್ರ ಹೇಗಿರುತ್ತದೆ? “ಎಡದ ಮೈಯಲಿ ಕೌರವೇಂದ್ರರ ಗಡಣ. ಬಲದಲಿ ಪಾಂಡುತನಯರ ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು ನಡುವೆ ನೀನೋಲಗದೊಳು !” ಅಂತ ಆಮಿಷ ಒಡ್ಡುತ್ತಾನೆ. ನೀನು ನಮ್ಮಲ್ಲೇ ಉಳಿದರೆ, ಈ ಸರ್ತಿ ಪ್ರಮೋಷನ್ ಗ್ಯಾರಂಟಿ ಎನ್ನುವವನಂತೆ. “ಒಪ್ಪುವ ಕಡುವಿಲಾಸವ ಬಿಸುಟು, ಕುರುಪತಿ ನುಡಿಸೆ,ಜೀಯ ಹಸಾದವೆಂಬುದು ಕಷ್ಟ ನಿನಗೆ !” ಅಂತ ಒಗ್ಗರಣೆ ಹಾಕುತ್ತಾನೆ.

ಈ ತಂತ್ರಗಾರಿಕೆಗೆ ಕರ್ಣನ ಕೊರಳ ಸೆರೆ ಹಿಗ್ಗುತ್ತದೆ, ದೃಗುಜಲ ಉರವಣಿಸುತ್ತದೆ, ಅವನು ಕಡುನೊಂದನು ಎನ್ನುತ್ತಾನೆ ಕವಿ. ಕರ್ಣನೇನು ಕೃಷ್ಣನ ಜಾಣ್ಮೆಯ ಅರಿವಾಗದಷ್ಟು ದಡ್ಡನಲ್ಲ. ಹೀಗಾಗಿ "ಭೇದದಲಿ ಹೊಕ್ಕಿರಿದನೋ ಮಧುಸೂದನನು", "ನೀನು ಕೌರವೇಂದ್ರನ ಕೊಂದೆ" ಅಂತೆಲ್ಲ ಹೇಳಿ ತಾನೇಕೆ ಕೌರವಪಕ್ಷವನ್ನು ತೊರೆಯಲಾರೆ ಅಂತ ಹೇಳುವುದನ್ನು ಕುಮಾರವ್ಯಾಸ ಸೊಗಸಾಗಿ ಚಿತ್ರಿಸಿದ್ದಾನೆ. ಕಡುಕಾವಲು ಇರುತ್ತಿದ್ದ ರಾಜರ ಅಂತಃಪುರಗಳಿಗೆ ಕಪಟದಿಂದ ಹೊಕ್ಕು ಇರಿಯುವ, ಕೊಲೆಯ ಪ್ರಯತ್ನಗಳನ್ನು ಮಾಡುವವರು ಕುಮಾರವ್ಯಾಸನ ಕಾಲದಲ್ಲಿ ಇದ್ದಿರಬೇಕು, ಆದರೆ ಇಲ್ಲಿ ಭೇದೋಪಾಯದಿಂದ ಹೊಕ್ಕದ್ದು ಮನಸ್ಸಿಗೆ, ಅದಕ್ಯಾವ ರಕ್ಷಣೆ ? ಇರಿದದ್ದು ಭಾವವನ್ನು, ಅದನ್ಯಾರು ಕಾಪಿಡುವವರು? "ಕೌರವೇಂದ್ರನ ಕೊಂದೆ" ಎಂಬ ಮಾತು ಎಷ್ಟು ಮಾರ್ಮಿಕ ನೋಡಿ, ಒಬ್ಬನ ಹುಟ್ಟಿನ ಗುಟ್ಟನ್ನು ಬಿಚ್ಚಿದರೆ ಮತ್ತೊಬ್ಬನನ್ನು ಕೊಂದಂತೆ ಆಗುತ್ತದೆ. ತನ್ನ ಜನ್ಮವೃತ್ತಾಂತ ಹೊರಗೆ ಬಂತು ಎನ್ನುವುದಕ್ಕಿಂತ ಕುರುಪತಿಗೆ ಕೇಡಾಯಿತಲ್ಲಾ ಅಂತ ಕರ್ಣ ಮರುಗುತ್ತಾನೆ

ಗಮಕವಾಚನ ಇಲ್ಲಿದೆ :
https://youtu.be/tqBQz8egQT8 

ನನ್ನ ಬಾಗಿಲು ತೆರೆಯೇ ಸೇಸಮ್ಮ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು Part 3

ನನ್ನ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು(Baagilu Tereye Sesamma - Sharath Bhat Seraje - Book reviews):

ವಿಷ್ಣು ಭಟ್, ಹೊಸ್ಮನೆ ಅವರು ನನ್ನ ಪುಸ್ತಕವನ್ನೋದಿ ಬರೆದಿರುವ ಸಾಲುಗಳು :
ಅಬ್ಬಾ! ವೈಚಾರಿಕ ಪ್ರಬಂಧಗಳನ್ನು ಹೀಗೂ ಬರೆಯಬಹುದೇ? ಎಂದು ಹುಬ್ಬೇರುವಂತೆ ಮಾಡುವ ಈ ಸೇಸಮ್ಮ ಬಾಗಿಲು ಹಾಕಿ ಕುಂತಿದ್ದಾದರೂ ಯಾಕೆ? ಎಂಬುದನ್ನು ತಿಳಿದುಕೊಳ್ಳಲು ಪುಸ್ತಕ ಓದಲೇ ಬೇಕು. ಶರತ್ ಭಟ್ ಸೇರಾಜೆಯವರ ಜ್ಞಾನ ಇಲ್ಲಿ ಹರಿದ ಬಗೆ ನದಿಯ ನೀರಿನಂತೆ. ಯಾಕೆಂದರೆ ನದಿಯ ನೀರು ಸಮುದ್ರದ ನೀರಿನಂತಲ್ಲ! ಸಮುದ್ರದ ನೀರಿಗೆ ಹೋಲಿಸಿದರೆ ನದಿಯ ನೀರು ಅಳತೆಯಲ್ಲಿ ಎಷ್ಟೂ ಅಲ್ಲದೇ ಇರಬಹುದು. ಆದರೆ ನದಿಯ ನೀರು ಹರಿಯುವಷ್ಟು ಪ್ರದೇಶಗಳನ್ನು ಸಮುದ್ರ ನೋಡುವುದೇ ಇಲ್ಲ. ನದಿಯ ನೀರು ಎಲ್ಲವುದರ ಮೇಲೂ ಹರಿದುಕೊಂಡು ಬರುತ್ತದೆ. ಮುಳ್ಳು, ಕಲ್ಲು, ಗಿಡ, ಮರ ಎಲ್ಲವನ್ನೂ ಸವರಿಕೊಂಡು ಸಾಗುತ್ತದೆ. ಕಂದಕಗಳಿಗೆ ಧುಮುಕುತ್ತದೆ. ಅಲ್ಲೊಂದು ಜಲಪಾತವಾಗಿ ರಂಜಿಸುತ್ತದೆ. ಕೆಲವೆಡೆ ವಿಶಾಲವಾಗಿ ಹರಡಿಕೊಂಡು, ಇನ್ನು ಕೆಲವೆಡೆ ಚಿಕ್ಕದಾಗಿ ಇರುವಷ್ಟೇ ದಾರಿಯಲ್ಲಿ ಹರಿಯುತ್ತದೆ. ನಿಧಾನವಾಗಿ ದಾರಿ ಮಾಡಿಕೊಳ್ಳುವ, ಎಲ್ಲ ಸೂಕ್ಷ್ಮಗಳನ್ನು ಹೊಕ್ಕು ಹೊರಬೀಳುವ ಜಾಣ್ಮೆ ಈ ನದಿಯ ನೀರಿಗಿದೆ. ಅಂತಹ ಹರಿವ ನದಿಯೇ ಈ ಪ್ರಬಂಧಗಳು. ಎಲ್ಲಾ ವಿಷಯಗಳನ್ನೂ ಒಂದೊಂದಾಗಿ ತೆರೆದಿಟ್ಟಿರುವ ಶರತ್ ಭಟ್ಟರು ನಮ್ಮೊಳಗಿನ ಪ್ರಶ್ನೆಯನ್ನು ತಾವೇ ಕೇಳುತ್ತ, ಉತ್ತರಿಸುತ್ತ ಕೊನೆಯಲ್ಲಿ ಹೊಸದೊಂದು ವೈಚಾರಿಕ ಲೋಕಕ್ಕೆ ನೇರವಾಗಿ ಎಳೆದು ಬಿಡುತ್ತಾರೆ. ಇದು ಅವರ ಶಕ್ತಿಯೋ ಯುಕ್ತಿಯೋ? ಎಂದು ಕೇಳಿದರೆ ಎರಡೂ ಸರಿಯಾದ ಉತ್ತರವೇ.

ಅಲೆ ಅಲೆ ಎನ್ನುತ್ತ ಕೊನೆಗೆ ನಮ್ಮ ತಲೆ, ತಲೆಹರಟೆಯ ತನಕ ಪೋಣಿಸಿಟ್ಟ ಅಕ್ಷರಗಳಲ್ಲಿ ಗಂಭೀರ ವಿಚಾರಗಳಿವೆ, ಹಾಸ್ಯವಿದೆ, ಜ್ಞಾನವಿದೆ, ಯೋಚನೆಗಳಿವೆ ಮತ್ತು ಓದುಗನ ತಲೆಯೊಳಗೇ ಓಡಾಡುವ ಯೋಚನಾಹುಳುಗಳೂ ಇವೆ! ಹದಿನೈದು ವಿಭಿನ್ನ ವಿಚಾರಗಳನ್ನು ಸೇಸಮ್ಮ ಹೊತ್ತು ತಂದಿದ್ದಾಳೆ. ಅವುಗಳನ್ನು ಓದಿ ನಗುವುದಕ್ಕಿದೆ, ನಾವು ಮಾಡುವ ತಪ್ಪುಗಳನ್ನೂ ಸರಿ ಪಡಿಸಿಕೊಳ್ಳುವುದಕ್ಕಿದೆ, ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವುದಕ್ಕಿದೆ, ಗಂಭೀರವಾದ ನಿರ್ಧಾರಕ್ಕೆ ಬರಬೇಕಾದ ವಿಷಯಗಳೂ ಇವೆ. ಇಷ್ಟೆಲ್ಲವನ್ನೂ ಹೇಗೆ? ಎಲ್ಲಿಂದ ತಂದಿರಿ? ಎಂಬ ಪ್ರಶ್ನೆಗೆ ಶರತ್ ಭಟ್ ಅವರೇ ಉತ್ತರಿಸಬೇಕು.

ಎಲ್ಲರೂ ಓದ ಬೇಕಾದ ತುಂಬಾ ಚಂದದ ಪುಸ್ತಕ. ಅಂಕಿತ ಪ್ರಕಾಶನಕ್ಕೂ ಅಂಕಿತ ಪ್ರತಿಭೆ ಮಾಲಿಕೆಯ ಸಂಕಲನಕಾರರಾದ ಜೋಗಿಯವರಿಗೂ ವಂದನೆಗಳು. ಶರತ್ ಭಟ್ಟರಿಗೆ ನಮೋನ್ನಮಹಃ||

ಪುಸ್ತಕದ ಮುಖಪುಟದಲ್ಲಿ ಬಾಗಿಲು ಹಾಕಿದೆ, ಕೆಲವು ಬೀಗಗಳೂ ಹಾಕಿಕೊಂಡಿವೆ. ಬಾಗಿಲು ತೆರೆಯೇ ಸೇಸಮ್ಮ ಎಂದು ಒಳಹೋಗುವವರು ಕೇಳುವುದಲ್ಲ, ಒಳಗಿದ್ದವರು ಕೇಳುವುದು. ಪುಸ್ತಕದ ಒಳಗೆ ಹೊಕ್ಕರೆ ಹೊರಬರಲು ಖಂಡಿತವಾಗಿಯೂ ಆ ಹದಿನೈದು ಬೀಗಳನ್ನು ತೆಗೆಯಲೇ ಬೇಕು. ಒಳಗೆ ಹೋಗಿ ನೋಡಿ!

ಒದುಗ ಇನ್ನೂ ಒಳಗೇ ಇದ್ದಾನೆ..ಬಾಗಿಲು ತೆರೆಯೇ ಸೇಸಮ್ಮ ಪ್ಲೀಸ್..
ಅಂಕಿತ ಪುಸ್ತಕ, ಗಾಂಧೀಬಜಾರಿನಲ್ಲಿ ಪುಸ್ತಕದ ಪ್ರತಿಗಳು ಸಿಗುತ್ತವೆ.
--------------------------------------------------------
ಅಜಿತ್ ಹೆಗ್ಡೆ ಹರೀಶಿ ಅವರ ಸಾಲುಗಳು
ಅಂಕಿತ ಪ್ರತಿಭೆ ಮಾಲಿಕೆ-5 ಅಡಿಯಲ್ಲಿ ಅದರ ಸಂಪಾದಕರಾದ ಜೋಗಿಯವರು ಶರತ್ ಭಟ್ಟರನ್ನು ಗುರುತಿಸಿ ಈ ಕೃತಿಯನ್ನು ಪ್ರಕಟಿಸಲು ಅನುವು ಮಾಡಿಕೊಟ್ಟಿದ್ದಾರೆ.ಶರತರ ಈ ಎಲ್ಲಾ ಹದಿನೈದು ಪ್ರಬಂಧಗಳು ಈ ಗೌರವಕ್ಕೆ ಅರ್ಹವಾಗಿವೆ.

ಈ ಲೇಖನಗಳನ್ನು ಓದಿದಾಗ ಅವರು ಅಪಾರವಾಗಿ ಓದಿಕೊಂಡವರು ಎಂಬುದೂ ಗೊತ್ತಾಗುತ್ತದೆ.ಬಳಸಿದ ಭಾಷೆ ಬಹಳ ಚೆನ್ನಾಗಿದೆ.ಅವರ ತರ್ಕ, ತಮಾಷೆ ಮತ್ತು ವಿಷಯವನ್ನು ವಿವರಿಸಲು ಕೊಡುವ ಉದಾಹರಣೆಗಳು ವಿಶಿಷ್ಟವಾಗಿವೆ.

ಗುರುತ್ವದ ಅಲೆ ಕುರಿತು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸಬಹುದು ಎಂದು ಸೇರಾಜೆ ತೋರಿಸಿಕೊಟ್ಟಿದ್ದಾರೆ. ಜೊತೆಗೆ ಪಂಚಿಂಗ್ ಡೈಲಾಗ್ಸ್ ಇವೆ. ಇವು ನಮ್ಮಲ್ಲಿ ನಗುವನ್ನು ಉಕ್ಕಿಸುತ್ತವೆ.

ಅವರು ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಲಿ ಕರೆಯಿತು ಕವಿತೆಯ ಬಗ್ಗೆ ಸಾಹಿತ್ಯದ ವಿದ್ಯಾರ್ಥಿಯಂತೆ ಚೆಂದವಾಗಿ ವರ್ಣಿಸಿದ್ದಾರೆ.ಬಿಎಂಶ್ರೀಯಿಂದ ಬರ್ನ್ಸ್ ಎಂಬ ಕವಿಯವರೆಗೆ ಉಲ್ಲೇಖ ಮಾಡಿದ್ದಾರೆ.

ಥಟ್ ಅಂತ ರಾಷ್ಟ್ರಗಳ ಸಂಖ್ಯೆ ಬಗ್ಗೆ ಶರತ್ ಹೇಳಿಬಿಡುತ್ತಾರೆ.ದೇಶಗಳನ್ನೂ, ಅವುಗಳ ಗುಟ್ಟುಗಳನ್ನು, ಜೋಕುಗಳನ್ನು ಕ್ರ್ಯಾಕ್ ಮಾಡುತ್ತಾ ಬೆಡ್ ರೂಂವರೆಗೂ ಬರುತ್ತಾರೆ.

ಅರ್ಥವೆಂಬ ಊಸರವಳ್ಳಿಯಲ್ಲಿ ಶಬ್ದದ ಅನುಕರಣೆ ಮಾಡಿ ಬದಲಾದ ಅರ್ಥಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ರೀಸಸ್ ( ಬಿಡುವು ) ಶಬ್ದ ಮೂತ್ರ ವಿಸರ್ಜನೆಗೆ ಬಳಕೆಯಾಗಿದ್ದು. ಆಯಿಲ್, ಸಕತ್, ಪ್ರವೀಣ ಮುಂತಾದ ಶಬ್ದಗಳ ಬಗ್ಗೆ ಇಲ್ಲಿ ಭಟ್ಟರು ಹೇಳಿದ್ದಾರೆ.

ಬಾಗಿಲು ತೆರೆಯೇ ಸೇಸಮ್ಮ - ನಾವು ಇಂದು ಸೋಷಿಯಲ್ ಮೀಡಿಯಾಗಳಲ್ಲಿ ಬಳಸುವ ಪಾಸ್ವರ್ಡ್ ಕುರಿತು ಮಾಹಿತಿ ನೀಡುವ ಮತ್ತು ಹ್ಯಾಕರ್ ಗಳ ವಿವರ ನೀಡುವ ಪ್ರಬಂಧ.
ಇದು ನಿಮಗೆ ಗೂಗಲ್ ಮಾಡಿದರೂ ಸಿಗಬಹುದು ಆದರೆ ಇಲ್ಲಿ ಅವರು ವಿವರಿಸಿದರ ಶೈಲಿ ಇದೆಯಲ್ಲ ಇದು ವಿಭಿನ್ನ ಮತ್ತು ಸರಳವಾಗಿದೆ.

ಮರ್ಯಾದೆ ತೆಗೆಯುವ ಕಲೆಯನ್ನು ಓದುತ್ತಾ ನೋಡಬಹುದು ಮತ್ತು ಬೆಚ್ಚಿಬೀಳಬಹುದು.
ಇಂಗ್ಲಿಷ್ ಮಾಧ್ಯಮದ ಕುರಿತು ಅವರ ನಿಲುವನ್ನು ಒಪ್ಪದಿರುವುದು ಕಷ್ಟ. ಇಂಗ್ಲೀಷ್ ಭಾಷೆ ದೋಸೆಯಾದರೆ ಮಾತೃಭಾಷೆ ಕನ್ನಡ ಊಟ ಎಂಬ ಸೋದಾಹರಣೆ ಚೆನ್ನಾಗಿದೆ.

ಲೆಕ್ಕ ಹಾಕಿ ಸುಳ್ಳು ಹೇಳಿ - ಈ ಕ್ಷಣದ ಕಟು ವಾಸ್ತವವನ್ನು ಅನಾವರಣ ಮಾಡುವ ಲೇಖನ.
ಸಿನೆಮಾ ಮತ್ತು ಕಳ್ಳತನ ಕುರಿತು ಅವರ ವಿಚಾರ, ನಮ್ಮ ತಲೆಗೆ ಕೈ ಹಾಕಿ ಹೂಂಗುಟ್ಟುವಂತೆ ಮಾಡುತ್ತದೆ.ವಿಮರ್ಶಕರಿಗೆ ಶಾಲಿನಲ್ಲಿ ಕಲ್ಲು ಹಾಕಿ ತಟ್ಟಿದ್ದಾರೆ.

ಕಾರಂತಜ್ಜನ ಕಥೆಗಳು - ಇದರಲ್ಲಿ ಕಾರಂತರ ಕುರಿತು ಅಪರೂಪದ ವಿಷಯಗಳಿವೆ.ಬಲಿ ಚಕ್ರವರ್ತಿಯ ತ್ರಿವಿಕ್ರಮ ದಲ್ಲಿ ಮಿಖಾಯಿಲ್ ತಾಲ್ ಎಂಬ ಚೆಸ್ ಆಟಗಾರ ಬರುತ್ತಾನೆ.ಅದನ್ನು ಓದುವುದೇ ಒಂದು ಪುಳಕ.

ನಮ್ಮ ತಲೆಯೂ ನಮ್ಮ ಹರೆಟೆಯೂ; ವೈಚಾರಿಕ ಲಲಿತ ಪ್ರಬಂಧ ಬರೆಯಲು ಆಸಕ್ತಿ ಇರುವವರು ಅಧ್ಯಯನ ಮಾಡುವಂತಹ ಒಂದು ಲೇಖನ.

ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಒಮ್ಮೆ ಓದಲೇಬೇಕಾದ ಲೇಖನಗಳ ಗುಚ್ಛ ಶರತರ ಈ ಕೃತಿ ಎಂದು ಬೇಷರತ್ತಾಗಿ ಹೇಳುವೆ.
-------------------------------------------------------
ಹಿರಿಯರೂ,ಸಂವೇದನಾಶೀಲರೂ ಆದ ಪಿ ಎಸ್ ನಾಯಕ್ ಸರ್ ನನ್ನ ಪುಸ್ತಕವನ್ನೋದಿ, ಯಕ್ಷಗಾನ ತಾಳಮದ್ದಳೆಯ ಹಂಚಿಕೆ, ಚರ್ಚೆಗಳಿಗಾಗಿ ಸುಧಾಕರ ಜೈನರು ಹುಟ್ಟುಹಾಕಿದ ಅರ್ಥಾಂಬುಧಿ ಎನ್ನುವ ಗ್ರೂಪಿನಲ್ಲಿ ಬರೆದದ್ದು:
ಇದೊಂದು ವೈಚಾರಿಕ ಲಲಿತ ಪ್ರಬಂಧಗಳ ಸಂಕಲನ. ಲೇಖಕರು ಶ್ರೀಯುತ ಶರತ್ ಸೇರಾಜೆ, ನಮ್ಮ ಬಳಗದ ಬಂಧು.

ಸೇರಾಜೆ ಎಂದಾಗ ಎರಡರ್ಥದಲ್ಲಿ ಸ್ಪೂರ್ತಿದಾಯಕ- ಒಂದು, ಸೀತಾರಾಮಯ್ಯರಂತಹ ಮೇರು ಯಕ್ಷ ಕಲಾವಿದ, ಲೇಖಕ, ಚಿಂತಕರಿಗೆ ಜನ್ಮ ನೀಡಿದ ದೇರಾಜೆ(ಚೊಕ್ಕಾಡಿ)ಯೊಂದಿಗೆ ಹೊಂದಿದ ಧ್ವನಿ ಸಾಮ್ಯತೆ. ಇನ್ನೊಂದು, ಸೇರಾಜೆ ಮನೆತನ ಕುರಿಯ ವಿಟ್ಠಲ ಶಾಸ್ತ್ರಿಯವರ ಕುಟುಂಬಕ್ಕೂ ಪದ್ಯಾಣ ಕುಟುಂಬಕ್ಕೂ ಬೆಸೆದ ಯಕ್ಷಗಾನೀಯ ಬಾಂಧವ್ಯ.

