Wednesday, 17 September 2025

Reactions to my new book - Hattevu Vijnanada Jipa Part 2

 ಪ್ರಸಿದ್ಧ ಕಾದಂಬರಿಕಾರರಾದ ಎಂ.ಆರ್. ದತ್ತಾತ್ರಿಯವರು ಕಳಿಸಿದ ಮೆಸೇಜು ಇದು:

ಪ್ರಿಯ ಶರತ್ ಭಟ್, ನಿಮ್ಮ ಪುಸ್ತಕ ‘ಹತ್ತೇವು ವಿಜ್ಞಾನದ ಜೀಪ’ ಓದಿದೆ. ಇದು ಒಂದು ವಿಶೇಷ ಬಗೆಯ ಓದಿನ ಅನುಭವವನ್ನು ಕೊಡುವ ಪುಸ್ತಕ. ವಿಜ್ಞಾನ ಮತ್ತು ತತ್ತ್ವಜ್ಞಾನ ವಿಚಾರಗಳನ್ನು ಲಲಿತಪ್ರಬಂಧಗಳ ರೂಪದಲ್ಲಿ ಬರೆದಿದ್ದೀರಿ. ನಿಮ್ಮ ಭಾಷೆ ಓದಲು ಸುಲಲಿತ. ಪ್ರತಿ ಪ್ರಬಂಧದಲ್ಲೂ ಹೊಸ ವಿಚಾರಗಳಿವೆ, ಮತ್ತು ಅವುಗಳನ್ನು ವಿನೂತನ ಬಗೆಯಲ್ಲಿ ನಿರೂಪಿಸಿದ್ದೀರಿ. ನಿಮ್ಮ ಹಾಸ್ಯಪ್ರಜ್ಞೆಯಂತೂ ಅಮೋಘವಾಗಿದೆ.

ವಿಜ್ಞಾನ ಸಾಹಿತ್ಯವನ್ನು ನಾನು ಮೊದಲಿಂದಲೂ ಇಷ್ಟಪಟ್ಟು ಓದಿಕೊಂಡು ಬಂದಿದ್ದೇನೆ. ಅಮೆರಿಕದಲ್ಲಿ ಪ್ರತಿವರ್ಷ ಪ್ರಕಟವಾಗುವ The Best American Science and Nature Writing ಸರಣಿಯನ್ನು ಪ್ರತಿವರ್ಷ ತಪ್ಪದೆ ಓದುತ್ತೇನೆ. ನಾನೂ ಕೆಲವು ವಿಜ್ಞಾನ ವಿಚಾರಗಳ ಲೇಖನಗಳನ್ನು ಬರೆದಿದ್ದೇನೆ. ನನ್ನ ಪೂರ್ವ-ಪಶ್ಚಿಮ ಸಂಗ್ರಹದಲ್ಲಿ ಕೆಲವಿವೆ. ಆದರೂ, ಏಕೋ ಅದು ನನ್ನಿಂದ ತಪ್ಪಿತು. ಕಾದಂಬರಿ ಬರಹದ ವ್ಯಾಮೋಹ ಬಹುತೇಕ ಕಾರಣ. 

ನಿಮ್ಮ ಬರಹಗಳು ನನಗೆ ಉಲ್ಲಾಸವನ್ನು ನೀಡಿದವು. ಬಿಲ್ ಬ್ರೈಸನ್ನನ A Short History of Nearly Everything ಓದಿದ ಅನುಭವಕ್ಕೆ ಹತ್ತಿರವಾಗಿವೆ. ವಿಪರೀತದ ವೈಜ್ಞಾನಿಕ ಪದಪುಂಜಗಳನ್ನು ಬಳಸದೆ ಸಾಧಾರಣ ಭಾಷೆಯಲ್ಲಿ ಸುಲಲಿತವಾಗಿ ಅನೇಕ ವಿಚಾರಗಳನ್ನು ಬರೆದಿದ್ದೀರಿ. ಇದು ಅಪರೂಪ. ಶ್ರೀವತ್ಸ ಜೋಶಿಯವರಿಂದ ಮುನ್ನುಡಿ ಬರೆಸಿ ಒಳ್ಳೆಯ ಕೆಲಸ ಮಾಡಿದ್ದೀರಿ. ನಮ್ಮ ತಲೆಮಾರಿನಲ್ಲಿ ಈ ಬಗೆಯ ಬರಹ ಮತ್ತು ಭಾಷೆಗೆ ಮಾಲೀಕರು ಅವರು.

ನಿಮ್ಮ ಮುಂದಿನ ಪುಸ್ತಕಕ್ಕೆ ಅನುಕೂಲವಾಗಬಹುದು ಎಂದು ನಾನು ಪರಿಗಣಿಸುವ ಒಂದೆರಡು ಮಾತಗಳನ್ನು ಹೇಳುತ್ತೇನೆ. ಅನೇಕ ಲೇಖನಗಳು ವಿಜ್ಞಾನ ವಿಚಾರಕ್ಕಿಂತ (subject matter) ಅದರ ಕಾರ್ಯವಿಧಾನ (process) ಮತ್ತು ವಿಜ್ಞಾನಿಗಳ ಮೇಲಿವೆ. ಅದು ತಪ್ಪು ಎಂದಲ್ಲ, ಆದರೆ ವಿಚಾರಗಳ ಮೇಲೆ ಕೇಂದ್ರಿತವಾದಾಗ ಹೆಚ್ಚು ವಿಜ್ಞಾನವು ಓದುಗರನ್ನು ತಲುಪುತ್ತದೆ (ಮತ್ತೆ, ಬಿಲ್ ಬ್ರೈಸನ್ನನ ಪುಸ್ತಕ ನೆನಪಾಗುತ್ತದೆ). ಮತ್ತೊಂದು ವಿಚಾರವೆಂದರೆ, ಲೇಖನಗಳ ವ್ಯಾಪ್ತಿಯನ್ನು ಹಿಗ್ಗಿಸಬಹುದು. ವಿಚಾರಗಳು ಹಿರಿದಾಗಿವೆ ಮತ್ತು ನಿಮ್ಮ ಬರಹವು ಸಂಕ್ಷಿಪ್ತ ಭಾಷೆಗಿಂತ ಸುಲಲಿತ ಭಾಷೆಯನ್ನು ಆಯ್ದುಕೊಳ್ಳುವ ಕಾರಣಕ್ಕೆ ಈ ಬಗೆಯ ಲೇಖನಗಳನ್ನು ಇನ್ನೂ ವಿಸ್ತಾರದಲ್ಲಿ ಬರೆಯಬಹುದು. ಅವೆಲ್ಲವೂ ನಿಮಗೆ ಸಾಧ್ಯ. ಆ ಕಾರಣಕ್ಕೇ ಈ ಮಾತುಗಳನ್ನು ಹೇಳಿದೆ.

ಅಭಿನಂದನೆಗಳು. ಒಂದು ಹೊಸಬಗೆಯ ಬರವಣಿಗೆಯನ್ನು ದಕ್ಕಿಸಿಕೊಂಡಿದ್ದೀರಿ. ನಿಮ್ಮಿಂದ ಕನ್ನಡ ವಿಜ್ಞಾನ ಸಾಹಿತ್ಯವು ಮತ್ತಷ್ಟು ಸಂಪನ್ನಗೊಳ್ಳಲಿದೆ. 

ಎಂ.ಆರ್. ದತ್ತಾತ್ರಿ 

*****************************************************

ಶ್ರೀನಿವಾಸಮೂರ್ತಿ ಶೃಂಗೇರಿ:

ಬಾಗಿಲು ತೆರೆದು ವಿಜ್ಞಾನದ ಜೀಪನ್ನು ಹತ್ತಿ ತಿಂಗಳೇ ಕಳೆದಿತ್ತು. ಆದರೆ ಚಾಲಕನ ಸ್ಥಾನದಲ್ಲಿ ಕುಳಿತಮೇಲೆ ನನ್ನ ಜನ್ಮಸಿದ್ಧ ಹಕ್ಕಾದ ಸೋಮಾರಿತನದ ಕಾರಣ ಜೀಪನ್ನು ಬಹಳ ನಿಧಾನವಾಗಿ ಚಲಾಯಿಸಿದೆ! ಅಂತೂ ಗುರಿಯನ್ನು ತಲುಪಿದ್ದಾಯಿತು. ಅಂತೂ ಈ ಎರಡು ಪುಸ್ತಕಗಳ ಬಗ್ಗೆ ಬರೆಯಲು ಇಂದು ಕಾಲ ಕೂಡಿಬಂದಿದೆ. 

