Monday 7 January 2019

ನನ್ನ ಮೊದಲ ಪುಸ್ತಕ

ಕಾರ್ಯಕ್ರಮಕ್ಕೆ ಬರೆದ ಕರೆಯೋಲೆ :
ನಾಳೆ ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ನಮ್ಮ ಪುಸ್ತಕಗಳ ಲೋಕಾರ್ಪಣೆ. ಸಮಯ : ಬೆಳಗ್ಗೆ 10ರಿಂದ.

ಇದನ್ನು ಓದುತ್ತಿರುವುದರಿಂದ ನಿಮಗೆ ಓದುವ ಅಭ್ಯಾಸ ಇದ್ದೀತೆಂದು ತಿಳಿದು ನಿಮಗೀ ಅಕ್ಕರೆಯ ಕರೆಯೋಲೆ. ನಾನು ಬರೆದಿರುವ ವೈಚಾರಿಕ, ಅಲ್ಲಲ್ಲ ಲಲಿತ, ಐ ಮೀನ್ ಲಲಿತ ವೈಚಾರಿಕ ಅಲ್ಲಲ್ಲ ವೈಚಾರಿಕ ಲಲಿತ ಪ್ರಬಂಧಗಳು ಪುಸ್ತಕ ರೂಪದಲ್ಲಿ ಜನ್ಮ ತಳೆಯಲಿವೆ. ಈ ಮಗುವಿನ ನಾಮಕಾರಣಕ್ಕೆ ನೀವು ಬಂದು, ಮುಂದಿನ ದಿನಗಳಲ್ಲಿ ಮಗುವನ್ನು ಎತ್ತಿ ಆಡಿಸಿ, ಮಗು ಉಶಾರುಂಟಾ, ಚಂದ ಉಂಟಾ, ತಂಟೆಕೋರನಾ, ಅದರ ಕಿವಿ ಹಿಂಡಬೇಕಾ ಅಂತೆಲ್ಲ ಹೇಳಿದರೆ ನನ್ನ ಸಂಭ್ರಮ ದುಪ್ಪಟ್ಟಾಗುತ್ತದೆ.

ಲೋಕಾರ್ಪಣೆಯಾಗಲಿರುವ ಪುಸ್ತಕಗಳು :
ಬಾಗಿಲು ತೆರೆಯೇ ಸೇಸಮ್ಮ / ಶರತ್ ಭಟ್ ಸೇರಾಜೆಯ ಲೇಖನಗಳ ಸಂಗ್ರಹ
ಸಲಾಂ ಬೆಂಗಳೂರು / ಜೋಗಿ ಅವರ ಕಾದಂಬರಿ
ನವಿಲು ಕೊಂದ ಹುಡುಗ /ಸಚಿನ್ ತೀರ್ಥಹಳ್ಳಿ ಅವರ ಕಥಾ ಸಂಕಲನ

ಎಲ್ಲರೂ ಬನ್ನಿ, ಹರಸಿ.

----------------------------------------------------------------------------------
ಕಾರ್ಯಕ್ರಮ ನಾಳಿದ್ದು ಆದಿತ್ಯವಾರ, ವಂದನಾರ್ಪಣೆಯ ಕಾರ್ಯಕ್ರಮ ಇಲ್ಲೇ, ಇವತ್ತಿಂದಲೇ !

ವಂದನಾರ್ಪಣೆ ಭಾಗ ೧
==============================
ಬೆನ್ನುಡಿಗೆ ಯಾರಾದೀತು ಅಂತ ಭೂಮಿ ಅಡಿಮೇಲು ಮಾಡುತ್ತಿದ್ದಾಗ, ಇಂಗ್ಲೀಷು ಪುಸ್ತಕಗಳಿಗೆ ಇರುವಂತಹಾ ಕಣ್ಣು ಸೆಳೆಯುವ ಬ್ಲರ್ಬ್ ಯಾಕಿರಬಾರದು ಅಂತ ಆಸೆಗಣ್ಣುಗಳಿಂದ ಹುಡುಕಿದಾಗ, ಒದಗಿ ಬಂದ ಹೆಸರು ಗಣೇಶ್ ಭಟ್ ನೆಲೆಮಾಂವ್ ಅವರದ್ದು. Ganesh Bhat ವೈಯಕ್ತಿಕವಾಗಿ ನನಗೆ ಪರಿಚಯ ಇರುವವರಲ್ಲ, ಮತ್ತು ಬಹುಶಃ ನನಗಿಂತ ಕಿರಿಯರು, ಆದರೂ ಸಣ್ಣವಯಸ್ಸಿನಲ್ಲಿಯೇ ಸಾಕಷ್ಟು non-fiction ಪುಸ್ತಕಗಳ ಮೇಲೆ ಕಣ್ಣೋಡಿಸಿರುವ expert reader. ಅರ್ಜೆಂಟಿಗೆ ಬೇಕಾದರೆ ನನಗೋ, ನಮ್ಮ ಪ್ರಶಾಂತ ಭಟ್ಟರಿಗೋ, ಗುರುರಾಜ ಕೋಡ್ಕಣಿಯವರಿಗೋ ನಾವು ಓದಿರದ non-fiction ಪುಸ್ತಕವೊಂದರ ಹೆಸರು ಹೇಳಿ ಬಿಡಬಲ್ಲವರು. ಇನ್ನೂ ಹೇಳಬೇಕೆಂದರೆ ಗಣಿತ, ವಿಜ್ಞಾನ, ತಂತ್ರಜ್ಞಾನ, ಭಾಷೆಯಂತಹಾ ವಿಷಯಗಳಲ್ಲಿ ಬಂದಿರುವ ಬೇರೆ ಬರೆಹಗಳನ್ನು ಓದಿ, ಅವಕ್ಕಿಂತ ನನ್ನದು ಹೇಗೆ ಭಿನ್ನ ಅಂತ ಗ್ರಹಿಸಬಲ್ಲವರು. ನನ್ನನ್ನು ಮುಖತಃ ಕಂಡವರಲ್ಲವಾದರೂ ನನ್ನ ಬರೆಹಗಳ ಅಂತರಂಗವನ್ನು ಆಪ್ತಮಿತ್ರನಂತೆ ತಿಳಿದವರು.