ಸುಮಾರು ಒಂದು ವರ್ಷದ ಹಿಂದೆ(ಈ ಪುಸ್ತಕ ಬಿಡುಗಡೆಯ ಮೊದಲು) ಶರತ್ ಇವರ "ಸರಿಗನ್ನಡಂ ಗೆಲ್ಗೆ" ಲೇಖನ(ಸಂಖ್ಯೆ ೧೨-ಪುಟ ೯೭) ಇದೇ ಬಳಗದಲ್ಲಿ ಪ್ರಸಾರವಾಗಿತ್ತು. ಕನ್ನಡ ಭಾಷೆಯ ಬಳಕೆಯಲ್ಲಿ ಕಂಡುಬರುವ ತಪ್ಪುಗಳನ್ನು ಕ್ರೋಡೀಕರಿಸಿ ಅವುಗಳ ಸರಿಯಾದ ರೂಪವನ್ನು ತಿಳಿಸುವ ಒಂದು ಸುಂದರ ಲೇಖನ.

ಶರತ್ ರ ಲೇಖನಿಯ ಮೊನಚು, ಸರಿಯನ್ನು ಸರಿಯೆಂದು ಹೇಳುವ ಛಾತಿ, ರೇಷ್ಮೆಯಂತೆ ನುಣುಪಾದ ಶೈಲಿ, ಎಲ್ಲವೂ ನನ್ನನ್ನು ಸೆರೆಹಿಡಿದಿದ್ದವು.

ಇಂತಹ ೧೪ (ಒಟ್ಟಿಗೆ ೧೫) ಲೇಖನಗಳನ್ನೊಳಗೊಂಡ ೧೩೨ ಪುಟಗಳ "ಬಾಗಿಲು ತೆರೆಯೇ ಸೇಸಮ್ಮ" ಬಿಡುಗಡೆಗೆ ಸಜ್ಜಾಗಿದೆ ಎನ್ನುವದನ್ನು ಅವರಿಂದ ತಿಳಿದ ಕೂಡಲೇ ನನಗಾಗಿ ಒಂದು ಪ್ರತಿಯನ್ನು ಕಳುಹಿಸುವಂತೆ ಬಿನ್ನವಿಸಲಾಗಿ ಎರಡು ತಿಂಗಳ ಹಿಂದೆ ನನ್ನ ಮನೆಗೆ ತನ್ನ ಚೊಚ್ಚಲ(?) ಕೃತಿಯನ್ನು ತಪ್ಪದೆ ಕಳುಹಿಸಿದ ಶರತ್ ಗೆ ನನ್ನ ಬೇಶರತ್ ಅಭಿನಂದನೆ(ಸಂಪಾದಕ ಜೋಗಿಯವರನ್ನು ಉದ್ಧರಿಸಿ).

ಬೀಸ ಬೀಸ ಓದಿರಿ ಎಂದು ಕಳುಹಿಸಿದ ಪುಸ್ತಕ ನನ್ನೂರು ಮುಟ್ಟುವಾಗ ನಾನು ಅವರ ಊರಿಗೆ ಹೋಗಬೇಕೇ? Don't bite more than what you can chew ಎನ್ನುವಂತೆ, ಅರೆಯುವಷ್ಟನ್ನೇ ಅಗೆಯುವ ಜಾಯಮಾನದ ನನಗೆ ಇಡೀ ಪುಸ್ತಕವನ್ನು ಓದಲು ಎರಡು ವಾರಗಳೇ ಬೇಕಾದವು.

ಇಷ್ಟಕ್ಕೂ ಯಾರೀ ಸೇಸಮ್ಮ? ಕದವ ತಟ್ಟುವವರಾರು? ಯಾಕಾಗಿ? ಯಾರಿಗಾಗಿ?

ಕುತೂಹಲವೇ ಕಾರಣವಾಗಿ, ನಾನು ಓದಿದ ಮೊದಲ ಲೇಖನ ಪುಸ್ತಕದ ಶೀರ್ಷಿಕೆಯ "ಬಾಗಿಲು ತೆರೆಯೇ ಸೇಸಮ್ಮ"(ಸಂಖ್ಯೆ ೫, ಪುಟ ೪೮). ಪ್ರವೃತ್ತಿಯಲ್ಲಿ ಲೇಖಕರಾದರೂ ವೃತ್ತಿಯಲ್ಲಿ ಒಬ್ಬ ಮಾಹಿತಿತಂತ್ರಜ್ಞಾನ(Information Technology) ಹೊಂದಿರುವವರು ಎನ್ನುವುದು ಈ ಲೇಖನದಲ್ಲಿ ನಿಚ್ಚಳವಾಗುತ್ತದೆ.

"ಕಂಪ್ಯೂಟರ್ ಜ್ಞಾನವೇ ಜ್ಞಾನ" ಎನ್ನುವ ಯುಗದಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡುಗಳ ಪಿನ್ನುಗಳು, ಫೇಸ್ ಬುಕ್, ಈ ಮೈಲ್ ಗಳಲ್ಲಿ ಬಳಸಬೇಕಾದ "ಗುಪ್ತ ಸಂಖ್ಯೆ(password)" ಎನ್ನುವ ರಹಸ್ಯಮಂತ್ರಗಳ ಬಳಕೆಯಲ್ಲಿರಬೇಕಾದ ಎಚ್ಚರ, ತಪ್ಪಿದಲ್ಲಿ ಆಗುವ ಅನಾಹೂತ ಅನಾಹುತ.... ಎಲ್ಲವನ್ನೂ ಎಳೆ ಎಳೆಯಾಗಿ ಎಳೆದುತಂದಿದ್ದಾರೆ.

ಲೇಖಕರ ಅಧ್ಯಯನಶೀಲತೆಯನ್ನು ಮನಂಬುಗಬೇಕಾದರೆ "ಅಲೆ ಅಲೆ ಅಲೆ ಗುರುತ್ವದ ಅಲೆಯೋ??!" ; "ಲೆಕ್ಕ ಹಾಕಿ ಸುಳ್ಳು ಹೇಳಿ"; ಲೇಖನಗಳನ್ನೋ, ಸಾಹಿತ್ಯ(ಕಲೆ)ದ bent of mind ತಿಳಿಯಲು "ಮೋಹನ ಮುರಲಿ ನಾನು ಕಂಡಂತೆ ನನಗೆ ಕಂಡಷ್ಟು"; ಭಾಷಾಪ್ರಯೋಗದ ವಿಚಾರದಲ್ಲಿ "ಅರ್ಥವೆಂಬ ಊಸರವಳ್ಳಿ"; "ಸರಿಗನ್ನಡಂ ಗೆಲ್ಗೆ" ....

ವೈವಿಧ್ಯಮಯ ಮತ್ತು ವೈಶಿಷ್ಟ್ಯಪೂರ್ಣ.

೧೫ ಲೇಖನಗಳಲ್ಲಿ ಎದ್ದುಕಾಣುವುದು ಸರಳ ಶೈಲಿ ಮತ್ತು ನಿರೂಪಣೆ. Shakespeare ನ ಭಾಷೆಯ ಕಬ್ಬಿಣದ ಕಡಲೆ, ರನ್ನ ಪಂಪರ ಪೆಂಪು ಸೊಂಪುಗಳಿಂದ ಮಾರುದೂರ.
ಜೋಗಿಯವರ ಮುನ್ನುಡಿ, ಗಣೇಶ್ ಭಟ್ ನೆಲಮಾಂವ್ ಇವರ ಬೆನ್ನುಡಿ ತಿಲಕವಿಟ್ಟಂತಿವೆ.
ಅಂದವಾದ ಮುದ್ರಣ, ಕೈಗೆಟಕುವ ಬೆಲೆ( ರೂಪಾಯಿ ೧೨೦/=) ಗ್ರಂಥವನ್ನೂ ಗ್ರಂಥಕರ್ತರನ್ನೂ ಇನ್ನೂ ಹತ್ತಿರವಾಗಿಸಿವೆ.
ಇದು ಹೊತ್ತಗೆಯ ಹೊತ್ತು. ಇನ್ನೂ ಏಕೆ ಹೊತ್ತು? ನೀವೂ ಓದಿ
--------------------------------------------------------------------
Chandrashekhar Madabhavi ಅವರ ಸಾಲುಗಳು
ಇದರ ಸಂಪಾದಕರು ಜೋಗಿ, ಪುಸ್ತಕ ಚೆನ್ನಾಗಿರುತ್ತೆ ಅನ್ನೋದರಲ್ಲಿ ಎರಡು ಮಾತಿಲ್ಲ

ಅಂಕಿತ ಪುಸ್ತಕ ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ ಅವರಿಗೆ ಚಪ್ಪಾಳೆ

ತುಂಬಾ ಒಳ್ಳೆಯ ಲೇಖನಗಳ ಪುಸ್ತಕ.
ಇದರಲ್ಲಿ ಭೂತ, ವರ್ತಮಾನ ಮತ್ತು ಭವಿಷ್ಯದ ಲೇಖನಗಳಿವೆ. ಲೇಖನಗಳ ಪ್ರುಟ್ ಸಲಾಡ್ ಅಥವಾ ಹೂಗುಚ್ಚ ಎನ್ನಬಹುದು

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಲೇಖಕರು ಹಲವು ವಿಷಯಗಳ ಬಗ್ಗೆ ಲೇಖಗಳನ್ನು ಬರೆದಿದ್ದಾರೆ

ಕಠಿಣ ವಿಷಯಗಳನ್ನು ಸರಳೀಕರಿಸಿ ಸಾಮಾನ್ಯರಿಗೆ ಅರ್ಥವಾಗುವಂತೆ ಹೇಗೆ ಬರೆಯಬೇಕು ಎಂದು ತಿಳಿದುಕೊಳ್ಳಬೇಕು ಎಂದರೆ ಇದನ್ನು ಓದಲೇಬೇಕು.

ನನಗಂತೂ ಲೇಖನಗಳನ್ನು ಹೇಗೆ ಬರೆಯಬೇಕು ಎನ್ನುವುದರ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿತು

ಲೇಖಕರು ಪತ್ರಿಕೆಗಳಲ್ಲಿ ಕಾಲಂ ಬರೆಯಬಲ್ಲರು. ಅವರಿಗಾಗಲೆ ಕಾಲಂ ಬರೀತಾ ಇಲ್ಲ ಅಂದ್ರೆ , ಬರೆಯಲಿ.
ನೀವೂ ಈ ಪುಸ್ತಕವನ್ನು ಕೊಂಡು ಓದಿ

--------------------------------------
ಸುಹಾನ್ ಶೇಕ್ ಅವರು ಹೇಳಿದ್ದು:
#ಕೃತಿ: ಬಾಗಿಲು ತೆರೆಯೇ ಸೇಸಮ್ಮ
#ಲೇಖಕರು: Sharath Bhat Seraje
#ಓದಿ ಮುಗಿಸಿದ ಅವಧಿ : ಅಂದಾಜು 3 ಗಂಟೆ ಮೂವತ್ತು ನಿಮಿಷ
#ಪುಟಗಳು: 132

ಬಾಗಿಲು ತೆರಯೇ ಸೇಸಮ್ಮ. ಪುಟಗಳನ್ನು ತಿರುವುತ್ತಾ ಹೋದಂತೆ ಲೇಖಕರು ತನ್ನ ಪ್ರಬಂಧಗಳಲ್ಲಿ ತಿಳಿ ಹಾಸ್ಯವನ್ನು ಬೆರೆಸಿ ಉದಾಹರಣೆಯನ್ನು ಕೊಡುತ್ತಾ ಒಂದೊಂದೆ ಮಾಹಿತಿಯನ್ನು ಓದುಗರಿಗೆ ಉಣಬಡಿಸಿದ್ದಾರೆ.ಸೋನಿಯಾ ಗಾಂಧಿಯಿಂದಿಡಿದು ಟ್ರಂಪ್ ,ರಜನಿಕಾಂತ್,ಕ್ರಿಕೆಟ್ ,ಚೆಸ್ ಹೀಗೆ ಎಲ್ಲದರಲ್ಲಿ ವ್ಯಂಗ್ಯವಾಗಿ ಬರಹದ ಶೈಲಿಯನ್ನು ಬಣಿಸಿ ಓದುಗರ ತಲೆಗೆ ಹೊಕ್ಕುವಾಗೆ ಮಾಡಿರೋದು ಶರತ್ ರವರ ಸ್ಪೆಶಲಿಟಿ.

ಅಂದಹಾಗೆ ಗಣಿತವನ್ನು ಕಬ್ಬಿಣದ ಕಡಲೆಕಾಯಿ ಅನ್ನಬೇಡಿ‌.ಆ ಕಡಲೆಕಾಯಿಯನ್ನೂ ನಿಧಾನವಾಗಿ ಅಗೆದು ತಿನ್ನುವ ವಿಧಾನವನ್ನು ಹೇಳಿದ್ದಾರೆ. (ಸುಮ್ಮನೆ ಓದಿ, ಗಣಿತದ ತರ್ಕ ತಿಳಿದುಕೊಂಡ್ರೆ ನಿಮಗೆ ಜೀರ್ಣಿಸಿಕೊಳ್ಳಲಾಗದು) ಉದಾಹರಣೆಗೆಗಳ ಪಟ್ಟಿ ಒಂದಿಷ್ಟು ಕಮ್ಮಿಯಾದ್ರೆ ಒಳಿತು ಸರ್.

ಇನ್ನುಳಿದಂತೆ ವ್ಯಾಕರಣ ಬೋಧಿಸುವ ಮೇಸ್ಟ್ರಾಗಿ,ವೈಜ್ಞಾನಿಕ ಮತ್ತು ತಾಂತ್ರಿಕ ವಿಷಯಗಳನ್ನು ಬೋರಾಗಿಸದೆ ವ್ಯಂಗ್ಯವಾಗಿ ಉದಾಹರಣೆಗಳನ್ನು ಕೊಟ್ಟು ವಿಶ್ಲೇಷಣೆ ಮಾಡುವ ಶರತ್ ಭಟ್ ಸೇರಾಜೆ ರವರ ಬರಹ ಫೇಸ್ಬುಕ್ ಗೋಡೆಗಳಿಂದ ಎರವಲಾಗಿದ್ರು ನನ್ನಗಿದ್ದು, ಹೊಸ ಓದಿನ‌ ಅನುಭವ.
-----------------------------------------------------------------

Supreetha Venkat
 :

ಈ ಪುಸ್ತಕ ಬಿಡುಗಡೆಯಾಗಿ ಒಂದು ವರ್ಷವಾಯಿತು, ನನ್ನ ಪುಸ್ತಕ ಭಂಡಾರಕ್ಕೆ ಸೇರ್ಪಡೆಯಾಗಿ ಕೆಲವು ತಿಂಗಳುಗಳಾಯಿತು, ಆದರೆ ಓದಲು ಈಗ ಕಾಲ ಕೂಡಿ ಬಂತು! ಶರತ್ ಭಟ್ ಅವರ ಕೆಲವು ಬರಹಗಳನ್ನು ಅವರ ಫೇಸ್ಬುಕ್ ಪ್ರೊಫೈಲ್ ಅಲ್ಲಿ ಓದಿದ್ದೆ, ಸಣ್ಣದ್ದನ್ನೂ ಸವಿಸ್ತಾರವಾಗಿ ಬರೆಯುವ ಅವರು, ಅವರ ಪುಸ್ತಕ ಬಿಡುಗಡೆಯಾದ ಸಂದರ್ಭದಲ್ಲಿ ಅದನ್ನು ಓದುವ ಕುತೂಹಲ ತನ್ನಿಂದಾತಾನೆ ಹುಟ್ಟಿತ್ತು. ಪುಸ್ತಕದ ಬಗ್ಗೆ ಪುಟ್ಟದಾದ ಅನಿಸಿಕೆ ಬರೆಯುತ್ತಿದ್ದೇನೆ.
ಲೈಫ್ ಅನ್ನು ಸೀರಿಯಸ್ ಆಗಿ ತಗೋ ಕೆಲವರಂದರೆ, ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳಬಾರದೆನ್ನುತ್ತಾರೆ ಹಲವರು. ಎಲ್ಲವೂ ಎಲ್ಲರಿಗೆ ಅರ್ಥವಾಗೋಲ್ಲ (ವಾಸ್ತವ?), ಎಲ್ಲವನ್ನೂ ಎಲ್ಲರಿಗೂ ಅರ್ಥಪಡಿಸೋಕ್ಕಾಗೋಲ್ಲ (ವೇದಾಂತ?). ಅದೇನೇ ಇರಲಿ ಒಂದು
ವಿಷಯವನ್ನು ಪರಿಗಣಿಸಿ ಅದನ್ನು ಸರಳವಾಗಿಸಿ, ಉದಾಹರಣೆಗಳ ಮೂಲಕ ಬರೆದಿದ್ದಾರೆ ಶರತ್ ಅವರು. ಓದುವಿಕೆಯಲ್ಲಿ ಆಸಕ್ತಿ ಬರಬೇಕಾದರೆ ಕೇವಲ ಬರಹದ ವಿಷಯ ಆಸಕ್ತಿದಾಯಕವಾಗಿದ್ದರೆ ಸಾಲದು, ಬರಹದ ಶೈಲಿ ಸ್ವಾರಸ್ಯಕರವಾಗಿ ಇದ್ದರೆ ಓದುಗರನ್ನು ಬಹುಬೇಗನೆ ತಲುಪುವುದು. ಇಂತಹದ್ದೊಂದು ಪ್ರಯತ್ನ ಪಟ್ಟಿದ್ದಾರೆ ಲೇಖಕರು. ಸಮೀಪದ ವಸ್ತುವಿಷಯದಿಂದ ಹಿಡಿದು ಅತೀ ದೂರದ ವಸ್ತುವಿಷಯಗಳಿವೆ. ಹಾಗಂದ್ರೇನು ಅಂತೀರಾ? ಕನ್ನಡ ಭಾಷೆಯ ಬಗೆಗೆ ಪ್ರೀತಿಯಿದೆ, ಇಂಗ್ಲೀಷ್ ನಡುವೆ ನಲುಗುತ್ತಿರುವ ಕನ್ನಡದ ಬಗ್ಗೆ ಕಳಕಳಿಯಿದೆ, ಕನ್ನಡ ಸಾಹಿತ್ಯದ, ಬರಹಗಾರರ, ಬರವಣಿಗೆಗಳ ಉಲ್ಲೇಖವಿದೆ, ಮಾತುಗಾರಿಕೆ ಎಂಬ ಕೌಶಲ್ಯದ ಮಾತುಗಳಿವೆ, ಅಷ್ಟೇ ಯಾಕೆ ಗಣಿತವಿದೆ, ವಿಜ್ಞಾನವಿದೆ, ಇತಿಹಾಸ, ಖಗೋಳ ಶಾಸ್ತ್ರವೂ ಬಂದು ಹೋಗುತ್ತದೆ. ಏನಿಲ್ಲ, ಏನಿದೆ? ಎಲ್ಲವೂ ಇವೆ. ಯಾವುದೇ ಒಂದು ಟಾಪಿಕ್'ಗೆ ಸ್ಟಿಕ್ ಆಗದೆ, ಓದುಗರಿಗೆ ಬೋರ್ ಹೊಡಿಸದೆ ಇರುವ ಈ ಪುಸ್ತಕವನ್ನು ಓದಿ ನೋಡಿ
ಸುಪ್ರೀತಾ ವೆಂಕಟ್

Monday 7 January 2019

ನನ್ನ ಬಾಗಿಲು ತೆರೆಯೇ ಸೇಸಮ್ಮ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು Part 2

ನನ್ನ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು(Baagilu Tereye Sesamma - Sharath Bhat Seraje - Book reviews):

ಮಾಕೋನಹಳ್ಳಿ ವಿನಯ್ ಮಾಧವ:
ಆ ಪ್ರಶ್ನೆಗೆ ಉತ್ತರ ಇದೇನಾ?...

A Brief History of Timeನ ಮುನ್ನುಡಿಯಲ್ಲಿ, 1973 ರಲ್ಲಿ ಪ್ರಕಟವಾಗಿದ್ದ ತನ್ನ ಪುಸ್ತಕ – `The Large Scale Structure of Spacetime’ ಕುರಿತು ಸ್ಟೀಫನ್ ಹಾಕಿಂಗ್ ಹೀಗೆ ಹೇಳುತ್ತಾನೆ.

`I would not advise readers of this book to consult that book for further information: it is highly technical, and quiet unreadable. I hope that since then I have learned how to write in a manner that is easier to understand’.

ವಿಜ್ಞಾನವನ್ನು ಸರಳವಾಗಿ ಬರೆಯುವುದು ಕಲೆಯಲ್ಲ, ಅದೊಂಥರ ತಪಸ್ಸು ಅಂತ ನಾನು ನಂಬಿದ್ದೆ. `ಬಾಗಿಲು ತೆರೆಯೇ ಸೇಸಮ್ಮ’ ಪುಸ್ತಕ ಓದುವವರೆಗೆ. ಸರಿಯಾಗಿ ಅರ್ಥ ಮಾಡಿಕೊಂಡರೆ, ಅದನ್ನು `ಲಲಿತ ಪ್ರಬಂಧವಾಗಿ’ ಬರೆಯಬಹುದು ಅಂತ ಒಪ್ಪಲೇಬೇಕಾಯ್ತು. ಅದಕ್ಕೆ ಮೊದಲು, ಹತ್ತು ವರ್ಷಗಳಿಂದ ನನ್ನ ಮನೆಯವರಿಗೆ ಮತ್ತು ಮಗಳಿಗೆ ಮನವರಿಕೆ ಮಾಡಲು ನಾನು ಸೋತಿರುವ `ಇಂಗ್ಲಿಶ್ ಎನೆ ಕುಣಿದಾಡುವುದೆನ್ನೆದೆ’ ಅನ್ನುವ ಪ್ರಬಂಧವನ್ನು ಓದಬೇಕು. ಮಾತೃ ಭಾಷೆಯನ್ನು ಅಲಕ್ಷಿಸಿದವರು ಯಾರೂ ಜೀವನವನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಎನ್ನುವುದು ನನ್ನ ನಂಬಿಕೆ.

