Sunday, 6 January 2019

ನೀವು ಓದಬೇಕಾದ ಕೆಲವು ಪುಸ್ತಕಗಳು


#sevendaysbookschallenge

Ganesh Bhat Nelemav ಅವರು ಎಸೆದಿರುವ ಪುಸ್ತಕದ ಸವಾಲನ್ನು ಜಾಂಟಿ ರೋಡ್ಸಿನ ಹಾಗೆ ಹಾರಿ ಹಿಡಿದಿದ್ದೇನೆ.

ಮೊದಲಿಗೆ, ಸೇಡಿಯಾಪು ಕೃಷ್ಣಭಟ್ಟರು ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ವ್ಯಕ್ತಿತ್ವವನ್ನು ಕೆಲವೇ ಪದಗಳಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು(ಆ ಮೂಲಕ ಟೈಪು ಮಾಡುವ ಕಷ್ಟದಿಂದ ಜಾರಿಕೊಳ್ಳಬಹುದು !
“ಪಂಪನ ಭಕ್ತ, ಪಾರ್ತಿಸುಬ್ಬನ ಮಿತ್ರ, ಕವಿರಾಜಮಾರ್ಗದ ಪುರಸ್ಕರ್ತ, ಅಚ್ಚಗನ್ನಡದ ಹುಚ್ಚ – ಕ್ಷಮಿಸು, ನಮೋ ನಮೋ, ಕನ್ನಡದ ತಿರುಳನ್ನು ಕಂಡು ಉಂಡು ಉಣಿಸಿದ ಪಂಡಿತರಲ್ಲಿ, ಕನ್ನಡ ಕಾವ್ಯಪಾಠಕರಲ್ಲಿ ಪರಮೋಚ್ಚ, ಸಿರಿವಂತರ ಕುಲದಲ್ಲಿ ಜನಿಸಿಯೂ ಕಡುಬಡವ, ಬದುಕನ್ನೆಲ್ಲಾ ಬಡತನದಲ್ಲಿಯೇ ಕಳೆದೂ ಮನಸ್ವಿ, ವರ್ಚಸ್ವಿ, ಯಶಸ್ವಿ, ಹಳಗನ್ನಡ – ಹೊಸಗನ್ನಡ ಹಾರದ ಮಧ್ಯಮಣಿ, ನಮ್ಮ ಮುದ್ದಿನ ಮುದ್ದಣ, ನವೋದಯದ ಮುಂಗೋಳಿ, ಸ್ವರವೆತ್ತಿ ಕೂಗಿ ಕೆಲೆದು ನುಡಿಯಿಸಿದ ಕನ್ನಡವಕ್ಕಿ ನಮ್ಮ ಮುಳಿಯದ ಪಂಡಿತವಕ್ಕಿ” .

ತಿಮ್ಮಪ್ಪಯ್ಯನವರು ಹಳಬರು, ಪುಸ್ತಕ ಪ್ರಕಟಣೆ ಎಲ್ಲ ತುಂಬ ಕಷ್ಟ ಅನಿಸಿದ ಕಾಲ ಅವರದು. ಜೊತೆಗೆ ಆರ್ಥಿಕ ಸಂಕಷ್ಟ ಬೇರೆ. "ನಮ್ಮ ತಿಮ್ಮಪ್ಪಯ್ಯ ಅದೆಂತದೋ ಪಂಪ ಅನ್ನುವ ಪುಸ್ತಕ ಬರೆದಿದ್ದಾನೆ, ನಾನು ಅವನಿಗೆ (ಆ ಕಾಲದ) ಐದು ರೂಪಾಯಿ ಕೊಟ್ಟಿದ್ದೇನೆ, ಅದರ ಒಂದು ಪ್ರತಿಯನ್ನೂ ಖರೀದಿ ಮಾಡಿ ನಮ್ಮ ಹಳ್ಳಿಯ ಗ್ರಂಥಾಲಯಕ್ಕೆ ಕೊಟ್ಟಿದ್ದೇನೆ" ಅಂತ ನಮ್ಮ ಊರಿನ ಆಢ್ಯ ಮಹನೀಯರೊಬ್ಬರು ಆ ಕಾಲದಲ್ಲಿ ಹೇಳಿದ್ದರಂತೆ('ನಾಡೋಜ ಪಂಪ' ಕೃತಿಯ ಬಗ್ಗೆ). ಅವರೋ ಈ ಪುಸ್ತಕಗಳನ್ನೆಲ್ಲ ಓದಿ ಆಸ್ವಾದಿಸುವ ರುಚಿಯಿದ್ದವರಲ್ಲ, ಆದರೂ ತಿಮ್ಮಪ್ಪಯ್ಯ ಮಾಡಿದ್ದು ಅಂದಮೇಲೆ ಒಳ್ಳೆ ಕೆಲಸವೇ ಇರಬೇಕು, ನಾನು ಅದಕ್ಕೆ ನನ್ನಿಂದಾದ ಸಹಕಾರ ಕೊಡಬೇಕು ಅನ್ನುವ ಭಾವ ಅವರದ್ದು !

ಕನ್ನಡದಲ್ಲಿ ಇದುವರೆಗೆ ಸಿಕ್ಕಿರುವ ಗ್ರಂಥಗಳಲ್ಲಿ ಅತ್ಯಂತ ಹಳೆಯದೆಂದರೆ ಕವಿರಾಜಮಾರ್ಗ(ಪುರುಸೊತ್ತಾದರೆ, ಈ ಕವಿರಾಜಮಾರ್ಗ ಕೃತಿಯ ಬಗ್ಗೆ ಒಂದು ಲೇಖನವನ್ನು ಯಾವಾಗಲಾದರೂ ಒಮ್ಮೆ ನಾನೇ ಬರೆಯುತ್ತೇನೆ) ಈ ಪುಸ್ತಕದ ಕುರಿತಾಗಿ ಮುಳಿಯ ತಿಮ್ಮಪ್ಪಯ್ಯನವರು ಮಾಡಿರುವ ಸಂಶೋಧನೆ, ವ್ಯಾಖ್ಯಾನ,ವಿವರಣೆಗಳು “ಕವಿರಾಜಮಾರ್ಗ ವಿವೇಕ”ದಲ್ಲಿವೆ. ಕಥೆ ಕಾದಂಬರಿಗಳನ್ನು ಓದಿದಂತೆ ಇದನ್ನೊಂದು ಟೈಂಪಾಸ್ ಪುಸ್ತಕವಾಗಿ ಓದುವುದು ಕಷ್ಟ If I have seen further it is by standing on the shoulders of giants ಅನ್ನುವುದು ನ್ಯೂಟನ್ನನ ಮಾತು. ನೀನಾಸಂನ ಕೆ.ವಿ. ಸುಬ್ಬಣ್ಣನವರು ತಮ್ಮ "ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು" ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ :
"ಇಲ್ಲಿನ ನನ್ನ ಬರವಣಿಗೆಯು ದಿ. ಮುಳಿಯ ತಿಮ್ಮಪ್ಪಯ್ಯನವರ 'ನಾಡೋಜ ಪಂಪ' ಮತ್ತು 'ಕವಿರಾಜಮಾರ್ಗ ವಿವೇಕ' -- ಈ ಗ್ರಂಥಗಳಿಗೆ ಅನೇಕ ರೀತಿಗಳಲ್ಲಿ ಋಣಿಯಾಗಿದೆ. ಈ ಋಣವನ್ನು ಹೇಳಿಕೊಳ್ಳುವುದೇ ನನಗೆ ಹೆಮ್ಮೆ."

ಇವೆರಡನ್ನು ಸೇರಿಸಿ ಹೇಳುವುದಾದರೆ, ನಾನು ಪಂಪನ ಕಾವ್ಯವನ್ನು,ಮನಸ್ಸನ್ನು ಅಷ್ಟಿಷ್ಟು ಅರ್ಥಮಾಡಿಕೊಂಡದ್ದು ಮತ್ತು ಕವಿರಾಜಮಾರ್ಗಕಾರನ ತಲೆಯೊಳಗಡೆ ಸ್ವಲ್ಪ ಇಣುಕಿ ನೋಡಿದ್ದು ಮುಳಿಯದ ಪಂಡಿತರ ಹೆಗಲಿನ ಮೇಲೆ ನಿಂತೇ ಅನ್ನುವುದು ನನಗೆ ಹೆಮ್ಮೆಯ ವಿಷಯ.

ಎರಡನೇ ದಿನದ ಆಯ್ಕೆ:

ಒಂದು ಕಾಲದಲ್ಲಿ ನಾನು ಕಂಡದ್ದನ್ನೆಲ್ಲ ಓದಿ ಗುಡ್ಡೆ ಹಾಕುತ್ತಿದ್ದವನು, ತೆಂಡೂಲ್ಕರನು ಕೈಗೆ ಕಾಲಿಗೆ ತಡವಿದ, ಸಿಕ್ಕಿ ಸಿಕ್ಕಿದ ದಾಖಲೆಗಳನ್ನೆಲ್ಲಾ ಮುರಿದು ರಾಶಿ ಹಾಕುತ್ತಿದ್ದ ಹಾಗೆ ನಾನು ಸಿಕ್ಕಿದ್ದು, ಹಾಗೆಲ್ಲ ಸಿಕ್ಕದ್ದು, ಕಂಡದ್ದು, ಸುಲಭಕ್ಕೆ ಕಾಣದ್ದು ಎಲ್ಲವನ್ನೂ ಓದಿ ಬಿಸಾಡುತ್ತಿದ್ದೆ. ಇದರಿಂದ ಲಾಭವೂ ಆಯಿತು, ಒಮ್ಮೊಮ್ಮೆ ಸಮಯ ನಷ್ಟವೂ ಆಯಿತು. ಆ ಹೊತ್ತಿನಲ್ಲಿ, ಪ್ಯಾರಿಸ್ ಸುತ್ತುತ್ತೇನೆ ಅಂತ ಹೊರಟವನಿಗೆ ನುರಿತವನೂ, ವಾಕ್ಪಟುವೂ ಆದ ಟೂರ್ ಗೈಡ್ ಸಿಕ್ಕುವಂತೆ ಸಿಕ್ಕಿದ್ದು ಜಾನಕಿ ಕಾಲಂ. ಪೂರ್ವಸೂರಿಗಳ ಪರಿಚಯ ಮಾಡಿಸುತ್ತಾ, ಏನನ್ನು ಓದಬೇಕು, ಏನನ್ನು ಓದಲೇಬೇಕು ಅಂತೆಲ್ಲ ಹೇಳುತ್ತ ಹೋದ, ಓದನ್ನು ಕಲಿಸುತ್ತ ಹೋದ ಕಾಲಂ ಅದು.

