Saturday, 19 December 2020

ಒಂದು ಕಾರ್ಪೊರೇಟು ನೀತಿಕಥೆ

 ಬೀಚಿಯವರ ಒಂದು ಹಳೇ ಜೋಕನ್ನು ನೇಟಿವಿಟಿಗೆ ತಕ್ಕಂತೆ ಸ್ವಲ್ಪ ಬದಲಾಯಿಸಿ ರಚಿಸಿರುವ ಒಂದು ಕಾರ್ಪೊರೇಟು ನೀತಿಕಥೆ:

ತಿಂಮನಿಗೆ ಏನೇನು ಮಾಡಿದರೂ ವಿದ್ಯೆ ತಲೆಗೆ ಹತ್ತದು, ಹಾಗಾಗಿ ಕ್ಲಾಸ್ ರೂಮೂ ಬದಲಾಗದು. ಹೆಡ್ ಮಾಸ್ತರರಿಗೂ ಸುಸ್ತಾಗಿ, ತಿಂಮನನ್ನು ಹೇಗಾದರೂ ಪಾಸು ಮಾಡಿ ಪುಣ್ಯ ಕಟ್ಟಿಕೊಳ್ಳುವಂತೆ ಮಾಷ್ಟ್ರುಗಳಲ್ಲಿ ಹೇಳಿದ್ದಾಯಿತು. ಶಾಲೆಯಲ್ಲಿ ಒಂದು appraisal ಸಮಿತಿ ಮಾಡಿ, ಮೀಟಿಂಗು ನಡೆಸಿ, ಕಡೆಗೆ ತಿಂಮನಿಗೆಂದೇ ಪ್ರತ್ಯೇಕ ಪರೀಕ್ಷೆ ಮಾಡುವುದೆಂದಾಯಿತು, ಹೆಚ್ಚು ಪ್ರಶ್ನೆಗಳನ್ನು ಕೆಳತಕ್ಕದ್ದಲ್ಲ, ಹೇಗಾದರೂ ಯಾವುದಾದರೂ ಒಂದು ಉತ್ತರ ಬಂದರೂ ಪಾಸು ಮಾಡಿ ಅಂದರು ಹೆಡ್ ಮಾಸ್ತರರು.
ಮೊದಲಿಗೆ ಇಂಗ್ಲೀಷು ಮಾಸ್ಟರು ಒಂದೇ ಒಂದು ಶಬ್ದದ ಸ್ಪೆಲ್ಲಿಂಗು ಬರೆಯಲು ಹೇಳಿದರಂತೆ, ಯಾವುದಾದರೂ ಒಂದು ಅಕ್ಷರ ಸರಿಯಾದರೂ ಪಾಸು ಮಾಡುವುದೆಂದು ನಿರ್ಣಯ ಮಾಡಿ, "ಎಂಚ" ಅಂತ ಕಣ್ಣು ಮಿಟುಕಿಸಿದರಂತೆ. ಏನು ಮಾಡುವುದು, ಮಾಷ್ಟ್ರ ಗ್ರಹಚಾರ! ಅವರು ಕೊಟ್ಟ ಶಬ್ದ- "ಕಾಫಿ", ಅದನ್ನು ತಿಂಮ ಬರೆದದ್ದು ಹೀಗೆ :
KAAPI.
ಮುಂದೆ ಕನ್ನಡ ಮಾಷ್ಟ್ರ ಸರದಿ, ಅವರೋ ಏಳು ಕೆರೆಯ ನೀರು ಕುಡಿದವರು, ಪ್ರಶ್ನೆ ಪತ್ರಿಕೆಯನ್ನು ಹೀಗೆ ರಚಿಸಿ ಕೊಟ್ಟರು :
೧. ಕನ್ನಡದಲ್ಲಿ ಒಟ್ಟು ಎಷ್ಟು ಸಂಧಿಗಳಿವೆ ?
೨. ಕನ್ನಡದ ಮೂರು ಸಂಧಿಗಳು ಯಾವುವು ?
೩. ಕನ್ನಡ ಸಂಧಿಯಾದ ಆಗಮ ಸಂಧಿಗೆ ಒಂದು ಉದಾಹರಣೆ ಕೊಡಿ
೪. ಕನ್ನಡ ಸಂಧಿಯಾದ ಆದೇಶ ಸಂಧಿಗೆ ಒಂದು ಉದಾಹರಣೆ ಕೊಡಿ
೫. ಕನ್ನಡ ಸಂಧಿಯಾದ ಲೋಪ ಸಂಧಿಗೆ ಒಂದು ಉದಾಹರಣೆ ಕೊಡಿ
ತಿಂಮನೇನು ಇಷ್ಟಕ್ಕೆಲ್ಲ ಸೋಲುವವನೇ? ಎಲ್ಲ ಪ್ರಶ್ನೆಗಳಿಗೂ, "ಗೊತ್ತಿಲ್ಲ" ಅಂತಲೇ ಬರೆದ!
ಮಾಷ್ಟ್ರು ಬಿಡುತ್ತಾರೆಯೇ? ಗೊತ್ತು + ಇಲ್ಲ = ಗೊತ್ತಿಲ್ಲ, ಲೋಪ ಸಂಧಿಗೆ ಸರಿಯಾದ ಉದಾಹರಣೆಯೇ ಕೊಟ್ಟಿದ್ದಾನೆ, ಐದನೇ ಉತ್ತರ ಸರಿ ಅಂತ ಹೇಳಿ ಪಾಸು ಮಾಡಿದರಂತೆ.
ಕಾರ್ಪೊರೇಟ್ ನೀತಿ: "ಈ ಸಲ ಪ್ರಮೋಷನ್ ಸಿಗುತ್ತದೋ ಇಲ್ಲವೋ" ಎನ್ನುವುದು ಸರಿಯಾದ ಪ್ರಶ್ನೆಯಲ್ಲ. "ಈ ಸರ್ತಿ ಮ್ಯಾನೇಜರು/ಬಾಸು ಮನಸ್ಸು ಮಾಡುತ್ತಾರೋ ಇಲ್ಲವೋ" ಎಂಬುದೇ ಉಚಿತವಾದ ಪ್ರಶ್ನೆ.

ಎರಡು ಅನುವಾದಗಳು

 ಅನುವಾದವೆನ್ನುವುದು ಎಷ್ಟೋ ಸರ್ತಿ, ಅಂಗಡಿಯಲ್ಲಿದ್ದ ಐಸ್ ಕ್ರೀಮನ್ನು ಆಸೆಪಟ್ಟು, ಬಟ್ಟಲೊಂದರಲ್ಲಿ ಹಾಕಿ, ಮನೆಗೆ ತರಹೊರಟಂತೆ ಆಗುವುದುಂಟು. ಮನೆಗೆ ಮುಟ್ಟುವಾಗ ಐಸು ಕ್ರೀಮು ಕರಗಿ ಸೊರಗಿ ನೀರಾಗಿ, ಮತ್ತೇನೋ ಆಗಿ, 'ಏಗಿದ್ದೆಲ್ಲ ಸುಮ್ಮನೆ' ಅನಿಸಿಬಿಡುತ್ತದೆ. ಎಷ್ಟೋ ಸಲ ದೊಡ್ಡವರು ಮಾಡಿದ ಅನುವಾದಗಳಲ್ಲಿಯೇ, "He is so cool" ಅನ್ನುವುದನ್ನು, 'ಅವನು ತಣ್ಣನೆಯ ಮನುಷ್ಯ' ಅಂತ ಮಾಡಿಬಿಟ್ಟಿದ್ದಾರೋ ಏನ್ಕತೆ ಅಂತ ತೋರುವುದಿದೆ. ಮೂಲ ಬಿಜೆಪಿ, ಅನುವಾದ ಕಾಂಗ್ರೆಸ್ಸು ಎಂಬಂತಾದರಂತೂ ಕಡುಕಷ್ಟ. ಎಲ್ಲೋ ಕೆಲವೊಮ್ಮೆ, ಬಿಎಂಶ್ರೀಯವರ ಅನುವಾದಗಳಲ್ಲೋ, ಜೋಗಿ, ರವಿ ಬೆಳಗೆರೆ ಅವರುಗಳು ಮಾಡಿದ ರೂಪಾಂತರಗಳಲ್ಲೋ ಚೀನಾದ ಗೋಬಿ ಮಂಚೂರಿ ನಮ್ಮದೇ ತಿಂಡಿ ಆಗಿಬಿಟ್ಟಂತೆ, ಅಲ್ಲಿಯದು ಇಲ್ಲಿಯದೇ ಆಗುವುದುಂಟು. ಹಾಗಾದರೆ, ಓದುಗರಿಗೆ ಗೋಬಿ ಮಂಚೂರಿಯನ್ನನ್ನು ಕಚ್ಚಿದ ಸುಖಪ್ರಾಪ್ತಿ.

