Wednesday 22 March 2017

ಮರ್ಯಾದೆ ತೆಗೆಯುವ ಕಲೆಯ ಬಗ್ಗೆ

ಒಮ್ಮೆ ಹೀಗಾಯಿತಂತೆ, ಪಾರ್ಟಿಯೊಂದರಲ್ಲಿ ಮಹಿಳೆಯೊಬ್ಬರಿಗೆ ಯಾರ ಮುಖ ಕಂಡರೆ ಆಗುತ್ತಿರಲಿಲ್ಲವೋ ಅವರೇ ಮುಖಾಮುಖಿಯಾದರಂತೆ. ಮೂದಲಿಸುವ ಚಟವೂ ತುರಿಕೆಯಂತದ್ದೇ ಆದ್ದರಿಂದ ಆಕೆ ಹೇಳಿದಳಂತೆ:
"ನೀನೇ ನನ್ನ ಗಂಡ ಆಗಿದ್ದರೆ, ನಿನಗೆ ಕಾಫಿಯಲ್ಲಿ ವಿಷ ಬೆರೆಸಿ ಕೊಡುತ್ತಿದ್ದೆ."
ಥಟ್ಟನೆ ಉತ್ತರ ಬಂತು, “ನೀನೇ ನನ್ನ ಹೆಂಡತಿ ಆಗಿದ್ದರೆ ಅದನ್ನು ಗಟಗಟನೆ ಕುಡಿದುಬಿಡುತ್ತಿದ್ದೆ"
ಈ ಜೋಕನ್ನು ಚರ್ಚಿಲ್ಲನ ತಲೆಗೆ ಕಟ್ಟುವವರಿದ್ದಾರೆ, ಆದರೆ ಅವನಿಗಿಂತಲೂ ಎಷ್ಟೋ ಮೊದಲು ಈ ಕಥೆ ಚಾಲ್ತಿಯಲ್ಲಿತ್ತು ಅಂತ ಹೇಳುತ್ತಾರೆ. ಈ ಎದಿರೇಟಿಗೆ ಕಕ್ಕಾಬಿಕ್ಕಿಯಾಗಿ ಆಕೆ ಒಂದು ಲೋಟ ವಿಷ ಗುಟುಕರಿಸಿ ಬಿಟ್ಟಿದ್ದರೂ ಇರಬಹುದು. ಇರಲಿ.
ಅಂತೂ ಹೀಗೆ ಟಾಂಗ್ ಕೊಡುವುದು ಕೂಡಾ ಒಂದು ಕಲಾಪ್ರಕಾರ ಅನ್ನಿಸುವಷ್ಟು ಕತೆಗಳು ಲಾಗಾಯ್ತಿನಿಂದಲೂ ಹರಿದಾಡುತ್ತಿವೆ. ಫೇಸ್ಬುಕ್ ನಲ್ಲೋ, ಟ್ವಿಟ್ಟರಿನಲ್ಲೋ ಜನ ಬಕೆಟುಗಟ್ಟಲೇ ಕೆಸರು ಎರಚಾಡಿಕೊಳ್ಳುವುದು ನೋಡಿ ಮಂಡೆಬಿಸಿಯಾದವರಿಗೆ ಕೆಸರನ್ನೂ ಪನ್ನೀರು ತಳಿದ ಹಾಗೆ ಸಿಂಪಡಿಸುವ ಚತುರಬುದ್ಧಿಯವರು ಸಿಕ್ಕಿದರೆ ತುಟಿ ಅರಳುತ್ತದೆ, ಮಂದಹಾಸ ಅನ್ನುವುದು ಪಕ್ಕದ ಬೀದಿಯಲ್ಲಿನ ಏಟಿಎಂ ನಲ್ಲಿ ಉದುರುವ ನೋಟಿನ ಹಾಗೆ ಮಿಂಚಿ ಮಾಯವಾಗುತ್ತದೆ! ಮರ್ಯಾದೆ ತೆಗೆಯುವ ಕಲೆಗೆ ಮರ್ಯಾದೆ ತಂದು ಕೊಟ್ಟವರು ಸುಮಾರು ಜನ ಇದ್ದಾರೆ. ಒಂದೊಂದು ಶಬ್ದವೂ ಈಟಿ , ಮಾತು ಸ್ಫಟಿಕದ ಶಲಾಕೆ ಅನ್ನುವ ಜಾತಿ ಇವರದು . ಇವರದ್ದೇನಿದ್ದರೂ ಮಾತಲ್ಲೇ ಮಲ್ಲಾಮಲ್ಲಿ, ಇವರದ್ದೇನು ನಾಲಗೆಯೇ ಅಥವಾ ವಾಟ್ಸ್ ಅಪ್ಪು ಫಾರ್ವರ್ಡ್ ಗಳನ್ನು ಹುಟ್ಟಿಸಿ ಬಿಸಾಡಿ ಹಲ್ಲು ಕಿರಿಯುವ ಯಂತ್ರವೇ ಅನ್ನಿಸಬೇಕು. ಅವಮಾನವನ್ನೂ ಸಮಾಜಸೇವೆ ಅಂದುಕೊಂಡು ಮಾಡುವ ಇಂತಹಾ ರಸಾಸ್ವಾದನ ಚತುರರ ಪಲುಕುಗಳನ್ನು ಮೆಲುಕು ಹಾಕಿ ಬರೋಣವಂತೆ.
