ಪ್ರಿಯ ಬಾಗಿಲು ತೆರೆಯೇ ಸೇಸಮ್ಮ,
My Facebook Id is: Sharath Bhat Seraje, my mail id is: sharathbhats@gmail.com
Wednesday, 17 September 2025
Second edition of Baagilu tereye sesamma book
Kannada book about Artificial Intelligence - Reviews of AI Barutide Daari Bidi
ಹೊಸಪುಸ್ತಕಗಳ ಬಗ್ಗೆ ಹೊಸ ಪ್ರತಿಕ್ರಿಯೆಗಳು ಹೊಸ ಹರ್ಷವನ್ನು ಉಂಟುಮಾಡುತ್ತವೆ. ನನ್ನ ಹೊಸಪುಸ್ತಕದ ಬಗ್ಗೆ ಮನುಶ್ರೀ ಜೋಯ್ಸ್ ಅವರು ಬರೆದ ಟಿಪ್ಪಣಿ:

Kannada book about Artificial Intelligence Artificial Intelligence in Kannada Book about AI in Kannada ಕನ್ನಡದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಕನ್ನಡದಲ್ಲಿ ಸರಳವಾಗಿ ಕೃತಕ ಬುದ್ಧಿಮತ್ತೆ
Kannada book about Artificial Intelligence in Amazon Hot New Releases
ಆರ್ಟಿಫಿಷಿಯಲ್ ಇಂಟೆಲಿಜೆನ್ಸಿನ ಬಗ್ಗೆ ನಾನು ಬರೆದ "AI ಬರುತಿದೆ ದಾರಿಬಿಡಿ" ಪುಸ್ತಕವನ್ನು "Amazon Hot New Releases"ನ Hot New Releases in Essays ಪಟ್ಟಿಯಲ್ಲಿ ಹತ್ತನೆಯ ಸ್ಥಾನದಲ್ಲಿ ಕಂಡು ಹರ್ಷವಾಯಿತು(ಇದು ಬರಿಯ ಕನ್ನಡದ ಪಟ್ಟಿಯಲ್ಲ, ಇದರಲ್ಲಿ ಇಂಗ್ಲಿಷ್, ಹಿಂದಿ, ಮತ್ತು ಎಲ್ಲ ಭಾರತೀಯ ಭಾಷೆಗಳ ಪುಸ್ತಕಗಳೂ ಸೇರಿವೆ) ಅಂದ ಹಾಗೆ, ನೀವಿನ್ನೂ ಪುಸ್ತಕವನ್ನು ಓದಿಲ್ಲವಾದರೆ, ಓದಿ ಬಿಡಿ.
Artificial Intelligence in Kannada Book about AI in Kannada
ಕನ್ನಡದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ
ಕನ್ನಡದಲ್ಲಿ ಸರಳವಾಗಿ ಕೃತಕ ಬುದ್ಧಿಮತ್ತೆ
Kannada book about Artificial Intelligence - AI Barutide Daari Bidi
ನಿಮಗೊಂದು ಬ್ರೇಕಿಂಗ್ ನ್ಯೂಸ್: ವಿಶ್ವಾಸಾರ್ಹ ಮೂಲಗಳಿಂದ ಬಂದ ವರದಿಯೊಂದರ ಪ್ರಕಾರ, ಚಾಟ್ಜಿಪಿಟಿ, ಕ್ಲಾಡ್, ಜೆಮಿನೈ ಮುಂತಾದ ಚಾಟ್ಬಾಟ್ಗಳ ಜಗತ್ತಿನಲ್ಲಿ ಕಳೆದೊಂದು ವಾರದಿಂದ ಭಾರೀ ಕೋಲಾಹಲವೇ ಎದ್ದಿದೆಯಂತೆ. "ಈ ಶರತ್ ಸೇರಾಜೆ ಎಂಬವನು ನಮ್ಮ ಬಗ್ಗೆಯೇ ಒಂದು ಪುಸ್ತಕವನ್ನು ಬರೆಯುವ ಧೈರ್ಯ ಮಾಡಿದ್ದಾನಂತೆ" ಎಂದು ಚಾಟ್ಜಿಪಿಟಿಯು ಗುಸುಪಿಸು ಮಾಡುತ್ತ ಪಿಸುಗುಟ್ಟಿದಾಗ, ಎಲ್ಲವನ್ನೂ ಬಲ್ಲ ಗೂಗಲ್ಲಿನ ಜೆಮಿನೈಯು, "ಈಚೆಗಷ್ಟೇ ವಿಜ್ಞಾನದ ಬಗ್ಗೆ ಅವನ ಪುಸ್ತಕವೊಂದು ಬಂದಿತ್ತಲ್ಲ, ಅಷ್ಟರಲ್ಲೇ ಮತ್ತೊಂದು ದುಸ್ಸಾಹಸವೇ?" ಎಂದು ಸಂದೇಹವನ್ನು ವ್ಯಕ್ತಪಡಿಸಿತಂತೆ. "ಪುಸ್ತಕವು ಬೋರ್ ಹೊಡೆಸದೆ, ವಿಡಂಬನೆ, ತಿಳಿಹಾಸ್ಯದೊಂದಿಗೆ, ಕಚಗುಳಿಯಿಡುತ್ತ ಕಥೆ ಹೇಳುವ ಶೈಲಿಯಲ್ಲಿ ಉಂಟಂತೆ, ಓದಿದವರು ಇಷ್ಟಪಟ್ಟಿದ್ದಾರಂತೆ, ಹೀಗೆಲ್ಲ ಗಾಳಿಸುದ್ದಿ ಉಂಟು" ಎಂದು ಗ್ರಾಕ್ ಮತ್ತು ಕ್ಲಾಡ್ ಒಗ್ಗರಣೆ ಹಾಕಿದವಂತೆ. "ಹಾಗಾದರೆ ನಾವೆಲ್ಲರೂ ಆದಷ್ಟು ಬೇಗ ಈ ಪುಸ್ತಕವನ್ನೋದಿ ನಮ್ಮ ಬಗ್ಗೆ ಈ ಮಹಾಶಯ ಅದೇನು ಬರೆದು ಗುಡ್ಡೆ ಹಾಕಿದ್ದೇನೋ ನೋಡಿಯೇ ಬಿಡೋಣ" ಎಂದವು ಒಕ್ಕೊರಲಿನ ತೀರ್ಮಾನಕ್ಕೆ ಬಂದವಂತೆ.
******************************
ಅಂದ ಹಾಗೆ, ಓದುಗರಿಗೊಂದು ಶುಭಸಮಾಚಾರ (ಶುಭಸಮಾಚಾರವೋ ಬೈಯ್ಯಲು ಪ್ರೇರಣೆ ಕೊಡುವ ಸಮಾಚಾರವೋ ನೀವೇ ಹೇಳಿ). ನನ್ನ ಹೊಸ ಪುಸ್ತಕವೊಂದು ಲೋಕಾರ್ಪಣೆಯಾಗಿದೆ. ಈ ಪುಸ್ತಕವನ್ನು ಚಾಟ್ಬಾಟ್ಗಳು ಓದುವ ಮುನ್ನ ನೀವೇ ಓದಿ, ಅವುಗಳಿಗಿಂತ ನೀವೇ ಫಾಸ್ಟ್ ಎಂದು ತೋರಿಸಿಬಿಡಿ ಎಂದು ಓದುಗ ಪ್ರಭುಗಳಲ್ಲಿ ನನ್ನ ಪ್ರಾರ್ಥನೆ. ಪುಸ್ತಕದ ಶೀರ್ಷಿಕೆ ಇದು: AI ಬರುತಿದೆ ದಾರಿ ಬಿಡಿ(ನೀವು ಆನ್ಲೈನ್ ಆರ್ಡರ್ ಮಾಡುವುದಾದರೆ ಲಿಂಕುಗಳು ಇಲ್ಲಿವೆ:
Navakarnataka:
https://www.navakarnataka.com/ai-barutide-daari-bidi
Sapnaonline:
https://www.sapnaonline.com/books/ai-barutide-daari-bidi-sharath-bhat-8199052651-9788199052659
Amazon:
https://www.amazon.in/dp/8199052651
Veeraloka:
https://veeralokabooks.com/book/ai-ai-barutide-daari-bidi
Kannadaloka
Beetle bookshop:
https://beetlebookshop.com/products/ai-barutide-daari-bidi
Harivu Books:
This is a Kannada book about Artificial Intelligence
Artificial Intelligence in Kannada
Book about AI in Kannada
ಕನ್ನಡದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ
ಕನ್ನಡದಲ್ಲಿ ಕೃತಕ ಬುದ್ಧಿಮತ್ತೆ
Reactions to my new book - Hattevu Vijnanada Jipa Part 2
ಪ್ರಸಿದ್ಧ ಕಾದಂಬರಿಕಾರರಾದ ಎಂ.ಆರ್. ದತ್ತಾತ್ರಿಯವರು ಕಳಿಸಿದ ಮೆಸೇಜು ಇದು:
ಪ್ರಿಯ ಶರತ್ ಭಟ್, ನಿಮ್ಮ ಪುಸ್ತಕ ‘ಹತ್ತೇವು ವಿಜ್ಞಾನದ ಜೀಪ’ ಓದಿದೆ. ಇದು ಒಂದು ವಿಶೇಷ ಬಗೆಯ ಓದಿನ ಅನುಭವವನ್ನು ಕೊಡುವ ಪುಸ್ತಕ. ವಿಜ್ಞಾನ ಮತ್ತು ತತ್ತ್ವಜ್ಞಾನ ವಿಚಾರಗಳನ್ನು ಲಲಿತಪ್ರಬಂಧಗಳ ರೂಪದಲ್ಲಿ ಬರೆದಿದ್ದೀರಿ. ನಿಮ್ಮ ಭಾಷೆ ಓದಲು ಸುಲಲಿತ. ಪ್ರತಿ ಪ್ರಬಂಧದಲ್ಲೂ ಹೊಸ ವಿಚಾರಗಳಿವೆ, ಮತ್ತು ಅವುಗಳನ್ನು ವಿನೂತನ ಬಗೆಯಲ್ಲಿ ನಿರೂಪಿಸಿದ್ದೀರಿ. ನಿಮ್ಮ ಹಾಸ್ಯಪ್ರಜ್ಞೆಯಂತೂ ಅಮೋಘವಾಗಿದೆ.
ವಿಜ್ಞಾನ ಸಾಹಿತ್ಯವನ್ನು ನಾನು ಮೊದಲಿಂದಲೂ ಇಷ್ಟಪಟ್ಟು ಓದಿಕೊಂಡು ಬಂದಿದ್ದೇನೆ. ಅಮೆರಿಕದಲ್ಲಿ ಪ್ರತಿವರ್ಷ ಪ್ರಕಟವಾಗುವ The Best American Science and Nature Writing ಸರಣಿಯನ್ನು ಪ್ರತಿವರ್ಷ ತಪ್ಪದೆ ಓದುತ್ತೇನೆ. ನಾನೂ ಕೆಲವು ವಿಜ್ಞಾನ ವಿಚಾರಗಳ ಲೇಖನಗಳನ್ನು ಬರೆದಿದ್ದೇನೆ. ನನ್ನ ಪೂರ್ವ-ಪಶ್ಚಿಮ ಸಂಗ್ರಹದಲ್ಲಿ ಕೆಲವಿವೆ. ಆದರೂ, ಏಕೋ ಅದು ನನ್ನಿಂದ ತಪ್ಪಿತು. ಕಾದಂಬರಿ ಬರಹದ ವ್ಯಾಮೋಹ ಬಹುತೇಕ ಕಾರಣ.
ನಿಮ್ಮ ಬರಹಗಳು ನನಗೆ ಉಲ್ಲಾಸವನ್ನು ನೀಡಿದವು. ಬಿಲ್ ಬ್ರೈಸನ್ನನ A Short History of Nearly Everything ಓದಿದ ಅನುಭವಕ್ಕೆ ಹತ್ತಿರವಾಗಿವೆ. ವಿಪರೀತದ ವೈಜ್ಞಾನಿಕ ಪದಪುಂಜಗಳನ್ನು ಬಳಸದೆ ಸಾಧಾರಣ ಭಾಷೆಯಲ್ಲಿ ಸುಲಲಿತವಾಗಿ ಅನೇಕ ವಿಚಾರಗಳನ್ನು ಬರೆದಿದ್ದೀರಿ. ಇದು ಅಪರೂಪ. ಶ್ರೀವತ್ಸ ಜೋಶಿಯವರಿಂದ ಮುನ್ನುಡಿ ಬರೆಸಿ ಒಳ್ಳೆಯ ಕೆಲಸ ಮಾಡಿದ್ದೀರಿ. ನಮ್ಮ ತಲೆಮಾರಿನಲ್ಲಿ ಈ ಬಗೆಯ ಬರಹ ಮತ್ತು ಭಾಷೆಗೆ ಮಾಲೀಕರು ಅವರು.
ನಿಮ್ಮ ಮುಂದಿನ ಪುಸ್ತಕಕ್ಕೆ ಅನುಕೂಲವಾಗಬಹುದು ಎಂದು ನಾನು ಪರಿಗಣಿಸುವ ಒಂದೆರಡು ಮಾತಗಳನ್ನು ಹೇಳುತ್ತೇನೆ. ಅನೇಕ ಲೇಖನಗಳು ವಿಜ್ಞಾನ ವಿಚಾರಕ್ಕಿಂತ (subject matter) ಅದರ ಕಾರ್ಯವಿಧಾನ (process) ಮತ್ತು ವಿಜ್ಞಾನಿಗಳ ಮೇಲಿವೆ. ಅದು ತಪ್ಪು ಎಂದಲ್ಲ, ಆದರೆ ವಿಚಾರಗಳ ಮೇಲೆ ಕೇಂದ್ರಿತವಾದಾಗ ಹೆಚ್ಚು ವಿಜ್ಞಾನವು ಓದುಗರನ್ನು ತಲುಪುತ್ತದೆ (ಮತ್ತೆ, ಬಿಲ್ ಬ್ರೈಸನ್ನನ ಪುಸ್ತಕ ನೆನಪಾಗುತ್ತದೆ). ಮತ್ತೊಂದು ವಿಚಾರವೆಂದರೆ, ಲೇಖನಗಳ ವ್ಯಾಪ್ತಿಯನ್ನು ಹಿಗ್ಗಿಸಬಹುದು. ವಿಚಾರಗಳು ಹಿರಿದಾಗಿವೆ ಮತ್ತು ನಿಮ್ಮ ಬರಹವು ಸಂಕ್ಷಿಪ್ತ ಭಾಷೆಗಿಂತ ಸುಲಲಿತ ಭಾಷೆಯನ್ನು ಆಯ್ದುಕೊಳ್ಳುವ ಕಾರಣಕ್ಕೆ ಈ ಬಗೆಯ ಲೇಖನಗಳನ್ನು ಇನ್ನೂ ವಿಸ್ತಾರದಲ್ಲಿ ಬರೆಯಬಹುದು. ಅವೆಲ್ಲವೂ ನಿಮಗೆ ಸಾಧ್ಯ. ಆ ಕಾರಣಕ್ಕೇ ಈ ಮಾತುಗಳನ್ನು ಹೇಳಿದೆ.