ನನಗೆ, ಶರತ್ ಭಟ್ ಸೇರಾಜೆ ಫೇಸ್ ಬುಕ್ ನಲ್ಲಿ ಗೆಳೆಯ. ಆದರೆ, ಮೊಬೈಲ್ ಫೋನ್ ನಲ್ಲಿ ಹೆಚ್ಚು ಓದುವುದು ನನಗೆ ಯಾಕೋ ಇಷ್ಟವಾಗುವುದಿಲ್ಲ. ಪುಸ್ತಕ ನನ್ನ ಕೈಗೆ ಬಂದು ಮೂರ್ನಾಲ್ಕು ವಾರಗಳಾಗಿರಬೇಕು. ಕೈಗೆತ್ತಿಕೊಂಡಾಗಲೆಲ್ಲ ಏನಾದರೊಂದು ಅಡ್ಡ ಬರುತ್ತಿತ್ತು. ಅಂತೂ, ಓದಿ ಮುಗಿಸಿದೆ.

ಈ ಪುಸ್ತಕದ ಬಗ್ಗೆ ಏನು ಬರೆಯಲೀ? ಮುನ್ನುಡಿಯಲ್ಲಿ ಜೋಗಿ, ಪ್ರಕಾಶ್ ಕಂಬತ್ತಳ್ಳಿ ಮತ್ತು ಹಿನ್ನುಡಿಯಲ್ಲಿ ಗಣೇಶ್ ಭಟ್ ನೆಲೆಮಾಂವ್ ಎಲ್ಲವನ್ನೂ ಬರೆದಿದ್ದಾರೆ. ನನಗೇನೂ ಉಳಿಸಿಲ್ಲವಾದರೂ, ಕೆಲವು ಇಷ್ಟವಾದ ವಿಷಯಗಳನ್ನು ಹೇಳಲೇ ಬೇಕು.

ಕಪ್ಪುಕುಳಿಗಳ (Black Hole) ಅನಂತ ಅಂತರಿಕ್ಷ ಲೋಕದಲ್ಲಿ, ರಜನಿ ಕಾಂತ್ ಮತ್ತು ಇತರ ತಮಿಳು, ತೆಲುಗು ಸಿನೆಮಾ ನಟರು ಉಪಮೇಯಗಳಾಗಿ ಬಂದು, ಅದೇನೂ ಬ್ರಹ್ಮವಿದ್ಯೆಯಲ್ಲ ಅಂತ ಅನ್ನಿಸಿದರೆ, ಮುಂದಿನ ಪ್ರಬಂಧ ಗೋಪಾಲಕೃಷ್ಣ ಅಡಿಗರ `ಯಾವ ಮೋಹನ ಮುರಳಿ ಕರೆಯಿತು’ ಪದ್ಯದ ವಿಶ್ಲೇಷಣೆಯೊಂದಿಗೆ, ಪ್ರೇಮಲೋಕಕ್ಕೆ ಕರೆದೊಯ್ಯುತ್ತದೆ. ಬಾಗಿಲು ತೆರೆಯೇ ಸೇಸಮ್ಮ, ಲೆಖ್ಖ ಮತ್ತು ನಮ್ಮ ಪಾಸ್ ವರ್ಡುಗಳಿಗಿರು ಸಂಬಂಧವನ್ನು, ಎರಡನೇ ಅಥವಾ ಐದನೇ ಮಗ್ಗಿಯಷ್ಟೇ ಸುಲಭ ಅಂತ ಅನ್ನಿಸುವಂತೆ ಮಾಡಿದರೆ, ನಾನು ಹೇಳುವ `Statistical Jugglery’ ಎನ್ನುವ ಪದವನ್ನು `ಲೆಕ್ಕ ಹಾಕಿ ಸುಳ್ಳು ಹೇಳಿ’ ಎಂಬ ಪ್ರಬಂಧದಲ್ಲಿ ಸೊಗಸಾಗಿ ವರ್ಣಿಸಿದೆ.

`ಪೂರ್ವಾಗ್ರಹ’ ಪೀಡಿತನಾಗಿ, `ಸಿರಿಗನ್ನಡಂ ಗೆಲ್ಗೆ’ ಎಂದು ಓದಲು ಶುರುಮಾಡಿದ ಪ್ರಬಂಧ, `ಪೂರ್ವಗ್ರಹ’ ವನ್ನು ಹಿಂದುರುಗಿ ನೋಡಿದಾಗ ತಿಳಿಯಿತು – ಅದು `ಸರಿಗನ್ನಡಂ ಗೆಲ್ಗೆ’ ಅಂತ. ನನ್ನ ಕನ್ನಡ ಭಾಷೆ ಎಷ್ಟು ಸುಧಾರಿಸಬೇಕಿದೆ ಎನ್ನುವ ಅರಿವೂ ಆಯಿತು.

ಎಲ್ಲಾ ಪ್ರಬಂಧಗಳ ಬಗ್ಗೆ ಬರೆಯುವುದಿಲ್ಲ. ಅವುಗಳ ಬಗ್ಗೆ ಬರೆಯೋಕೆ, ನಾನೂ ಒಂದು ಪ್ರಬಂಧ ಬರೆಯಬೇಕಾಗುತ್ತದೆ, ಅಷ್ಟೆ. ಆದರೆ, `ಬಲಿ ಚಕ್ರವರ್ತಿಯ ತ್ರಿವಿಕ್ರಮ’ ಪ್ರಬಂಧ ಓದುವಾಗ, ಯಂಡಮೂರಿ ವೀರೇಂದ್ರನಾಥರ `ಬೆಳದಿಂಗಳ ಬಾಲೆ’ ಓದಿದಷ್ಟೇ ಖುಷಿ ಕೊಟ್ಟಿತು.

ಕಾರಂತಜ್ಜನ ಕಥೆಗಳು ಮತ್ತು ಮರ್ಯಾದೆ ತೆಗೆಯುವ ಕಲೆ ಎನ್ನುವ ಎರಡು ಪ್ರಬಂಧಗಳನ್ನು ಓದುವಾಗ, ಕೆಲವು ವಿಷಯಗಳು ನನಗೆ ನೆನಪಾದವು. ಅದು ಶರತ್ ಗೆ ಗೊತ್ತೋ, ಇಲ್ಲವೋ.

ಕುಡಿತದ ಬಗ್ಗೆ ಕಾರಂತರು ಹೇಳಿದ ಒಂದು ಮಾತು ನನಗೆ ಬಹಳ ಇಷ್ಟವಾಗಿತ್ತು: `ಅಸಂಬದ್ದವಾಗಿ ಮಾತನಾಡಲು ಕುಡಿಯುವುದು ಏಕೆ? ಹಾಗೆಯೇ ಮಾತನಾಡಬಹುದಲ್ಲ?’

ಹಾಗೆಯೇ, ಲಂಕೇಶರು ಮರ್ಯಾದೆ ತೆಗೆಯುತಿದ್ದ ಪರಿಯ ಬಗ್ಗೆಯೂ ಕೆಲವು ವಿಷಯಗಳು ಪ್ರಸ್ತಾಪವಾಗಿದೆ. ಸಿ ಅಶ್ವಯಥ್ ರನ್ನು, ಕರ್ನಾಟಕ ಸರ್ಕಾರವು, ಅಮೆರಿಕಾದಲ್ಲಿ ನೆಡೆಯುತ್ತಿದ್ದ ಅಕ್ಕ ಸಮ್ಮೇಳನಕ್ಕೆ ಕಳುಹಿಸಲು ನಿರ್ಧರಿಸಿತ್ತು. ಲಂಕೇಶರು, ತಮ್ಮ ಪತ್ರಿಕೆಯಲ್ಲಿ, `ಅಶ್ವಥ್ ರನ್ನು ಅಮೇರಿಕಾಗೆ ಕಳುಹಿಸುವ ಸರ್ಕಾರದ ನಿರ್ಧಾರ ತಿಳಿದ, ಮೆಜೆಸ್ಟಿಕ್ ಬಸ್ ಸ್ಟಾಂಡಿನಲ್ಲಿನ ಭಿಕ್ಷುಕರೆಲ್ಲ, ನಮ್ಮ ರಾಗದಲ್ಲೇನು ದೋಷ, ಅಂಬೋ ಅಂದರಂತೆ,’ ಎನ್ನುವ ಚುಟುಕು ಕವನ ಬರೆದು, ಪ್ರಕಟಿಸಿಯೇ ಬಿಟ್ಟರು. ಈ ವಿಷಯ, ಹೊಡೆದಾಟದ ಹತ್ತಿರದವರೆಗೆ ಹೋಗಿ, ಬೇರೆಯವರ ಮಧ್ಯಸ್ಥಿಕೆಯಲ್ಲಿ ನಿಂತಿತ್ತು.

ಜಾರ್ಜ್ ಬರ್ನಾರ್ಡ್ದ ಶಾ, ವಿಚಿತ್ರ ವ್ಯಕ್ತಿ. ಒಮ್ಮೆ ಪಾರ್ಟಿಯೊಂದರಲ್ಲಿ, ಇಂಗ್ಲೆಂಡ್ ನ ಖ್ಯಾತ ರೂಪದರ್ಶಿಯೊಬ್ಬಳು ಬಂದು ಶಾ ರನ್ನು ಕೇಳಿದಳಂತೆ: `imagine if a child is born with my beauty and your intelligence’.
ರಪ್ಪನೆ ಶಾ ಉತ್ತರಿಸಿದರಂತೆ: `imagine its fate, if it is born with my beauty and your intelligence’.
ಈ ಘಟನೆಯ ನಂತರ ಶಾ ರವರು ಕುಳಿತು ರಚಿಸಿದ ನಾಟಕದ ಹೆಸರು `ಪಿಗ್ಮಲಿಯನ್’. ಮುಂದೆ ಅದು, `ಮೈ ಫೇರ್ ಲೇಡಿ’ ಎಂಬ ಹೆಸರಿನೊಂದಿಗೆ ಜಗತ್ಪ್ರಸಿದ್ದವಾಯಿತು. ಎಷ್ಟು ನಿಜವೋ, ಎಷ್ಟು ಸುಳ್ಳೋ ನನಗಂತೂ ಗೊತ್ತಿಲ್ಲ.

ಚಿಕ್ಕಂದಿನಲ್ಲಿ ಚಂದ ಮಾಮ, ಅಮರ ಚಿತ್ರ ಕಥೆ, ಪಂಚ ತಂತ್ರ, ಅರೆಬಿಯನ್ ನೈಟ್ಸ್, ಈಸೋಪನ ನೀತಿ ಕಥೆಗಳು ಮುಂತಾದ ಪುಸ್ತಕಗಳನ್ನು ಓದಿದಷ್ಟೇ ವಿಸ್ಮಯದಿಂದ ಈ ಪುಸ್ತಕವನ್ನೂ ಓದಿ ಮುಗಿಸಿದೆ. ವಿಜ್ಞಾನ, ಗಣಿತ, ಕಥೆ, ಸಾಹಿತ್ಯ, ಪರಂಪರೆ, ಸಮಕಾಲೀನ ವಿಷಯಗಳನ್ನು, ಮನಸ್ಸಿಗೆ ನಾಟುವಂತೆ, ಪ್ರಬಂಧದಲ್ಲಿ ಪಾತ್ರವಾಗುವಂತೆ ಬರೆಯುವುದು ಕಲೆಯೋ ಅಥವಾ ತಪಸ್ಸೋ ಎಂಬ ಜಿಜ್ಞಾಸೆ ಮತ್ತು ಶುರುವಾಯಿತು.

ಓದುತ್ತಾ, ನನ್ನ ಮತ್ತು ಪ್ರದೀಪ್ ಕೆಂಜಿಗೆಯವರ ನಡುವೆ ನೆಡೆದ ಸಂಭಾಷಣೆ ನೆನಪಾಯಿತು. ಪ್ರದೀಪ್ ರವರು ತೇಜಸ್ವಿಯವರು ಇಷ್ಟ ಪಡುತ್ತಿದ್ದ ವಿಷಯಗಳನ್ನೆಲ್ಲ ಹೇಳುತ್ತಿದ್ದಾಗ, `ಹಾಗಾದರೆ, ಸ್ಟೀಫನ್ ಹಾಕಿಂಗ್ ನ `A Brief History of Time’ ಅವರ ಇಷ್ಟದ ಪುಸ್ತಕಗಳಲ್ಲಿ ಒಂದಿರಬೇಕು, ಎಂದೆ.

`ಅದನ್ನು ಅವರು ಯಾವಾಗಲೋ ತರಿಸಿ ಓದಿದ್ದರು. ಅದನ್ನು ಕನ್ನಡಕ್ಕೆ ಟ್ರಾನ್ಸ ಲೇಟ್ ಮಾಡಬೇಕು ಅಂತ ಹೇಳುತ್ತಿದ್ದರು. ಅದನ್ನ ಹ್ಯಾಗ್ರೀ ಟ್ರಾನ್ಸ ಲೇಟ್ ಮಡೋದು? ಆ ಸಬ್ಜೆಕ್ಟ್ ನೋಡಿ, ಅದನ್ನ ಅರ್ಥ ಮಾಡಿಕೊಂಡು, ಎಲ್ಲರಿಗೂ ಅರ್ಥವಾಗುವ ಹಾಗೆ ಕನ್ನಡದಲ್ಲಿ ಬರೆಯೋಕೆ ನಮ್ಮ ಕೈಲಿ ಸಾಧ್ಯಾನಾ?,’ ಅಂತ ಪ್ರದೀಪ್ ಕೇಳಿದರು.

`ಅದು ಯಾರ ಕೈಲಾದ್ರೂ ಸಾಧ್ಯಾನಾ?’ ಅನ್ನೋ ಪ್ರಶ್ನೆ ನನ್ನನ್ನು ಬಹಳ ಕಾಲ ಕಾಡುತ್ತಿತ್ತು. ಯಾಕೋ, ಉತ್ತರ ಸಿಕ್ಕಿದೆ ಅನ್ನಿಸ್ತಾ ಇದೆ.

ಮಾಕೋನಹಳ್ಳಿ ವಿನಯ್ ಮಾಧವ
============================================
ಪ್ರಶಾಂತ್ ಭಟ್ :
ಬಾಗಿಲು ತೆರೆಯೇ ಸೇಸಮ್ಮ - ಶರತ್ ಭಟ್ ಸೇರಾಜೆ

ಗಹನ ವಿಷಯಗಳ ಸರಳವಾಗಿ ಮನಮುಟ್ಟುವಂತೆ ಹೇಳುವುದು ಒಂದು ಕಲೆ. ಶರತ್ ಇಲ್ಲಿ ಹೇಳಿದ ವಿಷಯಗಳು ನಾವಾಗೇ ಗೂಗಲಿಸಿ ಅಥವಾ ಓದಲು ಹೊರಟರೆ ತಲೆಯ ಮೇಲಿಂದ ಹಾರುವಂತಹವು. ಗುರುತ್ವದಂತಹ ವಿಷಯವನ್ನು ಮಣಿಶಂಕರ್ ಅಯ್ಯರ್,ದಿಗ್ವಿಜಯ ಸಿಂಗ್,ಸೋನಿಯಾ ಗಾಂಧಿ ಉದಾಹರಣೆ ಕೊಟ್ಟು ಕಚಗುಳಿ ಇಡಿಸಿ ವಿವರಿಸುವ ಅವರ ಶೈಲಿ ಅನನ್ಯ.

ಮಧ್ಯಾಹ್ನದ ನಿದ್ದೆ ಆದ ಬಳಿಕ ಸಂಜೆ ಚಾ ಕುಡಿಯುವಾಗ ಮನೆಗೆ ನೆಂಟರು ಬಂದರೆ ಅವರ ಜೊತೆ ಪಟ್ಟಾಂಗ ಹಾಕುವ ಶೈಲಿಯ ಇವರ ಲೇಖನಗಳು,ಸಿನಿಮಾದಂತೆ ಮಧ್ಯಂತರವೂ ಹೊಂದಿದೆ. ಅದಲ್ಲದೆ ಉದಾಹರಣೆಗೆ ನಾವು ದಿನ‌ನಿತ್ಯ ಅನುಭವಿಸಿದ್ದನ್ನೇ ತರುವ ಕಾರಣ ವಿಷಯಗಳು ಸರಳವಾಗಿ ಒಳಗಿಳಿಯುತ್ತವೆ.
ಇಲ್ಲಿನ ಹಲ ಲೇಖನಗಳ ಅವರ ಫೇಸ್ಬುಕ್ ಗೋಡೆಯ ಮೇಲೆ ಓದಿದ್ದೆ.ಮೆಚ್ಚಿದ್ದೆ.
ನಂಗಿರೋ ಒಂದೇ ಒಂದು ಸಂಶಯ ಎಂದರೆ ಶರತ್‍ಗೆ ತಾನು ಅನಗತ್ಯವಾಗಿ ಲಂಬಿಸುತ್ತೇನೋ ಎಂಬ ಅನುಮಾನವಿದೆ.ಹಾಗಾಗಿ ನಡು ನಡುವೆ ವಾಚಕ ಮಹಾಶಯರ ಮತ್ತೆ ಮೊದಲ ಸಾಲಿನ ಕಡೆಗೆ ಕರೆದೊಯ್ದು ಬರುತ್ತಾರೆ. ಇದು ಕೆಲ ಕಡೆ ಓದಿನ ರುಚಿ ಹೆಚ್ಚಿಸಿದರೆ ಕೆಲ‌ಕಡೆ ಬೇಡ ಅನಿಸುತ್ತದೆ. ಆದರೆ ಇದು ಗಬ ಗಬನೆ‌ ಓದುವವರಿಗೆ ಮಾತ್ರ ಆಗುವ ಅನಿಸಿಕೆ. ಒಂದು ಲೇಖನ ಸಾವಧಾನದಿಂದ ಓದುವ ಓದುಗ ಇದನ್ನು ಎಂಜಾಯ್ ಮಾಡೇ ಮಾಡ್ತಾನೆ.

ಪುಸ್ತಕ ನಂಗೆ ಬಹಳ ಹಿಡಿಸಿತು. ಬಹುಶಃ ಅವರ ಗೆಳೆಯರ ಬಳಗದಲ್ಲಿ ನೀವಿಲ್ಲದೆ ಇದ್ದರೆ ಇದನ್ನು ಓದಲು ಸಕಾಲ. ಸದ್ಯದಲ್ಲಿ ನಾನು ಓದಿದ ಅತ್ಯುತ್ತಮ ಜ್ಞಾನ ಮತ್ತು ಮನಸಿಗೆ ಹಾಯೆನಿಸಿದ ಪುಸ್ತಕಗಳಲ್ಲಿ ಇದೂ ಒಂದು.
ಮರೆಯದೆ ಓದಿ. ಓದಿಸಿ
================================================

ಸುಬ್ರಹ್ಮಣ್ಯ ಹೆಚ್.ಎನ್:
ಹೊಳಪಿನ ಪ್ರಬಂಧಗಳು
ಇಷ್ಟಲೇಖಕರಾದ ಜೋಗಿಸರ್ ತನ್ನ ಗೋಡೆಯಲ್ಲಿ ಈ ಪುಸ್ತಕಕ್ಕೆ ಬರೆದ ಮುನ್ನುಡಿಯನ್ನು ಲಗತ್ತಿಸಿದ್ದರಿಂದಾಗಿ 'ಸೇಸಮ್ಮ.....' ನನ್ನು ಓದುವ ಆಸೆ ಹುಟ್ಟಿತು. ಯಾವುದಕ್ಕೂ ಜೋಗಿಸರ್‌ಗೆ ಒಂದು ಕೃತಜ್ಞತೆ ಅರ್ಪಿಸಲೇ ಬೇಕು.

ಪತ್ರಿಕೆಯಲ್ಲಿ ಪ್ರಕಟವಾಗುವ ನಗೆಬರಹಗಳು ಗೊತ್ತು. ಗೋರೂರರು ಬರೆಯುವಂತಹ ರಸಮಯ ಪ್ರಬಂಧಗಳೂ ಗೊತ್ತಿವೆ. ವಸುಧೇಂದ್ರರ ಸುಲಲಿತ ಪ್ರಬಂಧಗಳನ್ನು ಕೂಡ ಓದಿರುವೆ. ಇವುಗಳ ನಡುವೆ ಇದೆಂತೆಹದಪ್ಪ .. ವೈಚಾರಿಕ ಲಲಿತ ಪ್ರಬಂಧಗಳು !? ರಾಶಿ ಕುತೂಹಲ ಇಟ್ಟುಕೊಂಡೇ ಓದಲು ಕೂಡ ಬೇಕಾಯ್ತು. ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಹೂರಣ ಈ ಕೃತಿಯಲ್ಲಿ ಸಿಕ್ಕಿತು. ಮಹತ್ತರವಾದ ಸಂಗತಿಗಳನ್ನು ರಸಮಯವಾಗಿ, ಶಾಲೆಯಲ್ಲಿ ಮೇಷ್ಟ್ರು ಮನದಟ್ಟಾಗುವಂತೆ (ಆಗ ಆಸಕ್ತಿ ಇರುವುದಿಲ್ಲ ಬಿಡಿ) ಉದಾಹರಣೆಗಳ ಮುಖಾಂತರ ಪಾಠ ಒಪ್ಪಿಸುವ ರೀತಿ ಹೇಳುವ ಶರತ್‌ರ ಶೈಲಿ ಅನನ್ಯ. ಅವರ ಪುಸ್ತಕ ಓದಿದ ಯಾರಿಗಾದರೂ ಅವರ ಆಸಕ್ತಿಯ ವಿಶಾಲ ಹರವು; ಗಣಿತ, ವಿಜ್ಞಾನ, ಸಾಹಿತ್ಯ, ರನ್ನ, ಪಂಪ, ಅಡಿಗರ ಕುರಿತಾದ ಅಗಾಧ ಜ್ಞಾನ ಬೆರಗು ಮೂಡದೇ ಇರದು.