ಪ್ರತೀಸಲ ಸಾಹಿತ್ಯಾಸಕ್ತರು ಸಿಕ್ಕಾಗಲೂ ಜಾನಕಿ ಕಾಲಂನ ಪ್ರಸ್ತಾವ ಬಂದು, ಜಾನಕಿ ಯಾರು ಅನ್ನುವ ಪ್ರಶ್ನೆ ಬರುತ್ತಿತ್ತು, ರವಿ ಬೆಳಗೆರೆಯೇ ಜಾನಕಿಯಿರಬಹುದು ಎಂಬಲ್ಲಿಂದ ಶುರುವಾಗಿ ಮಂಗಳಗ್ರಹದ ಉತ್ತರ ಭಾಗದಲ್ಲಿ ವಾಸ ಮಾಡುತ್ತಿರುವವರೊಬ್ಬರೇ ಜಾನಕಿಯಂತೆ ಎಂಬಲ್ಲಿಯವರೆಗೆ ಥರಾವರಿ ಕಥೆಗಳು ಹಬ್ಬಿದ್ದವು. ಕೆಲವರಂತೂ ಕಣ್ಣಾರೆ ನೋಡಿ ಬಂದವರಂತೆ, "ನನಗೆ ಗೊತ್ತಿಲ್ಲವೇ , ಜಾನಕಿ ಓ ಇಂಥವರೇ" ಅಂತ ಬೆರಳು ತೋರಿಸಿ ಹೇಳಿ ಬಿಡುತ್ತಲೂ ಇದ್ದರು! ಸಾಹಿತ್ಯದ ಸಭೆಗಳಲ್ಲಿ ಜಾನಕಿಯನ್ನು ಹುಡುಕುವ ನೆಪದಲ್ಲಿ ಹುಡುಗಿಯರನ್ನು ನೋಡುವ ಅವಕಾಶವೂ ಒದಗಿ ಬಂದಿತ್ತು :p

ಶೇಣಿ ಗೋಪಾಲಕೃಷ್ಣ ಭಟ್ಟರ ತಾಳಮದ್ದಳೆಯ ಅರ್ಥ ಕೇಳಿದವರಿಗೆ, ಯಾವತ್ತೇ ಆದರೂ ಇದನ್ನು ಹೀಗಲ್ಲದೆ, ಇದಕ್ಕಿಂತ ಚಂದದಲ್ಲಿ ನಿರೂಪಿಸುವುದು ಕಷ್ಟ ಅನ್ನಿಸುತ್ತಿತ್ತು, ಜೋಗಿಯವರ ಬರೆಹವೂ ಹಾಗೆಯೇ ಅನ್ನಬೇಕು. ಮಂಗಳೂರಿನಲ್ಲಿ ಒಂದುಕಾಲಕ್ಕೆ ಬರುತ್ತಿದ್ದ ನಿಲ್ಲದ ಮಳೆಯ ಹಾಗೆ ಬರೆಯುತ್ತಲೇ ಹೋದರು. ಯಕ್ಷಗಾನದಲ್ಲಿ ಪುಂಡು ವೇಷಗಳು ಕುಣಿದ ಹಾಗಿನ ವಿಮರ್ಶೆಯ ಪಾರಿಭಾಷಿಕ ಪದಗಳ ಹಾರಾಟ ಇಲ್ಲಿ ಇಲ್ಲ, "ಶ್ರೀಯುತರು ವಸಾಹತ್ತೋತರ ಹಳವಂಡಗಳ ನೇಯ್ಗೆಯ ಕಾಣ್ಕೆಯ ತಾದಾತ್ಮ್ಯದಲ್ಲಿ ತನ್ನತನದ ಅರಿವಿನ ಪರಿವೆಯ ಪರಿಪಾಕದ ಹರಳುಗಟ್ಟಿಸುವಿಕೆಯ ಸೃಷ್ಟಿಯಲ್ಲಿ ಸೋತರೂ ಗೆದ್ದಿದ್ದಾರೆ" ಯಂತಹ ವಾಕ್ಯಗಳು ಇಲ್ಲದ ವಿಮರ್ಶೆ ಜಾನಕಿ ಕಾಲಮ್ಮಿನ ವಿಶೇಷ. ಮಬ್ಬು, ಮಂಕು, ಸಪ್ಪೆ ಎಲ್ಲಕ್ಕೂ ಜಾನಕಿ ಕಾಲಮ್ಮಿಗೂ ಬಸವನಗುಡಿಯಿಂದ ವೈಟ್ ಫೀಲ್ಡ್ ಇಗೆ ಇರುವಷ್ಟು ದೂರ.

MTRನಲ್ಲಿ ಪಲ್ಯ, ಕೋಸಂಬರಿ, ಗಸಿ, ಪೂರಿ, ಚಟ್ನಿಯಿಂದ ಹಿಡಿದು ಐಸ್ ಕ್ರೀಂನ ತನಕ ಎಲ್ಲವೂ ಬಾಯಿಗೆ ಹಿತವಾಗಿ, ರುಚಿಯಾಗಿ ಇರುವಂತೆ ಜೋಗಿಯವರ ಪೆನ್ನಿನಿಂದ ಬಂದ ಎಲ್ಲ ತರದ ಬರೆಹಗಳೂ ಚುರುಕಾಗಿ, ರುಚಿಯಾಗಿ ಇದ್ದವು. ವ್ಯಂಗ್ಯ, ಮೊನಚು, ಸ್ವಾರಸ್ಯ, ರಂಜಕತೆಗಳಿಂದ ಕಳೆಗಟ್ಟಿದ, ಪುಟ್ಟ ಪುಟ್ಟ ವಾಕ್ಯಗಳನ್ನು ಪೋಣಿಸಿದ, ಬೋರು ಹೊಡೆಸುವುದೆಂದರೇನೆಂದೇ ಗೊತ್ತಿಲ್ಲದ ಲವಲವಿಕೆಯ ಗದ್ಯ ಜಾನಕಿ ಕಾಲಮ್ಮಿನ ಶಿಲ್ಪಕಲ್ಪವಾಯಿತು. "ಹಾಗಾದರೆ ಬೆಂಗಳೂರು ನಮ್ಮನ್ನು ನಿಜಕ್ಕೂ ತಬ್ಬಿಬ್ಬಾಗಿಸುತ್ತದಾ?", "ಅಷ್ಟಕ್ಕೂ ನಾವು ಪ್ರಶ್ನೆ ಮಾಡುವುದನ್ನೇ ಮರೆತಿದ್ದೇವಾ?" ಎಂಬಿತ್ಯಾದಿ ಪುಟ್ಟ ಪುಟ್ಟ ಪ್ರಶ್ನೆಗಳು ಕೂಡಾ ಜಾನಕಿ ಕಾಲಮ್ಮಿನ ವಿಶಿಷ್ಟ ನುಡಿಗಟ್ಟಿನ ಭಾಗವೇ ಆಗಿದೆ.
ಒಂದು ರಾಜಕೀಯ ಸಿದ್ದಾಂತಕ್ಕೆ ತಲೆಯನ್ನು ಬಾಂಡ್ ಪೇಪರಿನಲ್ಲಿ ಬರೆದುಕೊಟ್ಟಂತೆ ಕಾಣದ ತೆರೆದ ಮನಸ್ಸು,ಪಲಾವಿನಲ್ಲಿ ಅಲ್ಲಲ್ಲಿ ಕರಿದ ಬ್ರೆಡ್ ಸಿಗುವಂತೆ ಸಿಗುವ witty ಸಾಲುಗಳು, ಸಮಚಿತ್ತದ, ಒಮ್ಮೊಮ್ಮೆ ಚೇಷ್ಟೆಯ, ತುಂಟತನದ ಗ್ರಹಿಕೆ, ವಿಸ್ತಾರವಾದ ಓದು ಎಲ್ಲ ಸೇರಿ ಜೋಗಿ ಸ್ಟೈಲ್ ಆಗಿದೆ.

ಮೂರನೇ ದಿನದ ಆಯ್ಕೆ:
ಇವತ್ತು ಎರಡು ಪುಸ್ತಕಗಳನ್ನು ಒಟ್ಟಿಗೆ ಕೊಡುತ್ತಿದ್ದೇನೆ. ಚಿಂತಕರು, ವಿಚಾರವಾದಿಗಳು , ನಮ್ಮ ಮೆದುಳು ಹೇಗೆ ವಿಷಯಗಳನ್ನು ಗ್ರಹಿಸುತ್ತದೆ ಅಂತ ಯೋಚನೆ ಮಾಡುವವರು, ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳಬೇಕು ಅನ್ನುವವರು ಎಲ್ಲ ಓದಲೇಬೇಕಾದ ಪುಸ್ತಕಗಳಿವು. Thinking, Fast and Slow ಒಂದು ಕ್ರಾಂತಿಕಾರಿ ಪುಸ್ತಕ, ಮೈಲಿಗಲ್ಲ. ಅದನ್ನು ಬರೆದ Daniel Kahneman ಅವರು Behavioral economicsನಲ್ಲಿ ದೊಡ್ಡ ಹೆಸರು (ನೊಬೆಲ್ ಪ್ರಶಸ್ತಿ ಪುರಸ್ಕೃತರು). Daniel Gilbertರು ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ವಿಜ್ಞಾನಿಯಾಗಿ ಗುರುತಿಸಿಕೊಂಡವರು.

ಮನಃಶಾಸ್ತ್ರಕ್ಕೂ ಅರ್ಥಶಾಸ್ತ್ರಕ್ಕೂ ಮದುವೆ ಮಾಡಿಸಿದರೆ ಹುಟ್ಟುವ ಮಗುವಿಗೆ Behavioral economics ಅಂತ ಹೆಸರಿಡಬಹುದು. ನಮ್ಮ ಗ್ರಹಿಕೆ, ಸಂವೇದನೆ ಹೇಗೆಲ್ಲ ತಪ್ಪಾಗುತ್ತದೆ,ನಮ್ಮ ಮೆದುಳು ಹೇಗೆಲ್ಲ ನಮಗೆ ಗೊತ್ತೇ ಆಗದಂತೆ ಕೈಕೊಡುತ್ತದೆ, ನಮ್ಮ ನಿರ್ಧಾರಗಳು ಎಷ್ಟು ತರ್ಕವಿದೂರವಾಗಿರುತ್ತವೆ ಅಂತ ತಿಳಿಸಿಕೊಡುವುದು ಈ ಎರಡೂ ಪುಸ್ತಕಗಳ ಸಾಮಾನ್ಯ ಅಂಶ. Thinking, Fast and Slowನದ್ದು ಸ್ವಲ್ಪ ಗಂಭೀರವಾದ, ಬುದ್ದಿಜೀವಿಗಳ ಅಕಾಡೆಮಿಕ್ ಶೈಲಿ (ಆದರೂ ಓದಿಸಿಕೊಂಡು ಹೋಗುತ್ತದೆ), Stumbling on Happinessನದ್ದು ಸ್ವಲ್ಪ ಗಮ್ಮತ್ತು ಮಾಡಿ, ಮಜಾ ಕೊಡುವ ತಮಾಷೆಯ ಶೈಲಿ. ವಿನೋದಪ್ರಿಯನಾದ ನನಗೆ Stumbling on Happiness ಬಹಳ ಹಿಡಿಸಿತು ಅಂತ ಬೇರೆ ಹೇಳಬೇಕಾದ್ದಿಲ್ಲವಲ್ಲ.

Stumbling on Happiness ಒಂದು ಟ್ರೆಂಡ್ ಅನ್ನೇ ಹುಟ್ಟುಹಾಕಿತು ಅನ್ನಬೇಕು. ತದನಂತರ ಇದೇ ದಿಕ್ಕಿನಲ್ಲಿ ರಿಚರ್ಡ್ ಥೇಲರ್ ಅವರ Nudge: Improving Decisions about Health, Wealth, and Happiness ಅನ್ನುವ ಪುಸ್ತಕ ಬಂತು (ಇವರಿಗೆ ಕಳೆದ ವರ್ಷ ನೊಬೆಲ್ ಕೊಡಲಾಯಿತು). Dan Ariely ಬರೆದ Predictably Irrational ಸದ್ದು ಮಾಡಿತು. ಇವರು The Upside of Irrationality ಅಂತಲೂ ಒಂದು ಹೊತ್ತಗೆಯನ್ನು ಬರೆದರು.

ಹೆಚ್ಚು ಬರೆಯಲು ಸೋಮಾರಿತನ ಬಿಡುತ್ತಿಲ್ಲ, ಹಾಗಾಗಿ ಈ ಎರಡು ಪುಸ್ತಕಗಳ ಬಗ್ಗೆ ಬೇರೆಯವರು ಬರೆದ ಸಾಲುಗಳನ್ನು ಕೊಟ್ಟಿದ್ದೇನೆ.
Stumbling on Happinessಗೆ ಸಿಕ್ಕಿದ ಪ್ರಶಂಸೆಯ ಸಾಲುಗಳು :
Gilbert has a knack for coming up with zany experiments that show just how flawed and biased the human mind is. Read This Book If…
…you enjoy Harvard professors who reference The Beatles in every chapter and make jokes about quadriplegics.
…you’ve always had a hunch that you are completely full of shit but would like 400 pages of psychological research to confirm it for you.
— Mark Manson

A witty, insightful and superbly entertaining trek through the foibles of human imagination.” —New Scientist

“Gilbert’s book has no subtitle, allowing you to invent your own. I’d call it ‘The Only Truly Useful Book on Psychology I’ve Ever Read.’” —James Pressley, Bloomberg News

Thinking, Fast and Slowನ ಕುರಿತು ಬಂದಿರುವ ಮೆಚ್ಚುಗೆಯ ಸಾಲುಗಳು :

“A sweeping, compelling tale of just how easily our brains are bamboozled, bringing in both his own research and that of numerous psychologists, economists, and other experts...Kahneman has a remarkable ability to take decades worth of research and distil from it what would be important and interesting for a lay audience...Thinking, Fast and Slow is an immensely important book. ―
Jesse Singal, Boston Globe

ನಾಲ್ಕನೇ ದಿನದ್ದು :

ಇವತ್ತು ಉಳಿದ ಲೇಖಕರು ಅಷ್ಟಾಗಿ ಮುಟ್ಟದ ವಿಷಯಗಳ ಬಗ್ಗೆ ಚೆನ್ನಾಗಿ ಬರೆದಿರುವವರ, ಜ್ಞಾನದ ಕಿಟಕಿಗಳನ್ನು ತೆರೆದು ಬುದ್ದಿಗೆ ಕೆಲಸ ಕೊಡುವಂತೆ ಬರೆದವರ,ಕಥೆ ಕಾದಂಬರಿ, ಕವನಗಳ ಆಚೆಯೂ ಸಾಹಿತ್ಯ ಇದೆ ಅಂತ ತೋರಿಸಿದವರ ಪರಿಚಯ, ಪುಸ್ತಕಗಳ ಫೋಟೋಗಳು ನೆಪಕ್ಕೆ ಮಾತ್ರ.