ಅಭಿನಂದನೆಗಳು. ಒಂದು ಹೊಸಬಗೆಯ ಬರವಣಿಗೆಯನ್ನು ದಕ್ಕಿಸಿಕೊಂಡಿದ್ದೀರಿ. ನಿಮ್ಮಿಂದ ಕನ್ನಡ ವಿಜ್ಞಾನ ಸಾಹಿತ್ಯವು ಮತ್ತಷ್ಟು ಸಂಪನ್ನಗೊಳ್ಳಲಿದೆ.
ಎಂ.ಆರ್. ದತ್ತಾತ್ರಿ
*****************************************************
ಶ್ರೀನಿವಾಸಮೂರ್ತಿ ಶೃಂಗೇರಿ:
ಬಾಗಿಲು ತೆರೆದು ವಿಜ್ಞಾನದ ಜೀಪನ್ನು ಹತ್ತಿ ತಿಂಗಳೇ ಕಳೆದಿತ್ತು. ಆದರೆ ಚಾಲಕನ ಸ್ಥಾನದಲ್ಲಿ ಕುಳಿತಮೇಲೆ ನನ್ನ ಜನ್ಮಸಿದ್ಧ ಹಕ್ಕಾದ ಸೋಮಾರಿತನದ ಕಾರಣ ಜೀಪನ್ನು ಬಹಳ ನಿಧಾನವಾಗಿ ಚಲಾಯಿಸಿದೆ! ಅಂತೂ ಗುರಿಯನ್ನು ತಲುಪಿದ್ದಾಯಿತು. ಅಂತೂ ಈ ಎರಡು ಪುಸ್ತಕಗಳ ಬಗ್ಗೆ ಬರೆಯಲು ಇಂದು ಕಾಲ ಕೂಡಿಬಂದಿದೆ.
ಎರಡೂ ಪುಸ್ತಕಗಳ ಶೀರ್ಷಿಕೆಯೇ ಅಷ್ಟೊಂದು ಸೊಗಸಾಗಿದೆ. ಜೊತೆಗೆ ವಿಜ್ಞಾನ ಎಂದರೆ ಮಾರುದೂರ ಓಡುವವರೂ ಸಲೀಸಾಗಿ ಓದಬಹುದಾದಂಥ ಪುಸ್ತಕಗಳಿವು. ವಿಜ್ಞಾನದ ಜೀಪ ಎನ್ನುವ ಹೆಸರಿದ್ದಮಾತ್ರಕ್ಕೆ ಭಯಾನಕವಾದ ಸೂತ್ರಗಳು, ಗೋಜಲು ಗೋಜಲಾದ ಸಮೀಕರಣಗಳು, ಅರ್ಥವಾಗದ ಚಿತ್ರವಿಚಿತ್ರ ನಕ್ಷೆಗಳು ಮತ್ತು ಚಿತ್ರಗಳನ್ನೊಳಗೊಂಡ ಕಬ್ಬಿಣದ ಕಡಲೆ ಎಂದು ಭಾವಿಸಬೇಕಿಲ್ಲ. ಪುಸ್ತಕ ವಿಜ್ಞಾನವನ್ನು ಲಲಿತ ಪ್ರಬಂಧದ ಮಾದರಿಯಲ್ಲಿ ಬೋಧಿಸುತ್ತದೆ.
ಒಂದೊಂದು ವೈಜ್ಞಾನಿಕ ಸಂಶೋಧನೆಯೂ ಎಷ್ಟೊಂದು ಹೋರಾಟಗಳ ಪ್ರತಿಫಲ ಎನ್ನುವುದು ಬಹುಶಃ ಜನಸಾಮಾನ್ಯರಿಗೆ ತಿಳಿದಿರಲಿಕ್ಕಿಲ್ಲ. ನಾವೆಲ್ಲ ದಿನನಿತ್ಯ ಉಪಯೋಗಿಸುವ ಪ್ರತಿಯೊಂದು ಉಪಕರಣವೂ ಸಾವಿರಾರು ಸಲ ಪ್ರಯೋಗಗಳಿಗೊಳಪಟ್ಟು, ಅದರಲ್ಲಿನ ದೋಷಗಳೆಲ್ಲ ನಿವಾರಣೆಯಾಗಿ ಇಂದಿನ ಹಂತಕ್ಕೆ ಬರುವ ಮೊದಲು ಎಷ್ಟು ಜನ ಸಂಶೋಧಕರು ಎಷ್ಟೆಲ್ಲ ಬೆವರು, ರಕ್ತ ಬಸಿದು, ಹಣ ಖರ್ಚುಮಾಡಿ ಅದನ್ನು ಕಂಡುಹಿಡಿದಿದ್ದರು, ಮತ್ತೆ ಎಷ್ಟು ಜನ ಅದನ್ನು ಸುಧಾರಿಸಲು ಪ್ರಯತ್ನಿಸಿದರು ಎನ್ನುವುದರ ಅರಿವು ನಮಗೆ ಇರುವುದು ಅಸಂಭವ. ಮೈಕ್ರೋವೇವ್ ಒಲೆಯನ್ನು ಕಂಡುಹಿಡಿದ ಬಗ್ಗೆ, ಸಿಡುಬಿನ ಲಸಿಕೆ ಕಂಡುಹಿಡಿದ ಬಗ್ಗೆ, ಈ ಪುಸ್ತಕದಲ್ಲಿ ಶರತ್ ಭಟ್ಟರು ಬರೆದಿದ್ದಾರೆ. ಇವು ಕೇವಲ ಉದಾಹರಣೆಗಳಷ್ಟೇ. ಇಂಥ ಅನೇಕ ಸ್ವಾರಸ್ಯಕರ ವಿಷಯಗಳನ್ನು ಬರೆದಿದ್ದಾರೆ.
ಇನ್ನು ಬಾಗಿಲು ತೆರೆಯೇ ಸೇಸಮ್ಮ ಕುತೂಹಲಕಾರಿ ಲಲಿತಪ್ರಬಂಧಗಳ ಸಂಕಲನ. ಓದುತ್ತ ಹೋದಂತೆ ನಿಮ್ಮ ತಲೆಯಲ್ಲಿ ಎಂಥ ಭಯಾನಕ ಚಿಂತೆಯ ಭೂತ ಹೊಕ್ಕಿದ್ದರೂ ಒಂದು ಕ್ಷಣ ಅದೆಲ್ಲ ಮಾಯವಾಗಿ ತುಟಿಯಲ್ಲೊಂದು ಮುಗುಳ್ನಗೆ, ಮನಸ್ಸಿನಲ್ಲೊಂದು ನೆಮ್ಮದಿ ಖಂಡಿತ ಮೂಡುತ್ತದೆ ಎನ್ನುವುದಕ್ಕೆ ಗ್ಯಾರಂಟಿ ಕೊಡಬಲ್ಲೆ.
ಮರ್ಯಾದೆ ತೆಗೆಯುವ ಕಲೆ ಎಂಬ ಲೇಖನವನ್ನು ಓದುವಾಗಲಂತೂ ಅದೆಷ್ಟು ನಕ್ಕಿದ್ದೇನೋ ನನಗೇ ಗೊತ್ತಿಲ್ಲ. ಖ್ಯಾತನಾಮರ ಚತುರ ಮಾತುಗಳ ಬಗ್ಗೆ ಸಾಕಷ್ಟು ಕೇಳಿದ್ದ ನಾನು ಅವುಗಳನ್ನೆಲ್ಲ ಸಂಗ್ರಹರೂಪದಲ್ಲಿ ಓದಿದ್ದು ಶರತ್ ಭಟ್ಟರ ಈ ಲೇಖನದಲ್ಲಿ.
ನಮ್ಮ ಇಂಗ್ಲೀಷ್ ವ್ಯಾಮೋಹಕ್ಕೆ ಇಂಗ್ಲಿಶ್ ಎನೆ ಕುಣಿದಾಡುವುದೆನ್ನದೆ ಎನ್ನುವ ಲೇಖನದಲ್ಲಿ ಸರಿಯಾಗಿ ಮದ್ದು ಅರೆದಿದ್ದಾರೆ. ಮಾತೃಭಾಷೆಯಲ್ಲಿ ಸಂಶೋಧನೆ ಮಾಡಿದ ಪಂಡಿತರೆಲ್ಲ ಎಂಥೆಂಥ ಸಾಧನೆಗಳನ್ನು ಮಾಡಿದ್ದಾರೆ ಎನ್ನುವುದನ್ನು ಉದಾಹರಣೆಗಳ ಸಮೇತ ವಿವರಿಸಿದ್ದಾರೆ. ಇಂಗ್ಲೀಷ್ ಭಾಷೆ ಇಂದು ಅಗತ್ಯ ಎನ್ನುವುದು ನಿಜವಾದರೂ ಅದಿಲ್ಲದೆ ಜೀವನವೇ ಇಲ್ಲವೆಂದು ನಾವು ಹಲುಬುವ ಅಗತ್ಯವಂತೂ ಖಂಡಿತ ಇಲ್ಲ. ವಿಜ್ಞಾನ ಮತ್ತು ಗಣಿತಗಳಲ್ಲಿ ಬಹಳ ಪಂಡಿತರೆನ್ನಿಸಿಕೊಂಡ ರಷ್ಯನ್ನರಲ್ಲಿ ಹೆಚ್ಚಿನವರಿಗೆ ಇಂಗ್ಲೀಷಿನ ಗಂಧಗಾಳಿ ಗೊತ್ತಿಲ್ಲ. ನಾನು ಬಹಳವಾಗಿ ಇಷ್ಟಪಡುವ ವಿಜ್ಞಾನದ ಲೇಖಕ ಯಾಕೋವ್ ಪೆರೆಲ್ಮನ್ ತನ್ನ ಪುಸ್ತಕಗಳನ್ನೆಲ್ಲ ಬರೆದಿರುವುದು ರಷ್ಯನ್ ಭಾಷೆಯಲ್ಲಿ! ಅದನ್ನು ಯಾರೋ ಒಬ್ಬ ಪುಣ್ಯಾತ್ಮ ಇಂಗ್ಲೀಷಿಗೆ ಅನುವಾದ ಮಾಡಿರುವುದರಿಂದ ನಾನು ಅದನ್ನು ಓದಲು ಸಾಧ್ಯವಾಯಿತು ಎನ್ನುವುದು ಬೇರೆ ವಿಚಾರ. ಆದರೆ ಇಂಗ್ಲೀಷ್ ಹೊರತುಪಡಿಸಿ ಬೇರೆ ಭಾಷೆಗಳಲ್ಲೂ ಜ್ಞಾನದ ಸೆಲೆ ಅಪಾರವಾಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ.
ಕೊನೆಯದಾಗಿ ಪಾಸ್ ವರ್ಡ್ ಗಳ ವಿಷಯಕ್ಕೆ ಬಂದರೆ ಹೆಚ್ಚಿನವರ ಪಾಸ್ವರ್ಡ್ ಗಳು ಬಹಳ ಸುಲಭವಾಗಿ ಊಹಿಸುವಂತೆ ಇರುತ್ತವೆ. ಆದರೆ ಒಂದೊಂದು ಪಾಸ್ವರ್ಡ್ ಹೇಗೆ ಸರ್ವರಿನಲ್ಲಿ ಸೇವ್ ಆಗಿರುತ್ತದೆ, ಅದರ ಹಿಂದಿನ ಕೋಡಿಂಗ್ ಏನು ಅನ್ನುವುದು ನಮಗೆ ಗೊತ್ತಿರುವುದಿಲ್ಲ. ಇದರ ಬಗ್ಗೆ ನಾನೆಲ್ಲೋ ಒಂದು ಜೋಕು ಓದಿದ್ದೆ. ಒಬ್ಬ ಸರ್ದಾರ್ಜಿ ಎಟಿಎಂನಲ್ಲಿ ದುಡ್ಡು ತೆಗೆಯುತ್ತಿದ್ದನಂತೆ. ಆಗ ಅವನ ಹಿಂದೆ ನಿಂತಿದ್ದವನೊಬ್ಬ "ನಿನ್ನ ಎಟಿಎಂ ಪಿನ್ ನನಗೆ ಗೊತ್ತಾಯಿತು. ಅದು ****" ಎಂದು ನಗಾಡಿದನಂತೆ. ಅದಕ್ಕೆ ಪ್ರತಿಯಾಗಿ ಆ ಸರ್ದಾರ್ಜಿ ಬಿದ್ದುಬಿದ್ದು ನಗುತ್ತ "ಅಲ್ಲ, ನನ್ನ ಪಿನ್ 2765. ನಿನಗೆ ಗೊತ್ತಾಗಿಲ್ಲ" ಎಂದನಂತೆ! ಇಂಥ ಪಾಸ್ವರ್ಡ್ ಬಗ್ಗೆಯೂ ಒಂದು ಚಂದದ ಲೇಖನ ಬರೆದಿದ್ದಾರೆ. ಅದಕ್ಕೆ ಬಾಗಿಲು ತೆರೆಯೇ ಸೇಸಮ್ಮ ಎನ್ನುವ ಕುತೂಹಲಕಾರಿ ಶೀರ್ಷಿಕೆ ಕೂಡ ಕೊಟ್ಟಿದ್ದಾರೆ ಎಂದರೆ ಲೇಖನದ ಬಗ್ಗೆ ಅವರು ಅದೆಷ್ಟು ಹೋಂವರ್ಕ್ ಮಾಡಿರಬಹುದು ಎಂದು ಊಹಿಸಬಹುದು.
ಯಾವುದೇ ಪುಸ್ತಕಗಳಿಗೆ ಕೊಟ್ಟ ಹಣ ವ್ಯರ್ಥವಲ್ಲ. ಹಾಗೆಯೇ ಭಟ್ಟರ ಈ ಪುಸ್ತಕಗಳಿಗೆ ಕೊಟ್ಟ ಹಣವಂತೂ ಖಂಡಿತ ವ್ಯರ್ಥವಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ನೀವು ವಿಜ್ಞಾನದ ಕುತೂಹಲಿಯಾಗಿದ್ದರೂ ಅಥವಾ ಅಲ್ಲದಿದ್ದರೂ ಈ ಪುಸ್ತಕಗಳು ನಿಮಗೆ ಸಾಕಷ್ಟು ಅರಿವು ಹಾಗೂ ಮನರಂಜನೆಯನ್ನು ಖಂಡಿತ ಕೊಡುತ್ತವೆ. ಈ ಪುಸ್ತಕಗಳನ್ನು ತಪ್ಪದೇ ಓದಿ, ಪುಸ್ತಕ ಓದುವ ಸುಖವನ್ನು ನಿಮ್ಮದಾಗಿಸಿಕೊಳ್ಳಿ ಎನ್ನುವ ಪುಕ್ಕಟೆ ಸಲಹೆಯನ್ನು ಕೊಡಬಯಸುತ್ತೇನೆ!
*****************************************************
✍️ ಜಿ.ಎಸ್.ಲಲಿತಾ :
ವಿಜ್ಞಾನ ಎಂದರೇನು ?
ವಿಶೇಷ ಜ್ಞಾನ.....
ವಿಶಿಷ್ಟ ಜ್ಞಾನ.....
ವಿಶಾಲ ಜ್ಞಾನ.....
ವಿಸ್ಮಯ ಜ್ಞಾನ.....
ವಿಸ್ತ್ರತ ಜ್ಞಾನ.....
ವಿಶ್ಲೇಷಿತ ಜ್ಞಾನ.....
ವಿಶದವಾದ ಜ್ಞಾನ.....
ಕೊನೆ ಕೊನೆಗೆ ವಿಷಾದವಾದ ಜ್ಞಾನ......ಎಂದೂ ಹೇಳುವವರಿರಬಹುದು !!
