Tuesday 9 July 2019

ಕುಮಾರವ್ಯಾಸನ ಉದ್ಯೋಗ ಪರ್ವ

ಇದನ್ನೊಂದು ಲೇಖನವೆಂದು ಬರೆದದ್ದಲ್ಲ, ಋತುಮಾನ ಸೈಟಿಗೆ, ಕಂಚಿನ ಕಂಠದ ಚಂದ್ರಶೇಖರ ಕೆದಿಲಾಯರು ಮಾಡಿಕೊಟ್ಟ ಗಮಕವಾಚನಕ್ಕೆ ಪೀಠಿಕೆಯಾಗಿ, ಸ್ವಲ್ಪ ಅರ್ಜೆಂಟಿನಲ್ಲೇ ಬರೆದಿದ್ದ ಪುಟ್ಟ ಟಿಪ್ಪಣಿ :
ಕರ್ಣಭೇದನವು ಹಲವು ಕಾರಣಗಳಿಗೆ ಪ್ರಸಿದ್ದವಾದ ಪ್ರಸಂಗ. ಯಕ್ಷಗಾನದಲ್ಲಿಯೂ, ಯಕ್ಷಗಾನ ತಾಳಮದ್ದಳೆಯಾಗಿಯೂ ಹೆಸರು ಮಾಡಿರುವ ಪ್ರಸಂಗವಿದು . ಕುಮಾರವ್ಯಾಸನ ಉದ್ಯೋಗಪರ್ವದಲ್ಲಿ, ಹತ್ತನೇ ಸಂಧಿಯಲ್ಲಿ ಇದು ಬರುತ್ತದೆ. ಕೃಷ್ಣನ ರಾಜಕೀಯದ ಪಟ್ಟುಗಳು, ಲಾಭ ಕುದುರಿಸಲಿಕ್ಕೆ ಹೊರಟ Corporate management ಅನ್ನು ಹೋಲಬಹುದಾದ ಸಮಾಲೋಚನೆಯ ಶೈಲಿ, ಕರ್ಣನನ್ನು ಭಾವನೆಯ ಬಲೆಯಲ್ಲಿ ಬಂಧಿಸಿ ಅವನ ಸ್ವಾಮಿನಿಷ್ಠೆಯನ್ನು ಪರೀಕ್ಷಿಸುವುದು ಎಲ್ಲ ಅತ್ಯಂತ ನಾಟಕೀಯವಾಗಿದೆ. ಸಂಧಾನಕ್ಕೆಂದು ಹೋಗಿದ್ದ ಕೃಷ್ಣ, ಕೌರವನಿಂದ ರಣದ ವೀಳ್ಯ ಪಡೆದು, ಹಸ್ತಿನಾವತಿಯ ರಾಜಸಭೆಯಿಂದ ಹೊರನಡೆದ ಮೇಲೆ ಘಟಿಸುವ ಘಟನೆಯಿದು. ಕರ್ಣನನ್ನು ಏಕಾಂತಕ್ಕೆ ಕರೆದುಕೊಂಡುಹೋಗಿ, ಅವನ ಹುಟ್ಟಿನ ವಿವರಗಳನ್ನು ಅವನಿಗೆ ತಿಳಿಸಿ, ಅವನನ್ನು ಒಲಿಸಿಕೊಳ್ಳುವ, ಯುದ್ಧವನ್ನೇ ಮಾಡದೆ ಸೋಲಿಸುವ ಪ್ರಯತ್ನವೇ ಈ ಪ್ರಸಂಗದ ತಿರುಳು.