ಮೊದಲಿಗೆ ಪಾ.ವೆಂ. ಆಚಾರ್ಯರ "ಚಿತ್ರ ವಿಚಿತ್ರ ಈ ಜಗತ್ತು" (ಅದರ ಪ್ರತಿ ಸಿಗಲಿಲ್ಲವಾದ್ದರಿಂದ ಆಚಾರ್ಯರ masterpiece ಎನಿಸಿಕೊಂಡ , ನೂರಾರು ಪದಗಳ ಮೂಲವನ್ನು ಕೆದಕುವ ಕೃತಿಯಾದ ಪದಾರ್ಥ ಚಿಂತಾಮಣಿಯನ್ನು ಹಾಕಿದ್ದೇನೆ.

ರೀಡರ್ಸ್ ಡೈಜೆಸ್ಟ್ ಅನ್ನು ನೋಡಿ ಅಂತದ್ದು ಇಲ್ಲೂ ಬೇಕೆಂಬ ಆಸೆಯಿಂದ ಕಸ್ತೂರಿ ಪತ್ರಿಕೆ ಮಾಡಿದವರು ಪಾವೆಂ. ಆಚಾರ್ಯರೇ ಈ ಪತ್ರಿಕೆಯ ವಿಶೇಷ ಅನ್ನಬೇಕು, ಹತ್ತಾರು ಗುಪ್ತನಾಮಗಳಲ್ಲಿ ಬರೆದು ಪತ್ರಿಕೆಯ ಎಲ್ಲ ಪುಟಗಳನ್ನೂ ಒಮ್ಮೊಮ್ಮೆ ಅವರೇ ತುಂಬಿಸುತ್ತಿದ್ದರಂತೆ . ಆಚಾರ್ಯರು ಶಿವರಾಮ ಕಾರಂತರಂತೆ ನಡೆದಾಡುವ ವಿಶ್ವಕೋಶವಾಗಿದ್ದವರು, ಆದರೆ ಯಾಕೋ ಕಾರಂತರಿಗೆ ಸಿಕ್ಕಿದಷ್ಟು ಪ್ರಚಾರ ಇವರಿಗೆ ಸಿಗಲಿಲ್ಲ. SSLCಯಲ್ಲಿ rank ಬಂದರೂ ಕಿತ್ತು ತಿನ್ನುವ ಬಡತನ ಅವರನ್ನು ಡಿಗ್ರಿಗೆ ಓದಲು ಬಿಡಲಿಲ್ಲ, ಅದು ಒಳ್ಳೆಯದೇ ಆಯಿತು , ಮುಂದೆ ವಿಧಿಯ ಮೇಲೆ ಸೇಡು ತೀರಿಸಲೋ ಎಂಬಂತೆ ಪಾವೆಂ ನೂರೆಂಟು ವಿಷಯಗಳನ್ನು ಓದಿಕೊಂಡರು , ಅವುಗಳ ಬಗ್ಗೆ ಕಸ್ತೂರಿಯಲ್ಲಿ ಸೊಗಸಾಗಿ ಬರೆದರು. ವಿಜ್ಞಾನ, ಭಾಷೆ, ರಾಜಕೀಯ,ಕ್ರೈಂ, ಇತಿಹಾಸ, ಭೂಗೋಳ ಹೀಗೆ ಆಚಾರ್ಯರ ಪೆನ್ನು ಹೋಗದ ಜಾಗವಿಲ್ಲ. ಹೀಗೆ ನೂರೆಂಟು ವಿಷಯಗಳ ಬಗ್ಗೆ ಬರೆದದ್ದರ ಸ್ಯಾಂಪಲ್ ಈ "ಚಿತ್ರ ವಿಚಿತ್ರ ಈ ಜಗತ್ತು" ಪುಸ್ತಕದಲ್ಲಿದೆ. ಆಚಾರ್ಯರನ್ನು ಆ ಕಾಲದ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಅನ್ನಬಹುದು. ಇದೇ ಮಾತನ್ನು ಇವತ್ತಿನ ಉಳಿದ ಲೇಖಕರಿಗೂ ಅನ್ವಯಿಸಬಹುದು.

ವೈಎನ್ಕೆ ಬರೆಹಗಳೂ ಕಾಲಿಗೆ ಚಕ್ರ ಕಟ್ಟಿಗೊಂದು ಜಗತ್ತನ್ನು ಸುತ್ತುವ ಜಾತಿಯವು, ಸಿಕ್ಕಾಬಟ್ಟೆ ಪನ್ ಪ್ರಿಯರಾದ ವೈಎನ್ಕೆ ಬರೆದ ಅಂಕಣ ಬರೆಹಗಳು ವಂಡರ್ ಸೀರೀಸ್ ಅಂತ ಐದಾರು ಬಂದಿವೆ. ಮೇಲೆ ಉಪನಿಷತ್ತು, ಅಲ್ಲೇ ಕೆಳಗೆ ಯಾವುದೋ ಹಾಲಿವುಡ್ ಸಿನೆಮಾ ! ಕಣ್ಣು ಮಿಟುಕಿಸುವಷ್ಟರಲ್ಲಿ ರಷ್ಯಾದ ರಾಜಕೀಯ ಬಂದುಹೋಗುತ್ತದೆ, ಮುಂದಿನ ಪುಟದಲ್ಲಿ ಒಂದು ಜೋಕು ಸಿಡಿಯುತ್ತದೆ ! ಅಲ್ಲಿಂದ ಯಾವುದೋ ಯೂರೋಪಿನ ಸಾಹಿತ್ಯಕ್ಕೆ ಜಂಪ್ ! , ಅದಾಯಿತು ಅನ್ನುವಾಗ ವೈಎನ್ಕೆ ಯಾವುದೋ ಕವಿತೆಯ ಬಗ್ಗೆ ಮಾತಾಡುತ್ತಿರುತ್ತಾರೆ , ಉಸಿರು ಬಿಡುವಷ್ಟರಲ್ಲಿ ದಡಕ್ಕನೆ ಯಾರೋ ಹೇಳಿದ witty quote ಒಂದು ಪ್ರತ್ಯಕ್ಷ ! ಅಷ್ಟರಲ್ಲಿ ಅದ್ಯಾರೋ ಒಬ್ಬ ವರ್ಣರಂಜಿತ ವ್ಯಕ್ತಿ ಬರುತ್ತಾನೆ! ಹೀಗೆ ಇಡೀ ಜಗತ್ತೇ ಒಂದು ಲೇಖನದಲ್ಲಿಯೇ ಬಂದು ಬಿಡುವ ವಿಚಿತ್ರ, ವಿಶಿಷ್ಟ ಶೈಲಿ ಇವರದು.

ಮೇಲಿನ ಇಬ್ಬರು ಕೊಟ್ಟದ್ದು ಸಾಕಾಗಲಿಲ್ಲ ಅಂತಾದರೆ ಮೂರನೇ ವಿಕಿಪೀಡಿಯಾವಾದ ಎಸ್ ದಿವಾಕರರ ಅಂಕಣಗಳಿಗೆ ಬರಬಹುದು! ಜಗತ್ತಿನ ಬೇರೆ ಬೇರೆ ಕಡೆ ಬಂದಿರುವ ಅದೆಷ್ಟೋ ವಿಷಯಗಳನ್ನು, ಪುಸ್ತಕಗಳನ್ನು ನುಂಗಿ ನೀರು ಕುಡಿದಿರುವ ಎಸ್ ದಿವಾಕರರಂತವರು ಸಿಕ್ಕಿರುವುದು ನಮ್ಮ ಪಾಲಿಗೆ ಲಾಟರಿಯೇ. ಅವರದ್ದು ಗಾಂಧೀ ಬಜಾರಿನ ವೆಂಕಟೇಶ್ವರ ಸ್ವೀಟ್ ಸ್ಟಾಲಿನ ಹಾಗೆ ಬಗೆ ಬಗೆಯ ಖಾದ್ಯಗಳ ಸಂಗ್ರಹ.

ನಾಗೇಶ ಹೆಗಡೆಯವರ ಕೆಲಸವೂ ಅಪಾರ. ಕನ್ನಡದ ವಿಜ್ಞಾನದ ಬರೆವಣಿಗೆಯು ಬೆಳ್ಳಾವೆ ವೆಂಕಟನಾರಾಣಪ್ಪನವರಿಂದ ಹಾಲುಂಡು , ಜಿಟಿ ನಾರಾಯಣರಾಯರು, ಅಡ್ಯನಡ್ಕ ಕೃಷ್ಣ ಭಟ್ಟರು,ತೇಜಸ್ವಿ, ಸ್ವಾಮಿ, ಕೃಷ್ಣಾನಂದ ಕಾಮತ್ ಇವರೆಲ್ಲರ ಪೋಷಣೆಯಲ್ಲಿ ಬೆಳೆದ ಶಿಶು. ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳ ವಿಜ್ಞಾನ ವಿಷಯವಾಗಿ ಸೊಗಸಾಗಿ ಬರೆದು ಆ ಶಿಶುವನ್ನು ಒಬ್ಬ ದಷ್ಟ ಪುಷ್ಟ ಮಧ್ಯವಯಸ್ಕನನ್ನಾಗಿಸಿದ ಶ್ರೇಯಸ್ಸು ನಾಗೇಶರಿಗೆ ಸಲ್ಲಬೇಕು. ಚಂದದ, ಆಕರ್ಷಕ ಶೈಲಿ ಇಲ್ಲದಿದ್ದರೆ ಅವರ ಲೇಖನಗಳು ಇಷ್ಟು ಕಾಲ ಬಾಳಿಕೆ ಬರುತ್ತಿರಲಿಲ್ಲ.

