Saturday, 19 December 2020

Dia - Kannada movie

 The funny thing about Dia is that, it tempts you to praise it for what it is not. The film does not have an earth shatteringly distinctive story. The plot wouldn't exactly invoke an urge in you to compare it to a Nolan screenplay. There is no action or anything remotely similar to a fight and no, there is not much comedy, sorry Sadhu and Chikkanna fans! There is not much for fans of horror or suspense either. Tssk!

Heroism and build up? No sir! Villains ? Naa baba naa. Breathtaking locations then? No. And for those want a longer list of "No"s, there are no songs either! How on earth can anyone make an engaging movie without any of these then? The director somehow magically pulls it off, an accomplishment I would've once thought inconceivable. It is the fragrance of genuine warmth,innocence and grace that happens to be the director's magical wand. It is those intimate, beautifully observed small moments beaming with warmth that turn a 90s type old fashioned story into something delicate, dignified and honestly moving.
Almost a disney film like cheerfulness in the background score by Ajaneesh adds to the mood. New faces and their fresh voices help. We were discussing as to how a single dubbing artist seems to be lending her voice to almost every heroine, hence creating some sort of monotony and how it felt so fresh to hear Manvita Hareesh's voice in Kendasampige. Here also the heroine's voice seems new.
Characters(especially the leading lady and her voice-overs) are cute and the progression of their affection for one another is believable and not as artificial as is generally the case in the routine masala movies. This genuineness matters. There also is a deliberate attempt to avoid most of the cliches and infuse freshness in the narration. Result is a film of moods and tones and pools of feeling, full of moving moments and tenderness. This is as close as KFI can possibly get to humming KS Narsimhaswaami's love songs.
Direction and writing is simple, yet assured, situations are explored with lyrical artistry and touching drama, touching mainly because we care about the characters. It is an achingly tender love story,that leaves a bittersweet or rather a bitter aftertaste, it is no wonder that the suddenness of the climax and the bitter aftertaste exasperated many.
All said, this film is an evidence that sometimes it's the simple, unfussy storytelling that comes off best.

ಅಣಕವಾಡುಗಳು

 ಸುಮ್ಮನೆ ಏನನ್ನೋ ನೋಡುತ್ತಿದ್ದಾಗ ಸಿಕ್ಕಿದ ನಾಲ್ಕೈದು ಅಣಕವಾಡು(parody)ಗಳು ಕಚಗುಳಿಯಿಟ್ಟವು, ನಿಮ್ಮ ಖುಷಿಗೆ ಅವನ್ನಿಲ್ಲಿ ಕೊಡುತ್ತಿದ್ದೇನೆ(ಶತಾವಧಾನಿ ಗಣೇಶ್ ಮತ್ತವರ ಬಳಗದವರು ನಡೆಸುತ್ತಿರುವ ಪದ್ಯಪಾನ ಸೈಟಿನಿಂದ ಹೆಕ್ಕಿದ್ದು). ಅಣಕಗಳು ಮೂಲಪದ್ಯದ ಪದಪ್ರಯೋಗ,ಛಂದಸ್ಸು, ಗತಿಗಳನ್ನು ಅನುಕರಣೆ ಮಾಡುವುದರಿಂದ ಅವನ್ನು ಹಾಡಿದರೆ ರಸಾಸ್ವಾದ ಹೆಚ್ಚು. ಹೇಗೂ ಅಣಕಿಸುವುದಾದರೆ ಮಹಾಕವಿ ಕುಮಾರವ್ಯಾಸನನ್ನೇ ಅಣಕಿಸಿದರೆ ಮಜಾ ಅಲ್ಲವೇ ? ಆ ಕವಿ ತನ್ನ ಕಾವ್ಯದ ಬಗ್ಗೆ ಬರೆದುಕೊಂಡ ಸಾಲುಗಳಿವು:

ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋಗೀ-
ಶ್ವರರ ತತ್ತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ-
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ
ಈ ಸಾಲುಗಳು ನಮ್ಮ ಗಾಂಧಿನಗರದ ಮಾಸ್ ಚಿತ್ರಗಳ ನಿರ್ಮಾಪಕರು ಆಗಾಗ ಹೇಳುವುದನ್ನು ಹೇಗೆ ಹೋಲುತ್ತವೆ ಅಂತ ಒಂದು ತಲೆಹರಟೆಯ ಕಲ್ಪನೆಯನ್ನು ನಾನು ಹಿಂದೊಮ್ಮೆ ಮಾಡಿದ್ದೆ:
ಅರಸುಗಳಿಗಿದು ವೀರ - ಇಲ್ಲಿ ನಂ ಹೀರೋದು ಒಂದು ಸಕ್ಕತ್ ಫೈಟ್ ಬರುತ್ತೆ.
ದ್ವಿಜರಿಗೆ ಪರಮ ವೇದದ ಸಾರ - ನಮ್ಮ ಯೋಗರಾಜ ಭಟ್ರು ಬರೆದಿರೋ ಓತ್ಲಾ ವೇದಾಂತ ಸಾಂಗು ಬರುತ್ತೆ , ಹರಿಕೃಷ್ಣ ಮತ್ತೆ ಟಿಪ್ಪು ಹಾಡ್ತಾರೆ
ಯೋಗೀಶ್ವರರ ತತ್ತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ - ಫ್ಯಾಮಿಲಿಗೆ ಒಂದೊಳ್ಳೆ ಮೆಸೇಜ್ ಕೊಟ್ಟಿದೀವಿ !
ವಿರಹಿಗಳ ಶೃಂಗಾರ - ಇಲ್ಲಿ ಕಾಯ್ಕಿಣಿ ಸರ್ ದು ಪ್ಯಾಥೋ ಸಾಂಗ್ ಬರುತ್ತೆ ಸೋನು ನಿಗಂ ವಾಯ್ಸಲ್ಲಿ !
ಅದು ಹಾಗಿರಲಿ, ಈಗ ಈ ಪದ್ಯದ ವಿಡಂಬನ ಮಾಡಿ ಬರೆದಿರುವ ಪದ್ಯಗಳನ್ನು ನೋಡೋಣ.
ಮೊದಲಿಗೆ ನೀಲಕಂಠ ಅವರ ರಚನೆ :
ಅರಸುಗಳಿಗಿದು ನೀರ, ದ್ವಿಜರಿಗೆ
ಪರಮಭೋಜನಸಾರ, ಭೋಗೀ-
ಶ್ವರರ ವಿತ್ತವಿಚಾರ (ಪಿತ್ಥವಿಕಾರ), ಮಂತ್ರಿಜನಕ್ಕೆ ನರಿಯ ಗುಣ
ವಿರಹಿಗಳು ಬೇರೊಬ್ಬರನರಸೆ
ಪರಿಣತಿಯ ಬೋಧವಿದು, ಕಾವ್ಯಕೆ
ಗುರುತದುಂಟೇ ನೀಲಕಂಠನೆ ರಚಿಸೆ ಭಾರತವ
ಅವರದ್ದೇ ಇನ್ನೊಂದು ಪದ್ಯ:
ನೆರೆಯ ಮನೆಗಿವ ದೂರ, ನಿತ್ಯದ
ತರಲೆ ತಂಟೆಗೆ ಶೂರ, ಮಾತಿನೊ-
ಳರೆದ ಮೆಣಸಿನ ಖಾರ, ಕಂತ್ರಿಜನಕ್ಕೆ ಮಂತ್ರಿಯಿವ
ಸಿರಿಯು ಕಾಲ್ಕೆಳಗಾಡುತಿದ್ದರು
ಕರೆದು ಕೊಟ್ಟವನಲ್ಲ ಕೇಳ್ವರ,
ಹೊರುವ ಜನರಿಗೆ ಭಾರ ಕೊನೆಗೀತನ ಕಳೇಬರವು
ಸೋಮ ಅವರ ಪದ್ಯವನ್ನೂ ಓದಿಬಿಡಿ:
ಅರಸರನೆ ಬಿಡ ಪೋರ, ದ್ವಿಜರೆನೆ
ಕೊರಮಗಾಗದಪಾರ ಕೂಗೇ-
ನರರೆ, ತತ್ವವಿಚಾರ ಕಂತ್ರಿಜನಕ್ಕೆ ಬುದ್ಧಿಗುಣ
ಗುರುಹಿರಿಯರಿಂ ದೂರವಿದ್ಯಾ-
ಪರಿಣತರಲಂಕಾರ ಕೀಳ್ಮೆಗೆ-
ಗುರುವೆ ಕನಯಕುಮಾರ ಜೇಎನ್ಯು ಪೀಡೆ ಭಾರತಕೆ
ಕಾಂಚನಾ ಅವರಿಗೆ ಹೊಳೆದ ಸಾಲುಗಳು:
ಅರಸುಗಳಿಗಿದು ಸೇರ,ದ್ವಿಜರಿಗೆ
ಪರಮ ಮೋದದ”ಸಾರ”ಯೋಗೀ
ಶ್ವರರ ಪಥ್ಯಕೆ ಬಾರ,ಮಂತ್ರಿಜಗ ಕ್ಕೆ ವರ್ಜ್ಯ ಕಣಾ!
ಸುರಿಯಲಿದು ಬಂಗಾರ,ಪಾಕದ
ಪರಿಣತಿಗಲಂಕಾರ,ಭೋಜ್ಯಕೆ
ಗುರುವೆನುತೆ ಕುದಿಸಿದ ಕುಮಾರ ಭಟ್ಟ ,ಬೇಳೆಯನು!!
ಸೋಮ ಅವರ ಮತ್ತೊಂದು ರಚನೆಯನ್ನೋದಿ ಮುಗಿಸೋಣ :
ಚರಿತೆಯೊಳಗಿವ ಜಾರ, ವನಿತೆಯ-
ನರಸೆ ಜೀವನಸಾರ, ಭೋಗೀ-
ಶ್ವರರ ತತ್ತ್ವಕೆ ಧೀರ, ಮಂತ್ರಿಗಣಕ್ಕುಮೇರ್ದ ಕಣ
ಸುರರವೊಲೆ ಶೃಂಗಾರ, ಮದ್ಯದ-
ಪರಿಣತರಲಂಕಾರ, ಬ್ಯಾಂಕಿಗೆ
ಗರಗಸಮೆನಲು ಮಲ್ಯ ಮೆರೆಯುತೆ ತೊರೆದ ಭಾರತವ

ಪಂಪಭಾರತ ಗಮಕ ವಾಚನ

 ಋತುಮಾನ ವೆಬ್ ಸೈಟಿನವರು ಪ್ರಸ್ತುತಪಡಿಸುತ್ತಿರುವ ಪಂಪಭಾರತದ ಒಂದು ಭಾಗದ ಗಮಕ ವಾಚನ ಮತ್ತು ವ್ಯಾಖ್ಯಾನಕ್ಕೆ ನಾನು ಬರೆದಿರುವ ಪುಟ್ಟ ಪೀಠಿಕೆಯಿದು,ಟಿವಿ ವೆಂಕಟಾಚಲ ಶಾಸ್ತ್ರಿ, ಕೆ ಆರ್ ಗಣೇಶ್, ಸಿಪಿಕೆ, ಚಂದ್ರಶೇಖರ ಕೆದ್ಲಾಯ ಮುಂತಾದ ಮಹನೀಯರು ವೀಡಿಯೊದಲ್ಲಿದ್ದಾರೆ. ಗಮಕಕ್ಕೆ ಪ್ರಸ್ತಾವನೆಯಾಗಿ ಇದನ್ನು ಬರೆದಿರುವುದರಿಂದ ಒಂದು ಲೇಖನದ ಸೊಗಸು ಕಾಣಲಾರದೇನೋ ಎಂಬ ಹೆದರಿಕೆ, ಅರ್ಜೆಂಟಿನಲ್ಲಿ ಮಾಡಿದ ಅಡುಗೆ ಬೇರೆ, ಈ ಸಂಕೋಚದೊಂದಿಗೇ ಇದನ್ನು ನಿಮ್ಮ ಮುಂದಿಡುತ್ತಿದ್ದೇನೆ:

