Tuesday 9 July 2019

ನನ್ನ ಬಾಗಿಲು ತೆರೆಯೇ ಸೇಸಮ್ಮ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು Part 3

ನನ್ನ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು(Baagilu Tereye Sesamma - Sharath Bhat Seraje - Book reviews):

ವಿಷ್ಣು ಭಟ್, ಹೊಸ್ಮನೆ ಅವರು ನನ್ನ ಪುಸ್ತಕವನ್ನೋದಿ ಬರೆದಿರುವ ಸಾಲುಗಳು :
ಅಬ್ಬಾ! ವೈಚಾರಿಕ ಪ್ರಬಂಧಗಳನ್ನು ಹೀಗೂ ಬರೆಯಬಹುದೇ? ಎಂದು ಹುಬ್ಬೇರುವಂತೆ ಮಾಡುವ ಈ ಸೇಸಮ್ಮ ಬಾಗಿಲು ಹಾಕಿ ಕುಂತಿದ್ದಾದರೂ ಯಾಕೆ? ಎಂಬುದನ್ನು ತಿಳಿದುಕೊಳ್ಳಲು ಪುಸ್ತಕ ಓದಲೇ ಬೇಕು. ಶರತ್ ಭಟ್ ಸೇರಾಜೆಯವರ ಜ್ಞಾನ ಇಲ್ಲಿ ಹರಿದ ಬಗೆ ನದಿಯ ನೀರಿನಂತೆ. ಯಾಕೆಂದರೆ ನದಿಯ ನೀರು ಸಮುದ್ರದ ನೀರಿನಂತಲ್ಲ! ಸಮುದ್ರದ ನೀರಿಗೆ ಹೋಲಿಸಿದರೆ ನದಿಯ ನೀರು ಅಳತೆಯಲ್ಲಿ ಎಷ್ಟೂ ಅಲ್ಲದೇ ಇರಬಹುದು. ಆದರೆ ನದಿಯ ನೀರು ಹರಿಯುವಷ್ಟು ಪ್ರದೇಶಗಳನ್ನು ಸಮುದ್ರ ನೋಡುವುದೇ ಇಲ್ಲ. ನದಿಯ ನೀರು ಎಲ್ಲವುದರ ಮೇಲೂ ಹರಿದುಕೊಂಡು ಬರುತ್ತದೆ. ಮುಳ್ಳು, ಕಲ್ಲು, ಗಿಡ, ಮರ ಎಲ್ಲವನ್ನೂ ಸವರಿಕೊಂಡು ಸಾಗುತ್ತದೆ. ಕಂದಕಗಳಿಗೆ ಧುಮುಕುತ್ತದೆ. ಅಲ್ಲೊಂದು ಜಲಪಾತವಾಗಿ ರಂಜಿಸುತ್ತದೆ. ಕೆಲವೆಡೆ ವಿಶಾಲವಾಗಿ ಹರಡಿಕೊಂಡು, ಇನ್ನು ಕೆಲವೆಡೆ ಚಿಕ್ಕದಾಗಿ ಇರುವಷ್ಟೇ ದಾರಿಯಲ್ಲಿ ಹರಿಯುತ್ತದೆ. ನಿಧಾನವಾಗಿ ದಾರಿ ಮಾಡಿಕೊಳ್ಳುವ, ಎಲ್ಲ ಸೂಕ್ಷ್ಮಗಳನ್ನು ಹೊಕ್ಕು ಹೊರಬೀಳುವ ಜಾಣ್ಮೆ ಈ ನದಿಯ ನೀರಿಗಿದೆ. ಅಂತಹ ಹರಿವ ನದಿಯೇ ಈ ಪ್ರಬಂಧಗಳು. ಎಲ್ಲಾ ವಿಷಯಗಳನ್ನೂ ಒಂದೊಂದಾಗಿ ತೆರೆದಿಟ್ಟಿರುವ ಶರತ್ ಭಟ್ಟರು ನಮ್ಮೊಳಗಿನ ಪ್ರಶ್ನೆಯನ್ನು ತಾವೇ ಕೇಳುತ್ತ, ಉತ್ತರಿಸುತ್ತ ಕೊನೆಯಲ್ಲಿ ಹೊಸದೊಂದು ವೈಚಾರಿಕ ಲೋಕಕ್ಕೆ ನೇರವಾಗಿ ಎಳೆದು ಬಿಡುತ್ತಾರೆ. ಇದು ಅವರ ಶಕ್ತಿಯೋ ಯುಕ್ತಿಯೋ? ಎಂದು ಕೇಳಿದರೆ ಎರಡೂ ಸರಿಯಾದ ಉತ್ತರವೇ.