ತೆಂಕು ತಿಟ್ಟು ಯಕ್ಷಗಾನವನ್ನು ಯಕ್ಷಗಾನವೇ ಅಲ್ಲವೆಂದು ಜರಿದ ಕಾರಂತರಿಗೆ, ವೇದಿಕೆಯಲ್ಲಿ ಶ್ರೇಣಿ ಗೋಪಾಲಕೃಷ್ಣ ಭಟ್ಟರು ಉತ್ತರಿಸಿದ ಅಪರೂಪದ ಪ್ರಸಂಗ, ನಾವು ಆಗಾಗ ಆಡುವ, ಬರೆಯುವ ತಪ್ಪು ತಪ್ಪು ಕನ್ನಡ, ಇಂಗ್ಲೀಷೇ ಪರಮ ಶ್ರೇಷ್ಠ ಭಾಷೆಯೆಂಬ ಮೂಢನಂಬುಗೆ ಇದನ್ನೆಲ್ಲಾ ತರ್ಕಗಳ ಮುಖಾಂತರ ಸರಳವಾಗಿ ತಿಳಿಸುತ್ತಾ ಹೋಗುತ್ತಾರೆ. ಲೇಖಕರು ಅಡಿಗರ 'ಯಾವ ಮೋಹನ ಮುರಳಿ ಕರೆಯಿತು.....' ಕವನದ ಅರ್ಥ ವಿವರಿಸುವಾಗ ಅಡಿಗರು ಬರೆದಿರುವ ಕಾದಂಬರಿಯ ಸಾಲೊಂದನ್ನು ಉಲ್ಲೇಖಿಸುತ್ತಾರೆ‌. ಅದನ್ನು ನಾನಿಲ್ಲಿ ಹೇಳಲೇ ಬೇಕು. "ಅರಬ್ಬೀ ಸಮುದ್ರಕ್ಕೆ ಬಿಡುವಿಲ್ಲ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ - ಹಗಲು, ಇರುಳು, ಪ್ರತಿ ನಿಮಿಷಗಳೂ, ಅದು ಹುಚ್ಚೆದ್ದು ಕೂಗಿ, ರೇಗಿ ಸಾವಿರ ಸಿಂಹಗಳ ಗರ್ಜನೆಯಂತೆ, ಸಹಸ್ರಾರು ಆನೆಗಳು ಘೀಳಿಟ್ಟ ಹಾಗೆ ಮೊರೆಯುತ್ತದೆ, ಬೊಬ್ಬಿಡುತ್ತದೆ, ಹೂಂಕರಿಸುತ್ತದೆ. ಈ ಬೊಬ್ಬಾಟಕ್ಕೆ ಕೊನೆಮೊದಲಿಲ್ಲ. ಯಾವ ದುಃಖ ಬಡಿದಿದೆ ಈ ಕಡಲಿಗೆ? ಯಾವ ಆಕ್ರೋಶ? ಯಾವ ನೋವು? ಯಾರ ಚಿತ್ರಹಿಂಸೆ? ಅಗೋ ಈಗ ವಿಕಟಟ್ಟಾಹಾಸ -ಅಲ್ಲಲ್ಲ ಚೀತ್ಕಾರ- ಪೂತ್ಕಾರ !". ಇದನ್ನೆಲ್ಲಾ ಓದುವ ಭಾಗ್ಯವಾದರೂ ಎಲ್ಲಿತ್ತು!?

ಕೃತಿಯಲ್ಲಿ ಹೇಳ ಹೊರಟರೆ ಸಾವಿರ ಸವಿಗಳಿವೆ. ಕತೆ, ಕಾದಂಬರಿ, ಕವಿತೆಯ ನಡುವೆ ಸೇಸಮ್ಮನಿಗೂ ನಿಮ್ಮ ಕಪಾಟಿನಲ್ಲಿ ಜಾಗ ಕೊಡಿ. 'ಲೆಕ್ಕ ಹಾಕಿ ಸುಳ್ಳು ಹೇಳಿ', 'ಪರಂಪರೆಯ ಬೇರುಗಳು', 'ನಮ್ಮ ತಲೆಯೂ ನಮ್ಮ ಹರಟೆಯೂ' ಪ್ರಬಂಧಗಳಿರುವ ಪುಟಗಳ ಕಿವಿ ಮಡಿಚಿಟ್ಟಿದ್ದೇನೆ ಮತ್ತೆ ಮತ್ತೆ ಓದಲು.

ಸುಬ್ರಹ್ಮಣ್ಯ ಹೆಚ್.ಎನ್.
====================================================
ಸ್ಮಿತಾ ಭಟ್:
ನಮಸ್ತೇ ಸೇರಾಜೆಯವರಿಗೆ,

ನಿಮ್ಮ‌ಹಾಸ್ಯಮಿಶ್ರಿತ ಲೇಖನ ಶೈಲಿಯು ತುಂಬಾ ಇಷ್ಟವಾಯಿತು.ದ.ಕ/ ಉಡುಪಿ ಕನ್ನಡದ ಸೊಗಡಿರುವ ಭಾಷೆ, ಅಲ್ಲಲ್ಲಿ‌ ಸಖ್ತ್ ಪಂಚ್ ಗಳು ,ಪುಸ್ತಕವನ್ನು ೨ ಘಂಟೆಗಳಲ್ಲಿ ಒದಿ ಮುಗಿಸಿ ಅಚ್ಚರಿಯ ನಿಟ್ಟುಸಿರು ಬಿಡುವಂತೆ ಮಾಡಿತು.
ಅಡಿಗರ ಕವನವನ್ನು explain ಮಾಡಿದ ರೀತಿಯಂತು ನಮ್ಮ ಕನ್ನಡ lecturer ಅನ್ನು ಜ್ಞಾಪಿಸಿತು. ಯಾರೋ lecture ಕೊಡುತ್ತಿದ್ದಾರೆಂದು feel ಮಾಡಿಕೊಂಡು ಓದಿದೆ. ಆ ಕವಿತೆಗೊಂದು ಅಧ್ಯಾತ್ಮದ touch ಇದೆ ಎಂದು ಗಮನಿಸಿಯೇ ಇರಲಿಲ್ಲ.ಇನ್ನು ಮೇಲೆ ಎಲ್ಲಾ ಕವಿತೆಗಳನ್ನೂ deep ಆಗಿ analyze ಮಾಡಬೇಕು ಅಂತ ಅನಿಸ್ತಾ ಇದೆ.
ಕೆಲವೊಂದು lines ಗಳನ್ನು‌ ನೀವು ಹೇಗೆ explain ಮಾಡಬಹುದು‌ ಅಂತ ಕುತೂಹಲ develope ಆಗಿತ್ತು. ತನಗೂ ,ಇತರರಿಗೂ ಮುಜುಗರವಾಗದಂತೆ ಹಾಸ್ಯಮಯವಾಗಿ ಹೇಳಿದ್ದೀರಿ.
‌       'ಮರ್ಯಾದೆ ತೆಗೆಯುವ ಕಲೆ', 'ಕಾರಂತಜ್ಜನ ಕಥೆಗಳು' ಖುಷಿಯಲ್ಲಿ‌‌ ಓದಿಸಿಕೊಂಡು, ಓಡಿಸಿಕೊಂಡು ಹೋಯಿತು. 'ಸರಿಗನ್ನಡಂ ಗೆಲ್ಗೆ ' bore ಹೊಡೆಸಿದ್ದಕ್ಕೆ ಕಾರಣ  fb ಯಲ್ಲಿ ಇತ್ತೀಚಿಗೆ ನಡೆದ ಚರ್ಚೆ. ಓದಿದ್ದನ್ನೇ ಮತ್ತೆ ಮತ್ತೆ ಓದಿ ವಾಕರಿಕೆ ಬಂದಂತಾಗಿದೆ.( ನಿಮ್ಮ ಲೇಖನದ mistake ಅಲ್ಲ ಬಿಡಿ).
     'ಸಿನಿಮಾ ಮತ್ತು ಕಳ್ಳತನ 'ಈ‌ ಲೇಖನಕ್ಕೆ ಒಂದು ಅತ್ಯುತ್ತಮ ಉದಾಹರಣೆಯಂದರೆ ನಿಮ್ಮದೇ ಇನ್ನೊಂದು ಲೇಖನ AI ಬಗೆಗಿನದು.  Artificial intelligence ಬಗ್ಗೆ ಇತ್ತೀಚಿಗೆ ಒಂದು ಲೇಖನ ಓದಿದ್ದೆ ಕನ್ನಡ ದಿನಪತ್ರಿಕೆಯೊಂದರಲ್ಲಿ. ನೀವು ಅದೇ same old ingredients ಇಟ್ಟುಕೊಂಡು ಹೊಸ ರುಚಿ ಹೇಗೆ‌ ತಯಾರಿಸಿದ್ದೀರಿ ಎನ್ನುವ ಕುತೂಹಲದೊಂದಿಗೆ ಅತೀ ವೇಗದಲ್ಲಿ‌ಓದಿದೆ.‌ ಕಣ್ಣು ಗಳು ಓದುತ್ತಿದ್ದರೂ ಮೆದುಳಿಗೆ process ಮಾಡಲು‌ಕಷ್ಟ ವಾಗುವಂತಹ speed  ಅದು.
Here ingredients are -
1) what is AI in common man's language.
2) about Turing test or loebner prize.
3) can robots take over humans in future?

 With the same ingredients the final dish prepared by you at the end is totally different and you named it..!!

ಬಾಗಿಲು ತೆಗೆಯೇ ಸೇಸಮ್ಮ‌ ಲೇಖನದಲ್ಲಿ encryption and decryption ಬಗ್ಗೆ ಇನ್ನೂ ಆಳವಾಗಿ‌ ವಿವರಿಸಬೇಕಿತ್ತು‌ ಎಂದು ಅನಿಸಿತು.
"Password ಅನ್ನು ಒತ್ತಿ, ತಿರುಚಿ, ಹಿಸುಕಿ,ಜಜ್ಜಿ, ಮುದ್ದೆ ಮಾಡಿ ಬಾಗಿಸಿ,ಗುದ್ದಿ ,ನುಲಿದು,ನಜ್ಜುಗುಜ್ಜು ಮಾಡಿದರೆ ...." ಎನ್ನುವ ಬದಲಿಗೆ ಸುಮ್ಮನೆ cipher keys ಬಗ್ಗೆ, encryption algorithm ಗಳ ಬಗ್ಗೆ ಒಂದೆರಡು ಸಾಲು ಬರೆದಿದ್ದರೆ ಚೆನ್ನಾಗಿತ್ತೇನೋ.!
 ಇನ್ನು ಸಿನಿಮಾ ಮತ್ತು ಕಳ್ಳತನ‌ ಲೇಖನದ‌ ಬಗ್ಗೆಯೂ ಸುಮಾರು ವಿಷಯಗಳನ್ನು ಹಂಚಿಕೊಳ್ಳುವ ಆಸೆ ಇದೆ.

ಇನ್ನೂ ಕೂಡಾ  ಸಾಲುಸಾಲಾಗಿ ಪುಸ್ತಕಗಳನ್ನು ಬರೆಯಿರಿ. ನಿಮ್ಮ ಕೆಲವು ವಾಕ್ಯಗಳು ಬುದ್ಧಿವಂತರಿಗೆ ಮಾತ್ರ ವೆಂದೆನಿಸುತ್ತದೆ. " ಬರವಣಿಗೆ ಶುರುವಾದ ಮೇಲೆ ಭೂಮಿತಾಯಿ ಪ್ರಸನ್ನಳಾಗಿ ನನ್ನನ್ನು ೨-೩ ಸಲ ಸೂರ್ಯನ ಸುತ್ತ ಸುತ್ತುವ ಪ್ಯಾಕೇಜ್ ಟ್ರಿಪ್ಪಿನಲ್ಲಿ ಕರೆದುಕೊಂಡು ಹೋಗಿದ್ದಾಳೆ" ಈ ವಾಕ್ಯದ ಅರ್ಥ ನಾನು ಬರವಣಿಗೆ ಶುರು ಮಾಡಿ ೨-೩ ವರ್ಷ ಆಯ್ತೆಂದಲ್ಲವೇ? ಅರ್ಥ ಆದಾಗ ತುಂಬಾ ನಗು ಬಂತು. ನೀವು ಗೂಢಾರ್ಥಗಳನ್ನು ಮತ್ತು ಅಲಂಕಾರ, ಉಪಮೆಗಳನ್ನು ಬಳಸುವ ರೀತಿ ಚೆನ್ನಾಗಿದೆ. ನೀವು ಒಬ್ಬ ಉತ್ತಮ ಹರಟೆ ಲೇಖಕರೂ ಹೌದು, ವಿಜ್ಞಾನ ಬರಹಗಳ ಲೇಖಕರೂ ಹೌದು.

....ಧನ್ಯವಾದಗಳೊಂದಿಗೆ,
ಸ್ಮಿತಾ ಭಟ್.
=======================================================
# Baagilu Tereye Sesamma Book reviews

ನನ್ನ ಬಾಗಿಲು ತೆರೆಯೇ ಸೇಸಮ್ಮ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು/Baagilu Tereye Sesamma Reviews Part 1

ನನ್ನ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು(Baagilu Tereye Sesamma - Sharath Bhat Seraje - Book reviews):
ಮೊದಮೊದಲು ಬಂದವು :

ಇನ್ನೊಂದೆರಡು :

ಜಯಶೇಖರ ವಿ ಆರ್ ಅವರದ್ದು : ಗೆಳೆಯ Sharath Bhat ರ ಪುಸ್ತಕ ಬಿಡುಗಡೆಯಾಗಿದೆ. ವೃತ್ತಿಯಿಂದ ಇಂಜಿನಿಯರ್ ಆದರೂ ಭಾಷೆ ಹಾಗೂ ಸಾಹಿತ್ಯದ ಮೇಲೆ ಅವರಿಗಿರುವ ಆಸಕ್ತಿ , ಶ್ರದ್ಧೆ, ನಮಗೆಲ್ಲ ಸ್ಪೂರ್ತಿದಾಯಕವಾದುದು.
ಪುಸ್ತಕಕ್ಕೆ "ಬಾಗಿಲು ತೆರೆಯೇ ಸೇಸಮ್ಮ" ಅಂತ ಹೆಸರಿಟ್ಟು ಸ್ವತಃ ತಾವೇ ಹಲವು ಸ್ವಾರಸ್ಯಕರವಾದ ವಿಷಯಗಳ, ಕುತೂಹಲಕಾರಿ ಅಂಕಿಅಂಶಗಳ, ವಿಷಯಗಳ ಕಿಟಕಿ ಬಾಗಿಲನ್ನು ತೆರೆದಿಟ್ಟಿದ್ದಾರೆ. ಹದಿನೈದು ವೈಚಾರಿಕ ಲೇಖನಗಳ ಗುಚ್ಛದಲ್ಲಿ ಸಾಹಿತ್ಯ , ಸಿನೆಮಾ, ಗಣಿತ ಮುಂತಾದ ವಿಷಯಗಳ ಅವಲೋಕನವಿದೆ. ತುಂಬಾ ಗಂಭೀರ ವಿಷಯಗಳನ್ನು ಹೇಳುವಾಗ ಕೂಡ ವಿನೋದವಾಗಿ ಹೇಳುವ ಶೈಲಿ ಶರತ್ ಬೇಕಂತಲೇ ರೂಢಿಸಿಕೊಂಡ ಮಾರ್ಗವಿರಬಹುದು. ಅಲೆ ಅಲೆ ಗುರುತ್ವಾಕರ್ಷದ ಅಲೆಯೊ ಲೇಖನ ಮಾತ್ರ ಓದಿದ ಮೇಲೆಯೂ ಸೀದಾ ನನ್ನ ತಲೆಯ ಮೇಲೆ ಹಾದು ಹೋಗಿದ್ದರೆ ಅದಕ್ಕೆ ವಿಷಯದಲ್ಲಿನ ನನ್ನ ಅನಾಸಕ್ತಿ ಕಾರಣ. ಮೋಹನ ಮುರಳಿ ಲೇಖನ ಭಾವಮಂಥನ ಮಾಡಬಲ್ಲುದು ಹಾಗೆಯೇ, ಪರಂಪರೆಯ ಬೇರುಗಳು ಲೇಖನವು ಇಲ್ಲಿಯವರೆಗೆ ನಡೆದುಬಂದ ಹಲವು 'ರೂಢಿ'ಗಳ ಬಗ್ಗೆ ಆಶ್ಚರ್ಯಚಕಿತ ಸಂಗತಿಗಳನ್ನು ಹೇಳುತ್ತದೆ.

ಉಳಿದಂತೆ ಮರ್ಯಾದೆ ತೆಗೆಯುವ ಕಲೆ, ಇಂಗ್ಲಿಷ್ ಎನೆ ಕುಣಿದಾಡುವುದೆನ್ನೆದೆ ಲೇಖನಗಳು ತೆಳುಹಾಸ್ಯದಿಂದ ಕೂಡಿದ್ದು "ಹರಟೆ ಪ್ರಬಂಧ"ದ ಸಾಹಿತ್ಯದ ಮಾದರಿಗೆ ಸೇರಬಲ್ಲವು ಅನ್ನಿಸುತ್ತದೆ. ವೀ ಸೀತಾರಾಮಯ್ಯನವರ ಬಳಿಕ ಅಷ್ಟು ಸಶಕ್ತವಾಗಿ, ಸುಲಲಿತವಾಗಿ ಹರಟೆ ಪ್ರಬಂಧಗಳನ್ನು ಬರೆದವರಿದ್ದಾರಾ ನನಗೆ ತಿಳಿಯದು. ಆದರೆ ಆ ಪ್ರಾಕಾರವನ್ನು ಕೂಡ ಗೆಳೆಯ ಶರತ್ ಸಂಪನ್ನಗೊಳಿಸಬಲ್ಲರು ಅನ್ನುವ ಗುರುತುಗಳು ಈ ಲೇಖನಗಳಲ್ಲಿ ಇವೆ.
ಭರವಸೆಯ ಸರೋವರದಂತೆ ಕಾಣುವ ಗೆಳೆಯ ಶರತ್ ಸಾಹಿತ್ಯಸಾಗರವಾಗಿ ಸಾಗಲಿ ಅನ್ನೋದು ನನ್ನ ಆಶಯ, ಹಾರೈಕೆ.
ಇನ್ನು, ಇದು ಒಂದೇ ಸಮನೆ ಬಿಡದೇ ಓದಿಸಿಕೊಳ್ಳಬಲ್ಲ ಪುಸ್ತಕ. ಒಮ್ಮೆ ಕೊಂಡು ಓದಿ. ಖುಷಿಯಾಗ್ತದೆ

Gopalkrishna Bhat - ಶರತ್ ಭಟ್ ಸೇರಾಜೆ ಅವರು ಇಲ್ಲಿ ಬರೆಯುತ್ತಿದ್ದ ಲೇಖನಗಳ ಅಭಿಮಾನಿ ನಾನು. ಅವರು ಎತ್ತಿಕೊಳ್ಳುವ ವಿಷಯಗಳು, ನೀಡುತ್ತಿದ್ದ ಮಾಹಿತಿಗಳು ಇನ್ನೂ ಓದು ಇನ್ನೂ ಓದು ಎಂದು ಹುರಿದುಂಬಿಸುವ ಮಾತ್ರೆಗಳಿದ್ದಂತೆ. ಅವರು ಲೇಖನಗಳನ್ನು ಪುಸ್ತಕ ರೂಪಕ್ಕೆ ತರುತ್ತಾರೆ ಎಂದು ತಿಳಿದು ತುಂಬಾ ಖುಷಿಯಾಗಿತ್ತು. ಆವಾಗೊಮ್ಮೆ ಇವಾಗೊಮ್ಮೆ ಒಂದು ಲಡ್ಡುವೋ ಮತ್ತೊಮ್ಮೆ ಕೇಸರೀಬಾತೋ ಸಿಕ್ಕಿದ ಹಾಗೆ ಮೆಲ್ಲುತ್ತಿದ್ದ ನನಗೆ ಒಂದೇ ಸಲ ಮೃಷ್ಟಾನ್ನ ಭೋಜನ ನೀಡಿದಂತೆ ಈ ಪುಸ್ತಕ. ಅಷ್ಟು ಸುಲಭಕ್ಕೆ ಕೈಗೆಟುಕದ ವಿಷಯಗಳನ್ನು ಎಂತವರಿಗೇ ಆದರೂ ಸಲೀಸಾಗಿ ಅರ್ಥವಾಗುವ ರೀತಿ ಬರೆಯುವುದು ಇವರ ವಿಶೇಷ. ಒಮ್ಮೆ ಈ ಪುಸ್ತಕ ಓದಿ ನೋಡಿ. ತುಂಬಾ ಚೆನ್ನಾಗಿದೆ 

Hari Kiran H
 :

ಈ ಪುಸ್ತಕ ಓದುವ ಮುಂಚೆ ನನ್ನದೊಂದು ಕಿವಿಮಾತು, ನೀವು ಸಂಪಾದಕರ ಮಾತು, ಲೇಖಕರ ಮಾತು ಎಲ್ಲಾ ಯಾಕೆ ಓದುದು ಅದೆಲ್ಲಾ ಬೋರ್ ಅಂತ ಎಲ್ಲಾ ಸ್ಕಿಪ್ ಮಾಡಿ ಸೀದಾ ಮ್ಯಾಟರಿಗೆ ಹೋದ್ರೆ ಕೆಲವೆಲ್ಲಾ ನಗೆ ಚಟಾಕಿಗಳನ್ನು ಮಿಸ್ ಮಾಡಿಕೊಳ್ತೀರ. ಲೇಖಕರ ಮಾತಲ್ಲೇ ನಿಮಗೆ ಮುಂದೆ ಏನು ಸಿಗಲಿದೆ ಅನ್ನುವುದರ ಸ್ಪಷ್ಟ ಚಿತ್ರಣ ಸಿಕ್ಕಿಬಿಡುತ್ತದೆ. ಅವರೇ ಹೇಳಿದಂತೆ ಇದೊಂದು ವೈಚಾರಿಕ ಲಲಿತ ಪ್ರಬಂಧಗಳ ಸಂಕಲನ. ಕಹಿ ಗುಳಿಗೆಗಳನ್ನು ಪುಡಿ ಮಾಡಿ ಜೇನಿನಲ್ಲಿ ಬೆರೆಸಿ ಹೇಗೆ ಚಿಕ್ಕ ಮಗುವಿಗೆ ತಿನ್ನಿಸಿ ರೋಗ ವಾಸಿ ಮಾಡುತ್ತೇವೋ ಹಾಗೆ ವೈಚಾರಿಕ ಪ್ರಬಂಧಗಳನ್ನು ಹಾಸ್ಯದಲ್ಲಿ ಬೆರೆಸಿ ಎಲ್ಲಾ ತರಹದ ಓದುಗರಿಗೆ ಸಿಹಿಸಿಹಿಯಾಗಿ ತಿನ್ನಿಸಿದ್ದಾರೆ ಶರತ್ ಭಟ್ರು. ಬಾಗಿಲು ತೆರೆಯೇ ಸೇಸಮ್ಮ ಅಂತ ಅವರ ಮಾತು ಕೇಳಿ ಯಾವುದೋ ಸಾಮಾಜಿಕ ಕಥೆ ಕೇಳಲು ಬಾಗಿಲು ತೆರೆದು ನೀವು ಒಳಹೋಗಲು ಪ್ರಯತ್ನಿಸಿದರೆ ಅಲ್ಲಿ ನಿಮ್ಮ ಪಾಸ್ ವರ್ಡ್ ಕೇಳಿ ತಬ್ಬಿಬ್ಬುಗೊಳಿಸುತ್ತಾರೆ. ಹಾಗು ಪಾಸ್ ವರ್ಡ್ ಗಳನ್ನು ಹೇಗೆಲ್ಲಾ ಕದಿಯುತ್ತಾರೆ. ಅದು ಹೇಗಿದ್ದರೆ ಚೆನ್ನ ಎಂದೆಲ್ಲಾ ನಿಮಗೆ ಚೆನ್ನಾಗಿ ತಿಳಿಯುವಂತೆ ಮಾಡಿ ತಮ್ಮ ಪಾಸ್ ವರ್ಡ್ ಗಳನ್ನೂ ಕೂಡ ನಮ್ಮೊಂದಿಗೆ ಹಂಚಿಬಿಡುತ್ತಾರೆ, ಆಡುಮುಟ್ಟದ ಸೊಪ್ಪಿಲ್ಲ ಅನ್ನುವಂತೆ ಗುರುತ್ವಾಕರ್ಷಣೆ, ಕವಿತೆ, ಇಂಗ್ಲೀಷು, ಗಣಿತ, ಸಂಗೀತ, ಕನ್ನಡ, ಕೃತಕ ಬುದ್ದಿಮತ್ತೆ ಹೀಗೆ ತರಹೇವಾರಿ ಸಬ್ಜೆಕ್ಟುಗಳಲ್ಲಿ ತಮ್ಮ ಕೈಯಾಡಿಸಿದ್ದಾರೆ. ಎಲ್ಲವನ್ನು ತುಂಬಾ ಇಷ್ಟಪಟ್ಟು ಆಳವಾಗಿ ಅಭ್ಯಸಿಸಿರುವುದು ಎದ್ದು ಕಾಣುತ್ತದೆ. ಇವೆಲ್ಲದರ ಬೆಸೆವ ಒಂದೇ ಕೊಂಡಿ ತಿಳಿಹಾಸ್ಯ. ನೀವು ಊಹೆಯೇ ಮಾಡಿರದ ವಿಲಕ್ಷಣವಾದ ಉದಾಹರಣೆಗಳು ಹಾಗೂ ಹೋಲಿಕೆಗಳು ಖಂಡಿತವಾಗಿಯೂ ನಗೆಯುಕ್ಕಿಸುತ್ತವೆ. ಎಲ್ಲರಿಗೂ ಇಷ್ಟವಾಗುವಂತಹ ಉತ್ತಮವಾದ ಪುಸ್ತಕ.
 