ಎರಡೂ ಪುಸ್ತಕಗಳ ಶೀರ್ಷಿಕೆಯೇ ಅಷ್ಟೊಂದು ಸೊಗಸಾಗಿದೆ. ಜೊತೆಗೆ ವಿಜ್ಞಾನ ಎಂದರೆ ಮಾರುದೂರ ಓಡುವವರೂ ಸಲೀಸಾಗಿ ಓದಬಹುದಾದಂಥ ಪುಸ್ತಕಗಳಿವು. ವಿಜ್ಞಾನದ ಜೀಪ ಎನ್ನುವ ಹೆಸರಿದ್ದಮಾತ್ರಕ್ಕೆ ಭಯಾನಕವಾದ ಸೂತ್ರಗಳು, ಗೋಜಲು ಗೋಜಲಾದ ಸಮೀಕರಣಗಳು, ಅರ್ಥವಾಗದ ಚಿತ್ರವಿಚಿತ್ರ ನಕ್ಷೆಗಳು ಮತ್ತು ಚಿತ್ರಗಳನ್ನೊಳಗೊಂಡ ಕಬ್ಬಿಣದ ಕಡಲೆ ಎಂದು ಭಾವಿಸಬೇಕಿಲ್ಲ. ಪುಸ್ತಕ ವಿಜ್ಞಾನವನ್ನು ಲಲಿತ ಪ್ರಬಂಧದ ಮಾದರಿಯಲ್ಲಿ ಬೋಧಿಸುತ್ತದೆ. 

ಒಂದೊಂದು ವೈಜ್ಞಾನಿಕ ಸಂಶೋಧನೆಯೂ ಎಷ್ಟೊಂದು ಹೋರಾಟಗಳ ಪ್ರತಿಫಲ ಎನ್ನುವುದು ಬಹುಶಃ ಜನಸಾಮಾನ್ಯರಿಗೆ ತಿಳಿದಿರಲಿಕ್ಕಿಲ್ಲ. ನಾವೆಲ್ಲ ದಿನನಿತ್ಯ ಉಪಯೋಗಿಸುವ ಪ್ರತಿಯೊಂದು ಉಪಕರಣವೂ ಸಾವಿರಾರು ಸಲ ಪ್ರಯೋಗಗಳಿಗೊಳಪಟ್ಟು, ಅದರಲ್ಲಿನ ದೋಷಗಳೆಲ್ಲ ನಿವಾರಣೆಯಾಗಿ ಇಂದಿನ ಹಂತಕ್ಕೆ ಬರುವ ಮೊದಲು ಎಷ್ಟು ಜನ ಸಂಶೋಧಕರು ಎಷ್ಟೆಲ್ಲ ಬೆವರು, ರಕ್ತ ಬಸಿದು, ಹಣ ಖರ್ಚುಮಾಡಿ ಅದನ್ನು ಕಂಡುಹಿಡಿದಿದ್ದರು, ಮತ್ತೆ ಎಷ್ಟು ಜನ ಅದನ್ನು ಸುಧಾರಿಸಲು ಪ್ರಯತ್ನಿಸಿದರು ಎನ್ನುವುದರ ಅರಿವು ನಮಗೆ ಇರುವುದು ಅಸಂಭವ. ಮೈಕ್ರೋವೇವ್ ಒಲೆಯನ್ನು ಕಂಡುಹಿಡಿದ ಬಗ್ಗೆ, ಸಿಡುಬಿನ ಲಸಿಕೆ ಕಂಡುಹಿಡಿದ ಬಗ್ಗೆ, ಈ ಪುಸ್ತಕದಲ್ಲಿ ಶರತ್ ಭಟ್ಟರು ಬರೆದಿದ್ದಾರೆ. ಇವು ಕೇವಲ ಉದಾಹರಣೆಗಳಷ್ಟೇ. ಇಂಥ ಅನೇಕ ಸ್ವಾರಸ್ಯಕರ ವಿಷಯಗಳನ್ನು ಬರೆದಿದ್ದಾರೆ. 

ಇನ್ನು ಬಾಗಿಲು ತೆರೆಯೇ ಸೇಸಮ್ಮ ಕುತೂಹಲಕಾರಿ ಲಲಿತಪ್ರಬಂಧಗಳ ಸಂಕಲನ. ಓದುತ್ತ ಹೋದಂತೆ ನಿಮ್ಮ ತಲೆಯಲ್ಲಿ ಎಂಥ ಭಯಾನಕ ಚಿಂತೆಯ ಭೂತ ಹೊಕ್ಕಿದ್ದರೂ ಒಂದು ಕ್ಷಣ ಅದೆಲ್ಲ ಮಾಯವಾಗಿ ತುಟಿಯಲ್ಲೊಂದು ಮುಗುಳ್ನಗೆ, ಮನಸ್ಸಿನಲ್ಲೊಂದು ನೆಮ್ಮದಿ ಖಂಡಿತ ಮೂಡುತ್ತದೆ ಎನ್ನುವುದಕ್ಕೆ ಗ್ಯಾರಂಟಿ ಕೊಡಬಲ್ಲೆ. 

ಮರ್ಯಾದೆ ತೆಗೆಯುವ ಕಲೆ ಎಂಬ ಲೇಖನವನ್ನು ಓದುವಾಗಲಂತೂ ಅದೆಷ್ಟು ನಕ್ಕಿದ್ದೇನೋ ನನಗೇ ಗೊತ್ತಿಲ್ಲ. ಖ್ಯಾತನಾಮರ ಚತುರ ಮಾತುಗಳ ಬಗ್ಗೆ ಸಾಕಷ್ಟು ಕೇಳಿದ್ದ ನಾನು ಅವುಗಳನ್ನೆಲ್ಲ ಸಂಗ್ರಹರೂಪದಲ್ಲಿ ಓದಿದ್ದು ಶರತ್ ಭಟ್ಟರ ಈ ಲೇಖನದಲ್ಲಿ. 

ನಮ್ಮ ಇಂಗ್ಲೀಷ್ ವ್ಯಾಮೋಹಕ್ಕೆ ಇಂಗ್ಲಿಶ್ ಎನೆ ಕುಣಿದಾಡುವುದೆನ್ನದೆ ಎನ್ನುವ ಲೇಖನದಲ್ಲಿ ಸರಿಯಾಗಿ ಮದ್ದು ಅರೆದಿದ್ದಾರೆ. ಮಾತೃಭಾಷೆಯಲ್ಲಿ ಸಂಶೋಧನೆ ಮಾಡಿದ ಪಂಡಿತರೆಲ್ಲ ಎಂಥೆಂಥ ಸಾಧನೆಗಳನ್ನು ಮಾಡಿದ್ದಾರೆ ಎನ್ನುವುದನ್ನು ಉದಾಹರಣೆಗಳ ಸಮೇತ ವಿವರಿಸಿದ್ದಾರೆ. ಇಂಗ್ಲೀಷ್ ಭಾಷೆ ಇಂದು ಅಗತ್ಯ ಎನ್ನುವುದು ನಿಜವಾದರೂ ಅದಿಲ್ಲದೆ ಜೀವನವೇ ಇಲ್ಲವೆಂದು ನಾವು ಹಲುಬುವ ಅಗತ್ಯವಂತೂ ಖಂಡಿತ ಇಲ್ಲ. ವಿಜ್ಞಾನ ಮತ್ತು ಗಣಿತಗಳಲ್ಲಿ ಬಹಳ ಪಂಡಿತರೆನ್ನಿಸಿಕೊಂಡ ರಷ್ಯನ್ನರಲ್ಲಿ ಹೆಚ್ಚಿನವರಿಗೆ ಇಂಗ್ಲೀಷಿನ ಗಂಧಗಾಳಿ ಗೊತ್ತಿಲ್ಲ. ನಾನು ಬಹಳವಾಗಿ ಇಷ್ಟಪಡುವ ವಿಜ್ಞಾನದ ಲೇಖಕ ಯಾಕೋವ್ ಪೆರೆಲ್ಮನ್ ತನ್ನ ಪುಸ್ತಕಗಳನ್ನೆಲ್ಲ ಬರೆದಿರುವುದು ರಷ್ಯನ್ ಭಾಷೆಯಲ್ಲಿ! ಅದನ್ನು ಯಾರೋ ಒಬ್ಬ ಪುಣ್ಯಾತ್ಮ ಇಂಗ್ಲೀಷಿಗೆ ಅನುವಾದ ಮಾಡಿರುವುದರಿಂದ ನಾನು ಅದನ್ನು ಓದಲು ಸಾಧ್ಯವಾಯಿತು ಎನ್ನುವುದು ಬೇರೆ ವಿಚಾರ. ಆದರೆ ಇಂಗ್ಲೀಷ್ ಹೊರತುಪಡಿಸಿ ಬೇರೆ ಭಾಷೆಗಳಲ್ಲೂ ಜ್ಞಾನದ ಸೆಲೆ ಅಪಾರವಾಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ. 