ಹೀಗೊಂದು ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ನೀಡಲು #ವಿಜ್ಞಾನ_ಕಾನನದಲೊಂದು_ಸಫಾರಿ ಎಂಬ ಅಡಿಬರಹದೊಂದಿಗೆ ಕರೆದುಕೊಂಡು ಹೋಗಲು #ಹತ್ತೇವು_ವಿಜ್ಞಾನದ_ಜೀಪ' ಎಂಬ ಪುಸ್ತಕದಲ್ಲಿ ಡ್ರೈವರ್ ಆಗಿ ಕೂತು ವಿವಿಧ ಗೇರ್ ಬದಲಾಯಿಸುತ್ತಾ ಗಿರಗಿರನೆ ಸುತ್ತಿಸುವ ವಿಜ್ಞಾನದ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷನಾಗಲು ಹಗಲಿರುಳೂ ಹಾತೊರೆಯುತ್ತಿರುವ ಲೇಖಕ ಶ್ರೀ #ಶರತ್_ಭಟ್_ಸೇರಾಜೆ !!
ವಿಜ್ಞಾನದ ಬರಹ ಅಂದರೆ ತಾಂತ್ರಿಕ ವಿವರಗಳು,, ಪಾರಿಭಾಷಿಕ ಪದಗಳನ್ನೆಲ್ಲಾ ಬಳಸಿ ಬರೆದರೆ 'ಬೋರು ಹೊಡೆಯುವುದು ಸುಲಭ' ಎಂದೆಣಿಸಿ ಅವರೊಳಗಿನ ವಿಜ್ಞಾನವು ' ಸಾಧ್ಯವಾದರೆ ನನ್ನ ಬಗ್ಗೆ ಸುಲಲಿತವಾಗಿ, ರೋಚಕವಾಗಿ ಬರಿ ನೋಡೋಣ ' ಎಂಬ ಸವಾಲೆಸೆದಂತಾಗಿ ವೈಜ್ಞಾನಿಕ ವಿಷಯಗಳ ಬಗ್ಗೆ ಬರೆಯದೇ 'ವಿಜ್ಞಾನ'ವನ್ನೇ ವಸ್ತುವಾಗಿಕೊಂಡು ಒಟ್ಟು 18 ಪ್ರಬಂಧಗಳ ಸಂಕಲನವಾಗಿ ಹೊರತಂದ ಪುಸ್ತಕ ರೂಪ.
ಈ ಕಾನನದ ಸಫಾರಿಗಾಗಿ ಜೀಪೇನೋ ಹತ್ತಿಯಾಗಿದ್ದ ನನಗೆ ಮೊದಲ ಪ್ರಬಂಧ 'ಕಿರಿಕಿರಿಯಿಂದ ಅಭಿನಂದನಾ ಭಾಷಣಕ್ಕೆ ' ಎಂಬಲ್ಲಿಂದ ಆರಂಭಿಸಿ ' ಇದು ಎಂಥಾ ಪ್ರಯೋಗವಯ್ಯಾ' ಎಂಬ 7 ಪ್ರಬಂಧಗಳ ಮೈಲುಗಲ್ಲು ದಾಟುವವರೆಗೂ ಜೀಪಿನ ಫಸ್ಟ್ ಗೇರ್ ನಲ್ಲಿ ಪ್ರಯಾಣಿಸಿದಂತೆ ಜೊತೆಗೆ ಕಾನನದ ಏರುತಗ್ಗಿನ ಹಾದಿಯಲ್ಲಿ ಏರಿ ಹಾರಿ ಸಾಗಿದಂತಾ ಅನುಭವ. ಇಷ್ಟರೊಳಗೆ ಕಾನನದ ಸಫಾರಿಗೆ ಜೀಪಿನಲ್ಲಿ ಕೂತವರಿಗೆ ಡ್ರೈವರ್ ಕಮ್ ಗೈಡ್ ಜೀಪಿನ ಆಚೀಚೆ,ಕಾನನದ ಕೋರೆ ಕೋರೆಗಳಲ್ಲಿ ಓ ಅಲ್ ನೋಡಿ ಅದಿದೆ, ಓ ಇಲ್ ನೋಡಿ ಇದಿದೆ, ಅದ್ಯಾವುದೋ ಪ್ರಾಣಿಗಳ ಹಿಂಡು ಹಾದುಹೋಗ್ತಿದೆ ಸೈಲೆಂಟಾಗಿ ಆ ದೃಶ್ಯ ನೋಡಿ, ಹಿಂದೆಲ್ಲಾ ಹಾಗಿತ್ತು, ಮುಂದ್ ಹೋದ್ರೆ ಹೀಗಿದೆ, ಅಂತಾ ಒಂದಿಷ್ಟು ಸೂಚನೆಗಳ ರಾಶಿಯನ್ನು ತಲೆಗೆ ತುಂಬಿಸಿದಂತೆ. ಇದನ್ನು ಭಾರವಾಗಿಸದೇ ಇರಲು ಅಲ್ಲಲ್ಲಿ ಒಂದು ಜೋಕ್, ಒಂದು ತಮಾಷೆ ಪ್ರಸಂಗ ಅಂತ ಸೇರಿಸಿದ್ದರೂ ಈಗಾಗಲೇ ಕಾನನದ ಏರುತಗ್ಗಿನ ದಾರಿಯಲ್ಲಿ ಕೂತು ಮೈ ಕೈ ಉಜ್ಜಿಕೊಳ್ಳುತ್ತಾ, ತಲೆ ಸವರಿಕೊಳ್ತಾ ಮುಂದೇನಿದೆ ಪ್ರಯಾಣದಲ್ಲಿ ಅಂತಾ ಇರೋರಿಗೆ ಈ ಪ್ರಸಂಗಗಳು 'ಹಾಯ್' ಎಂಬ ಭಾವ ಮೂಡಿಸಲು ಆಗಿಲ್ಲ.
ಎಂಟನೇ ಪ್ರಬಂಧ ' ಕಾರ್ಯಕಾರಣದೊಂದಪೂರ್ವ ನಟನೆ ' ನಂತರ ಸ್ವಲ್ಪ ಗೇರ್ ಬದಲಾಯಿಸುವ ಜೀಪ್ ಕೊನೆಯ 18 ನೇ ಪ್ರಬಂಧದವರೆಗೆ ಓದುವ ಹಾದಿಗೆ ಸ್ವಲ್ಪ ನಯವಾಗಿ, ವೈಚಾರಿಕವಾಗಿ, ತಲೆದೂಗುವಂತೆ ಪ್ರಯಾಣವನ್ನು ಸುಲಲಿತವಾಗಿಸಲು ಪ್ರಯತ್ನಿಸಿದೆ.
ನನ್ನಂತಹ ವಿಜ್ಞಾನದ ಸಾಮಾನ್ಯ ವಿದ್ಯಾರ್ಥಿಗೆ ಹಿಡಿಸಿದ ಅಂಶ 13 ನೇ 'ವಿಜ್ಞಾನವೂ ಅದರ ಆಭಾಸವೂ ' ಎಂಬ ಪ್ರಬಂಧದಲ್ಲಿ ಬರುವ ವಿಚಾರಗಳಲ್ಲಿನ ಪ್ರಕಾರಗಳ ಬಗೆಗಿನ ಅವರ ಅಭಿಪ್ರಾಯ. ಅವರೆಂದಂತೆ ವಿಚಾರಗಳನ್ನು ನಾಲ್ಕು ಪ್ರಕಾರಗಳಾಗಿಸಿ ನೋಡುವುದು. ಅವುಗಳೆಂದರೆ, ವೈಜ್ಞಾನಿಕ (Scientific), ಮೌಢ್ಯ (Disbelief), ವಿಜ್ಞಾನಾಭಾಸ(Pseudoscience), ಮತ್ತು ವಿಜ್ಞಾನೇತರ(Non Science).... (Nonsense) ಅಲ್ಲ !! ಈ ಅಂಶಗಳು ನನಗೆ ವೈಯಕ್ತಿಕವಾಗಿ ಪ್ರತಿಶತ ಹೌದೆನ್ನಿಸಿದವುಗಳು.
ಈ ಪುಸ್ತಕ ನನ್ನಂತಹ ಸಾಮಾನ್ಯ ಓದುಗಳಿಗೆ ಅತಿಶಯದ ರಾಶಿ ಎನಿಸಲು ಕಾರಣ ಲೇಖಕರು ಪ್ರತೀ ಪ್ರಬಂಧಗಳಲ್ಲೂ ಉದ್ಧರಿಸುವ, ಉದಾಹರಿಸುವ ಹೇಳಿಕೆಗಳು, ಪ್ರಸಂಗಗಳು, ಘಟನೆಗಳು, ಕಾಲಮಾನಗಳು ಹೀಗೆ ಒಂದಿಷ್ಟು ವಿಷಯಗಳು. ಕ್ರಿ.ಪೂ. ದಿಂದ ಕ್ರಿ.ಶ.ದವರೆಗೆ, ಜಗತ್ತಿನ ಪೂರ್ವದಿಂದ ಪಶ್ಚಿಮದವರೆಗಿನ ತತ್ವಜ್ಞಾನಿಗಳು, ಚಕ್ರವರ್ತಿಗಳು, ವಿಜ್ಞಾನಿಗಳು, ಲೇಖಕರು ವಿವಿಧ ಕ್ಷೇತ್ರಗಳಲ್ಲಿನ ಪ್ರಸಿದ್ಧ ವ್ಯಕ್ತಿಗಳು, ಅವರವರ ಹೇಳಿಕೆಗಳು, ಪ್ರಸಂಗಗಳು ಎಲ್ಲವನ್ನೂ ಪ್ರಬಂಧಗಳಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಪೋಣಿಸಿರುವುದು. ಇದು ಅವರ ಅಧ್ಯಯನದ ಅಗಾಧತೆ ಮತ್ತು ಗಾಢತೆ !! ಇದರಿಂದ
ಓದುಗನಿಗೆ ಲೇಖಕರ ಅಧ್ಯಯನದ ಆಳ, ಹರಿವು, ವಿಸ್ತಾರ ಮತ್ತು ಅದರ ಸಾಂದರ್ಭಿಕ ಬಳಕೆ ಬಗ್ಗೆ ಹುಬ್ಬೇರಿಸಿ, ತಲೆ ಸವರಿಕೊಂಡು ತಲೆ ಬಾಗುವಂತೆ ಮಾಡುವ ಸಂಗತಿ.
ಇನ್ನೊಂದು ವಿಶೇಷವೆಂದರೆ ಈ ಪುಸ್ತಕದ ಶೀರ್ಷಿಕೆ ಮತ್ತು ಪ್ರತೀ ಪ್ರಬಂಧಗಳ ತಲೆಬರಹ !! ಇಲ್ಲೆಲ್ಲಾ ನಮಗೆಲ್ಲಾ ಅತಿ ಪರಿಚಿತವಾದ, ಜನಪ್ರಿಯವಾದ ಅಚ್ಚ ಕನ್ನಡದ (ಅದು ಹಳೆಗನ್ನಡದಿಂದ ಹೊಸಗನ್ನಡದವರೆಗೆ) ಪದಪುಂಜಗಳನ್ನು ವಿಷಯಕ್ಕನುಸಾರವಾಗಿ ಬಳಸಿರುವ ಅವರ ಕನ್ನಡದ ಒಲುಮೆ ಮತ್ತು ಜಾಣ್ಮೆ !!
ಇವುಗಳಿಂದಲೇ ನಾನು ಆಕರ್ಷಿತಳಾಗಿ ಇನ್ನೊಬ್ಬ ಹೆಸರಾಂತ ಲೇಖಕ #ಶ್ರೀವತ್ಸ_ಜೋಶಿ (ಪರಾಗಸ್ಪರ್ಶ ಖ್ಯಾತಿ) ರವರು ಈ ಪುಸ್ತಕಕ್ಕೆ ಬರೆದ ಮುನ್ನುಡಿ ಬರೆಹವನ್ನು ಅವರ FB page ನಲ್ಲಿನ ಪೋಸ್ಟ್ ಓದಿ ಅಲ್ಲಿ ಸಿಕ್ಕ ಸಂಪರ್ಕ ಸಂಖ್ಯೆಯನ್ನು ಬಳಸಿಕೊಂಡು ಪುಸ್ತಕ ಪ್ರಕಾಶಕರಿಂದ ತರಿಸಿಕೊಂಡು ಕೂಡಲೇ ಸಂಪೂರ್ಣ ಓದಿದ್ದು. ಮತ್ತೀಗ ಅದರ ಕುರಿತು ನನ್ನ ಅನಿಸಿಕೆ ಬರೆದಿದ್ದು.
ಇದೆಲ್ಲವನ್ನೂ ಓದಿದ ಸಾಮಾನ್ಯ ಸಾಹಿತ್ಯ ಓದುಗನಿಗೆ, ಈಗಾಗಲೇ ವಿಜ್ಞಾನ ಕ್ಷೇತ್ರ ಆಯ್ದುಕೊಂಡು ಜೀವನೋಪಾಯ ಹುಡುಕಿಕೊಂಡವನಿಗೆ,ಅನ್ವಯಿಕ ವಿಜ್ಞಾನ ವಿಜ್ರಂಭಿಸುತ್ತಿರುವ ಈ ಕಾಲಕ್ಕೆ, ಮೂಲ ವಿಜ್ಞಾನ ಎಂದರೇನು ? ಎಂಬುದನ್ನು ಒಬ್ಬ ಅಪ್ಪಟ ವಿಜ್ಞಾನದ ಅಭಿಮಾನಿಯಾಗಿ ಶರತ್ ಭಟ್ ಸೇರಾಜೆ ಕೊಡುವ ವ್ಯಾಖ್ಯಾನವೆಂದರೆ ' ಅತಿಶಯವಾದ ಜ್ಞಾನ ಪಿಪಾಸೆಯನ್ನು, ಸತ್ಯವನ್ನು ತಿಳಿಯಬೇಕೆಂಬ ಹಂಬಲದ ಋಜುಮಾರ್ಗವನ್ನು, ವಸ್ತುನಿಷ್ಠವಾದ ಸತ್ಯದ ಹುಡುಕಾಟವನ್ನು, ಕಾರ್ಯ - ಕಾರಣಗಳ ಸಂಬಂಧಗಳ ಬಗೆಗಿನ ನಿತಾಂತವಾದ ಕಾಳಜಿಯನ್ನು, ಅನುದಿನವೂ ಪ್ರಯೋಗಗಳಿಗೆ, ಪರೀಕ್ಷೆಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ, ನಿತ್ಯನೂತನವಾಗುತ್ತಾ, ಅಗ್ನಿದಿವ್ಯಗಳನ್ನು ಹಾದು ವಿಜಯದುಂಧುಬಿಯನ್ನು ಮೊಳಗಿಸುವ ಹುಮ್ಮಸ್ಸೆಂಬ ಗುಣವಿಶೇಷಗಳನ್ನು ಹೊಂದಿರುವುದೇ "#ವಿಜ್ಞಾನ".
#ವಿಜ್ಞಾನಂ_ಗೆಲ್ಗೆ !!