ಪಂಪಭಾರತದಲ್ಲಿ ಭೀಷ್ಮ ಸೇನಾಧಿಪತ್ಯದ ಪ್ರಸಂಗವು ರಸವತ್ತಾದ ಭಾಗ. ಇಲ್ಲಿನ ಮೂರ್ನಾಲ್ಕು ಪದ್ಯಗಳು ಹತ್ತು ಹಲವು ಕಾರಣಗಳಿಗೆ ಪ್ರಸಿದ್ಧಿ ಪಡೆದಿವೆ, ಚರ್ಚೆಗಳನ್ನೂ ಎಬ್ಬಿಸಿವೆ. ಭೀಷ್ಮರ ನಿವಾಸಕ್ಕೆ ರಾತ್ರಿಯೇ ತೆರಳಿ, ಅವರ ಮನವೊಲಿಸಿ ಬಂದು, ಸಹಸ್ರ ಕಿರಣೋದಯವಾದಾಗ(ಬೆಳಗಾದಾಗ) ಅವರಿಗೆ ಸಕಲ ರಾಜವೈಭೋಗಗಳೊಂದಿಗೆ ಶಾಸ್ತ್ರೋಕ್ತವಾಗಿ ವೀರಪಟ್ಟವನ್ನು ಕಟ್ಟಲು ಧುರ್ಯೋಧನ ಹೊರಡುತ್ತಾನೆ. ಆ ಭೀಷ್ಮರಾದರೂ ಎಂಥವರು ? ಒಂದು ಕಾಲದಲ್ಲಿ ಪರಶುರಾಮನನ್ನೇ ಅಂಜಿಸಿದ ವೀರರು. ಅಂಥ ವೀರಾಗ್ರಣಿಯೇ ಸೇನಾಧಿಪತಿಯಾಗಿ ಬಂದು ನಿಂತರೆ, 'ಪಗೆವರನು ಎನ್ನ ಮಂಚದ ಕಾಲೊಳ್ ಕಟ್ಟಿದಂತೆಯೇ' ಎಂದು ಗರ್ವಿಸಿ ಉಬ್ಬುತ್ತಾನೆ ಧುರ್ಯೋಧನ.
ಕರ್ಣನಿಗೋ ಯೌವನದ ಸಹಜ ದುಡುಕು, ತನಗೆ ಎಷ್ಟೆಲ್ಲವನ್ನೂ ಕೊಟ್ಟ ದೊರೆಗೆ ಸ್ವಾಮಿನಿಷ್ಠೆಯನ್ನು ತೋರಿಸುವ ತವಕ, ಹಿಂದೊಮ್ಮೆ ಪಾಂಡವರು ತನ್ನ ಸೋದರರೆಂದು ತಿಳಿದಾಗ, ಅತ್ತ ತನ್ನವರನ್ನೂ ಕೊಲ್ಲಲಾರೆ ಇತ್ತ ತನ್ನನ್ನು ಪೂರ್ಣವಾಗಿ ನಂಬಿದ ಸುಯೋಧನನ್ನೂ ಬಿಡಲಾರೆ ಎಂಬ ಭಾವದಲ್ಲಿ, "ನನ್ನೊಡೆಯನಿಗಿಂತ ಮೊದಲು ನಾನೇ ಪರಾಕ್ರಮವನ್ನು ಅಂಗೀಕರಿಸಿ ಸಾಯುತ್ತೇನೆ(ತಱಸಂದುದ್ಧತ ವೈರಿ ಭೂಪ ಬಲದೊಡ್ಡಳ್ಳಾಡೆ ಲೆಕ್ಕಕ್ಕೆ ತಳ್ತಿಱದೆನ್ನಾಳ್ದನಿವಾನೆ ಮುಂಚೆ ನಿಱಪೆಂ ಕೆಯ್ಕೊಂಡು ಕಟ್ಟಾಯಮಂ)" ಎಂದು ನಿಷ್ಕರ್ಷೆ ಮಾಡಿಕೊಂಡವನಾತ, ಅಷ್ಟಾಗಿ ಹೆಜ್ಜೆ ಹೆಜ್ಜೆಗೂ ಜಾತಿಯ ಹೆಸರಿನಲ್ಲಿ ಆದ ಅವಮಾನಗಳಿಂದ ಮಡುಗಟ್ಟಿದ್ದ ಅಸಹಾಯಕತೆ, ಕೀಳರಿಮೆ ಮತ್ತು ಕ್ರೋಧಗಳು ಬೇರೆ ಇದ್ದವು .
ಇಂಥಹಾ ಕರ್ಣನಿಗೆ ತನ್ನ ಗೆಳೆಯ, ತನ್ನ ದೊರೆ ತನ್ನನ್ನು ಬಿಟ್ಟು, ಹೋಗಿ ಹೋಗಿ ಒಬ್ಬ ಮುದುಕರಿಗೆ ಪಟ್ಟಗಟ್ಟಿದಾಗ ಬರಬಾರದ ಕೋಪವೇ ಬರುತ್ತದೆ. ತಾನಾದರೋ ಶತ್ರುಗಳ ನಿಟ್ಟೆಲುಬುಗಳನ್ನು ಪುಡಿಮಾಡಬಲ್ಲವನು, ಅದುಬಿಟ್ಟು ಈ ಹಣ್ಣುಹಣ್ಣು ಮುದುಕರಿಂದೇನಾದೀತು ಎಂಬುದು ಅವನ ವ್ಯಥೆ. ಭೀಷ್ಮರು ಕಣ್ಣು ಕಾಣದ ಮುದುಕನಂತೆ, ಬಿಲ್ಲನ್ನು ಊರುಗೋಲಾಗಿ ಹಿಡಿಯಬೇಕಾದ ದುರ್ಬಲ ವೃದ್ಧರಂತೆ(ಅವರು ಪಿಡಿದ ಬಿಲ್ಲೆ ದಂಟಿಂಗೆಣೆ) ಅವನಿಗೆ ಕಾಣುತ್ತಾರೆ. ಅವರ ಪೌರುಷ ದೇವಿ ಮೈಮೇಲೆ ಬಂದವರ ಆವೇಶದಂತೆ, ಕಟ್ಟುಕಥೆ(ಇಲ್ಲಿ ಬರುವ "ಭಗವತಿಯೇಱುವೇೞ್ವ ತೆರದಿಂ ಕಥೆಯಾಯ್ತಿವರೇಱು" ಎಂಬ ಸಾಲಿನ ಅರ್ಥವೇನು ಎಂಬುದರ ಬಗ್ಗೆ ವಿದ್ವದ್ವಲಯದಲ್ಲಿ ಸಾಕಷ್ಟು ಚರ್ಚೆಗಳಾಗಿವೆ). ಇಂತಹಾ ಮುದುಕರನ್ನು ಯುದ್ಧರಂಗಕ್ಕೆ ಒಯ್ದರೆ ಶತ್ರುಗಳು ಬಿದ್ದು ಬಿದ್ದು ನಕ್ಕಾರು ಅನಿಸುತ್ತದೆ ಕರ್ಣನಿಗೆ, ಇದೆಲ್ಲವನ್ನೂ ಬಾಯಿಬಿಟ್ಟು ಹೇಳಿಯೂ ಬಿಡುತ್ತಾನೆ.
ಇಷ್ಟಾದಾಗ ದ್ರೋಣರು ತಾವೇನು ಕಮ್ಮಿ ಕೋಪದವರಲ್ಲ ಎಂಬಂತೆ ಕೆರಳಿಬಿಡುತ್ತಾರೆ. ಈ ಕೋಪೋದ್ರೇಕದಲ್ಲಿ ಜಾತಿ ಬಂದುಬಿಡುತ್ತದೆ ! ಸತ್ಕುಲಪ್ರಸೂತರಾದ ಭೀಷ್ಮರನ್ನು ಹೀಗೆ ಆಡಿಕೊಳ್ಳಬೇಕಾದರೆ ಹೀನಕುಲದವನದ್ದೇ ನಾಲಗೆಯಾಗಬೇಕು ಎಂದವರ ಎಣಿಕೆ. ನಾಲಗೆ ಕುಲಮಂ ತುಬ್ಬುವುದು(ಪ್ರಕಟಪಡಿಸುವುದು) ಎಂಬ ನಾಣ್ಣುಡಿ ನಿನ್ನಂಥವರಿಗೇ ಇರುವುದು ಎಂದಾಡಿಬಿಡುತ್ತಾರೆ.
ಅಲ್ಲಿಗೆ ಕರ್ಣನ ಆತ್ಮಾಭಿಮಾನವನ್ನು ಬಡಿದೆಬ್ಬಿಸಿದಂತಾಗುತ್ತದೆ. ದ್ರೋಣನ ಕರ್ಣಕಠೋರ ವಚನಗಳಿಗೆ ಉತ್ತರ ಪಟಪಟನೆ ಅವನ ಬಾಯಿಯಿಂದ ಹೊರಡುತ್ತದೆ. "ಕುಲಮನೆ ಮುನ್ನಂ ಉಗ್ಗಡಿಪಿರೇಂ ಗಳ" (ಬಾಯಿ ತೆಗೆದರೆ ಮೊದಲು ಕುಲವನ್ನೇ ಕುರಿತು ದೊಡ್ಡದಾಗಿ ಯಾಕೆ ಹೇಳುತ್ತೀರಿ ಸ್ವಾಮೀ?) ಎನ್ನುತ್ತಾನೆ. ಹಿಂದೊಮ್ಮೆ ಧನುರ್ವಿದ್ಯಾ ಪ್ರದರ್ಶನವಾದಾಗಲೂ, ಕರ್ಣ ಅರ್ಜುನನ ಜೊತೆ ಸ್ಪರ್ಧಿಸಹೊರಟಾಗ ಅವನು ಕುಲದ ಕಾರಣದಿಂದ ಅರ್ಜುನನಿಗೆ ಸಮನಲ್ಲ ಎಂಬ ಕಟುನಿಂದೆ ಕೇಳಿಬಂದಿತ್ತು. ಆಗ ಕರ್ಣನ ಪರವಾಗಿ ಧುರ್ಯೋಧನನೇ ಮಾತಾಡಿ, "ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ ಕುಲಮನಿಂತು ಪಿಕ್ಕದಿರಿಂ"(ಶೌರ್ಯವೇ ಕುಲವಲ್ಲದೆ ಕುಲವೆಂಬುದು ಬೇರೆಯುಂಟೇ?) ಎಂದಿದ್ದ. ಅದು ಕರ್ಣನಿಗೆ ನೆನಪಿದ್ದಿರಬೇಕು. ಮುಂಬರಿದು, "ನಿಮ್ಮ ಕುಲಂಗಳು ಆಂತು ಮಾರ್ಮಲೆವನನು ಅಟ್ಟಿ ತಿಂಬುವೆ" ಅಂತ ಸವಾಲು ಹಾಕುತ್ತಾನೆ(ಯುದ್ಧದಲ್ಲಿ ಎದುರಾಳಿ ಬಾಣಗಳ ಮಳೆಗರೆದಾಗ, "ನಾನು ಇಂಥಹಾ ಕುಲದವನು" ಅಂತ ಜಂಬ ಕೊಚ್ಚಿದರೆ, ನಿಮ್ಮ ಕುಲವೇನು ಯುದ್ಧ ಗೆದ್ದು ಕೊಡುತ್ತದೆಯೇ ಮಾರಾಯರೇ ಎಂಬ ಭಾವ).
ಕೊನೆಗೆ "ಕುಲಂ ಕುಲಮಲ್ತು, ಚಲಂ ಕುಲಂ,ಗುಣಂ ಕುಲಂ, ಅಭಿಮಾನಮೊಂದೆ ಕುಲಂ,ಅಣ್ಮು ಕುಲಂ"(ಹುಟ್ಟಿನಿಂದ ಬಂದದ್ದು ಕುಲವಲ್ಲ. ಚಲ, ಸದ್ಗುಣ, ಆತ್ಮಾಭಿಮಾನ, ಪರಾಕ್ರಮಗಳೇ ಕುಲ) ಎಂದುಸುರುತ್ತಾನೆ. ಪಂಪನ ಸಾಮಾಜಿಕ ಪ್ರಜ್ಞೆಗೆ ಇಲ್ಲಿ ಕರ್ಣ ಬಾಯಾಗುತ್ತಾನೆ. ಕಡೆಗೆ, ಭೀಷ್ಮನು ಪಾಂಡವರನ್ನು ಗೆದ್ದರೆ ನಾನು ತಪಸ್ಸಿಗೆ ಹೋಗಿಬಿಡುತ್ತೇನೆ ಅಂತ ಬೇರೆ ಹೇಳುತ್ತಾನೆ!
ಇಷ್ಟಾದ ಮೇಲೆ ಭೀಷ್ಮರು ತಣ್ಣಗೆ ಕರ್ಣನನ್ನು taunt ಮಾಡುವಂತೆ ಮಾತಾಡುತ್ತಾರೆ, 'ನಿನಗಿರುವಷ್ಟು ಕಲಿತನದ ಉಕ್ಕು, ಜವ್ವನದ ಸೊಕ್ಕು, ರಾಜನ ಗೆಳೆತನ, ತೋಳ್ಬಲದ ಶಕ್ತಿ ನನಗೆಲ್ಲಿದೆಯಪ್ಪಾ' ಎನ್ನುತ್ತಾರೆ. ಅಲ್ಲಿ ಅವರಾಡುವ "ಸೂೞ್ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್" ಎಂಬ ಮಾತೂ ಬಹುಪ್ರಸಿದ್ಧ. "ಈ ಮಹಾಯುದ್ಧದಲ್ಲಿ ನಮಗೆ ಸಿಗುವುದು ವಿಜಯವಲ್ಲ, ನಮ್ಮದೇನಿದ್ದರೂ ಒಬ್ಬರಾದ ಮೇಲೆ ಒಬ್ಬರು ಪತನ ಹೊಂದುವ ಕೆಲಸ, ಸಾಯುವುದಕ್ಕೆ ನಮ್ಮ ಸರದಿ ಯಾವಾಗ ಬರುತ್ತದೆ ಅಂತ ಕಾಯುವ ಕೆಲಸ. ಹೀಗಾಗಿ, ಜಾಸ್ತಿ ಹಾರಾಡಬೇಡ, ನಿನ್ನ ಸರದಿಯೂ ಬಂದೇ ಬರುತ್ತದೆ" ಎಂಬ ವ್ಯಂಗ್ಯ ಭೀಷ್ಮರದು. ಇಷ್ಟು ಹೇಳಿ, "ಚಕ್ರವನ್ನು ಹಿಡಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿರುವ ಕೃಷ್ಣನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಅರ್ಜುನನ ರಥವು ಎಂಟು ಗಾವುದ ದೂರ ಹೋಗುವಂತೆ ಬಾಣಪ್ರಯೋಗ ಮಾಡುತ್ತೇನೆ, ಪ್ರತಿದಿನವೂ ಯುದ್ಧದಲ್ಲಿ ಹತ್ತು ಸಾವಿರ ಯೋಧರನ್ನು ಧರೆಗುರುಳಿಸುತ್ತೇನೆ" ಎಂದು ಭೀಷ್ಮರು ಮಹಾಪ್ರತಿಜ್ಞಾರೂಢರಾಗುವಲ್ಲಿಗೆ ಈ ಪ್ರಸಂಗ ಮುಗಿಯುತ್ತದೆ.
ಪೂರಕ ಓದಿಗೆ :
ಮುಳಿಯ ತಿಮ್ಮಪ್ಪಯ್ಯನವರ "ನಾಡೋಜ ಪಂಪ" ಎಂಬ ಅಧ್ಭುತ ಕೃತಿ
ವಿದ್ವಾನ್ ಕೆವಿ ಕೃಷ್ಣ ಭಟ್ಟರ 'ಕರ್ಣ ರಸಾಯನಂ' ಎಂಬ ಪುಸ್ತಕ
ಎಂ ಎಂ ಕಲಬುರ್ಗಿಯವರ "ನನ್ನಿಯೊಳಿನತನಯಂ" ಎಂಬ ಲೇಖನ
ಶಂಭಾ ಜೋಶಿಯವರ, 'ಕರ್ಣನ ಮೂರು ಚಿತ್ರಗಳು' ಎಂಬ ಲೇಖನ
"ಭಗವತಿಯೇಱುವೇೞ್ವ ತೆರದಿಂ ಕಥೆಯಾಯ್ತಿವರೇಱು" ಎಂಬ ಸಾಲಿನ ಬಗ್ಗೆ ಡಿ ಎಲ್ ನರಸಿಂಹಾಚಾರ್, ಟಿ.ವಿ. ವೆಂಕಟಾಚಲ ಶಾಸ್ತ್ರಿ, ಚಿದಾನಂದ ಮೂರ್ತಿ ಇವರೆಲ್ಲ ಬರೆದಿರುವ ಲೇಖನಗಳು
ವಾಗರ್ಥ ಬಳಗದಲ್ಲಿ ಈ ಪದ್ಯದ ಸೂಕ್ಷ್ಮಗಳ ಬಗ್ಗೆ ನಡೆದ ಚರ್ಚೆಗಳು(https://www.facebook.com/groups/vagartha/permalink/1535529626537188/)
ಗಮಕದ ವೀಡಿಯೊ ಇಲ್ಲಿದೆ :

ಮಂಜೇಶ್ವರ ಗೋವಿಂದ ಪೈ ಎಂಬ ಅದ್ಭುತ

 ಕನ್ನಡದಲ್ಲಿ ಅಸಾಧಾರಣ ಕೆಲಸ ಮಾಡಿದ ವಿದ್ವನ್ಮಣಿಗಳಿಗೆ ಮೆಚ್ಚಿಕೆ ಸಲ್ಲಿಸಿ ಅವರ ಪರಿಚಯವನ್ನು ಫೇಸ್ಬುಕ್ಕಿಗರಿಗೆ ಮಾಡಿಸುವ ಪ್ರಯತ್ನ.