ಸುಖವೋ ಕಷ್ಟವೋ, ಯಾವುದಕ್ಕೂ ಒಮ್ಮೆ ಷೆಲ್ಲಿಯ 'To a Skylark' ಕವನವನ್ನೊಮ್ಮೆ ನೋಡೋಣ. ಕನ್ನಡಿಗರ ಸುದೈವ ಎಂಬಂತೆ ಇಬ್ಬರು ಘನ ವಿದ್ವಾಂಸರು skylark ಎಂಬ ಹಕ್ಕಿಗೆ ಇಲ್ಲಿ ಗೂಡುಕಟ್ಟಿದ್ದಾರೆ. ಪಂಡಿತರ ಲೋಕದಲ್ಲಿ, "ಹುಲಿ ಅಂದ್ರೆ ಹುಲೀನೇ" ಎನ್ನಬಹುದಾದ ಮಂಜೇಶ್ವರದ ಗೋವಿಂದ ಪೈಯವರು `ಬಾನಕ್ಕಿಗೆ' ಎಂಬ ಹೆಸರಿನಲ್ಲೂ, ನನಗೆ ಇವತ್ತಿಗೂ ಅನುವಾದಕ್ಕೆ ಮಾದರಿಯಾಗಿರುವ ಬಿಎಂಶ್ರೀಯವರು `ಬಾನಾಡಿ' ಎಂದೂ ಈ ಪದ್ಯವನ್ನು ಕನ್ನಡಕ್ಕೆ ತಂದಿದ್ದಾರೆ. ಸುಮ್ಮನೆ ತಮಾಷೆಗೆ ಕೆಲವು ಸಾಲುಗಳನ್ನು ಅಕ್ಕಪಕ್ಕ ಇಟ್ಟು ಮೂಲದ ಒನಪನ್ನೂ, ಅನುವಾದದ ಒಯ್ಯಾರವನ್ನೂ, ಇಂಗ್ಲೀಷಿನ ಬಿಂಕವನ್ನೂ ಕನ್ನಡದ/ಹಳಗನ್ನಡದ ಬಿಗುಮಾನವನ್ನೂ ನೋಡೋಣ. ಇದೊಂತರ ತೆಂಡೂಲ್ಕರನನ್ನೂ ಲಾರಾನನ್ನೂ ಆಚೀಚೆ ಇಟ್ಟು ನೋಡಿದಂತೆ. ಬಿಎಂಶ್ರೀಯವರದ್ದು ಹೆಚ್ಚಿನ ಕಡೆ ಪಾಂಡಿತ್ಯದ ಭಾರ ಓದುವವರ ಮೇಲೆ ಬೀಳದಂತ ಸರಳ,ಲಲಿತ, ಭಾವಗೀತದ ಓಟ. ಗೋವಿಂದ ಪೈಗಳದ್ದು ಹಳೆಕಾಲದ ಪಂಡಿತರ ಬಿಗಿಯಾದ ಗತ್ತಿನ ನಡಿಗೆಯ ಕ್ರಮ.
ಮೊದಲ ಸಾಲುಗಳು ಹೀಗಿವೆ:
'Hail to thee blithe spirt!
Bird thou never wert,
That from heaven, or near it
pourest thyfull heart
In profuse strains of unpremeditated art''
ಇದನ್ನು ಶ್ರೀಯವರು ಹೀಗೆ ಅನುವಾದಿಸಿದ್ದಾರೆ:
'ಆರು ನೀನೆಲೆ ಹರುಷ ಮೂರುತಿ?
ಹಕ್ಕಿಯೆಂಬರೆ ನಿನ್ನನು!
ತೋರಿ ದಿವಿಜರು ಸುಳಿವ ಬಳಿ,ಸುಖ
ವುಕ್ಕಿ ಬಹನಿನ್ನೆದೆಯನು
ಹಾರಿ ನೆನೆಯದ ಕಲೆಯ ಕುಶಲದ ಭೂರಿಗಾನದೊಳೆರೆಯುವೆ'
ಇದು ಪೈಗಳಲ್ಲಿ ಹೀಗೆ ಬಂದಿದೆ:
ಸೊಗಯಿಸೈ ಸುಖಜೀವಿ!
ನೆಗೆವಕ್ಕಿ ನೀನಲ್ಲ;
ಗಗನದಿಂದಲೊ ಗಗನದರುಗಿಂದಲೊ
ಮೊಗೆವೆ ತುಂಬೆದೆಯ
ಮುಂಬಗೆದಿಲ್ಲದಿಹ
ಬಿನ್ನಣಿಗೆಯುಗುವುದಾರ ಗಾಯನದ ಝರಿಯಿಂ
ಇದರಲ್ಲಿ ಪೈಗಳದ್ದು ಮೂಲವನ್ನು ಇರುವ ಹಾಗೇ ತರುವ ಕ್ರಮ, ಶ್ರೀಯವರದ್ದು ಮೂಲದ ದಿಕ್ಕಿನಲ್ಲಿ ಸ್ವಲ್ಪ ಆಚೀಚೆ ಹೋಗುವ ದಾರಿ. pourest thy full heart In profuse strains of unpremeditated art ಅನ್ನುವುದರ ಕೊರಳಿಗೆ ಹಗ್ಗ ಬಿಗಿದು ಎಳೆತರುವುದು ಸಾಹಸದ ಕೆಲಸ. unpremeditated art ಅನ್ನುವುದರ ಭಾವ "ನೆನೆಯದ ಕಲೆಯ ಕುಶಲದ" ಅಂದಾಗ ಬರಲಿಲ್ಲ, "ಮುಂಬಗೆದಿಲ್ಲದಿಹ ಬಿನ್ನಣಿಗೆ ಉಗುವುದು" ಎಂದಾಗ ಮೂಲದ ಅಬ್ಬರವೇನೋ ಬಂತು, ಆದರೆ 'ಬಿನ್ನಣಿಗೆ' ಎಂಬ ಶಬ್ದಕ್ಕೆ ಡಿಕ್ಷನರಿ ಬೇಕಾದೀತು!
ಬಿ ಎಂ ಶ್ರೀಯವರ "ನೆಲವನೊಲ್ಲದೆ ಚಿಗಿದು ಚಿಮ್ಮುತ ಮೇಲು ಮೇಲಕ್ಕೋಡುವೆ; ಒಲೆದು ದಳ್ಳುರಿ ನೆಗೆದು ಎಂಬ ಸಾಲುಗಳಲ್ಲಿHigher still and higher/From the earth thou springest/Like a cloud of fire ಎಂಬ ಸಾಲುಗಳ ಸೊಗಸು ಮಾಯವಾಗಿದೆ. "ಉನ್ನತಂ ಮೇಣದರಿನುನ್ನತಂ ಭುವಿಯಿಂದ ನೀನ್ನೆಗೆವೆ ಕೆಂಡದುರಿ ಮೋಡದಂತೆ" ಎಂಬ ಪೈಗಳ ಸಾಲುಗಳು ಮೂಲಕ್ಕೆ ಹತ್ತಿರ. ಮುಂದೆ ಬರುವ And singing still dost soar, and soaring ever singest ಪೈಗಳಲ್ಲಿ - "ಗನ್ನದೊಳೇರುತಿನ್ನು ಹಾಡುವೆ, ಹಾಡುತಿನ್ನೇರುವೆ" ಅಂತ ಸಾಧಾರಣವಾಗಿದೆ. ಶ್ರೀಯವರ, "ನಲಿದು ಹಾಡುತ ಹಾಡುತೇರುವೆ, ಏರುತೇರುತ ಹಾಡುವೆ" ಎಂಬಲ್ಲಿ ಪದಗಳನ್ನು ಕುಣಿಸಿರುವ ರೀತಿಯಿಂದ ಮಜಾ ಬಂದಿದೆ.
ಕೈಗೆ ಸಿಗದೇ ಜಾರಬಹುದಾದ ಒಂದು ಸಾಲು ಇದು: Thou dost float and run; Like an unbodied joy whose race is just begun. ಶ್ರೀಯವರ "ಮುಳುಗಿ ಏಳುವೆ, ಹರಿಯುವೆ, ಕಳಚಿ ದೇಹವ ದಿವಕೆ ಹರಿಯುವ ಭೋಗಿಯೋಲಾಟದವೊಲು" ಎಂಬಲ್ಲಿ ಮೂಲಕ್ಕೆ ಬೇರೆಯೇ ಟ್ವಿಸ್ಟ್ ಕೊಟ್ಟಿದ್ದಾರೆ. ಪೈಗಳ "ಮುಂಗತಿಗಣಂ ತೊಡಗಿದಂಗವಡೆಯದ ಸೊಗದ ಪಾಂಗಿನಿಂ ತೇಲಾಡಿ ಹರಿದಾಡುವೆ" ಎಂಬುದು, ಸ್ವಲ್ಪ ಹಳಗನ್ನಡದಂತಿದ್ದರೂ ಮೂಲದ ಚೆನ್ನಾದ ಮರುಸೃಷ್ಟಿ. unbodied joy = ಅಂಗವಡೆಯದ ಸೊಗ ಎಂಬುದುಕಣ್ಣು ಸೆಳೆಯುವ ಅನುವಾದ.
ಕಡೆಗೊಮ್ಮೆ ಬರುವ We look before and after, And pine for what is not ಎಂಬ ಸರಳವಾದ ಸಾಲು, ಗೋವಿಂದ ಪೈಗಳಲ್ಲಿ "ಹಿಂದುಮುಂದಕೆ ನೋಡಿ ಹೊಂದದನು ಹಲುಬಲಾವೊಂದು" ಅಂತಾಗಿ ಭಾವ ಅಷ್ಟಾಗಿ ಮೂಡುವುದಿಲ್ಲ, ಇಂತಲ್ಲಿ ಸರಳತೆಯೇ ಒಳ್ಳೆಯದು ಎಂಬಂತೆ, ಶ್ರೀಯವರ ಈ ಸಾಲುಗಳು ತಟ್ಟನೆ ಮನಮುಟ್ಟುತ್ತವೆ: "ಹಿಂದುಮುಂದನು ನೋಡಿ ನಮೆವೆವು ನೆನೆಯುತಿಲ್ಲದ ಸುಖವನು". ಹಾಗೆ ನೋಡಿದರೆ ಈ ಸಾಲು ಅತ್ಯಂತ ಮನೋಹಾರಿಯಾಗಿ ಮೂಡಿರುವುದು ಅಡಿಗರಲ್ಲಿ ಮತ್ತು ಪುತಿನ ಅವರಲ್ಲಿ, ಅವರು ಈ ಕವನದ ಅನುವಾದ ಮಾಡಿರದಿದ್ದರೂ ! ಅಡಿಗರ, "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ" ಎಂಬ ಸಾಲು ಷೆಲ್ಲಿಗಿಂತ ಒಂದು ಕೈ ಮೇಲೆಯೇ ಇದೆ. ಗೋಕುಲ ನಿರ್ಗಮನದಲ್ಲಿ ಪುತಿನ ಬರೆದಿರುವ ಈ ಸಾಲನ್ನು ಇವುಗಳ ಜೊತೆಯಿಟ್ಟು ನೋಡಿ, ಇದು ಉಳಿದೆಲ್ಲವನ್ನೂ ಮೀರಿಸುವಂತಿಲ್ಲವೇ: "ಬಯಕೆಯೊಳೇ ಬಾಳ್ ಕಳೆವುದು ಬಯಕೆಯು ದೊರೆತ ಚಣ/ ಬಯಸಿಕೆಯನೆ ಬಯಸುವ ತೆರವೇಕಹುದೆನ್ನ ಮನ"
ಇನ್ನು ಷೆಲ್ಲಿಯ Our sweetest songs are those that tell of saddest thought ಎಂಬುದರ ಪಂಚ್ ಗೋವಿಂದ ಪೈಗಳ "ಸಂದ ಬೇವಸವ ಬಗೆ ತಂದೊರೆವುವೆಮ್ಮ ಸ್ವಾದಿಷ್ಠ ಗೀತಂ" ಎಂಬ ಸಾಲಿನಲ್ಲಿ ಸಿಗುವುದಿಲ್ಲ. ಶ್ರೀಯವರ, "ನೊಂದ ಗೋಳನು ಹೇಳಿ ಕೊರೆವುವೆ ಇನಿಯ ಕವನಗಳೆಮ್ಮೊಳು" ಎನ್ನುವುದರಲ್ಲಿಯೂ ಅಷ್ಟು ಪಂಚ್ ಇಲ್ಲ, ಭಾವಸ್ಫುರಣೆಯಿಲ್ಲ. ಈ ಸಾಲು ನಿಜವಾಗಿಯೂ ಸತ್ತ್ವಪೂರ್ಣವಾಗಿ ಇನ್ನೊಂದು ತರದಲ್ಲಿ ಬಂದಿರುವುದು ಬೇಂದ್ರೆಯವರ ಈ ಕೆಳಗಿನ ಸಾಲುಗಳಲ್ಲಿ !
ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ
ವಿಶೇಷವೆಂದರೆ,ಇಬ್ಬರು ವಿಶಾರದರು ಒಂದೇ ಪದ್ಯವನ್ನು ಅನುವಾದಿಸಿದರೂ, ಒಂದೇ ಪದವನ್ನು ಬಳಸುವುದು ಇಲ್ಲ ಎಂಬಷ್ಟು ಕಡಮೆ ಎಂಬುದನ್ನು ಗಮನಿಸಿ.
ಹೀಗಿದೆ ಅನುವಾದಗಳ ಕಥೆ. ಅಂತೂ ಒಲಿಯದ ನಲ್ಲೆಯನ್ನು ಒಲಿಸಿಕೊಳ್ಳಲು ಹೆಣಗುವ ಹುಡುಗರಂತೆ ಬರೆಯುವವರು ಅನುವಾದಗಳನ್ನು ಮಾಡುತ್ತಲೇ ಇರುತ್ತಾರೆ.