ಕೊನೆಯದಾಗಿ ಪಾಸ್ ವರ್ಡ್ ಗಳ ವಿಷಯಕ್ಕೆ ಬಂದರೆ ಹೆಚ್ಚಿನವರ ಪಾಸ್ವರ್ಡ್ ಗಳು ಬಹಳ ಸುಲಭವಾಗಿ ಊಹಿಸುವಂತೆ ಇರುತ್ತವೆ. ಆದರೆ ಒಂದೊಂದು ಪಾಸ್ವರ್ಡ್ ಹೇಗೆ ಸರ್ವರಿನಲ್ಲಿ ಸೇವ್ ಆಗಿರುತ್ತದೆ, ಅದರ ಹಿಂದಿನ ಕೋಡಿಂಗ್ ಏನು ಅನ್ನುವುದು ನಮಗೆ ಗೊತ್ತಿರುವುದಿಲ್ಲ. ಇದರ ಬಗ್ಗೆ ನಾನೆಲ್ಲೋ ಒಂದು ಜೋಕು ಓದಿದ್ದೆ. ಒಬ್ಬ ಸರ್ದಾರ್ಜಿ ಎಟಿಎಂನಲ್ಲಿ ದುಡ್ಡು ತೆಗೆಯುತ್ತಿದ್ದನಂತೆ. ಆಗ ಅವನ ಹಿಂದೆ ನಿಂತಿದ್ದವನೊಬ್ಬ "ನಿನ್ನ ಎಟಿಎಂ ಪಿನ್ ನನಗೆ ಗೊತ್ತಾಯಿತು. ಅದು ****" ಎಂದು ನಗಾಡಿದನಂತೆ. ಅದಕ್ಕೆ ಪ್ರತಿಯಾಗಿ ಆ ಸರ್ದಾರ್ಜಿ ಬಿದ್ದುಬಿದ್ದು ನಗುತ್ತ "ಅಲ್ಲ, ನನ್ನ ಪಿನ್ 2765. ನಿನಗೆ ಗೊತ್ತಾಗಿಲ್ಲ" ಎಂದನಂತೆ! ಇಂಥ ಪಾಸ್ವರ್ಡ್ ಬಗ್ಗೆಯೂ ಒಂದು ಚಂದದ ಲೇಖನ ಬರೆದಿದ್ದಾರೆ. ಅದಕ್ಕೆ ಬಾಗಿಲು ತೆರೆಯೇ ಸೇಸಮ್ಮ ಎನ್ನುವ ಕುತೂಹಲಕಾರಿ ಶೀರ್ಷಿಕೆ ಕೂಡ ಕೊಟ್ಟಿದ್ದಾರೆ ಎಂದರೆ ಲೇಖನದ ಬಗ್ಗೆ ಅವರು ಅದೆಷ್ಟು ಹೋಂವರ್ಕ್ ಮಾಡಿರಬಹುದು ಎಂದು ಊಹಿಸಬಹುದು. 

ಯಾವುದೇ ಪುಸ್ತಕಗಳಿಗೆ ಕೊಟ್ಟ ಹಣ ವ್ಯರ್ಥವಲ್ಲ. ಹಾಗೆಯೇ ಭಟ್ಟರ ಈ ಪುಸ್ತಕಗಳಿಗೆ ಕೊಟ್ಟ ಹಣವಂತೂ ಖಂಡಿತ ವ್ಯರ್ಥವಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ನೀವು ವಿಜ್ಞಾನದ ಕುತೂಹಲಿಯಾಗಿದ್ದರೂ ಅಥವಾ ಅಲ್ಲದಿದ್ದರೂ ಈ ಪುಸ್ತಕಗಳು ನಿಮಗೆ ಸಾಕಷ್ಟು ಅರಿವು ಹಾಗೂ ಮನರಂಜನೆಯನ್ನು ಖಂಡಿತ ಕೊಡುತ್ತವೆ. ಈ ಪುಸ್ತಕಗಳನ್ನು ತಪ್ಪದೇ ಓದಿ, ಪುಸ್ತಕ ಓದುವ ಸುಖವನ್ನು ನಿಮ್ಮದಾಗಿಸಿಕೊಳ್ಳಿ ಎನ್ನುವ ಪುಕ್ಕಟೆ ಸಲಹೆಯನ್ನು ಕೊಡಬಯಸುತ್ತೇನೆ!

*****************************************************

✍️ ಜಿ.ಎಸ್.ಲಲಿತಾ :


ವಿಜ್ಞಾನ ಎಂದರೇನು ?


ವಿಶೇಷ ಜ್ಞಾನ.....


ವಿಶಿಷ್ಟ ಜ್ಞಾನ.....


ವಿಶಾಲ ಜ್ಞಾನ.....


ವಿಸ್ಮಯ ಜ್ಞಾನ.....


ವಿಸ್ತ್ರತ ಜ್ಞಾನ.....


ವಿಶ್ಲೇಷಿತ ಜ್ಞಾನ.....


ವಿಶದವಾದ ಜ್ಞಾನ.....


ಕೊನೆ ಕೊನೆಗೆ ವಿಷಾದವಾದ ಜ್ಞಾನ......ಎಂದೂ ಹೇಳುವವರಿರಬಹುದು !!


ಹೀಗೊಂದು ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ನೀಡಲು #ವಿಜ್ಞಾನ_ಕಾನನದಲೊಂದು_ಸಫಾರಿ ಎಂಬ ಅಡಿಬರಹದೊಂದಿಗೆ ಕರೆದುಕೊಂಡು ಹೋಗಲು #ಹತ್ತೇವು_ವಿಜ್ಞಾನದ_ಜೀಪ' ಎಂಬ ಪುಸ್ತಕದಲ್ಲಿ ಡ್ರೈವರ್ ಆಗಿ ಕೂತು ವಿವಿಧ ಗೇರ್ ಬದಲಾಯಿಸುತ್ತಾ ಗಿರಗಿರನೆ ಸುತ್ತಿಸುವ ವಿಜ್ಞಾನದ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷನಾಗಲು ಹಗಲಿರುಳೂ ಹಾತೊರೆಯುತ್ತಿರುವ ಲೇಖಕ ಶ್ರೀ #ಶರತ್_ಭಟ್_ಸೇರಾಜೆ !!


ವಿಜ್ಞಾನದ ಬರಹ ಅಂದರೆ ತಾಂತ್ರಿಕ ವಿವರಗಳು,, ಪಾರಿಭಾಷಿಕ ಪದಗಳನ್ನೆಲ್ಲಾ ಬಳಸಿ ಬರೆದರೆ 'ಬೋರು ಹೊಡೆಯುವುದು ಸುಲಭ' ಎಂದೆಣಿಸಿ ಅವರೊಳಗಿನ ವಿಜ್ಞಾನವು ' ಸಾಧ್ಯವಾದರೆ ನನ್ನ ಬಗ್ಗೆ ಸುಲಲಿತವಾಗಿ, ರೋಚಕವಾಗಿ ಬರಿ ನೋಡೋಣ ' ಎಂಬ ಸವಾಲೆಸೆದಂತಾಗಿ ವೈಜ್ಞಾನಿಕ ವಿಷಯಗಳ ಬಗ್ಗೆ ಬರೆಯದೇ 'ವಿಜ್ಞಾನ'ವನ್ನೇ ವಸ್ತುವಾಗಿಕೊಂಡು ಒಟ್ಟು 18 ಪ್ರಬಂಧಗಳ ಸಂಕಲನವಾಗಿ ಹೊರತಂದ ಪುಸ್ತಕ ರೂಪ.


ಈ ಕಾನನದ ಸಫಾರಿಗಾಗಿ ಜೀಪೇನೋ ಹತ್ತಿಯಾಗಿದ್ದ ನನಗೆ ಮೊದಲ ಪ್ರಬಂಧ 'ಕಿರಿಕಿರಿಯಿಂದ ಅಭಿನಂದನಾ ಭಾಷಣಕ್ಕೆ ' ಎಂಬಲ್ಲಿಂದ ಆರಂಭಿಸಿ ' ಇದು ಎಂಥಾ ಪ್ರಯೋಗವಯ್ಯಾ'  ಎಂಬ 7 ಪ್ರಬಂಧಗಳ ಮೈಲುಗಲ್ಲು ದಾಟುವವರೆಗೂ ಜೀಪಿನ ಫಸ್ಟ್ ಗೇರ್ ನಲ್ಲಿ ಪ್ರಯಾಣಿಸಿದಂತೆ ಜೊತೆಗೆ ಕಾನನದ ಏರುತಗ್ಗಿನ ಹಾದಿಯಲ್ಲಿ ಏರಿ ಹಾರಿ ಸಾಗಿದಂತಾ ಅನುಭವ. ಇಷ್ಟರೊಳಗೆ ಕಾನನದ ಸಫಾರಿಗೆ ಜೀಪಿನಲ್ಲಿ ಕೂತವರಿಗೆ ಡ್ರೈವರ್ ಕಮ್ ಗೈಡ್ ಜೀಪಿನ ಆಚೀಚೆ,ಕಾನನದ ಕೋರೆ ಕೋರೆಗಳಲ್ಲಿ ಓ ಅಲ್ ನೋಡಿ ಅದಿದೆ, ಓ ಇಲ್ ನೋಡಿ ಇದಿದೆ,  ಅದ್ಯಾವುದೋ ಪ್ರಾಣಿಗಳ ಹಿಂಡು ಹಾದುಹೋಗ್ತಿದೆ  ಸೈಲೆಂಟಾಗಿ ಆ ದೃಶ್ಯ ನೋಡಿ, ಹಿಂದೆಲ್ಲಾ ಹಾಗಿತ್ತು, ಮುಂದ್ ಹೋದ್ರೆ ಹೀಗಿದೆ,  ಅಂತಾ ಒಂದಿಷ್ಟು ಸೂಚನೆಗಳ ರಾಶಿಯನ್ನು ತಲೆಗೆ ತುಂಬಿಸಿದಂತೆ. ಇದನ್ನು ಭಾರವಾಗಿಸದೇ ಇರಲು ಅಲ್ಲಲ್ಲಿ ಒಂದು ಜೋಕ್, ಒಂದು ತಮಾಷೆ ಪ್ರಸಂಗ ಅಂತ ಸೇರಿಸಿದ್ದರೂ ಈಗಾಗಲೇ ಕಾನನದ ಏರುತಗ್ಗಿನ ದಾರಿಯಲ್ಲಿ ಕೂತು ಮೈ ಕೈ ಉಜ್ಜಿಕೊಳ್ಳುತ್ತಾ, ತಲೆ ಸವರಿಕೊಳ್ತಾ ಮುಂದೇನಿದೆ ಪ್ರಯಾಣದಲ್ಲಿ ಅಂತಾ ಇರೋರಿಗೆ ಈ ಪ್ರಸಂಗಗಳು 'ಹಾಯ್'  ಎಂಬ ಭಾವ ಮೂಡಿಸಲು ಆಗಿಲ್ಲ.