ಅಲೆ ಅಲೆ ಎನ್ನುತ್ತ ಕೊನೆಗೆ ನಮ್ಮ ತಲೆ, ತಲೆಹರಟೆಯ ತನಕ ಪೋಣಿಸಿಟ್ಟ ಅಕ್ಷರಗಳಲ್ಲಿ ಗಂಭೀರ ವಿಚಾರಗಳಿವೆ, ಹಾಸ್ಯವಿದೆ, ಜ್ಞಾನವಿದೆ, ಯೋಚನೆಗಳಿವೆ ಮತ್ತು ಓದುಗನ ತಲೆಯೊಳಗೇ ಓಡಾಡುವ ಯೋಚನಾಹುಳುಗಳೂ ಇವೆ! ಹದಿನೈದು ವಿಭಿನ್ನ ವಿಚಾರಗಳನ್ನು ಸೇಸಮ್ಮ ಹೊತ್ತು ತಂದಿದ್ದಾಳೆ. ಅವುಗಳನ್ನು ಓದಿ ನಗುವುದಕ್ಕಿದೆ, ನಾವು ಮಾಡುವ ತಪ್ಪುಗಳನ್ನೂ ಸರಿ ಪಡಿಸಿಕೊಳ್ಳುವುದಕ್ಕಿದೆ, ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವುದಕ್ಕಿದೆ, ಗಂಭೀರವಾದ ನಿರ್ಧಾರಕ್ಕೆ ಬರಬೇಕಾದ ವಿಷಯಗಳೂ ಇವೆ. ಇಷ್ಟೆಲ್ಲವನ್ನೂ ಹೇಗೆ? ಎಲ್ಲಿಂದ ತಂದಿರಿ? ಎಂಬ ಪ್ರಶ್ನೆಗೆ ಶರತ್ ಭಟ್ ಅವರೇ ಉತ್ತರಿಸಬೇಕು.

ಎಲ್ಲರೂ ಓದ ಬೇಕಾದ ತುಂಬಾ ಚಂದದ ಪುಸ್ತಕ. ಅಂಕಿತ ಪ್ರಕಾಶನಕ್ಕೂ ಅಂಕಿತ ಪ್ರತಿಭೆ ಮಾಲಿಕೆಯ ಸಂಕಲನಕಾರರಾದ ಜೋಗಿಯವರಿಗೂ ವಂದನೆಗಳು. ಶರತ್ ಭಟ್ಟರಿಗೆ ನಮೋನ್ನಮಹಃ||

ಪುಸ್ತಕದ ಮುಖಪುಟದಲ್ಲಿ ಬಾಗಿಲು ಹಾಕಿದೆ, ಕೆಲವು ಬೀಗಗಳೂ ಹಾಕಿಕೊಂಡಿವೆ. ಬಾಗಿಲು ತೆರೆಯೇ ಸೇಸಮ್ಮ ಎಂದು ಒಳಹೋಗುವವರು ಕೇಳುವುದಲ್ಲ, ಒಳಗಿದ್ದವರು ಕೇಳುವುದು. ಪುಸ್ತಕದ ಒಳಗೆ ಹೊಕ್ಕರೆ ಹೊರಬರಲು ಖಂಡಿತವಾಗಿಯೂ ಆ ಹದಿನೈದು ಬೀಗಳನ್ನು ತೆಗೆಯಲೇ ಬೇಕು. ಒಳಗೆ ಹೋಗಿ ನೋಡಿ!

ಒದುಗ ಇನ್ನೂ ಒಳಗೇ ಇದ್ದಾನೆ..ಬಾಗಿಲು ತೆರೆಯೇ ಸೇಸಮ್ಮ ಪ್ಲೀಸ್..
ಅಂಕಿತ ಪುಸ್ತಕ, ಗಾಂಧೀಬಜಾರಿನಲ್ಲಿ ಪುಸ್ತಕದ ಪ್ರತಿಗಳು ಸಿಗುತ್ತವೆ.
--------------------------------------------------------
ಅಜಿತ್ ಹೆಗ್ಡೆ ಹರೀಶಿ ಅವರ ಸಾಲುಗಳು
ಅಂಕಿತ ಪ್ರತಿಭೆ ಮಾಲಿಕೆ-5 ಅಡಿಯಲ್ಲಿ ಅದರ ಸಂಪಾದಕರಾದ ಜೋಗಿಯವರು ಶರತ್ ಭಟ್ಟರನ್ನು ಗುರುತಿಸಿ ಈ ಕೃತಿಯನ್ನು ಪ್ರಕಟಿಸಲು ಅನುವು ಮಾಡಿಕೊಟ್ಟಿದ್ದಾರೆ.ಶರತರ ಈ ಎಲ್ಲಾ ಹದಿನೈದು ಪ್ರಬಂಧಗಳು ಈ ಗೌರವಕ್ಕೆ ಅರ್ಹವಾಗಿವೆ.