ಪಂಡಿತರನ್ನು ಅಂಕಿಅಂಶಗಳಲ್ಲಿ ಅಳೆಯುವುದು ಆಫೀಸಿನ ಕೆಲಸವನ್ನು ಗಂಟೆಗಳಲ್ಲಿ ಅಳೆದಂತೆ ಬರೀ ತೋರಿಕೆಯ ಮಾತಾದೀತು. ಆದರೆ ಮಂಜೇಶ್ವರ ಗೋವಿಂದ ಪೈಗಳ ವಿಷಯ ಹಾಗಲ್ಲ. ಬ್ರಾಡ್ಮನ್ನನ ಸರಾಸರಿಯನ್ನು ನೋಡಿ ಬೆರಗಾಗುವಂತೆ ಆಗಬೇಕಾದರೆ ಇದನ್ನು ನೋಡಿ: ಗೋವಿಂದ ಪೈಗಳ ಗ್ರಂಥಸಂಗ್ರಹದಲ್ಲಿ ಸುಮಾರು 4750 ಪುಸ್ತಕಗಳು ಸಿಕ್ಕಿವೆ. ಅದರಲ್ಲೇನಿದೆ ಎನ್ನುವವರಿದ್ದರೆ, ಇನ್ನೊಂದು ವಿವರವನ್ನೂ ಹೇಳಿ ಬಿಡುತ್ತೇನೆ, ಸಿಕ್ಕಿದ ಸಂಗ್ರಹದಲ್ಲಿ 35 ಭಾಷೆಗಳ ಪುಸ್ತಕಗಳಿವೆ! ಇವುಗಳಲ್ಲಿ 22 ಭಾಷೆಗಳು ಪೈಗಳಿಗೆ ಗೊತ್ತಿದ್ದವು ! ಸಂಸ್ಕೃತ,ತುಳು, ಪ್ರಾಕೃತ, ಪಾಲಿ, ಬಂಗಾಲಿ, ಉರ್ದು,ಮರಾಠಿ, ಜರ್ಮನ್, ಜಪಾನಿಯಿಂದ ಮುಂತಾದ ಭಾಷೆಗಳಿಂದ ಅವರು ಭಾಷಾಂತರ ಮಾಡಿಯೂ ಇದ್ದಾರೆ.
ಈಜಿಪ್ಟಿನಲ್ಲಿ ಸಿಕ್ಕಿದ Oxyrhynchus Papyri ಎಂಬ ಪುರಾತನ ಕಾಗದಗಳ ಕಟ್ಟೊಂದರಲ್ಲಿರುವ, ಎರಡೂ ಕಾಲು ಸಾವಿರ ವರ್ಷ ಹಳೆಯ ಗ್ರೀಕ್ ನಾಟಕವೊಂದರಲ್ಲಿ ಕೆಲವು ಕನ್ನಡದ ಪದಗಳಿವೆ ಅಂತ, ಮೂಲ papyrusನಲ್ಲಿದ್ದ ನಾಟಕವನ್ನು ಗ್ರೀಕ್ ಭಾಷೆಯಲ್ಲಿಯೇ ಓದಿ ಪೈಗಳು ಹೇಳಿಯೂ ಇದ್ದಾರೆ ! ಹಿರಿಯಡಕ ಮುರಳೀಧರ ಉಪಾಧ್ಯರು ಭಾಷಣವೊಂದರಲ್ಲಿ ಹೇಳಿದಂತೆ, "ಬ್ರಿಟಿಷರ ಭಾರತದಲ್ಲಿ ತಮ್ಮ ಜೀವನದ 64 ವರ್ಷಗಳನ್ನು ಕಳೆದ ಪೈಗಳು ಜಗತ್ತಿನ ಜ್ಞಾನನಿಧಿ ಇಂಗ್ಲಿಷಿನಲ್ಲಿ ಮಾತ್ರ ಇದೆ ಎಂಬುದನ್ನು ಒಪ್ಪಲಿಲ್ಲ ಎಂಬುದು ಮಹತ್ವದ ಸಂಗತಿ. ಸಂಸ್ಕೃತ, ಪಾಲಿ, ಪ್ರಾಕೃತ, ಪರ್ಷಿಯನ್,ಜಪಾನಿ, ಚೀನೀ ಇಂಥ ಭಾಷೆಗಳಲ್ಲಿ ಜ್ಞಾನದ ಕೊಪ್ಪರಿಗೆಗಳಿವೆ ಎಂಬುದು ಅವರಿಗೆ ಗೊತ್ತಿತ್ತು"
ಇನ್ನೊಬ್ಬ ಮಹಾಪಂಡಿತರಾದ ಸೇಡಿಯಾಪು ಕೃಷ್ಣ ಭಟ್ಟರು ಪೈಗಳ ಕೆಲಸದ ಬಗ್ಗೆ ಹೇಳಿರುವ ಮಾತುಗಳು most appropriate ಎಂಬಂತಿವೆ: "ಅವರು ನೂರಾರು ಗ್ರಂಥಗಳನ್ನು ಓದಿ ಸಾರಗ್ರಹಣ ಮಾಡಿ ಬರೆದ ಲೇಖನಗಳು ಇತರ ಎಷ್ಟೋ ಮಂದಿ ಸಂಶೋಧಕರೆಂಬವರ ಜ್ಞಾನಸಂಪತ್ತಿನ ಪೇಟಿಕೆಗಳಾಗಿವೆ. ಹೀಗೆ ಅವರು ಸಂಗ್ರಹಿಸಿದ ಜ್ಞಾನಸಂಪತ್ತು ಒಂದುದೃಷ್ಟಿಯಿಂದ ನೋಡಿದರೆ ಅವರ ಲೇಖನಗಳಿಂದ ಕನ್ನಡಕ್ಕೆ ಎಷ್ಟು ಪ್ರಯೋಜನವಾಗಿದೆಯೋ ಅದಕ್ಕಿಂತ ಎಷ್ಟೋ ಮಿಗಿಲೆಂಬುದರಲ್ಲಿ ಸಂದೇಹವಿರಲಾರದು. ಹೀಗೆ ಸಂಶೋಧನಕ್ಕೆ ಬೇಕಾದ ಮೂಲದ್ರವ್ಯಗಳನ್ನು ಏಕಾಂಗವೀರತೆಯಿಂದ ಸಂಗ್ರಹಿಸಿ ಅವರು ಮಾಡಿದ ಅದ್ಭುತಕಾರ್ಯವನ್ನು ಕಾಡಿನಲ್ಲಿ ಒಂಟಿಯಾಗಿ ಕುಳಿತು ತಪಸ್ಸು ಮಾಡಿ ಸಿದ್ಧಿಯನ್ನು ಪಡೆಯುತ್ತಿದ್ದ ಪುರಾಣಮುನಿಗಳ ಪ್ರಯತ್ನಕ್ಕೆ ಹೋಲಿಸಬಹುದು. ಅವರ ನಿಗಮನಗಳಲ್ಲಿ ಹಲವು ನನಗೆ ಒಪ್ಪಿಗೆಯಾಗದಿದ್ದರೂ ಅವರ ಇಂತಹ ಸಂಗ್ರಹಗಳಿಂದ ಅಷ್ಟಿಷ್ಟು ಪ್ರಯೋಜನವನ್ನು ಪ್ರಸಾದರೂಪವಾಗಿ ಪಡೆದ ಕಿರಿಯರೊಳಗೆ ನಾನೂ ಒಬ್ಬನು ಎಂದು ಕೃತಜ್ಞತಾಪೂರ್ವಕವಾಗಿ ನಿವೇದಿಸುತ್ತಿದ್ದೇನೆ", ಸೇಡಿಯಾಪು ಅವರು ಅಳೆದು ತೂಗಿ, ಒಂದಕ್ಷರವೂ ಬದಲಿಸಲಾಗದಂತೆ ಕೊಟ್ಟಿರುವ ಈ ಪ್ರಶಂಸೆಯ ಸರ್ಟಿಫಿಕೇಟು ಎಲ್ಲವನ್ನೂ ಹೇಳುತ್ತದೆ. ಪೈಗಳ ಸಮಗ್ರ ಸಂಶೋಧನ ಸಂಪುಟವನ್ನು (ಓದಿ?)ನೋಡಿ, ಲಂಕೇಶರು, "ಇದನ್ನೋದಿ ಅರ್ಥ ಮಾಡಿಕೊಳ್ಳಲು ನನ್ನ ಒಂದು ಜೀವಮಾನ ಸಾಲದು" ಅಂತ ಬರೆದಿದ್ದರಂತೆ!
ಸನಾತನಧರ್ಮದಲ್ಲಿ ಅಚಲವಾದ ಶ್ರದ್ಧೆಯಿದ್ದ ಪೈಗಳು ಹೀಬ್ರೂ ಭಾಷೆಯಲ್ಲಿ ಬೈಬಲ್ಲನ್ನು ಓದಿ ಏಸುಕ್ರಿಸ್ತನ ಕೊನೆಯ ದಿನಗಳ ಬಗ್ಗೆ "ಗೋಲ್ಗೋಥಾ" ಎಂದೂ, ಪಾಳಿ ಭಾಷೆಯಲ್ಲಿ ಬುದ್ಧನ ಬಗ್ಗೆ ಓದಿ,ಅವನ ಬಗ್ಗೆ "ವೈಶಾಖಿ" ಎಂದೂ ಖಂಡಕಾವ್ಯಗಳನ್ನು ಕಟ್ಟಿದ್ದಾರೆ. ಪೈಗಳ ಬಗ್ಗೆ ಬೇಂದ್ರೆಯವರು ಬರೆದಿರುವ ಚಂದದ ಕವಿತೆಯಿಂದ ಕೆಲವು ಸಾಲುಗಳು :
ಕಲ್ಲು-ಕಾಗದ-ಕಡತಗಳಲಿ ಕಾಲನ ಕಾಲು/ಸಿಕ್ಕು ತೊಳಲಾಡುವಲ್ಲಿ ಕುಣಿಕೆ ಬಿಡಿಸಿದಿರಣ್ಣ ! ...... ನಿಮಗೆ ನೀವೇ ಪೂರ್ವಪಕ್ಷ,ಅಕ್ಷರ-ರಮ್ಯ. (ಕನ್ನಡ ಎಷ್ಟು ಹಳತು,ಕುಮಾರವ್ಯಾಸ, ರಾಘವಾಂಕನ ಕಾಲನಿರ್ಣಯ ಹೇಗೆ, ರನ್ನನು ಗದಾಯುದ್ಧವನ್ನು ಬರೆದುದೆಂದು? ಹೀಗೆ ಎಷ್ಟೋ ವಿಷಯಗಳ ಕಾಲನಿರ್ಣಯ ಮಾಡಿದ್ದರ ಸೂಚನೆ ಮೊದಲ ಸಾಲಿನಲ್ಲಿದೆ. ಒಂದು ವಿಷಯದ ಬಗ್ಗೆ ಚರ್ಚೆಯಾಗುವಾಗ, ಮೊದಲು ಹೂಡಿದ ವಾದವನ್ನು ಪೂರ್ವಪಕ್ಷ ಎನ್ನುತ್ತಾರೆ, ಡಿಬೇಟಿನಲ್ಲಿ ಒಂದು motion ಇರುತ್ತದೆ, ಅನಂತರ against ದಿ motion ವಾದವೂ ಇರುತ್ತದೆ. ಪೈಗಳದ್ದು ಅವರಿಗೆ ಅವರೇ ಪೂರ್ವಪಕ್ಷ, ಅವರಿಗೆ ಅವರೇ for the motion ಮತ್ತು against the motion ಹೇಳಬೇಕು ಎಂಬ ಚಮತ್ಕಾರದ ಕಲ್ಪನೆ ಬೇಂದ್ರೆಯವರದ್ದು)

ಗೂಢಚಾರಿಕೆ

 'ಗೂಢಚಾರಿಕೆ' ಎನ್ನುವುದು ನನ್ನ ಮಟ್ಟಿಗೆ ಕುತೂಹಲವನ್ನು ಕದಡಿ ಮಿಸುಕಾಡಿಸುವ ಸಂಗತಿ. ಅಲ್ಲಿ ನಡೆಯುವುದೆಲ್ಲ ಗೋಪ್ಯವೂ ನಿಗೂಢವೂ ಆದ್ದರಿಂದ ಆ ಗುಟ್ಟುಗಳನ್ನು ತಿಳಿಯಲು ಮನ ಎಳಸುತ್ತದೆ. ಈ ನಿಟ್ಟಿನಲ್ಲಿ The Unending Game: A Former R&AW Chief's Insights into Espionage ಎಂಬ ಪುಸ್ತಕದಿಂದ ಹೆಕ್ಕಿದ ನಾಲ್ಕಾರು ವಿಷಯಗಳು (ನನ್ನ ಒಗ್ಗರಣೆಯೊಂದಿಗೆ).