ಇಂಗ್ಲೆಂಡಿನಲ್ಲಿ ಇಂತವರ ಒಂದು ದೊಡ್ಡ ದಂಡೇ ಇತ್ತು. ಪತ್ತೇದಾರಿ ಕತೆಗಳಿಂದ ಹಿಡಿದು ಪ್ರಬಂಧಗಳವರೆಗೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಕೈಯಾಡಿಸಿದ್ದ ಜಿ ಕೆ ಚೆಸ್ಟರ್ಟನ್ ಕುಳ್ಳ, ಡುಮ್ಮಣ್ಣ. ಇವನ ಜೊತೆ ನಾಲಗೆಯಲ್ಲೇ ಕತ್ತಿವರಸೆ ಮಾಡುವುದಕ್ಕೆ ಹೇಳಿ ಮಾಡಿಸಿದ ಹಾಗಿದ್ದವನು ನಾಟಕಕಾರ ಬರ್ನಾರ್ಡ್ ಷಾ, ಇವನು ಸಪೂರ ಇದ್ದ ಕಡ್ಡಿ ಪೈಲ್ವಾನ್ . ಇಬ್ಬರೂ ಮಾತಿಗೆ ನಿಂತರೆ ಜಗ ಜಟ್ಟಿಗಳು. House of Lords ಅನ್ನುವುದು ಅಲ್ಲಿಯ ಸಂಸತ್ತು. ಅಲ್ಲಿ ಬರ್ನಾರ್ಡ್ ಷಾ ಒಂದು ಸರ್ತಿ ಆಗ ಬಂದಿದ್ದ ಬರದ ಬಗ್ಗೆ ಭೀಷಣ ಭಾಷಣ ಕುಟ್ಟಿದನಂತೆ, ಚೆಸ್ಟರ್ಟನ್ ಕೀಟಲೆ ಮಾಡುತ್ತ ಹೇಳಿದ, "ಇವರು ಇಷ್ಟೆಲ್ಲಾ ಬಡ್ಕೊಳ್ಳುವ ಅಗತ್ಯವೇ ಇರಲಿಲ್ಲ, ಇವರನ್ನ ನೋಡಿದರೇ ಗೊತ್ತಾಗ್ತದೆ ಇಲ್ಲಿ ಬರ ಬಂದಿದೆ ಅಂತ". ಬರ್ನಾರ್ಡ್ ಷಾ ಬಿಟ್ಟಾನೆಯೇ ? ಆ ಕಡೆಯಿಂದ ಬಾಣ ಬಂದೇ ಬಂತು, "ಮತ್ತು ಇವರನ್ನ ನೋಡಿದರೇ ಗೊತ್ತಾಗ್ತದೆ ಇಲ್ಲಿ ಬರ ಯಾಕೆ ಬಂದಿದೆ ಅಂತ". ಇನ್ನೊಂದು ಸರ್ತಿ ಕೆಂಡ ಕಾರುತ್ತಾ ಚೆಸ್ಟರ್ಟನ್ ಅಬ್ಬರಿಸಿದನಂತೆ, "ನಿನ್ನನ್ನ ಬಿಡ್ತೇನಾ ನಾನು, ನುಂಗಿ ಹಾಕ್ತೇನೆ", ಬರ್ನಾರ್ಡ್ ಷಾನ ಕಟಕಿ ಕೂಡಲೇ ಬಂತು, "ಹಾಗೆ ಮಾಡಿದರೆ ನಿಮ್ಮ ತಲೆಗಿಂತ ಜಾಸ್ತಿ ಮೆದುಳು ನಿಮ್ಮ ಹೊಟ್ಟೆಯಲ್ಲೇ ಇರುತ್ತದೆ ಬಿಡಿ".
ಮತ್ತೊಂದು ಸಲ ಈ ಚೆಸ್ಟರ್ಟನ್ ಒಂದು ಇಕ್ಕಟ್ಟಾದ ದಾರಿಯಲ್ಲಿ ಹೋಗುತ್ತಿದ್ದಾಗ ಒಬ್ಬ ಉದ್ಧಟ ಸಿಕ್ಕಿದನಂತೆ, ಕುಚೇಷ್ಟೆ ಮಾಡುತ್ತಾ, "ನಾನು ಮೂರ್ಖರಿಗೆ ದಾರಿ ಬಿಡುವುದಿಲ್ಲ" ಅಂದನಂತೆ. "ನಾನು ಬಿಡುತ್ತೇನೆ" ಅಂತ ತಣ್ಣಗೆ ಹೇಳಿ ಚೆಸ್ಟರ್ಟನ್ "ಹೆಂಗೆ" ಎಂಬಂತೆ ವ್ಯಂಗ್ಯದಿಂದ ನೋಡಿದನಂತೆ. ಬರ್ನಾರ್ಡ್ ಷಾ ಒಂದು ಸಲ ತನ್ನ ನಾಟಕದ ಎರಡು ಟಿಕೇಟು ಚರ್ಚಿಲ್ಲನಿಗೆ ಕಳಿಸಿ, "ಒಂದು ನಿಮಗೆ, ಇನ್ನೊಂದು ನಿಮ್ಮ ಗೆಳೆಯರಿಗೆ, if any" ಅಂತ ಚುಚ್ಚು ಸಾಲು ಬರೆದಿದ್ದನಂತೆ, ಪ್ರತ್ಯುತ್ಪನ್ನ ಮತಿಗೆ ಹೆಸರಾದ ಚರ್ಚಿಲ್ ಒಂದು ಉತ್ತರದ ಜೊತೆ ಟಿಕೇಟು ಮರಳಿಸಿದ್ದ, "ಮಾನ್ಯರೇ ಇವತ್ತು ನನಗೆ ನಿಮ್ಮ ನಾಟಕಕ್ಕೆ ಬರಲಾಗುವುದಿಲ್ಲ, ಎರಡನೇ ಪ್ರದರ್ಶನಕ್ಕೆ ಬರ್ತೇನೆ, if any".
 ಇಂಗ್ಲೆಂಡಿನದ್ದೇ ಮತ್ತೊಂದು: ಕತೆ, ಕಾದಂಬರಿ, ಪ್ರಬಂಧ ಎಲ್ಲ ಬರೆದು ಒಂದು ಮಟ್ಟಕ್ಕೆ ಬುದ್ದಿಜೀವಿ ಅನಿಸಿಕೊಂಡಿದ್ದ ಆಲ್ಡಸ್ ಹಕ್ಸ್ಲೀಯ ಬಗ್ಗೆ ಒಬ್ಬಾಕೆ ಹೇಳಿದ ವಕ್ರತುಂಡೋಕ್ತಿ : The stupid person's idea of a clever person. ಹರ್ಬರ್ಟ್ ಮಾರಿಸನ್ ಅನ್ನುವವರು ಒಮ್ಮೆ, "ಹಾಗೆ ನೋಡಿದರೆ ನನ್ನ ಅತ್ಯಂತ ಕೆಟ್ಟ ಶತ್ರು ನಾನೇ" ಎಂದುಸುರಿದರು, ಅಲ್ಲೇ ಇದ್ದ ಅವರ ವಿರೋಧಿಯೊಬ್ಬ, "ನನ್ನ ಕಡೆಯ ಉಸಿರಿರುವವರೆಗೂ ಅದು ಸಾಧ್ಯ ಇಲ್ಲ" ಅಂತ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡನಂತೆ.