🙏ಧನ್ಯವಾದಗಳು #ಶರತ್_ಭಟ್_ಸೇರಾಜೆ ಒಂದು ಸೈಂಟಿಫಿಕ್ ಸಫಾರಿಗೆ
*****************************************************
ಮಾಕೋನಹಳ್ಳಿ ವಿನಯ್ ಮಾಧವ:
ವಿಜ್ಞಾನವು ಅಜ್ಜಿ ಕಥೆಗಳಾದಾಗ…
ಪಿಯುಸಿ ಎಂಬ ಘಟ್ಟವನ್ನು ಕಷ್ಟದಲ್ಲಿ ಪಾಸ್ ಮಾಡಿದಾಗಲೇ ನನಗೆ ಗೊತ್ತಾಗಿತ್ತು. ವಿಜ್ಞಾನಕ್ಕೂ, ನನ್ನ ಮೆದುಳಿಗೂ ಸಂಬಂಧವಿಲ್ಲ ಎನ್ನುವುದು. ಆದರೆ, ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಸೀಟು ಬೇಕಿತ್ತು ಅಷ್ಟೆ. ಉಪ ಪ್ರಿನ್ಸಿಪಾಲ್ ಆಗಿದ್ದ ರಾಮ್ ಭಟ್ ಅವರಿಗೆ ನಾನು ಅವರ ಕಾಲೇಜು ಸೇರುವುದು ಇಷ್ಟವಿರಲಿಲ್ಲ ಎಂದು ನನಗೆ ಗೊತ್ತಾಯಿತು. ಪ್ರಿನ್ಸಿಪಲ್ ಪ್ರೊ ಕೆ ಈಶ್ವರ್ ಅವರು ಮಾತನಾಡುವ ಮುಂಚೆಯೇ, ʻನಿನಗೆ ಬೇಕಾದರೆ ಬಿ ಎಸ್ಸಿ ಪಿ.ಸಿ.ಎಂ (ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತ) ಸಿಗುತ್ತದೆ. ಕಲಾ ಅಥವಾ ವಾಣಿಜ್ಯಕ್ಕೆ ಸೀಟು ಕೊಡಲಾಗುವುದಿಲ್ಲʼ ಎಂದು ಘೋಷಿಸಿದರು.
ʻಈ ಡಿಗ್ರಿ ಮಾಡಿ ಗುಡ್ಡ ಕಡಿಯೋದು ಅಷ್ಟರಲ್ಲೇ ಇದೆ,ʼ ಎಂದು ಮನಸ್ಸಿನಲ್ಲೇ ಗೊಣಗಿಕೊಳ್ಳುತ್ತಾ, ಸಿಕ್ಕದ್ದನ್ನು ತೆಗೆದುಕೊಂಡು ಕಾಲೇಜು ಸೇರಿದೆ. ತಿಪ್ಪರಲಾಗ ಹಾಕಿದರೂ ರಸಾಯನ ಶಾಸ್ತ್ರ ತಲೆಗೆ ಹತ್ತಲು ಒಪ್ಪಲೇ ಇಲ್ಲ. ನಾನೂ ತಲೆ ಕೆಡಿಸಿಕೊಳ್ಳಲಿಲ್ಲ. ನನ್ನ ಕ್ಲಾಸಿನಲ್ಲೇ ಪ್ರತಿಭಾವಂತಳಾಗಿದ್ದ ಲತಾ ಭಟ್ಗೆ ನನ್ನ ಮೇಲೆ ಕರುಣೆ ಇಲ್ಲದೇ ಹೋಗಿದ್ದರೆ, ನಾನು ಲ್ಯಾಬ್ ರೆಕಾರ್ಡ್ ಸಹ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಅಂತೂ, ಆ ಬಿಎಸ್ಸಿ ಎನ್ನುವ ಡಿಗ್ರಿ ನನಗೆ ಸಿಗಲೇ ಇಲ್ಲ.
ಮುಂದೆ, ಕಲಾ ವಿಭಾಗದ ರಾಜಕೀಯ ಶಾಸ್ತ್ರ, ಅರ್ಥ ಶಾಸ್ತ್ರ ಮತ್ತು ಪತ್ರಿಕೋದ್ಯಮಗಳನ್ನು ಓದಿ, ಕೆಲಸಕ್ಕೆ ಸೇರಿದ ಮೇಲೆ ನನಗೆ ಈ ವಿಜ್ಞಾನ ಎನ್ನುವುದು ಅಷ್ಟೊಂದು ಕಷ್ಟದ ವಿಷಯವಲ್ಲ ಎನ್ನುವುದು ಅರ್ಥವಾಗತೊಡಗಿತು. ಆದರೆ, ಅದನ್ನು ಓದುವ ಮತ್ತು ಅರ್ಥಮಾಡಿಕೊಳ್ಳುವ ರೀತಿ ಬೇರೆ ಎನ್ನುವುದು ಸಹ ತಿಳಿಯಿತು. ಆದರೆ, ನಾನು ಕಾಲೇಜಿನಲ್ಲಿದ್ದಾಗ ಇವೆಲ್ಲ, ಅದರಲ್ಲೂ ರಸಾಯನ ಶಾಸ್ತ್ರ ಏಕೆ ಅರ್ಥವಾಗುತ್ತಿರಲಿಲ್ಲ ಎನ್ನುವುದು ಒಂದು ಯಕ್ಷ ಪ್ರಶ್ನೆಯಾಗಿ ಕಾಡತೊಡಗಿತು.
ಮುಂದೊಂದು ದಿನ, ಆಲ್ಬರ್ಟ್ ಐನ್ ಸ್ಟೀನ್ ಬಗ್ಗೆ ಇರುವ ತಮಾಷೆಯನ್ನು ಓದುವಾಗ ನನಗೆ ಏನೋ ಹೊಳೆದಂತಾಯಿತು. ಯಾರೋ ಒಂದು ದಿನ ಐನ್ ಸ್ಟೀನ್ನನ್ನು ಕೇಳಿದರಂತೆ: ʻಒಂದು ಕಿಲೋಮೀಟರ್ ನಲ್ಲಿ ಎಷ್ಟು ಇಂಚುಗಳಿರುತ್ತವೆ?ʼ ಎಂದು.
ʻಲಾಗ್ ಬುಕ್ ತೆಗೆದು ನೋಡಿ. ಅದನ್ನೆಲ್ಲ ಉರು ಹೊಡೆದು ತಲೆಯಲ್ಲಿ ಇಟ್ಟುಕೊಳ್ಳುವುದು ಸಮಯ ವ್ಯರ್ಥ,ʼ ಎಂದರಂತೆ. ನನ್ನ ಇಂದಿನ ಸಮಸ್ಯೆ ಕೂಡ ಅದೇ… ಯಾವುದಾದರನ್ನು ಉರು ಹೊಡೆದು ನೆನಪಿನಲ್ಲಿಟ್ಟುಕೊಳ್ಳುವುದು. ರಸಾಯನ ಶಾಸ್ತ್ರದಲ್ಲಿ ಎಷ್ಟೋ ರಾಸಾಯನಿಕಗಳ ಸಂಯೋಜನೆಗಳನ್ನು ಉರು ಹೊಡೆದೇ ನೆನಪಿನಲ್ಲಿಟ್ಟುಕೊಳ್ಳಬೇಕಿತ್ತು.
ಸೋಡಿಯಂ ಗೆ Na ಯಾಕೆ ಬರಬೇಕು ಅಂತ ಪ್ರಶ್ನೆ ಮಾಡುತ್ತಿದ್ದನೇ ಹೊರತು, ಅದನ್ನು ಉರು ಹೊಡೆಯುವ ಗೋಜಿಗೇ ಹೋಗುತ್ತಿರಲಿಲ್ಲ. ಅದು ನನ್ನ ತಲೆಯಲ್ಲಿಯೂ ಉಳಿಯುತ್ತಿರಲಿಲ್ಲ. ಆದರೆ ಮುಂದೆ, ಅವುಗಳ ಉಪಯೋಗ ಮತ್ತು ಅಪಾಯಗಳನ್ನು ಮಾತ್ರ ಅರ್ಥಮಾಡಿಕೊಳ್ಳಬೇಕಾದ್ದರಿಂದ, ಸುಲಭ ಅನ್ನಿಸುತ್ತಿತ್ತು.
ಒಮ್ಮೆ ನಾನು ಊರಿಗೆ ಹೋದಾಗ, ಜಿಟಿ ಜಿಟಿ ಮಳೆ ಸುರಿಯುತ್ತಿತ್ತು. ಹಾಗೆಯೇ ಕಾರು ಹತ್ತಿ ಕೊಟ್ಟಿಗೆಹಾರದ ಕಡೆಗೆ ಹೊರಟೆ. ಆಗಿನ್ನೂ ತೇಜಸ್ವಿ ಪ್ರತಿಷ್ಠಾನ ಆರಂಭವಾಗಿ, ಕೊಟ್ಟಿಗೆಹಾರದ ಬಸ್ ಸ್ಟ್ಯಾಂಡ್ ಪಕ್ಕದಲ್ಲಿದ್ದ ಒಂದು ಸಣ್ಣ ಕಟ್ಟಡದಲ್ಲಿ ಇತ್ತು. ಕೊಟ್ಟಿಗೆ ಹಾರದಲ್ಲಿ ವಿಪರೀತ ಮಳೆ ಹಿಡಿದಿತ್ತು ಮತ್ತು ಪ್ರತಿಷ್ಠಾನದಲ್ಲಿ ಯಾರೂ ಇರಲಿಲ್ಲ. ಹಾಗೆಯೇ ಮುಂದು ಚಾರ್ಮಾಡಿ ಘಾಟಿನ ತುದಿಯಲ್ಲಿರುವ ಮಲಯ ಮಾರುತ ಫಾರೆಸ್ಟ್ ಗೆಸ್ಟ್ ಗೌಸ್ ಕಡೆಗೆ ಹೊರಟೆ.
ಕಾರಿನಲ್ಲಿಂದಿಳಿದು ಗೆಸ್ಟ್ ಹೌಸ್ ಒಳಗೆ ಓಡಿದ ತಕ್ಷಣವೇ ತಪ್ಪು ಮಾಡಿದೆ ಅನ್ನಿಸಿತು. ಎಲ್ಲಾ ಕಡೆಯಿಂದ ನೀರು ಒಳಗೆ ನುಗ್ಗುತ್ತಿತ್ತು. ನೆಲದ ಮೇಲೆ ಅರ್ಧ ಅಡಿಯಷ್ಟು ನೀರು ನಿಂತಿತ್ತು ಮತ್ತು ಇಬ್ಬರು ಡಿಪಾರ್ಟ್ಮೆಂಟಿನವರು ನೀರನ್ನು ಹೊರಕ್ಕೆ ಹಾಕಲು ಹರ ಸಾಹಸ ಪಡುತ್ತಿದ್ದರು. ಸರ್ಕಾರದ ಕಟ್ಟಡಗಳ ದುರವಸ್ಥೆ ಕಂಡು ನಗು ಬಂತು. ವಾಪಾಸು ಬರುವಾಗ ತೊಪ್ಪೆಯಾಗಿದ್ದೆ.
ಹಾಗೆಯೇ ಅಂದು ಪ್ರದೀಪ್ ಕೆಂಜಿಗೆಗೆ ಫೋನ್ ಮಾಡಿ ಮಾತನಾಡುತ್ತಾ, ʻಅಣ್ಣ, ಮಲಯ ಮಾರುತ ಸಕತ್ತಾಗಿತ್ತು. ತೇಜಸ್ವಿ ಏನಾದ್ರೂ ಇದ್ದಿದ್ದು, ಇವತ್ತು ಅಲ್ಲಿಗೆ ಬಂದಿದ್ರೆ, ಒಂದೊಳ್ಳೆ ಕಥೆ ಬರೀತಿದ್ರು ಕಣ್ರಿ… ಕಿರುಗೂರಿನ ಗಯ್ಯಾಳಿಗಳು ಅಥವಾ ನಿಗೂಢ ಮನುಷ್ಯರು ಥರ,ʼ ಎಂದೆ.
ʻಬರೀತ್ತಿದ್ರೇನೋ ಗೊತ್ತಿಲ್ಲ ಕಣ್ರಿ… ಆದ್ರೆ, ಇತ್ತೀಚೆಗೆ ತೇಜಸ್ವಿ ಬರೆಯೋದು ಬಹಳ ಬದಲಾಗಿತ್ತು ಅಂತ ಅನ್ನಿಸೋಲ್ವಾ? ಈಗ ಮಾಯಾ ಲೋಕನೇ ನೋಡಿ. ಅದು ತುಂಬಾ ಜನಕ್ಕೆ ಅರ್ಥವಾಗಿಲ್ಲ. ಯಾಕಂದ್ರೆ, ಅವರು ಅದನ್ನ ಒಂದು ಸೀರೀಸ್ ಥರ ಬರೀಬೇಕು ಅಂತ ಇದ್ರು ಅನ್ನಿಸುತ್ತೆ. ಈಗ ಒಂದು ನದಿ ಇಟ್ಟುಕೊಂಡು, ಮುಂದಿನ ಭಾಗದಲ್ಲಿ ಅದರ ಸುತ್ತು ಇರುವ ಜೀವರಾಶಿ…. ಹೀಗೇ ಬರೀತಾ ಹೋಗ್ಬೇಕು ಅಂತ ಇದ್ರು. ಅದನ್ನ ಒಂದ್ಸಲ ನನ್ನ ಹತ್ರಾನೂ ಹೇಳಿದ್ರು. ಈ ಸೀರೀಸ್ ವೈಜ್ಞಾನಿಕವಾಗಿ ಇರಬೇಕು ಅಂತ ಅವರಿಗೆ ಇತ್ತು. ಅದೊಂಥರಾ ಹೂವು ಅರಳೋ ಪ್ರಕ್ರಿಯೆ ಇದ್ದ ಹಾಗೆ, ಏನೂ ಇಲ್ಲದ ಎಲೆಯಲ್ಲಿ ನಿಧಾನವಾಗಿ ಮೊಗ್ಗು ಬಂದು, ಅರಳಿ, ಕೊನೆಗೆ ಒಣಗಿ ಉದುರಿ ಹೋಗೋ ಪ್ರಕ್ರಿಯೆ ಥರ… ಮೊದಲನೇ ಭಾಗ ಬರೆದು ಮುಗಿಸಿದ ತಕ್ಷಣ ಹೊರಟು ಹೋದ್ರು. ಹಾಗಾಗಿ, ಅವರ ಮನಸ್ಸಲ್ಲಿ ಏನಿತ್ತು ಅಂತ ಹೇಳೋದು ಕಷ್ಟ,ʼ ಎಂದರು ಪ್ರದೀಪಣ್ಣ.
ನಾನು ಮೌನವಾಗಿ ಅದನ್ನೇ ಯೋಚಿಸುತ್ತಿದ್ದೆ. ಮನೆಗೆ ಬಂದವನೇ, ತೇಜಸ್ವಿ ಅವರ ಕರ್ವಾಲೋ, ಜುಗಾರಿ ಕ್ರಾಸ್ ಮತ್ತು ಚಿದಂಬರ ರಹಸ್ಯ ಪುಸ್ತಕಗಳನ್ನು ತಿರುವಿ ಹಾಕಿದೆ. ನಾನು ಓದಿಯೂ, ಗಮನಿಸದೇ ಇದ್ದ ಎಷ್ಟೋ ವಿಷಯಗಳು ಹೇಗೆ ಪ್ರಕೃತಿ ಮತ್ತು ವಿಜ್ಞಾನಗಳ ಕೊಂಡಿಯನ್ನು ಸೂಕ್ಷ್ಮವಾಗಿ ನಿರೂಪಿಸಿದ್ದಾರೆ ತೇಜಸ್ವಿಯವರು ಎನ್ನುವುದು ನನ್ನ ಗ್ರಹಿಕೆಗೆ ಅನುಗುಣವಾಗಿ ಅರ್ಥವಾಯಿತು. ಉಳಿದವರಿಗೆ ಇದು ಇನ್ನೂ ಹೆಚ್ಚಿನ ಮಟ್ಟಿಗೆ ಅರ್ಥವಾಗಿರಬಹುದು ಎಂದೂ ಅನ್ನಿಸಿತು. ಆದರೆ, ಇದನ್ನು ಗಮನಿಸದೇ ಇದ್ದಾಗ, ಯಾವುದೋ ರಾತ್ರಿ ಮಲಗುವಾಗ ಅಜ್ಜಿ ಹೇಳಿದ ಕಥೆಯಂತೆ ಭಾಸವಾಗುತ್ತಿತ್ತು.