ವಿಕ್ರಮ್ ಸೂದ್ ಅವರದ್ದು ಅಂತಹಾ ಆಕರ್ಷಕ, ರೋಚಕ ಗದ್ಯವೇನೂ ಅಲ್ಲ, ಮಾಹಿತಿಗಳಿಂದ ಇಡಿಕಿರಿದಿರುವ, ಪಠ್ಯಪುಸ್ತಕದಂಥಾ ಶೈಲಿ ಅವರದ್ದು (The best and most successful spies are the quiet, apparently boring and dull people ಅಂತೊಂದು ಮಾತೇ ಇದೆ! ಜೇಮ್ಸ್ ಬಾಂಡ್ನಂತೆ ಎಲ್ಲರ ಗಮನ ಸೆಳೆಯುವವರು ಒಳ್ಳೆಯ ಗುಪ್ತಚರರಾಗುವುದು ಕಷ್ಟ. ಎಲ್ಲರೂ ಯಾವಾಗಲೂ ನಿಮ್ಮನ್ನು ನೋಡುತ್ತ, ಮಾತಾಡಿಸುತ್ತ ಇದ್ದರೆ ಗುಪ್ತ ಚಟುವಟಿಕೆಗಳನ್ನು ಮಾಡುವುದಾದರೂ ಹೇಗೆ ?! James Bond is fantasy, George Smiley is reality ಅಂತ ವಿಕ್ರಮ್ ಸೂದ್ ಅವರೇ ಬರೆಯುತ್ತಾರೆ ಕೂಡಾ!). ಶೈಲಿ ಸ್ವಲ್ಪ dry ಆದರೂ, ಬರೆದವರು ನಮ್ಮ ದೇಶದ ಬೇಹುಗಾರಿಕಾ ಸಂಸ್ಥೆಯಾದ R&AWದಲ್ಲಿ ಮೂವತ್ತು ವರ್ಷ ಕೆಲಸ ಮಾಡಿದವರು, ಅದರ ಮುಖ್ಯಸ್ಥರೂ ಆಗಿದ್ದವರು ಎಂಬ ಕಾರಣಕ್ಕೆ ಪುಸ್ತಕಕ್ಕೊಂದು ವಿಶ್ವಾಸಾರ್ಹತೆ ತನ್ನಿಂತಾನೇ ಸಿಗುತ್ತದೆ. ಇನ್ನು ಪುಸ್ತಕದಿಂದ ಹೆಕ್ಕಿದ ನಾಲ್ಕಾರು ವಿಷಯಗಳಿಗೇ ಬರೋಣ.
ಇಂದಿರಾ ಗಾಂಧಿಯ ಕ್ಯಾಬಿನೆಟ್ಟಿನಲ್ಲಿ ಇದ್ದ ಭೂಪರೊಬ್ಬರು, "ನನಗೆ 50000 ಡಾಲರುಗಳನ್ನು ಕೊಟ್ಟರೆ ನಿಮಗೆ ಗುಟ್ಟಿನಲ್ಲಿ ಸುದ್ದಿ ಕೊಡುತ್ತೇನೆ" ಅಂತ ರಷ್ಯಾದ ಕೆಜಿಬಿಯ ಹತ್ತಿರ ಯೋಜನೆಯನ್ನು ಮುಂದಿಟ್ಟರಂತೆ. ತಮಾಷೆ ಅಂದರೆ ಕೆಜಿಬಿ ಅದಕ್ಕೊಪ್ಪಲಿಲ್ಲವಂತೆ -- "ಬೇಕಾದಷ್ಟು ಜನ ವರ್ತಮಾನ ಕೊಡುವವರು ದೊಡ್ಡ ದೊಡ್ಡ ಸ್ಥಾನಗಳಲ್ಲಿ ಈಗಾಗಲೇ ಇದ್ದಾರೆ, ನಿಮಗೆ ಕೊಟ್ಟು ದುಡ್ಡು ವೇಸ್ಟು ಮಾಡುವುದು ಯಾಕೆ" ಎಂಬ ಕಾರಣಕ್ಕೆ! ಸ್ವತಃ ಇಂದಿರಾ ಗಾಂಧಿಯ ಹೆಸರೇ VANO ಎಂಬ ಹೆಸರಿನಲ್ಲಿ ಕೆಜಿಬಿಯ ದಾಖಲೆಗಳಲ್ಲಿ ಇದೆಯಂತೆ. ಇನ್ನು "1971ರ ಕಾಲದಲ್ಲಿ ಮೊರಾರ್ಜಿ ದೇಸಾಯಿ ನಮ್ಮ informer ಆಗಿದ್ದರು, ನಮಗೆ ಅಲ್ಲಿನ ವೃತ್ತಾಂತಗಳನ್ನು ತಿಳಿಸುತ್ತಿದ್ದರು ಅಂತ ಅಮೆರಿಕಾದ CIAಯವರೊಬ್ಬರು ಪುಸ್ತಕವೊಂದರಲ್ಲಿ ಬರೆದಿದ್ದಾರಂತೆ ! ಇಂಥವರು ಇನ್ನಷ್ಟು ಜನರೂ ಇದ್ದರಂತೆ. "ಅವ್ನು ಬಿಡಿ, ಪಾಕಿಸ್ತಾನದ paid ಏಜೆಂಟ್" ಅಂತ ಕೆಲವರನ್ನು ಫೇಸ್ಬುಕ್ಕಿಗರು ಹಳಿಯುವುದುಂಟು, ಆದರೆ ಅಂತದ್ದು ದೊಡ್ಡ ದರ್ಜೆಯವರಲ್ಲಿ ನಿಜವಾಗಿಯೂ ಆಗುತ್ತದೆ ಅಂತ ಮಾತ್ರ ಹೀಗೆ ಆರೋಪ ಮಾಡುವವರಿಗೂ ಗೊತ್ತಿದೆಯೋ ಇಲ್ಲವೋ ! ಹಾಗಂತ ಇದು ನಮ್ಮಲ್ಲಿ ಮಾತ್ರ ನಡೆಯುವುದೂ ಅಲ್ಲ, ಅಮೆರಿಕಾದಲ್ಲಿ ದೊಡ್ಡ ಹುದ್ದೆಗಳಲ್ಲಿ ರಷ್ಯಾದ ಏಜೆಂಟರು ಇದ್ದದ್ದು, ರಷಿಯಾದಲ್ಲಿ ಎತ್ತರದ ಸ್ಥಾನದಲ್ಲಿ ಅಮೆರಿಕಾದ ಗೂಢಚಾರರು ಇದ್ದದ್ದು ಎಲ್ಲ ಅಧಿಕೃತವಾಗಿಯೇ ವರದಿಯಾಗಿವೆ.
ಪೇಯ್ಡ್ ಮೀಡೀಯಾ ಕೂಡಾ ನಿಜವೇ; ಇಂದಿಗೂ ಅಂದಿಗೂ. Between 1972 and 1975, the KGB planted nearly 17,000 stories in the media ಅಂತ ಸೂದ್ ಬರೆಯುತ್ತಾರೆ. ಅಮೆರಿಕಾದ CIAಯದ್ದಂತೂ Propaganda and Covert operations ಅಂತೊಂದು ಅಧಿಕೃತ ವಿಭಾಗವೇ ಇತ್ತಂತೆ(ಈಗಲೂ ಇರಬಹುದು) ! ಆ ಕಾಲಕ್ಕೇ ಹೀಗೆ ಅಂದಮೇಲೆ, ಇವತ್ತು ತಮಗೆ ಬೇಕಾದಂತೆ ಬರೆಯುವುದಕ್ಕೆ, ಸುದ್ದಿ ತೋರಿಸುವುದಕ್ಕೆ ಪಾಕಿಸ್ತಾನದ ISI, ಅಮೆರಿಕಾ, ರಷಿಯಾಗಳ ಸಂಸ್ಥೆಗಳು ಇವರ ಕೈಯಿಂದೆಲ್ಲ ತಿಂಗಳಿಗಿಷ್ಟು ಅಂತ ತೆಗೆದುಕೊಳ್ಳುವವರು ನಮ್ಮಲ್ಲಿ ಹಲವರು ಇದ್ದಾರು. ಹೀಗಾಗಿ "ರಾಹುಲ್ ಗಾಂಧಿಯೇ ಪ್ರಧಾನಿಯಾಗಲಿ" ಎನ್ನುವವರು, ದಿನಕ್ಕೆರಡು ಸಲ ಮೋದಿಯ ಗುಣಗಾನ ಮಾಡುವವರು, ಕೋಮುವಾದ ಇನ್ನೊಂದು ಮತ್ತೊಂದು ಅಂತ ಹಾರಾಡುವವರು, ಹಿಂದುತ್ವ ಆತ್ವ ಈತ್ವ ಅಂತ ಕೂಗಾಡುವವರು, ಕಮ್ಮ್ಯುನಿಸ್ಟ್ ಪಕ್ಷದ ವಕ್ತಾರರಂತೆ ಸಮಾಜವಾದ ಅದು ಇದು ಅಂತ ಎಡೆಬಿಡದೆ ಬಿತ್ತರಿಸುವವರು, ವಾರಕ್ಕೊಮ್ಮೆ ಟೌನ್ ಹಾಲ್ ಹೋರಾಟ ಮಾಡುವವರು, ಸಿಕ್ಕಾಬಟ್ಟೆ ಎಡಗಡೆಗೋ, ಬಲಗಡೆಗೋ ನೋಡುತ್ತ ಬರೆಯುವವರು ಇಂಥವರು ಹೇಳುವುದನ್ನೆಲ್ಲ ಸ್ವಲ್ಪ ಸಂಶಯದ ದೃಷ್ಟಿಯಿಂದಲೇ ನೋಡುವುದೊಳ್ಳೆಯದು. ಯಾರ ಅಕೌಂಟಿಗೆ ಎಷ್ಟು ಎಲ್ಲಿಂದ ಬಂದುಬೀಳುತ್ತಿದೆ ಅಂತ ಯಾರಿಗೆ ಗೊತ್ತಿದೆ ? ಕೆಲವೊಮ್ಮೆ ಇಂಥವರು ಇಂಥದ್ದನ್ನು ಬೇಕೆಂತಲೇ ಮಾಡದೆಯೂ ಇರಬಹುದು. Never attribute to malice that which can be adequately explained by stupidity ಅನ್ನುತ್ತಾರಲ್ಲ!
ಇನ್ನು ಪಾಕಿಸ್ತಾನದ ISIಯ ವಿಚಾರ. ಒಂದು ಅಂದಾಜಿನ ಪ್ರಕಾರ ಈ ISI ಕಳೆದ ದಶಕದಲ್ಲಿ ಲಷ್ಕರ್‌–ಎ–ತಯಬಾ, ಜೈಷ್ ಎ ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನಿನಂತಹಾ ಭಯೋತ್ಪಾದಕರ ಸಂಘಟನೆಗಳಿಗೆ ವರ್ಷಕ್ಕೆ ಸುಮಾರು 1792ಕೋಟಿ ರೂಪಾಯಿಯಂತೆ ಕೊಡುತ್ತ ಬಂದಿದೆಯಂತೆ. 1792 ರೂಪಾಯಿಯಲ್ಲ, 1792 ಕೋಟಿ ರೂಪಾಯಿ ಅದೂ ಪ್ರತಿವರ್ಷ! ಕಳೆದ ಸಲದ ಮುಂಬಯಿಯ ಆಕ್ರಮಣವೊಂದಕ್ಕೇ ಸುಮಾರು ಐದು ಕೋಟಿ ರೂಪಾಯಿ ದುಡ್ಡನ್ನು ಐಎಸ್ಐ ಸುರಿದಿರಬಹುದು. ಬರೀ ಕಾಶ್ಮೀರದಲ್ಲಿ ಒಂದು operating seasonಇಗೆ ಲಷ್ಕರ್‌–ಎ–ತಯಬಾದಂತಹ ಭಯೋತ್ಪಾದಕರ ಸಂಘಟನೆಯೊಂದಕ್ಕೇ ಸುಮಾರು 25 ಕೋಟಿ ಕೊಡುತ್ತದೆ ಪಾಪಿ ಐಎಸ್ಐ ! ಒಂದು ಸೀಸನ್ನಿಗೆ ಒಂದು ಸಂಘಟನೆಗೆ 25 ಕೋಟಿ ಕೊಡುವ State-sponsored terrorism. ಇಷ್ಟು ದೊಡ್ಡ ಬಜೆಟ್ ಇದ್ದರೆ ಹೋರಾಟವೂ ಆಗುತ್ತದೆ, ಇನ್ನೊಂದೂ ಆಗುತ್ತದೆ. ಇದ್ಯಾವುದೂ ವಾಟ್ಸಪ್ಪಿನಲ್ಲಿ ಬಂದ ಸುಳ್ಸುದ್ದಿಯಲ್ಲ -- ಇವೆಲ್ಲ R&AWದ ಮಾಜಿ Chief ಆಗಿದ್ದ ವಿಕ್ರಂ ಸೂದ್ ಬರೆದಿರುವ ಅಂಕಿ ಅಂಶಗಳು. ಇಷ್ಟಿರುವಾಗ ISI ಕೃಪಾಪೋಷಿತ ನಾಟಕಮಂಡಳಿಯ ಕಾಶ್ಮೀರದ ಹೋರಾಟಗಾರರು ಸೈನಿಕರ ಕಡೆಗೆ ಕಲ್ಲೇಕೆ ಮುತ್ತು ರತ್ನಗಳನ್ನೇ ಎಸೆದರೂ ಆಶ್ಚರ್ಯವೇನೂ ಇಲ್ಲ !
ಪಾಕಿಸ್ತಾನದ ಸ್ಥಿತಿ ಆರ್ಥಿಕವಾಗಿ ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆಯೂ ಇಲ್ಲ ಎಂಬಂತಿರುವಾಗ ಇಷ್ಟು ದುಡ್ಡು ಎಲ್ಲಿಂದ ಬರುತ್ತದೆ ಹಾಗಾದರೆ ? ನಮ್ಮಲ್ಲಿ ಅಥವಾ ಎಲ್ಲಿಯೇ ಆದರೂ ಬೇಹುಗಾರಿಕಾ ಸಂಸ್ಥೆಯೊಂದರ ಕೆಲಸ ಎಂದರೆ ಬೇಹುಗಾರಿಕೆ ಮಾಡುವುದು, ರಾಷ್ಟ್ರದ ರಕ್ಷಣೆ ಮಾಡುವುದು. ಅವುಗಳಿಗೆ ಸಂವಿಧಾನದ, ಕೋರ್ಟುಗಳ, ಪ್ರಧಾನಿಯ ಚೌಕಟ್ಟಿದೆ. ಪಾಕಿಸ್ತಾನದಲ್ಲಿ ಹಾಗಲ್ಲ. ಅಲ್ಲಿ ISI ವಿದೇಶಾಂಗ ಸಚಿವನ ಕೆಲಸವನ್ನೂ ಮಾಡುತ್ತದೆ, ಪ್ರಧಾನಿಯನ್ನೂ ಕುಣಿಸುತ್ತದೆ, ಮಿಲಿಟರಿಯನ್ನು ಆಡಿಸುತ್ತದೆ, ವ್ಯಾಪಾರದಿಂದ ಹಿಡಿದು ಕಳ್ಳವ್ಯಾಪಾರದವರೆಗೆ ನೂರೆಂಟು ವಹಿವಾಟುಗಳನ್ನೂ ಮಾಡುತ್ತದೆ! ಅದಕ್ಕೆ ದುಡ್ಡು ಬರಲಿಕ್ಕೆ ಜನರು ಕಟ್ಟುವ ತೆರಿಗೆಯೂ ಬೇಡ, ಸರ್ಕಾರದ ಬಜೆಟ್ಟೂ ಬೇಡ. ಉದಾ: ನಮ್ಮ ದೇಶದಲ್ಲಿ ನಕಲಿ ನೋಟುಗಳನ್ನು ಹರಿಯಬಿಟ್ಟೇ ಈ ಧೂರ್ತ ಸಂಸ್ಥೆ ವರ್ಷಕ್ಕೆ ಕಮ್ಮಿ ಎಂದರೂ ಐನೂರು ಕೋಟಿ ಗಳಿಸುತ್ತದಂತೆ. ಜಗತ್ತಿನಲ್ಲಿ ಮಾದಕದ್ರವ್ಯಗಳ ಜಾಲಗಳದ್ದು ಸುಮಾರು ಐನೂರು ಬಿಲಿಯನ್ ಡಾಲರುಗಳ ವಹಿವಾಟು, ಅದರಲ್ಲಿ 40 ಶೇಕಡಾ ಅಪಘಾನಿಸ್ತಾನದಿಂದಲೇ ಬರುತ್ತದೆ, ಇದರಲ್ಲಿ ದೊಡ್ಡ ಪಾಲನ್ನು ISI ಬಾಚಿಕೊಳ್ಳುತ್ತದೆ(ಅದರಲ್ಲಿ ಸಿಂಹಪಾಲನ್ನು ನಮ್ಮ ದೇಶದ ವಿರುದ್ಧ ಬಳಸುತ್ತದೆ ಅಂತ ಬೇರೆ ಹೇಳಬೇಕಾದ್ದಿಲ್ಲ).
ಯಾವುದೇ ದಾಳಿ ಆದರೂ ಕೇಳಿ ಬರುವ ಕೂಗು intelligence failureನದ್ದು. ಅದರಲ್ಲಿ ಎಷ್ಟೋ ಸಲ ಸತ್ಯ ಇರುವುದಿಲ್ಲ ಎನ್ನುತ್ತಾರೆ ಸೂದ್. ಉದಾ: ಕಾರ್ಗಿಲ್ಲಿನಲ್ಲಿ ಹೀಗೇ ಆಗಲಿದೆ ಅಂತ ಸ್ಪಷ್ಟವಾಗಿ ಮೂರ್ನಾಲ್ಕು ವರದಿಗಳನ್ನು ಬೇಹುಗಾರಿಕಾ ಸಂಸ್ಥೆಗಳು ಕೊಟ್ಟಿದ್ದವಂತೆ, ಸೈನ್ಯದ ಕೆಲವು ಬ್ರಿಗೇಡಿಯರುಗಳೂ ಎಚ್ಚರಿಸಿದ್ದರಂತೆ, ಆದರೆ ಯಾಕೋ ಸರ್ಕಾರ ಮತ್ತು ಸೈನ್ಯ ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಮುಂಬಯಿಯಲ್ಲಿ ದಾಳಿ ಆಗುವ ಎರಡು ತಿಂಗಳಿಗೆ ಮೊದಲೇ ಸಮುದ್ರದ ಹತ್ತಿರ ಇರುವ ಐಷಾರಾಮಿ ಹೋಟೆಲುಗಳ ಮೇಲೆ ದಾಳಿ ಆಗಲಿದೆ ಅಂತ R&AW ಎರಡು ಮೂರು ಸಲ ಸ್ಪಷ್ಟವಾದ ವರದಿ ಕಳಿಸಿತ್ತಂತೆ(ಆದರೂ ಕೃತ್ಯ ನಡೆದೇ ಹೋದದ್ದು ಬೇಸರದ ವಿಷಯ), ಏನೇ ಆದರೂ ಘಟನೆಯ ಎರಡು ತಿಂಗಳು ಮೊದಲೇ ವ್ಯೂಹ ಭೇದಿಸಿ, ಹೀಗಾಗಲಿದೆ ಅಂದದ್ದು ಸಾಮಾನ್ಯ ವಿಷಯವಲ್ಲ. ಇಂಥಹಾ ಕಿಲಾಡಿಗಳು ಬೇಹುಗಾರಿಕೆಯಲ್ಲಿ ಇರುವುದರಿಂದಲೇ ಭಯೋತ್ಪಾದಕರ ನೂರಾರು ಸಂಚುಗಳು ಹೊಸಕಿ ಹಾಕಲ್ಪಟ್ಟು ಸಾವಿರಾರು ಅಮಾಯಕರ ಜೀವಗಳು ಉಳಿಯುತ್ತವೆ ಅಂತ ಹೇಳಿದರೆ ಸಾಕು.