ಶೂಟಿಂಗ್ ದ ಪಾಸ್ಟ್

ನಿನ್ನೆ ವರ್ಲ್ಡ್ ಫೋಟೋಗ್ರಫಿ ದಿನದ ಸಾಲು ಸಾಲು ಪೋಸ್ಟುಗಳು ಕಾಣಿಸಿದಾಗ ನೆನಪಾದದ್ದು ಬಿಬಿಸಿ ವಾಹಿನಿಯ ಶೂಟಿಂಗ್ ದ ಪಾಸ್ಟ್ ಎಂಬ ಒಂದು ಹಳೇ ಮಿನಿ ಸೀರಿಸ್. ಅದರ ಕತೆ ಸುಲಭ. ಒಂದು ದೊಡ್ಡ ಓಬೀರಾಯನ ಕಾಲದ ಕಟ್ಟಡ ಇರುತ್ತದೆ, ಅದೊಂದು ಛಾಯಾಚಿತ್ರಗಳ ಸಂಗ್ರಹಾಲಯ(Photo Library). ಕೈಗೆ ಸಿಕ್ಕದ ಚಿಟ್ಟೆ ಕ್ಯಾಮೆರಾಕ್ಕೆ ಸಿಕ್ಕುವ ಹಾಗೆ, ಅದೆಷ್ಟೋ ಜನರ ಜೀವನದ ಸಂತಸದ, ನಿತ್ಯದ ಕಲಾಪಗಳ ,ಹಳವಂಡಗಳ, ಲಕ್ಷ ಲಕ್ಷ ಕ್ಷಣಗಳು ಫೋಟೋಗಳಾಗಿ ಮರುಜನ್ಮ ತಾಳಿ ಅಲ್ಲಿ ಕೂತಿರುತ್ತವೆ. ಒಂದು ಫೋಟೋ ಬಾಲ್ಯದ್ದು , ಒಂದು ಅಜ್ಜನ ಮನೆಯದ್ದು , ಒಂದು ಕಾಲೇಜಿನದ್ದು ಎಲ್ಲ ಒಟ್ಟಿಗೆ ಇಟ್ಟು ನೋಡಿದರೆ ಅಲ್ಲೊಂದು ಕತೆ ಕಾಣಿಸುವ ಹಾಗೆ, ತತ್ ಕ್ಷಣಕ್ಕೆ ನಿಲುಕದ ಅದೆಷ್ಟೋ ಕತೆಗಳು ನೂರಾರು, ಸಾವಿರಾರು ಫೋಟೋಗಳಲ್ಲಿ ಅಡಗಿ ಕೂತಿರುತ್ತವೆ. ಆ ಕಟ್ಟಡ ಒಂದು ವ್ಯಾಪಾರಿ ಸಂಸ್ಥೆಯ ಕೈಗೆ ಹೋಗುತ್ತದೆ. ಅವರಿಗೋ ಅಲ್ಲೊಂದು School of Business ಕಟ್ಟುವ ಯೋಜನೆ . ದುಡ್ಡಿನ ಮಾತು ಬಂದ ಮೇಲೆ, ಈ ಲಕ್ಷಗಟ್ಟಲೆ ಫೋಟೋಗಳಿಗೆ ಜಾಗ ಎಲ್ಲಿರುತ್ತದೆ ? ಅವನ್ನೇನು ಮಾಡಬೇಕು ? ಮಾರಬೇಕೇ ? ಎಂಥವರಿಗೆ? ಯಾರು ಕೊಳ್ಳುತ್ತಾರೆ ? ಎಸೆಯಬೇಕೇ ? ಎಲ್ಲಿಗೆ ಎಸೆಯಬೇಕು? ಆ ಫೋಟೋಗಳ ಒಳಗಿರುವ ಭಾವಗೀತಗಳಿಗೆ ಯಾರು ಬೆಲೆ ಕೊಡುತ್ತಾರೆ ? ಕಲೆಗೆ ದುಡ್ಡಿನಿಂದ ಬೆಲೆ ಕಟ್ಟಲು ಸಾಧ್ಯವೇ ? ಈ ಎಲ್ಲ ಅಂಶಗಳನ್ನಿಟ್ಟುಕೊಂಡು, ಚಿತ್ರ ವಿಚಿತ್ರ ಪಾತ್ರಗಳನ್ನಿಟ್ಟುಕೊಂಡು, typically ಬ್ರಿಟಿಷ್ ಎನ್ನಬಹುದಾದ ನಿರೂಪಣೆಯೊಂದಿಗೆ, ಮೂರೇ ಘಂಟೆಗಳ ಈ ಮಿನಿಸೀರೀಸ್ ಆವರಿಸಿಕೊಳ್ಳುತ್ತದೆ

https://www.imdb.com/title/tt0184157/?fbclid=IwAR0EsdsmrIFWPrm2TYUgxqm6BTjVnZ7cQnegOnskBqgCLzp-BXqfUd67scg

ಡ್ರೋನುಗಳ ಪ್ರತಾಪ

 "ನೀವು ಇಷ್ಟೊಂದು ಖುಷಿಯಿಂದ, ನೆಮ್ಮದಿಯಿಂದ ಇದ್ದೀರಲ್ಲ,ಇದರ ಗುಟ್ಟೇನು" ಅಂತ ಯಾರಾದರೂ ಕೇಳಿದರೆ, ನನ್ನ ಉತ್ತರ, 'ಪವರ್ ಆಫ್ ಪಾಸಿಟಿವ್ ಥಿಂಕಿಂಗ್' ಎಂತಲೋ, 7 Habits of Highly Effective Peopleನ ತಂತ್ರಗಳು ಎಂದೋ,How to Stop Worrying and Start Livingನ ಸೂತ್ರಗಳು ಅಂತಲೋ ಅಲ್ಲ. ನನ್ನ ಯಶಸ್ಸಿನ ಗುಟ್ಟು ಇಷ್ಟೇ : ನಾನು ನಮ್ಮ ಟೀವಿ ನ್ಯೂಸ್ ಚಾನೆಲುಗಳನ್ನು ನೋಡುವುದಿಲ್ಲ ! ಅತಳ, ಸುತಳ, ಭೂತಳ, ಪಾತಾಳ, ತಳಾತಳ ಮತ್ತು ಫೇಸ್ಬುಕ್ಕುಗಳಲ್ಲಿ ಅಡಗಿದ್ದ ಸಕಲ ಚರಾಚರ ಪ್ರಾಣಿಗಳೆಲ್ಲ ಡ್ರೋನುಗಳ ಪ್ರತಾಪದ ವರ್ಣನೆ ಮಾಡುವುದನ್ನು ನೋಡಿದ ಮೇಲೆ, ಈ ವೀರವ್ರತವನ್ನು ಮುರಿದು ಹತ್ತು ನಿಮಿಷಗಳ ಕಾಲ ಕಿರಿಕ್ ಪ್ರತಾಪರ ಸಂದರ್ಶನದ 'ದರ್ಶನ್' ಭಾಗದ ದರ್ಶನ ಭಾಗ್ಯವನ್ನು ನಾನೂ ದಕ್ಕಿಸಿಕೊಂಡೆ. ವಿಜ್ಞಾನದ ವಿದ್ಯಾರ್ಥಿಯಾಗಿ ನಾನು ಅಷ್ಟನ್ನು ವ್ಯಾಖ್ಯಾನ ಮಾಡಿದರೆ ಸಾಕೆನಿಸುತ್ತದೆ.