 ಒಬ್ಬರ ಜೋಕನ್ನು ಇನ್ನೊಬ್ಬರು ಎಗರಿಸಿ ಸ್ವಂತ ಜೋಕು ಅನ್ನುವಂತೆ ಹೇಳುವುದು ಮಾಮೂಲಿ. ಅದರ ಬಗ್ಗೆಯೂ ಒಂದು ಜೋಕು ಇದೆ. ಒಂದು ಪಾರ್ಟಿಯಲ್ಲಿ ಒಬ್ಬರು ಒಳ್ಳೆ ಬುದ್ಧಿ ಚಾತುರ್ಯ ಇರುವ ಚಟಾಕಿ ಹಾರಿಸಿದರಂತೆ , ಆಗ ಆಸ್ಕರ್ ವೈಲ್ಡ್, "I wish I had said that" ಅಂದನಂತೆ. ಪಟಕ್ಕನೆ ಬಂತು ಒಬ್ಬರ ಕಟಕಿ: You will, Oscar; You will !!
ಅಮೆರಿಕಾದವರೇನು ಕಡಮೆಯಲ್ಲ. Marc Connelly ಅನ್ನುವವರದ್ದು ಬೋಡು ತಲೆ, ಅದನ್ನು ಪರಿಹಾಸ ಮಾಡುತ್ತಾ ಒಬ್ಬರು, "ನಿಮ್ಮ ತಲೆ ನನ್ನ ಹೆಂಡತಿಯ ನಿತಂಬಗಳ ಹಾಗೆ ನುಣುಪಾಗಿದೆ", ಅಂದರಂತೆ. ಇವರು ತಲೆಯನ್ನು ಮುಟ್ಟಿ ಪರೀಕ್ಷೆ ಮಾಡಿದಂತೆ ನಟಿಸಿ, "ಹೌದೌದು, ಸರಿಯಾಗಿ ಹೇಳಿದಿರಿ" ಅಂದ ಮೇಲೆ ಎದುರಾಳಿ ಮತ್ತೆ ಉಸಿರೆತ್ತಿದ್ದು ವರದಿಯಾಗಿಲ್ಲ! ಕೂಗಾಡದೇ, ರೊಚ್ಚಿನಿಂದ ಹುಚ್ಚಾಗದೆ ಮಾತಲ್ಲೇ ಮಣ್ಣುಮುಕ್ಕಿಸುವುದು ಅಂದರೆ ಇದೇ.
ಇನ್ನು ಕಚಗುಳಿಯಿಡುವ ಲೇವಡಿಗಳಿಗೆ, ಗೇಲಿಗಳಿಗೆ ಲೆಕ್ಕ ಮಿತಿಯೇ ಇಲ್ಲ . ನಗೆಗಾರ ಫ್ರೆಡ್ ಅಲೆನ್ ಮಾಡಿದ ಲೇವಡಿ: ಹಾಲಿವುಡ್ಡಿನಲ್ಲಿರುವ ಅಷ್ಟೂ ಪ್ರಾಮಾಣಿಕತೆಯನ್ನು ಗಂಟು ಕಟ್ಟಿ ಒಂದು ನೊಣದ ಹೊಕ್ಕುಳಿನಲ್ಲಿ ಇಟ್ಟರೆ ಅಲ್ಲಿ ಇನ್ನೂ ಮೂರು ಜೀರಿಗೆ ಕಾಳು ಮತ್ತು ಒಬ್ಬ ನಿರ್ಮಾಪಕನ ಹೃದಯ ಇಡುವಷ್ಟು ಜಾಗ ಉಳಿದಿರುತ್ತದೆ. ಇನ್ನೊಬ್ಬರು ಮಾಡಿದ ಕಟಕಿ: ನಿಮ್ಮ ಮೆದುಳು ಡೈನಮೈಟ್ ಆಗಿದ್ದಿದ್ದರೆ ತೀರಾ ಟೊಪ್ಪಿ ಹಾರುವಷ್ಟು ಕೂಡಾ ಅದು ಇರಲಿಕ್ಕಿಲ್ಲ. ಮಾಜಿ ಅಧ್ಯಕ್ಷ ರೇಗನ್ ಅನ್ನು ಒಬ್ಬರು ರೇಗಿಸಿದ ಪರಿ ನೋಡಿ: ಜಿಮ್ಮಿ ಕಾರ್ಟರ್ನ ಎದುರು ನಿಂತರು ಅನ್ನುವ ಒಂದೇ ಒಂದು ಕಾರಣಕ್ಕೆ ಇವರು ಗೆದ್ದಿದ್ದಾರೆ, ಚುನಾವಣೆಗೆ ಇವರು ಒಬ್ಬರೇ ನಿಂತಿದ್ದರೆ ಇವರು ಸೋತಿರ್ತಾ ಇದ್ರು! ಅಡ್ಲಾಯ್ ಸ್ಟೀವೆನ್ಸನ್ ಒಂದು ಸಲ ವಿರೋಧ ಪಕ್ಷದವರನ್ನು ಅಣಕಿಸಿ ಹೇಳಿದ ಚಾಟೂಕ್ತಿ: ನೀವು ನಮ್ಮ ಪಕ್ಷದ ಬಗ್ಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ, ನಾವು ನಿಮ್ಮ ಪಕ್ಷದ ಬಗ್ಗೆ ಸತ್ಯ ಹೇಳುವುದನ್ನು ನಿಲ್ಲಿಸುತ್ತೇವೆ.