ನಮ್ಮ ಈ ಲೇಖನದ ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿಯ ಕೊನೆಯ ಸದಸ್ಯರು ಶ್ರೀವತ್ಸ ಜೋಶಿ. ನಮ್ಮ ಯಕ್ಷಗಾನ ಅರ್ಥವಾದಿ, ಸರಸ ಭಾಷಣಕಾರ, ವಿದ್ವಾಂಸ, ವಿಮರ್ಶಕರಾಗಿರುವ ಪ್ರಭಾಕರ ಜೋಶಿ ಒಂದು ಘಟನೆ ಹೇಳಿದ್ದರು : ರಂಜನೀಯವಾಗಿ ಮಾತಾಡುವುದಕ್ಕೆ ಹೆಸರಾದ ಅವರು ಸಾವಿರಾರು ಭಾಷಣಗಳನ್ನು ಮಾಡಿದವರು. ಒಮ್ಮೆ ಅವರನ್ನೊಬ್ಬರು ಭಾಷಣಕ್ಕೆ ಬರಬೇಕು ಅಂತ ಕೇಳಿಕೊಂಡರಂತೆ. ಯಾವ ವಿಷಯ ಮಾತಾಡಬೇಕು ಅಂತ ಇವರು ಕೇಳಿದರು. ಅಲ್ಲಿಂದ ಪಟಕ್ಕನೆ ತುಳುವಿನಲ್ಲಿ ಉತ್ತರ ಬಂತು : ಈರೆಗ್ ವಿಷಯ ದಾಯೆ (ನಿಮಗೆ ವಿಷಯ ಯಾಕೆ )?! ಅಂದರೆ ಜೋಶಿಯವರು ಯಾವ ವಿಷಯ ಕೊಟ್ಟರೂ ಮಾತಾಡಬಲ್ಲರು ಅನ್ನುವುದು ಅವರು ಉದ್ದೇಶಿಸಿದ ಅರ್ಥ. "ನನಗೆ ವಿಷಯ ಯಾಕೆ ? ನಾನು ವಿಷಯವೇ ಇಲ್ಲದೆ ಗಂಟೆಗಟ್ಟಲೆ ಮಾತಾಡುವವನು" ಅಂತ ಜೋಶಿಯವರು ಅದಕ್ಕೆ ಮಾಡಿದ ತಮಾಷೆಯ ಅರ್ಥ. ಶ್ರೀವತ್ಸ ಜೋಶಿಯವರನ್ನೂ ಹೀಗೆ "ಈರೆಗ್ ವಿಷಯ ದಾಯೆ ? ನಿಮಗೆ ವಿಷಯ ಯಾಕೆ?" ಅಂತ ಕೇಳಬಹುದು. ಇದೊಂದು ವಿಷಯವೇ ಅಲ್ಲ ಅನ್ನಿಸಬಹುದಾದ ವಸ್ತುವಾದರೂ ಇವರ ಪೆನ್ನಿಗೆ ಸಿಕ್ಕಿದರೆ ಚಿನ್ನದ ಲೇಪನ ಕೊಟ್ಟ ವಸ್ತುವಿನಂತೆ ಸ್ವಾರಸ್ಯಕರವಾಗಿ ಮಿರುಗುತ್ತದೆ ಅಂತ ಇವರನ್ನು ಹೊಗಳಿ ಪೆನ್ನ ಶೂಲಕ್ಕೇರಿಸಬಹುದು ! ಇವರ ಒಂದು ಲೇಖನವನ್ನೋದಿ ಒಬ್ಬರು "bullshit" ಅಂತ ಹೇಳಿದ್ದರಂತೆ, ಇವರು ಬಿಡಬೇಕಲ್ಲ , bullshit ಅಂದರೆ ಏನು ಎತ್ತ ಅಂತ ರಿಸರ್ಚ್ ಮಾಡಿ ಮುಂದಿನ ವಾರ ಅದರ ಬಗ್ಗೆಯೇ ಅಂಕಣ ಬರೆದರಂತೆ. ಹೀಗೆ ಉಳಿದವರು ಹೆಕ್ಕಿಕೊಳ್ಳದ ವಿಷಯಗಳನ್ನು ಎತ್ತಿಕೊಂಡು ರುಚಿಕಟ್ಟಾಗಿ ಬರೆಯುವುದರಲ್ಲಿ ಜೋಶಿಯವರು ಪಿ ಎಚ್ಡಿ ಮಾಡಿದ್ದಾರೆ. ವಿಜ್ಞಾನ, ಗಣಿತ, ಭಾಷೆ , ಸಾಹಿತ್ಯಗಳಿಂದ bullshit ಇನ ವರೆಗೆ ಎಷ್ಟೆಲ್ಲ ವಿಷಯಗಳು ಇವರ ಅಂಕಣಗಳಲ್ಲಿ ಬಂದಿದೆ.

ಕಪಾಟು

ಪುಸ್ತಕಪ್ರೇಮಿ ಪ್ರಶಾಂತ ಭಟ್ಟರು ತಮ್ಮ ಪುಸ್ತಕದ ಕಪಾಟಿನ ಫೋಟೋ ಹಾಕಿದ್ದನ್ನು ನೋಡಿ, ಮೂರ್ತಿ ದೇರಾಜೆಯವರು ಹಂಚಿಕೊಂಡ ಕತೆ, ಅವರದೇ ವಾಕ್ಯಗಳಲ್ಲಿ :
ನಮ್ಮ ಲೈನ್ ಕಜೆ ರಾಮಚಂದ್ರರ ತಂದೆಯವರು ..
ಒಮ್ಮೆ ಮಂಗಳೂರಿನ ಕಪಾಟು ಅಂಗಡಿಗೆ ಹೋಗಿ ..
ಇದಕ್ಕೆಷ್ಟು... ಇದಕ್ಕೆಷ್ಟು ಅಂತ ...
ಒಂದರ್ದ ಗಂಟೆ ವಿಚಾರಿಸಿದರಂತೆ ...
ಅಂಗಡಿಯವನಿಗೆ ಸ್ವಲ್ಪ ಅಂದಾಜಾಯ್ತು ..
ಈ ಜನ ತೆಕ್ಕೊಳ್ಳುವ ಗಿರಾಕಿ ಅಲ್ಲ ...
ಅವರ ಡ್ರೆಸ್ಸೂ ಹಾಗೇ ಇತ್ತು ..
ಹಳ್ಳಿಯ ಕೃಷಿಕರಲ್ವಾ ...
...ಓ ಇದಕ್ಕೆಷ್ಟು ಅಂತ ಮತ್ತೊಮ್ಮೆ ಕೇಳಿದಾಗ ...
"ಅದೆಲ್ಲಾ ನಿಮಗೆ ಆಗ್ಲಿಕ್ಕಿಲ್ಲ ಭಟ್ರೆ .. ಕಾಸ್ಟ್ಲಿ ... !!
ನೀವು ಗುಜ್ರಿ ಡಬ್ಬಿ ಅಂಗಡಿಗೆ ಹೋದ್ರೆ ಸಿಕ್ಕೀತು..." ಅಂತ
ಡೋಂಗಿ ಮಾಡಿದ ...
ಇವರು ಕೂಲಾಗಿ ... "ಕಾಸ್ಟ್ಲಿಯೋ...??
ನಿಮ್ಮ ಅಂಗಡಿಯಲ್ಲಿರುವ
ಎಲ್ಲಾ ಕಪಾಟುಗಳಿಗೆ ಒಟ್ಟು ಎಷ್ಟಾಗ್ತದೆ ...?"
ಅಂತ ಕೇಳಿದರು. ...... ಅಂವ ಎಷ್ಟೋ ಹೇಳಿದ ..
"ಎಲ್ಲವನ್ನೂ ಪ್ಯಾಕ್ ಮಾಡ್ಸಿ ..
ವೆಂಕಟ್ರಮಣ ಸರ್ವೀಸು ಲೋರಿಗೆ ... ಹಾಕಿ..."
ಅಂತ ಅಂವ ಹೇಳಿದಷ್ಟು ದುಡ್ಡು ಕೊಟ್ಟು ..
ಇವರು ಮೋಹಿನಿ ವಿಲಾಸಕ್ಕೆ ಹೋದರಂತೆ .

ಧರ್ಮ ಮತ್ತು ರಾಜಕಾರಣ

 ಜೋಗಿಯವರು ಪುತಿನ ಅವರ ಬಗ್ಗೆ ಬರೆಯುತ್ತಾ, ಅವರೊಬ್ಬ ಕಟ್ಟುನಿಟ್ಟಿನ, ಶ್ರದ್ಧಾಭಕ್ತಿಗಳಿಂದ ನೋಡಬೇಕಾದ, ಆಚಾರವಂತರು, ಮಡಿವಂತರು ಎಂಬಿತ್ಯಾದಿ ಮಿಥ್ ಗಳು/ಮೂಢನಂಬಿಕೆಗಳು ಚಾಲ್ತಿಯಲ್ಲಿದ್ದವು ಅಂತ ಬರೆದದ್ದನ್ನು ಓದಿದಾಗ ಹಲವು ವಿಷಯಗಳು ನೆನಪಾದವು.

ಬಾಬ್ರಿ ಮಸೀದಿ ಗಲಾಟೆಯಾದಾಗ, ಪ್ರತಿಭಟನೆ ಮಾಡಲಿಕ್ಕೆ ಸಾಹಿತಿಗಳೆಲ್ಲ ಟೌನ್ ಹಾಲಿನ ಹತ್ತಿರಕ್ಕೆ ಬರಬೇಕು ಅಂತ ಕರೆಕೊಡಲಾಗಿತ್ತಂತೆ. ಸಮಯಕ್ಕೆ ಸರಿಯಾಗಿ ಮತ್ತು ಎಲ್ಲರಿಗಿಂತ ಮೊದಲು ಬಂದದ್ದು ಪರಮ ದೈವಭಕ್ತರೂ, ಸನಾತನಿಗಳೂ ಆಗಿದ್ದ ಪು. ತಿ. ನರಸಿಂಹಾಚಾರ್ಯರು ! ಅದೂ ಎಂದಿನಂತೆ ತಮ್ಮ ಟೊಪ್ಪಿ,ಇಷ್ಟುದ್ದದ ನಾಮ, ಜುಟ್ಟು ಇತ್ಯಾದಿಗಳ ಜೊತೆಗೆ !
ಹಾಗೆಯೇ ಕ್ರೈಸ್ತ ಧರ್ಮದ ಗ್ರಂಥಗಳನ್ನು ಬಹುಶಃ ಹೀಬ್ರೂ ಭಾಷೆಯಲ್ಲಿಯೇ ಓದಿ, ಏಸು ಕ್ರಿಸ್ತನ ಬಗ್ಗೆ ಗೊಲ್ಗೊಥಾ ಎಂಬ ಖಂಡ ಕಾವ್ಯವನ್ನು ಬರೆದದ್ದು ಬಲಪಂಥೀಯರೂ, ಸನಾತನಿಗಳೂ ಆಗಿದ್ದ ಪಂಡಿತ ಶ್ರೇಷ್ಠ ಮಂಜೇಶ್ವರ ಗೋವಿಂದ ಪೈಗಳು, ಪಾಳಿ ಮತ್ತು ಪ್ರಾಕೃತ ಭಾಷೆಗಳನ್ನು ಕಲಿತು ಬೌದ್ಧ ಮತ್ತು ಜೈನ ಧರ್ಮಗಳ ಬಗ್ಗೆ ಸಾಕಷ್ಟು ಬರೆದದ್ದು ಜಿಪಿ ರಾಜರತ್ನಂ ಅಯ್ಯಂಗಾರ್.

ಇನ್ನು ಹಿಂದೂ ರಾಷ್ಟ್ರ ಕಟ್ಟಿ ಅಂದಿದ್ದ ಸಾವರ್ಕರರು ಒಬ್ಬ ನಾಸ್ತಿಕರು, ಮುಸ್ಲಿಂ ರಾಷ್ಟ್ರ ಕಟ್ಟ ಹೊರಟ ಜಿನ್ನಾ ಒಬ್ಬ ಶ್ರದ್ದಾವಂತ ಮುಸ್ಲಿಮರಾಗಿರಲಿಲ್ಲ, ಅಡ್ವಾಣಿಯವರು ಒಬ್ಬ agnostic ಅಂತ ಕೇಳಿದ್ದೇನೆ, ಸುಬ್ರಮಣ್ಯಂ ಸ್ವಾಮಿಯವರ ಹೆಂಡತಿ ಒಬ್ಬ ಪಾರ್ಸಿ, ಅಳಿಯ ಒಬ್ಬ ಮುಸಲ್ಮಾನ.

ಬಪ್ಪನಾಡು ದುರ್ಗಾಪರಮೇಶ್ವರಿ ದೇವಳವನ್ನು ಕಟ್ಟಿದ್ದು ಬಪ್ಪ ಬ್ಯಾರಿ ಎಂಬ ಶ್ರದ್ದಾವಂತ ಮುಸ್ಲಿಮನೊಬ್ಬ. ಕಾರ್ಪೋರೇಶನ್ ಬ್ಯಾಂಕಿನ ಸ್ಥಾಪಕರಾದ ಹಾಜಿ ಅಬ್ದುಲ್ಲಾ ಸಾಹೇಬರು function ಮಾಡಿದರೆ ಹಿಂದೂಗಳಿಗೆ , ಅವರ ಸಂಪ್ರದಾಯದಂತೆ ಹಂತಿ ಹಾಕಿಸಿ, ಬಾಳೆ ಎಲೆಯಲ್ಲಿ ಶಾಕಾಹಾರಿ ಭೋಜನ ಮಾಡಿಸಿ, ಊಟ ದಕ್ಷಿಣೆಯನ್ನೂ ಕೊಡುತ್ತಿದ್ದರಂತೆ ! ಬೊಳುವಾರು ಮಹಮದ್ ಕುಂಞ್ ಅವರಿಗೆ ಒಂದೊಮ್ಮೆ ಅವರು ಮುಸ್ಲಿಮರು ಅನ್ನುವ ಕಾರಣಕ್ಕೆ ಸುಲಭಕ್ಕೆ ಮನೆ ಸಿಗದೇ ಹೋದಾಗ, ಒಂದು ಫೋನ್ ಮಾಡಿ ಮನೆ ಕೊಡಿಸಿದ್ದು ವೈದಿಕರೂ ಸನಾತನಿಗಳೂ ಆದ ಬನ್ನಂಜೆ ಗೋವಿಂದಾಚಾರ್ಯರು.