ದರ್ಶನ್ ಕೇಳಿದ್ದು ಇಷ್ಟು : "ಬೇರೇನೂ ಬೇಡ, Lift,drag,Thrust ಮತ್ತು viscosityಗಳನ್ನು ಹೇಗೆ ಕ್ಯಾಲ್ಕ್ಯುಲೇಟ್ ಮಾಡ್ತಿ ಅಂತ ಹೇಳಿಬಿಟ್ಟರೆ ಸಾಕು".
ಇವು Aerodynamics ಎಂಬ ವಿಜ್ಞಾನ ಶಾಸ್ತ್ರಕ್ಕೆ ಸಂಬಂಧ ಪಟ್ಟ ಪದಗಳು. ಗಾಳಿಯು ವಸ್ತುಗಳನ್ನು ಹೇಗೆಲ್ಲ ಉದುರಿಸಿ, ಕೆದರಿಸಿ,ಸುತ್ತಿಸಿ, ಝಾಡಿಸಿ , ಆಡಿಸಿ,ಅಡಿಮೇಲಾಗಿಸುತ್ತದೆ ಅಂತ ಹೇಳುವುದು ಈ ಶಾಸ್ತ್ರದ ಕೆಲಸ. ಸ್ವಲ್ಪ ಫ್ಲ್ಯಾಶ್ ಬ್ಯಾಕಿಗೆ ಜಾರಿ ದರ್ಶನರು ಬಳಸಿದ ಈ ಪದಗಳ ಅರ್ಥ ಏನು ಅಂತ ನೋಡೋಣ. ಒಂದು ಕಾರು ಎಲ್ಲಿಗೆ ಚಲಿಸುತ್ತದೆ? ಮುಂದಕ್ಕೆ. ಸರಿ, ಮುಂದಕ್ಕೆ ಹೋಗೋಣ, ವಿಮಾನ ? ಅದು ಮೇಲಕ್ಕೂ ಹೋಗುತ್ತದೆ, ಮುಂದಕ್ಕೂ ಸಾಗುತ್ತದೆ. ವಿಮಾನ, ಹೆಲಿಕಾಪ್ಟರುಗಳ ಮೊಮ್ಮಗನಂಥ ಡ್ರೋನು ಕೂಡಾ ಅಷ್ಟೇ.
ಮೇಲೆ ಹೋಗುವವರಿಗೆಲ್ಲ ಗೊತ್ತಿರುವ ವಿಚಾರ ಏನಪ್ಪಾ ಅಂದರೆ, ಮೇಲೆ ಹೋಗುವಾಗ ನಮ್ಮನ್ನು ಕೆಳಕ್ಕೆಳೆಯುವವರೂ ಇರುತ್ತಾರೆ, ಮುಂದೆ ಹೊರಟಾಗ ಹಿಂದಕ್ಕೆ ಜಗ್ಗುವವರೂ ಇದ್ದೇ ಇರುತ್ತಾರೆ. Lift,drag,Thrust ಮತ್ತು weight ಗಳದ್ದೂ ಇದೇ ಕೆಲಸ. ಮೇಲೆತ್ತಿ ಉದ್ದಾರ ಮಾಡುವ ಉತ್ತೇಜಕ ಶಕ್ತಿ ಲಿಫ್ಟ್ ಆದರೆ ಕೆಳಗೆಳೆಯುವ ಹೊಟ್ಟೆಕಿಚ್ಚಿನ ಮೊಟ್ಟೆಕೋಳಿ weight. ಮುನ್ನುಗ್ಗಿಸುವ ಭೀಮಬಲ Thrust ಆದರೆ, ಕರುಬಿ ಮುಂದೆ ಹೊರಟವರನ್ನು ಹಿಂದೆ ಎಳೆಯುವ ಕೇಡಿಗನ ಪಾತ್ರ dragನದ್ದು. ವಿಮಾನಕ್ಕೆ ಅದರ ಭಾರ, ಗುರುತ್ವಾಕರ್ಷಣೆಗಳೇ ಕೆಳಗೊತ್ತುವ ಶಕ್ತಿಗಳು, ಅದರ ರೆಕ್ಕೆಯೇ ಮೇಲೆತ್ತುವ ಬಲ. ವಿಮಾನದ ರೆಕ್ಕೆಯ ಕೆಳಗೆ ಗಾಳಿಯಲ್ಲಿ high pressure ಇರುವ ಹಾಗೂ ಮೇಲೆ ಕಡಮೆ ಒತ್ತಡ ಇರುವ ಹಾಗೂ ತಂತ್ರ ಮಾಡಿರುತ್ತಾರೆ. ಹೀಗೆ ಗಾಳಿಯನ್ನು ಬೇಸ್ತು ಬೀಳಿಸಿ ಅದೇ ವಿಮಾನವನ್ನು ಮೇಲೆ ದೂಡುವಂತೆ ಮಾಡಿರುತ್ತಾರೆ. ಮೇಲೆ ದೂಡುವ ಶಕ್ತಿ ಹೆಚ್ಚೋ, ಕೆಳಗೆ ಸೆಳೆಯುವ ತಾಕತ್ತು ಹೆಚ್ಚೋ ಅಂತ ಎಂಜಿನಿಯರುಗಳು ಲೆಕ್ಕ ಹಾಕದಿದ್ದರೆ ವಿಮಾನವೋ ಡ್ರೋನೋ ಶಾಲೆಗೆ ಹೋಗಲು ಮನಸ್ಸಿಲ್ಲದ ಮಗುವಿನಂತೆ ಕೆಳಗೇ ಉಳಿದುಬಿಟ್ಟೀತು. ಈ ಲೆಕ್ಕವನ್ನೇ ದರ್ಶನ್ ಕೇಳಿದ್ದು.
ವಿಮಾನಕ್ಕೆ thrust ಕೊಟ್ಟು ಮುನ್ನೂಕಲಿಕ್ಕೆ propellerಗಳು ಇರುತ್ತವೆ. ಡ್ರೋನಿನ ಬದಿಗಳಲ್ಲಿ ಗರಗರ ತಿರುಗುವ ಚಕ್ರಗಳ ತರದ rotorಗಳು ಇರುತ್ತವೆ. ಇವೇ ಅದನ್ನು ಜೋರ್ ಲಗಾಕೇ ಐಸಾ ಅಂತ ದೂಡುವ ಶಕ್ತಿಗಳು. ಆಗ Pressure drag, Viscous drag ಅಂತೆಲ್ಲ ದುಷ್ಟಶಕ್ತಿಗಳು ಹಗ್ಗ ಜಗ್ಗಾಟ ಮಾಡಿ ಅದನ್ನು ಮುಂದೆ ಹೋಗದಂತೆ ತಡೆಯುತ್ತವೆ. viscosityಯ ಬಗ್ಗೆ ಕೇಳಿದ್ದು ಅದಕ್ಕೇ. ಈ viscosityಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸುಲಭ. ಮಜ್ಜಿಗೆ ನೀರು ನೀರಾಗಿರುತ್ತದೆ, ಮೊಸರು ದಪ್ಪ ದಪ್ಪ ಇರುತ್ತದೆ. ನೀರು ತೆಳು ತೆಳು, ಜೇನು ಮಂದ ಮಂದ. ಜೇನು, ಮೊಸರುಗಳ ದಪ್ಪ, ಜಿಗುಟುತನ ಉಂಟಲ್ಲ ಅದೇ viscosity. ಡ್ರೋನಿನ ಬಗ್ಗೆ ಮಾತಾಡುವಾಗ ಇದರ ಸುದ್ದಿ ಯಾಕೆ ಅನ್ನುವವರಿಗೆ ಒಂದು ಪ್ರಶ್ನೆ. ನೀರಿನ ಹೊಳೆಯಲ್ಲಿ ಈಜುವುದು ಸುಲಭವೋ ? ಜೇನಿನ ಹೊಳೆಯಲ್ಲೋ ? ವಾತಾವರಣದಲ್ಲಿ ಗಾಳಿಯ ಬದಲಿಗೆ ಫೆವಿಕಾಲ್ ಗಮ್ಮು ಇದ್ದಿದ್ದರೆ ನಿಮ್ಮ ಕಾರು ಗಾಳಿಯನ್ನು ನೂಕುವ ಬದಲು ಫೆವಿಕಾಲನ್ನು ದೂಡಬೇಕಾಗಿ ಬಂದಿದ್ದರೆ ಅದು ಎಷ್ಟು ವೇಗ ಹೋಗಲು ಸಾಧ್ಯವಿತ್ತು. ಒಂದು ವಸ್ತು ದಪ್ಪ ಇದ್ದಷ್ಟು ಅದರಲ್ಲಿ ಚಲಿಸಲು ಕಷ್ಟ ನಮಗಾದರೂ ಅಷ್ಟೇ, ಕಾರಿಗಾದರೂ ಅಷ್ಟೇ, ಡ್ರೋನಿಗಾದರೂ ಅಷ್ಟೇ. ಅದರ ಲೆಕ್ಕ ಬೇಕಾದದ್ದು ಅದೇ ಕಾರಣಕ್ಕೆ.
ಹೀಗೆ ಒಂದು ಡ್ರೋನು ಮೇಲೆ, ಕೆಳಗೆ, ಹಿಂದೆ, ಮುಂದೆ ಹೋಗುವುದು ಹೇಗೆ ಅಂತ ಹೇಳಲಿಕ್ಕೆ Lift,drag,Thrust, viscosity ಇಷ್ಟರ ಲೆಕ್ಕ ಬೇಕು. ಇಲ್ಲದಿದ್ದರೆ ಅದು ಮಣಿಶಂಕರ ಐಯ್ಯರರ ಮಾತಿನಂತೆ ಬೇಕಾಬಿಟ್ಟಿ ಒಟ್ರಾಶಿ ಎಲ್ಲೆಲ್ಲಿಗೋ ಹೋಗಿ ಬಿಟ್ಟೀತು. ಇಷ್ಟು ಲೆಕ್ಕವನ್ನೇ ಪ್ರತಾಪರಿಗೆ ದರ್ಶನ್ ಕೇಳಿದ್ದು. ನಮ್ಮ ವಾರ್ತಾವಾಹಿನಿಗಳ ಮಟ್ಟ ಎಷ್ಟು drag ಆಗಿದೆ, ಅವುಗಳಿಗೆ ಎಷ್ಟು ಲಿಫ್ಟ್ ಬೇಕು ಅಂದರೆ, ಜನರಿಗೆ, "ಕೀರ್ತಿ ಪ್ರತಾಪರನ್ನು ಕೊಚ್ಚಿ ಕೊಂದೇ ಬಿಡಬೇಕಿತ್ತು" ಎಂಬ ನಿರೀಕ್ಷೆಯಿದ್ದಂತಿತ್ತು! ಹೀಗಾಗಿ, "ಇನ್ನೊಂದು ನಾಲ್ಕೇಟು ಹಾಕಬೇಕಿತ್ತು, ಚಾನ್ಸ್ ತಪ್ಪಿಹೋಯಿತು" ಎಂಬಂತೆ ಹಲವರಾಡಿದ್ದಾರೆ. 'ದಿನಾ ಹತ್ತು ಕೊಲೆ ಮಾಡುವವನು ಇವತ್ತು ಚಿವುಟಿ ಸುಮ್ಮನಾಗಿಬಿಟ್ಟನಲ್ಲ' ಅಂತ ಆಗುವ ನಿರಾಸೆಯಂತೆಯೇ ಇದು ಇರಬಹುದೇನೋ ! ಈ ಸರಿ ತಪ್ಪುಗಳ ವಿಚಾರ ಏನೇ ಇದ್ದರೂ,ವಿಜ್ಞಾನ ಗೊತ್ತಿದ್ದವರಿಗೆ Lift,drag,Thrust, viscosityಗಳ ಪ್ರಶ್ನೆಗಳೇ ಸ್ಥಾಲೀ ಪುಲಾಕ ನ್ಯಾಯದಿಂದ ಸಾಕು. "ಡ್ರೋನು, ಮೇಲೆ , ಕೆಳಗೆ, ಹಿಂದೆ, ಮುಂದೆ ಹೇಗೆ ಚಲಿಸುತ್ತದೆ ಎಂಬ ವಿಚಾರಗಳನ್ನು ಬಿಟ್ಟು ಬೇರೆಲ್ಲಾ ಗೊತ್ತಿದೆ" ಅಂತ ಯಾರಾದರೂ ಹೇಳಿದರೆ, ಅಷ್ಟು ಸಾಕು ! ಅದು ದೋಣಿ ತಯಾರು ಮಾಡುವವನು, 'ಯಾವ ತರದ ದೋಣಿ ಯಾವಾಗ ಮುಳುಗುತ್ತದೆ ಅಂತ ಗೊತ್ತಿಲ್ಲ' ಅಂದ ಹಾಗೆಯೇ. ಅವನಿಗೆ ಆರ್ಕಿಮಿಡೀಸನ ಸಿದ್ದಾಂತ ಎಲ್ಲ ಗೊತ್ತಿದೆಯೋ ಇಲ್ಲವೋ, ದೋಣಿ ಮುಳುಗದೆ ದೂರ ತೀರಕ್ಕೆ ಸೇರಲು ಏನು ಮಾಡಬೇಕು ಅಂತಾದರೂ ಅವನಿಗೆ ಹೇಳಲು ಬರಬೇಕು. ಮಾಧ್ಯಮಗಳಿಗೆ ಕಾಗದದ ದೋಣಿಯೂ ಸುದ್ದಿಯೇ , ನಮಗೆ ಯಾವುದು ಸುದ್ದಿ ಅಂತ ನಾವೇ ಕೇಳಿಕೊಳ್ಳಬೇಕು. ಇದೆಲ್ಲ ಏನೇ ಇದ್ದರೂ ಈ ನೆವದಲ್ಲಿ ನಾವು ವಿಜ್ಞಾನದ ಮಾತಾಡಿದೆವಲ್ಲ, ಅದೇ ಸಂತೋಷ.