ಕೆ ಜಿ ಎಫ್ ವಿಮರ್ಶೆ / KGF movie review

KGF movie review by Sharath Bhat Seraje
ಒಂದೇ ಮಾತಿನಲ್ಲಿ ಹೇಳುವುದಾದರೆ ಕೆಜಿಎಫ್ ಎಂಬ ರಾಕ್ಷಸ ಗಾತ್ರದ ಚಿತ್ರವು ಹನ್ನೆರಡು ಚಕ್ರಗಳ ರಾಕ್ಷಸ ಲಾರಿಯೊಂದು ಆಗುಂಬೆ ಘಾಟಿಯಲ್ಲಿ ಫಾರ್ಮುಲಾ ಒನ್ ಕಾರಿನ ವೇಗದಲ್ಲಿ ಓಡಿದರೆ ಹೇಗಾಗಬಹುದೋ ಹಾಗಿದೆ !! ಆದರೆ ಒಂದೇ ಮಾತಿನಲ್ಲಿ ಹೇಳಿ ಮುಗಿಸಬಹುದಾದ ಚಿತ್ರ ಇದಲ್ಲ ಎಂಬುದೇ ವಿಶೇಷ !!

ನಮ್ಮಲ್ಲಿ ದಡ್ಡರು ಮಸಾಲೆ ಚಿತ್ರಗಳನ್ನು ಮಾಡುತ್ತಾರೆ, ಬುದ್ದಿವಂತರು (ಯಾರೂ ನೋಡದ) ಆರ್ಟ್ ಫಿಲಂಗಳನ್ನು ಮಾಡ್ತಾರೆ ಎಂಬೊಂದು ಪದ್ಧತಿ ಇದೆ. ಉಪೇಂದ್ರ, ಶಂಕರ್, ರಾಜಮೌಳಿ ತರದವರು ಇದನ್ನು ಆಗಾಗ ಮುರಿದದ್ದೂ ಇದೆ, ಉಗ್ರಂ ಕೂಡಾ ಬುದ್ದಿವಂತರ ಮಾಸ್ ಚಿತ್ರ ಅನ್ನಿಸಿಕೊಂಡಿತ್ತು. ದರ್ಶಿನಿಯವರು ಅದೇ ಅಡುಗೆಭಟ್ಟರನ್ನಿಟ್ಟುಕೊಂಡು ಸ್ಟಾರ್ ಹೋಟೆಲ್ ಮಾಡಿದರೆಂಬಂತೆ, ಉಗ್ರಂ ನೋಡಿ ಇನ್ನೂ ಬೇಕು ಅಂದವರಿಗಾಗಿ ಉಗ್ರಮ್ಮಿಗೆ ಗಾಳಿ ಹಾಕಿ ಉಬ್ಬಿಸಿ ದೊಡ್ಡ ಮಟ್ಟದ ಉಗ್ರಂ ಅನ್ನು ತಯಾರಿಸಿರುವಂತೆಯೇ ಈ ಚಿತ್ರ ಇದೆ.

ಇದು ಹೇಳಿ ಕೇಳಿ ಅಡಿಯಿಂದ ಮುಡಿಯವರೆಗೆ ಇಂಚಿಂಚೂ ಮಾಸ್ ಸಿನೆಮಾವೇ ; ಆದರೆ ಚಾಣಾಕ್ಷತನದಿಂದ, ಪರಿಶ್ರಮದಿಂದ ಮಾಡಿರುವ ಮಾಸ್ ಚಿತ್ರ. ಹೀಗಾಗಿ ನೂರೈವತ್ತು ನಿಮಿಷಗಳ ಹೀರೋವಿನ ವೈಭವೀಕರಣ, ಮಾಸ್ ಅಂಶಗಳು ಎಲ್ಲ ಬೇರೆ ಚಿತ್ರಗಳಲ್ಲಿ ನನಗೆ ಇಷ್ಟ ಆಗದ ವಿಷಯಗಳಾದರೂ ಇಲ್ಲಿ ಅಷ್ಟೇನೂ ಬೇಸರ ಹುಟ್ಟಿಸಲಿಲ್ಲ, ಆರೋಗ್ಯಕ್ಕೆ ಒಳ್ಳೆಯದಲ್ಲದಿದ್ದರೂ ಕಿಕ್ ಕೊಡುವ ಫಾಸ್ಟ್ ಫುಡ್ಡಿನಂತೆ ಚಿತ್ರ ನೋಡುವಾಗ ಮೆಯ್ಯ ನವಿರುಗಳು ಸೆಟೆದು ನಿಲ್ಲುತ್ತವೆ ಅನ್ನಬೇಕು. ವರ್ಲ್ಡ್ ಸಿನೆಮಾ ಎಲ್ಲ ನೋಡುವ ನಾನೇ ಸೈರನ್ ಅನ್ನು ಹೋಲುವ ಹಿನ್ನೆಲೆ ಸಂಗೀತ ಮೊಳಗಿದಾಗ ಒಂದೆರಡು ಸಲ ಎದ್ದು ಕುಣಿಯಹೊರಟೆ ಅಂದಮೇಲೆ ಇನ್ನು ಮಾಸ್ ಪ್ರೇಕ್ಷಕರನ್ನು ಆ ದೇವರೇ ಕುರ್ಚಿಯಲ್ಲಿ ಹಿಡಿದಿಡಬೇಕು !

ಬೇರೆ ಚಿತ್ರಗಳಲ್ಲಿ ಹೀರೋ ತನ್ನನ್ನು ತಾನೇ ಹೊಗಳಿಕೊಳ್ಳುವ ಉದ್ದುದ್ದ ಡೈಲಾಗುಗಳಿರುತ್ತವೆ, ಇಲ್ಲಿ ಅದನ್ನು ಚಾಣಾಕ್ಷತನದಿಂದ ನಿಭಾಯಿಸಲಾಗಿದೆ. ಮೊದಲನೆಯದಾಗಿ ಚುರುಕು ಕಾಲುಗಳ, ಮಿಂಚಿನ ಕೈಯ ಚತುರ ಬಾಕ್ಸರ್ ನ ಗುದ್ದುಗಳಂತೆ ಎಲ್ಲ ಪಂಚು ಸಂಭಾಷಣೆಗಳೂ ಸರಿಯಾಗಿಯೇ ಅಪ್ಪಳಿಸಿ ಮಜಾ ಕೊಡುತ್ತವೆ, ಬರೆದವರಿಗೆ ಸೆನ್ಸ್ of wit ಇದೆ. ಇನ್ನೊಂದು ಉಪಾಯ ಏನೆಂದರೆ ಹೀರೋ ತನ್ನ ಬಗ್ಗೆ ತಾನೇ ಹೇಳುವುದಕ್ಕಿಂತ ಉಳಿದವರು ಅವನ ಬಗ್ಗೆ ಹೆಚ್ಚು ಹೇಳುವಂತೆ ಮಾಡಿದ್ದು, ಇದೊಂದು smart move. ಬಹುತೇಕ ಎಲ್ಲ ಪಂಚ್ ಡೈಲಾಗುಗಳು ಚಿತ್ರಕಥೆಯ ಅವಿಭಾಜ್ಯ ಅಂಗ, plotಗೆ ಇದು ಬೇಕಿತ್ತು ಅನ್ನಿಸುವಂತೆ ಮಾಡಿರುವುದು smartnessನಲ್ಲಿ ಅದಕ್ಕಿಂತಲೂ ಒಂದು ಕೈ ಮೇಲಿರುವ move ! ಹೀಗೆ ಬರೆದದ್ದಕ್ಕೆ ಚಂದ್ರಮೌಳಿಯವರಿಗೆ ಸಲಾಂ, ಬರೆಸಿದ್ದಕ್ಕೆ ಪ್ರಶಾಂತ್ ನೀಲ್ಗೂ ನಮಸ್ಕಾರ. ಡೈಲಾಗುಗಳು ಹೆಚ್ಚು ಉದ್ದ ಇಲ್ಲದಿರುವುದರ ಹಿಂದೆಯೂ ಪ್ರಶಾಂತರ ಕೈವಾಡವೇ ಇರಬೇಕು.

ಒಂದು ಬಕೇಟು ಮಣ್ಣಿನ ಬಣ್ಣ, ಒಂದು ಚೊಂಬು ಚಿನ್ನದ ಬಣ್ಣ, ಒಂದು ಕೊಡಪಾನ ಆರೆಂಜ್ ಬಣ್ಣದಲ್ಲಿ ಅದ್ದಿ ತೆಗೆದಿದ್ದಾರೇನೋ ಅನ್ನಿಸುವಂತೆ ಛಾಯಾಗ್ರಾಹಕ ಭುವನ್ ಗೌಡರು ಒಂದೇ ಬಣ್ಣದ ಛಾಯೆಗಳನ್ನಿಟ್ಟುಕೊಂಡು ಹೋಳಿ ಆಡಿದ್ದಾರೆ. Butch Cassidy and the Sundance Kid ಚಿತ್ರವೂ ಹಳದಿ ಬಣ್ಣವನ್ನು ಬಳಸಿ ಹೆಸರು ಮಾಡಿತ್ತು, ಅಬ್ಬಾಸ್ ಕಿರೋಸ್ತಾಮಿಯ Taste of Cherry ಚಿತ್ರವೂ ಮಣ್ಣು ಮಣ್ಣು ದೃಶ್ಯಗಳನ್ನು ತೋರಿಸಿತ್ತು.
Barry Lyndon ಎಂಬ ಚಿತ್ರವನ್ನು Stanley Kubrick ಎಂಬ ದೊಡ್ಡ ನಿರ್ದೇಶಕ ಯಾವುದೇ Artificial lightಗಳಿಲ್ಲದೆ ಚಿತ್ರಿಸಿದ್ದ, ಇಲ್ಲಿಯೂ ಹಲವು ಕಡೆ ಕೃತಕ ಬೆಳಕಿಲ್ಲದೆ ಬರೀ ದೊಂದಿ, ಬೆಂಕಿಗಳ ಬೆಳಕಿನಲ್ಲಿಯೇ ದೃಶ್ಯಗಳನ್ನು ಕಟ್ಟಿ ವಿಶಿಷ್ಟವಾದ ಕಲರ್ ಗ್ರೇಡಿಂಗ್ ಮಾಡಲಾಗಿದೆ, ಗಣಿಗಳ ಕತ್ತಲೆ, ಗಣಿ ಕಾರ್ಮಿಕರ ಬದುಕಿನ ಕತ್ತಲೆ, ಚಿತ್ರದ ಡಾರ್ಕ್ ಟೋನ್ ಎಲ್ಲ ಈ ಬೆಳಕಿನ ಆಟದಲ್ಲಿ, ಬಣ್ಣಗಾರಿಕೆಯಲ್ಲಿ ಹೇಳಲ್ಪಟ್ಟಿವೆ. ಹಗಲಿನಲ್ಲೂ ಸಹಜ ಬೆಳಕಿನ ನರ್ತನವೇ ಒಂದು ಬೇರೆ ಲುಕ್ ಕೊಡುವಂತೆ ಮಾಡಲಾಗಿದೆ.

ಬೀಜಿಂಗಿನಿಂದ ಶಾಂಘೈಗೆ ಹೋಗುವ ಬುಲೆಟ್ ಟ್ರೇನಿನಂತೆ ಚಿತ್ರ ಓಡುವಂತೆ ಕಂಡರೆ ಅದಕ್ಕೆ ಶ್ರೀಕಾಂತ್ ಗೌಡರ rapid fire ಎಡಿಟಿಂಗ್ ಕಾರಣ, ಬಹುಶಃ ನೂರಕ್ಕೆ ಎಂಬತ್ತು ಪಾಲು shotಗಳು ಐದು ಸೆಕೆಂಡಿಗಿಂತ ಹೆಚ್ಚು ತೆರೆಯಲ್ಲಿ ಇರುವುದೇ ಇಲ್ಲ, ಹೀಗಾಗಿ ಪಟಪಟನೇ ಶಾಟ್ ಗಳು ಕಣ್ಣಿಗೆ ಅಪ್ಪಳಿಸಿ ನಮಗೆ ಬಿಡುವೇ ಕೊಡುವುದಿಲ್ಲ, blink and miss ಶೈಲಿಯ ಓಘ ಚಿತ್ರಕ್ಕೆ ಸಿಕ್ಕಿದೆ, ಒಂದು ನಿಮಿಷ ವಾಟ್ಸಪ್ಪ್ ನೋಡಿ ಬರುತ್ತೇನೆ ಅನ್ನುವವರಿಗೆಲ್ಲ ಅವಕಾಶವೇ ಇಲ್ಲ ! ಶ್ರೀಕಾಂತರು Thelma Schoonmaker,Lee Smith, Michael Kahn ಮುಂತಾದ ಸಂಕಲನಕಾರರ ಅಭಿಮಾನಿಯಂತೆ. ಹೊಡೆದಾಟಗಳಲ್ಲಿಯೂ ಹೀರೋ ಹೊಡೆದರೆ ಹತ್ತು ಜನ ವಾಲಿಬಾಲಿನಂತೆ ಗಾಳಿಯಲ್ಲಿ ಹಾರುತ್ತಾರೆ ಎಂಬಂತಿರದೆ shaky ಕ್ಯಾಮೆರಾ ಮತ್ತು ಫಾಸ್ಟ್ ಕಟ್ ಗಳಲ್ಲಿ ಎಲ್ಲವನ್ನೂ ಅಡಗಿಸಲಾಗಿದೆ. frame rate ನ ಜೊತೆಯೂ ಆಟವಾಡಿ ಸ್ಲೋ ಮೋಶನ್ , ಫಾಸ್ಟ್ ಮೋಶನ್ ಎಲ್ಲ ಒಟ್ಟಿಗೇ ಬೆರೆಸಿರುವುದೂ ಇನ್ನೊಂದು ತಂತ್ರಗಾರಿಕೆ. ಕಲಾನಿರ್ದೇಶಕ ಶಿವು ಮತ್ತವರ ತಂಡದವರು ಸೆಟ್ ಹಾಕಲು ಅದೆಷ್ಟು ಕಷ್ಟ ಪಟ್ಟಿದ್ದಾರೋ ಅವರಿಗೇ ಗೊತ್ತು. ರವಿ ಬಸ್ರೂರರ ಹಿನ್ನೆಲೆ ಸಂಗೀತ ಭೋರ್ಗರೆಯುವ ಜಲಪಾತದಂತಿದೆ.

ಅನಂತ್ ನಾಗ್ , ಅಚ್ಯುತ್ , ವಸಿಷ್ಠ ಮುಂತಾದವರಿಗೆ ಹೆಚ್ಚು ಅವಕಾಶ ಇಲ್ಲದ್ದು ನಿರಾಸೆಯಾಯಿತು, ಯಶ್ ಅವರಿಗೆ badass ಆಗಿ ಕಾಣುವುದೊಂದೇ ಕೆಲಸ, ಅವರ attitude, ಆ ನೋಟ ಎಲ್ಲ ಜಗತ್ತನ್ನು ಗೆಲ್ಲಹೊರಟವನಿಗೆ ಇರಬೇಕಾದವೇ ಬಿಡಿ.
ಗಣಿಗಾರಿಕೆಯ ಸೂಕ್ಷ್ಮ, ರಾಜಕೀಯ, ಒಳಗುಟ್ಟುಗಳೆಲ್ಲ ಇದ್ದರೆ ಚೆನ್ನಾಗಿರುತ್ತಿತ್ತು, ಇದು ಮಾಸ್ ಚಿತ್ರವಾದ್ದರಿಂದ ಇಲ್ಲಿ ಎಲ್ಲವೂ ಬ್ಲಾಕ್ ಅಂಡ್ ವೈಟ್.
ಬೇರೆ ಚಿತ್ರಗಳಲ್ಲಿ ಖಳನಾಯಕರು ಹೀರೋವಿನ ಕೈಯಲ್ಲಿ ಪೆಟ್ಟು ತಿನ್ನಲಿಕ್ಕೆಂದೇ ಇರುವ ಹಾಸ್ಯಾಸ್ಪದ ವ್ಯಕ್ತಿಗಳಾಗಿರುತ್ತಾರೆ, ಇಲ್ಲಿ ವಿಲನ್ಗಳನ್ನೂ ಮೆರೆಸಿರುವುದು ಖುಷಿಯಾಯಿತು. ಕೊನೆಗೆ ಹೀರೋ ಬುದ್ಧಿ ಉಪಯೋಗಿಸಿ ಕೆಲಸ ಸಾಧಿಸುವುದೂ ತಾಯಿಯ ದುನಿಯಾ ಗೆಲ್ಲುವ ಕಾನ್ಸೆಪ್ಟ್ ಅನ್ನು ಮುದದಿಂದ ಸಾಕಾರಗೊಳಿಸಿ ಮಜಾ ಕೊಟ್ಟಿತು.

ದುಡ್ಡು ಸುರಿದ ಎಂಟೆದೆಯ ನಿರ್ಮಾಪಕರಿಗೆ ದೊಡ್ಡ ನಮಸ್ಕಾರ. ನಿರ್ದೇಶಕನ ಬಗ್ಗೆ ಎಷ್ಟು ಹೇಳಿದರೂ ಕಡಮೆಯೇ, ಕನಸು ಕಾಣುವವರು ಎಷ್ಟು ದೊಡ್ಡ ಮಟ್ಟದಲ್ಲಿ ಕಾಣಬೇಕು ಅನ್ನುವುದಕ್ಕೊಂದು ಮಾದರಿ ಇವರಿಬ್ಬರು.

ಅಬ್ಬರದ ಚಂಡೆಯ ಗೌಜಿಯಲ್ಲಿ ವೀರರಸದ ಯಕ್ಷಗಾನದಂತೆ ಥ್ರಿಲ್ಲಾಗಿಸುವ ಚಿತ್ರವಿದು. ಒಂದು ಜಾತ್ರೆಗೆ ಹೋದಾಗ, ಈ ಅಂಗಡಿಗೆ ಕೆಂಪು ಬಾಗಿಲು ಇರಬೇಕಿತ್ತು, ಜಯಂಟ್ ವೀಲ್ ವಿರುದ್ಧ ದಿಕ್ಕಿನಲ್ಲಿ ತಿರುಗಬೇಕಿತ್ತು , ಚುರುಮುರಿಗೆ ಪೈನಾಪಲ್ ಹಾಕಿದರೆ ಲಾಜಿಕ್ ಸರಿಯಾಗುತ್ತಿತ್ತು ಅಂತೆಲ್ಲ ಹೇಳುತ್ತಾ ಕೂತರೆ ನಷ್ಟ ನಿಮಗೇ , ಹೀಗೆ ಮಾಡುವ ಬದಲು ಬೆರಗುಗಣ್ಣುಗಳಿಂದ ಸುಮ್ಮನೆ ಸಂಭ್ರಮದಲ್ಲಿ ಸೇರಿಕೊಂಡರೆ ಮಜಾ ಹೆಚ್ಚು, ನಾನು ಏನು ಹೇಳುತ್ತಿದ್ದೇನೆ ಅಂತ ಗೊತ್ತಾಯಿತಲ್ಲ ?! ಯಾವುದಕ್ಕೂ ಒಮ್ಮೆ ನೋಡಿಬನ್ನಿ.

ಹಳಗನ್ನಡ ತರಲೆ ಪದ್ಯಗಳು

ತರಲೆ ಮಾಡುವುದು ಅಂತಲೇ ಆದ ಮೇಲೆ ಹೊಸಗನ್ನಡವಾದರೇನು, ಹಳಗನ್ನಡವಾದರೇನು. ಈಗಿನ ಹಾಲಿವುಡ್ ಸಿನೆಮಾಗಳ ಸಂಭಾಷಣೆಗಳನ್ನ ನಮ್ಮ ಪಂಪ ರನ್ನಾದಿ medieval ಕವಿಗಳು ಬರೆದಂತೆ ಬರೆದರೆ ಹೇಗಿದ್ದೀತು ಅಂತ ಮಾಡಿದ್ದ ವಿಚಿತ್ರ ಮತ್ತು ತಲೆಹರಟೆಯ ಕಲ್ಪನೆಯ ಕೂಸುಗಳಿವು.

Chuck Palahniuk ಬರೆದ ಕಾದಂಬರಿ ಆಧರಿಸಿ Fight Club ಅಂತೊಂದು ಚಿತ್ರ ಬಂದಿತ್ತು. ಮೊದಲಿಗೆ ಅದರ ಸಂಭಾಷಣೆಗಳನ್ನೇ ಎತ್ತಿಕೊಳ್ಳೋಣ.