ಧರ್ಮವೇ ಬೇರೆ , ಧರ್ಮದ ಹೆಸರಿನಲ್ಲಿ ನಡೆಯುವ ರಾಜಕಾರಣವೇ ಬೇರೆ.

ಪ್ರಭುಶಂಕರ ಇನ್ನಿಲ್ಲ

ಸಭೆಯಲ್ಲಿದ್ದಾಗ ಪಂಚೆ ಜಾರಿದರೆ , ಕೈಯು ಕೂಡಲೇ ಅದರ ಸಹಾಯಕ್ಕೆ ಬರುತ್ತದೆ, ಪಂಚೆಯು ಸಹಾಯಕ್ಕಾಗಿ ಕೂಗಿಕೊಳ್ಳಲಿ ಅಂತ ಕೈ ಕಾಯುವುದಿಲ್ಲ. ಒಳ್ಳೆಯ ಸ್ನೇಹಿತರು ಹಾಗಿರಬೇಕು ಅಂತ ಪ್ರಭುಶಂಕರರು ಒಂದು ಸಲ ಹೇಳಿದ್ದರು . ಸ್ವತಃ ಅವರೇ ಹಾಗಿದ್ದರು ಅಂತ ಬಲ್ಲವರು ಹೇಳುತ್ತಾರೆ. ಉದ್ಯೋಗಕ್ಕೆ ತೆಗೆದುಕೊಳ್ಳುವಾಗ ಸಂದರ್ಶನಗಳಲ್ಲಿ ನಿಮ್ಮ ವೀಕ್ನೆಸ್ ಏನು ಅಂತೊಂದು ಪ್ರಶ್ನೆ ಬಂದರೆ, "I am too much of a perfectionist" ಅಂತೇನಾದರೂ ಹೇಳಿ ಜಾರಿಕೊಳ್ಳುವುದು ರೂಢಿ . ಪ್ರಭುಶಂಕರರ ಬಗ್ಗೆ ಕೇಳಿದರೆ, "ಒಬ್ಬರು ಕೇಳಿದರೆ ಸಾಲ ಮಾಡಿಯಾದರೂ ಕೊಡುವಷ್ಟು ಉದಾರಿ", "ತಾನು ಕಷ್ಟಕ್ಕೆ ಸಿಕ್ಕಿಕೊಂಡಾದರೂ ಇತರರಿಗೆ ಒಳ್ಳೆಯದು ಮಾಡುವ ಪರೋಪಕಾರಿ" ಅಂತೆಲ್ಲ ಅವರ weaknessಗಳನ್ನು ಹೇಳಬಹುದು ಅಂತ ಅವರ ಜೊತೆ ಒಡನಾಡಿದವರು ಹೇಳುತ್ತಾರೆ.

ಅರಾ ಮಿತ್ರರಂತೂ "ನಮ್ ಗುರುಗಳು ಪ್ರಭುಶಂಕರರು ಹಾಗ್ ಹೇಳಿದ್ರು, ಹೀಗ್ ಹೇಳಿದ್ರು" ಅಂತೆಲ್ಲ ಇವರ ಬಗ್ಗೆ ಭಾಷಣಗಳಲ್ಲಿ ಹೇಳುತ್ತಲೇ ಇರುತ್ತಾರೆ. ಕುವೆಂಪು ಅವರ ಪ್ರಿಯ ಶಿಷ್ಯರಾಗಿ, ದೊಡ್ಡ ಅಭಿಮಾನಿಯಾಗಿ ಅವರಿಗೆ ನೊಬೆಲ್ ಸಿಕ್ಕಬೇಕೆಂದು ಇವರು ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದರಂತೆ . ಇವರ "ಕನ್ನಡದಲ್ಲಿ ಭಾವಗೀತೆ" ಎಂಬ ಮಹಾಪ್ರಬಂಧವು ಸಂಗ್ರಹಯೋಗ್ಯವಾದ ಕೃತಿ, ಇದರಲ್ಲಿ ವಿದ್ವತ್ತೆಯೂ, ಲಲಿತಪ್ರಭಂಧಕಾರನ ಸುಲಲಿತ ಶೈಲಿಯೂ ಮೇಳೈಸಿದೆ. "ಅಮೆರಿಕದಲ್ಲಿ ನಾನು, ಶಾಂತಿ‌" ಎಂಬ ಪ್ರವಾಸಕಥನ, ಭಾರತೀಯ ತತ್ತ್ವಶಾಸ್ತ್ರದ ಬಗೆಗಿನ ಆಚಾರ್ಯ ಕೃತಿ ಎನ್ನಿಸಿರುವ ಹಿರಿಯಣ್ಣನವರ The Outlines of Indian Philosophyಯ ಅನುವಾದ, ಸಾಹಿತ್ಯ ಮತ್ತು ಆಧುನಿಕತೆ ಎಂಬ ವಿಮರ್ಶನ ಪುಸ್ತಕ ,ಜನಮನ ಎಂಬ ವ್ಯಕ್ತಿಚಿತ್ರಗಳ ಸಂಗ್ರಹ ಇವನ್ನೂ ಓದಿನೋಡಿ. ಬಸವಣ್ಣನವರ ಬಗ್ಗೆ ಇವರು ಬರೆದಿರುವ ಬೆರಗು ಚೆನ್ನಾಗಿದೆಯೆಂದು ಗೆಳೆಯ ಪ್ರಶಾಂತ್ ಭಟ್ ಬರೆದಿದ್ದಾರೆ. ತೀನಂಶ್ರೀ, ಮೂರ್ತಿರಾವ್, ಅರಾ ಮಿತ್ರ, ಪಾವೆಂ ಇವರುಗಳಂತೆ ಒಳ್ಳೆಯ ಹಾಸ್ಯಪ್ರಜ್ಞೆಯೂ ಪಾಂಡಿತ್ಯವೂ ಒಟ್ಟಿಗೇ ಇದ್ದ ಕೆಲವೇ ಜನರಲ್ಲಿ ಇವರೂ ಒಬ್ಬರು. ಈ ಸಜ್ಜನರಿಗೆ ನನ್ನ ನಮನಗಳು.

ಪ್ರಭುಶಂಕರ ಇನ್ನಿಲ್ಲ

ಪಂಪನ ಸಂಸ್ಕೃತಪ್ರೀತಿ

ಪಂಪನ ಸಂಸ್ಕೃತಭೂಯಿಷ್ಠ ಭಾಷೆಯ ಬಗ್ಗೆ ಅರಾ ಮಿತ್ರ ಅವರು ಮಾಡಿದ ತಮಾಷೆ :

ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಲಿ/ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯ /ಎದ್ದೊಂದು ಗಳಿಗೇಲಿ ನೆನದೇನ
ಇದನ್ನು ಆದಿಕವಿ ಪಂಪ ಬರೆದಿದ್ದರೆ ಹೇಗಿರುತ್ತಿತ್ತು ? ಹೀಗೆ :
ಪ್ರಾತಃ ಕಾಲದೊಳ್ ಉತ್ತಿಷ್ಠನಪ್ಪಂದು ನಾನಾರಾರಂ ಸಂಸ್ಮರಿಸಲಿ ಪೇಳ್ ತಿಲ ಜೀರಾಧ್ಯಂಗಳ ಬೆಳೆವ ವಸುಂಧರೆಯಂ ನಾಮ್ ನೆನೆವೆಂ

ಹೆಸರಲ್ಲೇನಿಲ್ಲ ?

ಹೆಸರಲ್ಲೇನಿಲ್ಲ ? ಸೃಷ್ಟಿ ಏನು, ಯಾರೂ ಮಾಡಬಹುದು. ಆದರೆ ಹೆಸರಿಡುವುದು ಮಾತ್ರ ಬಹು ದೊಡ್ಡ ಕೆಲಸ. 300 ಪುಟಗಳ ಪುಸ್ತಕವೊಂದನ್ನು ಮೂರೇ ರಾತ್ರಿಗಳಲ್ಲಿ ಬರೆದು ಮುಗಿಸಿದ ಸ್ಪೂರ್ತಿಯ ಮೂರ್ತಿಯೊಬ್ಬರು, ಆ ಗ್ರಂಥಕ್ಕೆ ಹೆಸರು ಹುಡುಕಲು ಮೂರು ತಿಂಗಳು ತಿಣಿಕಿ, ಕಡೆಗೆ "ಮೂರುನೂರು ಪುಟಗಳು" ಎಂದೇ ಹೆಸರಿಕ್ಕಿದರಂತೆ, ರೈಲ್ವೆ ಗೈಡಿನಂತಹ ತಮ್ಮ ಹಿರಿ ಹೊತ್ತಗೆಗೆ --> ಬೀಚಿ

ಒಳ್ಳೆ ಶೀರ್ಷಿಕೆ ಕೊಡುವುದು ಶೀರ್ಷಾಸನ ಮಾಡಿದ್ದಕ್ಕಿಂತಲೂ ಕಷ್ಟವೇ ಅಂತ ಹೆಸರಿಡಲು ಹೋದವರಿಗೆಲ್ಲ ಗೊತ್ತಿದೆ, ಹೀಗಿರುವಾಗ ಒಂದಷ್ಟು ಒಳ್ಳೊಳ್ಳೆ ಶೀರ್ಷಿಕೆಗಳಿರುವ ಪುಸ್ತಕಗಳ ಪಟ್ಟಿ ಮಾಡಿದರೆ ಹೇಗೆ ಅಂತ ಕಂಡು ಪಕ್ಕನೆ ತಲೆಗೆ ಬಂದಷ್ಟನ್ನು ಕೊಟ್ಟಿದ್ದೇನೆ. ಕೆಲವು ಯೋಚನೆಗೆ ಹಚ್ಚುವಂತವು , ಕೆಲವು ಪದಗಳ ಜೊತೆ ಆಟ ಆಡುವ, ಚಮತ್ಕಾರದವು, pun ಮಾಡುವವು, ತಮಾಷೆಯವು , ಕೆಲವು ಧ್ವನಿಪೂರ್ಣವಾದವು,ಅರ್ಥಪೂರ್ಣವಾದವು, ಕೆಲವು ಚಂದದ ಪದಸಂಯೋಜನೆಯಿಂದ ನಳನಳಿಸುವವು:
ಬೀಚಿಯವರಿಂದಲೇ ಶುರು ಮಾಡೋಣ: ಹುಲಿಯ ಬೆನ್ನ ಮೇಲಿಂದ (ಇದರ ಅರ್ಥ ಏನು ಅಂತ ಯೋಚಿಸಿನೋಡಿ!), ಭಯಾಗ್ರಫಿ (ಇದನ್ನು ಅಣಕಿಸಿ ರಾಜರತ್ನಂ ನಿರ್ಭಯಾಗ್ರಫಿ ಅಂತ ಒಂದನ್ನೂ ಬರೆದರು)
ಸೇಡಿಯಾಪು ಕೃಷ್ಣಭಟ್ಟರ 'ವಿಚಾರ ಪ್ರಪಂಚ' ಎಂಬುದು ಮಾಮೂಲಿ ಹೆಸರಾದರೂ ಅದರ ಹಿನ್ನೆಲೆಯಲ್ಲಿ ವಿಶೇಷ ಉಂಟು. ಈ ಕೃತಿಗೆ ಪಕ್ವಾಪಕ್ವ ಎಂಬ ಹೆಸರು ಇಡುವ ಯೋಚನೆ ಮಾಡಿದ್ದರಂತೆ, ಪಕ್ವತೆ ಅಪಕ್ವತೆಯನ್ನು ನಿರ್ಧರಿಸಬೇಕಾದ ವಾಚಕರ ಸ್ವಾತಂತ್ರ್ಯವನ್ನು ಅವಗಣಿಸಬಾರದೆಂದು ಅದನ್ನು ಕೈಬಿಟ್ಟರಂತೆ,ಆಮೇಲೆ ಬಹುಮುಖಿ, ವಿಚಾರ ಪಂಚಾನನ,ವಿಚಾರ ಪಂಚಮುಖ, ವಿಚಾರ ಪಂಚರಂಗ ಎಂಬೆಲ್ಲ ಹೆಸರುಗಳು ಕೊಡಬಹುದಾದ ಅರ್ಥದ ಬಗ್ಗೆ ಚಿಂತಿಸಿ, 'ವಿಚಾರ' ಮತ್ತು 'ಪ್ರಪಂಚ' ಎಂಬೆರಡು ಶಬ್ದಗಳಿಗೆ ಆಪ್ಟೆ ನಿಘಂಟಿನಲ್ಲಿ ಇರುವ ಎಲ್ಲ ಅರ್ಥಗಳನ್ನೂ ನೋಡಿ, ಹೊರಡಬಹುದಾದ ಎಲ್ಲ ಅರ್ಥಗಳನ್ನೂ ವಿಮರ್ಶಿಸಿ ಕಡೆಗೆ "ವಿಚಾರ ಪ್ರಪಂಚ"ವನ್ನೇ ಗಟ್ಟಿ ಮಾಡಿದರಂತೆ.