ಈ ಲೇಖನಗಳನ್ನು ಓದಿದಾಗ ಅವರು ಅಪಾರವಾಗಿ ಓದಿಕೊಂಡವರು ಎಂಬುದೂ ಗೊತ್ತಾಗುತ್ತದೆ.ಬಳಸಿದ ಭಾಷೆ ಬಹಳ ಚೆನ್ನಾಗಿದೆ.ಅವರ ತರ್ಕ, ತಮಾಷೆ ಮತ್ತು ವಿಷಯವನ್ನು ವಿವರಿಸಲು ಕೊಡುವ ಉದಾಹರಣೆಗಳು ವಿಶಿಷ್ಟವಾಗಿವೆ.

ಗುರುತ್ವದ ಅಲೆ ಕುರಿತು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸಬಹುದು ಎಂದು ಸೇರಾಜೆ ತೋರಿಸಿಕೊಟ್ಟಿದ್ದಾರೆ. ಜೊತೆಗೆ ಪಂಚಿಂಗ್ ಡೈಲಾಗ್ಸ್ ಇವೆ. ಇವು ನಮ್ಮಲ್ಲಿ ನಗುವನ್ನು ಉಕ್ಕಿಸುತ್ತವೆ.

ಅವರು ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಲಿ ಕರೆಯಿತು ಕವಿತೆಯ ಬಗ್ಗೆ ಸಾಹಿತ್ಯದ ವಿದ್ಯಾರ್ಥಿಯಂತೆ ಚೆಂದವಾಗಿ ವರ್ಣಿಸಿದ್ದಾರೆ.ಬಿಎಂಶ್ರೀಯಿಂದ ಬರ್ನ್ಸ್ ಎಂಬ ಕವಿಯವರೆಗೆ ಉಲ್ಲೇಖ ಮಾಡಿದ್ದಾರೆ.

ಥಟ್ ಅಂತ ರಾಷ್ಟ್ರಗಳ ಸಂಖ್ಯೆ ಬಗ್ಗೆ ಶರತ್ ಹೇಳಿಬಿಡುತ್ತಾರೆ.ದೇಶಗಳನ್ನೂ, ಅವುಗಳ ಗುಟ್ಟುಗಳನ್ನು, ಜೋಕುಗಳನ್ನು ಕ್ರ್ಯಾಕ್ ಮಾಡುತ್ತಾ ಬೆಡ್ ರೂಂವರೆಗೂ ಬರುತ್ತಾರೆ.

ಅರ್ಥವೆಂಬ ಊಸರವಳ್ಳಿಯಲ್ಲಿ ಶಬ್ದದ ಅನುಕರಣೆ ಮಾಡಿ ಬದಲಾದ ಅರ್ಥಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ರೀಸಸ್ ( ಬಿಡುವು ) ಶಬ್ದ ಮೂತ್ರ ವಿಸರ್ಜನೆಗೆ ಬಳಕೆಯಾಗಿದ್ದು. ಆಯಿಲ್, ಸಕತ್, ಪ್ರವೀಣ ಮುಂತಾದ ಶಬ್ದಗಳ ಬಗ್ಗೆ ಇಲ್ಲಿ ಭಟ್ಟರು ಹೇಳಿದ್ದಾರೆ.

ಬಾಗಿಲು ತೆರೆಯೇ ಸೇಸಮ್ಮ - ನಾವು ಇಂದು ಸೋಷಿಯಲ್ ಮೀಡಿಯಾಗಳಲ್ಲಿ ಬಳಸುವ ಪಾಸ್ವರ್ಡ್ ಕುರಿತು ಮಾಹಿತಿ ನೀಡುವ ಮತ್ತು ಹ್ಯಾಕರ್ ಗಳ ವಿವರ ನೀಡುವ ಪ್ರಬಂಧ.
ಇದು ನಿಮಗೆ ಗೂಗಲ್ ಮಾಡಿದರೂ ಸಿಗಬಹುದು ಆದರೆ ಇಲ್ಲಿ ಅವರು ವಿವರಿಸಿದರ ಶೈಲಿ ಇದೆಯಲ್ಲ ಇದು ವಿಭಿನ್ನ ಮತ್ತು ಸರಳವಾಗಿದೆ.

ಮರ್ಯಾದೆ ತೆಗೆಯುವ ಕಲೆಯನ್ನು ಓದುತ್ತಾ ನೋಡಬಹುದು ಮತ್ತು ಬೆಚ್ಚಿಬೀಳಬಹುದು.
ಇಂಗ್ಲಿಷ್ ಮಾಧ್ಯಮದ ಕುರಿತು ಅವರ ನಿಲುವನ್ನು ಒಪ್ಪದಿರುವುದು ಕಷ್ಟ. ಇಂಗ್ಲೀಷ್ ಭಾಷೆ ದೋಸೆಯಾದರೆ ಮಾತೃಭಾಷೆ ಕನ್ನಡ ಊಟ ಎಂಬ ಸೋದಾಹರಣೆ ಚೆನ್ನಾಗಿದೆ.

