Sunday 6 January 2019

ಪ್ರಭುಶಂಕರ ಇನ್ನಿಲ್ಲ

ಸಭೆಯಲ್ಲಿದ್ದಾಗ ಪಂಚೆ ಜಾರಿದರೆ , ಕೈಯು ಕೂಡಲೇ ಅದರ ಸಹಾಯಕ್ಕೆ ಬರುತ್ತದೆ, ಪಂಚೆಯು ಸಹಾಯಕ್ಕಾಗಿ ಕೂಗಿಕೊಳ್ಳಲಿ ಅಂತ ಕೈ ಕಾಯುವುದಿಲ್ಲ. ಒಳ್ಳೆಯ ಸ್ನೇಹಿತರು ಹಾಗಿರಬೇಕು ಅಂತ ಪ್ರಭುಶಂಕರರು ಒಂದು ಸಲ ಹೇಳಿದ್ದರು . ಸ್ವತಃ ಅವರೇ ಹಾಗಿದ್ದರು ಅಂತ ಬಲ್ಲವರು ಹೇಳುತ್ತಾರೆ. ಉದ್ಯೋಗಕ್ಕೆ ತೆಗೆದುಕೊಳ್ಳುವಾಗ ಸಂದರ್ಶನಗಳಲ್ಲಿ ನಿಮ್ಮ ವೀಕ್ನೆಸ್ ಏನು ಅಂತೊಂದು ಪ್ರಶ್ನೆ ಬಂದರೆ, "I am too much of a perfectionist" ಅಂತೇನಾದರೂ ಹೇಳಿ ಜಾರಿಕೊಳ್ಳುವುದು ರೂಢಿ . ಪ್ರಭುಶಂಕರರ ಬಗ್ಗೆ ಕೇಳಿದರೆ, "ಒಬ್ಬರು ಕೇಳಿದರೆ ಸಾಲ ಮಾಡಿಯಾದರೂ ಕೊಡುವಷ್ಟು ಉದಾರಿ", "ತಾನು ಕಷ್ಟಕ್ಕೆ ಸಿಕ್ಕಿಕೊಂಡಾದರೂ ಇತರರಿಗೆ ಒಳ್ಳೆಯದು ಮಾಡುವ ಪರೋಪಕಾರಿ" ಅಂತೆಲ್ಲ ಅವರ weaknessಗಳನ್ನು ಹೇಳಬಹುದು ಅಂತ ಅವರ ಜೊತೆ ಒಡನಾಡಿದವರು ಹೇಳುತ್ತಾರೆ.

ಅರಾ ಮಿತ್ರರಂತೂ "ನಮ್ ಗುರುಗಳು ಪ್ರಭುಶಂಕರರು ಹಾಗ್ ಹೇಳಿದ್ರು, ಹೀಗ್ ಹೇಳಿದ್ರು" ಅಂತೆಲ್ಲ ಇವರ ಬಗ್ಗೆ ಭಾಷಣಗಳಲ್ಲಿ ಹೇಳುತ್ತಲೇ ಇರುತ್ತಾರೆ. ಕುವೆಂಪು ಅವರ ಪ್ರಿಯ ಶಿಷ್ಯರಾಗಿ, ದೊಡ್ಡ ಅಭಿಮಾನಿಯಾಗಿ ಅವರಿಗೆ ನೊಬೆಲ್ ಸಿಕ್ಕಬೇಕೆಂದು ಇವರು ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದರಂತೆ . ಇವರ "ಕನ್ನಡದಲ್ಲಿ ಭಾವಗೀತೆ" ಎಂಬ ಮಹಾಪ್ರಬಂಧವು ಸಂಗ್ರಹಯೋಗ್ಯವಾದ ಕೃತಿ, ಇದರಲ್ಲಿ ವಿದ್ವತ್ತೆಯೂ, ಲಲಿತಪ್ರಭಂಧಕಾರನ ಸುಲಲಿತ ಶೈಲಿಯೂ ಮೇಳೈಸಿದೆ. "ಅಮೆರಿಕದಲ್ಲಿ ನಾನು, ಶಾಂತಿ‌" ಎಂಬ ಪ್ರವಾಸಕಥನ, ಭಾರತೀಯ ತತ್ತ್ವಶಾಸ್ತ್ರದ ಬಗೆಗಿನ ಆಚಾರ್ಯ ಕೃತಿ ಎನ್ನಿಸಿರುವ ಹಿರಿಯಣ್ಣನವರ The Outlines of Indian Philosophyಯ ಅನುವಾದ, ಸಾಹಿತ್ಯ ಮತ್ತು ಆಧುನಿಕತೆ ಎಂಬ ವಿಮರ್ಶನ ಪುಸ್ತಕ ,ಜನಮನ ಎಂಬ ವ್ಯಕ್ತಿಚಿತ್ರಗಳ ಸಂಗ್ರಹ ಇವನ್ನೂ ಓದಿನೋಡಿ. ಬಸವಣ್ಣನವರ ಬಗ್ಗೆ ಇವರು ಬರೆದಿರುವ ಬೆರಗು ಚೆನ್ನಾಗಿದೆಯೆಂದು ಗೆಳೆಯ ಪ್ರಶಾಂತ್ ಭಟ್ ಬರೆದಿದ್ದಾರೆ. ತೀನಂಶ್ರೀ, ಮೂರ್ತಿರಾವ್, ಅರಾ ಮಿತ್ರ, ಪಾವೆಂ ಇವರುಗಳಂತೆ ಒಳ್ಳೆಯ ಹಾಸ್ಯಪ್ರಜ್ಞೆಯೂ ಪಾಂಡಿತ್ಯವೂ ಒಟ್ಟಿಗೇ ಇದ್ದ ಕೆಲವೇ ಜನರಲ್ಲಿ ಇವರೂ ಒಬ್ಬರು. ಈ ಸಜ್ಜನರಿಗೆ ನನ್ನ ನಮನಗಳು.

ಪ್ರಭುಶಂಕರ ಇನ್ನಿಲ್ಲ

No comments:

Post a Comment