ಪಾ. ವೆಂ. ಆಚಾರ್ಯ

 40-50 ವರ್ಷಗಳ ಹಿಂದೆ ನಮ್ಮಲ್ಲಿ ಟೀವಿಗಳಿರಲಿಲ್ಲ, ನ್ಯಾಷನಲ್ ಜಿಯೋಗ್ರಾಫಿಕ್ಕಿನಂಥಾ ಚಾನೆಲ್ ಕೂಡಾ ಇರಲಿಲ್ಲ. ಆದರೇನಂತೆ? ಸರ್ವಜ್ಞಾಚಾರ್ಯ, ಸರ್ವಕುತೂಹಲಿ ಎಂಬ ಬಿರುದುಗಳಿದ್ದ ಸರ್ವಂಕಷ ಪ್ರತಿಭೆಯ ಪಾ. ವೆಂ. ಆಚಾರ್ಯರಿದ್ದರು, ಅವರೇ ಕಟ್ಟಿದ ಕಸ್ತೂರಿ ಪತ್ರಿಕೆಯಿತ್ತು. SSLCಯಲ್ಲಿ rank ಬಂದರೂ ಕಿತ್ತು ತಿನ್ನುವ ಬಡತನ ಅವರನ್ನು ಡಿಗ್ರಿಗೆ ಓದಲು ಬಿಡಲಿಲ್ಲ, ಜ್ಞಾನಕ್ಕೆ ಡಿಗ್ರಿಯ ಹಂಗು ಎಲ್ಲಿರುತ್ತದೆ(ಇವರು ಡಾಕ್ಟರೇಟು ಪಡೆದವರು ಅಂತ ಭಾವಿಸಿ ಕೆಲವರು ಅವರನ್ನು ಡಾ. ಪಾ. ವೆಂ. ಆಚಾರ್ಯರೇ ಅಂತಲೇ ಸಂಭೋದಿಸುತ್ತಿದ್ದರಂತೆ !) ಮುಂದೆ ವಿಧಿಯ ಮೇಲೆ ಸೇಡು ತೀರಿಸಲೋ ಎಂಬಂತೆ ಪಾವೆಂ ನೂರೆಂಟು ವಿಷಯಗಳನ್ನು ಓದಿಕೊಂಡರು, ಅವುಗಳ ಬಗ್ಗೆ ಕಸ್ತೂರಿಯಲ್ಲಿ ಸೊಗಸಾಗಿ ಬರೆದರು. ಕಾಲೇಜಿನ ಪ್ರಾಯಕ್ಕೆ ಬರುವಾಗಲೇ ನಾಗವರ್ಮನ ಛಂದೋಂಬುಧಿ, ಕೇಶಿರಾಜನ ಶಬ್ದಮಣಿದರ್ಪಣಗಳಂತಹ ಶಾಸ್ತ್ರ ಗ್ರಂಥಗಳನ್ನು ಪಾವೆಂ ಇಡಿ ಇಡಿಯಾಗಿ ನುಂಗಿ ಹಾಕಿದ್ದರಂತೆ. ಪಾಠ ಮಾಡಿದರೂ ತಲೆಗೆ ಹೋಗುವುದಿಲ್ಲ ಅನಿಸಬಹುದಾದ ಈ ತರದ ಶಾಸ್ತ್ರಗ್ರಂಥಗಳನ್ನು, ಪಾವೆಂ ಕಥೆ ಕಾದಂಬರಿ ಓದುವಂತೆ ತಮ್ಮಷ್ಟಕ್ಕೆ ತಾವೇ ಓದಿ ಮುಗಿಸಿದರೆಂದು ಕಾಣುತ್ತದೆ.

ಭೌತ ಶಾಸ್ತ್ರ,ರಸಾಯನ ಶಾಸ್ತ್ರ,ಮನೋವಿಜ್ಞಾನ, ಭಾಷೆ, ಶಬ್ದ ವ್ಯುತ್ಪತ್ತಿ, ರಾಜಕೀಯ,ಕ್ರೈಂ, ಇತಿಹಾಸ, ಭೂಗೋಳ,ಗಣಿತ, ವೈದ್ಯಕೀಯ ವಿಚಾರಗಳು, ಹೂವು, ಹಣ್ಣು ಹೀಗೆ ನೀವು ಯಾವ ವಿಷಯ ಬೇಕಾದರೂ ಹೇಳಿ, ಅಲ್ಲಿಗೆ ಆಚಾರ್ಯರ ಪೆನ್ನು ಆ ಕಾಲದಲ್ಲೇ ಹೋಗಿ ಬಂದಿರುತ್ತದೆ! ಮೊನಚಾದ ಹರಟೆ,ವಿಡಂಬನೆಗಳು, ಅನುವಾದಗಳು, ಕವಿತೆಗಳು ಎಲ್ಲವನ್ನೂ ಅವರು ಬರೆದಿದ್ದಾರೆ. ಸರ್ವಕುತೂಹಲದ ಕಾರಣಕ್ಕೆಯೋ ಏನೋ, ನನ್ನ ಪುಸ್ತಕದ ಬೆನ್ನುಡಿ,ಮುನ್ನುಡಿ, ಲೇಖಕನ ಮಾತು ಎಲ್ಲ ಕಡೆಗಳಲ್ಲೂ ಆಚಾರ್ಯರ ಹೆಸರು ಬಂದಿದೆ. ಒಬ್ಬ ಚೆಸ್ ಆಟಗಾರನ ಬಗ್ಗೆ ನಾನು ಬರೆಯಹೊರಟಾಗ, ಇಂತದ್ದು ಕನ್ನಡದಲ್ಲಿ ಬಂದಿರಲಿಕ್ಕಿಲ್ಲ ಅಂದುಕೊಂಡು ಹೊರಟಿದ್ದೆ, ಆಮೇಲೆ ನೋಡಿದರೆ ಎಪ್ಪತ್ತರ ದಶಕದಲ್ಲಿಯೇ ಆಚಾರ್ಯರು ಬಾಬಿ ಫಿಷರ್ ನ ಬಗ್ಗೆ ಬರೆದುಬಿಟ್ಟಿದ್ದಾರೆ !
ಅವರ ಆರೋಗ್ಯ ಕೈಕೊಟ್ಟಾಗ, ನೂರಕ್ಕೆ ನೂರು ಕೆಲಸ ಮಾಡಲಾಗುತ್ತಿಲ್ಲ, ಹಾಗಾಗಿ ನನ್ನನ್ನು ಕೆಲಸದಿಂದ ಬಿಡುಗಡೆ ಮಾಡಿ ಅಂತ ಕೇಳಿಕೊಂಡು ರಾಜೀನಾಮೆ ಪತ್ರ ಬರೆದಿದ್ದರಂತೆ. ಇಷ್ಟು ಪ್ರಾಮಾಣಿಕರ ರಾಜೀನಾಮೆ ಪಾತ್ರವನ್ನು ಮೊಹರೆ ಹನುಮಂತ ರಾಯರು ಒಪ್ಪಿಯಾರೇ ? "ನೀವು ಮನೆಯಲ್ಲೇ ಕುಳಿತು ಕೆಲಸ ಮಾಡಿ" ಅಂತಂದು ಅವರದನ್ನು ಕಸದ ಬುಟ್ಟಿಗೆ ಎಸೆದರಂತೆ. ಪಾವೆಂ ಬರೆದದ್ದರಲ್ಲಿ ಕಸದ ಬುಟ್ಟಿ ಸೇರಲು ಯೋಗ್ಯವಾದದ್ದು ಈ ರಾಜೀನಾಮೆಯ ಪತ್ರವೊಂದೇ ಇರಬಹುದೇನೋ ! ಹೀಗೆ ಆ ಕಾಲದಲ್ಲೇ ವರ್ಕ್ ಫ್ರಮ್ ಹೋಮ್ ಅನ್ನೂ ಪಾವೆಂ ಮಾಡಿದರು !
ಆಚಾರ್ಯರು ಎಷ್ಟೋ ಸಲ ಕಸ್ತೂರಿಯ ಪುಟಗಳನ್ನು ತಾವೇ ಹಲವು ಹೆಸರುಗಳಲ್ಲಿ ಬರೆದು ತುಂಬಿಸುತ್ತಿದ್ದದ್ದಿತ್ತು. ಅವರು ಒಟ್ಟು ಎಷ್ಟು ಬರೆದಿದ್ದಾರೆ, ಎಷ್ಟು ಗುಪ್ತನಾಮಗಳಲ್ಲಿ ಬರೆದಿದ್ದಾರೆ, ಯಾವೆಲ್ಲ ಪತ್ರಿಕೆಗಳಿಗೆ ಬರೆದಿದ್ದಾರೆ ಅಂತ ಲೆಕ್ಕವಿಟ್ಟವರಿಲ್ಲ. ಹೀಗಿದ್ದ ಆಚಾರ್ಯರ ಎಲ್ಲ ಬರೆಹಗಳನ್ನೂ ಹುಡುಕಿ ತೆಗೆಯುವುದು ಕಷ್ಟಸಾಧ್ಯ. ಅದಕ್ಕೆ ಬೇಕಾಗುವ ಓಡಾಟ, ಹುಡುಕಾಟ, ತಾಳ್ಮೆ ಅಪಾರ. ಆಚಾರ್ಯರ ಮೊಮ್ಮಗಳಾದ ಛಾಯಾ ಉಪಾಧ್ಯ, ಈ ನಿಟ್ಟಿನಲ್ಲಿ ಶ್ರಮ ವಹಿಸಿ ಅಜ್ಜನ ಬಹಳಷ್ಟು ಬರೆಹಗಳನ್ನು ಸಂಗ್ರಹಿಸಿ ಆನ್ಲೈನಿನಲ್ಲಿ ಹಾಕಿದ್ದಾರೆ. ಸಿಕ್ಕಿದ ಎಲ್ಲ ವಿವರಗಳನ್ನೂ ಕೃತಿಗಳನ್ನೂ ಸೇರಿಸಿ ಸೈಟ್ ಒಂದನ್ನು ಅವರ ಬಳಗದವರು ಮಾಡಿದ್ದಾರೆ. ಆಚಾರ್ಯರ ಬಹಳಷ್ಟು ಕೃತಿಗಳು ಇಲ್ಲಿ ಸಿಗುತ್ತವೆ , ಓದಿ ಆನಂದಿಸಿ,