ನಾನಂತೂ ವಿಜ್ಞಾನಕ್ಕೆ ಮಣ್ಣು ಹೊರವ ಪ್ರಯತ್ನವನ್ನಾದರೂ ಮಾಡಿದ್ದೆ. ಹಾಗೆ ನೋಡಿದರೆ ತೇಜಸ್ವಿ ಏನೂ ವಿಜ್ಞಾನದ ವಿದ್ಯಾರ್ಥಿಯಲ್ಲ. ಅವರು ಮೊದಲಿಂದಲೂ ಸಾಹಿತ್ಯ, ತತ್ವಜ್ಞಾನ ಅಭ್ಯಾಸ ಮಾಡಿದವರು. ಅವರು ಜೀವನವನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿಕೊಂಡು ಬದುಕಿದವರು ಅನ್ನಿಸತೊಡಗಿತು. ಇದು ಹೇಗೆ? ಎನ್ನುವ ಪ್ರಶ್ನೆ ನನ್ನನ್ನು ಬಹಳವಾಗಿ ಕಾಡಿತ್ತು.
ಶರತ್ ಭಟ್ ಸೇರಾಜೆ ಬರೆದ ʻಹತ್ತೇವು ವಿಜ್ಞಾನದ ಜೀಪʼ ಪುಸ್ತಕ ಓದುವಾಗ ಅದಕ್ಕೆ ಉತ್ತರ ಸಿಕ್ಕಿತು ಎಂದುಕೊಂಡಿದ್ದೇನೆ. ಏಕೆಂದರೆ, ವಿಜ್ಞಾನದ ಬಗ್ಗೆ ಒಂದೆರೆಡು ವಾಕ್ಯದಲ್ಲಿ ಯಾವುದಾದರೂ ವ್ಯಾಖ್ಯಾನ ಅಥವಾ Deifinition ಹೇಳುವುದು, ವಾಟ್ಸಾಪ್ ನಲ್ಲಿ ಮಹಾಭಾರತ ಕಳುಹಿಸಿದಂತೆ ಆಗುತ್ತದೆ. ಹಾಗೆಯೇ, ತತ್ವ ಶಾಸ್ತ್ರ ಮತ್ತು ವಿಜ್ಞಾನ ದಾಯಾದಿಗಳು. ಎರಡರ ಗುರಿಯೂ ಒಂದೇ: ಮೂಲಸತ್ಯದ ಅನ್ವೇಷಣೆ, ಜ್ಞಾನದ ಹುಡುಕಾಟ.
ಇದನ್ನೇ ತೇಜಸ್ವಿಯವರು ಬದುಕಿನಲ್ಲಿ ಮಾಡಿದ್ದು. ಪ್ರಕೃತಿಯ ಮೂಲ ಸತ್ಯದ ಅನ್ವೇಷಣೆಯಲ್ಲಿ, ಅವರು ಜ್ಞಾನವನ್ನು ಹುಡುಕಾಡುತ್ತಿದ್ದರು. ಹಾಗಾಗಿ, ತೇಜಸ್ವಿಯವರು ಹೇಳಿದ: ʻಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಭಾಗ,ʼ ಎನ್ನುವ ಮಾತು ವಿಜ್ಞಾನಕ್ಕೂ ಅನ್ವಯಿಸುತ್ತದೆ ಎಂದುಕೊಂಡೆ… ʻಪ್ರಕೃತಿ ವಿಜ್ಞಾನದ ಭಾಗವಲ್ಲ, ವಿಜ್ಞಾನ ಪ್ರಕೃತಿಯ ಭಾಗ.ʼ ಹಾಗಾಗಿ, ನನ್ನ ಪ್ರಕಾರ, ʻEnvironmental Scienceʼ ಎನ್ನುವ ಪದವೇ ತಪ್ಪು.
ತೇಜಸ್ವಿಯವರು ವಿಜ್ಞಾನವನ್ನು ತಮ್ಮ ಸಾಹಿತ್ಯದಲ್ಲಿ ಎಷ್ಟು ಸರಳವಾಗಿ ಅಳವಡಿಸಿಕೊಂಡಿದ್ದರೆಂದರೆ, ನಮಗೆ ವಿಜ್ಞಾನ ಮತ್ತು ಬದುಕಿನ ಮಧ್ಯೆ ಇರುವ ಸಣ್ಣ ರೇಖೆಯು ಗಮನಕ್ಕೇ ಬರುತ್ತಿರಲಿಲ್ಲ. ಶರತ್ ಭಟ್ ಸೆರಾಜೆಯ ಈ ಪುಸ್ತಕ ಸಹ ಹಾಗೆಯೇ… ಅವರ ಮೊದಲ ಪುಸ್ತಕವಾದ ʻಬಾಗಿಲು ತೆರೆಯೇ ಸೇಸಮ್ಮʼದ ಥರ, ವಿಜ್ಞಾನದ ಬಗ್ಗೆ ಇರುವ ಒಂದು ಲಲಿತ ಪ್ರಬಂಧಗಳ ಗುಚ್ಚ. ಆದರೆ, ಸಾಧಾರಣ ಓದುಗರಿಗೆ ತಾವು ವಿಜ್ಞಾನದ ಬಗ್ಗೆ ಓದುತ್ತಿದ್ದೇವೆ ಎನ್ನುವ ಯಾವುದೇ ʻಅರಿಮೆʼ ಮೂಡುವುದಿಲ್ಲ.
ಇಲ್ಲಿ ವಿಜ್ಞಾನಿಗಳ ಕಥೆಗಳು, ಚಾರಿತ್ರಿಕ ಘಟನೆಗಳು ಮತ್ತು ಸತ್ಯ-ಅಸತ್ಯಗಳ ತುಲನೆಗಳು ಬೇಕಷ್ಟಿವೆ. ಪ್ರಪಂಚದ ಎಲ್ಲಾ ವಿಜ್ಞಾನಿಗಳೂ ನಮ್ಮ ಹತ್ತಿರ ಮಾತನಾಡುತ್ತಿರುವಾಗ, ಭಾರತದ ವಿಜ್ಞಾನದ ವಿಶ್ಲೇಷಣೆ… ವೇದಗಳಿಂದ ಹಿಡಿದು, ಭಾರತೀಯ ನವ ದರ್ಶನಗಳಾದ (Nine schools of Indian Philosophy) ನ್ಯಾಯ, ವೈಶೇಷಿಕ, ಸಾಂಕ್ಯ, ಯೋಗ, ಮಿಮಾಂಸಾ, ವೇದಾಂತ, ಚಾರ್ವಕ, ಬೌದ್ದ ಮತ್ತು ಜೈನಗಳ ಬಗ್ಗೆಯೂ ಬಹಳಷ್ಟು ಬೆಳಕು ಚೆಲ್ಲಿದ್ದಾರೆ. ಓದುಗರಿಗೆ ಯಾವುದೇ ಥರಹದ ಕೀಳರಿಮೆ ಬರದ ರೀತಿಯಲ್ಲಿ.
ಈ ಪುಸ್ತಕವು ವೈಜ್ಞಾನಿಕ ಅವಿಷ್ಕಾರಗಳ ಬಗ್ಗೆ ಇರುವ ಪುಸ್ತಕವೇನಲ್ಲ. ವಿಜ್ಞಾನವನ್ನು ಹೇಗೆ ಮತ್ತು ಯಾಕಾಗಿ ಅರ್ಥ ಮಾಡಿಕೊಳ್ಳಬೇಕು, ಅರ್ಥ ಮಾಡಿಕೊಳ್ಳುವಲ್ಲಿ ನಮ್ಮ ವೈಜ್ಞಾನಿಕ ಮನೋಸ್ಥಿತಿ ಹೇಗಿರಬೇಕು, ಎಷ್ಟನ್ನು ನಂಬಬೇಕು ಮತ್ತು ಎಷ್ಟರ ಮಟ್ಟಿಗೆ ನಮ್ಮ ತನದ ಬಗ್ಗೆ ದುರಭಿಮಾನಿಯಾಗಿರಬೇಕು ಎನ್ನುವುದನ್ನು ಸಹ, ಉದಾರಣೆ ಸಹಿತ ವಿವರಿಸಿದ್ದಾರೆ.
ಕೆಲವೊಮ್ಮೆ ಹೀಗಾಗುತ್ತದೆ. ಬಹಳ ವರ್ಷಗಳ ಹಿಂದೆ, ಬಿಡಿಸಲಾಗದ ಬಂಧನವಿರುವ ನನ್ನ ಸಂಬಂಧಿಯ ಮನೆಗೆ, ಆರು ತಿಂಗಳ ಅಂತರದಲ್ಲಿ ಹೋಗಿದ್ದೆ. ಮನೆಯ ಸ್ವರೂಪವೇ ಬದಲಾಗಿತ್ತು. ನಿಧಾನವಾಗಿ ಬದಲಾವಣೆಗಳನ್ನೇ ಗಮನಿಸುತ್ತಾ, ನನ್ನ ಅಸಮಾಧಾನ ಹೊರ ಹಾಕಿದೆ.
ʻಇಲ್ಲ ಅಣ್ಣಾ… ಯಾವುದೂ ಸರಿ ಹೋಗುತ್ತಿರಲಿಲ್ಲ. ವಾಸ್ತು ಬದಲಾಯಿಸಿದ್ದೇನೆ,ʼ ಎಂದ. ಅದಕ್ಕೆ ಸುಮಾರು ಹತ್ತು ಲಕ್ಷ ಆಗಿನ ಕಾಲದಲ್ಲೇ ಖರ್ಚು ಮಾಡಿದ್ದು ಕೇಳಿ ನನಗೆ ಪಿತ್ತ ನೆತ್ತಿಗೇರಿತು.
ʻಅಲ್ವೋ… ನಿಮ್ಮಪ್ಪ ಈ ಮನೆ ತಗೊಂಡಾಗ ಬರೀ ನೆಲ ಮಹಡಿ ಇದ್ದಿದ್ದು. ಅದರ ಮೇಲೆ ಒಂದು ಮಹಡಿ ಕಟ್ಟಿದ್ದಾರೆ. ನಿನ್ನ ಮೂರು ಅಕ್ಕಂದಿರನ್ನೂ ಒಳ್ಳೆ ಕಡೆ ಕೊಟ್ಟು ಮದುವೆ ಮಾಡಿದ್ದಾರೆ. ಊರಿನಲ್ಲಿ ಹೆಚ್ಚಿನ ತೋಟ ಕೊಂಡಿದ್ದಾರೆ. ನಿನ್ನ ಡಾಕ್ಟರ್ ಮಾಡಿದ್ದಾರೆ. ನಿನ್ನ ಮದುವೆ ಸಹ ಮಾಡಿದ್ದಾರೆ. ಊರಲ್ಲಿ ಸಹ ಅಷ್ಟೊಂದು ದೊಡ್ಡ ಮನೆ ಕಟ್ಟಿದ್ದಾರೆ. ಇದಕ್ಕಿಂತ ವಾಸ್ತು ಇನ್ನೇನೋ ಬೇಕು?ʼ ಎಂದು ಕೇಳಿದೆ.
ʻಅಲ್ಲ ಅಣ್ಣಾ… ವಾಸ್ತು ಸೈನ್ಸ್ ಕಣೋ…ʼ ಎಂದೇನೋ ಹೇಳೋಕೆ ಹೋದ.
ಮೊದಲೇ ಸಿಟ್ಟಿನಲ್ಲಿದ್ದ ನಾನು, ʻಆ ವಾಸ್ತು ಹೇಳಿದ ಸೂ… ಮಗ ನನ್ನ ಕೈಗೆ ಸಿಕ್ಕಿದರೆ ಅವನ ತಲೆ ಒಡೀತ್ತೀನಿ. ಅದ್ಯಾವ ನಿನ್ನ ಸೈನ್ಸ್ ಅವನ್ನ ಬದುಕಿಸುತ್ತೆ ನೋಡೋಣ. ಅವನ ಮನೆನೂ ವಾಸ್ತು ಪ್ರಕಾರ ಇರ್ತದಲ್ಲ… ನಾನು ಅವನ ತಲೆ ಒಡೆದಾಗ ಏನೂ ಆಗಬಾರದಲ್ಲಾ?ʼ ಎಂದು ಹೇಳಿದ್ದೆ.
ನಮ್ಮ ಎಲ್ಲಾ ಸಂಪ್ರದಾಯದ ನಂಬಿಕೆಗಳಿಗೂ ವಿಜ್ಞಾನದ ತಳಕು ಹಾಕುವುದರ ಬಗ್ಗೆಯೂ ಸಹ ಶರತ್ ಈ ಪುಸ್ತಕದಲ್ಲಿ ಬಹಳ ತಮಾಷೆಯಾಗಿ ಬರೆಯುತ್ತಾರೆ. ವಿಜ್ಞಾನ ಎನ್ನುವ ಪದದ ಓತಪ್ರೋತ ಪ್ರಯೋಗದ ಬಗ್ಗೆ ಕಿಡಿ ಕಾರುತ್ತಾ,ʻ… ಪ್ರಾಯಶಃ, ವಿಜ್ಞಾನಿಗಳ ಬಳಗವೊಂದನ್ನು ಬಿಟ್ಟು, ಉಳಿದವರೆಲ್ಲ ತಾವು ಹೇಳುತ್ತಿರುವುದನ್ನು ಸೈನ್ಸ್ ಎಂದು ಕರೆಯುತ್ತಿದ್ದಾರೇನೋ! ಇನ್ನು ಸೈನ್ಸ್ ಆಫ್ ಕತ್ತೆ ಕಾಯುವುದು, ಸೈನ್ಸ್ ಆಫ್ ಟ್ರೋಲ್ ಮಾಡುವುದು – ಎಂಬಂಥವು ಮಾತ್ರ ಬಾಕಿ ಉಳಿದಿರುವಂತಿವೆ…ʼ
ಹಾಗೆಯೇ, ಯಾವುದೇ ವಿಜ್ಞಾನದ ಆವಿಷ್ಕಾರಗಳು ನಮ್ಮ ವೇದಗಳಲ್ಲಿ ಇವೆ ಎಂದು ಹೇಳುವುದನ್ನೂ ಶರತ್ ಬಹಳ ಸ್ಪಷ್ಟವಾಗಿ, ಆಯಾ ಶ್ಲೋಕಗಳ ಸಹಿತವಾಗಿ ವಿವರಿಸುತ್ತಾರೆ. ಆದರೆ, ಆಧುನಿಕ ಆವಿಷ್ಕಾರಗಳ ಬುನಾದಿಗಳು ಅಲ್ಲಿ ಕಂಡುಬರುವುದನ್ನೂ ಸಹ, ಉದಾಹರಣೆ ಸಹಿತ ಸ್ಪಷ್ಟವಾಗಿಯೇ ಒಪ್ಪುತ್ತಾರೆ.