ಶೀರ್ಷಿಕೆಯ ತಮಾಷೆ

 ಮಂಗಳವಾರ ಮಧ್ಯಾಹ್ನದ ತಲೆಹರಟೆ ಚಿಂತನೆ:

Connie Willis ಎಂಬವರು ಬರೆದಿರುವ ಸಣ್ಣಕಥೆಯೊಂದರ ಶೀರ್ಷಿಕೆ ಇದು:"The Soul Selects Her Own Society: Invasion and Repulsion: A Chronological Reinterpretation of Two of Emily Dickinson's Poems: A Wellsian Perspective". ಈ ಕಥೆಯ ಅಭಿಮಾನಿಗಳು ಯಾರಾದರೂ ಇದ್ದರೆ ಅವರ ಗತಿಯೇನು? ನಿಮ್ಮ ಫೇವರಿಟ್ ಕಥೆ ಯಾವುದು ಅಂತ ಯಾರಾದರೂ ಕೇಳಿದರೆ ಅವರು ಪಾಪ, "ಒಂದಿದೆ, ಹೆಸರು ನೋಡಿ ಹೇಳ್ತೇನೆ" ಎನ್ನಬೇಕಾದೀತೇನೋ !
ಇದಾದರೂ ಆದೀತು, Shirley Jackson ಎಂಬಾಕೆ ಬರೆದಿರುವ ಕವನವೊಂದರ ಶೀರ್ಷಿಕೆಯನ್ನು ನೋಡಿ: "Song for all editors, writers, theorists, political economists, idealists, communists, liberals, reactionaries, bruce bliven, marxist critics, reasoners, and postulators, any and all splinter groups, my father, religious fanatics, political fanatics, men on the street, fascists, ernest hemingway, all army members and advocates of military training, not excepting those too old to fight, the r.o.t.c. and the boy scouts, walter winchell, the terror organizations, vigilantes, all senate committees and my husband." ಈ ಕವನದ ಪೂರ್ಣಪಾಠ ಇಷ್ಟೇ:
I would not drop dead from the lack of you—
My cat has more brains than the pack of you
ನನ್ನ ಹೆಸರೆತ್ತಿದರೆ ಜನ ಹೆದರುತ್ತಾರೆ ಅಂತ ಈ ಕವಿತೆಗೆ ಹೇಳಿಕೊಂಡು ಓಡಾಡಲಿಕ್ಕೆ ಅಡ್ಡಿಯಿಲ್ಲ. ಏನಂತೀರಿ ?

Wednesday, 7 August 2019

ಓದಲೇಬೇಕಾದ ಸಣ್ಣಕಥೆಗಳು

ಕನ್ನಡದ ಟಾಪ್ 100 ಕಥೆಗಳ ಅಥವಾ ಕಥೆಗಾರರ ಪಟ್ಟಿ ಮಾಡಬಹುದೇ ಅಂತೊಮ್ಮೆ ಯೋಚಿಸಿದ್ದೆ. ಇಂಥದ್ದನ್ನು ಮಾಡಹೊರಟಾಗ, "ನಿಮ್ಮ ಮಾನದಂಡಗಳೇನು", "ಓ ಇಂಥವರ ಕಥೆಗಳು ಯಾಕಿಲ್ಲ?", "ಓ ಇವರ ಕಥೆಗಳು ಯಾಕಿವೆ?!!", "ಶ್ರೀಯುತರು ಕ್ರಿಸ್ತಪೂರ್ವ ಮುನ್ನೂರ ಅರುವತ್ತೆಂಟನೇ ಇಸವಿಯಲ್ಲಿ ಪ್ರಕಟಿಸಿದ ಕಥೆಯೊಂದನ್ನು ಮರೆತೇ ಬಿಟ್ಟಿದ್ದೀರಿ!!" ಎಂದು ಮುಂತಾಗಿ ಹೇಳುವವರು ಯಾರಾದರೂ ಇದ್ದೇ ಇರುತ್ತಾರಲ್ಲ ! ಆದರೇನಂತೆ ! ಸಾಫ್ಟ್ವೇರ್ ಎಂಜಿನಿಯರುಗಳಿಗೆ ಇಂಥದನ್ನೆಲ್ಲ ನಿಭಾಯಿಸುವ ಚಾಲಾಕಿ ಇರುವುದಿಲ್ಲವೇ?! ಇಂಥದ್ದರಿಂದ ಪಾರಾಗಲಿಕ್ಕೂ ಒಂದು ಉಪಾಯ ಹುಡುಕಿದೆ. ಈಗಾಗಲೇ ದೊಡ್ಡವರು,ಅಧ್ಯಯನಶೀಲರು ಮಾಡಿಕೊಟ್ಟಿರುವ ಒಂದಷ್ಟು ಕಥಾಸಂಕಲನಗಳಿಂದ ಕಥೆಗಳನ್ನು ಆಯ್ದರಾಯಿತಲ್ಲ.  

ಹೀಗಾಗಿ, ಶೇಕಡಾ ತೊಂಬತ್ತರಷ್ಟು ಕಥೆಗಳನ್ನು ಈ ಕೆಳಗಿನ ಕಥಾಸಂಕಲನಗಳಿಂದ ಹೆಕ್ಕಿಕೊಂಡಿದ್ದೇನೆ. ಒಂದಷ್ಟನ್ನು ನಾನು ಸೇರಿಸಿದ್ದೇನೆ. ಆಸಕ್ತರು ಓದಲೇಬೇಕಾದ ಸಣ್ಣಕಥೆಗಳು ಯಾವುವು, ಓದಬೇಕಾದ ಕಥೆಗಾರರು ಯಾರು ಎಂದು ತಿಳಿಸುವ ಪ್ರಯತ್ನವಿದು. ಹಲವು ಹೊಸಬರ,ಹಳಬರ ಹೆಸರುಗಳು ಈ ಪಟ್ಟಿಗೆ ಸೇರಬೇಕು, ಸೇರಲಿವೆ, ನೀವೂ ಸೇರಿಸಬಹುದು(ಎಲ್ಲ ನಾನೇ ಮಾಡಿದರೆ ನಿಮಗೇನು ಕೆಲಸ?).ಪಟ್ಟಿಯಲ್ಲಿರುವ ಕಥೆಗಾರರ ಎಷ್ಟೋ ಒಳ್ಳೆಯ ಕಥೆಗಳೂ ಪಟ್ಟಿಯಲ್ಲಿಲ್ಲ. ಆದರೂ ಟಾಪ್ 100 ಕಥೆಗಳ ಪಟ್ಟಿ ಹೋಗಿ ಸುಮಾರು 225 ಮುಖ್ಯ ಕಥೆಗಾರರ ಹಂತಿಯಾಗಿದೆ.    
   
ನಾನು ನೋಡಿರುವ ಕೆಲವು ಪ್ರಮುಖ ಸಂಕಲನಗಳು:
ಓಬೀರಾಯನ ಕಾಲದ ಕತೆಗಳು - ಸಂಪಾದಕ: ಬಿ. ಜನಾರ್ದನ ಭಟ್ (ಕೃಪೆ - ಕೆಂಡಸಂಪಿಗೆ ವೆಬ್ ಸೈಟ್)
ಮರೆಯಬಾರದ ಹಳೆಯ ಕಥೆಗಳು - ಸಂಪಾದಕ: ಗಿರಡ್ಡಿ ಗೋವಿಂದರಾಜು 
ನವಿಲುಗರಿ - ಸಂಪಾದಕರು: ಬೆಟಗೇರಿ ಕೃಷ್ಣ ಶರ್ಮ ಮತ್ತು ಜಿ.ಬಿ. ಜೋಶಿ   
ಅತ್ಯುತ್ತಮ ಸಣ್ಣ ಕಥೆಗಳು (ಮೂರನೆಯ ಸಂಪುಟ) - ಸಂಪಾದಕ: ಕೆ. ನರಸಿಂಹಮೂರ್ತಿ
ಕನ್ನಡ ಸಣ್ಣ ಕಥೆಗಳು - ಸಂಪಾದಕ: ಎಲ್.ಎಸ್. ಶೇಷಗಿರಿ ರಾವ್
ಕನ್ನಡ ಸಣ್ಣ ಕತೆಗಳು - ಸಂಪಾದಕ: ಜಿ ಎಚ್ ನಾಯಕ  
ಹೊನ್ನಕಣಜ - ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಸಣ್ಣಕಥೆಗಳ ಸಂಕಲನ
ಸಮಕಾಲೀನ ಕನ್ನಡ ಸಣ್ಣ ಕಥೆಗಳು - ಸಂಪಾದಕ: ರಾಮಚಂದ್ರ ಶರ್ಮ 
ಬಂಡಾಯದ ಕತೆಗಳು - ಸಂಪಾದಕರು : ಚಂದ್ರಶೇಖರ ಆಲೂರು ಮತ್ತು ರಂಜಾನ್ ದರ್ಗಾ 
ಶತಮಾನದ ಸಣ್ಣ ಕತೆಗಳು - ಸಂಪಾದಕರು: ಎಸ್. ದಿವಾಕರ್    
ಪ್ರಿಸಂ ಬುಕ್ ಹೌಸ್ ಪ್ರಕಟಿಸಿದ ವೈಜ್ಞಾನಿಕ ಕತೆಗಳು - ಸಂಪಾದಕಿ: ಸುಭಾಷಿಣಿ 
ಕಥೆಗಾರರು ಮತ್ತು ಕಥೆಗಳ ಪಟ್ಟಿ ನೋಡಿ, ಇಷ್ಟೊಂದು ಕಥೆಗಳಿವೆಯೇ ಅಂತ ತಲೆಬಿಸಿಯಾಗಬೇಕಾದರೆ ನೀವು ಈ ಪಟ್ಟಿಯನ್ನೇ ನೋಡಬೇಕು:  

ಕಥೆಗಾರರು ಮತ್ತು ಕಥೆಗಳು :