ಪಾವೆಂ ಬಗ್ಗೆ ರವಿ ಬೆಳಗೆರೆ 1996ರಲ್ಲಿ ಬರೆದಿದ್ದ ಸಾಲುಗಳನ್ನು ಕೆಳಗೆ ಹಾಕಿದ್ದೇನೆ:




ಗೋವಿನ ಹಾಡು ಮತ್ತು ಅದನ್ನು ಬರೆದವರ ಜಾಡು

ವಿಜಯಕರ್ನಾಟಕದಲ್ಲಿ ಪ್ರಕಟವಾದ ಲೇಖನ:

"ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದಿ" ಎಂದು ಶುರುವಾಗುವ ಪುಣ್ಯಕೋಟಿಯ ಕಥೆಯನ್ನು ಲಾಲಿಸದವರಾರು, ಕೇಳಿ ಹನಿಗಣ್ಣಾಗದವರಾರು? ಎಲ್ಲರಿಗೂ ಗೊತ್ತಿರುವ ಪದ್ಯದ ಬಗ್ಗೆ ಇನ್ನೊಮ್ಮೆ ನಾನು ಹೇಳುವುದೇನೂ ಇಲ್ಲ. ನಾನು ಹೇಳಹೊರಟದ್ದು ಈ ಪದ್ಯದ ಬಗ್ಗೆ ಈಚೆಗೆ ಬಂದ, ವೈರಲ್ ಆದ ವೀಡಿಯೊ ಒಂದರ ಬಗ್ಗೆ. ಆದದ್ದಿಷ್ಟು: 'ಮೈಸೂರಿನ ಕಥೆಗಳು' ಎಂಬ ಫೇಸ್ಬುಕ್ ಪೇಜಿನಲ್ಲಿ ಚ.ವಾಸುದೇವಯ್ಯ(ಇವರು 1852ರಿಂದ 1943ರ ಕಾಲದಲ್ಲಿ ಇದ್ದವರು) ಎಂಬ ಮಹನೀಯರ ಪರಿಚಯ ಮಾಡಿಕೊಡಲಾಯಿತು. ಹಾಗೆ ಮಾಡುವಾಗ, ಜನಪದದಲ್ಲಿದ್ದ ಗೋವಿನ ಹಾಡನ್ನು ಬರೆದವರು ಚ.ವಾಸುದೇವಯ್ಯನವರೇ ಅಂತ ಹೇಳಲಾಯಿತು. ಈ ವೀಡಿಯೊವನ್ನು ಸುಮಾರು ಲಕ್ಷಕ್ಕೂ ಹೆಚ್ಚು ಜನ ಫೇಸ್ಬುಕ್ಕಿನಲ್ಲಿಯೇ ನೋಡಿದ್ದಾರೆ. ವಾಟ್ಸಪ್ಪಿನಲ್ಲಿ ಇದು 'ಗೋವಿನ ಹಾಡನ್ನು ಬರೆದವರು ಯಾರು ಗೊತ್ತೇ' ಎಂಬಂತೆ ವೈರಲ್ ಆಗಿದ್ದು, ಅಲ್ಲಿ ಅದೆಷ್ಟು ಸಾವಿರ ಜನ ನೋಡಿದ್ದಾರೋ.


ವೀಡಿಯೊ ಮಾಡಿದವರು ಒಳ್ಳೆಯ ಮನಸ್ಸಿನಿಂದ,ಸದುದ್ದೇಶದಿಂದ ಅದನ್ನು ಮಾಡಿರುವಂತೆ ಕಾಣುತ್ತದೆ. ಚ.ವಾಸುದೇವಯ್ಯನವರು ದೊಡ್ಡವರು, ಕನ್ನಡಿಗರಿಗೆ ಪ್ರಾತಃಸ್ಮರಣೀಯರು ಅನ್ನುವುದೇನೋ ಸರಿಯೇ, ಆದರೆ, 'ಧರಣಿ ಮಂಡಲ ಮಧ್ಯದೊಳಗೆ' ಎಂಬ ಪದ್ಯವನ್ನು ಅವರೇ ಬರೆದದ್ದು ಎನ್ನುವ ಹೇಳಿಕೆಗೆ ಮಾತ್ರ ಬೇರೆಡೆಗಳಿಂದ ಸಾಕಷ್ಟು ಪುಷ್ಟಿ ನನಗಂತೂ ಸಿಗಲಿಲ್ಲ, ಪೂರಕ ಆಧಾರಗಳಿಲ್ಲದೆ ಗೋವಿನ ಹಾಡಿನ ಕರ್ತೃತ್ವವನ್ನು ಹೇಳುವುದು ಅವಸರದ ತೀರ್ಮಾನವಾದೀತೆಂದೇ ನನಗೆ ಕಾಣುತ್ತದೆ. ಸಂಶೋಧನೆ ಅರ್ಜೆಂಟಿನಲ್ಲಿ ಆಗುವ ಕೆಲಸವಲ್ಲವಲ್ಲ!

ಇದರ ಬಗ್ಗೆ ಶತಾವಧಾನಿ ಗಣೇಶರ ಅಭಿಪ್ರಾಯವನ್ನು ಪಾದೆಕಲ್ಲು ವಿಷ್ಣು ಭಟ್ಟರು ಕೇಳಿದಾಗ ಅವರೂ ಈ ವೀಡಿಯೊದಲ್ಲಿ ಗೋವಿನಹಾಡಿನ ಬಗ್ಗೆ ಹೇಳಿದ್ದನ್ನು ಒಪ್ಪುವುದು ಕಷ್ಟವೆಂದೇ ಹೇಳಿದ್ದಾರೆ. ಗ್ರಂಥಸಂಪಾದನೆ ಮಾಡುವುದು, ಪರಿಷ್ಕೃತ ಆವೃತ್ತಿ ತರುವುದು, ಇರುವ ಒಂದು ಪದ್ಯವನ್ನು ಪಾಠ್ಯ ಪುಸ್ತಕಕ್ಕೆ ಏರಿಸುವುದು ಎಂಬವುಗಳ ನಡುವಿನ ವ್ಯತ್ಯಾಸವನ್ನು ವೀಡಿಯೊ ಮಾಡಿದವರು ಅಷ್ಟಾಗಿ ಗಮನಿಸಿದಂತೆ ಕಾಣುವುದಿಲ್ಲ. ಇದಲ್ಲದೆ ಡಿವಿಜಿಯವರೇ ವಾಸುದೇವಯ್ಯನವರ ಬಗ್ಗೆ ಬರೆದಿದ್ದಾರೆ; ಆದರೆ ಅವರೆಲ್ಲೂ ಈ ಪದ್ಯದ ವಿಚಾರ ಎತ್ತಿಲ್ಲ. ಕರ್ಣಾಟಕ ಕವಿಚರಿತೆಯನ್ನು ಬರೆದವರಾದ, ಮಹಾಪಂಡಿತರಾಗಿದ್ದ ರಾ.ನರಸಿಂಹಾಚಾರ್ಯರು ಮತ್ತು ಎಸ್.ಜಿ ನರಸಿಂಹಾಚಾರ್ಯರು  ವಾಸುದೇವಯ್ಯನವರ ಒಡನಾಟ ಇದ್ದವರು, ಅವರೂ ಈ ಬಗ್ಗೆ ಒಂದು ಮಾತೂ ತಿಳಿಸಿಲ್ಲ. ಪಂಜೆ ಮಂಗೇಶರಾಯರು ಅವರ ಕಿರಿಯ ಸಮಕಾಲೀನರಾದರೂ ಗೋವಿನ ಹಾಡಿನ ವಿಷಯ ಬಂದಾಗಲೂ ಎಲ್ಲೂ ಅದನ್ನು ಬರೆದವರ ಹೆಸರು ಹೇಳಿಲ್ಲ. ಈ ಎಲ್ಲ ಅಂಶಗಳನ್ನಿಟ್ಟುಕೊಂಡು ನೋಡಿದರೆ ಪುಣ್ಯಕೋಟಿಯ ಹಾಡು ವಾಸುದೇವಯ್ಯನವರ ರಚನೆಯಾಗಿರುವ ಸಂಭವನೀಯತೆ ತೀರಾ ಕಡಮೆ ಎಂದು ಗಣೇಶರ ಅಭಿಪ್ರಾಯ. ವಾಸುದೇವಯ್ಯನವರ ಬಗ್ಗೆ ಬರೆಯುವಾಗ ಟಿವಿ ವೆಂಕಟಾಚಲ ಶಾಸ್ತ್ರಿಗಳೂ ಎಲ್ಲೂ ಗೋವಿನ ಹಾಡನ್ನು ಉಲ್ಲೇಖಿಸಿಲ್ಲ ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಇದಕ್ಕೆ ಪೂರಕವಾಗಿ ಇನ್ನೊಂದಷ್ಟು ಒಗ್ಗರಣೆ: ನಮ್ಮ ಸಂಸ್ಕೃತ ಪಂಡಿತರ ಎದುರೋ, ಹಳಗನ್ನಡ ಕಾವ್ಯಾಸಕ್ತರ ಮುಂದೋ ದೇವರು ಪ್ರತ್ಯಕ್ಷನಾಗಿ, "ವತ್ಸಾ, ಒಂದು ವರ ಕೇಳಿಕೋ" ಅಂತ ಹೇಳಿದನಾದರೆ, ಈ ಪಂಡಿತರಲ್ಲನೇಕರು, "ಯಾವ ಯಾವ ಕೃತಿಗಳನ್ನು ಯಾರ್ಯಾರು ಬರೆದರು, ಬರೆದವರು ಎಲ್ಲಿ, ಯಾವಾಗ, ಹೇಗೆ ಇದ್ದರು ಅಂತ ಹೇಳಿಬಿಡು ತಂದೆ" ಅಂದುಬಿಟ್ಟಾರು ಎನ್ನಿಸುವಷ್ಟು ಎಟುಕಿಗೆ ನಿಲುಕದ  ಕರ್ತೃತ್ವದ ಸಮಸ್ಯೆಗಳಿವೆ. ಕಾಳಿದಾಸ, ಕುಮಾರವ್ಯಾಸ, ಭಾಸ, ಪಾಣಿನಿ, ಭರತ ಇವರೆಲ್ಲ ಯಾರು, ಹೇಗಿದ್ದರು ಎಂಬುದೇ ಗೊತ್ತಾಗದಷ್ಟು ಮಟ್ಟಿಗೆ ಅವರ ವೈಯಕ್ತಿಕ ವಿವರಗಳನ್ನು ಹೇಳುವಲ್ಲಿ ನಿರಾಸಕ್ತಿಯನ್ನು ಖುದ್ದು ಅವರೂ, ಪ್ರಾಚೀನರೂ ತೋರಿಸಿದಂತೆ ಕಾಣುತ್ತದೆ. ನಮ್ಮಲ್ಲಿ ಕವಿರಾಜಮಾರ್ಗವನ್ನು ನಿಜವಾಗಿಯೂ ಬರೆದವರು ಯಾರು ಎಂಬ ವಿಷಯದಲ್ಲಿ ಶಾಸ್ತ್ರಕೋವಿದರು ಎಳೆದೆಳೆದು ಮಾಡಿರುವ ಚರ್ಚೆಗಳು, ಅವುಗಳಿಗೆ ಹುಟ್ಟಿರುವ ಉತ್ತರ, ಪ್ರತ್ಯುತ್ತರಗಳು ಎಲ್ಲ ಸೇರಿದರೆ ಒಂದು ರೋಚಕ whodunnit ಕಾದಂಬರಿಗೆ ಸರಕಾಗಬಲ್ಲವು ಎಂಬಷ್ಟಿವೆ ! ಭಾಸನ ವಿಷಯದಲ್ಲೂ ಹಾಗಾಗಿದೆ. ತಿರುವಾಂಕೂರಿನ ಗಣಪತಿ ಶಾಸ್ತ್ರಿ ಎಂಬವರಿಗೆ ಹದಿಮೂರು ನಾಟಕಗಳು ಸಿಕ್ಕಿ, ಅವನ್ನು ಭಾಸನೇ ಬರೆದದ್ದು ಎಂಬ ತೀರ್ಮಾನಕ್ಕೆ ಅವರು ಬಂದರು. ಅನಂತರ ಅವನ್ನು  ಭಾಸನೇ ಬರೆದದ್ದೋ, ಬೇರೆ ಯಾರಾದರೋ ಎಂಬುದರ ಬಗ್ಗೆ ಎದ್ದ ಕೋಲಾಹಲ, ಪಂಡಿತರು ಹೂಡಿದ ತರ್ಕಗಳು, ನೋಡಿದ ಆಧಾರಗಳು, ನೀಡಿದ ನಿರ್ಣಯಗಳು ಎಂತಹ ಪತ್ತೆದಾರನಿಗೂ ಕೀಳರಿಮೆ ಹುಟ್ಟಿಸಬಲ್ಲವು. ಗೋವಿನ ಹಾಡಿನ ಕರ್ತೃತ್ವದಲ್ಲಿ ಹೀಗೆಲ್ಲ ಚರ್ಚೆಗಳಾಗಿಲ್ಲ.      