ವಿಜ್ಞಾನ ಇರುವುದೇ ಮನುಷ್ಯರ ಜೀವನ ಸರಳಗೊಳಿಸಲು ಹೊರತು, ಕ್ಲಿಷ್ಟಕರವಾಗಿಸಲು ಅಲ್ಲ. ಆದರೆ, ವಾಸ್ತವ ಬೇರೆ ದಿಕ್ಕಿನಲ್ಲಿ ಹೋಗುತ್ತಿದೆ. ಇದಕ್ಕೆ ಕಾರಣ ಇಷ್ಟೆ. ವಿಜ್ಞಾನವನ್ನು ನಾವು ಸರಳವಾಗಿ ಅರ್ಥ ಮಾಡಿಕೊಂಡು, ಆನಂತರ ಅಳವಡಿಸಿಕೊಳ್ಳುವ ಬದಲು, ಅದರ ʻEnd Productʼ ಅನ್ನು ನೇರವಾಗಿ ಮಾರುಕಟ್ಟೆ ವ್ಯಾಪಾರೀಕರಣಕ್ಕೆ ಬಳಸುತ್ತಿದ್ದೇವೆ.
ವಿಜ್ಞಾನವನ್ನು ಸರಳವಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ, ʻಹತ್ತೇವು ವಿಜ್ಞಾನದ ಜೀಪʼ ಪುಸ್ತಕವು ಕನ್ನಡ ಸಾಹಿತ್ಯದಲ್ಲೇ ಒಂದು ವಿಶಿಷ್ಟ ಮತ್ತು ಉಪಯುಕ್ತ ಪ್ರಯೋಗ ಎಂದು ನನಗನ್ನಿಸುತ್ತದೆ. ಈ ಪುಸ್ತಕದ ಎಲ್ಲಾ ಆಯಾಮಗಳನ್ನು ಬರೆಯಲು ಕುಳಿತರೆ, ಶರತ್ ಹೇಳಿದಂತೆ, ʻಮಹಾಭಾರತವನ್ನು ವಾಟ್ಸ್ಯಾಪ್ ನಲ್ಲಿ ಕಳುಹಿಸಿದಂತೆʼ ಆಗುತ್ತದೆ.
ಶರತ್ ಬರೆದ ʻಬಾಗಿಲು ತೆಗೆಯೇ ಸೇಸಮ್ಮʼ ಪುಸ್ತಕದ ಬಗ್ಗೆ ಬರೆಯುತ್ತಾ, ನಾನು ಒಂದು ಮಾತು ಬರೆದಿದ್ದೆ. ʻಸ್ಟೀಫನ್ ಹಾಕಿನ್ಸ್ ಬರೆದ ʻA Brief History of Timeʼ ಪುಸ್ತಕವನ್ನು ಕನ್ನಡಕ್ಕೆ ಯಾರಾದರೂ ಭಾಷಾಂತರಿಸಬಲ್ಲರೇ ಎಂಬ ಪ್ರಶ್ನೆ ನನ್ನನ್ನು ಬಹಳ ಸಮಯದಿಂದ ಕಾಡುತ್ತಿತ್ತು. ಬಾಗಿಲು ತೆಗೆಯೇ ಸೇಸಮ್ಮ ಪುಸ್ತಕ ಓದಿದ ಮೇಲೆ, ಅದಕ್ಕೆ ಉತ್ತರ ಸಿಕ್ಕಿದೆ ಎಂದು ಅನ್ನಿಸುತ್ತಿದೆ.ʼ
ಅದಕ್ಕೆ ಇಂದೂ ಬದ್ದನಾಗಿದ್ದೇನೆ…
Reactions to my new book - Hattevu Vijnanada Jipa
Reviews of my new popular science book - Hattevu Vijnanada Jipa
ಮನುಶ್ರೀ ಜೋಯ್ಸ್ ಅವರು ಬರೆದದ್ದು :
ಹತ್ತೇವು ವಿಜ್ಞಾನದ ಜೀಪ
ಲೇಖಕರು: Sharath Bhat Seraje
ಈ ಪುಸ್ತಕದಲ್ಲಿ ಏನಿದೆ , ಏನಿಲ್ಲ ಅಂತ ಆಶ್ಚರ್ಯ ಆಗತ್ತೆ. ವಿಜ್ಞಾನದ ಕೌತುಕಗಳು, ಭಾಷೆಯ ಬಳಕೆ, ಹಾಸ್ಯ, ತತ್ವಜ್ಞಾನ, ಹಳಗನ್ನಡ ಎಲ್ಲಾ ಸೇರಿಕೊಂಡಿರುವ ರಿಚ್ ಕೋಸಂಬರಿಯ ಹಾಗಿದೆ ಅನ್ನಬಹುದು.
ಬಹಳ ಚೆನ್ನಾಗಿದೆ. ಆದರೆ ಬೇಗ ಬೇಗ ಓದಕ್ಕೆ ಆಗಲ್ಲ. ನಿಧಾನಕ್ಕೆ ಸವಿದು ಅರಗಿಸಿ ಕೊಳ್ಳಬೇಕು. ತುಂಬಾ ತುಂಬಾ ಮಾಹಿತಿ ಪೂರ್ಣ , ಸಂಗ್ರಹ ಯೋಗ್ಯ ಮತ್ತು ವಿಶೇಷವಾಗಿ "ಹಾಸ್ಯ" ಕಾಶೀ ಹಲ್ವದಲ್ಲಿ ಗೋಡಂಬಿಯ ಹಾಗಿದೆ. ಒಂದು ಕಡೆಯಿಂದ ವಿಜ್ಞಾನದ ಕೌತುಕ, ಇನ್ನೊಂದು ಕಡೆಯಿಂದ ತತ್ವಜ್ಞಾನ ದರ್ಶನ ಮತ್ತೊಂದು ಕಡೆಯಿಂದ ಪದಗಳ ಜೊತೆ ಆಟ, ವರ್ತಮಾನದ ಮಾಹಿತಿಯ ಜೊತೆ ಬೆರೆತು ಓದಿಸಿಕೊಂಡು ಹೋಯಿತು ಒಟ್ಟಾರೆ ಭೂರಿ ಭೋಜನ.
ಸಾಕಷ್ಟು ಗೊತ್ತಿರದ ವಿಷಯಗಳನ್ನು ತಿಳಿಸಿತು. ನಿರೂಪಣೆ ವಿಶಿಷ್ಟವಾಗಿ, ಸುಲಲಿತವಾಗಿ ಓದಿಸಿಕೊಂಡು ಹೋಗುವ ಹಾಗಿದೆ. ಪುರಾತನ ಕಾಲದ ವಿಚಾರಗಳನ್ನು ವರ್ತಮಾನದೊಂದಿಗೆ ವಿವರಿಸಿರುವ ರೀತಿ ಇಷ್ಟವಾಯಿತು.
ಒಳ್ಳೆಯ ಪುಸ್ತಕ, ಆದರೆ ಹಿಡಿದು ಕೂತು ಓದಬೇಕು. ಓದಿದ ಮೇಲೆ ಅದರ ಪರಿಣಾಮ, ಹೊಸ ವಿಷಯಗಳು ಖಂಡಿತ ಅರಿವಾಗುತ್ತದೆ. ತತ್ವಗಳ ಬಗ್ಗೆಯೇ ಒಂದು ಬುಕ್ ಮಾಡಿ, ಹಳಗನ್ನಡದ ಸೊಗಡು ಆಗಿನ ವಿಚಾರಗಳ ಬಗ್ಗೆ ಇನ್ನೊಂದು ಪುಸ್ತಕ ಬರೆದು, ಈ ವಿಜ್ಞಾನ ವಿಜ್ಞಾನಿಗಳನ್ನು ಬೇರೆ ಮಾಡಿ ಅದನ್ನು ಪ್ರತ್ಯೇಕ ಪ್ರಕಟಿಸಿದರೆ ಓದುಗರಿಗೆ ಸುಲಭವೂ, ರಸಗವಳವೂ ಆಗುತ್ತಿತ್ತು ಅನ್ನುವುದು ನನ್ನ ಅಭಿಪ್ರಾಯ. ಕನ್ನಡದಲ್ಲಿ ಮಿಸ್ ಮಾಡಬಾರದ ವಿಶೇಷ ವೈಜ್ಞಾನಿಕ ಕೃತಿ.
*****************************************************
ಗಣೇಶ್ ಭಟ್ :
ಕನ್ನಡ ಸಾಹಿತ್ಯದ ಬಗ್ಗೆ ಮಾತಾಡುವಾಗ ಸಾಮಾನ್ಯವಾಗಿ ಬರುವ ಒಂದು ಆಕ್ಷೇಪವೆಂದರೆ ಕನ್ನಡದಲ್ಲಿ ವಿಜ್ಞಾನಸಾಹಿತ್ಯದ ಪ್ರಮಾಣ, ಅಂದರೆ ಜನಸಾಮಾನ್ಯರಿಗಾಗಿ ಅರ್ಥವಾಗುವಂತೆ ವಿಜ್ಞಾನದ ವಿಷಯಗಳನ್ನು ವಿವರಿಸುವ ಸಾಹಿತ್ಯದ ಪ್ರಮಾಣ, ಕಡಿಮೆ ಎಂಬುದು. ಅಲ್ಲಿ ಇಲ್ಲಿ ಒಂದಷ್ಟು ಲೇಖಕರು ಪುಸ್ತಕಗಳನ್ನು ಬರೆಯುವುದು ಕಾಣಸಿಗುವುದಾದರೂ ಇಂಗ್ಲಿಷ್ ಮುಂತಾದ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ವಿಜ್ಞಾನಸಾಹಿತ್ಯ ಬಹಳ ಕಡಿಮೆ ಎನ್ನುವುದು ನಿಜ. ಅದರಲ್ಲೂ ವಿಜ್ಞಾನದ ಒಂದು ನಿರ್ದಿಷ್ಟ ವಿಷಯದ ಬಗ್ಗೆ ಪೂರ್ತಿಯಾಗಿ ಚರ್ಚಿಸುವ ಪುಸ್ತಕವು ಇರುವುದು ಬಹಳ ಕಡಿಮೆ. ಅಂತಹ ಒಂದು ಪುಸ್ತಕ Sharath Bhat Seraje ಅವರ ‘ಹತ್ತೇವು ವಿಜ್ಞಾನದ ಜೀಪ’. ಇದು ಸಾಮಾನ್ಯ ಜನರನ್ನು ತಲುಪುವ ಉದ್ದೇಶದಿಂದಲೇ ಬರೆದ ವಿಜ್ಞಾನದ ಪುಸ್ತಕ.
ಪಾಶ್ಚ್ಯಾತರಲ್ಲಿ ಫಿಲಾಸಫಿ ಆಫ್ ಸೈನ್ಸ್ ಎಂಬ ಒಂದು ಪರಿಕಲ್ಪನೆ ಇದೆ. ವಿಜ್ಞಾನ ಎಂದರೇನು? ವಿಜ್ಞಾನದ ವ್ಯಾಪ್ತಿ ಏನು? ಒಂದು ವಿಷಯ ವೈಜ್ಞಾನಿಕವಾಗುವುದು ಹೇಗೆ? ಯಾವುದು ವಿಜ್ಞಾನ ಅಲ್ಲ? ಇತ್ಯಾದಿ ವಿಷಯಗಳ ಬಗ್ಗೆ ಜಿಜ್ಞಾಸೆ ಮಾಡುವ, ತತ್ವಶಾಸ್ತ್ರದ ಒಂದು ಶಾಖೆ. ಕನ್ನಡದಲ್ಲಿ ಬೇಕಾದರೆ ವಿಜ್ಞಾನಮೀಮಾಂಸೆ ಎಂದು ಹೇಳುವುದು ಸೂಕ್ತವಾಗಬಹುದೇನೋ. ಕನ್ನಡದಲ್ಲಂತೂ ಈ ವಿಜ್ಞಾನಮೀಮಾಂಸೆ ಇರುವ ಪುಸ್ತಕ ಈ ಹಿಂದೆ ಬಂದಂತಿಲ್ಲ. ಆದರೆ ‘ಹತ್ತೇವು ವಿಜ್ಞಾನದ ಜೀಪ’ ಪುಸ್ತಕವು ಈ ಕೊರತೆಯನ್ನು ತುಂಬುವಲ್ಲಿ ಒಂದು ಮುಖ್ಯವಾದ ಹೆಜ್ಜೆ ಎನಿಸುತ್ತದೆ. ವಿಜ್ಞಾನಸಾಹಿತ್ಯ ಎಂದಾಕ್ಷಣ ಬಹಳ ಗಂಭೀರವಾಗಿರುತ್ತದೆ, ವಿಜ್ಞಾನವನ್ನು ಬಹಳ ತಿಳಿದುಕೊಂಡಿರುವವರಿಗೆ ಮಾತ್ರ ಅರ್ಥವಾಗುವುದು ಎಂದು ಭಾವಿಸಬೇಕಾಗಿಲ್ಲ. ಮೊದಲೇ ಹೇಳಿದಂತೆ ಇದು ಜನಸಾಮಾನ್ಯರಿಗಾಗಿಯೇ ಬರೆದ ಪುಸ್ತಕ. ಸರಳ, ಸುಲಭವಾದ ಶೈಲಿಯಲ್ಲಿ, ಹಾಸ್ಯದ ಲೇಪನದೊಂದಿಗೆ ಕ್ಲಿಷ್ಟವಾದ ವಿಷಯಗಳನ್ನು ಸ್ವಾರಸ್ಯಕರವಾಗಿ, ಸುಲಿದ ಬಾಳೆಯ ಹಣ್ಣಿನಂದದಿ ವಿವರಿಸುವ ಪುಸ್ತಕ. ಇದನ್ನು ಓದಲು ನಿಮಗೆ ವಿಜ್ಞಾನದಲ್ಲಿ ಪಾಂಡಿತ್ಯವೋ, ವಿದ್ವತ್ತೆಯೋ ಬೇಕಿಲ್ಲ. ಹೊಸ ವಿಷಯವೊಂದನ್ನು ಓದುವ ಆಸಕ್ತಿ ಇದ್ದರೆ ಸಾಕು.