ಲೆಕ್ಕ ಹಾಕಿ ಸುಳ್ಳು ಹೇಳಿ - ಈ ಕ್ಷಣದ ಕಟು ವಾಸ್ತವವನ್ನು ಅನಾವರಣ ಮಾಡುವ ಲೇಖನ.
ಸಿನೆಮಾ ಮತ್ತು ಕಳ್ಳತನ ಕುರಿತು ಅವರ ವಿಚಾರ, ನಮ್ಮ ತಲೆಗೆ ಕೈ ಹಾಕಿ ಹೂಂಗುಟ್ಟುವಂತೆ ಮಾಡುತ್ತದೆ.ವಿಮರ್ಶಕರಿಗೆ ಶಾಲಿನಲ್ಲಿ ಕಲ್ಲು ಹಾಕಿ ತಟ್ಟಿದ್ದಾರೆ.

ಕಾರಂತಜ್ಜನ ಕಥೆಗಳು - ಇದರಲ್ಲಿ ಕಾರಂತರ ಕುರಿತು ಅಪರೂಪದ ವಿಷಯಗಳಿವೆ.ಬಲಿ ಚಕ್ರವರ್ತಿಯ ತ್ರಿವಿಕ್ರಮ ದಲ್ಲಿ ಮಿಖಾಯಿಲ್ ತಾಲ್ ಎಂಬ ಚೆಸ್ ಆಟಗಾರ ಬರುತ್ತಾನೆ.ಅದನ್ನು ಓದುವುದೇ ಒಂದು ಪುಳಕ.

ನಮ್ಮ ತಲೆಯೂ ನಮ್ಮ ಹರೆಟೆಯೂ; ವೈಚಾರಿಕ ಲಲಿತ ಪ್ರಬಂಧ ಬರೆಯಲು ಆಸಕ್ತಿ ಇರುವವರು ಅಧ್ಯಯನ ಮಾಡುವಂತಹ ಒಂದು ಲೇಖನ.

ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಒಮ್ಮೆ ಓದಲೇಬೇಕಾದ ಲೇಖನಗಳ ಗುಚ್ಛ ಶರತರ ಈ ಕೃತಿ ಎಂದು ಬೇಷರತ್ತಾಗಿ ಹೇಳುವೆ.
-------------------------------------------------------
ಹಿರಿಯರೂ,ಸಂವೇದನಾಶೀಲರೂ ಆದ ಪಿ ಎಸ್ ನಾಯಕ್ ಸರ್ ನನ್ನ ಪುಸ್ತಕವನ್ನೋದಿ, ಯಕ್ಷಗಾನ ತಾಳಮದ್ದಳೆಯ ಹಂಚಿಕೆ, ಚರ್ಚೆಗಳಿಗಾಗಿ ಸುಧಾಕರ ಜೈನರು ಹುಟ್ಟುಹಾಕಿದ ಅರ್ಥಾಂಬುಧಿ ಎನ್ನುವ ಗ್ರೂಪಿನಲ್ಲಿ ಬರೆದದ್ದು:
ಇದೊಂದು ವೈಚಾರಿಕ ಲಲಿತ ಪ್ರಬಂಧಗಳ ಸಂಕಲನ. ಲೇಖಕರು ಶ್ರೀಯುತ ಶರತ್ ಸೇರಾಜೆ, ನಮ್ಮ ಬಳಗದ ಬಂಧು.

ಸೇರಾಜೆ ಎಂದಾಗ ಎರಡರ್ಥದಲ್ಲಿ ಸ್ಪೂರ್ತಿದಾಯಕ- ಒಂದು, ಸೀತಾರಾಮಯ್ಯರಂತಹ ಮೇರು ಯಕ್ಷ ಕಲಾವಿದ, ಲೇಖಕ, ಚಿಂತಕರಿಗೆ ಜನ್ಮ ನೀಡಿದ ದೇರಾಜೆ(ಚೊಕ್ಕಾಡಿ)ಯೊಂದಿಗೆ ಹೊಂದಿದ ಧ್ವನಿ ಸಾಮ್ಯತೆ. ಇನ್ನೊಂದು, ಸೇರಾಜೆ ಮನೆತನ ಕುರಿಯ ವಿಟ್ಠಲ ಶಾಸ್ತ್ರಿಯವರ ಕುಟುಂಬಕ್ಕೂ ಪದ್ಯಾಣ ಕುಟುಂಬಕ್ಕೂ ಬೆಸೆದ ಯಕ್ಷಗಾನೀಯ ಬಾಂಧವ್ಯ.