Zsa Zsa Gabor ಅನ್ನುವ ಹಾಲಿವುಡ್ಡಿನ ಚೆಲುವೆಗೆ ಒಂಬತ್ತು ಮದುವೆಗಳಾಗಿತ್ತು. ಆಕೆಯ ಬಗ್ಗೆ ಜಾಕ್ ಪಾರ್ ಅನ್ನುವವರು ಹೇಳಿದ್ದು: ಇವಳು ಇನ್ನಾದರೂ ಒಂದು ಡಿವೋರ್ಸ್ ಅಂತ ತೆಗೆದುಕೊಂಡು ಜೀವನದಲ್ಲಿ ಸೆಟಲ್ ಆಗುವುದು ಒಳ್ಳೆಯದು! ತಪ್ಪು ಮಾಡದವ್ರ್ ಯಾರವ್ರೆ ಅನ್ನುವಂತೆ To err is Human ಅನ್ನುವ ಮಾತಿದೆ, ಅಲ್ಲಿನ ಮಾಜಿ ಅಧ್ಯಕ್ಷ ಟ್ರೂಮನ್ ರನ್ನು ಚುಚ್ಚಿ ಅದನ್ನೊಬ್ಬರು ಹೀಗೆ ತಿರುಚಿದ್ದಾರೆ: To err is Truman. ಮತ್ತೊಬ್ಬರ ಮೊನಚು ಹಾಸ್ಯ ಇನ್ನೂ ಮರ್ಮಕ್ಕೆ ನಾಟುವಂತಿದೆ: ನಾವು ಚಿಕ್ಕವರಾಗಿದ್ದಾಗ, ಸಮಾಜ ಪುಸ್ತಕದಲ್ಲಿ, ಯಾರು ಬೇಕಿದ್ದರೂ ಅಮೆರಿಕಾದ ಅಧ್ಯಕ್ಷರಾಗಬಹುದು ಅಂತ ಇತ್ತು. ಟ್ರೂಮನ್ರನ್ನ ನೋಡಿದರೆ ಅದು ನಿಜ ಅಂತ ಗೊತ್ತಾಗುತ್ತದೆ!!
ಬೇರೆ ದೇಶಗಳಲ್ಲಿ ಬಾಂಬು ಹಾಕುವ ರಾಜನೀತಿಯನ್ನು ಇಟ್ಟುಕೊಂಡು ಒಬ್ಬರು ಕುಟುಕಿದ್ದು: ನಮ್ಮ ದೇಶದಲ್ಲಿ ಹೈಸ್ಕೂಲು ಹುಡುಗರಿಗಿಂತ ಬಾಂಬುಗಳೇ ಜಾಸ್ತಿ ಚುರುಕಾಗಿವೆ, ಅವುಗಳಿಗೆ ಕುವೈಟ್ ಎಲ್ಲಿದೆ ಅಂತಾದರೂ ಗೊತ್ತಿದೆ.
ಭಯಂಕರ ಹಾಸ್ಯಪ್ರಜ್ಞೆ, ಚುರುಕು ಬುದ್ಧಿ ಮತ್ತು ಚುಚ್ಚು ಮಾತುಗಳಿಗೆ ಹೆಸರಾಗಿದ್ದ ಮಹಾ ಖಿಲಾಡಿ ಮನುಷ್ಯ ಗ್ರೂಚೊ ಮಾರ್ಕ್ಸ್. ನಾನು ಒಬ್ಬ ಮಾರ್ಕ್ಸ್ ವಾದಿ, ಗ್ರೂಚೊ ಮಾರ್ಕ್ಸ್ ವಾದಿ ಅಂತ ಅವನ ಅಭಿಮಾನಿಗಳ ಚತುರೋಕ್ತಿ ಇದೆ. ಈತ ಹೇಳಿದ್ದು: He may look like an idiot and talk like an Idiot, but don't let that fool you . He really is an idiot. ಅವನದ್ದೇ ಇನ್ನೊಂದು ಚತುರೋಕ್ತಿ: ಈಕೆಗೆ ಅವಳ ಚೆಲುವು, ಮೈಮಾಟ ಎಲ್ಲ ಬಂದದ್ದು ಅವಳ ಅಪ್ಪನಿಂದಲೇ, ಅವಳ ಅಪ್ಪ ಪ್ಲಾಸ್ಟಿಕ್ ಸರ್ಜನ್ ಆಗಿದ್ದಾರೆ!
ಇದು ನಮ್ಮಲ್ಲೂ ಇದೆ. ಬೇಂದ್ರೆ, ಬೀಚಿ ಇವರೆಲ್ಲ ತೀಕ್ಷ್ಣವಾದ ವ್ಯಂಗ್ಯ ಮಾಡಿದವರೇ. ಸದ್ಯಕ್ಕೆ ಇರುವವರಲ್ಲಿ ರವಿ ಬೆಳಗೆರೆ ಮತ್ತು ಚಂಪಾ ಅವಮಾನ, ಗೇಲಿ ಮಾಡುವುದರಲ್ಲಿ ಸಿದ್ಧಹಸ್ತರು ಅನ್ನಬಹುದು. ಸಂಕ್ರಮಣದಲ್ಲಿ ಗೇಲಿ,ತಮಾಷೆ , ಅಪಹಾಸ್ಯ, ವ್ಯಂಗ್ಯ, ಕುಟುಕು ತುಂಬಿದ ಬರಹಗಳ ರಾಶಿಯನ್ನೇ ಚಂಪಾ ಗೀಚಿದ್ದಾರೆ. ಒಂದು ಬಂಡೆ ಕಲ್ಲು ಕೊಟ್ಟರೆ ಆ ಕಲ್ಲಿನ ಬಗ್ಗೆಯೂ ಕೊಂಕು ತೆಗೆದು ಗೇಲಿ ಮಾಡಿ , ಜಗಳ ಮಾಡೋ ಅಷ್ಟು ಜಗಳಗಂಟ ಚಂಪಾ ಅನ್ನಬಹುದು, ಇದು ಲಂಕೇಶರಿಗೂ ಸಲ್ಲಬಹುದಾದ ಮಾತು. ಚಂಪಾ ಅಂತೂ ಕುತ್ಸಿತ ಟೀಕೆ ಮಾಡುವುದು ತನ್ನ ಜನ್ಮಸಿದ್ಧ ಹಕ್ಕು ಎಂಬಂತೆ ಮಾಡಿದವರು. ದೇವನೂರ ಮಹಾದೇವರ ಕಾದಂಬರಿಯೊಂದು ಸುಲಭಕ್ಕೆ ಅರ್ಥವಾಗದ ಹಳ್ಳಿ ಭಾಷೆಯಲ್ಲಿತ್ತು. ಪೋಲಂಕಿ ರಾಮಮೂರ್ತಿ ಅದನ್ನು ಇಂಗ್ಲಿಷಿಗೆ ಅನುವಾದ ಮಾಡಹೊರಟಾಗ ಚಂಪಾ ಹೇಳಿದ್ದು: ಅದನ್ನ ಮೊದಲು ಕನ್ನಡಕ್ಕೆ ಅನುವಾದ ಮಾಡ್ರಪಾ.