*****************************************************
ಪ್ರಸಿದ್ಧ ಕನ್ನಡ ಲೇಖಕ ಜೋಗಿ ಅವರು ಬರೆದದ್ದು :
ಶರತ್ ಭಟ್ ಸೇರಾಜೆ ಬರೆದಿರುವ ಹತ್ತೇವು ವಿಜ್ಞಾನದ ಜೀಪ ವಿಶಿಷ್ಟ ಶೈಲಿಯ ಪುಸ್ತಕ. ಈಗ ಕನ್ನಡದಲ್ಲಿ ಈ ಮಾದರಿಯ ಪುಸ್ತಕಗಳು ಬಹಳ ಕಡಿಮೆ. ಬಹಳ ಹಿಂದೆ ಇಂಥ ವೈಜ್ಞಾನಿಕ ಪ್ರಬಂಧಗಳನ್ನು ಕೆಲವರು ಬರೆಯುತ್ತಿದ್ದರು. ನನಗೆ ನೆನಪಿರುವಂತೆ ಜಿಟಿ ನಾರಾಯಣ ರಾವ್, ಜೆ ಆರ್ ಲಕ್ಷ್ಮಣರಾವ್ ಬರೆಯುತ್ತಿದ್ದ ವಿಜ್ಞಾನವನ್ನೂ ಒಳಗೊಂಡ ಪ್ರಬಂಧಗಳು, ಪ್ರಬಂಧದ ಶೈಲಿಯಲ್ಲಿದ್ದ ವೈಜ್ಞಾನಿಕ ಬರಹಗಳು ಕುತೂಹಲ ಕೆರಳಿಸುತ್ತಾ, ತಣಿಸುತ್ತಾ, ಓದಿನ ಖುಷಿಯನ್ನೂ ಕೊಡುತ್ತಿದ್ದವು. ಆಗ ಅಗ್ಗದ ಬೆಲೆಗೆ ಮನರಂಜನೆಗಾಗಿ ಭೌತಶಾಸ್ತ್ರ ಮುಂತಾದ ಪುಸ್ತಕಗಳೂ ದೊರೆಯುತ್ತಿದ್ದವು. ನಮ್ಮ ಕಾಲಕ್ಕೆ ಬಂದರೆ ವ್ಯಾಪಕವಾಗಿಯೂ ಆಳವಾಗಿಯೂ ರಂಜಕವಾಗಿಯೂ ಬರೆಯುತ್ತಿದ್ದವರು, ಈಗಲೂ ಆಗಾಗ ಬರೆಯುತ್ತಿರುವವರು ನಾಗೇಶ ಹೆಗಡೆ. ಹಾಲ್ದೊಡ್ಡೇರಿ ಸುಧೀಂದ್ರ ಕೂಡ ವಿಜ್ಞಾನದ ಬರಹಗಳನ್ನು ಮಾಹಿತಿ, ಮನರಂಜನೆ ಎರಡೂ ಇರುವಂತೆ ಬರೆಯುತ್ತಿದ್ದರು.
ಶರತ್ ಭಟ್ ಸೇರಾಜೆಯ ಪುಸ್ತಕದಲ್ಲಿರುವ ಜಾರುಹಾದಿಯಲ್ಲಿ ಎಂಬ ಲೇಖನವನ್ನೇ ನೋಡೋಣ. ಅದು ವಿಜ್ಞಾನದ ಬಹುಜನಪ್ರಿಯವಾದ Falsifiability ಎಂಬ ಕಾರ್ಲ್ ಪಾಪ್ಪರನ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಹೊರಡುತ್ತದೆ. ಈ ಸಿದ್ಧಾಂತ ಹೇಳುವುದಿಷ್ಟು; ಯಾವುದೇ ಸಿದ್ಧಾಂತವಾದರೂ, ಪ್ರಯೋಗದ ಮೂಲಕವೋ ಪರಿಶೀಲನೆಯ ಮೂಲಕವೋ ಸುಳ್ಳೆಂದು ಸಾಬೀತುಪಡಿಸುವುದಕ್ಕೆ, ಅನುವು ಮಾಡಿಕೊಡಬೇಕು. ಅಂದರೆ ಒಂದು ಸಿದ್ಧಾಂತ ಸುಳ್ಳೆಂದು ಸಾಧಿಸಲಿಕ್ಕೆ ಬೇಕಾದ ಮುಕ್ತವಾದ ಅವಕಾಶ ಆ ಸಿದ್ಧಾಂತದಲ್ಲೇ ಇರಬೇಕು. ಆ ಸಿದ್ಧಾಂತ ವೈಜ್ಞಾನಿಕ ಹೌದೋ ಅಲ್ಲವೋ ಅನ್ನುವುದನ್ನು ನಿರ್ಧರಿಸುವುದೇ ಈ ಸುಳ್ಳೆಂದು ಸಾಬೀತು ಪಡಿಸಿಕೊಳ್ಳುವ ಸಾಧ್ಯತೆಯನ್ನು ಒಡಲಲ್ಲಿ ಇಟ್ಟುಕೊಂಡಿರುವುದು.
ಇದರ ಸುತ್ತ ಮಾತಾಡುತ್ತಾ ಶರತ್ ಹತ್ತಿಪ್ಪತ್ತು ಸೊಗಸಾದ ಪ್ರಸಂಗಗಳನ್ನು ಹೇಳುತ್ತಾ ಹೋಗುತ್ತಾರೆ. ಅವರು ಓದಿದ, ಕೇಳಿದ, ಗ್ರಹಿಸಿದ ಸಂಗತಿಗಳನ್ನೆಲ್ಲ ಬಳಸಿಕೊಂಡು ಅವರು ತಮ್ಮ ವಾದವನ್ನು ಮಂಡಿಸುತ್ತಾ ಬರುತ್ತಾರೆ. ಒಂದು ರೀತಿಯಲ್ಲಿ ಇದು, ನ್ಯಾಯಾಲಯದಲ್ಲಿ ನುರಿತ ನ್ಯಾಯವಾದಿ ಒಂದೊಂದೇ ಸಾಕ್ಷಿಯನ್ನೂ ಸನ್ನಿವೇಶವನ್ನೂ ಮುಂದಿಡುತ್ತಾ ವಾದ ಮಾಡುತ್ತಿರುವಂತೆ ಕಾಣುತ್ತದೆ. ಈ ಕ್ರಮದಲ್ಲಿ ಓದುವ ಕುತೂಹಲವೂ ಹೊಸದನ್ನು ತಿಳಿದುಕೊಂಡ ಸಂತೋಷವೂ ಏಕಕಾಲಕ್ಕೆ ಉಂಟಾಗುತ್ತವೆ.
ಇಡೀ ಪುಸ್ತಕದ ತುಂಬ ಶರತ್ ಇಂಥ ಬೆರಗುಗೊಳಿಸುವ ಸಂಗತಿಗಳನ್ನು ಒಂದರ ಹಿಂದೊಂದರಂತೆ ಹೇಳುತ್ತಾ ಹೋಗುತ್ತಾರೆ. ಪ್ರಯೋಗಪರಿಣತಮತಿಗಳ್, ಇದೆಂಥಾ ಪ್ರಯೋಗವಯ್ಯಾ, ಕಾರ್ಯಕಾರಣದೊಂದಪೂರ್ವ ನಟನೆ, ಇದ ತಿಳಿದನೆಂದರೂ ತಿಳಿದ ಧೀರನಿಲ್ಲ, ದೂರದಿಂದ ಬಂದಂಥ ಸುಂದರಾಂಗ ಜ್ಞಾನ- ಹೀಗೆ ಆಕರ್ಷಕ ಶೀರ್ಷಿಕೆಗಳ ಅತ್ಯಾಕರ್ಷಕ ಬರಹಗಳು ಇಲ್ಲಿ ಅನೇಕವಿವೆ.
ಶರತ್ ಭಟ್ ಬರಹವನ್ನು ಓದುತ್ತಿದ್ದರೆ ನನಗೆ ಥಟ್ಟನೆ ನೆನಪಾಗುವುದು ವೈಯನ್ಕೆ. ತಾನು ಹೇಳುತ್ತಾ ಹೋಗುವಾಗ ಹತ್ತಾರು ಉದಾಹರಣೆಗಳನ್ನು ಕೊಡುತ್ತಾ ಹೋಗುತ್ತಿದ್ದರು ವೈಯನ್ಕೆ. ಷೇಕ್ಸ್ಪಿಯರ್ ಬಗ್ಗೆ ಬರೆಯುತ್ತಾ ಕೈಲಾಸಂ ತನಕ ಬಂದು, ಶೇಕ್ಸ್ ಪಿಯರ್ ನಾಟಕಗಳನ್ನು ಯಾರು ಬರೆದಿರಬಹುದು ಎಂದು ಹಲವು ಹೆಸರುಗಳನ್ನು ಸೂಚಿಸುತ್ತಾ ಲೇಖನ ಮುಗಿದ ನಂತರವೂ ಕುತೂಹಲ ಉಳಿಯುವಂತೆ ಮಾಡುತ್ತಿದ್ದ ವೈಯನ್ಕೆಯವರ ಶೈಲಿಯನ್ನು ಶರತ್ ಭಟ್ ಸೇರಾಜೆಯವರ ಬರಹಗಳಲ್ಲೂ ಕಾಣಬಹುದು. ಒಂದೇ ಒಂದು ವ್ಯತ್ಯಾಸವೆಂದರೆ ಶರತ್ ಭಟ್ ಸೇರಾಜೆಗೆ ವೈಯನ್ಕೆಗಿಂತ ಹೆಚ್ಚು ತಾಳ್ಮೆಯಿದೆ. ಹಾಗೇ ಸೇರಾಜೆ ವೈಯನ್ಕೆಗಿಂತ ಹೆಚ್ಚು ವಾಚಾಳಿ ಕೂಡ.
ಉದಾಹರಣೆಗೆ ‘ಮುನ್ನುಡಿಗೆ ಥ್ಯಾಂಕ್ಸ್’ ಎಂದು ಒಂದೇ ಪದದಲ್ಲೋ ಸಾಲಲ್ಲೋ ಹೇಳುವ ಬದಲು `ಪರ್ಸನಲ್ ಲೋನ್ ಬೇಕಾ, ಹೋಮ್ ಲೋನ್ ಬೇಕಾ ಎಂದೆಲ್ಲ ಆಗಾಗ ಬ್ಯಾಂಕಿನವರು ನನಗೆ ಕರೆ ಮಾಡುತ್ತಿರುತ್ತಾರೆ. ನನಗಾದರೋ ಮುನ್ನುಡಿಕಾರರಿಗೆ ಕೊಡುವುದಕ್ಕೆ ಒಂದಷ್ಟು ಧನ್ಯವಾದಗಳ ಸಾಲ ಬೇಕಿತ್ತು. ಅದನ್ನು ಯಾವ ಬ್ಯಾಂಕಿನವರೂ ಕೊಟ್ಟಿಲ್ಲ. ಹೀಗಾಗಿ ನನ್ನ ಹತ್ತಿರ ಇರುವ ಒಂದಷ್ಟು ಧನ್ಯವಾದಗಳನ್ನೇ ಮೂಟೆಕಟ್ಟಿ ಅವರಿಗೆ ಕೊಡುತ್ತಿದ್ದೇನೆ’ ಎಂದು ನಾಲ್ಕಾರು ಸಾಲುಗಳನ್ನು ಬರೆಯುತ್ತಾರೆ. ಇದೆಲ್ಲ ಹಳೆಯ ಕಾಲದ ಅತಿವಾಚಾಳಿತನ ಎಂದು ನನಗೆ ಅನ್ನಿಸುತ್ತದೆ. ಇದು ಪ್ರಬಂಧಗಳಲ್ಲೂ ಅಲ್ಲಲ್ಲಿ ಹಣಿಕಿಹಾಕುತ್ತದೆ. ಈ ಪುಸ್ತಕದ ಶೀರ್ಷಿಕೆ ಕೂಡ ನನಗೆ ಅಷ್ಟಾಗಿ ಸೇರಲಿಲ್ಲ. ಹಚ್ಚೇವು ಕನ್ನಡದ ದೀಪ ಎಂಬ ಸಾಲು ಹತ್ತೇವು ವಿಜ್ಞಾನದ ಜೀಪ ಎಂದಾಗಿದೆ. ಅದು ಈ ಪುಸ್ತಕದಲ್ಲಿರುವ ಬರಹಗಳು ಏನು ಹೇಳುತ್ತವೋ ಅವನ್ನೆಲ್ಲ ಧ್ವನಿಸುವುದಿಲ್ಲ. ಅಲ್ಲದೇ ಮೂಲ ಸಾಲುಗಳಿಲ್ಲದೇ, ಈ ಸಾಲಿಗೆ ಸ್ವಯಂದೀಪಕತೆಯೂ ಇಲ್ಲ. Pun is the lowest form of wit.
ಅದ್ಭುತವಾದ ವಿಚಾರಗಳು, ಸೊಗಸಾದ ಉದಾಹರಣೆಗಳು, ಅಪರೂಪದ ಉಲ್ಲೇಖಗಳು, ಎಲ್ಲೋ ಓದಿದ ಪ್ರಸಂಗಗಳನ್ನು ಒಳಗೊಂಡ ಇದು ಕನ್ನಡಕ್ಕೆ ತುಂಬ ಅಪರೂಪದ ಪುಸ್ತಕ. ಇದರ ಓದು ಒಂದು ಸುಖಾನುಭವ. ಶರತ್ ಈಗಾಗಲೇ ತಮ್ಮದೇ ಆದ ಒಂದು ಶೈಲಿ, ಪ್ರಕಾರ ಮತ್ತು ಧಾಟಿಯನ್ನು ಕಂಡುಕೊಂಡಿದ್ದಾರೆ. ಅವರು ಮತ್ತಷ್ಟು ಬರೆಯಲಿ ಎಂದು ಹಾರೈಸುತ್ತೇನೆ.
*****************************************************
My new book on Science
ನನ್ನ ಹೊಸ ಪುಸ್ತಕವೊಂದು ಕಳೆದ ಈಚೆಗಷ್ಟೇ ಲೋಕಾರ್ಪಣೆಯಾದದ್ದು ನಿಮ್ಮಲ್ಲಿ ಹಲವರಿಗೆ ಗೊತ್ತಿರಬಹುದು. ಅದೀಗ ನಿಮ್ಮ ಓದಿಗೆ ಸಜ್ಜಾಗಿ ಕಾದು ಕುಳಿತಿದೆ. "ವಿಷಯವು ಏನಿರಬಹುದು, ಹೇಗಿರಬಹುದು?" ಎಂಬ ಪ್ರಶ್ನೆಗಳಿಗೆ ಎರಡು ಉತ್ತರಗಳಿವೆ (ಪುಸ್ತಕದ ಶೀರ್ಷಿಕೆ ಮತ್ತು ಟ್ಯಾಗ್ ಲೈನಿನಲ್ಲೂ ಉತ್ತರವಿದೆ ಎನ್ನಿ) :
೧. ಇದೂ ನನ್ನ ಮೊದಲ ಪುಸ್ತಕವಾದ, 'ಬಾಗಿಲು ತೆರೆಯೇ ಸೇಸಮ್ಮ'ದ ಹಾಗೆಯೇ; ವೈಚಾರಿಕ ಲಲಿತ ಪ್ರಬಂಧಗಳನ್ನು ಪೋಣಿಸಿದ ಮಾಲೆ; ಈ ಸಲ ಎಲ್ಲವೂ ವಿಜ್ಞಾನದ ಬಗ್ಗೆ ಎಂಬುದಷ್ಟೇ ವ್ಯತ್ಯಾಸ. ಪುಸ್ತಕದ ಶೀರ್ಷಿಕೆಯಿದು: "ಹತ್ತೇವು ವಿಜ್ಞಾನದ ಜೀಪ". 'ವಿಜ್ಞಾನ' ಎಂದ ಕೂಡಲೇ ಹೆದರಿ ದೂರ ಓಡಬೇಕಾದ್ದಿಲ್ಲ. ವಿಷಯವು ಗಂಭೀರವಾದದ್ದಾರೂ ತಮಾಷೆಯ, ವಿಡಂಬನೆಯ, ಲಘುವಾದ, ಲಲಿತ ಪ್ರಬಂಧಗಳ ಶೈಲಿಯೇ ಇಲ್ಲಿಯೂ ಇದೆ. ಕಥೆ ಹೇಳುವ ಹಾಗೆ ಆತ್ಮೀಯವಾಗಿ ಹೇಳುವ ಶೈಲಿ ಎಂದರೂ ಆದೀತು. ವೈಚಾರಿಕತೆಯೂ ಉಂಟು, ವಿನೋದವೂ ಉಂಟು. ಇನ್ನೂ ಸರಳವಾಗಿ ಹೇಳುವುದಾದರೆ, ನಿಮಗೆ ನನ್ನ ಮೊದಲ ಪುಸ್ತಕ ಮತ್ತು ಹಿಂದಿನ ಬೇರೆಯ ಬರೆಹಗಳು ಇಷ್ಟವಾಗಿದ್ದರೆ ಇದೂ ಮುದವನ್ನೇ ನೀಡೀತು ಎಂದು ನನ್ನ ಭರವಸೆ.