ಕುಮಾರವ್ಯಾಸನ ಕೃಷ್ಣನಂತೂ ನುರಿತ ಮನೋವಿಜ್ಞಾನಿಯಂತೆ, ಪಳಗಿದ ಸೇಲ್ಸ್ ಮ್ಯಾನ್ ಒಬ್ಬನಂತೆ ಆಕರ್ಷಕವಾದ ಮಾತು, ನಡೆಗಳ ಮೂಲಕ ಕರ್ಣನನ್ನು ಒಳಗೊಳಗೇ ಕುಸಿಯುವಂತೆ ಮಾಡುತ್ತಾನೆ. ಕುಮಾರವ್ಯಾಸನ ಕೃಷ್ಣನು, ಇನತನೂಜನ ಕೂಡೆ ಮೈದುನತನದ ಸರಸವನೆಸಗಿ ವಿಷಯ ಶುರುಮಾಡುತ್ತಾನೆ. (ಶತ್ರುಪಾಳಯದವನಾದ ಕರ್ಣ ಕುಂತಿಯ ಮಗನಾಗಿದ್ದದ್ದು ಇಷ್ಟು ದಿನ ನೆನಪಿಗೆ ಬರದೇ ಈಗ ಬರುತ್ತದೆ !) ಯಾದವ ಕುಲ ತಿಲಕನಾದ ಕೃಷ್ಣನು ಸೂತಪುತ್ರನಾದ ಕರ್ಣನನ್ನು ಬರಸೆಳೆದು, ತೊಡೆ ಸೋಂಕಿನಲಿ ಕುಳ್ಳಿರಿಸಿ ತಬ್ಬಿಬ್ಬಾಗಿಸುತ್ತಾನೆ. ಕೀರ್ತಿನಾಥ ಕುರ್ತಕೋಟಿಯವರ ಮಾತಿನಲ್ಲಿ ಹೇಳುವುದಾದರೆ : "ಕರ್ಣನ ಮನಃಸ್ಥಿತಿ ಹೇಗಿತ್ತೆಂದರೆ, ಯಾರಾದರೂ ಅವನಿಗೆ ಸೂತಪುತ್ರ ಎನ್ನಬೇಕು , ಆಗ ಸಿಟ್ಟಿನಿಂದ ಅವನ ಪರಾಕ್ರಮ ಹೆಚ್ಚಾಗಬೇಕು, ತಾನು ಸೂತಪುತ್ರ ಅಲ್ಲ ಅಂತ ತೋರಿಸಬೇಕು. ಅವನಿಗೆ ಯಾವಾಗಲೂ ತನ್ನ ಅಸ್ಮಿತೆಯ ಬಗ್ಗೆ ಎಚ್ಚರ. ಕೃಷ್ಟ ಅಂಥದ್ದೇನೂ ಮಾಡಲಿಲ್ಲ". ಬೈಯ್ಯದೆ, ಬಡಿಯದೆ, ಒಳ್ಳೆಯ ಮಾತುಗಳಲ್ಲಿ ಹೊಗಳಿ ಕೆಡವುವುದು ಅಂದರೆ ಇದೇ ತಾನೇ ! ಅಷ್ಟೇ ಅಲ್ಲ , ಅವನ ಕರದೊಳು ಕರತಳವನಿಕ್ಕಿ, ನಿನ್ನಯ ಕುಲವನರಿ, ವೃಥಾ ಸೇವಕತನದಲಿ ಇಹುದು ಉಚಿತವಲ್ಲ ಅಂತ ಅವನ ಹಿತೈಷಿಯಂತೆ ಮಾತಾಡುತ್ತಾನೆ, "ಇಷ್ಟು ಟ್ಯಾಲೆಂಟ್ ಇದ್ರೂ ನಿನಗೆ ಸರಿಯಾಗಿ salary hike ಯಾಕೆ ಆಗಿಲ್ಲ" ಎಂದು ಹಿತಚಿಂತನೆಗೆ ತೊಡಗುವ ಕಾರ್ಪೊರೇಟು recruiterನಂತೆ.