  1. ಪಂಜೆ ಮಂಗೇಶರಾಯ - ಕಮಲಪುರದ ಹೊಟ್ಲಿನಲ್ಲಿ, ನನ್ನ ಚಿಕ್ಕ ತಂದೆ, ಭಾರತ ಶ್ರವಣ, ನನ್ನ ಚಿಕ್ಕ ತಂದೆಯವರ ಉಯಿಲ್, ವೈದ್ಯರ ಒಗ್ಗರಣೆ, ನನ್ನ ಚಿಕ್ಕತಾಯಿ, ನನ್ನ ಹೆಂಡತಿ    
  2. ಬೇಕಲ ರಾಮನಾಯಕ - ದೊಡ್ಡಮನೆ ಈಶ್ವರಯ್ಯ, ಬಾಳಿದ ಹೆಸರು, ಉಳ್ಳಾಲದ ರಾಣಿ, ಕೂಡಲು ಸುಬ್ಬಯ್ಯ ಶಾನಭಾಗ,ತಿಮ್ಮನಾಯಕನ ಫಿತೂರಿ,ಕರಣಿಕ ದೇವಪ್ಪಯ್ಯ
  3. ಎ ಆರ್ ಕೃಷ್ಣಶಾಸ್ತ್ರಿ - ಗುರುಗಳ ಮಹಿಮೆ, ಬಂಗಲಿಯ ವಾಸ   
  4. ಕೆರೂರ ವಾಸುದೇವಾಚಾರ್ಯ - ಮಲ್ಲೇಶಿಯ ನಲ್ಲೆಯರು, ತೊಳೆದ ಮುತ್ತು 
  5. ಎಂ.ಎನ್.ಕಾಮತ್ - ಕದ್ದವರು ಯಾರು,ಬೊಗ್ಗು ಮಹಾಶಯ 
  6. ಎಸ್. ಜಿ. ಶಾಸ್ತ್ರಿ - ಹಬ್ಬದ ಉಡುಗೊರೆ, ಪರಪುರುಷ, ತುಂಟಮರಿ 
  7. ಕುಲಕರ್ಣಿ ಶ್ರೀನಿವಾಸ - ಹೊಸಬಾಯಿ 
  8. ಮಾಸ್ತಿ ವೆಂಕಟೇಶ ಐಯ್ಯಂಗಾರ್ -  ಮೊಸರಿನ ಮಂಗಮ್ಮ, ರಂಗಪ್ಪನ ದೀಪಾವಳಿ, ಜೋಗ್ಯೋರ ಅಂಜಪ್ಪನ ಕೋಳಿ ಕತೆ, ಪಂಡಿತನ ಮರಣಶಾಸನ, ಇಲ್ಲಿಯ ತೀರ್ಪು, ಇಂದಿರೆಯೋ ಅಲ್ಲವೋ?, ಬೀದಿಯಲ್ಲಿ ಹೋಗುವ ನಾರಿ, ನಮ್ಮ ಮೇಷ್ಟ್ರು,ವೆಂಕಟಿಗನ ಹೆಂಡತಿ, ರಂಗಸ್ವಾಮಿಯ ಅವಿವೇಕ
  9. ಆನಂದ - ನಾನು ಕೊಂದ ಹುಡುಗಿ
  10. ಕೊರಡ್ಕಲ್ ಶ್ರೀನಿವಾಸ ರಾವ್ - ಧನಿಯರ ಸತ್ಯನಾರಾಯಣ   
  11. ಸೇಡಿಯಾಪು ಕೃಷ್ಣ ಭಟ್ಟ - ನಾಗರಬೆತ್ತ
  12. ತುದಿಯಡ್ಕ ವಿಷ್ಣ್ವಯ್ಯ - ಶ್ಯಾನುಭಾಗ ಶ್ಯಾಮಣ್ಣನವರು, ದೊರೆಯ ಪರಾಜಯ
  13. ಬನ್ನಂಜೆ ರಾಮಾಚಾರ್ಯ - ರೋಬರ್ಟ್ಸ್ ದೊರೆಯ ದಿನಚರಿಯಿಂದ
  14. ಸಿರಿಬಾಗಿಲು ವೆಂಕಪ್ಪಯ್ಯ - ಗುಲ್ಲು ಬಂತೋ ಗುಲ್ಲು
  15. ಸಾಂತ್ಯಾರು ವೆಂಕಟರಾಜ - ಬರ್ಸಲೋರ್ ಬಾಬ್ರಾಯ 
  16. ಎಂ.ವಿ ಹೆಗಡೆ - ದೊರ್ಸಾನಿ
  17. ಗಣಪತಿ ಮೊಳೆಯಾರ - ಸಿಡಿಲು ಮರಿ
  18. ಹುರುಳಿ ಭೀಮರಾವ್ - ಮಾರಯ್ಯನ ಕವಾತು, ಮುರುಕು ದಂಬೂಕು
  19. ಎ. ಆರ್. ಶಗ್ರಿತ್ತಾಯ - ಕಲ್ಯಾಣಪ್ಪನ ಕಾಟುಕಾಯಿ
  20. ಪೇಜಾವರ ಸದಾಶಿವರಾವ್ - ಬಿರುಸು
  21. ಯಂ. ಆರ್. ಶಾಸ್ತ್ರಿ - ರಂಗಪ್ಪನ ಪಠೇಲಿಕೆ
  22. ಕಡಂಗೋಡ್ಲು ಶಂಕರಭಟ್ಟ - ಅದ್ದಿಟ್ಟು , ಚೂರಿ, ಹೊಡೆಯುವ ಗಡಿಯಾರ 
  23. ಕೃಷ್ಣಕುಮಾರ ಕಲ್ಲೂರ - ಗುಬ್ಬಿಗಳ ಸಂಸಾರ, ಜೀವನ 
  24. ಪಡುಕೋಣೆ ರಮಾನಂದರಾಯ - ಬಾಳ್ವೆಯ ಮಸಾಲೆ 
  25. ಯರ್ಮುಂಜ ರಾಮಚಂದ್ರ - ಎಂಕಪ್ಪುವಿನ ದ್ವೇಷಾಗ್ನಿ,ಚೆನ್ನಪ್ಪ ಒಡೆದ ಮೂರ್ತಿ 
  26. ಬಾಗಲೋಡಿ ದೇವರಾಯ - ಪವಾಡಪುರುಷ, ಹುಚ್ಚ ಮುನಸೀಫ, ಅವರವರ ಸುಖ ದುಃಖ,ಶುಕ್ರಾಚಾರ್ಯ  
  27. ಕುವೆಂಪು - ಯಾರೂ ಅರಿಯದ ವೀರ, ಮೀನಾಕ್ಷಿಯ ಮನೆ ಮೇಷ್ಟ್ರುಧನ್ವಂತರಿಯ ಚಿಕಿತ್ಸೆ  
  28. ದ.ರಾ. ಬೇಂದ್ರೆ - ಪಾಲಾ ಫೂ,ನಿರಾಭರಣ ಸುಂದರಿ, ಮಗುವಿನ ಕರೆ 
  29. ವಿಜಿ ಶ್ಯಾನಭಾಗ - ದೇವದಾಸಿ 
  30. ಶ್ರೀ ಸ್ವಾಮಿ - ಬೇಬಿ ನಾಚ್ಚಿಯಾರ್,  ಪುಷ್ಪಮಾಲೆ, ನಂಜಮ್ಮ, ಗೋಧೂಳೀ ಲಗ್ನ 
  31. ಕ್ಷೀರಸಾಗರ - ನಮ್ಮೂರಿನ ಪಶ್ಚಿಮಕ್ಕೆ 
  32. ಹ. ಪೀ. ಜೋಶಿ - ಕಿಚ್ಚಿನ ಕಾವಲು , ಅಪೂರ್ಣಾ  
  33. ನವರತ್ನ ರಾಮರಾಯ - ತಾವರೆಕೋಟೆ, ಲಕ್ಷ್ಮಣರಾಯರ ಭಾಗ್ಯ, ಹೆಣ್ಣು ಹೃದಯ  
  34. ಟೇಂಗ್ಸೆ ಗೋವಿಂದರಾಯ - ಗಂಗೆಯ ಗುತ್ತಿಗೆ, ಛಪ್ಪರಬಂದ್  
  35. ಹೊಯಿಸಳ - ಭಯ ನಿವಾರಣೆ 
  36. ಮೇವುಂಡಿ ಮಲ್ಲಾರಿ - ಸುರಸುಂದರಿ 
  37. ಟಿ. ಎಸ್. ಸಂಜೀವರಾವ್ - ಸೀದ ಒಗ್ಗರಣೆ   
  38. ರಂ.ಶ್ರೀ.ಮುಗಳಿ -  ವಿತಂತು ವೇಶ್ಯೆ
  39. ಗೊರೂರು ರಾಮಸ್ವಾಮಿ ಅಯ್ಯಂಗಾರ್ -  ಹಾರುವಯ್ಯ ಹಜಾಮನಾದದ್ದು, ಆಚಾರ ಕೆಟ್ಟರೂ ಆಕಾರ ಕೆಡಬಾರದು, ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು, ಬೂತಯ್ಯನ ಮಗ ಅಯ್ಯು, ಡೊಂಕು ಬಾಲ    
  40. ಭಾರತೀಪ್ರಿಯ - ಒಂದು ಹಳೆಯ ಕತೆ, ಮೋಚಿ,ವೀಣೆ
  41. ಕೆ ಗೋಪಾಲಕೃಷ್ಣ ರಾವ್ - ಡಾಕ್ಟರ್ ಸುಶೀಲಾ ಸಂಕೇತ್ 
  42. ಎಂ. ವಿ. ಸೀತಾರಾಮಯ್ಯ - ಕರುಣೆ, ಹುಟ್ಟಿನ ಹಂಬಲು
  43. ಜಡಭರತ - ಡೂಗಜ್ಜನ ಬಹಿಷ್ಕಾರ
  44. ಕೊಡಗಿನ ಗೌರಮ್ಮ - ವಾಣಿಯ ಸಮಸ್ಯೆ, ಆಹುತಿ, ಅಪರಾಧಿ ಯಾರು  
  45. ಬಸವರಾಜ ಕಟ್ಟೀಮನಿ - ಅಜ್ಞಾತವಾಸಿ, ಗಿರಿಜಾ ಕಂಡ ಸಿನಿಮಾ, ಬೂಟ್ ಪಾಲಿಷ್, ರಕ್ತಧ್ವಜ, ನೀಲಗಂಗಾ ನಾಗರಪಂಚಮಿಗೆ ಬಂದದ್ದು , ಜೀವನ ಕಲೆ  
  46. ಪೂರ್ಣಚಂದ್ರ ತೇಜಸ್ವಿ- ಅಬಚೂರಿನ ಪೋಸ್ಟಾಫೀಸು, ಲಿಂಗ ಬಂದ, ಕಿರಗೂರಿನ ಗಯ್ಯಾಳಿಗಳು, ಅವನತಿ, ಮಾಯಾಮೃಗ 
  47. ಯಶವಂತ ಚಿತ್ತಾಲ - ಅಬೋಲಿನ, ಕತೆಯಾದಳು ಹುಡುಗಿ, ಸೆರೆ, ಕತೆಯಲ್ಲಿ ಬಂದಾತ ಮನೆಗೂ ಬಂದು ಕದತಟ್ಟಿದ,ಮುಖಾಮುಖಿ
  48. ಯು.ಆರ್. ಅನಂತಮೂರ್ತಿ - ಕ್ಲಿಪ್ ಜಾಯಿಂಟ್,ಸೂರ್ಯನ ಕುದುರೆ,ನವಿಲುಗಳು
  49. ಪಿ. ಲಂಕೇಶ್ - ಉಮಾಪತಿಯ ಸ್ಕಾಲರ್’ಶಿಪ್ ಯಾತ್ರೆ, ಮುಟ್ಟಿಸಿಕೊಂಡವನು,ಸಹಪಾಠಿ, ಕಲ್ಲು ಕರಗುವ ಸಮಯ,ರೊಟ್ಟಿ, ನಿವೃತ್ತರು, ನಾನಲ್ಲ  
  50. ದೇವನೂರು ಮಹಾದೇವ - ಡಾಂಬರು ಬಂದುದು,ಮಾರಿಕೊಂಡವರು, ಅಮಾಸ
  51. ರಾಘವೇಂದ್ರ ಖಾಸನೀಸ - ತಬ್ಬಲಿಗಳು, ಅಶ್ವಾರೋಹಿ
  52. ಶಾಂತಿನಾಥ ದೇಸಾಯಿ - ಕ್ಷಿತಿಜ, ರಾಕ್ಷಸ,ದಿಗ್ಭ್ರಮೆ 
  53. ಜಿ ಎಸ್ ಸದಾಶಿವ - ಹ್ಯಾಂಗೋವರ್, ಮೀಸೆಯವರು  
  54. ಕೆ.ಸದಾಶಿವ - ನಲ್ಲಿಯಲ್ಲಿ ನೀರು ಬಂತು, ರಾಮನ ಸವಾರಿ ಸಂತೆಗೆ ಹೋದದ್ದು
  55. ಅ. ನ. ಕೃಷ್ಣರಾವ್ - ಮಣ್ಣಿನ ಮಗ 
  56. ತರಾಸು - 0-0 = 0, ಇನ್ನೊಂದು ಮುಖ, ಎಕ್ಸ್
  57. ಬೆಟಗೇರಿ ಕೃಷ್ಣಶರ್ಮ(ಆನಂದಕಂದ) - ಮಾತನಾಡುವ ಕಲ್ಲು,  ಮಾಲ್ಕೀ ಹಕ್ಕು, ನೀನು ಪುಟ್ಟನ ತಾಯಿ 
  58. ಜಯಂತ ಕಾಯ್ಕಿಣಿ- ಹಾಲಿನ ಮೀಸೆ, ಸುಗ್ಗಿ , ಅಮೃತಬಳ್ಳಿ ಕಷಾಯ,ಸೇವಂತಿ ಹೂವಿನ ಟ್ರಕ್ಕು,ಕನ್ನಡಿ ಇಲ್ಲದ ಊರಲ್ಲಿ, ಮಧ್ಯಂತರ, ಕಣ್ಣಿಗೊಂದು ಕ್ಷಿತಿಜ, ದಗಡೂ ಪರಬನ ಅಶ್ವಮೇಧ 
  59. ಜೋಗಿ - ಕುಮಾರ ದಿವಂಗತ, ಸುಬ್ಬಣ್ಣ, ಕನ್ನಡಿಯಲ್ಲಿ ಗಳಗನಾಥರಿರಲಿಲ್ಲ, ಗೋವಿಂದ ವಿಠ್ಠಲ .. ಹರಿಹರಿ ವಿಠ್ಠಲ .. ,ರಾಂಗ್ ನಂಬರ್ 
  60. ಬೆಸಗರಹಳ್ಳಿ ರಾಮಣ್ಣ - ಸುಗ್ಗಿ , ಕಕ್ಕರನ ಯುಗಾದಿ,ಗಾಂಧಿ, ನೆಲದ ಒಡಲು, ಗರ್ಜನೆ, ಹರಕೆಯ ಹಣ 
  61. ವ್ಯಾಸರಾಯ ಬಲ್ಲಾಳ - ಮುಸ್ಸಂಜೆ, ಭಾವಬಂಧನ,ಬಂಧ 
  62. ಆಲನಹಳ್ಳಿ ಶ್ರೀಕೃಷ್ಣ - ಗೀಜಗನ ಗೂಡು, ಫೀನಿಕ್ಸ್, ಗೋಡೆ, ಸಂಬಂಧ, ತೊರೆ ಬತ್ತಿರಲಿಲ್ಲ,ಆಗಂತುಕ  
  63. ಅಮರೇಶ ನುಗಡೋಣಿ - ತಮಂಧದ ಕೇಡು, ಹೊತ್ತು ಮೂಡುವ ಸಮಯ 
  64. ಭಾರತೀಸುತ - ಜೇನು ಕಹಿ 
  65. ವೈದೇಹಿ - ಅಕ್ಕು, ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು, ಒಂದು ಅಪರಾಧದ ತನಿಖೆ 
  66. ಟಿಜಿ ರಾಘವ - ಶ್ರಾದ್ಧ, ಜ್ವಾಲೆ ಆರಿತು,ಸಂಕರ 
  67. ಎಸ್ ಎನ್ ಸೇತುರಾಮ್ - ನಾವಲ್ಲ
  68. ವಸುಧೇಂದ್ರ - ಹುಲಿಗೆ ಕಾಡೇ ರಕ್ಷೆ, ಕಾಡಿಗೆ ಹುಲಿಯೇ ರಕ್ಷೆ, ನಮ್ಮ ವಾಜೀನೂ ಆಟಕ್ಕೆ ಸೇರಿಸ್ಕೊಳ್ರೋ, ಅಪಸ್ವರದಲ್ಲೊಂದು ಆರ್ತನಾದ, ಕೆಂಪುಗಿಣಿ
  69. ಅಶ್ವತ್ಥ - ಧರ್ಮಕೊಂಡದ ಕತೆ, ವ್ಯಭಿಚಾರ 
  70. ಚದುರಂಗ - ನಾಲ್ಕು ಮೊಳ ಭೂಮಿ, "ತುಚೀಪ್, ತುದಾಂಡ್, ತುಬದ್ - ರೆಡಿ", ಶವದ ಮನೆ , ನಾಲ್ಕು ಮನೆಯ ನಂದಾದೀಪ   
  71. ನಿರಂಜನ - ಕೊನೆಯ ಗಿರಾಕಿ
  72. ಎಸ್ ದಿವಾಕರ್ - ಇತಿಹಾಸ, ಕ್ರೌರ್ಯ
  73. ದೊಡ್ಡೇರಿ ವೆಂಕಟಗಿರಿ ರಾವ್ - ತುಂಬಿದ ಕೊಡ 
  74. ವಿವೇಕ ಶಾನಭಾಗ - ಹುಲಿಸವಾರಿ, ಗುರುತು,ಲಂಗರು, ನಮ್ಮ ಪಾಡಿಗೆ ನಾವು   
  75. ಕಾಳೇಗೌಡ ನಾಗವಾರ - ಅಲೆಗಳು, ಮಾಯೆ  
  76. ರಾಜಶೇಖರ ನೀರಮಾನ್ವಿ - ಹಂಗಿನರಮನೆಯ ಹೊರಗೆ 
  77. ಕೋ. ಚೆನ್ನಬಸಪ್ಪ - ಮುಕ್ಕಣ್ಣನ ಮುಕ್ತಿ, ನಮ್ಮೂರಿನ ದೀಪ,  ಆ ಕಥೆಯ ಹಿಂದೆ, ಉಂಗುರದ ಉರುಲು 
  78. ಕುಂ.ವೀ - ಕುಪ್ಪಸ, ಕಿವುಡ ನಾಯಿಯಾದ ಕತೆ, ರುದ್ರಪ್ಪನ ಖಡ್ಗ, ಎಲುಗನೆಂಬ ಕೊರಚನೂ ಚೌಡನೆಂಬ ಹಂದಿಯೂ, ದೇವರ ಹೆಣ
  79. ಬೊಳುವಾರು ಮಹಮ್ಮದ್ ಕುಂಞಿ - ಅಂಕ, ಒಂದು ತುಂಡು ಗೋಡೆ, ಕಪ್ಪು ಕಲ್ಲಿನ ಸೈತಾನ, ದೇವರುಗಳ ರಾಜ್ಯದಲ್ಲಿ   
  80. ಕೆಟಿ ಗಟ್ಟಿ - ಮೌಲ್ಯ, ಬಂಡೆ  
  81. ರವಿ ಬೆಳಗೆರೆ -  ಪಾ.ವೆಂ. ಹೇಳಿದ ಕಥೆ, ನೆರಳು, ಮೈಕು, ವಂಧ್ಯ 
  82. ತ್ಯಾಮಗೊಂಡ್ಲು ಅಂಬರೀಶ್ - ಲೆಕ್ಕಾಚಾರ
  83. ದೇಶಪಾಂಡೆ ಸುಬ್ಬರಾಯ - ಕ್ರಿಯಾಕಾಂಡ 
  84. ಅಬ್ದುಲ್ ರಶೀದ್ - ಹಾಲು ಕುಡಿದ ಹುಡುಗಾ, ಕಪ್ಪು ಹುಡುಗನ ಹಾಡು  
  85. ಬಿಸಿ ರಾಮಚಂದ್ರ ಶರ್ಮ - ಯಾರು ಹಿತವರು ನಿನಗೆ, ಸೆರಗಿನ ಕೆಂಡ, ಬೆಳಗಾಯಿತು,ಮಾಗಿ 
  86. ನಾ.ಮೊಗಸಾಲೆ - ಕಿಡ್ನಿ 
  87. ಬಿ.ಎಲ್.ವೇಣು - ಸುಡುಗಾಡು ಸಿದ್ದನ ಪ್ರಸಂಗ
  88. ಪ್ರಹ್ಲಾದ ಅಗಸನಕಟ್ಟೆ- ತಾಜಮಹಲ್
  89. ಕಲಿಗಣನಾಥ ಗುಡದೂರು - ಉಡಿಯಲ್ಲಿಯ ಉರಿ
  90. ಎಂ ಎಸ್ ಕೆ ಪ್ರಭು - ಮುಖಾಬಿಲೆ, ಎರಡು ತೆಂಗಿನ ಮರದುದ್ದದ ಮನುಷ್ಯ 