"You are not your job, you're not how much money you have in the bank. You are not the car you drive. You're not the contents of your wallet. You are not your fucking khakis. You are all singing, all dancing crap of the world"
ಇದನ್ನು, ಪಾಪ, ಅಷ್ಟೊಳ್ಳೆ ಕವಿಯಾದ, ವಾಗ್ದೇವಿಯ ಶಾಪಿಂಗ್ ಮಾಲನ್ನು ಲೂಟಿ ಮಾಡಿದವನಾದ ನಮ್ಮ ಕುಮಾರವ್ಯಾಸನ ಹೆಸರು ಹಾಳಾಗುವಂತೆ, ಅವನ ಭಾಷೆಯಲ್ಲಿ ಬರೆದರೆ ಹೇಗಿರಬಹುದು? ಹೀಗೆ :

ಕಾಯಕದ ಮರುಳು ಕವಿದ ತೊತ್ತೆ
ಮಾಯಕದ ಸಿರಿಯ ಬಿಗಿದು ಕೆಡಹು
ರಾಯರೆಲ್ಲರನೊಯ್ವ ರಥವೇ ನೀನು ಧರಣಿಯಲಿ
ಕಾಯ ಒಪ್ಪುವ ತೊಡಿಗೆ ನಿನ್ನದೆ
ಆಯೆನುತ ಬೊಬ್ಬಿರಿದು ದುಗುಡದಲಿ
ಗಾಯನದಲಿ ಬಾಯ ಮೌನವ ಮುರಿವೆ ನೀನೆಂದ

“This is your life and its ending one moment at a time.” ಇದನ್ನು ಪಂಪ ರನ್ನರ ಭಾಷೆಯಲ್ಲಿ,ಭಾವದಲ್ಲಿ ಕೆತ್ತಿದರೆ :
ಮನದೊಳ್ ಇನ್ನೆವರಂ ಸಾವಿಲ್ಲ ಎಂದಿರ್ದಯ್, ಪ್ರಾಣಫಲಮಂ ಆ ಜವರಾಯ ಇನಿಸಿನಿಸು ತಿನದೇ ಪೋಕುಮೇ ?

“We've all been raised on television to believe that one day we'd all be millionaires, and movie gods, and rock stars. But we won't. And we're slowly learning that fact. And we're very, very pissed off.
ಆನ್ ಪುಟ್ಟೆ ಅಮ್ಮನ ಗಂಧವಾರಣ ಪುಟ್ಟಿತೆಂದರ್ ಕವೀಶ್ವರರ್, ಬಳೆಯೆ ನಿಜ ಕೀರ್ತಿಯಿಂ ಅಷ್ಟ ದಿಕ್ತಟಮಂ ಧವಳಿಸುಗು ಎಂದರ್, ಎಲ್ಲಿದುವೋ ಧವಳ ಚಾಮರಂ ? ತಾನೆಲ್ಲಿತ್ತೋ ಧನಂ ? ಶ್ರೀಯುವತಿ ಎತ್ತ ಪೋದಳೋ ? ಜಸಮಂ ಕಾಂಬೆನೆಂದಿರಲ್ ಇಂತಾಯ್ತು ವಿಧಾತೃ! ಸಿರಿ ಪುಸಿ, ನೆಗಳ್ತೆ ಪುಸಿ !

"ನಾನ್ ಬರೋ ತನಕ ಬೇರೆಯವರ್ ಹವಾ, ನಾನ್ ಬಂದ್ ಮೇಲೆ ನಂದೇ ಹವಾ"(ಇದು ಎಲ್ಲೋ ನೋಡಿದ್ದರ ಸ್ಪೂರ್ತಿಯಿಂದ ಸಿಕ್ಕಿದ್ದು)
ಇದು ಒಟ್ರಾಶಿ ಹಳಗನ್ನಡದ ಶೈಲಿಯಲ್ಲಿ :
ನಾಂ ಬರ್ಪನ್ನೆಗಂ ಪೆರರ ಸಮೀರಂ, ಆನ್ ಪೊಕ್ಕೊಡೆ ಎನ್ನದೇ ವಾತಂ.

ಇನ್ನೊಂದು, ಅಮೀರ್ ಖಾನರ ದೇಶ ಬಿಡುವ ಪ್ರಹಸನ ಬಿಸಿಯಾಗಿದ್ದ ಕಾಲದಲ್ಲಿ ಬರೆದದ್ದು. ಮುಪ್ಪಿನ ಷಡಕ್ಷರಿಗಳು ತಿರುಕನ ಕನಸಿನಲ್ಲಿ ಬಳಸಿದ ಭೋಗ ಷಟ್ಪದಿಯನ್ನು ಕೆಡಿಸುವ ಪ್ರಯತ್ನ:
ಮಿಡುಕಿದಳು ರವೀನಾ ಬೆದರಿ
ಸಿಡುಕಿದನು ಅರ್ನಬ್ ಟೀವಿಯಲಿ
ಹುಡುಕಿ ಹೇಳಿ ನಿಜವ ದೇಶ ಕೇಳುತ್ತಿರಲು
ದುಡುಕಿ ರಮಣಿ ಹೇಳಲ್ ದೇಶ
ಬಿಡುವಮೀರ ಖಾನರೆ ನೀವು
ಕಡುಕಷ್ಟವೆ ನಿಮಗೆ ಏನಚ್ಚರಿ ಅಕಟಕಟಾ

ಶತಾವಧಾನಿ ಆರ್ ಗಣೇಶ್ ಮತ್ತು ನಾನು !

ಶತಾವಧಾನಿ ಆರ್ ಗಣೇಶ್ ಮತ್ತು ನಾನು !

"ಇದೇನ್ರೀ ಇದು ಜೋಕ್ ಮಾಡ್ತೀರಾ? ಗಣೇಶ್ ಎಲ್ಲಿ, ನೀವೆಲ್ಲಿ ? ಅವರ ಹೆಸರಿನ ಜೊತೆ ನಿಮ್ಮ ಹೆಸರು ಯಾವ ಲೆಕ್ಕದಲ್ಲಿ ಸ್ವಾಮೀ ಬರುತ್ತೆ" ಅಂತ ಸಿಟ್ಟಾಗಬೇಡಿ. ಗಣೇಶರನ್ನು ನಾನು ಭೇಟಿಯಾದ ಪ್ರಸಂಗವನ್ನಷ್ಟೇ ನಾನು ಹೇಳಹೊರಟದ್ದು. ಅದನ್ನು ಹೇಳಲಿಕ್ಕೆ ಇದೊಂದು TRP friendlyಯಾಗಬಹುದಾದ ಮೊದಲ ಸಾಲನ್ನು ಹಾಕಿದೆನಷ್ಟೇ !

ಹಿರಿಯ ಸಂಸ್ಕೃತ ವಿದ್ವಾಂಸರೂ, ಕಾವ್ಯಮೀಮಾಂಸೆ, ಭಾರತೀಯ ಸಂವೇದನೆ ಮುಂತಾದ ವಿಷಯಗಳಲ್ಲಿ ಕೆಲಸ ಮಾಡಿದವರೂ ಆದ ಪಾದೆಕಲ್ಲು ನರಸಿಂಹ ಭಟ್ಟರ ಬಗ್ಗೆ ಒಂದು ಪುಟ್ಟ ಪುಸ್ತಕವನ್ನು ನಾನು ಬರೆಯಲಿಕ್ಕಿತ್ತು. ಗಣೇಶರೂ ನರಸಿಂಹ ಭಟ್ಟರ ಮೇಲೆ ಅಭಿಮಾನ ಇದ್ದವರು, ಅವರ ವಿಚಾರಗಳನ್ನು ಅರ್ಥಮಾಡಿಕೊಂಡು ಸ್ಪಂದಿಸಿದವರು. ಹಾಗಾಗಿ ರಿಸರ್ಚಿನ ಭಾಗವಾಗಿ ಅವರನ್ನು ಮಾತಾಡಿಸಬೇಕಿತ್ತು. ಗೋಖಲೆ ವಿಚಾರಸಂಸ್ಥೆಯಲ್ಲಿ ಸಿಕ್ಕಿದಾಗ, "ಇಂತದ್ದೊಂದು ವಿಷಯದಲ್ಲಿ, ನಿಮ್ಮ ಹತ್ತಿರ ಮಾತಾಡಲಿಕ್ಕಿದೆ, ಒಮ್ಮೆ ನಿಮಗೆ ಸಿಕ್ಕಲೇ" ಅಂತ ನಾನು ಸಂಕೋಚದಿಂದಲೇ ಕೇಳಿದೆ. 'ನಡೆದಾಡುವ ಸರಸ್ವತಿ' ಎಂದು ಕರೆಸಿಕೊಳ್ಳುವ ಗಣೇಶರು, ಸ್ವಲ್ಪವೂ ದೊಡ್ಡಸ್ತಿಕೆ, ಬಿಗುಮಾನಗಳಿಲ್ಲದೆ, ಸಂಕೋಚದ ಅಗತ್ಯವೇ ಇಲ್ಲವೆಂದು ಪದಗಳನ್ನು ಬಳಸದೆಯೇ ಹೇಳಿ, "ಫೋನ್ ನಂಬರ್ ತಗೊಳ್ಳಿ" ಅಂತಂದು, ಸ್ಥಳದಲ್ಲಿಯೇ ನಂಬರನ್ನು ಕೊಟ್ಟ ನಿರಾಡಂಬರ ಶೈಲಿಯ ಮುನ್ನುಡಿಗೆ ಅಚ್ಚರಿಯಿಂದಲೇ ಕಣ್ಣಾದೆ.

ಮುಂದಿನ ಶುಕ್ರವಾರ ಕರೆಮಾಡಿ, "ನಾಳೆ ಬಂದ್ರೆ ಆದೀತಾ" ಅಂತ ಕೇಳಿದೆ. ಸದ್ಯಕ್ಕೆ ನರೇಂದ್ರ ಮೋದಿ ಮತ್ತು ಕುಮಾರಸ್ವಾಮಿಯವರನ್ನು ಬಿಟ್ಟರೆ ಅತ್ಯಂತ ಬ್ಯುಸಿ ವ್ಯಕ್ತಿ ಇವರೇ ಇರಬಹುದು ಅನ್ನಿಸುವಷ್ಟು ಕೆಲಸಗಳನ್ನು ಗುಡ್ಡೆ ಹಾಕಿಕೊಂಡಿರುವವರು ಅವರು, "ಶನಿವಾರವೂ ಭಾನುವಾರವೂ ಒಂದು ಅರ್ಧ ಗಂಟೆಯೂ ಪುರುಸೊತ್ತು ಇಲ್ಲವಲ್ಲಾ, ಏನ್ಮಾಡೋಣ" ಅಂದರು. "ಓ ಹೌದಾ ಸರ್, ಆಯಿತು ಬಿಡಿ" ಅಂದೆ. ಸ್ವರದಲ್ಲಿ ನಿರಾಸೆಯನ್ನು ಗುರುತಿಸಿದವರಂತೆ, ಕೂಡಲೇ, "ಹೀಗ್ಮಾಡಿ, ಭಾನುವಾರ ರಾತ್ರಿ ಒಂಬತ್ತಕ್ಕೆ free ಆಗ್ತೀನಿ, ಆವಾಗ ಬಂದುಬಿಡಿ" ಅಂದರು. ಒಂದು ಐವತ್ತು ಪುಟಗಳ ಲೇಖನವೊಂದನ್ನು ಕಳಿಸಿ, "ಇದನ್ನು ಓದ್ಕೊಂಡು ಬನ್ನಿ" ಅಂದರು. ಆದರೇನು ಮಾಡೋಣ ! ಅವರಷ್ಟಲ್ಲದಿದ್ದರೂ ನಾನೂ ಬ್ಯುಸಿಯೇ ಆಗಿದ್ದೆ ! ಅದನ್ನು ಹತ್ತೇ ಪುಟ ಓದಿ, ಹೇಳಿದ್ದನ್ನು ಮಾಡದೇ, ಭಂಡಧೈರ್ಯದಿಂದಲೇ ಹೊರಟೆ ! "ಗಣೇಶರು ಸರಿಯಾಗಿ ಬೈತಾರೆ" ಅಂತ ಅವರ ಶಿಷ್ಯರು ಭಾಷಣವೊಂದರಲ್ಲಿ ತಮಾಷೆ ಮಾಡಿದ್ದನ್ನು ಬೇರೆ ಕೇಳಿದ್ದೆ !!

ಹಿಂದೀ ಚಿತ್ರಗಳಿಗೆ ಬರೆಯುತ್ತಿದ್ದ ಸಲೀಂ ಜಾವೇದ್ ಜೋಡಿಯ ಸಲೀಂ ಖಾನ್(ಸಲ್ಮಾನ್ ಖಾನ್ ಇವರ ಮಗನೇ) ಎಷ್ಟು ಓದುತ್ತಿದ್ದರು ಅಂದರೆ, ಕಡೆಗೊಮ್ಮೆ ಗ್ರಂಥಾಲಯವೊಂದರಲ್ಲಿ, "ಹೊಸ ಪುಸ್ತಕವೇನಾದರೂ ಬಂದಿದೆಯೇ" ಅಂತ ಅವರು ಕೇಳಿದಾಗ, ಲೈಬ್ರರಿಯನ್ನರು, "ಇನ್ನು ನೀವು ಓದದೇ ಇರುವ ಪುಸ್ತಕ ಯಾವುದೂ ನಮ್ಮ ಗ್ರಂಥಾಲಯದಲ್ಲಿ ಇಲ್ಲ ಸಲೀಂ ಸಾಬ್" ಅಂದಿದ್ದರಂತೆ ! ಬೆಂಗಳೂರಿನ ಎಲ್ಲ ಗ್ರಂಥಾಲಯಗಳವರೂ ಗಣೇಶರು ಕೇಳಿದರೆ ಹೀಗೇ ಹೇಳಬೇಕಾದೀತೋ ಏನೋ !! "ಬಹುಶಃ ಮೊನ್ನೆ ಶನಿವಾರ ಬಿಡುಗಡೆಯಾದ ನನ್ನ ಪುಸ್ತಕವೊಂದನ್ನು ಬಿಟ್ಟರೆ ಎಲ್ಲವನ್ನೂ ಇವರು ಓದಿ ಮುಗಿಸಿದ್ದಾರೆ" ಅಂತ ತಮಾಷೆ ಮಾಡಿದರೆ ಅದು ವಾಸ್ತವಕ್ಕಿಂತ ಬಹಳ ದೂರವೇನೂ ಹೋಗಲಿಕ್ಕಿಲ್ಲ !! ಹೀಗಿರುವ ಜ್ಞಾನರಾಶಿಯ ಮುಂದೆ ನಾನು ಯಾವ ಮುಖವಿಟ್ಟುಕೊಂಡು ಹೋಗುವುದಪ್ಪಾ, ಏನು ಮಾತಾಡುವುದಪ್ಪಾ ಎನ್ನುವುದನ್ನು ಊಹಿಸಿಯೇ ಒಳಗೊಳಗೇ ಪುಕು ಪುಕು ಶುರುವಾಯಿತು. ಮುಂದಿನದು ನನ್ನಮಟ್ಟಿಗೆ ಅವಿಸ್ಮರಣೀಯ !

ಒಂಬತ್ತೂ ಐದಕ್ಕೆ ಒಳಹೊಕ್ಕವನು ನಡುರಾತ್ರಿ ಹನ್ನೆರಡರವರೆಗೆ ನಿರರ್ಗಳವಾಗಿ ಹರಟಿದೆ. ಒಂದು ನಿಮಿಷದ awkward silence ಕೂಡಾ ಇಲ್ಲದ ನಮ್ಮಿಬ್ಬರ ಅಸ್ಖಲಿತ ಮಾತು ಕೋಣೆಯನ್ನು ತುಂಬಿಸಿತು. ಪಂಡಿತರ ಜೊತೆ ಪಾಮರರು ಮಾತಾಡಲಿಕ್ಕೆ ಆಗುವುದಿಲ್ಲ ಅಂತ ಯಾರು ಹೇಳಿದ್ದು ! ಆರಂಭದಲ್ಲಿ ದಂಡಿ, ಭಾಮಹ, ಆನಂದವರ್ಧನ ಮುಂತಾದವರ ಬಗ್ಗೆಯೆಲ್ಲ ಏನು ಹೇಳ್ತೀರಿ ಅಂತ ಕೇಳಿದಾಗ ಉತ್ಸಾಹದಿಂದಲೇ ಕೊರೆದಿದ್ದೆ, ಭಾರತೀಯ ಸೌಂದರ್ಯ ಮೀಮಾಂಸೆ, ಅಲಂಕಾರಶಾಸ್ತ್ರಗಳ ಪರಿಕಲ್ಪನೆಗಳನ್ನು ಸಿನೆಮಾಕ್ಕೆ ಅನ್ವಯಿಸಬಹುದೇ ಅಂತೆಲ್ಲ ಪ್ರಶ್ನೆ ಮಾಡಿದಾಗಲೂ ನನಗೆ ತೋಚಿದ್ದನ್ನು ಹೇಳಿದ್ದೆ. "ಹುಡುಗ ಎಷ್ಟು ತಿಳಿದುಕೊಂಡಿದ್ದಾನೆ" ಅಂತ ನನ್ನನ್ನು ಪರೀಕ್ಷೆ ಮಾಡುವುದಕ್ಕೆ ಕೇಳಿದ್ದಿರಬಹುದು ಅಂತ ಆಮೇಲೆ ಹೊಳೆಯಿತು !! Aryan invasion theoryಯಿಂದ ಯಕ್ಷಗಾನದವರೆಗೆ ಎಷ್ಟೆಲ್ಲಾ ವಿಷಯಗಳು ಬಂದವೋ !

ಪಾದೆಕಲ್ಲು ನಮಗೆ ನೆರೆಕರೆ ಅಂದಾಗ, "ನೀವು ಕರೋಪಾಡಿ ಗ್ರಾಮದವರೋ" ಅಂತ ಹೇಳಿದ, ದಕ್ಷಿಣ ಕನ್ನಡದ ಹತ್ತು ಹದಿನೈದು ಹಳ್ಳಿಗಳ ಹೆಸರನ್ನು ಕ್ಷಣಮಾತ್ರದಲ್ಲಿ ಹೇಳಿದ ಗಣೇಶರ ಅಸಾಧಾರಣ ಸ್ಮರಣಶಕ್ತಿಯ ಬಗ್ಗೆ ನಾನು ಹೊಸತಾಗಿಯೇನೂ ಹೇಳಬೇಕಾದ್ದಿಲ್ಲ. ಒಂದು ವಿಷಯ ಕೇಳಿದಾಗ, ಅದಕ್ಕೆ ಉದಾಹರಣೆಯಾಗಿ ಎರಡು ಹಳಗನ್ನಡ, ಒಂದು ಸಂಸ್ಕೃತ, ಒಂದು ತೆಲುಗು ಪದ್ಯಗಳನ್ನು ಕೂತಲ್ಲಿಯೇ ನೆನಪಿನಿಂದ quote ಮಾಡಿ ಹೇಳಿದ್ದು ಅವರಿಗೆ ನೀರು ಕುಡಿದಷ್ಟು ಸಲೀಸೆಂದು ನನಗೆ ಗೊತ್ತಿದೆ. ಜೊತೆಗೆ ತಾವೇ ಕಾಫಿ ಮಾಡಿ ನನಗೆ ಕುಡಿಸಿದ್ದೂ ಆಯಿತು. ನಾನು ಯುರೋಪಿಯನ್ ಭಾಷೆಗಳನ್ನು ಕಲಿಯಬೇಕೆಂದಿದ್ದೇನೆ ಅಂತ ಹೇಳಿ ಆ ವಿಚಾರ ಕೇಳಿದೆ . ಹದಿನೆಂಟು ಭಾಷೆಗಳನ್ನು ಕಲಿಯಲಿಕ್ಕೆ ಅವರಿಗೆ ಮಂಜೇಶ್ವರ ಗೋವಿಂದ ಪೈಗಳೇ ಸ್ಫೂರ್ತಿಯಂತೆ, ಅವರು ಪುಸ್ತಕಗಳನ್ನಿಟ್ಟುಕೊಂಡೇ ಅವನ್ನು ಕಲಿತದ್ದಂತೆ. ಈಗ ಕ್ಲಾಸುಗಳಿಗೆ ಹೋಗಿ, ಇಂಟರ್ನೆಟ್ ಅನ್ನು ಬಳಸಿ ಎಲ್ಲ ಕಲಿಯಬಹುದೆಂದು ಅಭಿಪ್ರಾಯ ಪಟ್ಟರು. ಸಂಸ್ಕೃತ ಕಲಿಯಲು ವಿದ್ವಾನ್ ರಂಗನಾಥ ಶರ್ಮ ಅವರ ವಾಲ್ಮೀಕಿ ರಾಮಾಯಣದ ಅನುವಾದ ಓದಿದರೆ ಸಾಕು,ಅವರು ಮೂಲವನ್ನೂ ಅನುವಾದವನ್ನೂ ಕೊಟ್ಟಿರುವುದರಿಂದ ಒಂದು ವರ್ಷದಲ್ಲಿ ಸಂಸ್ಕೃತ ಕರಗತವಾಗುತ್ತದೆ ಅಂತ ಅವರ ಅಂಬೋಣ. ಯಾವ ಸಿನೆಮಾಗಳನ್ನು ನೋಡಿದ್ದೀರಿ ಅಂತ ಕೇಳಿ , ಸಂಗೀತ ಕೇಳುವ ಅಭ್ಯಾಸ ಬೆಳೆಸಿಕೊಳ್ಳಿ ಅಂತ ಹೇಳಿದರು.

ಅವರ ಕೆಲವು ವಿಚಾರಗಳು ನನಗೆ ಒಪ್ಪಿಗೆಯಾಗಲಿಲ್ಲ. ಕೆಲವು ವಿಷಯಗಳ ಮತ್ತು ವ್ಯಕ್ತಿಗಳ ಬಗ್ಗೆ ಪೂರ್ವಗ್ರಹದಿಂದ ಮಾತಾಡಿದರೆಂದೂ ಕಂಡಿತು. ಏನೇ ಇದ್ದರೂ, ಆ ಹೊತ್ತಲ್ಲದ ಹೊತ್ತಿನಲ್ಲಿ, odd timeನಲ್ಲಿ ಕರೆಸಿಕೊಂಡು, ಎಷ್ಟೋ ವಿಷಯಗಳಲ್ಲಿ ನನಗಿದ್ದಿರಬಹುದಾದ ಅಜ್ಞಾನವನ್ನು ಲೆಕ್ಕಿಸದೆ, ವಯಸ್ಸಿನ, ಜ್ಞಾನದ, ಅಭಿರುಚಿಯ ಅಂತರವಿದ್ದರೂ ಗೆಳೆಯರಂತೆ ಅಷ್ಟು ದೀರ್ಘಕಾಲ ಮಾತಾಡಿದ್ದು ಅವರ ಔದಾರ್ಯವೆಂದು ಹೇಳದಿದ್ದರೆ ತಪ್ಪಾದೀತು.