ಎಂಟನೇ ಪ್ರಬಂಧ ' ಕಾರ್ಯಕಾರಣದೊಂದಪೂರ್ವ ನಟನೆ ' ನಂತರ ಸ್ವಲ್ಪ ಗೇರ್ ಬದಲಾಯಿಸುವ ಜೀಪ್ ಕೊನೆಯ 18 ನೇ ಪ್ರಬಂಧದವರೆಗೆ ಓದುವ ಹಾದಿಗೆ ಸ್ವಲ್ಪ ನಯವಾಗಿ, ವೈಚಾರಿಕವಾಗಿ, ತಲೆದೂಗುವಂತೆ ಪ್ರಯಾಣವನ್ನು ಸುಲಲಿತವಾಗಿಸಲು ಪ್ರಯತ್ನಿಸಿದೆ.


ನನ್ನಂತಹ ವಿಜ್ಞಾನದ ಸಾಮಾನ್ಯ ವಿದ್ಯಾರ್ಥಿಗೆ ಹಿಡಿಸಿದ ಅಂಶ 13 ನೇ  'ವಿಜ್ಞಾನವೂ ಅದರ ಆಭಾಸವೂ ' ಎಂಬ ಪ್ರಬಂಧದಲ್ಲಿ ಬರುವ ವಿಚಾರಗಳಲ್ಲಿನ ಪ್ರಕಾರಗಳ ಬಗೆಗಿನ ಅವರ ಅಭಿಪ್ರಾಯ. ಅವರೆಂದಂತೆ ವಿಚಾರಗಳನ್ನು ನಾಲ್ಕು ಪ್ರಕಾರಗಳಾಗಿಸಿ ನೋಡುವುದು. ಅವುಗಳೆಂದರೆ, ವೈಜ್ಞಾನಿಕ (Scientific), ಮೌಢ್ಯ (Disbelief), ವಿಜ್ಞಾನಾಭಾಸ(Pseudoscience), ಮತ್ತು ವಿಜ್ಞಾನೇತರ(Non Science).... (Nonsense) ಅಲ್ಲ !! ಈ ಅಂಶಗಳು ನನಗೆ ವೈಯಕ್ತಿಕವಾಗಿ ಪ್ರತಿಶತ ಹೌದೆನ್ನಿಸಿದವುಗಳು.


ಈ ಪುಸ್ತಕ ನನ್ನಂತಹ ಸಾಮಾನ್ಯ ಓದುಗಳಿಗೆ ಅತಿಶಯದ ರಾಶಿ ಎನಿಸಲು ಕಾರಣ ಲೇಖಕರು ಪ್ರತೀ ಪ್ರಬಂಧಗಳಲ್ಲೂ ಉದ್ಧರಿಸುವ, ಉದಾಹರಿಸುವ ಹೇಳಿಕೆಗಳು, ಪ್ರಸಂಗಗಳು, ಘಟನೆಗಳು, ಕಾಲಮಾನಗಳು ಹೀಗೆ ಒಂದಿಷ್ಟು ವಿಷಯಗಳು. ಕ್ರಿ.ಪೂ. ದಿಂದ ಕ್ರಿ.ಶ.ದವರೆಗೆ, ಜಗತ್ತಿನ ಪೂರ್ವದಿಂದ ಪಶ್ಚಿಮದವರೆಗಿನ ತತ್ವಜ್ಞಾನಿಗಳು, ಚಕ್ರವರ್ತಿಗಳು, ವಿಜ್ಞಾನಿಗಳು, ಲೇಖಕರು ವಿವಿಧ ಕ್ಷೇತ್ರಗಳಲ್ಲಿನ ಪ್ರಸಿದ್ಧ ವ್ಯಕ್ತಿಗಳು, ಅವರವರ ಹೇಳಿಕೆಗಳು, ಪ್ರಸಂಗಗಳು ಎಲ್ಲವನ್ನೂ ಪ್ರಬಂಧಗಳಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಪೋಣಿಸಿರುವುದು. ಇದು ಅವರ ಅಧ್ಯಯನದ ಅಗಾಧತೆ ಮತ್ತು ಗಾಢತೆ !! ಇದರಿಂದ


ಓದುಗನಿಗೆ ಲೇಖಕರ ಅಧ್ಯಯನದ ಆಳ, ಹರಿವು, ವಿಸ್ತಾರ ಮತ್ತು ಅದರ ಸಾಂದರ್ಭಿಕ ಬಳಕೆ ಬಗ್ಗೆ ಹುಬ್ಬೇರಿಸಿ, ತಲೆ ಸವರಿಕೊಂಡು ತಲೆ ಬಾಗುವಂತೆ ಮಾಡುವ ಸಂಗತಿ.


ಇನ್ನೊಂದು ವಿಶೇಷವೆಂದರೆ ಈ ಪುಸ್ತಕದ ಶೀರ್ಷಿಕೆ ಮತ್ತು ಪ್ರತೀ ಪ್ರಬಂಧಗಳ ತಲೆಬರಹ !! ಇಲ್ಲೆಲ್ಲಾ ನಮಗೆಲ್ಲಾ ಅತಿ ಪರಿಚಿತವಾದ, ಜನಪ್ರಿಯವಾದ ಅಚ್ಚ ಕನ್ನಡದ (ಅದು ಹಳೆಗನ್ನಡದಿಂದ ಹೊಸಗನ್ನಡದವರೆಗೆ) ಪದಪುಂಜಗಳನ್ನು ವಿಷಯಕ್ಕನುಸಾರವಾಗಿ ಬಳಸಿರುವ ಅವರ ಕನ್ನಡದ ಒಲುಮೆ ಮತ್ತು ಜಾಣ್ಮೆ !!


ಇವುಗಳಿಂದಲೇ ನಾನು ಆಕರ್ಷಿತಳಾಗಿ ಇನ್ನೊಬ್ಬ ಹೆಸರಾಂತ ಲೇಖಕ #ಶ್ರೀವತ್ಸ_ಜೋಶಿ (ಪರಾಗಸ್ಪರ್ಶ ಖ್ಯಾತಿ) ರವರು ಈ ಪುಸ್ತಕಕ್ಕೆ ಬರೆದ ಮುನ್ನುಡಿ ಬರೆಹವನ್ನು ಅವರ FB page ನಲ್ಲಿನ ಪೋಸ್ಟ್ ಓದಿ ಅಲ್ಲಿ ಸಿಕ್ಕ ಸಂಪರ್ಕ ಸಂಖ್ಯೆಯನ್ನು ಬಳಸಿಕೊಂಡು ಪುಸ್ತಕ ಪ್ರಕಾಶಕರಿಂದ ತರಿಸಿಕೊಂಡು ಕೂಡಲೇ ಸಂಪೂರ್ಣ ಓದಿದ್ದು. ಮತ್ತೀಗ ಅದರ ಕುರಿತು ನನ್ನ ಅನಿಸಿಕೆ ಬರೆದಿದ್ದು.


ಇದೆಲ್ಲವನ್ನೂ ಓದಿದ ಸಾಮಾನ್ಯ ಸಾಹಿತ್ಯ ಓದುಗನಿಗೆ, ಈಗಾಗಲೇ ವಿಜ್ಞಾನ ಕ್ಷೇತ್ರ ಆಯ್ದುಕೊಂಡು ಜೀವನೋಪಾಯ ಹುಡುಕಿಕೊಂಡವನಿಗೆ,ಅನ್ವಯಿಕ ವಿಜ್ಞಾನ ವಿಜ್ರಂಭಿಸುತ್ತಿರುವ ಈ ಕಾಲಕ್ಕೆ, ಮೂಲ ವಿಜ್ಞಾನ ಎಂದರೇನು ? ಎಂಬುದನ್ನು ಒಬ್ಬ ಅಪ್ಪಟ ವಿಜ್ಞಾನದ ಅಭಿಮಾನಿಯಾಗಿ ಶರತ್ ಭಟ್ ಸೇರಾಜೆ ಕೊಡುವ ವ್ಯಾಖ್ಯಾನವೆಂದರೆ ' ಅತಿಶಯವಾದ ಜ್ಞಾನ ಪಿಪಾಸೆಯನ್ನು, ಸತ್ಯವನ್ನು ತಿಳಿಯಬೇಕೆಂಬ ಹಂಬಲದ ಋಜುಮಾರ್ಗವನ್ನು, ವಸ್ತುನಿಷ್ಠವಾದ ಸತ್ಯದ ಹುಡುಕಾಟವನ್ನು, ಕಾರ್ಯ - ಕಾರಣಗಳ ಸಂಬಂಧಗಳ ಬಗೆಗಿನ ನಿತಾಂತವಾದ ಕಾಳಜಿಯನ್ನು, ಅನುದಿನವೂ ಪ್ರಯೋಗಗಳಿಗೆ, ಪರೀಕ್ಷೆಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ, ನಿತ್ಯನೂತನವಾಗುತ್ತಾ, ಅಗ್ನಿದಿವ್ಯಗಳನ್ನು ಹಾದು ವಿಜಯದುಂಧುಬಿಯನ್ನು ಮೊಳಗಿಸುವ ಹುಮ್ಮಸ್ಸೆಂಬ ಗುಣವಿಶೇಷಗಳನ್ನು ಹೊಂದಿರುವುದೇ "#ವಿಜ್ಞಾನ".