ಎಚ್.ಎಸ್.ವೆಂಕಟೇಶಮೂರ್ತಿಯವರ ಕೆಲವು ನೋಡಿ: ಬಾಗಿಲು ಬಡಿವ ಜನಗಳು, ಅಮೆರಿಕದಲ್ಲಿ ಬಿಲ್ಲುಹಬ್ಬ,ಭೂಮಿಯೂ ಒಂದು ಆಕಾಶ, 'ಆಕಾಶದ ಹಕ್ಕು,ಎಚ್ಚೆಸ್ವಿ ಅನಾತ್ಮ ಕಥನ . ಎ. ಕೆ. ರಾಮಾನುಜನ್ ಅವರ ಮತ್ತೊಬ್ಬನ ಆತ್ಮಚರಿತ್ರೆಯೂ ಮಜವಾಗಿದೆ,ಹೊಕ್ಕುಳಲ್ಲಿ ಹೂವಿಲ್ಲವೂ ಕುತೂಹಲ ಹುಟ್ಟಿಸುವ ಶೀರ್ಷಿಕೆ. ಕೆ ಎಸ್ ನ ಪದ್ಯಗಳ ಬಗ್ಗೆ ಬರೆದ ಪುಸ್ತಕಕ್ಕೆ ನರಹಳ್ಳಿ ಬಾಲಸುಬ್ರಮಣ್ಯ "ಇಹದ ಪರಿಮಳದ ಹಾದಿ" ಅಂತ ಸೊಗಸಾದ ಹೆಸರಿಟ್ಟಿದ್ದಾರೆ. ಅಗ್ನಿಹಂಸ , ಚಂದ್ರಮಂಚಕೆ ಬಾ ಚಕೋರಿ, ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ , ರಸೋ ವೈ ಸಃ ತರದ ವಿಶಿಷ್ಟ ಶೀರ್ಷಿಕೆಗಳಿಂದ ಕುವೆಂಪು ಗಮನ ಸೆಳೆಯುತ್ತಾರೆ.

ಶಿವರಾಮ ಕಾರಂತರು, 'ಅದೇ ಊರು, ಅದೇ ಮರ', ಆಳ, ನಿರಾಳ, ಔದಾರ್ಯದ ಉರುಳಲ್ಲಿ, ನಂಬಿದವರ ನಾಕ, ನರಕ ಮುಂತಾದ ಆಕರ್ಷಕ ಶಿರೋನಾಮೆಗಳ ಜೊತೆಗೆ ಪದಗಳ ಜೊತೆ ಆಡುವ, "ಅಪೂರ್ವ ಪಶ್ಚಿಮ", ಪೂರ್ವದಿಂದ ಅತ್ಯಪೂರ್ವಕ್ಕೆ, "ಜಗದೋದ್ಧಾರ ನಾ" ಇಂತವನ್ನೂ ಕಟ್ಟಿದ್ದಾರೆ. ಕಾರಂತರ ಬೆಟ್ಟದ ಜೀವ , ಆಳಿದ ಮೇಲೆ, ಚಿತ್ತಾಲರ ಶಿಕಾರಿ ಇವುಗಳಲ್ಲಿ ವಿಶೇಷ ಏನೂ ಇಲ್ಲದಿದ್ದರೂ, ಇಡೀ ಕಾದಂಬರಿಯ ಸಾರವನ್ನು ಒಂದೋ ಎರಡೋ ಪದಗಳಲ್ಲಿ ಹಿಡಿದಿಟ್ಟಿದ್ದಾರೆ ಅನ್ನಿಸುವ ಅರ್ಥಪೂರ್ಣ ಶೀರ್ಷಿಕೆಗಳು ಇವು. ರಾವ್ ಬಹದ್ದೂರರರ ಗ್ರಾಮಾಯಣ ಪದಕ್ರೀಡೆಯಿಂದ ಮಿಂಚಿದರೆ ಅನಂತಮೂರ್ತಿಯವರ ಸಂಸ್ಕಾರ ಅರ್ಥಬಾಹುಳ್ಯದಿಂದ ಮಿರುಗುತ್ತದೆ(ಸಂಸ್ಕಾರವಂತ ಅಂದರೆ ಉತ್ತಮ ನಡತೆ ಉಳ್ಳವನು,well mannered. ನಮ್ಮಲ್ಲಿ ಷೋಡಶ ಸಂಸ್ಕಾರಗಳು ಅಂತ ಇವೆ, ಅವುಗಳಲ್ಲಿ ಅಂತ್ಯಕ್ರಿಯೆ ಅಥವಾ ಅಂತ್ಯಸಂಸ್ಕಾರವೂ ಒಂದು, ಸಂಸ್ಕಾರ ಮಾಡುವುದು ಅಂದರೆ purify ಮಾಡುವುದು ಅಂತಲೂ ಆಗುತ್ತದೆ, ಕಾದಂಬರಿಯಲ್ಲಿ ಈ ಎಲ್ಲ ಆಯಾಮಗಳೂ ಬರುತ್ತವೆ). ವಿದ್ವಾಂಸ ಎಸ್ ವಿ ರಂಗಣ್ಣ ಬರೆದಿರುವ, ಕಾಳಿದಾಸ, ಮುದ್ದಣ ಇವರಿಗೆಲ್ಲ ಸಿಕ್ಕಿದ ಪ್ರಶಂಸೆ ಹೆಚ್ಚಾಯಿತು ಅಂತ ಹೇಳಿರುವ ಪುಸ್ತಕವನ್ನು ಹೊನ್ನಶೂಲ ಅಂತ ಕರೆದಿರುವುದು ಉಚಿತವಾಗಿದೆ.

ರವಿ ಬೆಳಗೆರೆ ಮತ್ತು ಜೋಗಿ ಬರೆಹಗಳಿರುವ ಪುಸ್ತಕದ ಹೆಸರು: ರವಿ ಕಂಡದ್ದು/ ರವಿ ಕಾಣದ್ದು. ಜೋಗಿಯವರ ಅಂಕಣ ಗಾಳಿಯಾಟ ಇನ್ನೊಂದು ಆಕರ್ಷಕ ಹೆಸರು (ಪಂಜೆಯವರ ತೆಂಕಣ ಗಾಳಿಯಾಟ ಪದ್ಯದ ರೆಫರೆನ್ಸ್). ರವಿ ಬೆಳಗೆರೆಯ ಹೇಳಿ ಹೋಗು ಕಾರಣ,ಲವ್ ಲವಿಕೆಗಳೂ ಚೆನ್ನಾಗಿವೆ. ಅಮೆರಿಕಾದಲ್ಲಿ ಗೊರೂರು ಅಂದರೆ ರಾಮಸ್ವಾಮಿ ಅಯ್ಯಂಗಾರ್ ಇನ್ ಅಮೆರಿಕಾ ಅಂತಲೂ ಆಗುತ್ತದೆ, ಅವರು ಅಮೆರಿಕಾದಲ್ಲೂ ಗೊರೂರನ್ನು ಹುಡುಕಿದರು/ಕಂಡರು ಅಂತಾಗುತ್ತದೆ. ವಸುಧೇಂದ್ರರ ಹಂಪಿ ಎಕ್ಸ್ ಪ್ರೆಸ್ ಅನ್ನುವುದು ಕಥೆಯೊಂದರಲ್ಲಿ ಬರುವ, ಬಳ್ಳಾರಿಯ ಕಡೆಗೆ ಹೋಗುವ ರೈಲಿನ ಹೆಸರಾದರೂ, ಪುಸ್ತಕವೂ ಆ ರೈಲಿನ ಹಾಗೆ ನಮ್ಮನ್ನು ಆ ಸೀಮೆಗೆ ಒಯ್ಯುತ್ತದೆ ಅಂತ ಅರ್ಥ ಮಾಡಬಹುದು.

