Monday 7 January 2019

ರವಿ ಬೆಳಗೆರೆಯವರ ಅಣಕ

ನಮ್ಮ ಕಾರ್ಯಕ್ರಮ ಮುಂದೆ ಹೋದದ್ದನ್ನು ಹೇಳಿದ್ದು

ಕಳೆದ ವಾರ ನಡೆಯಬೇಕಾಗಿದ್ದ ಪುಸ್ತಕಗಳ ಲೋಕಾರ್ಪಣೆ ಮುಂದಕ್ಕೆ ಹೋದದ್ದು ನಿಮಗೆ ಗೊತ್ತೇ ಇದೆ. ಆ ಕಾರ್ಯಕ್ರಮವೀಗ ಡಿಸೆಂಬರ್ 1, 2018ರ ಶನಿವಾರ ಸಂಜೆ 4 ಗಂಟೆಗೆ ಆಗಲಿದೆ. ಹಿಂದೊಮ್ಮೆ ಬೇಂದ್ರೆ,ಅಡಿಗ,ಯೋಗರಾಜ ಭಟ್ಟರ ಪದ್ಯಗಳ ಅಣಕ ಮಾಡಿದ್ದು, ಇಂಗ್ಲೀಷು ಸಾಲುಗಳನ್ನು ಹಳಗನ್ನಡದಲ್ಲಿ ಹೇಳಿದ್ದು ಎಲ್ಲ ನಿಮಗೆ ನೆನಪಿರಬಹುದು. ಈಗ ಮತ್ತೊಂದು. ರವಿ ಬೆಳಗೆರೆಯವರು ತನ್ನದೇ ಶೈಲಿಯಲ್ಲಿ ಈ ಕರೆಯೋಲೆಯನ್ನು ಬರೆದರೆ ಹೇಗೆ ಬರೆಯಬಹುದಿತ್ತು ಎಂಬ ಕಲ್ಪನೆ:

ಎಂದಿನಂತೆ ಓದುಗ ದೊರೆಗೆ ನಮಸ್ಕಾರಗಳು. ಅಸಲಿಗೆ ನಾನು ಪುಸ್ತಕಕ್ಕೆ ಅಂತ ಬರೆದವನೇ ಅಲ್ಲ. ಯಾಕೋ ಹಟಕ್ಕೆ ಬಿದ್ದವನಂತೆ ಅಜಮಾಸು ಮೂರು ವರ್ಷ ಬರೆಯುತ್ತ ಹೋದೆ, ನೀವು ಓದುತ್ತ ಹೋದಿರಿ. ತುಂಬ positive ಆದ ಕೆಲವು ಕಾಮೆಂಟ್ ಗಳಿದ್ದವು,ಇದನ್ನೆಲ್ಲಾ ಇಷ್ಟುದ್ದ ಫೇಸ್‌ಬುಕ್ಕಿನಲ್ಯಾಕೆ ಬರೀತೀರಿ ಎಂಬಂಥ ಡರಾವುಗಳೇನೂ ಇರಲಿಲ್ಲ. Fine. I am damn happy. ಒಂದಷ್ಟು ಹೊಸ ಸರಕನ್ನೂ ಪಟ್ಟಾಗಿ ಕೂತು ಹೊಂಚಿದೆ. "ನಾನು ಬರೀತೀನಾ? ಇದೆಲ್ಲಾ ಆಗುತ್ತಾ? ಅಷ್ಟಕ್ಕೂ ಈ ಮಹಾನಗರವೆಂಬ ಮಾಯಾಂಗನೆಯ ಸ್ಪೀಡು ನಿಮ್ಮನ್ನ ಓದಲು ಬಿಡುತ್ತದಾ?" ಹಾಗಂತ ಕೇಳಿಕೊಂಡದ್ದಿತ್ತು. ಈಗ ನೋಡಿದರೆ ಬರೋಬ್ಬರಿ ೧೨೫ ಪುಟಗಳಾಗಿವೆ ! ಹೆಗ್ಗಳಿಕೆ ನನ್ನದಾ? ಅದು ನಿಮ್ಮದಾ? With all sincerity, ನಿಜಕ್ಕೂ ತುಂಬ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ಇಂಥ ಸಂದರ್ಭಗಳಲ್ಲಿ ತುಂಬ ಭಾವುಕನಾಗುತ್ತೇನೆ, ಮುಕೇಶ್‌ನ ಹಾಡೊಂದು ನೆನಪಾಗುತ್ತಿದೆ. ಬೆನ್ನು ಬಾಗಿಸಿ ಕೂತು ಬರೆದು, ಅದರ ಕರಡು ನೋಡಿ, ಪ್ರಿಂಟು ಮಾಡಿಸಿ, ಮೊದಲ ಪ್ರತಿ ಕೈಗೆ ಬಂದಾಗ ಅದೊಂಥರಾ ಖುಷಿ. ಮನಸ್ಸು ಜೋಯಿಡಾದ ಕಾಡಲ್ಲಿ ಸುಳಿಯುವ ಜಿಂಕೆ ! ಸಾವನ್ ಕಾ ಮಹೀನಾ ಪವನ್ ಕರೇ ಶೋರ್ ! ದಿಲ್ಲು ಫುಲ್ ಖುಷ್ ! ಆಯ್ತಲ್ಲ, ಇನ್ನೇನು? I am free now- ಎಂಬ ಭಾವ. ನಿಮಗೆ ಹೇಳಿಕೊಳ್ಳಬೇಕೆನ್ನಿಸಿತು. ನನ್ನ ಶ್ರದ್ಧೆ ಯಾವತ್ತೂ, ಕೊಂಚ ಮಾತ್ರವೂ ಕಡಮೆಯಾಗುವುದಿಲ್ಲ. ಪುಸ್ತಕ ನೋಡಿದರೆ ಅಂಕಿತ ಪ್ರಕಾಶನದವರ ಅಚ್ಚುಕಟ್ಟು-ಮಟ್ಟಸ ಎಂಥದೆಂಬುದು ಗೊತ್ತಾಗಿ ಹೋಗುತ್ತದೆ. ಜೋಗಿ ಅವರ ಸೊಗಸಾದ ಮುನ್ನುಡಿಯಿದೆ. Once again, I am blessed.
ನಾಳಿದ್ದು ಸಂಜೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರಿನ ಸಭಾಂಗಣದಲ್ಲಿ ಸಿಗೋಣ. ನಾನು ಕರೆಯದೆ ಇರ್ತೇನಾ, ನೀವು ಬರದೇ ಇರ್ತೀರಾ ?

No comments:

Post a Comment