ನಾವಿಬ್ಬರೂ ಸೇಡಿಯಾಪು ಕೃಷ್ಣಭಟ್ಟರ ಅಭಿಮಾನಿಗಳಾದ್ದರಿಂದ ಒಂದು ಹದಿನೈದಿಪ್ಪತ್ತು ನಿಮಿಷ ಅವರ ಪಾಂಡಿತ್ಯದ, ವಿಚಾರಗಳ ಚರ್ಚೆಯಾಯಿತು. ನಾಟ್ಯಶಾಸ್ತ್ರದ ಭರತ, ಧ್ವನ್ಯಾಲೋಕದ ಆನಂದವರ್ಧನ, ನ್ಯೂಟನ್, ಐನ್ ಸ್ಟೈನ್ ಮುಂತಾದವರ ಸಾಲಿನಲ್ಲೇ ಸಲ್ಲಬೇಕಾದ ಹೆಸರು ಸೇಡಿಯಾಪು ಅವರದ್ದು, ಅವರ ಸ್ಥಾನ ಬೇರೆ ಯಾವ ordinary mortalಗಳ ಜೊತೆಗೂ ಅಲ್ಲ ಅಂತ ಗಣೇಶರ ಅಭಿಪ್ರಾಯ. ಸೇಡಿಯಾಪು ಅವರು "ಕನ್ನಡ ಭಾಷಾಸೇವೆ" ಎಂಬ ಲೇಖನದಲ್ಲಿ, ಭೂಗೋಳ, ಇತಿಹಾಸ, ಗಣಿತ, ವಿಜ್ಞಾನ, ಅರ್ಥಶಾಸ್ತ್ರ ಮುಂತಾದ ಜ್ಞಾನಶಾಖೆಗಳಲ್ಲಿ ಬರೆಯುವುದು ಅತ್ಯಂತ ಉನ್ನತ ಮಟ್ಟದ ಕೆಲಸವೆಂದೂ, ಅದಕ್ಕೆ ಅಪಾರವಾದ ಪ್ರತಿಭೆ ಬೇಕೆಂದೂ ಹೇಳಿದ್ದು, ಅವರ ಅಭಿಪ್ರಾಯದಂತೆ ನಾನು ಇಂತಹಾ ವಿಷಯಗಳನ್ನು ಹುಡುಕಿ ಬರೆದಿದ್ದೇನೆಂದೂ ಸೇರಿಸಿದೆ. ಸೇಡಿಯಾಪು ಅವರ ಪಾಂಡಿತ್ಯ ನನಗೆ ಹೇಗೆ ಉಳಿದವರದಕ್ಕಿಂತ ಬೇರೆಯಾಗಿ ಕಾಣುತ್ತದೆ ಅಂತಲೂ ಹೇಳಿದೆ. ನಾನು ತೀನಂಶ್ರೀ ಅವರ ಅಭಿಮಾನಿಯೂ ಹೌದೆಂದು ಹೇಳಿ ಅವರ "ಭಾರತೀಯ ಕಾವ್ಯಮೀಮಾಂಸೆ" ನನಗೆ ಯಾಕಿಷ್ಟ ಅಂತ ವಿವರಿಸಿದೆ. ಪಾವೆಂ ಆಚಾರ್ಯರ ಪ್ರತಿಭೆ ಅಷ್ಟೊಂದು ವಿಷಯಗಳಲ್ಲಿ ಹರಿದು ಹಂಚಿ ಹೋಗುವ ಬದಲು ಒಂದೇ ಕ್ಷೇತ್ರದಲ್ಲಿ ಅವರು ದೊಡ್ಡ ಕೆಲಸವನ್ನೇನಾದರೂ ಮಾಡಬೇಕಿತ್ತು ಅಂತ ಗಣೇಶರಿಗೆ ಕಾಣುತ್ತದೆ. ಪದಾರ್ಥ ಚಿಂತಾಮಣಿ ದೊಡ್ಡ ಕೆಲಸವೇ ಅಲ್ಲವೇ ಅಂತ ನಾನು ಹೇಳಿದೆ.

ಕಡೆಗೆ ನನ್ನದೊಂದು ಲೇಖನವನ್ನೂ ಮೂರು ಪುಟದಷ್ಟು ಓದಿ, "ನಿಮಗೆ ಚಂದದ ಭಾಷೆ ಒಲಿದಿದೆ, ಸೊಗಸಾದ ಶೈಲಿ ಇದೆ , ವ್ಯಾಕರಣಶುದ್ಧವಾಗಿಯೂ ಬರೆದಿದ್ದೀರಿ" ಅಂತ ಗಣೇಶರು ಹೇಳಿದ್ದು ನನಗೆ ಸಿಕ್ಕಿದ ದೊಡ್ಡ ಸರ್ಟಿಫಿಕೇಟು. ಅಜ್ಜಿಪುಣ್ಯಕ್ಕೆ ಅವರಿಗೆ ತೋರಿಸಿದ ಭಾಗಗಳಲ್ಲಿ ಸೊಗಸಾದ ಶೈಲಿ ಮತ್ತು ದೋಷಗಳಿಲ್ಲದ ಭಾಷಾಪ್ರಯೋಗ ಇತ್ತೆಂದು ಕಾಣುತ್ತದೆ !

ಅವರಿಗೆ ಬೆನ್ನು ನೋವಿದ್ದು ಹೆಚ್ಚು ಹೊತ್ತು ಕೂತುಕೊಳ್ಳಲಿಕ್ಕೆ ಆಗುವುದಿಲ್ಲವಂತೆ ಅಂತ ನನಗೆ ಆಮೇಲೆ ಒಂದುದಿನ ಗೊತ್ತಾಯಿತು ! ಹಾಗಾದರೆ ಅಷ್ಟು ಹೊತ್ತು ನೋವನ್ನು ಸ್ವಲ್ಪವೂ ತೋರಿಸದೆ ಅದೂ ರಾತ್ರಿ ಕೂತಿದ್ದರೆಂದು ಕಾಣುತ್ತದೆ. ಈ ಅತಿಥಿ ಸತ್ಕಾರಕ್ಕೆ, ಸೌಜನ್ಯಕ್ಕೆ ಏನು ಹೇಳೋಣ. ಇವತ್ತು ಗಣೇಶರ ಜನುಮದಿನವಂತೆ ಅಂತ ಗೊತ್ತಾಗಿ ಇಷ್ಟು ಬರೆದೆ.

ಅಂಬರೀಷರ Top 25 ಚಿತ್ರಗಳು

 ಒಬ್ಬೊಬ್ಬರಿಗೆ ಒಂದೊಂದು ಕಾರಣಕ್ಕೆ ಹಿಡಿಸುತ್ತಿದ್ದ ಅಂಬರೀಷರು ನನಗೆ ಇಷ್ಟವಾದದ್ದು ಇನ್ನೊಬ್ಬರ ಕಷ್ಟಕ್ಕೆ ಕರಗುವ, ಪರೋಪಕಾರಕ್ಕೆ ನಿಂತುಬಿಡುವ 'ಮೃದೂನಿ ಕುಸುಮಾದಪಿ' ವ್ಯಕ್ತಿಯಾಗಿಯೇ. ಗೆಳೆಯರೊಬ್ಬರ ಗೆಳೆಯರು ಒಂದು ಸಲ ಒಂದು ಕ್ರಿಕೆಟ್ ಟೂರ್ನಮೆಂಟು ಮಾಡಿಸಲಿಕ್ಕೆ ಸಹಾಯ ಕೇಳಲಿಕ್ಕೆ ಅಂತ ಅಂಬಿ ಮನೆ ಬಾಗಿಲಿಗೆ ಹೋಗಿದ್ದರಂತೆ. ನಿಮಗೇನು ಕೆಲಸ ಇಲ್ಲವಾ ಅಂತ ಶುರು ಮಾಡಿ, "ಕ್ರಿಕೆಟ್ ಯಾಕ್ ಆಡಿಸ್ತೀರಾ, ಕಬಡ್ಡಿ ಆಡಸ್ರುಲಾ" ಅಂತ ಉಗಿದು, ಮನಸಾರೆ ಬಾಯ್ತುಂಬಾ ಬಯ್ದು, ಎರಡೇ ನಿಮಿಷದಲ್ಲೇ ನಿಂತ ಜಾಗದಲ್ಲೇ ಒಂದು ಲಕ್ಷ ರೂಪಾಯಿ ತೆಗೆದುಕೊಟ್ಟು ಕಳಿಸಿದರಂತೆ !

ಅವರ ಟಾಪ್ ೧೦ ಚಿತ್ರಗಳದ್ದೊಂದು ಪಟ್ಟಿ ಮಾಡೋಣ ಅಂತ ಗಂಧದಗುಡಿ ಫೋರಮ್ಮಿನ ಗೆಳೆಯರ ವಾಟ್ಸಪ್ಪ್ ಗ್ರೂಪಿನಲ್ಲಿ ಕೇಳಿದಾಗ ಹರಿದು ಬಂದ ಹೆಸರುಗಳಿಂದ ಮಾಡಿದ ಟಾಪ್ ೨೫ ಪಟ್ಟಿ (in no particular order):
ಅಂತ
ಆಹುತಿ
ಚಕ್ರವ್ಯೂಹ
ಪಡುವಾರಹಳ್ಳಿ ಪಾಂಡವರು
ಒಲವಿನ ಉಡುಗೊರೆ
ಏಳು ಸುತ್ತಿನ ಕೋಟೆ
ಹೃದಯ ಹಾಡಿತು
ಗಂಡುಭೇರುಂಡ
ಆಪರೇಷನ್ ಅಂತ
ಮಿಡಿದ ಹೃದಯಗಳು
ಮುಸುಕು
ಪೂರ್ಣಚಂದ್ರ
ಸಪ್ತಪದಿ
ಮಣ್ಣಿನ ದೋಣಿ
ಮುಂಜಾನೆಯ ಮಂಜು
ಒಡಹುಟ್ಟಿದವರು
ಕಲ್ಲರಳಿ ಹೂವಾಗಿ
ಟೋನಿ
ಮೃಗಾಲಯ

ರೀಮೇಕ್:
ನ್ಯೂ ಡೆಲ್ಲಿ
ತಿರುಗುಬಾಣ
ಪುಕ್ಸಟ್ಟೆ ಗಂಡ ಹೊಟ್ಟೆತುಂಬ ಉಂಡ

ಪೋಷಕ ಪಾತ್ರಗಳು :
ಮಸಣದ ಹೂವು
ರಂಗನಾಯಕಿ
ದೊಡ್ಮನೆ ಹುಡುಗ

ಬೋನಸ್ ಓದಿಗೆ :
ಉದಯ ಮರಕಿಣಿಯವರು ಹಿಂದೊಮ್ಮೆ ಕಟ್ಟಿಕೊಟ್ಟಿದ್ದ ವ್ಯಕ್ತಿತ್ತ್ವದ ಚಿತ್ರ :
https://www.chitraloka.com/uma-col…/12051-uma-column-67.html

ದಿಲ್ದಾರ್ ವ್ಯಕ್ತಿತ್ವದ ಒಂದೆರಡು ಕಥೆಗಳು ಇಲ್ಲಿ :
https://www.chitraloka.com/news/19021-ambi-the-kaliyugadha-karna.html

ಮರ್ಯಾದೆ ತೆಗೆಯುವ ಕಲೆಯ ಬಗ್ಗೆ ಮತ್ತಷ್ಟು


ಸಿನೆಮಾಗಳಲ್ಲಿ 'ಡಿಲೀಟೆಡ್ ಸೀನು'ಗಳನ್ನು ಆಮೇಲೆ ಡಿವಿಡಿಯಲ್ಲೋ ಯುಟ್ಯೂಬಿನಲ್ಲೋ ಹಾಕುವುದುಂಟು. ಹಾಗೆಯೇ, ನಾಳಿದ್ದು ಬರಲಿರುವ ನನ್ನ ಪುಸ್ತಕದಲ್ಲಿರುವ "ಮರ್ಯಾದೆ ತೆಗೆಯುವ ಕಲೆ" ಎಂಬ ಲೇಖನದಲ್ಲಿ ಸೇರದೇ ಉಳಿದುಕೊಂಡ, ಕೆಲವು ಮಜಾ ಕೊಡುವ, ಚಾಕಚಕ್ಯತೆ ಮೆರೆಯುವ ಅವಮಾನಗಳು:

He hasn't an enemy in the world, and none of his friends like him - Wilde on Shaw

What you lack in intelligence, you more than make up for in stupidity

I don't know what makes you so stupid, but whatever it is, it's really working

If he fell into the Thames, that would be misfortune; if someone pulled him out, that would be a calamity

Look, everyone has the right to be stupid, but you are abusing the privilege

Oh my god, look at you. Was anyone else hurt in the accident?

He is able to turn an unplotted, unworkable manuscript into an unplotted and unworkable manuscript with a lot of sex

ಅವರು: ನಾನು ಯಾಕೋ ಮೊದಲು ಬರೀತಾ ಇದ್ದ ಹಾಗೆ ಈಚೆಗೆ ಬರೀತಾ ಇಲ್ಲ
ಇವರು: ನೀವು ಮೊದಲಿನ ಹಾಗೇ ಬರೀತಾ ಇದೀರಾ ಬಿಡಿ, ನಿಮ್ಮ ಟೇಸ್ಟು ಸುಧಾರಿಸಿದೆ ಅಷ್ಟೇ.

ಚೆನ್ನಾಗಿ ಬರೆಯಲಿಕ್ಕೆ 3 ನಿಯಮಗಳಿವೆ. ಮೊದಲನೆಯ ನಿಯಮ: ಆರ್ಥರ್ ಪಿನೆರೋ ಜೋನ್ಸರಂತೆ ಬರೆಯಬಾರದು. 2ನೇ ಮತ್ತು ಮೂರನೇ ನಿಯಮವೂ ಅದೇ

Her virtue was that she said what she thought, her vice that what she thought didn't amount to much

Actress- I enjoyed reading your book. Who wrote it for you?
Ilka Chase - Darling, I am glad that you liked it. Who read it to you?

When I am right, I get angry, Churchill gets angry when he is wrong. We are angry at each other much of the time

Congressman: I have nothing to say, young man.
Heywould Broun: I know that. Now shall we get on with the interview?

I can still remember the first time I ever heard Hubert Humphrey speak. He was in the 2nd hour of a 5 minute talk

He uses statistics like a drunk uses lamp-posts, more for support than illumination

This wasn't just plain terrible, this was fancy terrible, this was terrible with raisins in it

I’ve just learned about his illness. Let’s hope it’s nothing trivial.

If Kinnock wins today will the last person to leave Britain please turn out the lights - The Sun

Drew Barrymore sings so badly, deaf people refuse to watch her lips move

Who can forget Mel Gibson in Hamlet? Though many have tried

He's never going to be a great player on grass, the only time he comes to the net is to shake your hand - Goran Ivanisevic on Ivan Lendl

The kid is the greatest proof of reincarnation. Nobody could be that stupid in one lifetime

Greg Thomas(after Viv Richards swings and misses)- It's red, round and weighs about 5 ounces, in case u were wondering.
Viv Richards(after smashing a 6)- Greg, you know what it looks like. Now go and find it

A discussion between 3 Gulag prisoners: "So, comrade, what have you done to be here?" "Well, I came late to work, so they accused me of sabotage". "And you, comrade, what did you do?" "Well,I came early to work, so they accused me of industrial espionage. What about you,comrade?" "Well, I came to work on time,so they accused me of buying my watch in the West"

ರವಿ ಬೆಳಗೆರೆಯವರ ಅಣಕ

ನಮ್ಮ ಕಾರ್ಯಕ್ರಮ ಮುಂದೆ ಹೋದದ್ದನ್ನು ಹೇಳಿದ್ದು

ಕಳೆದ ವಾರ ನಡೆಯಬೇಕಾಗಿದ್ದ ಪುಸ್ತಕಗಳ ಲೋಕಾರ್ಪಣೆ ಮುಂದಕ್ಕೆ ಹೋದದ್ದು ನಿಮಗೆ ಗೊತ್ತೇ ಇದೆ. ಆ ಕಾರ್ಯಕ್ರಮವೀಗ ಡಿಸೆಂಬರ್ 1, 2018ರ ಶನಿವಾರ ಸಂಜೆ 4 ಗಂಟೆಗೆ ಆಗಲಿದೆ. ಹಿಂದೊಮ್ಮೆ ಬೇಂದ್ರೆ,ಅಡಿಗ,ಯೋಗರಾಜ ಭಟ್ಟರ ಪದ್ಯಗಳ ಅಣಕ ಮಾಡಿದ್ದು, ಇಂಗ್ಲೀಷು ಸಾಲುಗಳನ್ನು ಹಳಗನ್ನಡದಲ್ಲಿ ಹೇಳಿದ್ದು ಎಲ್ಲ ನಿಮಗೆ ನೆನಪಿರಬಹುದು. ಈಗ ಮತ್ತೊಂದು. ರವಿ ಬೆಳಗೆರೆಯವರು ತನ್ನದೇ ಶೈಲಿಯಲ್ಲಿ ಈ ಕರೆಯೋಲೆಯನ್ನು ಬರೆದರೆ ಹೇಗೆ ಬರೆಯಬಹುದಿತ್ತು ಎಂಬ ಕಲ್ಪನೆ:

ಎಂದಿನಂತೆ ಓದುಗ ದೊರೆಗೆ ನಮಸ್ಕಾರಗಳು. ಅಸಲಿಗೆ ನಾನು ಪುಸ್ತಕಕ್ಕೆ ಅಂತ ಬರೆದವನೇ ಅಲ್ಲ. ಯಾಕೋ ಹಟಕ್ಕೆ ಬಿದ್ದವನಂತೆ ಅಜಮಾಸು ಮೂರು ವರ್ಷ ಬರೆಯುತ್ತ ಹೋದೆ, ನೀವು ಓದುತ್ತ ಹೋದಿರಿ. ತುಂಬ positive ಆದ ಕೆಲವು ಕಾಮೆಂಟ್ ಗಳಿದ್ದವು,ಇದನ್ನೆಲ್ಲಾ ಇಷ್ಟುದ್ದ ಫೇಸ್‌ಬುಕ್ಕಿನಲ್ಯಾಕೆ ಬರೀತೀರಿ ಎಂಬಂಥ ಡರಾವುಗಳೇನೂ ಇರಲಿಲ್ಲ. Fine. I am damn happy. ಒಂದಷ್ಟು ಹೊಸ ಸರಕನ್ನೂ ಪಟ್ಟಾಗಿ ಕೂತು ಹೊಂಚಿದೆ. "ನಾನು ಬರೀತೀನಾ? ಇದೆಲ್ಲಾ ಆಗುತ್ತಾ? ಅಷ್ಟಕ್ಕೂ ಈ ಮಹಾನಗರವೆಂಬ ಮಾಯಾಂಗನೆಯ ಸ್ಪೀಡು ನಿಮ್ಮನ್ನ ಓದಲು ಬಿಡುತ್ತದಾ?" ಹಾಗಂತ ಕೇಳಿಕೊಂಡದ್ದಿತ್ತು. ಈಗ ನೋಡಿದರೆ ಬರೋಬ್ಬರಿ ೧೨೫ ಪುಟಗಳಾಗಿವೆ ! ಹೆಗ್ಗಳಿಕೆ ನನ್ನದಾ? ಅದು ನಿಮ್ಮದಾ? With all sincerity, ನಿಜಕ್ಕೂ ತುಂಬ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ಇಂಥ ಸಂದರ್ಭಗಳಲ್ಲಿ ತುಂಬ ಭಾವುಕನಾಗುತ್ತೇನೆ, ಮುಕೇಶ್‌ನ ಹಾಡೊಂದು ನೆನಪಾಗುತ್ತಿದೆ. ಬೆನ್ನು ಬಾಗಿಸಿ ಕೂತು ಬರೆದು, ಅದರ ಕರಡು ನೋಡಿ, ಪ್ರಿಂಟು ಮಾಡಿಸಿ, ಮೊದಲ ಪ್ರತಿ ಕೈಗೆ ಬಂದಾಗ ಅದೊಂಥರಾ ಖುಷಿ. ಮನಸ್ಸು ಜೋಯಿಡಾದ ಕಾಡಲ್ಲಿ ಸುಳಿಯುವ ಜಿಂಕೆ ! ಸಾವನ್ ಕಾ ಮಹೀನಾ ಪವನ್ ಕರೇ ಶೋರ್ ! ದಿಲ್ಲು ಫುಲ್ ಖುಷ್ ! ಆಯ್ತಲ್ಲ, ಇನ್ನೇನು? I am free now- ಎಂಬ ಭಾವ. ನಿಮಗೆ ಹೇಳಿಕೊಳ್ಳಬೇಕೆನ್ನಿಸಿತು. ನನ್ನ ಶ್ರದ್ಧೆ ಯಾವತ್ತೂ, ಕೊಂಚ ಮಾತ್ರವೂ ಕಡಮೆಯಾಗುವುದಿಲ್ಲ. ಪುಸ್ತಕ ನೋಡಿದರೆ ಅಂಕಿತ ಪ್ರಕಾಶನದವರ ಅಚ್ಚುಕಟ್ಟು-ಮಟ್ಟಸ ಎಂಥದೆಂಬುದು ಗೊತ್ತಾಗಿ ಹೋಗುತ್ತದೆ. ಜೋಗಿ ಅವರ ಸೊಗಸಾದ ಮುನ್ನುಡಿಯಿದೆ. Once again, I am blessed.
ನಾಳಿದ್ದು ಸಂಜೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರಿನ ಸಭಾಂಗಣದಲ್ಲಿ ಸಿಗೋಣ. ನಾನು ಕರೆಯದೆ ಇರ್ತೇನಾ, ನೀವು ಬರದೇ ಇರ್ತೀರಾ ?