ಸುಮಾರು ಒಂದು ವರ್ಷದ ಹಿಂದೆ(ಈ ಪುಸ್ತಕ ಬಿಡುಗಡೆಯ ಮೊದಲು) ಶರತ್ ಇವರ "ಸರಿಗನ್ನಡಂ ಗೆಲ್ಗೆ" ಲೇಖನ(ಸಂಖ್ಯೆ ೧೨-ಪುಟ ೯೭) ಇದೇ ಬಳಗದಲ್ಲಿ ಪ್ರಸಾರವಾಗಿತ್ತು. ಕನ್ನಡ ಭಾಷೆಯ ಬಳಕೆಯಲ್ಲಿ ಕಂಡುಬರುವ ತಪ್ಪುಗಳನ್ನು ಕ್ರೋಡೀಕರಿಸಿ ಅವುಗಳ ಸರಿಯಾದ ರೂಪವನ್ನು ತಿಳಿಸುವ ಒಂದು ಸುಂದರ ಲೇಖನ.

ಶರತ್ ರ ಲೇಖನಿಯ ಮೊನಚು, ಸರಿಯನ್ನು ಸರಿಯೆಂದು ಹೇಳುವ ಛಾತಿ, ರೇಷ್ಮೆಯಂತೆ ನುಣುಪಾದ ಶೈಲಿ, ಎಲ್ಲವೂ ನನ್ನನ್ನು ಸೆರೆಹಿಡಿದಿದ್ದವು.

ಇಂತಹ ೧೪ (ಒಟ್ಟಿಗೆ ೧೫) ಲೇಖನಗಳನ್ನೊಳಗೊಂಡ ೧೩೨ ಪುಟಗಳ "ಬಾಗಿಲು ತೆರೆಯೇ ಸೇಸಮ್ಮ" ಬಿಡುಗಡೆಗೆ ಸಜ್ಜಾಗಿದೆ ಎನ್ನುವದನ್ನು ಅವರಿಂದ ತಿಳಿದ ಕೂಡಲೇ ನನಗಾಗಿ ಒಂದು ಪ್ರತಿಯನ್ನು ಕಳುಹಿಸುವಂತೆ ಬಿನ್ನವಿಸಲಾಗಿ ಎರಡು ತಿಂಗಳ ಹಿಂದೆ ನನ್ನ ಮನೆಗೆ ತನ್ನ ಚೊಚ್ಚಲ(?) ಕೃತಿಯನ್ನು ತಪ್ಪದೆ ಕಳುಹಿಸಿದ ಶರತ್ ಗೆ ನನ್ನ ಬೇಶರತ್ ಅಭಿನಂದನೆ(ಸಂಪಾದಕ ಜೋಗಿಯವರನ್ನು ಉದ್ಧರಿಸಿ).

ಬೀಸ ಬೀಸ ಓದಿರಿ ಎಂದು ಕಳುಹಿಸಿದ ಪುಸ್ತಕ ನನ್ನೂರು ಮುಟ್ಟುವಾಗ ನಾನು ಅವರ ಊರಿಗೆ ಹೋಗಬೇಕೇ? Don't bite more than what you can chew ಎನ್ನುವಂತೆ, ಅರೆಯುವಷ್ಟನ್ನೇ ಅಗೆಯುವ ಜಾಯಮಾನದ ನನಗೆ ಇಡೀ ಪುಸ್ತಕವನ್ನು ಓದಲು ಎರಡು ವಾರಗಳೇ ಬೇಕಾದವು.

ಇಷ್ಟಕ್ಕೂ ಯಾರೀ ಸೇಸಮ್ಮ? ಕದವ ತಟ್ಟುವವರಾರು? ಯಾಕಾಗಿ? ಯಾರಿಗಾಗಿ?

ಕುತೂಹಲವೇ ಕಾರಣವಾಗಿ, ನಾನು ಓದಿದ ಮೊದಲ ಲೇಖನ ಪುಸ್ತಕದ ಶೀರ್ಷಿಕೆಯ "ಬಾಗಿಲು ತೆರೆಯೇ ಸೇಸಮ್ಮ"(ಸಂಖ್ಯೆ ೫, ಪುಟ ೪೮). ಪ್ರವೃತ್ತಿಯಲ್ಲಿ ಲೇಖಕರಾದರೂ ವೃತ್ತಿಯಲ್ಲಿ ಒಬ್ಬ ಮಾಹಿತಿತಂತ್ರಜ್ಞಾನ(Information Technology) ಹೊಂದಿರುವವರು ಎನ್ನುವುದು ಈ ಲೇಖನದಲ್ಲಿ ನಿಚ್ಚಳವಾಗುತ್ತದೆ.

"ಕಂಪ್ಯೂಟರ್ ಜ್ಞಾನವೇ ಜ್ಞಾನ" ಎನ್ನುವ ಯುಗದಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡುಗಳ ಪಿನ್ನುಗಳು, ಫೇಸ್ ಬುಕ್, ಈ ಮೈಲ್ ಗಳಲ್ಲಿ ಬಳಸಬೇಕಾದ "ಗುಪ್ತ ಸಂಖ್ಯೆ(password)" ಎನ್ನುವ ರಹಸ್ಯಮಂತ್ರಗಳ ಬಳಕೆಯಲ್ಲಿರಬೇಕಾದ ಎಚ್ಚರ, ತಪ್ಪಿದಲ್ಲಿ ಆಗುವ ಅನಾಹೂತ ಅನಾಹುತ.... ಎಲ್ಲವನ್ನೂ ಎಳೆ ಎಳೆಯಾಗಿ ಎಳೆದುತಂದಿದ್ದಾರೆ.