ಅಡಿಗರು ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಅಂತ ಲಂಕೇಶರು ಹೇಳಿದ್ದನ್ನು ಚಂಪಾ ತಿರುಗಿಸಿದ್ದು ಹೀಗೆ : ಅದು ನಿಜವೇ. ಅವರು ತೆರೆಸಿದ್ದು ಒಂದೇ ಕಣ್ಣನ್ನು. ಧರ್ಮಸ್ಥಳದಲ್ಲಿ ಅಡಿಗರ ಅಧ್ಯಕ್ಷತೆಯಲ್ಲಿ ಆಗುತ್ತಿದ್ದ ಒಂದು ಸಾಹಿತ್ಯ ಸಮ್ಮೇಳನದ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಇವರೆಲ್ಲ ಸೇರಿ ಪರ್ಯಾಯ ಸಮ್ಮೇಳನ ಅಂತ ಮಾಡಿದ್ದರಂತೆ. ಧರ್ಮಸ್ಥಳದಲ್ಲಿ ಬಿ. ಕೃಷ್ಣಪ್ಪ ಅನ್ನುವವರು "ದಲಿತ ಸಾಹಿತ್ಯ ಮತ್ತು ಇತರ ಒಲವುಗಳು" ಅನ್ನುವ ವಿಷಯದ ಬಗ್ಗೆ ಮಾತಾಡಬೇಕಿತ್ತಂತೆ, ಅವರು ಅದನ್ನು ಬಿಟ್ಟು ಪರ್ಯಾಯ ಸಮ್ಮೇಳನಕ್ಕೆ ಬಂದದ್ದರ ಬಗ್ಗೆ ಚಂಪಾ ಹೇಳಿದ್ದು : ಅಲ್ಲಿ ನಡೆಯಲಿರುವುದು ಈಗ ಬಹುಷಃ "ಇತರ ಒಲವುಗಳು" ಎಂಬ ಗೋಷ್ಠಿ ಮಾತ್ರ!
ಅಡಿಗರನ್ನು ತಾವು ಛೇಡಿಸಿದ್ದರ ಬಗ್ಗೆ ಬರೆಯುತ್ತಾ ಹೇಳಿದ್ದು : ಎಲ್ಲರೊಂದಿಗೆ ಅಡಿಗರೂ ನಕ್ಕರು, ಅದೇ ಮುಗ್ಧ ನಗೆ. ಎಷ್ಟೇ ಭಿನ್ನಮತಗಳಿದ್ದರೂ ಇಂತಹ ಆತ್ಮೀಯತೆಯನ್ನು ಮಾತ್ರ ಅವರು ತೊರೆಯಲಿಲ್ಲ. ಬೇಂದ್ರೆ ಹಾಗೆ, 'ನಿನ್ನ ಕಡೀತೇನಿ, ನಿನ್ನ ಬಡೀತೇನಿ' ಎನ್ನುತ್ತಿರಲಿಲ್ಲ. ಅಂಥ ಕೆಲಸವನ್ನು ಬಹಳ ಸೂಕ್ಷ್ಮವಾಗಿ ತಮ್ಮ ವಿಮರ್ಶಕ ಬಂಟರಿಂದ ಮಾಡಿಸುತ್ತಿದ್ದರು.
ಕಂಬಾರರ ಬಗ್ಗೆ ಚಂಪಾ ಚೇಷ್ಟೆ : ನಮ್ಮ ಕುಶಲಕರ್ಮಿ ಕಂಬಾರನಂತೂ ಮಹಾ ಚಾಣಾಕ್ಷ : ಹೊಳೆಯಲ್ಲಿ ಮುಳುಗಿದ ಎಮ್ಮೆಯ ಹಾಗೆ. ಅದರ ಕೋಡು ಮೇಲೆ ಕಂಡಾಗಲೇ ಅದರ 'ಸಾಧನೆ' ನಮಗೆ ಗೊತ್ತಾಗುವುದು!
ಕಾರ್ನಾಡರಿಗೆ ಕನ್ನಡ ಬರುವುದಿಲ್ಲ ಅಂತಲೂ ಇವರು ಲೇವಡಿ ಮಾಡಿದ್ದಾರೆ. ಯಯಾತಿ, ತುಘಲಕ್, ಹಯವದನಗಳ ಭಾಷೆಯ ಬಗ್ಗೆ 'ಇತಿಹಾಸ, ಪುರಾಣ ವಸ್ತುವಾಗಿದ್ದಾಗ ಭಾಷೆ ತಟಸ್ಥವಾಗಿರಬೇಕು' ಅನ್ನುವ ನಿಲುವು ಕೀರ್ತಿನಾಥ ಕುರ್ತಕೋಟಿ ಅವರದ್ದು. ಚಂಪಾರ ಕುಟುಕು ಹೀಗೆ : ಅವರ 'ತಟಸ್ಥ'ಕ್ಕೆ ನಮ್ಮ ಅರ್ಥ; 'ಮೃತ'!
ಕಾರ್ನಾಡರ ಕನ್ನಡವನ್ನು ಛೇಡಿಸಿ ಹದಿನೈದು ಸಾಲುಗಳ ಒಂದು ನಾಟಕವನ್ನೂ ಚಂಪಾ ಗೀಚಿದ್ದಾರೆ:
ಶಾಂತಿನಾಥ ದೇಸಾಯಿ :ಕನ್ನಡ ನಾಟಕಕ್ಕೆ ಭವಿಷ್ಯವೇ ಇಲ್ಲ ಅಂತೀರಾ ಕಾರ್ನಾಡರೇ ?
ಕಾರ್ನಾಡ್ : ಹಾಗೇನೂ ಇಲ್ಲ . ಒಬ್ಬನು ಒಬ್ಬನ ಹೃದಯ ಕಳೆದುಕೊಳ್ಳುವ ಅಗತ್ಯವಿಲ್ಲ .
ಶಾಂತಿ : ಒಬ್ಬನು ಒಬ್ಬನ .... ಅಂದರೇನ್ರಿ ?
ಕಾರ್ನಾಡ್ : One need not lose one's heart.
ಶಾಂತಿ : ಓಹೋ !