ಕರ್ಣ ಮನಸ್ಸು ಮಾಡಿದರೆ, ಕುರುಕ್ಷೇತ್ರದ ಯುದ್ಧವೇ ನಡೆಯುವುದಿಲ್ಲ. ಆಗ ಹಿರಿಯನಾದ ಕರ್ಣನಿಗೆ ಪಟ್ಟಕಟ್ಟಿ ಕೌರವ ಪಾಂಡವ ಮತ್ತಿತರರು ಒಟ್ಟಿಗೇ ಕೂತರೆ ಆ ಚಿತ್ರ ಹೇಗಿರುತ್ತದೆ? “ಎಡದ ಮೈಯಲಿ ಕೌರವೇಂದ್ರರ ಗಡಣ. ಬಲದಲಿ ಪಾಂಡುತನಯರ ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು ನಡುವೆ ನೀನೋಲಗದೊಳು !” ಅಂತ ಆಮಿಷ ಒಡ್ಡುತ್ತಾನೆ. ನೀನು ನಮ್ಮಲ್ಲೇ ಉಳಿದರೆ, ಈ ಸರ್ತಿ ಪ್ರಮೋಷನ್ ಗ್ಯಾರಂಟಿ ಎನ್ನುವವನಂತೆ. “ಒಪ್ಪುವ ಕಡುವಿಲಾಸವ ಬಿಸುಟು, ಕುರುಪತಿ ನುಡಿಸೆ,ಜೀಯ ಹಸಾದವೆಂಬುದು ಕಷ್ಟ ನಿನಗೆ !” ಅಂತ ಒಗ್ಗರಣೆ ಹಾಕುತ್ತಾನೆ.

ಈ ತಂತ್ರಗಾರಿಕೆಗೆ ಕರ್ಣನ ಕೊರಳ ಸೆರೆ ಹಿಗ್ಗುತ್ತದೆ, ದೃಗುಜಲ ಉರವಣಿಸುತ್ತದೆ, ಅವನು ಕಡುನೊಂದನು ಎನ್ನುತ್ತಾನೆ ಕವಿ. ಕರ್ಣನೇನು ಕೃಷ್ಣನ ಜಾಣ್ಮೆಯ ಅರಿವಾಗದಷ್ಟು ದಡ್ಡನಲ್ಲ. ಹೀಗಾಗಿ "ಭೇದದಲಿ ಹೊಕ್ಕಿರಿದನೋ ಮಧುಸೂದನನು", "ನೀನು ಕೌರವೇಂದ್ರನ ಕೊಂದೆ" ಅಂತೆಲ್ಲ ಹೇಳಿ ತಾನೇಕೆ ಕೌರವಪಕ್ಷವನ್ನು ತೊರೆಯಲಾರೆ ಅಂತ ಹೇಳುವುದನ್ನು ಕುಮಾರವ್ಯಾಸ ಸೊಗಸಾಗಿ ಚಿತ್ರಿಸಿದ್ದಾನೆ. ಕಡುಕಾವಲು ಇರುತ್ತಿದ್ದ ರಾಜರ ಅಂತಃಪುರಗಳಿಗೆ ಕಪಟದಿಂದ ಹೊಕ್ಕು ಇರಿಯುವ, ಕೊಲೆಯ ಪ್ರಯತ್ನಗಳನ್ನು ಮಾಡುವವರು ಕುಮಾರವ್ಯಾಸನ ಕಾಲದಲ್ಲಿ ಇದ್ದಿರಬೇಕು, ಆದರೆ ಇಲ್ಲಿ ಭೇದೋಪಾಯದಿಂದ ಹೊಕ್ಕದ್ದು ಮನಸ್ಸಿಗೆ, ಅದಕ್ಯಾವ ರಕ್ಷಣೆ ? ಇರಿದದ್ದು ಭಾವವನ್ನು, ಅದನ್ಯಾರು ಕಾಪಿಡುವವರು? "ಕೌರವೇಂದ್ರನ ಕೊಂದೆ" ಎಂಬ ಮಾತು ಎಷ್ಟು ಮಾರ್ಮಿಕ ನೋಡಿ, ಒಬ್ಬನ ಹುಟ್ಟಿನ ಗುಟ್ಟನ್ನು ಬಿಚ್ಚಿದರೆ ಮತ್ತೊಬ್ಬನನ್ನು ಕೊಂದಂತೆ ಆಗುತ್ತದೆ. ತನ್ನ ಜನ್ಮವೃತ್ತಾಂತ ಹೊರಗೆ ಬಂತು ಎನ್ನುವುದಕ್ಕಿಂತ ಕುರುಪತಿಗೆ ಕೇಡಾಯಿತಲ್ಲಾ ಅಂತ ಕರ್ಣ ಮರುಗುತ್ತಾನೆ

ಗಮಕವಾಚನ ಇಲ್ಲಿದೆ :
https://youtu.be/tqBQz8egQT8 

No comments:

Post a Comment