  91. ಎಂ ಎನ್ ವ್ಯಾಸರಾವ್ - ಅಕ್ವೇರಿಯಂ 
  92. ಅಶೋಕ್ ಹೆಗಡೆ - ಒಳ್ಳೆಯವನು, ಯಾವ ಸೀಮೆಯ ಹುಡುಗ ನೀನು 
  93. ಎಂ ಎಸ್ ಶ್ರೀರಾಮ್ - ಕಪಾಟಿನೊಳಗಿನ ನೆನಪುಗಳು  
  94. ಡಾ. ವಿನಯಾ - ಕಡಿತನಕಾ ಕಾಯೋ ಅಭಿಮಾನ
  95. ಭಾಸ್ಕರ್ ಹೆಗಡೆ - ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ
  96. ರಘು ಅಪಾರ - ಸಾರಿ ಪದ್ಮಿನಿ, ಮಾಸ್ಟರ್ ಸೈಕಲ್ಲಿನ ಬೇಬಿ ಸೀಟ್
  97. ಮೊಗಳ್ಳಿ ಗಣೇಶ - ಒಂದು ಹಳೇ ಚಡ್ಡಿ 
  98. ರಾಜೇಂದ್ರ ಚೆನ್ನಿ - ಏಡಿಹುಣ್ಣು, ದೊಡ್ಡಮರ  
  99. ಸಿ ಬಸವಲಿಂಗಯ್ಯ - ಗಾಳಿಪಟ 
  100. ರಾಮಚಂದ್ರದೇವ - ದೂರ ನಿಂತವರು , ದಂಗೆಯ ಪ್ರಕರಣ
  101. ಟಿ ಎನ್ ಸೀತಾರಾಮ್ - ನಾನು ಪೊಲೀಸರಿಗೆ ಬೇಕಾದೆ 
  102. ಬೈರಪ್ಪ - ಗತಜನ್ಮ
  103. ನಾಗವೇಣಿ ಎಚ್ - ಒಡಲು 
  104. ಬಿ.ಸಿ.ದೇಸಾಯಿ - ಸಾವು
  105. ಶಿವೇಶ್ವರ ದೊಡ್ಡಮನಿ - ರಾಜಮಾ 
  106. ಹವೆಂ ನಾಗರಾಜರಾವ್ - ರಂಗಶಾಮಿ
  107. ಸಮೀತನಹಳ್ಳಿ ರಾಮರಾಯ - ತಾಯಿ 
  108. ಅನುಪಮಾ - ದೇವರೇ ಬರಲಿಲ್ಲ 
  109. ಅಶೋಕ ಹೆಗಡೆ-ಯಾವ ಸೀಮೆಯ ಹುಡುಗ ನೀನು, ತದಡಿಗೆ ಬಂದ ಹಡಗು
  110. ವೀಣಾ ಶಾಂತೇಶ್ವರ - ಕೊನೆಯ ದಾರಿ,ತಿರುಗಿ ಹೋದಳು 
  111. ಗೋಪಾಲಕೃಷ್ಣ ಮಧ್ಯಸ್ತ - ಮೌಲ್ಯಗಳು 
  112. ಶ್ರೀಕಾಂತ - ಪ್ರತಿಮೆಗಳು 
  113. ತ್ರಿವೇಣಿ - ಬೆಡ್ ನಂಬರ್ ಏಳು, ಚಂಪಿ,ನರಬಲಿ 
  114. ಹಿರೇಮಲ್ಲೂರ ಈಶ್ವರನ್ - ಪೂವಮ್ಮ 
  115. ವರಗಿರಿ - ದ್ಯಾವಮ್ಮ - ಕೆಂಚಿ 
  116. ಅಲಕಾ ಕೆ. - ಎರವಿನೊಡವೆ 
  117. ಸಾರಾ ಅಬೂಬಕರ್ - ಬಿಸಿಲ್ಗುದುರೆಯ ಬೆನ್ನುಹತ್ತಿ, ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು, ಚಪ್ಪಲಿಗಳು, ನಿಯಮ ನಿಯಮಗಳ ನಡುವೆ  
  118. ನಾ. ಡಿಸೋಜಾ - ತಂತ್ರ, ಬಣ್ಣ
  119. ಬಿ. ಜನಾರ್ದನ ಭಟ್ - ಕಾಟಕಾಯಿ
  120. ಸ್ವಾಮಿ ಪೊನ್ನಾಚಿ - ಭೂಮಿಗೀತ 
  121. ಚಿದಾನಂದ ಸಾಲಿ - ಕಾಗೆಯೊಂದಗುಳ ಕಂಡರೆ
  122. ಎನ್.ಎಸ್. ಶಂಕರ್ - ರೂಢಿ
  123. ಮಂಜುನಾಥ್ ಲತಾ - ಒಳಗಲ ಜ್ಯೋತಿಯು  
  124. ಪೆಪ್ಪರ್ಮೆಂಟು - ಟಿ.‌ ಎಸ್. ಗೊರವರ 
  125. ಜಯಶ್ರೀ ದೇಶಪಾಂಡೆ - ಘಟಿತ
  126. ಕಸ್ತೂರಿ ಬಾಯಿರಿ - ದಿಂಡೀ
  127. ನೇಮಿಚಂದ್ರ - ಮತ್ತೆ ಬರೆದ ಕವನಗಳು, ನನ್ನದಲ್ಲದ ಬದುಕಿಗಾಗಿ, ಹೊಸ ಹುಟ್ಟು
  128. ಫಕೀರ್ ಮಹಮ್ಮದ್ ಕಟ್ಪಾಡಿ - ಹತ್ಯೆ 
  129. ಕರೀಗೌಡ ಬೀಚನಹಳ್ಳಿ - ಅವಶೇಷ, ಒಂದು ಅಪೂರ್ವ ಸಂಸಾರ 
  130. ರಾಘವೇಂದ್ರ ಪಾಟೀಲ - ಬೆಳ್ಳಕ್ಕಿಗಳ ಲೋಕದಲ್ಲಿ,ದೇಸಗತಿ 
  131. ಮಹಾಬಲಮೂರ್ತಿ ಕೊಡ್ಲೆಕೆರೆ - ತೆರೆದುಕೊಳ್ಳುವ ಲೋಕ 
  132. ಕಮಲಾ ಸುಬ್ರಹ್ಮಣ್ಯಂ - ಕೃಷ್ಣಾ ಮೂರ್ತಿ ಕಣ್ಣಾಮುಂದೆ
  133. ಕವಿತಾ ರೈ - ನಾಟಿ ಓಟ
  134. ಜಯಶ್ರೀ ದಿವಾಕರ್ - ನೆಲೆ ಕಾಣದ ನೆರಳು 
  135. ಪ್ರತಿಭಾ ನಂದಕುಮಾರ್ - ಬೆಳಕು 
  136. ಇಂದ್ರಕುಮಾರ ಎಚ್.‌ಬಿ - ಚಾಕರಿಯಮ್ಮ 
  137. ಕೆ.ಎಂ.ರಶ್ಮಿ - ಅದು 
  138. ಅಲಕ ತೀರ್ಥಹಳ್ಳಿ - ಈ ಕಥೆಗಳ ಸಹವಾಸವೇ ಸಾಕು 
  139. ಶಾಂತಿ ಕೆ ಅಪ್ಪಣ್ಣ - ಬಾಹುಗಳು
  140. ವರದರಾಜ ಹುಯಿಲಗೋಳ - ಬಾಗಿಲು ತೆರೆದಿತ್ತು 
  141. ಎ.ಕೆ.ರಾಮಾನುಜನ್  - ಅಣ್ಣಯ್ಯನ ಮಾನವಶಾಸ್ತ್ರ
  142. ಎಸ್ ಅನಂತನಾರಾಯಣ - ಮಾನವಪ್ರೇಮ 
  143. ಕುಲಕರ್ಣಿ ಬಿಂದುಮಾಧವ - ಗುಡಿ
  144. ನಾಗಮಂಗಲ ಕೃಷ್ಣಮೂರ್ತಿ - ಡವ್ ಕೋಟ್ 
  145. ಟಿಕೆ ದಯಾನಂದ - ನಾಯಿಬೇಟೆ  
  146. ಉಷಾದೇವಿ - ಫರ್ಲಾಂಗಮ್ಮ 
  147. ಪ್ರಜ್ಞಾ ಮತ್ತಿಹಳ್ಳಿ - ತುದಿಬೆಟ್ಟದ ನೀರಹಾಡು 
  148. ರಾಜು ಹೆಗಡೆ - ಕತ್ತಲೆ ಮೌನ ಮತ್ತು 
  149. ಕ.ವೆಂ. ರಾಜಗೋಪಾಲ್ - ಆಶೆಯ ಶಿಶು 
  150. ನಾರಂಗಿಭಟ್ಟ - ಕುಥಭರ್ಟರ ಅಕಾಲಮರಣ 
  151. ನರೇಂದ್ರಬಾಬು - ರೇವು 
  152. ಗೀತಾ ಕುಲಕರ್ಣಿ - ತೇಲಿ ಹೋದ ಮೋಡ 
  153. ಎಚ್. ವಿ. ಸಾವಿತ್ರಮ್ಮ - ಮರುಮದುವೆ  
  154. ಎಸ್ ಆರ್ ಶಂಕರನಾರಾಯಣ ರಾವ್ - ತ್ಯಾಗ 
  155. ಶ್ರೀನಿವಾಸ ಹಾವನೂರ - ಶೂರ್ಪನಖಿ 
  156. ಬಿ.ಟಿ ಜಾಹ್ನವಿ - ವ್ಯಭಿಚಾರ 
  157. ಶ್ರೀಕಂಠ ಪುತ್ತೂರು - ಕ್ರಿಮಿಗಳು 
  158. ಎಲ್ ಎಸ್ ಶೇಷಗಿರಿ ರಾವ್ - ಮುಯ್ಯಿ 
  159. ನಟರಾಜ್ ಹುಳಿಯಾರ್ - ಮಾಯಾಕಿನ್ನರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು,ನೆತ್ತರು ಮತ್ತು ಗುಲಾಬಿ
  160. ಹನುಮಂತ ಹಾಲಿಗೇರಿ - ಮಠದ ಹೋರಿ, ಊರು ಸುಟ್ಟರೂ ಹನುಮಪ್ಪ ಹೊರಗೆ
  161. ಎಲ್ ಡಿ ಸಭಾಹಿತ - ಯಕ್ಷಪ್ರಶ್ನೆ 
  162. ರಾಮಚಂದ್ರ ಕೊಟ್ಟಲಗಿ - ಒಂದೇ ದೇಟಿನ ಕಾಯಿಗಳು
  163. ಬಿ.ಪ್ರಭಾಕರ ಶಿಶಿಲ - ಕೊಡಗರ ಕಾಟಕಾಯಿ, ಬೇಟೆ (ಕನ್ನಡ ಅರೆಭಾಷೆಯ ಸಣ್ಣಕಥೆ) 
  164. ದ. ಬಾ. ಕುಲಕರ್ಣಿ - ಜಾಗೀರಿಯ ದಿಂಬು 
  165. ಬರಗೂರು ರಾಮಚಂದ್ರಪ್ಪ - ಕ್ಷಾಮ,ಬಯಲಾಟದ ಭೀಮಣ್ಣ 
  166. ಕೇಶವ ಮಳಗಿ - ಪತ್ರೋಳಿ
  167. ಕೇಶವರೆಡ್ಡಿ ಹಂದ್ರಾಳ - ಪಂಚರಂಗಿ
  168. ಚೆನ್ನಣ್ಣ ವಾಲೀಕಾರ - ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು 
  169. ಚಂದ್ರಕಾಂತ ವಡ್ಡು - ನೇಪಥ್ಯದ ನೋವು 
  170. ಕಾ.ತ. ಚಿಕ್ಕಣ್ಣ - ಒಡಲುರಿ, ಓಡುವ ಗಿಡಮರಗಳೊಂದಿಗೆ
  171. ಜಾಣಗೆರೆ ವೆಂಕಟರಾಮಯ್ಯ - ಬಿಳೀ ಹಾಳೆಯ ಕಪ್ಪು ನ್ಯಾಯ 
  172. ಆರ್.ಜಿ. ಹಳ್ಳಿ ನಾಗರಾಜ್ - ಹೊಗೆ 
  173. ಬಾನು ಮುಸ್ಥಾಕ್ - ಸರಿದ ಕಾರ್ಮೋಡ 
  174. ಸ್ವರ್ಣಲತಾ ಆಲೂರು - ಆಧಾರ 
  175. ರಾಮಚಂದ್ರ ಮಾಗಡಿ - ಪ್ರಾಣಿಗಳು 
  176. ಬಿ.ಟಿ. ಲಲಿತಾನಾಯಕ - ತಾಯಿ ಸಾಕೀಬಾಯಿ  
  177. ಮಿರ್ಜಿ ಅಣ್ಣಾರಾಯ - ನಮ್ಮೂರ ನಾಯಕರು 
  178. ವಿಜಿ ಭಟ್ಟ - ರಾಮರಾಜ್ಯ, ಅನುಭವಾಮೃತ, ಗುಪ್ತಚಾರ 
  179. ರಾ. ವೆಂ. ಶ್ರೀನಿವಾಸ - ದುಃಖಸೇತು 
  180. ರಾಜಲಕ್ಷ್ಮಿ ಎನ್. ರಾವ್  - ಆವೇ ಮರೀಯಾ, ಫೀಡ್ರಾ
  181. ಸುಮತೀಂದ್ರ ನಾಡಿಗ - ಸುಟ್ಟ ಬೆರಳು,ಹಂಚಿಕೆ 
  182. ಪಿ.ವಿ. ನಂಜರಾಜ ಅರಸು - ಅದೃಶ್ಯ ಪಾಠ 
  183. ಟಿ. ಎನ್. ಕೃಷ್ಣರಾಜು - ಶನಿ ಹಿಡಿದದ್ದು, ಮಾಡು ಸಿಕ್ಕದಲ್ಲಾ 
  184. ವೀರಭದ್ರ - ಕೈ ಬೀಸಿತು ಹೆಣ, ಓ ಹೆಣ್ಣೇ ನಿನ್ನದಿದೇ ಕಥೆಯೇನೇ ?
  185. ಜಿ.ಕೆ. ಗೋವಿಂದರಾವ್ - ಪೊರೆ ಬಿಟ್ಟ ಹಾವು 
  186. ಮಿತ್ರಾ ವೆಂಕಟ್ರಾಜ್ - ಒಂದು ಒಸಗೆ ಒಯ್ಯುವುದಿತ್ತು 
  187. ಜಯಪ್ರಕಾಶ ಮಾವಿನಕುಳಿ - ಅನುಗಾಲವು ಚಿಂತೆ ಜೀವಕೆ, ...ಅಧಿನಾಯಕ ಜಯ ಹೇ  
  188. ಕೆ ಸತ್ಯನಾರಾಯಣ - ಸೀತೆ ಹೇಳಿದ ರಾಮನ ಗುರುತು,ಮುದುಕಿ ಹೇಳಿದ ಸರ್ ಎಂ.ವಿ ಕತೆ ಸರ್ ಎಂ.ವಿ ಕೇಳಿದ ಮುದುಕಿ ಕತೆ 
  189. ಸುಧಾಕರ - ಕಣ್ಣಿ ಕಿತ್ತ ಹಸು   
  190. ಶ್ರೀಕಾಂತ - ಭೂಮಿ ಕಂಪಿಸಲಿಲ್ಲ 
  191. ಮಹಾಂತೇಶ ನವಲಕಲ್ - ಬುದ್ಧ ಗಂಟೆಯ ಸದ್ದು  
  192. ವೈ.ಎಸ್ . ಲೂಯಿಸ್ - ರಾಗ ತರಂಗ 
  193. ನಳಿನಿ ಮೂರ್ತಿ - ರತ್ನಗರ್ಭ ವಸುಂಧರಾ 
  194. ರಾಜಶೇಖರ ಭೂಸನೂರಮಠ - ಪಾಡನ್ ಕಾಡಿನ ಪ್ರಸಂಗ 
  195. ಎಚ್ ರಾಮಚಂದ್ರ ಸ್ವಾಮಿ - ಅಮಾನವರು
  196. ಶೈಲಜಾ ರಾಜಶೇಖರ ಭೂಸನೂರಮಠ - ತಾಯಿ ಯಾರು  
  197. ಮನು - ಸುದರ್ಶನ ಯಾನ 
  198. ನಾಗೇಶ್ ಹೆಗಡೆ - ಡಿಲೇ ವಿಷನ್ 
  199. ಹ.ಶಿ.ಭೈರನಟ್ಟಿ - ಸಮೂಹ ಸಂಮೋಹಿನಿ 
  200. ವಜ್ರಗಳು,ವಣಖೊಬ್ರಿ ಮತ್ತು E = mc2
  201. ವಿರೂಪಾಕ್ಷ ಬಣಕಾರ - ಕೊನೆಯ ಸಂದೇಶ 
  202. ಕನಕಮಾಲಿನಿ ಜೋಶಿ - ಅನೂಹ್ಯ 
  203. ಸುಭಾಷಿಣಿ - ಮಿನುಗೆಲೇ ಮಿಂಚುಳ್ಳಿ 
  204. ದೇವುಡು - ಮೂರು ಕನಸು 
  205. ಕೆವಿ ಅಯ್ಯರ್ - ಅನಾಥ ಅನಸೂಯೆ 
  206. ಕ ವೆಂ ರಾಜಗೋಪಾಲ - ಅನಾಥ ಮೇಷ್ಟರ ಸ್ವಗತ ಸಂಪ್ರದಾಯ       
  207. ಶಾಂತರಸ - ನೀಲಗಂಗಾ ಗುರುಪಾದ ಮತ್ತು ಒಂದು ರೂಪಾಯಿ 
  208. ಶಂಕರ ಮೊಕಾಶಿ ಪುಣೇಕರ - ಬಿಲಾಸಖಾನ 
  209. ವೆಂಕಟರಾಜ ಪಾನಸೆ - ಸಮಾನತೆಯ ಸುಳಿಯಲ್ಲಿ 
  210. ಪರಂಜ್ಯೋತಿ -  ಶೂನ್ಯ
  211. ಗಿರಡ್ಡಿ ಗೋವಿಂದರಾಜು - ನಮ್ಮೂರಿನಲ್ಲೊಬ್ಬ ತಲಾಠಿ 
  212. ಕೆವಿ ತಿರುಮಲೇಶ್ - ನೆಳಲೆಮಠದ ಶ್ರೀಗಳು 
  213. ಎ ಎನ್ ಪ್ರಸನ್ನ - ಹೊಳೆಗೆ ಹೋದದ್ದು 
  214. ಮಾವಿನಕೆರೆ ರಂಗನಾಥನ್ - ಉಳಿದದ್ದು ಆಕಾಶ        
  215. ಮಲ್ಲಿಕಾರ್ಜುನ ಹಿರೇಮಠ - ಅಮೀನಪುರದ ಸಂತೆ 
  216. ಈಶ್ವರಚಂದ್ರ - ಕೊಂಪೆಯಲ್ಲಿ ಕಟ್ಟುತ್ತಿರುವ ಬಂಗಲೆ 
  217. ಶಾಂತಾರಾಮ ಸೋಮಯಾಜಿ - ನೀರಮೇಲೆ ನಡೆಯುವವನು    
  218. ಎಸ್ ಎಫ್ ಯೋಗಪ್ಪನವರ್ - ಆರಾಮಕುರ್ಚಿ