ಕಾರ್ನಾಡ್ : ಒಂದು ಹೊರಗೆ ಹೋಗುವ ದಾರಿ ಇದೆ(ದೇಸಾಯಿ ಹೊರಗೆ ನೋಡುವರು.) ಅಂದರೆ there is a way out
(ಇಷ್ಟರಲ್ಲಿ ಚಂಪಾ ಬಿಕ್ಕಿ ಬಿಕ್ಕಿ ಅಳತೊಡಗುತ್ತಾರೆ. ದೇಸಾಯರು ಚಾಳೀಸು ಬದಲು ಮಾಡಿ ಕರಚೀಪು ಹೊರ ತೆಗೆಯುತ್ತಾರೆ)
ಕಾರ್ನಾಡ್ : ಪಾಟೀಲರೆ ಏನು ಇದು ? ನೀವು ಕಣ್ಣೀರಿನೊಳಗೆ ಇದ್ದೀರಲ್ಲ ? You are in tears.
ಹೀಗೆ ಸಾಗುತ್ತದೆ !!
ಚಂಪಾ “ಲೇಖಕರ ವಿಳಾಸಗಳು” ಅನ್ನುವ ಪುಸ್ತಕ ತರಹೊರಟಾಗ ರವಿ ಬೆಳಗೆರೆ ಹೇಳಿದ್ದು: ಲೇಖಕರ ವಿಳಾಸಗಳು ಯಾರಿಗ್ರೀ ಬೇಕು ? ತರೋದಾದರೆ “ಲೇಖಕರ ವಿಲಾಸಗಳು” ಅನ್ನೋ ಪುಸ್ತಕ ತನ್ನಿ. ಶರಂಪರ ಜಗಳ ಆಡಿಕೊಂಡಾಗ ಬೆಳೆಗೆರೆ ಚಂಪಾರನ್ನ ಝಾಡಿಸಿದ್ದು ಹೀಗೆ : ಮುಟ್ಟು ನಿಂತ ಲೇಖಕ, ಗೊಡ್ಡು ವಿಮರ್ಶಕ. ಚಂಪಾ ಚೇಳಿನ ತರ ಕುಟುಕದೆ ಇದ್ದರೆ ಅದಕ್ಕೆ ಜೀವ ಇರೋದಿಲ್ಲ ಅಂತ ಅನಂತಮೂರ್ತಿ ಒಂದು ಸಲ ಹೇಳಿದ್ದೂ ಸುದ್ದಿ ಆಯಿತು.
ಲಂಕೇಶ್ ಎಷ್ಟೋ ಸಲ ತೀರಾ ಸಜ್ಜನರು ಅನ್ನಿಸಿಕೊಂಡವರನ್ನೂ ಬಿಡದೆ ಚುಚ್ಚಿ, ಛೇಡಿಸಿ ಬರೀತಾ ಇದ್ದರು, ಹೀಗಾಗಿ ಗೆಳೆಯರಾಗಿದ್ದವರು ದೂರ ಆಗುತ್ತಿದ್ದರು. ಇದರ ಬಗ್ಗೆ ಕತೆಗಾರ, ಪತ್ರಕರ್ತ ಜಿ ಎಸ್ ಸದಾಶಿವ ಹೇಳಿದ್ದು : ಲಂಕೇಶ್ ವಿಧಾನ ಪರಿಷತ್ ಇದ್ದ ಹಾಗೆ. ಪ್ರತಿ ಎರಡು ವರ್ಷಕ್ಕೊಮ್ಮೆ ಅವರ ಗೆಳೆಯರ ಬಳಗದಿಂದ ಮೂರನೇ ಎರಡರಷ್ಟು ಜನ ನಿವೃತ್ತರಾಗುತ್ತಾರೆ. ಬಿವಿ ವೈಕುಂಠರಾಜು ಈ ಬಗ್ಗೆ ಹೇಳಿದ್ದು : ಸ್ಕಾಟ್ಲೆಂಡಿನ ಹಾವುಗಳು ಅನ್ನುವ ವಿಷಯದ ಬಗ್ಗೆ ಪಿ ಎಚ್ ಡಿ ಪ್ರಬಂಧ ಬರೆಯಹೊರಟವನು ಕಡೆಗೆ ಒಂದೇ ವಾಕ್ಯ ಬರೆದನಂತೆ: ಸ್ಕಾಟ್ಲೆಂಡಿನಲ್ಲಿ ಹಾವುಗಳಿಲ್ಲ. ಲಂಕೇಶರ ಗೆಳೆಯರ ಬಗ್ಗೆ ಬರೆಯಹೊರಟವರೂ ಹಾಗೇ ಒಂದೇ ವಾಕ್ಯ ಹೇಳಬೇಕಾಗಬಹುದು : ಲಂಕೇಶರಿಗೆ ಖಾಯಂ ಗೆಳೆಯರಿಲ್ಲ.
ಪ್ರಶ್ನೋತ್ತರಗಳ ಅಂಕಣಗಳಲ್ಲಿಯೂ ಇದಕ್ಕೆ ಆಸ್ಪದ ಇರುತ್ತದೆ. ಉತ್ತರಭೂಪದಿಂದ ಒಂದು ಬೀchi ಕೋಟು : ಸಾಹಿತ್ಯ ಸೇವೆ ಮಾಡುವ ಬಗೆ ಎಂತು ? ತುಂಬ ಸುಲಭ -- ಕೊಂಡು ಓದಬೇಕು. ಬರೆಯಬಾರದು. ಶಾಂತಿಪ್ರಿಯರಾದ ನಾವು ಯುದ್ಧ ಏಕೆ ಮಾಡಿದ್ದೇವೆ ? ಎಲ್ಲ ಯುದ್ಧಗಳು ಜರುಗುವುದೂ ಶಾಂತಿಗಾಗಿಯೇ ಅಲ್ಲವೇ ? ಶಾಂತಿ ಬೇಕೆಂದಾಗಲೆಲ್ಲ ಯುದ್ಧ ಮಾಡಿದ್ದೇವೆ. ಎರಡು ಯುದ್ಧದ ಮಧ್ಯದ ಇಂಟರ್ವಲ್ ಗೆ ಶಾಂತಿ ಎಂದು ಹೆಸರು.