ಲೇಖಕರ ಅಧ್ಯಯನಶೀಲತೆಯನ್ನು ಮನಂಬುಗಬೇಕಾದರೆ "ಅಲೆ ಅಲೆ ಅಲೆ ಗುರುತ್ವದ ಅಲೆಯೋ??!" ; "ಲೆಕ್ಕ ಹಾಕಿ ಸುಳ್ಳು ಹೇಳಿ"; ಲೇಖನಗಳನ್ನೋ, ಸಾಹಿತ್ಯ(ಕಲೆ)ದ bent of mind ತಿಳಿಯಲು "ಮೋಹನ ಮುರಲಿ ನಾನು ಕಂಡಂತೆ ನನಗೆ ಕಂಡಷ್ಟು"; ಭಾಷಾಪ್ರಯೋಗದ ವಿಚಾರದಲ್ಲಿ "ಅರ್ಥವೆಂಬ ಊಸರವಳ್ಳಿ"; "ಸರಿಗನ್ನಡಂ ಗೆಲ್ಗೆ" ....

ವೈವಿಧ್ಯಮಯ ಮತ್ತು ವೈಶಿಷ್ಟ್ಯಪೂರ್ಣ.

೧೫ ಲೇಖನಗಳಲ್ಲಿ ಎದ್ದುಕಾಣುವುದು ಸರಳ ಶೈಲಿ ಮತ್ತು ನಿರೂಪಣೆ. Shakespeare ನ ಭಾಷೆಯ ಕಬ್ಬಿಣದ ಕಡಲೆ, ರನ್ನ ಪಂಪರ ಪೆಂಪು ಸೊಂಪುಗಳಿಂದ ಮಾರುದೂರ.
ಜೋಗಿಯವರ ಮುನ್ನುಡಿ, ಗಣೇಶ್ ಭಟ್ ನೆಲಮಾಂವ್ ಇವರ ಬೆನ್ನುಡಿ ತಿಲಕವಿಟ್ಟಂತಿವೆ.
ಅಂದವಾದ ಮುದ್ರಣ, ಕೈಗೆಟಕುವ ಬೆಲೆ( ರೂಪಾಯಿ ೧೨೦/=) ಗ್ರಂಥವನ್ನೂ ಗ್ರಂಥಕರ್ತರನ್ನೂ ಇನ್ನೂ ಹತ್ತಿರವಾಗಿಸಿವೆ.
ಇದು ಹೊತ್ತಗೆಯ ಹೊತ್ತು. ಇನ್ನೂ ಏಕೆ ಹೊತ್ತು? ನೀವೂ ಓದಿ
--------------------------------------------------------------------
Chandrashekhar Madabhavi ಅವರ ಸಾಲುಗಳು
ಇದರ ಸಂಪಾದಕರು ಜೋಗಿ, ಪುಸ್ತಕ ಚೆನ್ನಾಗಿರುತ್ತೆ ಅನ್ನೋದರಲ್ಲಿ ಎರಡು ಮಾತಿಲ್ಲ

ಅಂಕಿತ ಪುಸ್ತಕ ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ ಅವರಿಗೆ ಚಪ್ಪಾಳೆ

ತುಂಬಾ ಒಳ್ಳೆಯ ಲೇಖನಗಳ ಪುಸ್ತಕ.
ಇದರಲ್ಲಿ ಭೂತ, ವರ್ತಮಾನ ಮತ್ತು ಭವಿಷ್ಯದ ಲೇಖನಗಳಿವೆ. ಲೇಖನಗಳ ಪ್ರುಟ್ ಸಲಾಡ್ ಅಥವಾ ಹೂಗುಚ್ಚ ಎನ್ನಬಹುದು

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಲೇಖಕರು ಹಲವು ವಿಷಯಗಳ ಬಗ್ಗೆ ಲೇಖಗಳನ್ನು ಬರೆದಿದ್ದಾರೆ

ಕಠಿಣ ವಿಷಯಗಳನ್ನು ಸರಳೀಕರಿಸಿ ಸಾಮಾನ್ಯರಿಗೆ ಅರ್ಥವಾಗುವಂತೆ ಹೇಗೆ ಬರೆಯಬೇಕು ಎಂದು ತಿಳಿದುಕೊಳ್ಳಬೇಕು ಎಂದರೆ ಇದನ್ನು ಓದಲೇಬೇಕು.