#ವಿಜ್ಞಾನಂ_ಗೆಲ್ಗೆ !!


🙏ಧನ್ಯವಾದಗಳು #ಶರತ್_ಭಟ್_ಸೇರಾಜೆ ಒಂದು ಸೈಂಟಿಫಿಕ್ ಸಫಾರಿಗೆ


*****************************************************


ಮಾಕೋನಹಳ್ಳಿ ವಿನಯ್‌ ಮಾಧವ:


ವಿಜ್ಞಾನವು ಅಜ್ಜಿ ಕಥೆಗಳಾದಾಗ…


ಪಿಯುಸಿ ಎಂಬ ಘಟ್ಟವನ್ನು ಕಷ್ಟದಲ್ಲಿ ಪಾಸ್‌ ಮಾಡಿದಾಗಲೇ ನನಗೆ ಗೊತ್ತಾಗಿತ್ತು. ವಿಜ್ಞಾನಕ್ಕೂ, ನನ್ನ ಮೆದುಳಿಗೂ ಸಂಬಂಧವಿಲ್ಲ ಎನ್ನುವುದು. ಆದರೆ, ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಸೀಟು ಬೇಕಿತ್ತು ಅಷ್ಟೆ. ಉಪ ಪ್ರಿನ್ಸಿಪಾಲ್‌ ಆಗಿದ್ದ ರಾಮ್‌ ಭಟ್‌ ಅವರಿಗೆ ನಾನು ಅವರ ಕಾಲೇಜು ಸೇರುವುದು ಇಷ್ಟವಿರಲಿಲ್ಲ ಎಂದು ನನಗೆ ಗೊತ್ತಾಯಿತು. ಪ್ರಿನ್ಸಿಪಲ್‌ ಪ್ರೊ ಕೆ ಈಶ್ವರ್‌ ಅವರು ಮಾತನಾಡುವ ಮುಂಚೆಯೇ, ʻನಿನಗೆ ಬೇಕಾದರೆ ಬಿ ಎಸ್ಸಿ ಪಿ.ಸಿ.ಎಂ (ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತ) ಸಿಗುತ್ತದೆ. ಕಲಾ ಅಥವಾ ವಾಣಿಜ್ಯಕ್ಕೆ ಸೀಟು ಕೊಡಲಾಗುವುದಿಲ್ಲʼ ಎಂದು ಘೋಷಿಸಿದರು.


ʻಈ ಡಿಗ್ರಿ ಮಾಡಿ ಗುಡ್ಡ ಕಡಿಯೋದು ಅಷ್ಟರಲ್ಲೇ ಇದೆ,ʼ ಎಂದು ಮನಸ್ಸಿನಲ್ಲೇ ಗೊಣಗಿಕೊಳ್ಳುತ್ತಾ, ಸಿಕ್ಕದ್ದನ್ನು ತೆಗೆದುಕೊಂಡು ಕಾಲೇಜು ಸೇರಿದೆ. ತಿಪ್ಪರಲಾಗ ಹಾಕಿದರೂ ರಸಾಯನ ಶಾಸ್ತ್ರ ತಲೆಗೆ ಹತ್ತಲು ಒಪ್ಪಲೇ ಇಲ್ಲ. ನಾನೂ ತಲೆ ಕೆಡಿಸಿಕೊಳ್ಳಲಿಲ್ಲ. ನನ್ನ ಕ್ಲಾಸಿನಲ್ಲೇ ಪ್ರತಿಭಾವಂತಳಾಗಿದ್ದ ಲತಾ ಭಟ್‌ಗೆ ನನ್ನ ಮೇಲೆ ಕರುಣೆ ಇಲ್ಲದೇ ಹೋಗಿದ್ದರೆ, ನಾನು ಲ್ಯಾಬ್‌ ರೆಕಾರ್ಡ್‌ ಸಹ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಅಂತೂ, ಆ ಬಿಎಸ್ಸಿ ಎನ್ನುವ ಡಿಗ್ರಿ ನನಗೆ ಸಿಗಲೇ ಇಲ್ಲ.


ಮುಂದೆ, ಕಲಾ ವಿಭಾಗದ ರಾಜಕೀಯ ಶಾಸ್ತ್ರ, ಅರ್ಥ ಶಾಸ್ತ್ರ ಮತ್ತು ಪತ್ರಿಕೋದ್ಯಮಗಳನ್ನು ಓದಿ, ಕೆಲಸಕ್ಕೆ ಸೇರಿದ ಮೇಲೆ ನನಗೆ ಈ ವಿಜ್ಞಾನ ಎನ್ನುವುದು ಅಷ್ಟೊಂದು ಕಷ್ಟದ ವಿಷಯವಲ್ಲ ಎನ್ನುವುದು ಅರ್ಥವಾಗತೊಡಗಿತು. ಆದರೆ, ಅದನ್ನು ಓದುವ ಮತ್ತು ಅರ್ಥಮಾಡಿಕೊಳ್ಳುವ ರೀತಿ ಬೇರೆ ಎನ್ನುವುದು ಸಹ ತಿಳಿಯಿತು. ಆದರೆ, ನಾನು ಕಾಲೇಜಿನಲ್ಲಿದ್ದಾಗ ಇವೆಲ್ಲ, ಅದರಲ್ಲೂ ರಸಾಯನ ಶಾಸ್ತ್ರ ಏಕೆ ಅರ್ಥವಾಗುತ್ತಿರಲಿಲ್ಲ ಎನ್ನುವುದು ಒಂದು ಯಕ್ಷ ಪ್ರಶ್ನೆಯಾಗಿ ಕಾಡತೊಡಗಿತು.


ಮುಂದೊಂದು ದಿನ, ಆಲ್ಬರ್ಟ್‌ ಐನ್ ಸ್ಟೀನ್ ಬಗ್ಗೆ ಇರುವ ತಮಾಷೆಯನ್ನು ಓದುವಾಗ ನನಗೆ ಏನೋ ಹೊಳೆದಂತಾಯಿತು. ಯಾರೋ ಒಂದು ದಿನ ಐನ್‌ ಸ್ಟೀನ್‌ನನ್ನು ಕೇಳಿದರಂತೆ: ʻಒಂದು ಕಿಲೋಮೀಟರ್‌ ನಲ್ಲಿ ಎಷ್ಟು ಇಂಚುಗಳಿರುತ್ತವೆ?ʼ ಎಂದು.


ʻಲಾಗ್‌ ಬುಕ್‌ ತೆಗೆದು ನೋಡಿ. ಅದನ್ನೆಲ್ಲ ಉರು ಹೊಡೆದು ತಲೆಯಲ್ಲಿ ಇಟ್ಟುಕೊಳ್ಳುವುದು ಸಮಯ ವ್ಯರ್ಥ,ʼ ಎಂದರಂತೆ. ನನ್ನ ಇಂದಿನ ಸಮಸ್ಯೆ ಕೂಡ ಅದೇ… ಯಾವುದಾದರನ್ನು ಉರು ಹೊಡೆದು ನೆನಪಿನಲ್ಲಿಟ್ಟುಕೊಳ್ಳುವುದು. ರಸಾಯನ ಶಾಸ್ತ್ರದಲ್ಲಿ ಎಷ್ಟೋ ರಾಸಾಯನಿಕಗಳ ಸಂಯೋಜನೆಗಳನ್ನು ಉರು ಹೊಡೆದೇ ನೆನಪಿನಲ್ಲಿಟ್ಟುಕೊಳ್ಳಬೇಕಿತ್ತು.


ಸೋಡಿಯಂ ಗೆ Na ಯಾಕೆ ಬರಬೇಕು ಅಂತ ಪ್ರಶ್ನೆ ಮಾಡುತ್ತಿದ್ದನೇ ಹೊರತು, ಅದನ್ನು ಉರು ಹೊಡೆಯುವ ಗೋಜಿಗೇ ಹೋಗುತ್ತಿರಲಿಲ್ಲ. ಅದು ನನ್ನ ತಲೆಯಲ್ಲಿಯೂ ಉಳಿಯುತ್ತಿರಲಿಲ್ಲ. ಆದರೆ ಮುಂದೆ, ಅವುಗಳ ಉಪಯೋಗ ಮತ್ತು ಅಪಾಯಗಳನ್ನು ಮಾತ್ರ ಅರ್ಥಮಾಡಿಕೊಳ್ಳಬೇಕಾದ್ದರಿಂದ, ಸುಲಭ ಅನ್ನಿಸುತ್ತಿತ್ತು.