ರವಿ ಬೆಳಗೆರೆ ಅಂತೂ ಕೇಳಿ ಅಂಕಣವನ್ನ ಕಾಲೆಳೆಯಲಿಕ್ಕೆ, ಮರ್ಯಾದೆ ತೆಗೆಯುವುದಕ್ಕೇ ಮುಡಿಪಾಗಿ ಇಟ್ಟಿದ್ದಾರೆ, ಕಲ್ಪಕತೆ, ಕುಚೇಷ್ಟೆ, ತುಂಟತನಗಳೆಲ್ಲ ಬೆರೆತು ಪೈನಾಪಲ್ ಪುಡ್ಡಿಂಗಿನ ಹಾಗೆ ಅವು ಮಜಾ ಕೊಟ್ಟಿವೆ. ಕೆಲವು ನನಗೆ ನೆನಪಿರುವವು :
ರಾಕ್ ಲೈನ್ ಗೆ ಯಾಕೆ ಧೀರ ಅನ್ನುತ್ತಾರೆ ? ಸದ್ಯಕ್ಕೆ ಹ್ಯಾಗಿದೀರ ಅನ್ನುವಂತಾಗಿದೆ. ಆಕೆ ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾಳಲ್ಲ ? ಒಂದರ ಮೇಲೊಂದು! ಮಾತಾಡುತ್ತಾ ಉಗುರು ಕಚ್ಚುತ್ತಾನಲ್ಲಾ ? ಉಗುರು ಯಾರದು, ಕೈ ಬೆರಳಿನದಾ ಅಲ್ಲವಾ, ಪ್ರಶ್ನೆ ಸ್ಪಷ್ಟವಿರಲಿ!
ಭಾಷೆ ಎಂಬುದೇ ಇಲ್ಲದೆ ಹೋಗಿದ್ದರೆ ? ಹೆಗಡೆಯನ್ನು ಮಿತ್ರದ್ರೋಹಿ ಅನ್ನಲು ದೇವೇಗೌಡ ಅದೆಷ್ಟು ಸಂಜ್ಞೆ ಮಾಡ್ತಿದ್ರೋ!! ಗೌಡರು ಬಾಲ್ಯದಲ್ಲಿ ಅಂಥ ತುಂಟರೇನಾಗಿರಲಿಲ್ಲವಂತಲ್ಲ? ’ಅವರು ಹುಟ್ಟಿದ್ದೇ ವಯಸ್ಸಾದ ಮೇಲೆ’ ಎಂಬ ವಾದವೊಂದಿದೆ. ಅವಳಿಗೆ ಎಲ್ಲವನ್ನೂ ಬಿಡಿಸಿ ಹೇಳಬೇಕಾ ? ಕೆಲವನ್ನು ಹೇಳಿದರೆ ಸಾಕು, ಅವಳೇ ಬಿಡಿಸುತ್ತಾಳೆ, ಉದಾ: ಗ್ರಹಚಾರ.
ಉದಯ ಮರಕಿಣಿ ಮತ್ತು ಜೋಗಿ ಯಾರಿಗೂ ಜಾಸ್ತಿ ನೋವಾಗದಂತೆ ವ್ಯಂಗ್ಯ, ಕೀಟಲೆ ಮಾಡುತ್ತಾರೆ. ಅಂತದ್ದೇ ಒಂದು, ಸಂಭಾಷಣೆಕಾರ ಎಂ ಎಸ್ ರಮೇಶ್ ನಿರ್ದೇಶಿಸಿದ್ದ ಆದಿತ್ಯ ಚಿತ್ರದ ಬಗ್ಗೆ ಪರಮೇಶ್ವರ ಗುಂಡ್ಕಲ್ ಬರೆದ ಸಾಲುಗಳು : ನಿರ್ದೇಶಕ ರಮೇಶರನ್ನು ಸಂಭಾಷಣೆಕಾರ ರಮೇಶ್ ಒಂದು ಇನಿಂಗ್ಸ್ ಮತ್ತು ಎಷ್ಟೋ ಸಂಭಾಷಣೆಗಳ ಅಂತರದಿಂದ ಸೋಲಿಸಿದ್ದಾರೆ. ಇದರಲ್ಲಿ ಹೊಗಳಿಕೆ, ತೆಗಳಿಕೆ, ವಿಮರ್ಶೆ, ಉಕ್ತಿ ಚಮತ್ಕಾರ ಎಲ್ಲ ಇದೆ, ಜೋಗಿ ಮತ್ತು ಉದಯ ಮರಕಿಣಿಯವರ ವಿಮರ್ಶೆಗಳಲ್ಲಿ,ಬರೆಹಗಳಲ್ಲಿ ಇಂತವು ಎಷ್ಟಿವೆಯೋ. ಎಷ್ಟೋ ಕತೆಗಳು, ಭಾಷಣಗಳು ಮತ್ತು ಚಿತ್ರಗಳ ವಿಮರ್ಶೆಯೇ ಆಗಬಹುದಾಗಿದ್ದ ಮಾತುಗಳು ಬೀchi ಅವರ ಈ ಸಾಲುಗಳಲ್ಲಿ ಇವೆ : ಕಥೆಯ ಆರಂಭ ಹೇಗೆ ? ಈ ಹಾಳು ಕಥೆಗಳು ಹಳೆಯ ಕಾರುಗಳಂತೆ . ಎರಡಕ್ಕೂ ಸ್ಟಾರ್ಟಿಂಗ್ ಟ್ರಬಲ್ ರೋಗ. ಕೊಂಚ ದೂಡಿದರೆ ಸಾಕು. ಆಮೇಲೆ ತಾನೇ ಓಡುತ್ತದೆ. ಕೊಂಚ ಎಂದರೆ ಎಲ್ಲಿಯವರೆಗೂ ? ಮನೆಯಿಂದ ಆಫೀಸಿನವರೆಗೂ ದೂಡಿದ ಮೇಲೆ ಅದು ಓಡಿದರೇನು ಪ್ರಯೋಜನ ?
ವೈ ಎನ್ಕೆ ಅಂಕಣಗಳಲ್ಲಿ ಇಂತವು ಸುಮಾರಷ್ಟು ಸಿಗುತ್ತವೆ. ಒಬ್ಬರು ಪತ್ರಿಕೆ ಸೇರಲು ಬಂದಾಗ ಹೇಳಿದ್ದು : ಪೇಪರ್ ಗೆ u ಸೇರಿದರೆ pauper ಆಗುತ್ತೆ. ಯಾವ ಯಾವ ಕವನಗಳ ಮೂಲಗಳು ಎಲ್ಲೆಲ್ಲಿ ಇವೆ ಅಂತ ಹುಡುಕುವುದರಲ್ಲಿ ಸುಮತೀಂದ್ರ ನಾಡಿಗರು ಎತ್ತಿದ ಕೈ. ಇದರ ಬಗ್ಗೆ ವೈ ಎನ್ಕೆ ಹೇಳಿದ್ದು : ಕಂಬಾರನಿಗೆ ವರುಷ ನಾಡಿಗನಿಗೆ ನಿಮಿಷ !!