ಗೋವಿನ ಹಾಡನ್ನು ಸಂಪಾದಿಸಿ ವಿಸ್ತೃತ,ಪರಿಷ್ಕೃತ ಆವೃತ್ತಿಗಳನ್ನು ಇಬ್ಬರು ವಿದ್ವನ್ಮಹನೀಯರು ತಂದಿದ್ದಾರೆ - ಡಿ ಎಲ್ ನರಸಿಂಹಾಚಾರ್ಯ ಮತ್ತು ತಾಳ್ತಜೆ ಕೇಶವ ಭಟ್ಟ. ಡಿ ಎಲ್. ಎನ್ ಅವರದ್ದು ಮೇರುಸದೃಶವಾದ ಪಾಂಡಿತ್ಯ. ಇವರು ಸ್ಪಷ್ಟವಾಗಿ, ಈ ಹಾಡನ್ನು ರಚಿಸಿದವರಾರೋ ಗೊತ್ತಿಲ್ಲ ಅಂತಲೇ ಬರೆದಿದ್ದಾರೆ. ಸಾವಿರ ವರ್ಷಗಳ ಹಿಂದಿನ ಕೃತಿಗಳ ಜನ್ಮ ಜಾಲಾಡಿಬಿಡುತ್ತಿದ್ದ ಇಂಥಹಾ ವಿದ್ವನ್ಮಣಿಗೆ ತಮ್ಮ ಮೊದಲ ತಲೆಮಾರಿನವರೊಬ್ಬರು ಒಂದು ಪದ್ಯವನ್ನು ಬರೆದ ವಿಚಾರ ಗೊತ್ತಾಗಲಿಲ್ಲ ಅಂತ ಒಪ್ಪುವುದು ನನಗಂತೂ ಕಷ್ಟವೇ ಸರಿ. ಇಲ್ಲಿ ಇನ್ನೊಂದು ತಮಾಷೆಯೂ ಇದೆ. ಡಿ ಎಲ್ ನರಸಿಂಹಾಚಾರ್ ಅವರು ತಾವು ನೋಡಿದ್ದು, ಆಕರವಾಗಿ ಇಟ್ಟುಕೊಂಡದ್ದು ಸರಸ್ವತೀ ಭಂಡಾರದ ಓಲೆಯ ಪ್ರತಿ ಮತ್ತು ಮೈಸೂರು ಓರಿಯೆಂಟಲ್ ಲೈಬ್ರರಿಯ ಪ್ರತಿಗಳನ್ನು ಅಂತ ಕೊಟ್ಟಿದ್ದಾರೆ. 1870ರ ಆಸುಪಾಸಿನ ಕೃತಿಯೊಂದು ತಾಳೆಗರಿಗಳಲ್ಲಿ, ಓಲೆಯ ಪ್ರತಿಗಳಲ್ಲಿ ಸಿಗುತ್ತದೆಯೇ ? ಇದೀಗ ಯೋಚನೆ ಮಾಡಬೇಕಾದ ಅಂಶ!
ಇನ್ನು ಇನ್ನೊಬ್ಬ ದೊಡ್ಡ ವಿದ್ವಾಂಸರಾದ ತಾಳ್ತಜೆ ಕೇಶವ ಭಟ್ಟರು ಸಂಪಾದಿಸಿದ್ದು ಅವರ ತಂದೆಯವರೇ ಲಿಪಿಕಾರನಾಗಿ 1915ರಲ್ಲಿ ಮಾಡಿಟ್ಟಿದ್ದ ಪ್ರತಿಯೊಂದರಿಂದ, ಅವರ ತಂದೆಯವರೂ ಪ್ರತಿ ಮಾಡಿದ್ದು ತಾಳೆಯೋಲೆಯಿಂದಲೇ ಇರಬೇಕಷ್ಟೇ. ಇದು ದಕ್ಷಿಣ ಕನ್ನಡದಲ್ಲಿ ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಹಾಡಾಗಿರಬೇಕು. ಗುಬ್ಬಿ ಗುರುಸಿದ್ದಪ್ಪನವರು ಬರೆದ ಗೋವುಚರಿತ್ರೆ ಎಂಬ ಒಂದು ಯಕ್ಷಗಾನ ಪ್ರಸಂಗ 1895ರಲ್ಲೇ ಇದ್ದದ್ದನ್ನೂ ಅವರೇ ನಮೂದಿಸಿದ್ದಾರೆ.

ಈ ಕಥೆಗೆ ಸಂಸ್ಕೃತದ ‘ಇತಿಹಾಸ ಸಮುಚ್ಚಯ’ ಎಂಬ ಗ್ರಂಥದಲ್ಲಿನ ಕಥೆಯೊಂದೇ ಮೂಲವೆನ್ನುವ ವಿಚಾರಕ್ಕೆ ಮೇಲಿನ ಇಬ್ಬರು ವಿದ್ವಾಂಸರ ಸಮ್ಮತಿಯೂ ಇದೆ. (ಬಹುಶಃ ಇವರಿಬ್ಬರು ಕೊಟ್ಟಿರುವುದರ ಆಧಾರದ ಮೇಲೆ) ಕೆ.ವಿ.ಸುಬ್ಬಣ್ಣನವರು ತಮ್ಮ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು' ಕೃತಿಯಲ್ಲಿ ಹೀಗೆ ಬರೆದಿದ್ದಾರೆ :
"ಸಂಸ್ಕೃತದ ‘ಪದ್ಮಪುರಾಣ’ದಲ್ಲಿ ಮತ್ತು ‘ಇತಿಹಾಸ ಸಮುಚ್ಚಯ’ವೆಂಬುದರಲ್ಲಿ ಈ ಕಥೆ ಬರುತ್ತದಂತೆ. ‘ಪದ್ಮ ಪುರಾಣ’ದಲ್ಲಿ ಶಾಪಗ್ರಸ್ತನಾದ ಪ್ರಭಂಜನನೆನ್ನುವನು ಹುಲಿಯ ಜನ್ಮ ತಾಳಿರುತ್ತಾನೆ. ‘ಇತಿಹಾಸ ಸಮುಚ್ಚಯ’ದಲ್ಲಿ ಅದು, ಭೀಷ್ಮನು ಧರ್ಮರಾಯನಿಗೆ ಹೇಳುವ ‘ಬಹುಲೋಪಾಖ್ಯಾನ’; ಬಹುಲಾ ಎಂಬುದು ಹಸು, ಕಾಮರೂಪಿಯೆಂಬುದು ಹುಲಿ. ಇವೆಲ್ಲಕ್ಕೂ ಪ್ರಾಯಶಃ ಮೊದಲೇ, ಕಾಲಿದಾಸನ ‘ರಘುವಂಶ’ದ ದಿಲೀಪಾಖ್ಯಾನದಲ್ಲಿ ನಂದಿನಿಯ ಮೇಲೆ ಆಕ್ರಮಣ ನಡೆಸಲು ಬಂದ ಸಿಂಹದ ಇಂಥದೇ ಕಥೆ ಉಂಟಲ್ಲ? ‘ರಘುವಂಶ’ದ ಸಿಂಹವು
ನಂದಿಯೇ ಸೃಷ್ಟಿಸಿದ ಮಾಯೆ. ಅವೆಲ್ಲ ಇದ್ದರೂ ಈ ಕನ್ನಡ ಹಾಡಿನ ಸ್ವಂತಿಕೆ ಅನನ್ಯತ್ವಗಳಿಗೆ ಆಪೋಹವಿಲ್ಲ"