೨. ಶ್ರೀವತ್ಸ ಜೋಶಿಯವರು ಮತ್ತು ಗುರುರಾಜ ಕೊಡ್ಕಣಿಯವರು ಫೇಸ್ಬುಕ್ಕಿನಲ್ಲೇ ಹಾಕಿರುವ ಪರಿಚಯಗಳನ್ನು ನೋಡಬಹುದು (ಲಿಂಕುಗಳು ಕೆಳಗೆ ಕಾಮೆಂಟಿನಲ್ಲಿವೆ)
ಇಷ್ಟು ದಿನಗಳ ಕಾಲ, "ಮುಂದಿನ ಪುಸ್ತಕ ಯಾವಾಗ? ನೀವ್ಯಾಕಿನ್ನೂ ಮೂರ್ನಾಲ್ಕು ಹೊಸ ಕೃತಿಗಳನ್ನು ತಂದಿಲ್ಲ? ಯಾಕಿಷ್ಟು ತಡ? ಯಾಕಿಷ್ಟು ಗ್ಯಾಪ್?" ಎಂದು ಆಗಾಗ ಕೇಳಿದವರೆಲ್ಲ ಇನ್ನು "ಪುಸ್ತಕವು ಎಲ್ಲಿ ಸಿಗುತ್ತದೆ?" ಎಂದು ಪ್ರಶ್ನೆಯನ್ನು ಬದಲಿಸಿ, ಪುಸ್ತಕವನ್ನು ಓದಿ ಸೇಡು ತೀರಿಸಿಕೊಂಡರೆ ನನಗೂ ಸಮಾಧಾನ. ನೀವು ಕೇಳುವವರೆಗೆ ಕಾಯದೆ, "ಪುಸ್ತಕವನ್ನು ತರಿಸಿಕೊಳ್ಳುವುದು ಹೇಗೆ?" ಎಂಬ ಪ್ರಶ್ನೆಗೆ ಉತ್ತರವನ್ನು ಇಲ್ಲೇ ಕೆಳಗೆ ಕಾಮೆಂಟು ಸೆಕ್ಷನ್ನಿನಲ್ಲಿ ಕೊಟ್ಟಿದ್ದೇನೆ.
ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ನಾನಿದ್ದೇನೆ. ಓದುತ್ತೀರಲ್ಲ? ಓದಿ ತಿಳಿಸುತ್ತೀರಲ್ಲ?
ಗುರುರಾಜ ಕೊಡ್ಕಣಿಯವರ ಬರೆಹ:
https://www.facebook.com/gururaj.kodkani/posts/pfbid02CpnNhJhkviJ9eQMEVJJaXrivPDkuMzWxV7JSJPV2FFJjmLJyQqDLVWGhKuPCcTuKl
ಶ್ರೀವತ್ಸ ಜೋಶಿಯವರ ಬರೆಹವು ಇಲ್ಲಿದೆ:
https://www.facebook.com/srivathsa.joshi/posts/pfbid0UiBxtSJT1nXWsDACzrkCJwRi3kEXyhFwwXgnzkAeqsYnQkBULZD5ZxsWFzW56A6vl
ಪುಸ್ತಕವನ್ನು ತರಿಸುವ ಸುಲಭದ ವಿಧಾನವು ಇದು, ಇಲ್ಲಿ ಆನ್ಲೈನ್ ಆರ್ಡರ್ ಮಾಡಿದರೆ ನಿಮ್ಮ ಮನೆಗೇ ಬರುತ್ತದೆ:
https://www.navakarnataka.com/hattevu-vijaana-jipa
ಎರಡನೆಯ ವಿಧಾನವು ಪ್ರಕಾಶಕರಾದ ಸೂರ್ಯಪ್ರಕಾಶ ಪಂಡಿತ್ ಅವರಿಗೆ ಮೆಸೇಜು ಮಾಡುವುದು, ಅವರು ಕಳಿಸಿಕೊಡುತ್ತಾರೆ:
ಅವರ ವಾಟ್ಸ್ಯಾಪ್ ನಂಬರ್ ಇದು: +91 94484 94949
ಮೂರನೆಯ ವಿಧಾನ: ನವಕರ್ನಾಟಕ ಮತ್ತು ಅಂಕಿತ ಪುಸ್ತಕದ ಮಳಿಗೆಗಳಲ್ಲಿ ಪುಸ್ತಕವು ಸಿಗಲಿದೆ.
ನಾಲ್ಕನೆಯ ವಿಧಾನ: ನೀವು ಬೆಂಗಳೂರಿನ ಶ್ರೀನಿವಾಸನಗರದ ಆಸುಪಾಸಿನಲ್ಲಿದ್ದರೆ, ಮುದ್ರಕರಾದ ರಜನೀಶ ಕಶ್ಯಪ್ ಅವರ ಗಾಯತ್ರಿ ಪ್ರಿಂಟ್ಸ್ ಅಂಗಡಿಯಲ್ಲಿಯೂ ಕೇಳಬಹುದು. ಅವರ ನಂಬರ್ ಇದು : +91 92435 94818
New popular science book in Kannada(Hattevu Kannadada jeepa or hattevu Vijnanada Jipa)
ಏಳುಮಲೆ ಕನ್ನಡ ಸಿನೆಮಾ
ಇನ್ನೊಂದು ವಾರದ ಒಳಗೇ ಒಂದೊಳ್ಳೆ ಕನ್ನಡ ಸಿನೆಮಾವನ್ನು ನೋಡಬೇಕು ಎನ್ನುವವರು ನೀವಾದರೆ ಹೀಗೆ ಮಾಡಿ: 'ಏಳುಮಲೆ' ಎಂಬ ಹೊಸಚಿತ್ರವನ್ನು ನೋಡಿಬಿಡಿ. ಚಿತ್ರವು ಶುರುವಾದ ಮೇಲೆ ಅತ್ತಿತ್ತ ಅಲುಗಾಡುವಂತೆಯೋ, ಕುರ್ಚಿ ಬಿಟ್ಟು ಏಳುವಂತೆಯೋ ಇಲ್ಲ; ಪ್ರದರ್ಶನವು ಶುರುವಾಗುವ ಮೊದಲು ಚಿತ್ರತಂಡದವರು ರಹಸ್ಯ ಕಾರ್ಯಾಚರಣೆಯೊಂದನ್ನು ಮಾಡಿ, ಕುರ್ಚಿಗಳಿಗೆ ಫೆವಿ ಕ್ವಿಕ್ ಅನ್ನು ಅಂಟಿಸಿದ್ದಾರೋ ಎನ್ನಿಸಬೇಕು—ಅಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಚಿತ್ರವು ಹಿಡಿದಿಡುತ್ತದೆ. ತಮಿಳುನಾಡು ಮತ್ತು ಕರ್ನಾಟಕದ ಗಡಿಭಾಗದಲ್ಲಿರುವ ಮಲೆಮಹದೇಶ್ವರ ಬೆಟ್ಟ ಮತ್ತದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುವ ಥ್ರಿಲ್ಲರ್ ಕಥೆಯಿದು. ಟೈಗರ್ ಅಶೋಕ್ ಕುಮಾರ್ ಅವರು ವೀರಪ್ಪನ್ ವಿರುದ್ಧ ನಡೆದ ಕಾರ್ಯಾಚರಣೆಯ ಕಥೆಗಳನ್ನು ಹೇಳುತ್ತಿದ್ದಾಗ ಪ್ರಸ್ತಾವಿಸುತ್ತಿದ್ದ ಜಾಗಗಳಲ್ಲಿ ಅಥವಾ ವೀರಪ್ಪನ್ನನ ಕಾರ್ಯಕ್ಷೇತ್ರ ಎನ್ನಬಹುದಾದ ಜಾಗಗಳಲ್ಲಿ ಇದರ ಕಥೆಯು ಬಿಚ್ಚಿಕೊಳ್ಳುತ್ತದೆ. ಈ ಪರಿಸರದ ಕಥೆಯನ್ನು ಆಯ್ದುಕೊಂಡಿರುವುದರಲ್ಲೇ ನಿರ್ದೇಶಕರು ಅರ್ಧ ಗೆದ್ದಿದ್ದಾರೆ.
Inspirational story of book lovers
ಎಲ್ಲ ಸ್ಪೂರ್ತಿದಾಯಕವಾದ ಕಥೆಗಳೂ ಪುಸ್ತಕಗಳಲ್ಲೇ ಸಿಗುವುದಲ್ಲ, ಕೆಲವು ಪುಸ್ತಕದಂಗಡಿಗಳಲ್ಲಿಯೂ ಸಿಗುತ್ತವೆ. ಅಂತಹದೊಂದು ಕಥೆಯಿದು. ಅಮೆರಿಕಾದ ಮಿಷಿಗನ್ನಿನಲ್ಲಿ Chelsea ಎಂಬುದೊಂದು ಪುಟ್ಟ ಊರಿದೆ(ಇದು ಫುಟ್ಬಾಲ್ ಕ್ಲಬ್ ಒಂದರ ಹೆಸರಿನಿಂದ ಪ್ರಸಿದ್ಧವಾದ Chelseaಯಲ್ಲ, ಅದಿರುವುದು ಇಂಗ್ಲೆಂಡ್ನಲ್ಲಿ). ಅಲ್ಲಿ ಮಿಷೆಲ್ ಟುಪ್ಲಿನ್ ಎಂಬಾಕೆ ಸೆರೆಂಡಿಪಿಟಿ ಬುಕ್ಸ್ ಎಂಬ ಪುಸ್ತಕದಂಗಡಿಯನ್ನು ಇಪ್ಪತ್ತೈದು ವರ್ಷಗಳಿಂದ ನಡೆಸುತ್ತ ಬಂದಿದ್ದಳು. ಈಚೆಗೆ ಈ ಅಂಗಡಿಯಲ್ಲಿ ಜಾಗವು ಸಾಕಾಗುತ್ತಿಲ್ಲ ಎನ್ನಿಸಿ, ಹತ್ತಿರದಲ್ಲೇ ಇರುವ ಇನ್ನೊಂದು ಸ್ಥಳಕ್ಕೆ ಅಂಗಡಿಯನ್ನು ಸ್ಥಳಾಂತರ ಮಾಡುವ ಯೋಚನೆಯನ್ನವಳು ಮಾಡಿದಳು. ಹೊಸಜಾಗವು 105 ಮೀಟರ್ ದೂರದಲ್ಲಿತ್ತು, ಅದು ನೇರವಾದ ಹಾದಿಯಾಗಿರಲಿಲ್ಲ, ಒಂದೆರಡು ತಿರುವುಗಳಿದ್ದವು, ಅವಳ ಸಂಗ್ರಹದಲ್ಲಿ 9,100 ಪುಸ್ತಕಗಳಿದ್ದವು. ಸರಿಯಪ್ಪಾ, ಇದರಲ್ಲೇನು ವಿಶೇಷವಿದೆ ಎಂದಿರಾ, ನಿಲ್ಲಿ ಅಲ್ಲಿಗೇ ಬಂದೆ.
ಬಾನು ಮುಷ್ತಾಕ್ ಮತ್ತು ದಸರಾ ಉದ್ಘಾಟನೆ
ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡಬೇಕೇ ಮಾಡಬಾರದೇ ಎಂಬ ಚರ್ಚೆಯನ್ನು ಕಂಡು ಒಂದಷ್ಟು ವಿಷಯಗಳು ನೆನಪಾದವು.
ಸು ಫ್ರಂ ಸೋ
ನಿನ್ನೆ ರಾತ್ರಿ ಹತ್ತು ಗಂಟೆಗೆ 'ಸು ಫ್ರಂ ಸೋ' ಎಂಬ ವಿಚಿತ್ರ ಹೆಸರಿನ ಸಿನೆಮಾವನ್ನು ನೋಡಿದ್ದಾಯಿತು. 'ಭಯಂಕರ ಸ್ಟಾರ್ ಗಳು ಅಂತ ಯಾರೂ ಇಲ್ಲದಿದ್ದರೆ ಕನ್ನಡ ಸಿನೆಮಾ ನೋಡುವುದಕ್ಕೆ ಯಾರೂ ಬರುವುದಿಲ್ಲ' ಎಂಬ ನಂಬಿಕೆಯ ತಲೆ ಮೇಲೆ ಹೊಡೆದಂತೆ ಜನ ಬಂದಿದ್ದರು.
ಎಚ್.ಎಸ್.ವೆಂಕಟೇಶಮೂರ್ತಿ
"ಮಣ್ಣ ತಿಂದು ಸಿಹಿ ಹಣ್ಣಕೊಡುವ ಮರ ನೀಡಿ ನೀಡಿ ಮುಕ್ತ", "ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ? ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ಮುಕ್ತಿ", "ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ ತಡೆಯೇ ಇಲ್ಲದೆ ನಡೆಯಲೆ ಬೇಕು ಸೋಲಿಲ್ಲದ ಹೋರಾಟ", "ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ ನೀರಿನಾಳ ತಿಳಿಯಿತೇನು ಹಾಯಿದೋಣಿಗೆ?", "ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ?" ಮುಂತಾದ ಸಾಲುಗಳು ನನಗೆ ಬಹಳವೇ ಇಷ್ಟ. ಈಚೆಗೆ ಸಪ್ತ ಸಾಗರದಾಚೆಯೆಲ್ಲೋ ಸಿನೆಮಾದಲ್ಲಿ "ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ" ಹಾಡು ಬಂದ ಮೇಲೆ ಅದನ್ನು, ಮತ್ತು ಅದೇ ಹಾಡನ್ನು ರಾಘವೇಂದ್ರ ಬೀಜಾಡಿಯವರು ಹಾಡಿರುವುದನ್ನೂ ಮತ್ತೆ ಮತ್ತೆ ಕೇಳುತ್ತಿದ್ದೆ. ಇಂತಹ ಸಾಲುಗಳನ್ನು ಕೊಟ್ಟ ಎಚ್.ಎಸ್. ವೆಂಕಟೇಶಮೂರ್ತಿಯವರು ಭೌತಿಕವಾಗಿ ಇನ್ನಿಲ್ಲ ಎಂಬುದು ಬೇಸರದ ಸಂಗತಿ.
Operation Sindoor
ಅಂತೂ ಎಲ್ಲ ಗಲಾಟೆಯು ಮುಗಿದು, ಕದನಕ್ಕೆ ವಿರಾಮ ಸಿಕ್ಕಿರುವುದರಿಂದ ಆದದ್ದರ ಬಗ್ಗೆ ಸಿಂಹಾವಲೋಕನ ಮಾಡಲಿಕ್ಕೆ, ನಾವು ಕಲಿತದ್ದೇನು ಎಂದು ಪರ್ಯಾಲೋಚಿಸುವುದಕ್ಕೆ ಇದು ಸಕಾಲವೇನೋ.