ಒಮ್ಮೆ ನಾನು ಊರಿಗೆ ಹೋದಾಗ, ಜಿಟಿ ಜಿಟಿ ಮಳೆ ಸುರಿಯುತ್ತಿತ್ತು. ಹಾಗೆಯೇ ಕಾರು ಹತ್ತಿ ಕೊಟ್ಟಿಗೆಹಾರದ ಕಡೆಗೆ ಹೊರಟೆ. ಆಗಿನ್ನೂ ತೇಜಸ್ವಿ ಪ್ರತಿಷ್ಠಾನ ಆರಂಭವಾಗಿ, ಕೊಟ್ಟಿಗೆಹಾರದ ಬಸ್‌ ಸ್ಟ್ಯಾಂಡ್‌ ಪಕ್ಕದಲ್ಲಿದ್ದ ಒಂದು ಸಣ್ಣ ಕಟ್ಟಡದಲ್ಲಿ ಇತ್ತು. ಕೊಟ್ಟಿಗೆ ಹಾರದಲ್ಲಿ ವಿಪರೀತ ಮಳೆ ಹಿಡಿದಿತ್ತು ಮತ್ತು ಪ್ರತಿಷ್ಠಾನದಲ್ಲಿ ಯಾರೂ ಇರಲಿಲ್ಲ. ಹಾಗೆಯೇ ಮುಂದು ಚಾರ್ಮಾಡಿ ಘಾಟಿನ ತುದಿಯಲ್ಲಿರುವ ಮಲಯ ಮಾರುತ ಫಾರೆಸ್ಟ್‌ ಗೆಸ್ಟ್‌ ಗೌಸ್‌ ಕಡೆಗೆ ಹೊರಟೆ.


ಕಾರಿನಲ್ಲಿಂದಿಳಿದು ಗೆಸ್ಟ್‌ ಹೌಸ್‌ ಒಳಗೆ ಓಡಿದ ತಕ್ಷಣವೇ ತಪ್ಪು ಮಾಡಿದೆ ಅನ್ನಿಸಿತು. ಎಲ್ಲಾ ಕಡೆಯಿಂದ ನೀರು ಒಳಗೆ ನುಗ್ಗುತ್ತಿತ್ತು. ನೆಲದ ಮೇಲೆ ಅರ್ಧ ಅಡಿಯಷ್ಟು ನೀರು ನಿಂತಿತ್ತು ಮತ್ತು ಇಬ್ಬರು ಡಿಪಾರ್ಟ್‌ಮೆಂಟಿನವರು ನೀರನ್ನು ಹೊರಕ್ಕೆ ಹಾಕಲು ಹರ ಸಾಹಸ ಪಡುತ್ತಿದ್ದರು. ಸರ್ಕಾರದ ಕಟ್ಟಡಗಳ ದುರವಸ್ಥೆ ಕಂಡು ನಗು ಬಂತು. ವಾಪಾಸು ಬರುವಾಗ ತೊಪ್ಪೆಯಾಗಿದ್ದೆ.


ಹಾಗೆಯೇ ಅಂದು ಪ್ರದೀಪ್‌ ಕೆಂಜಿಗೆಗೆ ಫೋನ್‌ ಮಾಡಿ ಮಾತನಾಡುತ್ತಾ, ʻಅಣ್ಣ, ಮಲಯ ಮಾರುತ ಸಕತ್ತಾಗಿತ್ತು. ತೇಜಸ್ವಿ ಏನಾದ್ರೂ ಇದ್ದಿದ್ದು, ಇವತ್ತು ಅಲ್ಲಿಗೆ ಬಂದಿದ್ರೆ, ಒಂದೊಳ್ಳೆ ಕಥೆ ಬರೀತಿದ್ರು ಕಣ್ರಿ… ಕಿರುಗೂರಿನ ಗಯ್ಯಾಳಿಗಳು ಅಥವಾ ನಿಗೂಢ ಮನುಷ್ಯರು ಥರ,ʼ ಎಂದೆ.


ʻಬರೀತ್ತಿದ್ರೇನೋ ಗೊತ್ತಿಲ್ಲ ಕಣ್ರಿ… ಆದ್ರೆ, ಇತ್ತೀಚೆಗೆ ತೇಜಸ್ವಿ ಬರೆಯೋದು ಬಹಳ ಬದಲಾಗಿತ್ತು ಅಂತ ಅನ್ನಿಸೋಲ್ವಾ? ಈಗ ಮಾಯಾ ಲೋಕನೇ ನೋಡಿ. ಅದು ತುಂಬಾ ಜನಕ್ಕೆ ಅರ್ಥವಾಗಿಲ್ಲ. ಯಾಕಂದ್ರೆ, ಅವರು ಅದನ್ನ ಒಂದು ಸೀರೀಸ್‌ ಥರ ಬರೀಬೇಕು ಅಂತ ಇದ್ರು ಅನ್ನಿಸುತ್ತೆ. ಈಗ ಒಂದು ನದಿ ಇಟ್ಟುಕೊಂಡು, ಮುಂದಿನ ಭಾಗದಲ್ಲಿ ಅದರ ಸುತ್ತು ಇರುವ ಜೀವರಾಶಿ…. ಹೀಗೇ ಬರೀತಾ ಹೋಗ್ಬೇಕು ಅಂತ ಇದ್ರು. ಅದನ್ನ ಒಂದ್ಸಲ ನನ್ನ ಹತ್ರಾನೂ ಹೇಳಿದ್ರು. ಈ ಸೀರೀಸ್‌ ವೈಜ್ಞಾನಿಕವಾಗಿ ಇರಬೇಕು ಅಂತ ಅವರಿಗೆ ಇತ್ತು. ಅದೊಂಥರಾ ಹೂವು ಅರಳೋ ಪ್ರಕ್ರಿಯೆ ಇದ್ದ ಹಾಗೆ, ಏನೂ ಇಲ್ಲದ ಎಲೆಯಲ್ಲಿ ನಿಧಾನವಾಗಿ ಮೊಗ್ಗು ಬಂದು, ಅರಳಿ, ಕೊನೆಗೆ ಒಣಗಿ ಉದುರಿ ಹೋಗೋ ಪ್ರಕ್ರಿಯೆ ಥರ… ಮೊದಲನೇ ಭಾಗ ಬರೆದು ಮುಗಿಸಿದ ತಕ್ಷಣ ಹೊರಟು ಹೋದ್ರು. ಹಾಗಾಗಿ, ಅವರ ಮನಸ್ಸಲ್ಲಿ ಏನಿತ್ತು ಅಂತ ಹೇಳೋದು ಕಷ್ಟ,ʼ ಎಂದರು ಪ್ರದೀಪಣ್ಣ.


ನಾನು ಮೌನವಾಗಿ ಅದನ್ನೇ ಯೋಚಿಸುತ್ತಿದ್ದೆ. ಮನೆಗೆ ಬಂದವನೇ, ತೇಜಸ್ವಿ ಅವರ ಕರ್ವಾಲೋ, ಜುಗಾರಿ ಕ್ರಾಸ್ ಮತ್ತು ಚಿದಂಬರ ರಹಸ್ಯ ಪುಸ್ತಕಗಳನ್ನು ತಿರುವಿ ಹಾಕಿದೆ. ನಾನು ಓದಿಯೂ, ಗಮನಿಸದೇ ಇದ್ದ ಎಷ್ಟೋ ವಿಷಯಗಳು ಹೇಗೆ ಪ್ರಕೃತಿ ಮತ್ತು ವಿಜ್ಞಾನಗಳ ಕೊಂಡಿಯನ್ನು ಸೂಕ್ಷ್ಮವಾಗಿ ನಿರೂಪಿಸಿದ್ದಾರೆ ತೇಜಸ್ವಿಯವರು ಎನ್ನುವುದು ನನ್ನ ಗ್ರಹಿಕೆಗೆ ಅನುಗುಣವಾಗಿ ಅರ್ಥವಾಯಿತು. ಉಳಿದವರಿಗೆ ಇದು ಇನ್ನೂ ಹೆಚ್ಚಿನ ಮಟ್ಟಿಗೆ ಅರ್ಥವಾಗಿರಬಹುದು ಎಂದೂ ಅನ್ನಿಸಿತು. ಆದರೆ, ಇದನ್ನು ಗಮನಿಸದೇ ಇದ್ದಾಗ, ಯಾವುದೋ ರಾತ್ರಿ ಮಲಗುವಾಗ ಅಜ್ಜಿ ಹೇಳಿದ ಕಥೆಯಂತೆ ಭಾಸವಾಗುತ್ತಿತ್ತು.