ನನ್ನ ಮೊದಲ ಪುಸ್ತಕ

ಕಾರ್ಯಕ್ರಮಕ್ಕೆ ಬರೆದ ಕರೆಯೋಲೆ :
ನಾಳೆ ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ನಮ್ಮ ಪುಸ್ತಕಗಳ ಲೋಕಾರ್ಪಣೆ. ಸಮಯ : ಬೆಳಗ್ಗೆ 10ರಿಂದ.

ಇದನ್ನು ಓದುತ್ತಿರುವುದರಿಂದ ನಿಮಗೆ ಓದುವ ಅಭ್ಯಾಸ ಇದ್ದೀತೆಂದು ತಿಳಿದು ನಿಮಗೀ ಅಕ್ಕರೆಯ ಕರೆಯೋಲೆ. ನಾನು ಬರೆದಿರುವ ವೈಚಾರಿಕ, ಅಲ್ಲಲ್ಲ ಲಲಿತ, ಐ ಮೀನ್ ಲಲಿತ ವೈಚಾರಿಕ ಅಲ್ಲಲ್ಲ ವೈಚಾರಿಕ ಲಲಿತ ಪ್ರಬಂಧಗಳು ಪುಸ್ತಕ ರೂಪದಲ್ಲಿ ಜನ್ಮ ತಳೆಯಲಿವೆ. ಈ ಮಗುವಿನ ನಾಮಕಾರಣಕ್ಕೆ ನೀವು ಬಂದು, ಮುಂದಿನ ದಿನಗಳಲ್ಲಿ ಮಗುವನ್ನು ಎತ್ತಿ ಆಡಿಸಿ, ಮಗು ಉಶಾರುಂಟಾ, ಚಂದ ಉಂಟಾ, ತಂಟೆಕೋರನಾ, ಅದರ ಕಿವಿ ಹಿಂಡಬೇಕಾ ಅಂತೆಲ್ಲ ಹೇಳಿದರೆ ನನ್ನ ಸಂಭ್ರಮ ದುಪ್ಪಟ್ಟಾಗುತ್ತದೆ.

ಲೋಕಾರ್ಪಣೆಯಾಗಲಿರುವ ಪುಸ್ತಕಗಳು :
ಬಾಗಿಲು ತೆರೆಯೇ ಸೇಸಮ್ಮ / ಶರತ್ ಭಟ್ ಸೇರಾಜೆಯ ಲೇಖನಗಳ ಸಂಗ್ರಹ
ಸಲಾಂ ಬೆಂಗಳೂರು / ಜೋಗಿ ಅವರ ಕಾದಂಬರಿ
ನವಿಲು ಕೊಂದ ಹುಡುಗ /ಸಚಿನ್ ತೀರ್ಥಹಳ್ಳಿ ಅವರ ಕಥಾ ಸಂಕಲನ

ಎಲ್ಲರೂ ಬನ್ನಿ, ಹರಸಿ.

----------------------------------------------------------------------------------
ಕಾರ್ಯಕ್ರಮ ನಾಳಿದ್ದು ಆದಿತ್ಯವಾರ, ವಂದನಾರ್ಪಣೆಯ ಕಾರ್ಯಕ್ರಮ ಇಲ್ಲೇ, ಇವತ್ತಿಂದಲೇ !

ವಂದನಾರ್ಪಣೆ ಭಾಗ ೧
==============================
ಬೆನ್ನುಡಿಗೆ ಯಾರಾದೀತು ಅಂತ ಭೂಮಿ ಅಡಿಮೇಲು ಮಾಡುತ್ತಿದ್ದಾಗ, ಇಂಗ್ಲೀಷು ಪುಸ್ತಕಗಳಿಗೆ ಇರುವಂತಹಾ ಕಣ್ಣು ಸೆಳೆಯುವ ಬ್ಲರ್ಬ್ ಯಾಕಿರಬಾರದು ಅಂತ ಆಸೆಗಣ್ಣುಗಳಿಂದ ಹುಡುಕಿದಾಗ, ಒದಗಿ ಬಂದ ಹೆಸರು ಗಣೇಶ್ ಭಟ್ ನೆಲೆಮಾಂವ್ ಅವರದ್ದು. Ganesh Bhat ವೈಯಕ್ತಿಕವಾಗಿ ನನಗೆ ಪರಿಚಯ ಇರುವವರಲ್ಲ, ಮತ್ತು ಬಹುಶಃ ನನಗಿಂತ ಕಿರಿಯರು, ಆದರೂ ಸಣ್ಣವಯಸ್ಸಿನಲ್ಲಿಯೇ ಸಾಕಷ್ಟು non-fiction ಪುಸ್ತಕಗಳ ಮೇಲೆ ಕಣ್ಣೋಡಿಸಿರುವ expert reader. ಅರ್ಜೆಂಟಿಗೆ ಬೇಕಾದರೆ ನನಗೋ, ನಮ್ಮ ಪ್ರಶಾಂತ ಭಟ್ಟರಿಗೋ, ಗುರುರಾಜ ಕೋಡ್ಕಣಿಯವರಿಗೋ ನಾವು ಓದಿರದ non-fiction ಪುಸ್ತಕವೊಂದರ ಹೆಸರು ಹೇಳಿ ಬಿಡಬಲ್ಲವರು. ಇನ್ನೂ ಹೇಳಬೇಕೆಂದರೆ ಗಣಿತ, ವಿಜ್ಞಾನ, ತಂತ್ರಜ್ಞಾನ, ಭಾಷೆಯಂತಹಾ ವಿಷಯಗಳಲ್ಲಿ ಬಂದಿರುವ ಬೇರೆ ಬರೆಹಗಳನ್ನು ಓದಿ, ಅವಕ್ಕಿಂತ ನನ್ನದು ಹೇಗೆ ಭಿನ್ನ ಅಂತ ಗ್ರಹಿಸಬಲ್ಲವರು. ನನ್ನನ್ನು ಮುಖತಃ ಕಂಡವರಲ್ಲವಾದರೂ ನನ್ನ ಬರೆಹಗಳ ಅಂತರಂಗವನ್ನು ಆಪ್ತಮಿತ್ರನಂತೆ ತಿಳಿದವರು.

ಕೇಳಿದಾಗ ಸಂಕೋಚದಿಂದಲೂ, ಸಂತೋಷದಿಂದಲೂ ಒಪ್ಪಿದರು.
"ನಮ್ಮ ನಡುವಿನ ಸಾಕ್ಷಿಪ್ರಜ್ಞೆಯಾದ ಶರತ್ ಸೇರಾಜೆಯವರು ಒಂದು ಬಂಧದ ಚೌಕಟ್ಟಿನೊಳಗೆ ಸೂಕ್ಷ್ಮ ಸಂವೇದನೆಯ ಆಶಯವು ಗ್ರಹೀತವಾಗುವುದರ, ಅರ್ಥಸ್ಫೋಟದ ಅನುಸಂಧಾನದ ಉದ್ಭೋದವಾಗಿ ತನ್ನ ಹಳವಂಡದಲ್ಲಿ ತಾನೇ ಹರಳುಗಟ್ಟಿ.... " ಅಂತೆಲ್ಲ ಬರೆದರೆ ಅಂಡರ್ವರ್ಲ್ಡ್ ಡಾನುಗಳನ್ನು ಕರೆಸಿಯೇನು ಅಂತ ಹೆದರಿಸಿದೆ. ನನ್ನ ಗ್ರಹಿಕೆ ಚೂರೂ ತಪ್ಪಾಗಲಿಲ್ಲ ಎಂಬಂತೆ ಎರಡು ಒಂದಕ್ಕಿಂತ ಒಂದು catchyಯಾದ ಬೆನ್ನುಡಿಗಳನ್ನು ಬರೆದುಕೊಟ್ಟು, ಒಂದನ್ನು ಆಯಬೇಕಾದ ಮತ್ತು ಉದ್ದ ಹೆಚ್ಚಾದ್ದರಿಂದ ಸ್ವಲ್ಪ ಅಲ್ಲಿಲ್ಲಿ ಕತ್ತರಿಸಬೇಕಾದ ಇಕ್ಕಟ್ಟಿಗೆ ನನ್ನನ್ನು ಸಿಕ್ಕಿಸಿ, "ಹೆಂಗೆ" ಅಂತ ಕೇಳಿದರು. ಅವರ ಆಕರ್ಷಕವಾದ ಬೆನ್ನುಡಿಯಿಂದ ಪುಸ್ತಕದ ಅಂದ ಹೆಚ್ಚಿದೆ ಅಂದರೆ ಹೆಚ್ಚಾಗಲಾರದು.
----------------------------------------------------------------------------------
"ಅಂಕಿತ ಪ್ರತಿಭೆ" ಮಾಲಿಕೆಯ ಸಂಪಾದಕರಾಗಿ, ಆ ಮಾಲಿಕೆಗೆ ನನ್ನ ಲೇಖನಗಳನ್ನು ಆಯ್ದು, ಪ್ರತಿಷ್ಠಿತ ಸಂಸ್ಥೆಯಾದ ಅಂಕಿತ ಪ್ರಕಾಶನದಿಂದಲೇ ಈ ಪುಸ್ತಕ ತರುತ್ತಿರುವ, ಇಷ್ಟೊಳ್ಳೆ ಮುನ್ನುಡಿ ಕೊಟ್ಟು, ಒಳ್ಳೆ vocabulary ಉಂಟೆಂದು ಬೀಗುತ್ತಿದ್ದ ನನ್ನನ್ನು ಯಾವ ಶಬ್ದ ಹಾಕಿ ಥ್ಯಾಂಕ್ಸ್ ಹೇಳುವುದೆಂದು ಗೊತ್ತಾಗದೆ ಪೇಚಾಡಿಸಿದ, ತನ್ನ "ಸಲಾಂ ಬೆಂಗಳೂರು" ಕಾದಂಬರಿ ತರುತ್ತಿರುವ ಈ ಹೊತ್ತಿನಲ್ಲಿ, ಬೆಂಗಳೂರರಿನಿಂದಲೇ ಜೋಗಿಯವರಿಗೊಂದು ಸಲಾಂ.

ಒಂದೊಳ್ಳೆಯ ಮುನ್ನುಡಿ ಬರೆಯುವುದು ಕಷ್ಟದ ಕೆಲಸ. ಪ್ರಸಿದ್ಧರ ಮುನ್ನುಡಿಯ ತೊಂದರೆ ಏನೆಂದರೆ, ಎಷ್ಟೋ ಸಲ, ಎಂಟೋ ಹತ್ತೋ ಪುಟಗಳನ್ನೋದಿ ಕಾಟಾಚಾರಕ್ಕೆ ಏನೋ ಒಂದು generic ಮುನ್ನುಡಿ ಬರೆದಿದ್ದಾರೆ ಅನ್ನಿಸುತ್ತದೆ. ಅದು ಅವರ ತಪ್ಪೂ ಅಲ್ಲ, ಅವರು ಮೊದಲೇ ಬಿಡುವಿಲ್ಲದವರು. ಹತ್ತಿಪ್ಪತ್ತು ಜನ ಒಟ್ಟೊಟ್ಟಿಗೆ ಮುನ್ನುಡಿ ಕೇಳಿದರೆ ಅವರಾದರೂ ಏನು ಮಾಡಿಯಾರು. ಇದಕ್ಕೆ ಒಂದು ಒಳ್ಳೆಯ exception ಆಗಿ ಜೋಗಿಯವರ ಮುನ್ನುಡಿಯಿದೆ. ಹೀಗೂ ಬರೆಯಬಹುದಲ್ಲ ಅಂತ ಅವರು ಬರೆದದ್ದನ್ನು ನೋಡಿದ ಮೇಲೆ ಅನ್ನಿಸುವಂತೆ ಜಾನಕಿ ಕಾಲಂ ಇರುತ್ತಿತ್ತು , ಮುನ್ನುಡಿಯೂ ಹಾಗೇ ಇದೆ. ಒಂದು ಕ್ಷಣ ನನ್ನ ಪುಸ್ತಕದ ಬಗ್ಗೆ ಬರೆದದ್ದು ಅನ್ನುವುದನ್ನು ಮರೆತು time ಟ್ರಾವೆಲ್ ಮಾಡಿ, ಆ ದಿನಗಳಲ್ಲಿ ಜಾನಕಿ ಕಾಲಂ ಓದುತ್ತಿದಂತೆಯೇ ರಪಕ್ಕನೆ ಓದಿದೆ. ಕಿರಿಯನೆಂದು ಕಡೆಗಣಿಸದೆ ಅಕ್ಕರಾಸ್ಥೆಯಿಂದ ಮುನ್ನುಡಿ ಬರೆದಿದ್ದಾರೆ.

"ಸಹೃದಯತೆ ಎಂದರೆ ಬರೆದವನ ಮೇಲೆ ಪಕ್ಷಪಾತವಲ್ಲ; ಕವಿಹೃದಯವನ್ನು, ಎಂದರೆ ಮಾತಿನಲ್ಲಿ ವ್ಯಕ್ತವಾದ ಅಥವಾ ಆಗಬೇಕೆಂದು ಅವನ ಮನಸ್ಸಿನಲ್ಲಿದ್ದ ಭಾವಸ್ವರೂಪವನ್ನು ತಿಳಿಯುವ ಪ್ರತಿಭಾಶಕ್ತಿ . ಇದರೊಂದಿಗೆ ಬಹುಜ್ಞತೆ ಸೇರಿದ್ದರೆ, ಆ ವಿಮರ್ಶಕನೇ ವಿಮರ್ಶಕನು"--> ಸೇಡಿಯಾಪು ಕೃಷ್ಣ ಭಟ್ಟ

ಈ ರೀತಿ, ಸೇಡಿಯಾಪು ಅಜ್ಜ ಹೇಳಿರುವ "ಸಹೃದಯ" ಎಂಬ ಶಬ್ದದ ಸರಿಯಾದ ಅರ್ಥದಲ್ಲಿ ಸಹೃದಯಿ ವಿಮರ್ಶೆಗಳಾಗಿ ಬೆನ್ನುಡಿಯನ್ನೂ ಮುನ್ನುಡಿಯನ್ನೂ ಬರೆದ ಇಬ್ಬರಿಗೂ ಫೇಸ್ಬುಕ್ಕಿನ ಗುರುಹಿರಿಯರು, ಲೈಕಾಧಿಪತಿಗಳು, ಶೇರ್ ಖಾನ್ ಗಳು, ಕಾಮೆಂಟು ಪ್ರವೀಣರು ಮುಂತಾದ ಹತ್ತು ಸಮಸ್ತರ ಸಮಕ್ಷದಲ್ಲಿ ವಂದನೆಯನ್ನು ಅರ್ಪಿಸಿ ಮೊದಲ ಭಾಗವನ್ನು ಮುಗಿಸುತ್ತೇನೆ. 

ಸ್ವಾಮಿ ಜಗದಾತ್ಮಾನಂದ ಇನ್ನಿಲ್ಲ

ನಾನು ಓದಿದ ಮೊತ್ತಮೊದಲ ಸೆಲ್ಫ್ ಹೆಲ್ಪ್ ಪುಸ್ತಕ ಅಂದರೆ ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಅಥವಾ Dale Carnegieಯ ಯಾವುದಾದರೊಂದು ಪುಸ್ತಕ ಇರಬೇಕು. ಡೇಲ್ ಕಾರ್ನೆಗಿಯನ್ನು ಓದು ಅಂತ ಅಪ್ಪ ಹೇಳಿದ್ದರಿಂದ How to Win Friends & Influence People, How to Stop Worrying and Start Living ಮತ್ತು How to Develop Self-Confidence and Influence People by Public Speakingಗಳನ್ನು ಓದಿ ಮೆಚ್ಚಿದ್ದೆ. ಆಮೇಲೆ Norman Vincent Peale ಸಂಪಾದಿಸಿದ The Power of Positive Thinking ಕೈಗೆ ಬಂದಿತ್ತು , Robert Schuller ಅವರ Tough Times Never Last, but Tough People Do! ಆಕರ್ಷಕ ಶೀರ್ಷಿಕೆಯಿಂದ ಮನಸೆಳೆದಿತ್ತು. ಅದಾದ ಮೇಲೆ ಯಂಡಮೂರಿಯ ವಿಚಾರಗಳಲ್ಲಿ ಹೊಸತನವಿದೆ ಅನ್ನಿಸಿತ್ತು, ರವಿ ಬೆಳಗೆರೆಯ ಬಾಟಮ್ ಐಟಂ ವಿಶಿಷ್ಟ ನಿರೂಪಣೆಯಿಂದ, ಪಕ್ಕಾ ಪ್ರಾಕ್ಟಿಕಲ್ ಆದ, ನಿತ್ಯಜೀವನಕ್ಕೆ ಹತ್ತಿರದ ದೃಷ್ಟಿಕೋಣದಿಂದ ಓದಿಸಿಕೊಂಡು ಹೋಗಿತ್ತು.

ಮುಂದಿನ ಹಂತದಲ್ಲಿ ಹಿಂದೆ ಓದಿದ್ದನ್ನು ಪ್ರಶ್ನಿಸುವ The Antidote: Happiness for People Who Can't Stand Positive Thinking ಅನ್ನು ಓದಿದ್ದೆ. Bright-sided: How Positive Thinking Is Undermining America ಅನ್ನು ಓದಿದೆನೋ ಇಲ್ಲವೋ ನೆನೆಪಾಗುತ್ತಿಲ್ಲ. Rich Dad, Poor Dad ಅಷ್ಟೇನೂ ಹಿಡಿಸಿರಲಿಲ್ಲ. ವಿಜ್ಞಾನ, ಸಂಶೋಧನೆ ಮುಂತಾದವನ್ನೆಲ್ಲ ಇಟ್ಟುಕೊಂಡು ಬರೆದ ರಿಚರ್ಡ್ ವೈಸ್ಮ್ಯಾನ್ ಅವರ :59 Seconds: think a little change a lot ಇಷ್ಟವಾಗಿತ್ತು. Influence: The Psychology of Persuasion by Robert Cialdini ಚೆನ್ನಾಗಿತ್ತು, Randy Pausch ಮರಣಶಯ್ಯೆಯಲ್ಲಿದ್ದುಕೊಂಡು ಕೊಟ್ಟ The Last Lecture ಎಂಬ ಬಿಸಿದೋಸೆಯನ್ನು ಚಪ್ಪರಿಸಿದ್ದೆ, Thinking, Fast and Slow By Daniel Kahneman ಒಂದು ಕಣ್ಣುತೆರೆಸುವ ಪುಸ್ತಕ ಅನಿಸಿತ್ತು,Outliers The Story of Success by Malcolm Gladwell ಅನ್ನು ಹೇಗೂ ಓದಿದ್ದಾಗಿತ್ತು. Stumbling on Happiness ಅಂತೂ ನನ್ನ ಅಚ್ಚುಮೆಚ್ಚಿನ ಪುಸ್ತಕ ಅಂತ ಹಿಂದೆಯೇ ಬರೆದಿದ್ದೆ.

ಇದೆಲ್ಲ ಏನೇ ಇದ್ದರೂ ಜಗದಾತ್ಮಾನಂದರ "ಬದುಕಲು ಕಲಿಯಿರಿ"ಗೆ ನಾಸ್ಟಾಲ್ಜಿಯಾದ ಕಾರಣದಿಂದಾದರೂ ಅಗ್ರಪೂಜೆಯನ್ನು ಮನಸ್ಸು ಸಲ್ಲಿಸುತ್ತಿದೆ, ಓದಿ ರುಚಿಸಿ, ಹಲವರ ಹತ್ತಿರ "ಇದನ್ನೋದಿ" ಅಂತ ಹೇಳಿದ ಪುಸ್ತಕಗಳಲ್ಲಿ ಅದೂ ಒಂದು.

ಉಳಿದದ್ದು ಸೂರ್ಯಪ್ರಕಾಶ ಪಂಡಿತರ ವಾಲಿನಿಂದ :
ಬದುಕನ್ನು ಕಲಿಸಿದ ಸ್ವಾಮೀಜಿ
==============================
'ಬದುಕಲು ಕಲಿಯಿರಿ' ಸಾವಿರಾರು ಜನರ‌ ಬದುಕಿಗೆ ಊರುಗೋಲಾದದ್ದು ಮಾತ್ರವಲ್ಲ, ಅದು ಕನ್ನಡದಲ್ಲಿ ‌ವ್ಯಕ್ತಿತ್ವನಿರ್ಮಾಣವಿಷಯವನ್ನು ಕುರಿತು ಪುಸ್ತಕರಚನೆಗೂ‌ ಪ್ರಕಾಶನಕ್ಕೂ ನಾಂದಿ ಹಾಡಿತೆನ್ನಬಹುದು. ಹಲವರ ಪಾಲಿಗೆ ಅದು ಉಪನಯನ, ಹುಟ್ಟುಹಬ್ಬದಂಥ ಸಂದರ್ಭಗಳಿಗೆ ಒದಗುವ ಸಾರ್ಥಕ ಗಿಫ್ಟ್. ಜೀವನೋತ್ಸಾಹಕ್ಕೆ ಸ್ವತಃ ಸ್ವಾಮಿಜಿಯವರೇ ಮೂರ್ತರೂಪವಾಗಿದ್ದರು. ಅನಾರೋಗ್ಯದಲ್ಲೂ ಅವರು ಕುಗ್ಗಿ ಮಾತನಾಡುತ್ತಿರಲಿಲ್ಲ. ಸುಮಾರು 7-8 ವರ್ಷಗಳ ಹಿಂದೆ ಅವರನ್ನು ದೂರದರ್ಶನಕ್ಕಾಗಿ ಸಂದರ್ಶನ ಮಾಡುವ ಅವಕಾಶ ಒದಗಿತ್ತು. ಅವರನ್ನು ಕಂಡೊಡನೆ 'ಹೇಗಿದ್ದೀರಿ ಸ್ವಾಮೀಜಿ?' ಎಂದೆ. 'ಎಂಬತ್ತು ವರ್ಷದಲ್ಲಿ ಇರಬಹುದಾದ ಸ್ಥಿತಿಗಿಂತಲೂ ಚೆನ್ನಾಗಿರುವೆ!' ಎಂದರು. ರಂಗನಾಥ ಶರ್ಮಾಜಿ ಅವರ ಬಗ್ಗೆ ವಿಚಾರಿಸಿದರು; ಶರ್ಮಾಜಿ ಅವರಿಂದ ರಘುವಂಶ ಮುಂತಾದ ಸಂಸ್ಕೃತಪಾಠಗಳನ್ನು ಮಾಡಿಸಿಕೊಂಡದ್ದನ್ನು ನೆನಪಿಸಿಕೊಂಡರು....
ಪೂಜ್ಯ ಸ್ವಾಮಿ ಜಗದಾತ್ಮಾನಂದಜೀ ಅವರಿಗೆ ಪ್ರಣಾಮಗಳು...

=============================