ಎಷ್ಟೋ ಸಲ ಸಿದ್ಧಾಂತಗಳು, ರಾಜಕಾರಣ ಇದನ್ನೆಲ್ಲ ತಮಾಷೆಯಿಂದ ತಿವಿದೇ ಕೆಡವುವವರಿದ್ದಾರೆ. ಟ್ವಿಟ್ಟರಿನಲ್ಲಿ The Lying Lama ಅನ್ನುವ ಪರಿಹಾಸ ಚತುರರು ಎಲ್ಲರನ್ನು ರಂಜಿಸುತ್ತಲೇ ಎದುರಾಳಿಗಳಿಗೆ ಹೆಟ್ಟುತ್ತ ಬಂದಿದ್ದಾರೆ. ಈಚೆಗೆ ನಡೆದ ಒಂದು ಸಂಭಾಷಣೆ:
ಬರ್ಖಾ : ನನ್ನ ಪುಸ್ತಕದ ಸಿಕ್ಕಾಪಟ್ಟೆ ಪ್ರತಿಗಳು ಮಾರಾಟ ಆಗಿವೆ.
ಲಾಮಾ: ಅದರಲ್ಲಿ ನೀವೇ ಖರೀದಿಸಿದ್ದು ಎಷ್ಟು ?
ಬರ್ಖಾ : ಒಂದೇ ಒಂದು ಪ್ರತಿಯೂ ಖರೀದಿಸಿಲ್ಲ, ಏನಿವಾಗ ?
ಲಾಮಾ: ಒಳ್ಳೇ ಕೆಲಸ ಮಾಡಿದಿರಿ, ವಿವೇಕದ ನಿರ್ಧಾರ!
ಬೇರೆಯವರಿಗಾದರೆ ಜೈಲೋ, ಮರಣದಂಡನೆಯೋ ಕೊಡಿಸುತ್ತಿದ್ದ ಮಾತುಗಳನ್ನು ತೆನಾಲಿ ರಾಮನೋ, ಬೀರಬಲ್ಲನೋ ಚತುರಬುದ್ಧಿಯಿಂದ ವ್ಯಂಗ್ಯ ಮಾಡಿ ಹೇಳಿದರೆ ಮಾಫಿ ಮತ್ತು ಒಮ್ಮೊಮ್ಮೆ ಪ್ರಶಂಸೆಯೂ ಸಿಗುತ್ತಿತ್ತು. ಕಮ್ಯುನಿಸ್ಟ್ ದೇಶಗಳಲ್ಲಿ ಪ್ರತಿ ಒಂದಕ್ಕೂ ಇಷ್ಟಿಷ್ಟುದ್ದ ಕ್ಯೂ ಇರುತ್ತಿತ್ತು ಅನ್ನುವುದರ ಬಗ್ಗೆ ಒಂದು ಜೋಕು, ಇದು ಅಲ್ಬೇನಿಯಾದ ಎನ್ವರ್ ಹೋಕ್ಷಾನ ಹೆಸರಲ್ಲಿಯೂ ಇದೆ, ರೊಮೇನಿಯಾದ ಅನಾ ಪಾವ್ಕರ್ ಹೆಸರಲ್ಲಿಯೂ ಇದೆ . ಮೈಲುದ್ದ ಕ್ಯೂವಿನಲ್ಲಿ ನಿಂತು ಕೆಂಡಾಮಂಡಲನಾಗಿ ಒಬ್ಬ ಪಿಸ್ತೂಲು ಹಿಡಿದು ಹೊರಟೇ ಬಿಡುತ್ತಾನೆ, ನಮ್ಮ ದೇಶಕ್ಕೆ ಇಂತಹಾ ಗತಿ ತಂದ ಈ ಕಮ್ಯುನಿಸ್ಟ್ ನಾಯಕಿಯನ್ನು ಶೂಟ್ ಮಾಡಿ ಬರುತ್ತೇನೆ ಅಂತ. ಹತ್ತು ನಿಮಿಷಗಳಲ್ಲಿ ಮನುಷ್ಯ ವಾಪಸ್. "ಏನಾಯ್ತಪ್ಪಾ.... ಮುಗಿಸಿದ್ಯಾ" ಅಂತ ಕೇಳುತ್ತಾರೆ ಜನ. "ಏನು ಮುಗಿಸೋದು ಕರ್ಮ... ಅಲ್ಲಿ ಇದಕ್ಕಿಂತಲೂ ಉದ್ದ ಕ್ಯೂ ಇದೆ -- ಪಿಸ್ತೂಲು ಹಿಡಿದು ನಿಂತವರದ್ದು!".
ಹೀಗೆ ಮೊಗೆದಷ್ಟೂ ಬಗೆ. ಪೆಟ್ಟಿಗೆ ಪ್ರತಿಪೆಟ್ಟು ಕೊಟ್ಟು , ತಮಾಷೆಯಲ್ಲಿಯೇ ಕೋಲ್ಮಿಂಚಿನಂತೆ ಕುಕ್ಕಿ, ಚಿವುಟಿ ಪರಿಣಾಮ ಬೀರುವ ಮಾಡುವ ಚಿಕಿತ್ಸಕ ಗುಣ ಕಿಡಿಮಾತಿನಲ್ಲಿ ಇರುತ್ತದೆ. ನೂರು ವಾಕ್ಯಗಳಲ್ಲಿ ಹೇಳಲಾಗದ್ದನ್ನು ಒಂದು ಸಾಲಿನ ವ್ಯಂಗ್ಯ ನಾಟಿಸಿ, ದಾಟಿಸಿ ಬಿಡುತ್ತದೆ. ರಾಕ್ಷಸ ಗಾತ್ರದ ಲಾರಿಯನ್ನು ನಿಲ್ಲಿಸುವುದಕ್ಕೆ ಪುಟ್ಟ ಬ್ರೇಕು ಸಾಕಾಗುತ್ತದೆ. ಹಾರಾಡುವವರಿಗೆ ಚುರುಕುಬುದ್ಧಿಯವರ ಮೊನಚುಮಾತೇ ಬ್ರೇಕು.

No comments:

Post a Comment