ನಾನಂತೂ ವಿಜ್ಞಾನಕ್ಕೆ ಮಣ್ಣು ಹೊರವ ಪ್ರಯತ್ನವನ್ನಾದರೂ ಮಾಡಿದ್ದೆ. ಹಾಗೆ ನೋಡಿದರೆ ತೇಜಸ್ವಿ ಏನೂ ವಿಜ್ಞಾನದ ವಿದ್ಯಾರ್ಥಿಯಲ್ಲ. ಅವರು ಮೊದಲಿಂದಲೂ ಸಾಹಿತ್ಯ, ತತ್ವಜ್ಞಾನ ಅಭ್ಯಾಸ ಮಾಡಿದವರು. ಅವರು ಜೀವನವನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿಕೊಂಡು ಬದುಕಿದವರು ಅನ್ನಿಸತೊಡಗಿತು. ಇದು ಹೇಗೆ? ಎನ್ನುವ ಪ್ರಶ್ನೆ ನನ್ನನ್ನು ಬಹಳವಾಗಿ ಕಾಡಿತ್ತು.


ಶರತ್‌ ಭಟ್‌ ಸೇರಾಜೆ ಬರೆದ ʻಹತ್ತೇವು ವಿಜ್ಞಾನದ ಜೀಪʼ ಪುಸ್ತಕ ಓದುವಾಗ ಅದಕ್ಕೆ ಉತ್ತರ ಸಿಕ್ಕಿತು ಎಂದುಕೊಂಡಿದ್ದೇನೆ. ಏಕೆಂದರೆ, ವಿಜ್ಞಾನದ ಬಗ್ಗೆ ಒಂದೆರೆಡು ವಾಕ್ಯದಲ್ಲಿ ಯಾವುದಾದರೂ ವ್ಯಾಖ್ಯಾನ ಅಥವಾ Deifinition ಹೇಳುವುದು, ವಾಟ್ಸಾಪ್‌ ನಲ್ಲಿ ಮಹಾಭಾರತ ಕಳುಹಿಸಿದಂತೆ ಆಗುತ್ತದೆ. ಹಾಗೆಯೇ, ತತ್ವ ಶಾಸ್ತ್ರ ಮತ್ತು ವಿಜ್ಞಾನ ದಾಯಾದಿಗಳು. ಎರಡರ ಗುರಿಯೂ ಒಂದೇ: ಮೂಲಸತ್ಯದ ಅನ್ವೇಷಣೆ, ಜ್ಞಾನದ ಹುಡುಕಾಟ.


ಇದನ್ನೇ ತೇಜಸ್ವಿಯವರು ಬದುಕಿನಲ್ಲಿ ಮಾಡಿದ್ದು. ಪ್ರಕೃತಿಯ ಮೂಲ ಸತ್ಯದ ಅನ್ವೇಷಣೆಯಲ್ಲಿ, ಅವರು ಜ್ಞಾನವನ್ನು ಹುಡುಕಾಡುತ್ತಿದ್ದರು. ಹಾಗಾಗಿ, ತೇಜಸ್ವಿಯವರು ಹೇಳಿದ: ʻಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಭಾಗ,ʼ ಎನ್ನುವ ಮಾತು ವಿಜ್ಞಾನಕ್ಕೂ ಅನ್ವಯಿಸುತ್ತದೆ ಎಂದುಕೊಂಡೆ… ʻಪ್ರಕೃತಿ ವಿಜ್ಞಾನದ ಭಾಗವಲ್ಲ, ವಿಜ್ಞಾನ ಪ್ರಕೃತಿಯ ಭಾಗ.ʼ ಹಾಗಾಗಿ, ನನ್ನ ಪ್ರಕಾರ, ʻEnvironmental Scienceʼ ಎನ್ನುವ ಪದವೇ ತಪ್ಪು.


ತೇಜಸ್ವಿಯವರು ವಿಜ್ಞಾನವನ್ನು ತಮ್ಮ ಸಾಹಿತ್ಯದಲ್ಲಿ ಎಷ್ಟು ಸರಳವಾಗಿ ಅಳವಡಿಸಿಕೊಂಡಿದ್ದರೆಂದರೆ, ನಮಗೆ ವಿಜ್ಞಾನ ಮತ್ತು ಬದುಕಿನ ಮಧ್ಯೆ ಇರುವ ಸಣ್ಣ ರೇಖೆಯು ಗಮನಕ್ಕೇ ಬರುತ್ತಿರಲಿಲ್ಲ. ಶರತ್‌ ಭಟ್‌ ಸೆರಾಜೆಯ ಈ ಪುಸ್ತಕ ಸಹ ಹಾಗೆಯೇ… ಅವರ ಮೊದಲ ಪುಸ್ತಕವಾದ ʻಬಾಗಿಲು ತೆರೆಯೇ ಸೇಸಮ್ಮʼದ ಥರ, ವಿಜ್ಞಾನದ ಬಗ್ಗೆ ಇರುವ ಒಂದು ಲಲಿತ ಪ್ರಬಂಧಗಳ ಗುಚ್ಚ. ಆದರೆ, ಸಾಧಾರಣ ಓದುಗರಿಗೆ ತಾವು ವಿಜ್ಞಾನದ ಬಗ್ಗೆ ಓದುತ್ತಿದ್ದೇವೆ ಎನ್ನುವ ಯಾವುದೇ ʻಅರಿಮೆʼ ಮೂಡುವುದಿಲ್ಲ.


ಇಲ್ಲಿ ವಿಜ್ಞಾನಿಗಳ ಕಥೆಗಳು, ಚಾರಿತ್ರಿಕ ಘಟನೆಗಳು ಮತ್ತು ಸತ್ಯ-ಅಸತ್ಯಗಳ ತುಲನೆಗಳು ಬೇಕಷ್ಟಿವೆ. ಪ್ರಪಂಚದ ಎಲ್ಲಾ ವಿಜ್ಞಾನಿಗಳೂ ನಮ್ಮ ಹತ್ತಿರ ಮಾತನಾಡುತ್ತಿರುವಾಗ, ಭಾರತದ ವಿಜ್ಞಾನದ ವಿಶ್ಲೇಷಣೆ… ವೇದಗಳಿಂದ ಹಿಡಿದು, ಭಾರತೀಯ ನವ ದರ್ಶನಗಳಾದ (Nine schools of Indian Philosophy) ನ್ಯಾಯ,  ವೈಶೇಷಿಕ, ಸಾಂಕ್ಯ, ಯೋಗ, ಮಿಮಾಂಸಾ, ವೇದಾಂತ, ಚಾರ್ವಕ, ಬೌದ್ದ ಮತ್ತು ಜೈನಗಳ ಬಗ್ಗೆಯೂ ಬಹಳಷ್ಟು ಬೆಳಕು ಚೆಲ್ಲಿದ್ದಾರೆ. ಓದುಗರಿಗೆ ಯಾವುದೇ ಥರಹದ ಕೀಳರಿಮೆ ಬರದ ರೀತಿಯಲ್ಲಿ.


ಈ ಪುಸ್ತಕವು ವೈಜ್ಞಾನಿಕ ಅವಿಷ್ಕಾರಗಳ ಬಗ್ಗೆ ಇರುವ ಪುಸ್ತಕವೇನಲ್ಲ. ವಿಜ್ಞಾನವನ್ನು ಹೇಗೆ ಮತ್ತು ಯಾಕಾಗಿ ಅರ್ಥ ಮಾಡಿಕೊಳ್ಳಬೇಕು, ಅರ್ಥ ಮಾಡಿಕೊಳ್ಳುವಲ್ಲಿ ನಮ್ಮ ವೈಜ್ಞಾನಿಕ ಮನೋಸ್ಥಿತಿ ಹೇಗಿರಬೇಕು, ಎಷ್ಟನ್ನು ನಂಬಬೇಕು ಮತ್ತು ಎಷ್ಟರ ಮಟ್ಟಿಗೆ  ನಮ್ಮ ತನದ ಬಗ್ಗೆ ದುರಭಿಮಾನಿಯಾಗಿರಬೇಕು ಎನ್ನುವುದನ್ನು ಸಹ, ಉದಾರಣೆ ಸಹಿತ ವಿವರಿಸಿದ್ದಾರೆ.


ಕೆಲವೊಮ್ಮೆ ಹೀಗಾಗುತ್ತದೆ. ಬಹಳ ವರ್ಷಗಳ ಹಿಂದೆ, ಬಿಡಿಸಲಾಗದ ಬಂಧನವಿರುವ ನನ್ನ ಸಂಬಂಧಿಯ ಮನೆಗೆ, ಆರು ತಿಂಗಳ ಅಂತರದಲ್ಲಿ ಹೋಗಿದ್ದೆ. ಮನೆಯ ಸ್ವರೂಪವೇ ಬದಲಾಗಿತ್ತು. ನಿಧಾನವಾಗಿ ಬದಲಾವಣೆಗಳನ್ನೇ ಗಮನಿಸುತ್ತಾ, ನನ್ನ ಅಸಮಾಧಾನ ಹೊರ ಹಾಕಿದೆ.


ʻಇಲ್ಲ ಅಣ್ಣಾ… ಯಾವುದೂ ಸರಿ ಹೋಗುತ್ತಿರಲಿಲ್ಲ. ವಾಸ್ತು ಬದಲಾಯಿಸಿದ್ದೇನೆ,ʼ ಎಂದ. ಅದಕ್ಕೆ ಸುಮಾರು ಹತ್ತು ಲಕ್ಷ ಆಗಿನ ಕಾಲದಲ್ಲೇ ಖರ್ಚು ಮಾಡಿದ್ದು ಕೇಳಿ ನನಗೆ ಪಿತ್ತ ನೆತ್ತಿಗೇರಿತು.