ನನಗಂತೂ ಲೇಖನಗಳನ್ನು ಹೇಗೆ ಬರೆಯಬೇಕು ಎನ್ನುವುದರ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿತು

ಲೇಖಕರು ಪತ್ರಿಕೆಗಳಲ್ಲಿ ಕಾಲಂ ಬರೆಯಬಲ್ಲರು. ಅವರಿಗಾಗಲೆ ಕಾಲಂ ಬರೀತಾ ಇಲ್ಲ ಅಂದ್ರೆ , ಬರೆಯಲಿ.
ನೀವೂ ಈ ಪುಸ್ತಕವನ್ನು ಕೊಂಡು ಓದಿ

--------------------------------------
ಸುಹಾನ್ ಶೇಕ್ ಅವರು ಹೇಳಿದ್ದು:
#ಕೃತಿ: ಬಾಗಿಲು ತೆರೆಯೇ ಸೇಸಮ್ಮ
#ಲೇಖಕರು: Sharath Bhat Seraje
#ಓದಿ ಮುಗಿಸಿದ ಅವಧಿ : ಅಂದಾಜು 3 ಗಂಟೆ ಮೂವತ್ತು ನಿಮಿಷ
#ಪುಟಗಳು: 132

ಬಾಗಿಲು ತೆರಯೇ ಸೇಸಮ್ಮ. ಪುಟಗಳನ್ನು ತಿರುವುತ್ತಾ ಹೋದಂತೆ ಲೇಖಕರು ತನ್ನ ಪ್ರಬಂಧಗಳಲ್ಲಿ ತಿಳಿ ಹಾಸ್ಯವನ್ನು ಬೆರೆಸಿ ಉದಾಹರಣೆಯನ್ನು ಕೊಡುತ್ತಾ ಒಂದೊಂದೆ ಮಾಹಿತಿಯನ್ನು ಓದುಗರಿಗೆ ಉಣಬಡಿಸಿದ್ದಾರೆ.ಸೋನಿಯಾ ಗಾಂಧಿಯಿಂದಿಡಿದು ಟ್ರಂಪ್ ,ರಜನಿಕಾಂತ್,ಕ್ರಿಕೆಟ್ ,ಚೆಸ್ ಹೀಗೆ ಎಲ್ಲದರಲ್ಲಿ ವ್ಯಂಗ್ಯವಾಗಿ ಬರಹದ ಶೈಲಿಯನ್ನು ಬಣಿಸಿ ಓದುಗರ ತಲೆಗೆ ಹೊಕ್ಕುವಾಗೆ ಮಾಡಿರೋದು ಶರತ್ ರವರ ಸ್ಪೆಶಲಿಟಿ.

ಅಂದಹಾಗೆ ಗಣಿತವನ್ನು ಕಬ್ಬಿಣದ ಕಡಲೆಕಾಯಿ ಅನ್ನಬೇಡಿ‌.ಆ ಕಡಲೆಕಾಯಿಯನ್ನೂ ನಿಧಾನವಾಗಿ ಅಗೆದು ತಿನ್ನುವ ವಿಧಾನವನ್ನು ಹೇಳಿದ್ದಾರೆ. (ಸುಮ್ಮನೆ ಓದಿ, ಗಣಿತದ ತರ್ಕ ತಿಳಿದುಕೊಂಡ್ರೆ ನಿಮಗೆ ಜೀರ್ಣಿಸಿಕೊಳ್ಳಲಾಗದು) ಉದಾಹರಣೆಗೆಗಳ ಪಟ್ಟಿ ಒಂದಿಷ್ಟು ಕಮ್ಮಿಯಾದ್ರೆ ಒಳಿತು ಸರ್.

ಇನ್ನುಳಿದಂತೆ ವ್ಯಾಕರಣ ಬೋಧಿಸುವ ಮೇಸ್ಟ್ರಾಗಿ,ವೈಜ್ಞಾನಿಕ ಮತ್ತು ತಾಂತ್ರಿಕ ವಿಷಯಗಳನ್ನು ಬೋರಾಗಿಸದೆ ವ್ಯಂಗ್ಯವಾಗಿ ಉದಾಹರಣೆಗಳನ್ನು ಕೊಟ್ಟು ವಿಶ್ಲೇಷಣೆ ಮಾಡುವ ಶರತ್ ಭಟ್ ಸೇರಾಜೆ ರವರ ಬರಹ ಫೇಸ್ಬುಕ್ ಗೋಡೆಗಳಿಂದ ಎರವಲಾಗಿದ್ರು ನನ್ನಗಿದ್ದು, ಹೊಸ ಓದಿನ‌ ಅನುಭವ.
-----------------------------------------------------------------

Supreetha Venkat
 :