ಛಂದ ಪುಸ್ತಕವು ಗುರುತಿಸಿರುವ ಕಥೆಗಾರರು ಮತ್ತು ಕಥಾಸಂಕಲನಗಳು:

  1. ಸುಮಂಗಲಾ - ಜುಮುರು ಮಳೆ,ಕಾಲಿಟ್ಟಲ್ಲಿ ಕಾಲುದಾರಿ
  2. ಗುರುಪ್ರಸಾದ್ ಕಾಗಿನೆಲೆ - ಶಕುಂತಳಾ
  3. ಡಾ. ಕೆ. ಎನ್. ಗಣೇಶಯ್ಯ - ಶಾಲಭಂಜಿಕೆ
  4. ಸಚ್ಚಿದಾನಂದ ಹೆಗಡೆ - ಕಾರಂತಜ್ಜನಿಗೊಂದು ಪತ್ರ
  5. ನಾಗರಾಜ ವಸ್ತಾರೆ - ಹಕೂನ ಮಟಾಟ
  6. ಸುರೇಂದ್ರನಾಥ್ ಎಸ್. -  ಕಟ್ಟು ಕತೆಗಳು
  7. ಕರ್ಕಿ ಕೃಷ್ಣಮೂರ್ತಿ - ಗಾಳಿಗೆ ಮೆತ್ತಿದ ಬಣ್ಣ
  8. ಪದ್ಮನಾಭ ಭಟ್ ಶೇವ್ಕಾರ - ಕೇಪಿನ ಡಬ್ಬಿ
  9. ವಿಕ್ರಮ ಹತ್ವಾರ- ಝೀರೋ ಮತ್ತು ಒಂದು
  10. ಲೋಕೇಶ ಅಗಸನಕಟ್ಟೆ - ಹಟ್ಟಿಯೆಂಬ ಭೂಮಿಯ ತುಣುಕು
  11. ಡಾ. ವಿನಯಾ - ಊರ ಒಳಗಣ ಬಯಲು
  12. ಸುನಂದಾ ಪ್ರಕಾಶ ಕಡಮೆ - ಪುಟ್ಟ ಪಾದದ ಗುರುತು
  13. ಅಲಕ ತೀರ್ಥಹಳ್ಳಿ - ಈ ಕತೆಗಳ ಸಹವಾಸವೇ ಸಾಕು
  14. ಸಂದೀಪ ನಾಯಕ - ಗೋಡೆಗೆ ಬರೆದ ನವಿಲು
  15. ಕಣಾದ ರಾಘವ - ಮೊದಲ ಮಳೆಯ ಮಣ್ಣು
  16. ಬಸವಣ್ಣೆಪ್ಪಾ ಕಂಬಾರ - ಆಟಿಕೆ
  17. ದಯಾನಂದ - ದೇವರು ಕಚ್ಚಿದ ಸೇಬು
  18. ಮೌನೇಶ್ ಎಲ್. ಬಡಿಗೇರ್ - ಮಾಯಾ ಕೋಲಾಹಲ
  19. ಸ್ವಾಮಿ ಪೊನ್ನಾಚಿ - ಧೂಪದ ಮಕ್ಕಳು


ಅಂಕಿತ ಪುಸ್ತಕದ "ಅಂಕಿತ ಪ್ರತಿಭೆ" ಸರಣಿಯಲ್ಲಿ ಬಂದ ಕಥಾ ಸಂಕಲನಗಳು :

  1. ವಿಕಾಸ್ ನೇಗಿಲೋಣಿ - ಮಳೆಗಾಲ ಬಂದು ಬಾಗಿಲು ತಟ್ಟಿತು
  2. ಸಿಂಧು ರಾವ್ - ಸರ್ವಋತು ಬಂದರು
  3. ಸಚಿನ್ ತೀರ್ಥಹಳ್ಳಿ - ನವಿಲು ಕೊಂದ ಹುಡುಗ


A compilation of Best Kannada short stories by Sharath Bhat Seraje