ಕೇಳಿದಾಗ ಸಂಕೋಚದಿಂದಲೂ, ಸಂತೋಷದಿಂದಲೂ ಒಪ್ಪಿದರು.
"ನಮ್ಮ ನಡುವಿನ ಸಾಕ್ಷಿಪ್ರಜ್ಞೆಯಾದ ಶರತ್ ಸೇರಾಜೆಯವರು ಒಂದು ಬಂಧದ ಚೌಕಟ್ಟಿನೊಳಗೆ ಸೂಕ್ಷ್ಮ ಸಂವೇದನೆಯ ಆಶಯವು ಗ್ರಹೀತವಾಗುವುದರ, ಅರ್ಥಸ್ಫೋಟದ ಅನುಸಂಧಾನದ ಉದ್ಭೋದವಾಗಿ ತನ್ನ ಹಳವಂಡದಲ್ಲಿ ತಾನೇ ಹರಳುಗಟ್ಟಿ.... " ಅಂತೆಲ್ಲ ಬರೆದರೆ ಅಂಡರ್ವರ್ಲ್ಡ್ ಡಾನುಗಳನ್ನು ಕರೆಸಿಯೇನು ಅಂತ ಹೆದರಿಸಿದೆ. ನನ್ನ ಗ್ರಹಿಕೆ ಚೂರೂ ತಪ್ಪಾಗಲಿಲ್ಲ ಎಂಬಂತೆ ಎರಡು ಒಂದಕ್ಕಿಂತ ಒಂದು catchyಯಾದ ಬೆನ್ನುಡಿಗಳನ್ನು ಬರೆದುಕೊಟ್ಟು, ಒಂದನ್ನು ಆಯಬೇಕಾದ ಮತ್ತು ಉದ್ದ ಹೆಚ್ಚಾದ್ದರಿಂದ ಸ್ವಲ್ಪ ಅಲ್ಲಿಲ್ಲಿ ಕತ್ತರಿಸಬೇಕಾದ ಇಕ್ಕಟ್ಟಿಗೆ ನನ್ನನ್ನು ಸಿಕ್ಕಿಸಿ, "ಹೆಂಗೆ" ಅಂತ ಕೇಳಿದರು. ಅವರ ಆಕರ್ಷಕವಾದ ಬೆನ್ನುಡಿಯಿಂದ ಪುಸ್ತಕದ ಅಂದ ಹೆಚ್ಚಿದೆ ಅಂದರೆ ಹೆಚ್ಚಾಗಲಾರದು.
----------------------------------------------------------------------------------
"ಅಂಕಿತ ಪ್ರತಿಭೆ" ಮಾಲಿಕೆಯ ಸಂಪಾದಕರಾಗಿ, ಆ ಮಾಲಿಕೆಗೆ ನನ್ನ ಲೇಖನಗಳನ್ನು ಆಯ್ದು, ಪ್ರತಿಷ್ಠಿತ ಸಂಸ್ಥೆಯಾದ ಅಂಕಿತ ಪ್ರಕಾಶನದಿಂದಲೇ ಈ ಪುಸ್ತಕ ತರುತ್ತಿರುವ, ಇಷ್ಟೊಳ್ಳೆ ಮುನ್ನುಡಿ ಕೊಟ್ಟು, ಒಳ್ಳೆ vocabulary ಉಂಟೆಂದು ಬೀಗುತ್ತಿದ್ದ ನನ್ನನ್ನು ಯಾವ ಶಬ್ದ ಹಾಕಿ ಥ್ಯಾಂಕ್ಸ್ ಹೇಳುವುದೆಂದು ಗೊತ್ತಾಗದೆ ಪೇಚಾಡಿಸಿದ, ತನ್ನ "ಸಲಾಂ ಬೆಂಗಳೂರು" ಕಾದಂಬರಿ ತರುತ್ತಿರುವ ಈ ಹೊತ್ತಿನಲ್ಲಿ, ಬೆಂಗಳೂರರಿನಿಂದಲೇ ಜೋಗಿಯವರಿಗೊಂದು ಸಲಾಂ.