ಈ ಪುಸ್ತಕ ಬಿಡುಗಡೆಯಾಗಿ ಒಂದು ವರ್ಷವಾಯಿತು, ನನ್ನ ಪುಸ್ತಕ ಭಂಡಾರಕ್ಕೆ ಸೇರ್ಪಡೆಯಾಗಿ ಕೆಲವು ತಿಂಗಳುಗಳಾಯಿತು, ಆದರೆ ಓದಲು ಈಗ ಕಾಲ ಕೂಡಿ ಬಂತು! ಶರತ್ ಭಟ್ ಅವರ ಕೆಲವು ಬರಹಗಳನ್ನು ಅವರ ಫೇಸ್ಬುಕ್ ಪ್ರೊಫೈಲ್ ಅಲ್ಲಿ ಓದಿದ್ದೆ, ಸಣ್ಣದ್ದನ್ನೂ ಸವಿಸ್ತಾರವಾಗಿ ಬರೆಯುವ ಅವರು, ಅವರ ಪುಸ್ತಕ ಬಿಡುಗಡೆಯಾದ ಸಂದರ್ಭದಲ್ಲಿ ಅದನ್ನು ಓದುವ ಕುತೂಹಲ ತನ್ನಿಂದಾತಾನೆ ಹುಟ್ಟಿತ್ತು. ಪುಸ್ತಕದ ಬಗ್ಗೆ ಪುಟ್ಟದಾದ ಅನಿಸಿಕೆ ಬರೆಯುತ್ತಿದ್ದೇನೆ.
ಲೈಫ್ ಅನ್ನು ಸೀರಿಯಸ್ ಆಗಿ ತಗೋ ಕೆಲವರಂದರೆ, ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳಬಾರದೆನ್ನುತ್ತಾರೆ ಹಲವರು. ಎಲ್ಲವೂ ಎಲ್ಲರಿಗೆ ಅರ್ಥವಾಗೋಲ್ಲ (ವಾಸ್ತವ?), ಎಲ್ಲವನ್ನೂ ಎಲ್ಲರಿಗೂ ಅರ್ಥಪಡಿಸೋಕ್ಕಾಗೋಲ್ಲ (ವೇದಾಂತ?). ಅದೇನೇ ಇರಲಿ ಒಂದು
ವಿಷಯವನ್ನು ಪರಿಗಣಿಸಿ ಅದನ್ನು ಸರಳವಾಗಿಸಿ, ಉದಾಹರಣೆಗಳ ಮೂಲಕ ಬರೆದಿದ್ದಾರೆ ಶರತ್ ಅವರು. ಓದುವಿಕೆಯಲ್ಲಿ ಆಸಕ್ತಿ ಬರಬೇಕಾದರೆ ಕೇವಲ ಬರಹದ ವಿಷಯ ಆಸಕ್ತಿದಾಯಕವಾಗಿದ್ದರೆ ಸಾಲದು, ಬರಹದ ಶೈಲಿ ಸ್ವಾರಸ್ಯಕರವಾಗಿ ಇದ್ದರೆ ಓದುಗರನ್ನು ಬಹುಬೇಗನೆ ತಲುಪುವುದು. ಇಂತಹದ್ದೊಂದು ಪ್ರಯತ್ನ ಪಟ್ಟಿದ್ದಾರೆ ಲೇಖಕರು. ಸಮೀಪದ ವಸ್ತುವಿಷಯದಿಂದ ಹಿಡಿದು ಅತೀ ದೂರದ ವಸ್ತುವಿಷಯಗಳಿವೆ. ಹಾಗಂದ್ರೇನು ಅಂತೀರಾ? ಕನ್ನಡ ಭಾಷೆಯ ಬಗೆಗೆ ಪ್ರೀತಿಯಿದೆ, ಇಂಗ್ಲೀಷ್ ನಡುವೆ ನಲುಗುತ್ತಿರುವ ಕನ್ನಡದ ಬಗ್ಗೆ ಕಳಕಳಿಯಿದೆ, ಕನ್ನಡ ಸಾಹಿತ್ಯದ, ಬರಹಗಾರರ, ಬರವಣಿಗೆಗಳ ಉಲ್ಲೇಖವಿದೆ, ಮಾತುಗಾರಿಕೆ ಎಂಬ ಕೌಶಲ್ಯದ ಮಾತುಗಳಿವೆ, ಅಷ್ಟೇ ಯಾಕೆ ಗಣಿತವಿದೆ, ವಿಜ್ಞಾನವಿದೆ, ಇತಿಹಾಸ, ಖಗೋಳ ಶಾಸ್ತ್ರವೂ ಬಂದು ಹೋಗುತ್ತದೆ. ಏನಿಲ್ಲ, ಏನಿದೆ? ಎಲ್ಲವೂ ಇವೆ. ಯಾವುದೇ ಒಂದು ಟಾಪಿಕ್'ಗೆ ಸ್ಟಿಕ್ ಆಗದೆ, ಓದುಗರಿಗೆ ಬೋರ್ ಹೊಡಿಸದೆ ಇರುವ ಈ ಪುಸ್ತಕವನ್ನು ಓದಿ ನೋಡಿ
ಸುಪ್ರೀತಾ ವೆಂಕಟ್

No comments:

Post a Comment