ಗೋವಿನ ಹಾಡು ಮತ್ತೊಂದು ರೂಪದಲ್ಲಿ ಸಿಗುವುದು ಕೆ ಶಿವರಾಮ ಐತಾಳರ 'ದಕ್ಷಿಣ ಕನ್ನಡದ ಜನಪದ ಸಾಹಿತ್ಯ' ಎಂಬ ಕೃತಿಯಲ್ಲಿ. ಇಲ್ಲಿ ಬರುವ ಹಾಡಿನ ಕಥೆ ಗೋವಿನ ಹಾಡಿನದ್ದೇ ಆದರೂ ನಿರೂಪಣೆ ಬೇರೆಯೇ ತರದಲ್ಲಿ ಇದೆ. ಇದು ತ್ರಿಪದಿಯಲ್ಲಿದೆ, ಇದರ ಗಾತ್ರವೂ ಕಿರಿದು.  ದಕ್ಷಿಣ ಕನ್ನಡ ಅಂತಿದ್ದರೂ ಭಾಷೆ ಅಲ್ಲಿಯದರಂತೆ ತೋರಲಿಲ್ಲ. ‘ಇತಿಹಾಸ ಸಮುಚ್ಚಯ’ದಲ್ಲಿ ಈ ಕಥೆಯನ್ನು ಭೀಷ್ಮನು ಧರ್ಮರಾಯನಿಗೆ ಹೇಳಿದ್ದರ ಪ್ರಸ್ತಾವ ಬಂತಲ್ಲ, ಈ ಕೃತಿಯಲ್ಲಿಯೂ ಹಾಗೇ ಇದೆ. ಶಿವರಾಮ ಐತಾಳರ ಸವಿಸ್ತಾರವೂ ಉಪಯುಕ್ತವೂ ಆದ ಪ್ರಸ್ತಾವನೆ ಇದರ ಇನ್ನೊಂದು ವಿಶೇಷ .
ಕ.ರಾ.ಕೃಷ್ಣಸ್ವಾಮಿಯವರು ಸಂಪಾದಿಸಿದ ತೀರ್ಥಹಳ್ಳಿ ಕಡೆಯ 'ಕೌಲೆ ಹಾಡು' ಇದೇ ಕಥೆಯ ಮತ್ತೊಂದು ಅವತಾರ. ಈ ಹಾಡಿನಲ್ಲಿ ಹುಲಿ ಆತ್ಮಬಲಿ ಎಲ್ಲ ಮಾಡುವಷ್ಟು ಕರುಣರಸ ಇಲ್ಲ, ಇದರಲ್ಲಿ ಹುಲಿ ಹಸುವನ್ನು ತಿಂದು, ಕರು ಅಮ್ಮನನ್ನು ಹುಡುಕಿಕೊಂಡು ಬಂದು, ಹುಲಿಯ ಜೊತೆ ಹೋರಾಟ ಮಾಡುವಂತೆ ಕಥೆಯನ್ನು ತಿರುಗಿಸಲಾಗಿದೆ.  
ಕಾಪಸೆ ರೇವಪ್ಪ ಎಂಬವರು ಸಂಗ್ರಹ ಮಾಡಿಕೊಟ್ಟಿರುವ, ತ್ರಿಪದಿಯಲ್ಲಿರುವ 'ಆಕಳ ಹಾಡು' ಉತ್ತರ ಕರ್ನಾಟಕದ ಸೊಗಡಿನ ಭಾಷೆಯ ಹಾಡು, ಇದರಲ್ಲಿ ಬರೀ 31 ಪದ್ಯಗಳಿವೆ, ಇಲ್ಲಿನದ್ದು ಋಷಿಯ ಆಶ್ರಮದ ಹಸು. ಇಲ್ಲಿ ಹುಲಿಯ ಪ್ರಾಣತ್ಯಾಗ ಮಾಡಿಸದೇ ದೇವತೆಗಳನ್ನು ಬರಿಸಿ ಕಥೆಗೆ ಸುಖಾಂತ್ಯ ಕೊಡಲಾಗಿದೆ. ಇದರಿಂದ ಹಾಡಿನ ಮನಕಲಕುವ ಗುಣ ಕಡಮೆಯಾಗುತ್ತದೆ ಎಂಬುದು ಬೇರೆ ಮಾತು.  

ಮೇಲೆ ತೋರಿಸಿದಂತೆ ಈ ಹಾಡಿಗೆ ಬಹಳಷ್ಟು ಪಾಠಾಂತರಗಳು,ಮರುನಿರೂಪಣೆಗಳು, ಆಕೃತಿಗಳು ಇವೆ ಅನ್ನುವುದು ಸ್ಪಷ್ಟ. ಡಿ.ಎಲ್.ಎನ್ ಮತ್ತು ಕೇಶವ ಭಟ್ಟರು ಸಂಪಾದಿಸಿದ ಆವೃತ್ತಿಗಳಲ್ಲೇ ಎಷ್ಟೋ ವ್ಯತ್ಯಾಸಗಳಿವೆ. ಹೊಸ ಕೃತಿಗಳಿಗೆ ಹೀಗೆ ಅಷ್ಟೊಂದು ಪಾಠಾಂತರಗಳು ಇರುವುದಿಲ್ಲ. ಉದಾ: ಪಂಜೆ ಮಂಗೇಶರಾಯರೋ , ಮಂಜೇಶ್ವರ ಗೋವಿಂದ ಪೈಗಳೋ ಬರೆದ ಹಾಡೊಂದು ಹತ್ತು ಕಡೆಗಳಲ್ಲಿ ಹತ್ತು ತರದ ಸಾಹಿತ್ಯ ಹೊಂದಿರುವುದಿಲ್ಲ. ಹೀಗಾಗುವುದು ಪ್ರಾಚೀನ ಕೃತಿಗಳಲ್ಲಿ, ಓಲೆಗರಿಯ ಪ್ರತಿಗಳಲ್ಲೇ ಜಾಸ್ತಿ. ಇನ್ನುಳಿದದ್ದು, 'ಬೆಳಗೆರೆ ಕೃಷ್ಣಶಾಸ್ತ್ರಿಗಳು ಗೋವಿನ ಹಾಡನ್ನು ವಾಸುದೇವಯ್ಯನವರೇ ಬರೆದದ್ದೆಂದು ಹೇಳಿದ್ದಾರೆ' ಎಂಬ ಹೇಳಿಕೆ. ಶಾಸ್ತ್ರಿಗಳು ಏನು ಹೇಳಿದರೋ, ಅವರು ಹೇಳಿದ್ದನ್ನು ಸರಿಯಾಗಿ ಗ್ರಹಿಸದೇ ಯಾರಾದರೂ misquote ಮಾಡಿದರೋ, ಶಾಸ್ತ್ರಿಗಳೇ ಬೇರೆ ಯಾರೋ ಹೇಳಿದ್ದನ್ನು ಕೇಳಿ ಹೇಳಿದರೋ ಅಂತ ಇನ್ನು ಗೊತ್ತಾಗುವುದು ಕಷ್ಟ. ಏನೇ ಇದ್ದರೂ ಇಂತಹಾ ವಿಷಯಗಳಿಗೆ ಅವರೊಬ್ಬರ ಹೇಳಿಕೆ ಸಾಕಾಗುವುದಿಲ್ಲ ಎಂದಷ್ಟೇ ಹೇಳಬಹುದು.

"ಜನರಿಗಾಗಿ ಜನಜೀವನವನ್ನು ಜನಸಾಮಾನ್ಯರು ತಿರುಳುಗನ್ನಡದಲ್ಲಿ ರಸವತ್ತಾಗಿ ಚಿತ್ರಿಸಿದ್ದೇ ಜನಪದ ಸಾಹಿತ್ಯ" ಅಂತ ಉತ್ತಂಗಿ ಚೆನ್ನಪ್ಪನವರು ಹೇಳಿದ ಮಾತಿನಿಂದ, "ಜನರಿಗಾಗಿ, ತಿರುಳುಗನ್ನಡದಲ್ಲಿ, ರಸವತ್ತಾಗಿ ಚಿತ್ರಿಸಿದ್ದು" ಮುಂತಾದ ಗುಣವಿಶೇಷಗಳನ್ನು ಗೋವಿನ ಹಾಡಿಗೂ ಅನ್ವಯಿಸಬಹುದು. ಇದರ ಕಥೆ ನಾಟಕೀಯ. ಈಗಲೂ ನಾಟಕವಾಗಿ ಮಾಡಿದರೆ ರಂಗಸ್ಥಳದಲ್ಲಿ ಸೊಗಸಾಗಿ ಮೂಡಿಬರುತ್ತದೆ, ಹೀಗಾಗಿ  ಇದನ್ನು ಜನ ನಾಟಕವಾಗಿ ಆಡುತ್ತಲೂ ಇದ್ದಿರಬಹುದೇನೋ ಎಂಬ ಊಹೆಗೆ ಅವಕಾಶವುಂಟು. ಅಂತೂ ಈ ಹಾಡು ಒಂದು ಪಕ್ಷದಲ್ಲಿ ಬರೆಹದ ರೂಪದಲ್ಲಿ ಇರದೇ ಹೋಗಿದ್ದರೂ, ಊರಿನಲ್ಲಿ ಯಾರೋ ಹಾಡುವುದನ್ನು ಕೇಳಿಯೋ, ಅಜ್ಜಿಯಿಂದಲೋ ಅಮ್ಮನಿಂದಲೋ ಕಲಿತೋ, ಮೌಖಿಕವಾಗಿಯೇ ತಲೆಮಾರಿನಿಂದ ತಲೆಮಾರಿಗೆ ಬರುತ್ತಿತ್ತೆನ್ನಲಿಕ್ಕೆ ಅಡ್ಡಿಯಿಲ್ಲ.    

ಚ.ವಾಸುದೇವಯ್ಯನವರಿಗೆ ಇಲ್ಲಿಂದಲೇ ಒಂದು ಗೌರವಪೂರ್ವಕ ನಮಸ್ಕಾರ ಹಾಕಿ, ಯಾರಾದರೂ ಪುಣ್ಯಕೋಟಿಯ ಜಾಡು ಹಿಡಿದು, ಅದರ ಕವಿಯ ಹೆಸರನ್ನು ಕಂಡುಹಿಡಿಯಲಿ ಅಂತ ಆಶಿಸೋಣ.


Dia - Kannada movie

 The funny thing about Dia is that, it tempts you to praise it for what it is not. The film does not have an earth shatteringly distinctive story. The plot wouldn't exactly invoke an urge in you to compare it to a Nolan screenplay. There is no action or anything remotely similar to a fight and no, there is not much comedy, sorry Sadhu and Chikkanna fans! There is not much for fans of horror or suspense either. Tssk!

Heroism and build up? No sir! Villains ? Naa baba naa. Breathtaking locations then? No. And for those want a longer list of "No"s, there are no songs either! How on earth can anyone make an engaging movie without any of these then? The director somehow magically pulls it off, an accomplishment I would've once thought inconceivable. It is the fragrance of genuine warmth,innocence and grace that happens to be the director's magical wand. It is those intimate, beautifully observed small moments beaming with warmth that turn a 90s type old fashioned story into something delicate, dignified and honestly moving.
Almost a disney film like cheerfulness in the background score by Ajaneesh adds to the mood. New faces and their fresh voices help. We were discussing as to how a single dubbing artist seems to be lending her voice to almost every heroine, hence creating some sort of monotony and how it felt so fresh to hear Manvita Hareesh's voice in Kendasampige. Here also the heroine's voice seems new.
Characters(especially the leading lady and her voice-overs) are cute and the progression of their affection for one another is believable and not as artificial as is generally the case in the routine masala movies. This genuineness matters. There also is a deliberate attempt to avoid most of the cliches and infuse freshness in the narration. Result is a film of moods and tones and pools of feeling, full of moving moments and tenderness. This is as close as KFI can possibly get to humming KS Narsimhaswaami's love songs.
Direction and writing is simple, yet assured, situations are explored with lyrical artistry and touching drama, touching mainly because we care about the characters. It is an achingly tender love story,that leaves a bittersweet or rather a bitter aftertaste, it is no wonder that the suddenness of the climax and the bitter aftertaste exasperated many.
All said, this film is an evidence that sometimes it's the simple, unfussy storytelling that comes off best.