ಮತ್ತಷ್ಟು ಚಂದದ ಹೆಸರುಗಳು :
ಬೊಗಸೆಯಲ್ಲಿ ಮಳೆ(ಜಯಂತ ಕಾಯ್ಕಿಣಿ) , ವಾಲ್ಮೀಕಿ ತೂಕಡಿಸಿದಾಗ(ಗೌರೀಶ ಕಾಯ್ಕಿಣಿ)
ವಿಚಿತ್ರಾನ್ನ --> ಶ್ರೀವತ್ಸ ಜೋಶಿ
ಯಾರ ಜಪ್ತಿಗೂ ಸಿಗದ ನವಿಲುಗಳು - ದೇವನೂರ ಮಹಾದೇವರ ಬಗ್ಗೆ ಬಂದ ಪುಸ್ತಕಕ್ಕೆ ಅವರದೇ ಕಾದಂಬರಿಯ ಸಾಲಿನ ಶೀರ್ಷಿಕೆ, ಈ ಕಲ್ಪನೆ ಇಷ್ಟವಾಗಿ ನನ್ನ ಬ್ಲಾಗಿಗೂ ಅದೇ ಹೆಸರು ಇಟ್ಟಿದ್ದೇನೆ.
ಬೇಂದ್ರೆ ಸಾಲುಗಳ ಬಳಕೆ : ಎಚ್ ಎಸ್ ವಿ ಅವರ 'ನೂರು ಮರ, ನೂರು ಸ್ವರ', ಗೌರೀಶ ಕಾಯ್ಕಿಣಿಯವರ ಕಂಪಿನ ಕರೆ , ಡಿ ಆರ್ ನಾಗರಾಜರ ಅಮೃತ ಮತ್ತು ಗರುಡ (ಅಮೃತಕ್ಕೆ ಹಾರುವ ಗರುಡ ಎಂಬ ಸಾಲಿಗೆ ರೆಫರೆನ್ಸ್), ಕೀರ್ತಿನಾಥ ಕುರ್ತಕೋಟಿಯವರ ಭೃಂಗದ ಬೆನ್ನೇರಿ, ರಾ. ಶಿವರಾಂ (ರಾಶಿ) ಅವರ ಕೆಣಕೋಣು ಬಾ (ಕುಣಿಯೋಣು ಬಾರಾ ಪದ್ಯದ ಅಣಕ )
ಆಡಾಡತ ಆಯುಷ್ಯ - ಗಿರೀಶ ಕಾರ್ನಾಡರ ಆತ್ಮಕಥೆ
ಪರಮಾನಂದ (ಪಡುಕೋಣೆ ರಮಾನಂದರಾಯರ ಅಭಿನಂದನ ಗ್ರಂಥ, ಇವರ ಪುಸ್ತಕವೊಂದರ ಹೆಸರು : ಹುಚ್ಚು ಬೆಳದಿಂಗಳಿನ ಹೂಬಾಣಗಳು)
ನಿಸಾರ್ ಅಹಮದ್: ನಾನೆಂಬ ಪರಕೀಯ, ಸ್ವಯಂ ಸೇವೆಯ ಗಿಳಿಗಳು , ಮನಸು ಗಾಂಧಿ ಬಜಾರು
ಚಂಪಾದಕೀಯ (ಚಂಪಾ ಬರೆದ ಸಂಪಾದಕೀಯಗಳು)
ಟಿಪಿ ಕೈಲಾಸಂ - ಹೋಂರೂಲು, ಬಂಡ್ವಾಳಿಲ್ಲದ ಬಡಾಯಿ
ಸುಮಂಗಲಾ - ಕಾಲಿಟ್ಟಲ್ಲಿ ಕಾಲುದಾರಿ
ನಾ. ಮೊಗಸಾಲೆ ಅಭಿನಂದನ ಗ್ರಂಥ - ಅಯಸ್ಕಾಂತಾವರ (ಮೊಗಸಾಲೆಯವರು ಕಾಂತಾವರದಲ್ಲಿ ಕನ್ನಡಸಂಘ ಕಟ್ಟಿ, ಚಟುವಟಿಕೆಗಳನ್ನು ನಡೆಸಿದವರು)
ಹುಳಿ ಮಾವಿನ ಮರ - ಲಂಕೇಶರ ಆತ್ಮಚರಿತ್ರೆ
When You Look Like Your Passport Photo, It's Time to Go Home by Erma Bombeck
Hot, Flat, and Crowded by Thomas L. Friedman (ಜಾಗತೀಕರಣದಿಂದ ಜಗತ್ತೇ ಒಂದು ಊರಾಗಿರುವುದರ ಬಗ್ಗೆ )
Do Androids Dream of Electric Sheep? by Philip K. Dick (ಇದು Bladerunner ಎಂಬ ಹೆಸರಿನಲ್ಲಿ ಚಿತ್ರವಾಯಿತು)
America Again: Re-becoming the Greatness We Never Weren’t by Stephen Colbert
Dave Barry: The Taming of the Screw, Dave Barry Slept Here: A Sort of History of the United States
The God Particle: If the Universe Is the Answer, What Is the Question? by Leon M. Lederman, Dick Teresi
ಬಿ. ಜಿ. ಎಲ್. ಸ್ವಾಮಿ - ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ
ಅ.ರಾ.ಮಿತ್ರ: ಬಾಲ್ಕನಿಯ ಬಂಧುಗಳು , ನಾನೇಕೆ ಕೊರೆಯುತ್ತೇನೆ, ಛಂದೋಮಿತ್ರ(ಛಂದಸ್ಸನ್ನು ಮಿತ್ರನೊಬ್ಬ ತಮಾಷೆ ಮಾಡುತ್ತಾ ಹೇಳಿಕೊಟ್ಟಂತೆ ಹೇಳುವ ಕೃತಿ)
ನಾ. ಕಸ್ತೂರಿ - ಅನರ್ಥಕೋಶ, ಗೃಹದಾರಣ್ಯಕ
ಡುಂಡಿರಾಜರ - ಆಯದ ಕವನಗಳು, ಪಂಚ್-ಕ-ಜಾಯ್, ಹನಿಕೇತನ,ಅಕ್ಷತಾ-ಲಕ್ಷತಾ, ಕಾಯೋಕಲ್ಪ, ಡುಂಡಿಮ (ಜಿ ಎನ್ ಉಪಾಧ್ಯ ಡುಂಡಿಯವರ ಬಗ್ಗೆ ಬರೆದಿರುವ ಪುಸ್ತಕದ ಹೆಸರು : ವಿನೋದ ಸೌಧದ ಸಾಹಿತಿ ಡುಂಡಿರಾಜ್)
ಸಂಪನ್ನರಿದ್ದಾರೆ ಎಚ್ಚರಿಕೆ --> ಬೀಚಿ
ಬೊಮ್ಮನಹಳ್ಳಿಯ ಕಿಂದರಿಜೋಗಿ --> ಕುವೆಂಪು ( Pied Piper of Hamelin ಅನ್ನು ಇಲ್ಲಿಗೆ ಒಗ್ಗುವಂತೆ ಅನುವಾದ ಮಾಡಿರುವ ರೀತಿ ಚಂದವಾಗಿದೆ )
ಪಾತಾಳಲೋಕದಲ್ಲಿ ಪಾಪಚ್ಚಿ --> ನಾ. ಕಸ್ತೂರಿ (Alice in Wonderland ಅನ್ನುವುದನ್ನು ಇಲ್ಲಿಯದ್ದೇ ಕಥೆ ಎಂಬಂತೆ ಅನುವಾದ ಮಾಡಿರುವ ರೀತಿಗೆ ಸಲಾಂ )
ನೀವು ಮೆಚ್ಚಿದ, ಸ್ವಾರಸ್ಯಕರ ಹೆಸರುಗಳು ನೆನಪಾದವೇ ? ಏನು ನೋಡ್ತಾ ಇದ್ದೀರಿ ಮತ್ತೆ? ನಿಮ್ಮ ಪಟ್ಟಿಯನ್ನೂ ಹಾಕುವಂತವರಾಗಿ.

ಓದುಗರ ಕಾಮೆಂಟುಗಳು :
Vinay Koundinya : ತುಂಬಾ ಇಷ್ಟ ಆಯ್ತು ಈ ಪಟ್ಟಿ... ನಂಗೆ ತುಂಬಾ ಇಷ್ಟ ಆಗಿರೋದು ಮೂಕಜ್ಜಿಯ ಕನಸುಗಳು.. ಓದಿದ ಮೇಲೆ ಸಾಧಾರಣ ಅನ್ಸ್ಬೋದು ಆದ್ರೆ ಓದಕ್ಕೂ ಮುಂಚೆ ತುಂಬಾ ಇನ್ಟರೆಸ್ಟಿಂಗ್ ಅನ್ಸತ್ತೆ...ಇನ್ನೊಂದು ಸುಧಾಮೂರ್ತಿ ಅವರ ಮಹಾಶ್ವೇತೆ...ಇದು ಓದಕ್ಕೂ ಮುಂಚೆ ಸಾಧಾರಣ ಅನ್ಸ್ತು..ಓದಾದ್ಮೇಲೆ ಸಕ್ಕತ್ತ್ ಅನ್ಸ್ತು....
Edit: ತ.ರಾ.ಸು ಅವರ ಚದುರಂಗದ ಮನೆ..

Sushma Rao:  I’ve always been fascinated with Bengali names and their book titles..... anuvartan... parivrajak... charitraheen... padmanadir Majhi... aranyer dinratri.. avyakta... ashwajani...pratham pratishruti..,
Speaking of which... Guruprasad Doddahejjaji Narayana please enlighten us sometime when you have time on Bengali classics translated to Kannada...
Kunjaalu kaNiveya Kempu hoo


Niranjana Adiga: ಮಡದಿ ಮತ್ತೊಬ್ಬ ಚೆಲುವಗೆ

Ramachandra Hegde: ತುಂಬಾ ಕುತೂಹಲಕರವಾಗಿದೆ ಬರಹ. ಇಷ್ಟವಾಯ್ತು. ಕೆಲವು ಇಂಟರೆಸ್ಟಿಂಗ್ ಶೀರ್ಷಿಕೆಗಳು: ಯೇಗ್ದಾಗೆಲ್ಲಾ ಐತೆ- ಬೆಳಗೆರೆ ಕೃಷ್ಣಶಾಸ್ತ್ರಿ, ಭಗವದ್ಗೀತಾ ಅಥವಾ ಜೀವನಧರ್ಮಯೋಗ, ಉಮರನ ಒಸಗೆ, ಬಾಳಿಗೊಂದು ನಂಬಿಕೆ, ಜೀವನ ಸೌಂದರ್ಯ ಮತ್ತು ಸಾಹಿತ್ಯ- ಡಿವಿಜಿ, ಮಂಕುತಿಮ್ಮನ ಕಗ್ಗ (ಹೆಸರು ಮಂಕುತಿಮ್ಮನಾದರೂ ಬೃಹತ್ ಪ್ರಪಂಚವೇ ಅದರೊಳಗಿದೆ), ಉದಾರಚರಿತರು-ಉದಾತ್ತಪ್ರಸಂಗಗಳು, ಮೂರ್ತಿರಾಯರ ಅಪರವಯಸ್ಕನ ಅಮೆರಿಕಾ ಯಾತ್ರೆ, ವಿಚಿತ್ರ ಎನ್ನಿಸುವ 'ಮಹಾಭಾರತದಲ್ಲಿ ಕೇಡು ಎಂಬುದರ ಸಮಸ್ಯೆ' , ಬಿಜಿಎಲ್ ಸ್ವಾಮಿಯವರ 'ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ', ದೌರ್ಗಂಧಿಕಾಪರಣ - ಸದ್ಯಕ್ಕೆ ನೆನಪಾದದ್ದು.

Srivathsa Joshi : ನಿಮ್ಮ ಈ ಬರಹ, ನಿಮ್ಮ ಓದನ್ನೂ ತಿಳಿಸುತ್ತದೆ, ಆದ್ದರಿಂದ ಇದು "ಓದು-ಬರಹ" :-) [ಇಲ್ಲಿ ಹೆಸರಿಸಿರುವ ಎಲ್ಲ ಪುಸ್ತಕಗಳನ್ನೂ ನೀವು ಆದ್ಯಂತ ಓದಿದ್ದೀರಿ ಎಂದುಕೊಂಡಿದ್ದೇನೆ ಎಂದುಕೊಳ್ಳುತ್ತಿಲ್ಲ. ಆದರೂ ನಿಮ್ಮ ಓದಿನ ಹರಹು ಬಲ್ಲೆ.]

ಸಾಹಿತಿಶ್ರೇಷ್ಠರ ಕೃತಿಗಳ ವಿಶಿಷ್ಟ/ಆಕರ್ಷಕ ಹೆಸರುಗಳನ್ನು ಉಲ್ಲೇಖಿಸಿ ನೀವು ಮಾಡಿರುವ ಈ ಕೆಲಸ, ಬೇರೆಯವರಿಗೆ ಓದಲಿಕ್ಕೊಂದು ಮಾರ್ಗದರ್ಶಿ ಸಹ ಆಗಿದೆ.

ಇನ್ನು, ’ವಿಚಿತ್ರಾನ್ನ’ ಸಹ ನಿಮ್ಮ ಪಟ್ಟಿಯಲ್ಲಿದೆಯೆಂದು ಗಮನಿಸಿದೆ! "I am humbled" ಮತ್ತು, humbled ಆಗಿಯೇ ಇರಬೇಕೆನ್ನುವುದು ನನ್ನ ಹಂಬಲ.

ನಿಮ್ಮ ಈ ಲೇಖನಕ್ಕೆ ಪ್ರತಿಕ್ರಿಯೆಯಲ್ಲಿ ಬರೆಯಬಹುದಾದವು ಎನಿಸಿದ ಒಂದೆರಡು:

* ಎಸ್.ಸುರೇಂದ್ರನಾಥ್ (ಸೂರಿ) ಅವರ ಸಣ್ಣಕತೆಗಳ ಸಂಕಲನ: "ನಾತಲೀಲೆ" [ಪುಸ್ತಕವನ್ನು ನಾನು ಓದಿಲ್ಲ, ಆದರೆ ಹೆಸರು ಆಕರ್ಷಕ.]

* ಭುವನೇಶ್ವರಿ ಹೆಗಡೆಯವರಿಗೆ ಇತ್ತೀಚೆಗೆ ಸಂದ ಅಭಿನಂದನಗ್ರಂಥ: ’ಭುವನಸಿರಿ’ [ಅರ್ಥಗರ್ಭಿತ ಪದ, ಅಲ್ಲದೆ ’ಭುವನೇಶ್ವರಿ’ಯ ಸುಲಭ ಉಚ್ಚಾರ ರೀತಿ: ರಕ್ತೇಶ್ವರಿ->ಲಕ್ಕೆಸಿರಿ ಆದಹಾಗೆ.]