ʻಅಲ್ವೋ… ನಿಮ್ಮಪ್ಪ ಈ ಮನೆ ತಗೊಂಡಾಗ ಬರೀ ನೆಲ ಮಹಡಿ ಇದ್ದಿದ್ದು. ಅದರ ಮೇಲೆ ಒಂದು ಮಹಡಿ ಕಟ್ಟಿದ್ದಾರೆ. ನಿನ್ನ ಮೂರು ಅಕ್ಕಂದಿರನ್ನೂ ಒಳ್ಳೆ ಕಡೆ ಕೊಟ್ಟು ಮದುವೆ ಮಾಡಿದ್ದಾರೆ. ಊರಿನಲ್ಲಿ ಹೆಚ್ಚಿನ ತೋಟ ಕೊಂಡಿದ್ದಾರೆ. ನಿನ್ನ ಡಾಕ್ಟರ್‌ ಮಾಡಿದ್ದಾರೆ. ನಿನ್ನ ಮದುವೆ ಸಹ ಮಾಡಿದ್ದಾರೆ. ಊರಲ್ಲಿ ಸಹ ಅಷ್ಟೊಂದು ದೊಡ್ಡ ಮನೆ ಕಟ್ಟಿದ್ದಾರೆ. ಇದಕ್ಕಿಂತ ವಾಸ್ತು ಇನ್ನೇನೋ ಬೇಕು?ʼ ಎಂದು ಕೇಳಿದೆ.


ʻಅಲ್ಲ ಅಣ್ಣಾ… ವಾಸ್ತು ಸೈನ್ಸ್‌ ಕಣೋ…ʼ ಎಂದೇನೋ ಹೇಳೋಕೆ ಹೋದ.


ಮೊದಲೇ ಸಿಟ್ಟಿನಲ್ಲಿದ್ದ ನಾನು, ʻಆ ವಾಸ್ತು ಹೇಳಿದ ಸೂ… ಮಗ ನನ್ನ ಕೈಗೆ ಸಿಕ್ಕಿದರೆ ಅವನ ತಲೆ ಒಡೀತ್ತೀನಿ. ಅದ್ಯಾವ ನಿನ್ನ ಸೈನ್ಸ್‌ ಅವನ್ನ ಬದುಕಿಸುತ್ತೆ ನೋಡೋಣ. ಅವನ ಮನೆನೂ ವಾಸ್ತು ಪ್ರಕಾರ ಇರ್ತದಲ್ಲ… ನಾನು ಅವನ ತಲೆ ಒಡೆದಾಗ ಏನೂ ಆಗಬಾರದಲ್ಲಾ?ʼ ಎಂದು ಹೇಳಿದ್ದೆ.


ನಮ್ಮ ಎಲ್ಲಾ ಸಂಪ್ರದಾಯದ ನಂಬಿಕೆಗಳಿಗೂ ವಿಜ್ಞಾನದ ತಳಕು ಹಾಕುವುದರ ಬಗ್ಗೆಯೂ ಸಹ ಶರತ್‌ ಈ ಪುಸ್ತಕದಲ್ಲಿ ಬಹಳ ತಮಾಷೆಯಾಗಿ ಬರೆಯುತ್ತಾರೆ. ವಿಜ್ಞಾನ ಎನ್ನುವ ಪದದ ಓತಪ್ರೋತ ಪ್ರಯೋಗದ ಬಗ್ಗೆ ಕಿಡಿ ಕಾರುತ್ತಾ,ʻ… ಪ್ರಾಯಶಃ, ವಿಜ್ಞಾನಿಗಳ ಬಳಗವೊಂದನ್ನು ಬಿಟ್ಟು, ಉಳಿದವರೆಲ್ಲ ತಾವು ಹೇಳುತ್ತಿರುವುದನ್ನು ಸೈನ್ಸ್‌ ಎಂದು ಕರೆಯುತ್ತಿದ್ದಾರೇನೋ! ಇನ್ನು ಸೈನ್ಸ್‌ ಆಫ್‌ ಕತ್ತೆ ಕಾಯುವುದು, ಸೈನ್ಸ್‌ ಆಫ್‌ ಟ್ರೋಲ್‌ ಮಾಡುವುದು – ಎಂಬಂಥವು ಮಾತ್ರ ಬಾಕಿ ಉಳಿದಿರುವಂತಿವೆ…ʼ


ಹಾಗೆಯೇ, ಯಾವುದೇ ವಿಜ್ಞಾನದ ಆವಿಷ್ಕಾರಗಳು ನಮ್ಮ ವೇದಗಳಲ್ಲಿ ಇವೆ ಎಂದು ಹೇಳುವುದನ್ನೂ ಶರತ್‌ ಬಹಳ ಸ್ಪಷ್ಟವಾಗಿ, ಆಯಾ ಶ್ಲೋಕಗಳ ಸಹಿತವಾಗಿ ವಿವರಿಸುತ್ತಾರೆ. ಆದರೆ, ಆಧುನಿಕ ಆವಿಷ್ಕಾರಗಳ ಬುನಾದಿಗಳು ಅಲ್ಲಿ ಕಂಡುಬರುವುದನ್ನೂ ಸಹ, ಉದಾಹರಣೆ ಸಹಿತ ಸ್ಪಷ್ಟವಾಗಿಯೇ ಒಪ್ಪುತ್ತಾರೆ.


ವಿಜ್ಞಾನ ಇರುವುದೇ ಮನುಷ್ಯರ ಜೀವನ ಸರಳಗೊಳಿಸಲು ಹೊರತು, ಕ್ಲಿಷ್ಟಕರವಾಗಿಸಲು ಅಲ್ಲ. ಆದರೆ, ವಾಸ್ತವ ಬೇರೆ ದಿಕ್ಕಿನಲ್ಲಿ ಹೋಗುತ್ತಿದೆ. ಇದಕ್ಕೆ ಕಾರಣ ಇಷ್ಟೆ. ವಿಜ್ಞಾನವನ್ನು ನಾವು ಸರಳವಾಗಿ ಅರ್ಥ ಮಾಡಿಕೊಂಡು, ಆನಂತರ ಅಳವಡಿಸಿಕೊಳ್ಳುವ ಬದಲು, ಅದರ ʻEnd Productʼ ಅನ್ನು ನೇರವಾಗಿ ಮಾರುಕಟ್ಟೆ ವ್ಯಾಪಾರೀಕರಣಕ್ಕೆ ಬಳಸುತ್ತಿದ್ದೇವೆ.


ವಿಜ್ಞಾನವನ್ನು ಸರಳವಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ, ʻಹತ್ತೇವು ವಿಜ್ಞಾನದ ಜೀಪʼ ಪುಸ್ತಕವು ಕನ್ನಡ ಸಾಹಿತ್ಯದಲ್ಲೇ ಒಂದು ವಿಶಿಷ್ಟ ಮತ್ತು ಉಪಯುಕ್ತ ಪ್ರಯೋಗ ಎಂದು ನನಗನ್ನಿಸುತ್ತದೆ. ಈ ಪುಸ್ತಕದ ಎಲ್ಲಾ ಆಯಾಮಗಳನ್ನು ಬರೆಯಲು ಕುಳಿತರೆ, ಶರತ್‌ ಹೇಳಿದಂತೆ, ʻಮಹಾಭಾರತವನ್ನು ವಾಟ್ಸ್ಯಾಪ್‌ ನಲ್ಲಿ ಕಳುಹಿಸಿದಂತೆʼ ಆಗುತ್ತದೆ.


ಶರತ್‌ ಬರೆದ ʻಬಾಗಿಲು ತೆಗೆಯೇ ಸೇಸಮ್ಮʼ ಪುಸ್ತಕದ ಬಗ್ಗೆ ಬರೆಯುತ್ತಾ, ನಾನು ಒಂದು ಮಾತು ಬರೆದಿದ್ದೆ. ʻಸ್ಟೀಫನ್‌ ಹಾಕಿನ್ಸ್ ಬರೆದ ʻA Brief History of Timeʼ ಪುಸ್ತಕವನ್ನು ಕನ್ನಡಕ್ಕೆ ಯಾರಾದರೂ ಭಾಷಾಂತರಿಸಬಲ್ಲರೇ ಎಂಬ ಪ್ರಶ್ನೆ ನನ್ನನ್ನು ಬಹಳ ಸಮಯದಿಂದ ಕಾಡುತ್ತಿತ್ತು. ಬಾಗಿಲು ತೆಗೆಯೇ ಸೇಸಮ್ಮ ಪುಸ್ತಕ ಓದಿದ ಮೇಲೆ, ಅದಕ್ಕೆ ಉತ್ತರ ಸಿಕ್ಕಿದೆ ಎಂದು ಅನ್ನಿಸುತ್ತಿದೆ.ʼ


ಅದಕ್ಕೆ ಇಂದೂ ಬದ್ದನಾಗಿದ್ದೇನೆ…

No comments:

Post a Comment