ಒಂದೊಳ್ಳೆಯ ಮುನ್ನುಡಿ ಬರೆಯುವುದು ಕಷ್ಟದ ಕೆಲಸ. ಪ್ರಸಿದ್ಧರ ಮುನ್ನುಡಿಯ ತೊಂದರೆ ಏನೆಂದರೆ, ಎಷ್ಟೋ ಸಲ, ಎಂಟೋ ಹತ್ತೋ ಪುಟಗಳನ್ನೋದಿ ಕಾಟಾಚಾರಕ್ಕೆ ಏನೋ ಒಂದು generic ಮುನ್ನುಡಿ ಬರೆದಿದ್ದಾರೆ ಅನ್ನಿಸುತ್ತದೆ. ಅದು ಅವರ ತಪ್ಪೂ ಅಲ್ಲ, ಅವರು ಮೊದಲೇ ಬಿಡುವಿಲ್ಲದವರು. ಹತ್ತಿಪ್ಪತ್ತು ಜನ ಒಟ್ಟೊಟ್ಟಿಗೆ ಮುನ್ನುಡಿ ಕೇಳಿದರೆ ಅವರಾದರೂ ಏನು ಮಾಡಿಯಾರು. ಇದಕ್ಕೆ ಒಂದು ಒಳ್ಳೆಯ exception ಆಗಿ ಜೋಗಿಯವರ ಮುನ್ನುಡಿಯಿದೆ. ಹೀಗೂ ಬರೆಯಬಹುದಲ್ಲ ಅಂತ ಅವರು ಬರೆದದ್ದನ್ನು ನೋಡಿದ ಮೇಲೆ ಅನ್ನಿಸುವಂತೆ ಜಾನಕಿ ಕಾಲಂ ಇರುತ್ತಿತ್ತು , ಮುನ್ನುಡಿಯೂ ಹಾಗೇ ಇದೆ. ಒಂದು ಕ್ಷಣ ನನ್ನ ಪುಸ್ತಕದ ಬಗ್ಗೆ ಬರೆದದ್ದು ಅನ್ನುವುದನ್ನು ಮರೆತು time ಟ್ರಾವೆಲ್ ಮಾಡಿ, ಆ ದಿನಗಳಲ್ಲಿ ಜಾನಕಿ ಕಾಲಂ ಓದುತ್ತಿದಂತೆಯೇ ರಪಕ್ಕನೆ ಓದಿದೆ. ಕಿರಿಯನೆಂದು ಕಡೆಗಣಿಸದೆ ಅಕ್ಕರಾಸ್ಥೆಯಿಂದ ಮುನ್ನುಡಿ ಬರೆದಿದ್ದಾರೆ.

"ಸಹೃದಯತೆ ಎಂದರೆ ಬರೆದವನ ಮೇಲೆ ಪಕ್ಷಪಾತವಲ್ಲ; ಕವಿಹೃದಯವನ್ನು, ಎಂದರೆ ಮಾತಿನಲ್ಲಿ ವ್ಯಕ್ತವಾದ ಅಥವಾ ಆಗಬೇಕೆಂದು ಅವನ ಮನಸ್ಸಿನಲ್ಲಿದ್ದ ಭಾವಸ್ವರೂಪವನ್ನು ತಿಳಿಯುವ ಪ್ರತಿಭಾಶಕ್ತಿ . ಇದರೊಂದಿಗೆ ಬಹುಜ್ಞತೆ ಸೇರಿದ್ದರೆ, ಆ ವಿಮರ್ಶಕನೇ ವಿಮರ್ಶಕನು"--> ಸೇಡಿಯಾಪು ಕೃಷ್ಣ ಭಟ್ಟ

ಈ ರೀತಿ, ಸೇಡಿಯಾಪು ಅಜ್ಜ ಹೇಳಿರುವ "ಸಹೃದಯ" ಎಂಬ ಶಬ್ದದ ಸರಿಯಾದ ಅರ್ಥದಲ್ಲಿ ಸಹೃದಯಿ ವಿಮರ್ಶೆಗಳಾಗಿ ಬೆನ್ನುಡಿಯನ್ನೂ ಮುನ್ನುಡಿಯನ್ನೂ ಬರೆದ ಇಬ್ಬರಿಗೂ ಫೇಸ್ಬುಕ್ಕಿನ ಗುರುಹಿರಿಯರು, ಲೈಕಾಧಿಪತಿಗಳು, ಶೇರ್ ಖಾನ್ ಗಳು, ಕಾಮೆಂಟು ಪ್ರವೀಣರು ಮುಂತಾದ ಹತ್ತು ಸಮಸ್ತರ ಸಮಕ್ಷದಲ್ಲಿ ವಂದನೆಯನ್ನು ಅರ್ಪಿಸಿ ಮೊದಲ ಭಾಗವನ್ನು ಮುಗಿಸುತ್ತೇನೆ. 

No comments:

Post a Comment