* ಒಮ್ಮೆ ನಾನು ಮತ್ತು ಶಾಮಸುಂದರ್ (ಕನ್ನಡ ಡಾಟ್ ವನ್‌ಇಂಡಿಯಾ) ಇಬ್ಬರೂ ಸೇರಿ ವಿಶ್ವೇಶ್ವರ ಭಟ್ಟರ ಆಫೀಸಿಗೆ ಹೋಗಿದ್ದಾಗ (ಆಗವರು ವಿಜಯಕರ್ನಾಟಕ ಪತ್ರಿಕೆಯ ಸಂಪಾದಕ) ಅವರ ಮೇಜಿನ ಮೇಲೆ ಒಂದು ಪುಸ್ತಕ ಇತ್ತು, ಲೇಖಕರ ಹೆಸರು ನೆನಪಿಲ್ಲ, ಆದರೆ ಪುಸ್ತಕದ ಹೆಸರು ಚೆನ್ನಾಗಿ ನೆನಪಿದೆ: "ತಲೆ ತಿನ್ನುವವರು". ಆ ಶೀರ್ಷಿಕೆಯನ್ನು ನೋಡಿ, ವಿಶ್ವೇಶ್ವರ ಭಟ್ಟರ ಕೆಲಸದ ವೇಳೆಯಲ್ಲಿ ನಾವಿಬ್ಬರು ಹೋಗಿ ಹರಟೆಗೆ ಅವರನ್ನು ಎಳೆದ ಬಗ್ಗೆ ನಮ್ಮಲ್ಲೊಂದು ಮಿಲಿಗ್ರಾಂ ಅಪರಾಧಿಪ್ರಜ್ಞೆ ಮೂಡಿದ್ದೂ ಸುಳ್ಳಲ್ಲ :-)

* ಅಪ್ರಕಟಿತ, ಇನ್ನೂ ಸಾಮಗ್ರಿ ಸಹ ಏನೆಂದು ಗೊತ್ತಿರದ, ಒಂದು ಪುಸ್ತಕ ನನ್ನ ತಲೆಯಲ್ಲಿದೆ. ಅದಕ್ಕೆ "ಹ್ಯೂಮರ ಅರಳಿತು" ಎಂದು ಹೆಸರಿಡಬೇಕೆಂದು ನನ್ನದೊಂದು ತುಂಬ ದಿನಗಳ (ವರ್ಷಗಳ) ಕನಸು.

Prashanth Bhat : ಪಾರಿಜಾತದ ಬಿಕ್ಕಳಿಕೆ, ಬಿಸಿಲು ಚೂರಿನ ಬೆನ್ನು ,ಮೈಲುತುತ್ತು ನಿಮ್ಮ ಲಿಸ್ಟಲ್ಲಿ ಯಾಕಿಲ್ಲ? Lol

Rajesh Srivatsa : ಬೆಟ್ಟದಿಂದ ಬಟ್ಟಲಿಗೆ , ಚಂದ್ರಗಿರಿಯ ತೀರದಲ್ಲಿ

ವೆಂಕಟ್ರಮಣ ಭಟ್ಟ ಕಡೆಮನೆ: ಗಣೇಶಯ್ಯನವರ ಬಹುತೇಕ ಕಾದಂಬರಿಗಳ ಹೆಸರೂ ಹಾಗೆಯೇ ಇವೆ. ನನಗಿಷ್ಟವಾದ ಹೆಸರು ಬಳ್ಳಿಕಾಳ ಬೆಳ್ಳಿ.
ಇನ್ನೂ ಸುಂದರ ಶೀರ್ಷಿಕೆಗಳನ್ನು ನೋಡಲು ಸಂಸ್ಕೃತ ಸಾಹಿತ್ಯದ ಕಡೆ ಕಣ್ಣು ಹಾಯಿಸಬೇಕು. ಮೃಚ್ಛಕಟಿಕ, ಮುದ್ರಾ ರಾಕ್ಷಸ, ವೇಣಿ ಸಂಹಾರ, ಕುಮಾರ ಸಂಭವ ಇತ್ಯಾದಿ..

Ganesh Bhat Nelemav: ತೇಜಸ್ವಿಯವರ 'ಹೆಜ್ಜೆ ಮೂಡದ ಹಾದಿ'. ನೇಮಿಚಂದ್ರ ಅವರ 'ನೋವಿಗದ್ದಿದ ಕುಂಚ', ಮತ್ತು 'ಯಾದ್ ವಶೇಮ್'. ರವಿ ಬೆಳಗೆರೆ ಅನುವಾದಿಸಿದ 'ಹಿಮಾಲಯನ್ ಬ್ಲಂಡರ್'. ಎಸ್ ದಿವಾಕರ್ ಅವರ 'ಹಾರಿಕೊಂಡು ಹೋದವನು'. ಬಿ.ಎಸ್‌ ಶೈಲಜಾರ ಗಣಿತ ಲೇಖನಗಳ ಸಂಗ್ರಹ 'ಏನು? ಗಣಿತ ಅಂದ್ರಾ...?' ಡಾ॥ ಉದಯರವಿ ಶಾಸ್ತ್ರಿ ಅವರ, ಇಂಗ್ಲಿಷಿನ ಭಾಷಾಸ್ವಾರಸ್ಯಗಳ ಬಗ್ಗೆ ಕನ್ನಡದಲ್ಲಿ ತಿಳಿಸಿಕೊಡುವ ಪುಸ್ತಕ 'Savvy ಇಂಗ್ಲಿಷ್ ಸವಿ'
Hannibal Lecter ಸರಣಿಯ ಎರಡನೆಯ ಪುಸ್ತಕ Silence of the lambs.(ಈ ಪುಸ್ತಕವನ್ನೂ, ಸಿನಿಮಾವನ್ನೂ ನಾನು ಇನ್ನೂ ಓದಿಲ್ಲ/ನೋಡಿಲ್ಲ. ಆದರೂ ಸಾವಿನ ಮುನ್ಸೂಚನೆಯಂತಿರುವ ವಿಲಕ್ಷಣ ನೀರವತೆಯನ್ನು ಅಷ್ಟೇ ತಣ್ಣನೆಯ ಧಾಟಿಯಲ್ಲಿ ದಾಟಿಸುವಂತೆ ತೋರುವ ಶೀರ್ಷಿಕೆ ಬಹಳ ಇಷ್ಟವಾಯಿತು.) ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಸ್'ನ One hundred years of solitude. ಚಿನುವಾ ಅಚಿಬೆ ಬರೆದ Things fall apart. ರೇಮಂಡ್‌ಸ್ಮಲಿಯನ್ ಸಾಮಾನ್ಯರಿಗಾಗಿ logicನ ಮೇಲೆ ಬರೆದ ಪುಸ್ತಕಗಳ ಹೆಸರು What is the name of this book? ಮತ್ತು This book needs no title. ಮಾರ್ಗರೇಟ್ ಮಿಚೆಲಳ Gone with the wind . ಥಾಮಸ್ ಹಾರ್ಡಿಯ Far from the madding crowd. ಹೆಮಿಂಗ್ವೇಯ For whom the bell tolls. Punctuation markಗಳನ್ನು ಬಳಸುವ ಬಗ್ಗೆ ರಿಚರ್ಡ್‌ ಲೆಡರರ್ ಬರೆದ ಹಾಸ್ಯಭರಿತ ಪುಸ್ತಕ The comma sense. ಹಾಕಿಂಗ್'ನ A breif history of time. ಫ್ರಿಟ್ಜೋ ಕಾಪ್ರಾನ The tao of physics. ಮಾರಿಯೊ ಲಿವಿಯೋನ The equation that couldn't be solved, ಪ್ರಕೃತಿ/ಭೌತಿಕ ಜಗತ್ತಿನಲ್ಲಿ symmetry(ಸಮಮಿತಿ)ಯ ಪ್ರಾಮುಖ್ಯತೆ ಹಾಗೂ ಗಣಿತದಲ್ಲಿ symmetryಯ ಪರಿಕಲ್ಪನೆಯ ಬೆಳವಣಿಗೆಯನ್ನು ವಿವರಿಸುವ ಪುಸ್ತಕ. ಸೆಡ್ರಿಕ್ ವಿಲನಿ ಎಂಬ ಗಣಿತಜ್ಞ, ಪ್ರಮೇಯವೊಂದರ ಹುಟ್ಟು ಹಾಗೂ ಅದಕ್ಕೆ ಸಾಧನೆ (proof) ಕೊಡುವಾಗ ಗಣಿತಜ್ಞ ಎದುರಿಸುವ ಸವಾಲುಗಳು, ಮಾನಸಿಕ ಸ್ಥಿತ್ಯಂತರಗಳನ್ನು, ಕ್ಲೇಶಗಳನ್ನು ತನ್ನದೇ ಅನುಭವದ ಮೂಲಕ ತಿಳಿಸುವ ಪುಸ್ತಕದ ಶಿರೋನಾಮೆ Birth of a theorem ..
ಇದೆಲ್ಲ ಸರಿ, ಹೆಸರನ್ನೇ ಮುಖ್ಯವಾಗಿ ಪರಿಗಣಿಸಿದ ಈ ಪಟ್ಟಿಯಲ್ಲಿ , what's in a name? ಹೆಸರಲ್ಲೇನಿದೆ? ಎಂದು ಹೆಸರಿನ ಔಚಿತ್ಯವನ್ನೇ ಉಪೇಕ್ಷೆ ಮಾಡಿದ ಷೇಕ್ಸ್'ಪಿಯರ್ನ ಕೃತಿಗಳನ್ನೂ ಸೇರಿಸಬೇಕೆ? To include or not to include Shakespeare ? ಎಂದು ಪ್ರಶ್ನೆ ಮಾಡಿದರೆ ಉತ್ತರ "As you like it"

ಮಾಲಾ ಹೊ ನಾ: ಡಾಲರ್ ಸೊಸೆ
The monk who sold his Ferrari

Billy Wilder Quotes

Back in the days of Orkut, I used to post in 3-4 movie related communities. I stumbled upon one tribute post that I had created there for the legendary director Billy Wilder, here is a collection of some Billy Wilder quotes from that tribute piece:

Wilder was a writer who went on to become a director. On being asked if it is necessary for a director to be able to write:
No, but it certainly helps if he can read!!

You're only as good as the best thing you've ever done.

Austrians are geniuses. They have manged to convince the world that Beethoven is an Austrian and Hitler is a German.

It used to be that we in films were the lowest form of art. Now we have something to look down on. (Of Television)

Making movies is a little like walking into a dark room. Some people stumble across furniture, others break their legs, but some of us see better in the dark than others. The ultimate trick is to convince, persuade. Every single person out there is an idiot, but collectively they're a genius.”

An actor entering through the door, you've got nothing. But if he enters through the window, you've got a situation.

I have ten commandments. The first nine are, thou shalt not bore. The tenth is, thou shalt have right of final cut.

If there's anything I hate more than being taken seriously, it's being taken too seriously.

Don't be too clever for an audience. Make it obvious. Make the subtleties obvious also

An audience is never wrong. An individual member of it may be an imbecile, but a thousand imbeciles together in the dark - that is critical genius.

(after directing Marilyn Monroe for the second time in Some Like It Hot (1959)) I have discussed this with my doctor and my psychiatrist and they tell me I'm too old and too rich to go through this again.

People copy, people steal. Most of the pictures they make nowadays are loaded down with special effects. I couldn't do that. I quit smoking because I couldn't reload my Zippo.

Eighty percent of a picture is writing, the other twenty percent is the execution, such as having the camera on the right spot and being able to afford to have good actors in all parts

(When asked what the purpose of making films is) Well, number one, it's too late for me now to change and to become a gardener. Number two is to get away from the house and the vacuum cleaner. I want to be in my office and think.
And number three, it's very exciting. I like to tell stories. Ultimately it's interesting. You meet nice people, it's glamorous, and, if you get lucky, very profitable. You suffer a great deal, but to paraphrase President Truman, if you can't take all that crap, get out of the studio.

Believe me, this is not a profession for a dignified human being. I can see the interest in pictures when I talk to you students [at the American Film Institute], especially now that almost every university has something connected with movies. But if I had a son I would beat him with a very large whip trying to make a gardener, a dentist or something else out of him. Don't do it. It's just too tough. It hurts, and the moments of glory are very far between. Well, it's too late for me to turn back, too late for me to become a gardener. I can't bend over the azaleas. Not anymore.

“As a class, Americans are extremely impatient. While they are the first to catch onto a joke, they are also the quickest to get bored. In Europe, a film producer can take his time establishing a mood. He can have dozens of dissolves of clouds. Americans audiences will not sit still for them, no matter how beautiful or exciting they may be. If they show the second cloud shot they expect to see an airplane in it. Then, if there's a third, they expect to see the plane explode in mid-air. The story must progress with every angle.”

Lines from New York Times' coverage of AFI's Life Achievement Award to Billy:

And he worried. The people he would like to thank, he said, ''are all dead now'' - the director Ernst Lubitsch, his early collaborator Charles Brackett, William Holden, Gary Cooper, Tyrone Power, Erich von Stroheim, Gloria Swanson, Humphrey Bogart. Around 11 P.M., dapper and fully in command, the 79-year-old writer-director managed, as usual, to turn his worry into a biting joke. In his acceptance speech, he imagined the movie he could make in heaven starring all those dead actors, with music by Beethoven and 'additional dialogue by W. Shakespeare.' Then, he said, the studio would put it in turnaround.